Connect with us

ಬೆಂಗಳೂರು

ಮುಡಾ ‘ಹಗರಣ’: ಸದನದಲ್ಲೇ ಮಲಗಿ ಪ್ರತಿಪಕ್ಷಗಳ ಅಹೋರಾತ್ರಿ ಧರಣಿ; ಭಜನೆ, ಅಂತ್ಯಾಕ್ಷರಿ ಹಾಡಿದ ಶಾಸಕರು – BJP JDS Night Long Protest

Published

on

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಹಾಗೂ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ ಖಂಡಿಸಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್​ ಶಾಸಕರು ಜಂಟಿಯಾಗಿ ಬುಧವಾರ ಅಹೋರಾತ್ರಿ ಧರಣಿ ನಡೆಸಿದರು. ವಿಧಾನಸಭೆ, ವಿಧಾನ ಪರಿಷತ್​ನಲ್ಲಿ ಹಾಸಿಗೆ, ದಿಂಬುಗಳ ಸಮೇತವಾಗಿ ಪ್ರತಿಭಟಿಸಿ ಇಡೀ ರಾತ್ರಿ ಸೋಫಾ ಮತ್ತು ನೆಲದ ಮೇಲೆ ನಿದ್ರಿಸಿದರು.

ಮುಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಬುಧವಾರ ಸದನದಲ್ಲಿ ಬಿಜೆಪಿ ಸದಸ್ಯರು ನಿಲುವಳಿ ಮಂಡಿಸಿದರು. ಸ್ಪೀಕರ್ ನಿಲುವಳಿಯನ್ನು ತಿರಸ್ಕರಿಸಿದರು. ಇದರಿಂದ ಕೆರಳಿದ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ರಾಜ್ಯ ಸರ್ಕಾರ ಹಾಗೂ ಸ್ಪೀಕರ್ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದರು. ಆಗ ಸ್ಪೀಕರ್ ಕಲಾಪವನ್ನು ಮುಂದೂಡಿದರು. ಹೀಗಾಗಿ ಸರ್ಕಾರದ ವಿರುದ್ಧ ಸದನದಲ್ಲೇ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಧರಣಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್​.ಅಶೋಕ್, ವಿಧಾನ ಪರಿಷತ್​ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್​ ಶಾಸಕರು ಪಾಲ್ಗೊಂಡರು.

ಇದಕ್ಕೂ ಮುನ್ನ ಸ್ಪೀಕರ್ ಯು.ಟಿ.ಖಾದರ್​ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಶಾಸಕರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಇದಕ್ಕೊಪ್ಪದ ಶಾಸಕರು ಧರಣಿ ಮುಂದುವರಿಸಿದರು.

‘ಹಗರಣದ ಹಣದಲ್ಲಿ ಊಟ ಮಾಡುವುದಿಲ್ಲ’: ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರತಿಭಟನಾನಿರತ ಸದಸ್ಯರಿಗೆ ಭೋಜನದ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಆಗ ಆರ್.ಅಶೋಕ್, ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ‌ ಹಗರಣದ ಹಣದಲ್ಲಿ ನಾವು ಊಟ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಇಡೀ ರಾತ್ರಿ ಎಲ್ಲ ಶಾಸಕರು ಸದನದಲ್ಲೇ ಕಳೆದರು.

ನಿದ್ರೆಗೆ ಜಾರುವ ಮುನ್ನ ಒಟ್ಟಿಗೆ ಕುಳಿತು ಅಂತ್ಯಾಕ್ಷರಿ ಹಾಡಿದರು. ಹನುಮಾನ್ ಚಾಲೀಸಾ ಮತ್ತು ಭಜನೆ ಪಠಿಸುವ ಮೂಲಕವೂ ಗಮನ ಸೆಳೆದರು. ಸಭಾಪತಿ ಹೊರಟ್ಟಿ ಬಂದಾಗಲೂ ಶಾಸಕರು ಹಾಡುಗಳನ್ನು ಹಾಡಿದರು. ಹಾಡುಗಳನ್ನು ಕೇಳುತ್ತಾ ಹೊರಟ್ಟಿ, “ಇನ್ಮುಂದೆ ಶಾಸಕರ ದಿನಾಚರಣೆ ಮಾಡೋಣ” ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಾದ ಬಳಿಕ ಶಾಸಕರು ದಿಂಬು, ಹಾಸಿಗೆಗಳನ್ನು ಹೊದ್ದು ನಿದ್ರೆಗೆ ಜಾರಿದರು.

ಸರ್ಕಾರದ ಉಪಚಾರ ತಿರಸ್ಕಾರ: ರಾತ್ರಿ ಧರಣಿ ಆರಂಭಿಸಿದ ಬಳಿಕ ಮಾತನಾಡಿದ ಆರ್​.ಅಶೋಕ್, “ಮುಡಾ ಹಗರಣದ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಕೊಡದೇ ಈಗ ನಮ್ಮ ಅಹೋರಾತ್ರಿ ಧರಣಿ ವೇಳೆ ಊಟೋಪಚಾರದ ವ್ಯವಸ್ಥೆ ಮಾಡಲು ಸ್ಪೀಕರ್ ಮುಂದಾಗಿದ್ದರು. ನಾವು ಅವರ ಉಪಚಾರವನ್ನು ತಿರಸ್ಕರಿಸಿದ್ದೇವೆ” ಎಂದು ತಿಳಿಸಿದರು.

”ಸ್ಪೀಕರ್ ನಮ್ಮನ್ನು ಕರೆದಿದ್ದರು. ಧರಣಿ ಸಮಯದಲ್ಲಿ ಊಟ, ತಿಂಡಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಈಗ ಇವರ ಊಟ, ತಿಂಡಿ ಕಟ್ಟುಕೊಂಡು ನಮಗೆ ಏನಾಗಬೇಕು?, ಲೂಟಿ ಹೊಡೆದ ದಲಿತರ ಹಣದಲ್ಲಿ ನಾವು ಊಟ ಮಾಡಬೇಕಿಲ್ಲ. ಹಾಗಾಗಿ ನಮ್ಮ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ. ಅವರ ಊಟ,‌ ತಿಂಡಿ ವ್ಯವಸ್ಥೆ ತಿರಸ್ಕಾರ ಮಾಡಿದ್ದೇವೆ. ಇದು ದಲಿತ ವಿರೋಧಿ ಸರ್ಕಾರ” ಎಂದು ಟೀಕಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ 14 ತಿಂಗಳಲ್ಲಿ ಎರಡು ದೊಡ್ಡ ಹಗರಣ ನಡೆದಿದೆ. ಮುಡಾದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಚದರಡಿ ಭೂಮಿ ಕಬ್ಜ ಮಾಡಿದ್ದಾರೆ. ಇದು ಸ್ವಜನ ಪಕ್ಷಪಾತ. ವಾಲ್ಮೀಕಿ ಹಗರಣದ ಬಗ್ಗೆ ಸಿಬಿಐ, ಇಡಿ, ಎಸ್ಐಟಿ ತನಿಖೆ ನಡೆಯುತ್ತಿದೆ. ದಲಿತರ ಹಣ ಲೂಟಿಯಾಗಿದೆ. ಎಸ್​ಸಿಪಿ-ಟಿಎಸ್​ಪಿ ಹಣದಲ್ಲಿ 25 ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ. ಇದೇ ಈ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವೆ. ಮುಖ್ಯಮಂತ್ರಿಗಳು ನಮಗೆ ಭಯ ಇಲ್ಲ ಅಂತಿದ್ದಾರೆ. ಭಯ ಇಲ್ಲದ ಮೇಲೆ ಚರ್ಚೆಗೆ ಹೆದರೋದೇಕೆ?, ಸಿಎಂ‌ ಹಾಗೂ ಇಡೀ ತಂಡ ಹೆದರಿ ಓಡುತ್ತಿದ್ದಾರೆ. ಸದನದಲ್ಲಿ ಉತ್ತರ ಕೊಡಲು ಹೆದರುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

”ಸ್ಪೀಕರ್ ನಡೆ ಕೂಡ ಪ್ರಶ್ನೆ ಮಾಡುವಂತಿದೆ. ಬೋವಿ ನಿಗಮದ ಹಗರಣ ಬಗ್ಗೆ ಸ್ಪೀಕರ್ ಕರೆದು ಕರೆದು ಚರ್ಚೆ ಮಾಡಿಸಿದ್ದರು. ಅದು ಮೂರ್ನಾಲ್ಕು ವರ್ಷಗಳ‌ ಹಿಂದಿನದ್ದು. ಮುಡಾ ವಿಷಯ ಚರ್ಚೆ ಬಂದ ತಕ್ಷಣ ಚರ್ಚೆಗೆ ಅವಕಾಶ ಕೊಡಲಿಲ್ಲ. ಚರ್ಚೆಗೆ ಅವಕಾಶ ಕೊಡದೆ ಪಲಾಯಾನ ಮಾಡುತ್ತಿದ್ದಾರೆ. ನಾವು ಹೋರಾಟವನ್ನು ಕಾಟಾಚಾರಕ್ಕೆ ಮಾಡುತ್ತಿಲ್ಲ. ಹಗಲು ರಾತ್ರಿ ಹೋರಾಟ ಮಾಡಿ, ಜನರಿಗೆ ನ್ಯಾಯ ಕೊಡಿಸುತ್ತೇವೆ” ಎಂದು ಹೇಳಿದರು.

ಶಾಸಕರನ್ನು ತಡೆದ ಡಿಸಿಪಿ: ಸಂಜೆ ವಿಧಾನಸೌಧದ ಮುಂಭಾಗದ ಲಾಂಜ್​ಗೆ ಬಂದ ಬಿಜೆಪಿ ಶಾಸಕ ಧೀರಜ್ ಮುನಿರಾಜು ವಾಪಸ್ ಸದನದ ಪ್ರತಿಪಕ್ಷದ ಮೊಗಸಾಲೆಗೆ ತೆರಳಲು ಮುಂದಾದಾಗ ಲಾಂಜ್ ದ್ವಾರದಲ್ಲಿ ಅವರನ್ನು ಡಿಸಿಪಿ ತಡೆದರು. ಶಾಸಕರು ಎಂದು ತಿಳಿಯದೆ ಡಿಸಿಪಿ, ”ವಿಧಾನಸೌಧದ ಪೂರ್ವ ಬಾಗಿಲು ಮುಚ್ಚಿದ್ದ ಹಿನ್ನೆಲೆಯಲ್ಲಿ ಒಳಗೆ ಹೋಗಲು ಬಾಗಿಲು ಬಡಿಯುತ್ತಿದ್ದಾಗ ಸದನದ ಮೊಗಸಾಲೆಯ ಒಳಗೆ ಬಿಡುವುದಿಲ್ಲ. ಆ ಕಡೆ ಹೋಗಿ” ಎಂದು ಸೂಚಿಸಿದ್ದಾರೆ.

ಬಳಿಕ ಶಾಸಕರು ಅಂತಾ ಗೊತ್ತಾದ ಮೇಲೆ ಕ್ಷಮೆ ಕೇಳಿದ ಡಿಸಿಪಿ, ಶಾಸಕರ ಪ್ರವೇಶಕ್ಕೆ ಅವಕಾಶ ನೀಡಿದರು. ಇದೇ ವೇಳೆ, ಡಿಸಿಪಿಗೆ ಎಚ್ಚರಿಕೆ ನೀಡಿದ ಶಾಸಕ ಧೀರಜ್ ಮುನಿರಾಜು, ಒಳಪ್ರವೇಶಿಸಿ ಪ್ರತಿಪಕ್ಷದ ನಾಯಕ ಅಶೋಕ್ ಅವರಿಗೆ ಮಾಹಿತಿ ನೀಡಿದರು. ಆಗ ಹೊರಗೆ ಬಂದ ಅಶೋಕ್, ”ಈ ಬಾಗಿಲು ತೆರೆದಿದ್ದೀರಿ, ಬಾಗಿಲ ಬಳಿ ಕಾಯಿರಿ. ಶಾಸಕರು ಯಾವ ಕಡೆ ಬಂದರೂ ಬಿಡಬೇಕು” ಎಂದು ತಾಕೀತು ಮಾಡಿದರು.

ರಾಜಕೀಯ

Yathindra Siddaramaiah ಸದ್ದಿಲ್ಲದೆ ಶುರು ಮಾಡಿದ್ರಾ ಹೊಸ ರಾಜಕೀಯ ಲೆಕ್ಕಾಚಾರ? ಜಮೀರ್ ಭೇಟಿಗೆ ಹೆಚ್ಚಿದ ಕುತೂಹಲ

Published

on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ Yathindra Siddaramaiah ಅವರು ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಸಕ್ರಿಯರಾಗುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಯತೀಂದ್ರ ಭೇಟಿ ಮಾಡಿರುವುದು ಇದೀಗ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಯತೀಂದ್ರ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿ ಸೌಹಾರ್ದಯುತ ಭೇಟಿಯೇ ಅಥವಾ ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಬಗ್ಗೆ ಇದೀಗ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.

ಸಿದ್ದರಾಮಯ್ಯ ಆಪ್ತರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನ?

ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಾಯಕರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಯತೀಂದ್ರ ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ವಿಶೇಷವಾಗಿ, ಹಿಂದೆ ಸಿದ್ದರಾಮಯ್ಯ ಅವರೊಂದಿಗೆ ಕೆಲವು ವಿಚಾರಗಳಲ್ಲಿ ಅಂತರ ಕಾಯ್ದುಕೊಂಡಿದ್ದ ನಾಯಕರೊಂದಿಗೂ ಯತೀಂದ್ರ ಮತ್ತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಭಾಗವಾಗಿಯೇ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಭೇಟಿಯನ್ನು ನೋಡಲಾಗುತ್ತಿದೆ.

ಇದಕ್ಕೂ ಮುನ್ನ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೂ ಯತೀಂದ್ರ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು. ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಖಾನ್ ಅವರಂತಹ ಪ್ರಮುಖ ನಾಯಕರನ್ನು ಯತೀಂದ್ರ ಸತತವಾಗಿ ಭೇಟಿ ಮಾಡುತ್ತಿರುವುದು ರಾಜಕೀಯವಾಗಿ ಗಮನ ಸೆಳೆದಿದೆ.

ಭೇಟಿಗಳ ಹಿಂದೆ ರಾಜಕೀಯ ಕಾರ್ಯತಂತ್ರ?

ಯತೀಂದ್ರ ಅವರ ಈ ಭೇಟಿಗಳನ್ನು ಸದ್ಯಕ್ಕೆ ಸಾಮಾನ್ಯ ಸೌಹಾರ್ದಯುತ ಭೇಟಿಗಳೆಂದು ಹೇಳಲಾಗುತ್ತಿದ್ದರೂ, ರಾಜಕೀಯ ಬೆಳವಣಿಗೆಗಳು ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆದಿರಬಹುದೆಂಬ ಮಾತುಗಳು ಕೇಳಿಬರುತ್ತಿವೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ಸಮೀಕರಣಗಳು ಹೇಗೆ ಬದಲಾಗಲಿವೆ ಎಂಬುದು ಕುತೂಹಲ ಮೂಡಿಸಿರುವ ಸಂದರ್ಭದಲ್ಲೇ ಯತೀಂದ್ರ ಅವರ ಚಟುವಟಿಕೆಗಳು ಹೆಚ್ಚಾಗಿವೆ.

ತಂದೆ ಸಿದ್ದರಾಮಯ್ಯ ಅವರ ರಾಜಕೀಯ ಅನುಭವ ಮತ್ತು ಪ್ರಭಾವವನ್ನು ಬಳಸಿಕೊಂಡು ಪಕ್ಷದ ಪ್ರಮುಖ ನಾಯಕರೊಂದಿಗೆ ಬಾಂಧವ್ಯ ಬಲಪಡಿಸುವ ಪ್ರಯತ್ನ ಇದಾಗಿರಬಹುದು ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಆದರೆ, ಜಮೀರ್ ಅಹ್ಮದ್ ಖಾನ್ ಮತ್ತು ಸತೀಶ್ ಜಾರಕಿಹೊಳಿ ಅವರೊಂದಿಗಿನ ಯತೀಂದ್ರ ಸಿದ್ದರಾಮಯ್ಯ ಅವರ ಭೇಟಿಗಳ ನಿಖರ ರಾಜಕೀಯ ಉದ್ದೇಶವೇನು ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಹೀಗಾಗಿ ಈ ಸರಣಿ ಭೇಟಿಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Continue Reading

ರಾಜ್ಯ

KRS ಡ್ಯಾಂಗೆ ಭಾರೀ ಶಾಕ್‌! ಒಳಹರಿವು ದಿಢೀರ್ ಕುಸಿತ; ಸದ್ಯದ ನೀರಿನ ಮಟ್ಟ ಎಷ್ಟು ಗೊತ್ತಾ?

Published

on

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ (KRS) ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ದಿಢೀರ್ ಇಳಿಕೆಯಾಗಿದೆ. ಕೊಡಗು ಸೇರಿದಂತೆ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿರುವುದರಿಂದ ಜಲಾಶಯದ ಒಳಹರಿವು ಗಣನೀಯವಾಗಿ ಕುಸಿದಿದೆ.

ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿತ್ತು. ಇದರಿಂದ ಜಲಾಶಯದ ನೀರಿನ ಮಟ್ಟವೂ ವೇಗವಾಗಿ ಏರಿಕೆಯಾಗಿತ್ತು.

ಬುಧವಾರ ಬೆಳಿಗ್ಗೆ 9,438 ಕ್ಯೂಸೆಕ್ ಇದ್ದ ಕೆಆರ್‌ಎಸ್ ಜಲಾಶಯದ ಒಳಹರಿವು ಗುರುವಾರ ವೇಳೆಗೆ ಬರೋಬ್ಬರಿ 17,427 ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಆದರೆ ಇದೀಗ ಕಾವೇರಿ ಕೊಳ್ಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರದ ವೇಳೆಗೆ ಒಳಹರಿವು 10,028 ಕ್ಯೂಸೆಕ್‌ಗೆ ಕುಸಿದಿದೆ.

ಒಂದೇ ದಿನದಲ್ಲಿ ಒಳಹರಿವಿನಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದು ಜಲಾಶಯದ ನೀರಿನ ಲಭ್ಯತೆ ಕುರಿತು ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಉತ್ತಮ ಮಳೆಯಾಗುತ್ತದೆಯೇ ಎಂಬುದರ ಮೇಲೆ ಕೆಆರ್‌ಎಸ್‌ಗೆ ಒಳಹರಿವಿನ ಪ್ರಮಾಣ ಅವಲಂಬಿತವಾಗಿರಲಿದೆ.

110 ಅಡಿ ದಾಟಿದ KRS ನೀರಿನ ಮಟ್ಟ

ಒಳಹರಿವು ಕಡಿಮೆಯಾಗಿದ್ದರೂ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 110.20 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯದ ಮಟ್ಟ 124.80 ಅಡಿಯಾಗಿದೆ.

ಸದ್ಯ ಜಲಾಶಯದಲ್ಲಿ 31.923 ಟಿಎಂಸಿ ನೀರು ಸಂಗ್ರಹವಾಗಿದೆ. 110 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿರುವುದು ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ಮಂಡ್ಯ, ಮೈಸೂರು ಸೇರಿದಂತೆ ಹಲವು ಪ್ರದೇಶಗಳ ಕುಡಿಯುವ ನೀರಿನ ಅಗತ್ಯಗಳಿಗೆ ಸದ್ಯಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ.

ಕಳೆದ ಕೆಲವು ದಿನಗಳಲ್ಲಿ ಹೆಚ್ಚಾಗಿದ್ದ ಒಳಹರಿವು ಇದೀಗ ಇಳಿಕೆಯಾಗಿರುವುದರಿಂದ ಜಲಾಶಯದ ನೀರಿನ ಮಟ್ಟ ಮತ್ತು ಒಳಹರಿವಿನ ಮೇಲೆ ರೈತರು ಹಾಗೂ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಮುಂದಿನ ಮಳೆಯ ಪ್ರಮಾಣದ ಆಧಾರದ ಮೇಲೆ ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಮತ್ತೆ ಏರಿಳಿತವಾಗುವ ಸಾಧ್ಯತೆಯಿದೆ.

Continue Reading

ದೇಶ

KPSC Recruitment Scam: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ; ನೇಮಕಾತಿ ದಂಧೆ ಬಯಲು ಎಂದ ಕೇಂದ್ರ ಸಚಿವ

Published

on

By

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ KPSC ದಲ್ಲಿ ಅಕ್ರಮ ಹಾಗೂ ನೇಮಕಾತಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. KPSC ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.

KPSC ಸಂಸ್ಥೆಯ ಮೇಲಿನ ಜನರ ವಿಶ್ವಾಸ ಕಡಿಮೆಯಾಗಿದೆ ಎಂದು ಆರೋಪಿಸಿದ ಎಚ್‌ಡಿಕೆ, ಉದ್ಯೋಗಾಕಾಂಕ್ಷಿಗಳಿಗೆ ಆಯೋಗದ ಬಗ್ಗೆ ಯಾವುದೇ ಭರವಸೆ ಉಳಿದಿಲ್ಲ ಎಂದು ಹೇಳಿದ್ದಾರೆ. KPSC ಸದಸ್ಯರ ನೇಮಕಾತಿಯಲ್ಲಿಯೇ ದೊಡ್ಡ ಮಟ್ಟದ ದಂಧೆ ನಡೆಯುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

KPSC ಸದಸ್ಯರ ನೇಮಕಕ್ಕೂ ರೇಟ್ ಫಿಕ್ಸ್?

KPSC ಸದಸ್ಯರನ್ನು ನೇಮಕ ಮಾಡುವಾಗ ನಿರ್ದಿಷ್ಟ ದರ ನಿಗದಿಪಡಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಜಾತಿಯ ಹೆಸರಿನಲ್ಲಿ ಹಾಗೂ ಹಣದ ಆಧಾರದ ಮೇಲೆ ಸದಸ್ಯರ ನೇಮಕಾತಿ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

KPSC ಮೇಲಿನ ಜನರ ನಂಬಿಕೆ ಕಳೆದುಹೋಗಲು ರಾಜ್ಯ ಸರ್ಕಾರವೇ ಕಾರಣ ಎಂದು ಟೀಕಿಸಿರುವ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

73 ಸಾವಿರ ಉದ್ಯೋಗ ಭರವಸೆ ಏನಾಯಿತು?

ರಾಜ್ಯದ ನಾಲ್ಕು ಇಲಾಖೆಗಳ ನೇಮಕಾತಿ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಎಚ್‌ಡಿಕೆ, ಕಾಂಗ್ರೆಸ್ ಸರ್ಕಾರ ನೀಡಿದ್ದ 73 ಸಾವಿರ ಉದ್ಯೋಗಗಳ ಭರವಸೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಆದರೆ ನೇಮಕಾತಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ಹೊಸ ತಿದ್ದುಪಡಿಗಳ ಹೆಸರಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರ್ಕಾರ ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

ಎಂಜಿನಿಯರ್ ನೇಮಕಾತಿಯಲ್ಲೂ ಅಕ್ರಮ ಆರೋಪ

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಾಲ್ವರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ಇಲಾಖೆಯ ಸಚಿವರಾಗಿ ಹಿಂದೆ ಕಾರ್ಯನಿರ್ವಹಿಸಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ನೇಮಕಾತಿಯಲ್ಲಿನ ಅಕ್ರಮದ ಬಗ್ಗೆ ಮಾಹಿತಿ ಇದ್ದರೂ ನೇಮಕಾತಿ ಮಾಡಲಾಗಿದೆ ಎಂದು ಎಚ್‌ಡಿಕೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳ ಭವಿಷ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.

Continue Reading

Trending