Connect with us

ಸಿನಿಮಾ

ಸಿಂಪಲ್​ ಆಗಿ ಮದುವೆ ಆಗಲಿದ್ದಾರಾ ಪೂಜಾ ಗಾಂಧಿ? ‘ಮುಂಗಾರು ಮಳೆ’ ನಟಿಗೆ ಕಂಕಣ ಭಾಗ್ಯ

Published

on

ಸಿಂಪಲ್​ ಆಗಿ ಮದುವೆ ಆಗಲಿದ್ದಾರಾ ಪೂಜಾ ಗಾಂಧಿ? ‘ಮುಂಗಾರು ಮಳೆ’ ನಟಿಗೆ ಕಂಕಣ ಭಾಗ್ಯ

ಸ್ಯಾಂಡಲ್​ವುಡ್​ನ ಜನಪ್ರಿಯ ನಟಿ ಪೂಜಾ ಗಾಂಧಿ ಅವರ ಮದುವೆ ಬಗ್ಗೆ ಸುದ್ದಿ ಹಬ್ಬಿದೆ. ಉದ್ಯಮಿಯೊಬ್ಬರ ಜೊತೆ ಅವರು ವೈವಾಹಿಕ ಜೀವನ ಆರಂಭಿಸಲಿದ್ದಾರೆ. ನ.29ರಂದು ಅವರು ಮಂತ್ರ ಮಾಂಗಲ್ಯ ಪದ್ಧತಿಯ ಮೂಲಕ ಮದುವೆ ಆಗಲಿದ್ದಾರೆ. ಪೂಜಾ ಮತ್ತು ವಿಜಯ್​ ಪರಸ್ಪರ ಪ್ರೀತಿಸಿ ವಿವಾಹ ಆಗುತ್ತಿದ್ದಾರೆ ಎಂಬ ಮಾಹಿತಿ ಇದೆ.ಕನ್ನಡದ ಖ್ಯಾತ ನಟಿ ಪೂಜಾ ಗಾಂಧಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಅವರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಆರಂಭ ಆಗಲಿದೆ. ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ನವೆಂಬರ್​ 29ರಂದು ಸರಳವಾಗಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಅವರಿನ್ನೂ ಪ್ರತಿಕ್ರಿಯೆ ನೀಡಬೇಕಿದೆ. ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿ ಮೂಲಕ ಪೂಜಾ ಗಾಂಧಿ ಅವರ ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ.ಉದ್ಯಮಿಯೊಬ್ಬರ ಜೊತೆ ನಟಿ ಪೂಜಾ ಗಾಂಧಿ ಮದುವೆ ನಡೆಯಲಿದೆ. ಬೆಂಗಳೂರಿನಲ್ಲಿ ಲಾಜಿಸ್ಟಿಕ್​ ಕಂಪನಿ ಹೊಂದಿರುವ ವಿಜಯ್​ ಎಂಬುವವರ ಜೊತೆ ಅವರು ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಇತ್ತೀಚೆಗಿನ ಕೆಲವು ವರ್ಷಗಳಿಂದ ವಿಜಯ್​ ಮತ್ತು ಪೂಜಾ ಗಾಂಧಿ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈಗ ಅವರಿಬ್ಬರೂ ಮದುವೆ ಆಗುತ್ತಿದ್ದಾರೆ.ನಟಿ ಪೂಜಾ ಗಾಂಧಿ ಅವರು ಮೂಲತಃ ಉತ್ತರ ಪ್ರದೇಶದವರು. ಅವರ ಮಾತೃಭಾಷೆ ಹಿಂದಿ. ಆದರೆ ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಅವರು ಕನ್ನಡ ಭಾಷೆ ಕಲಿಯುವಲ್ಲಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಕರ್ನಾಟಕದಲ್ಲಿ ಇರುವ ಪರಭಾಷಿಕರೂ ಕನ್ನಡ ಕಲಿಯಬೇಕು ಎಂದು ಹೇಳುವ ಪೂಜಾ ಗಾಂಧಿ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡಲು ಆರಂಭಿಸಿದ್ದಾರೆ. ಮದುವೆ ಆಗಲಿರುವ ವಿಜಯ್​ ಅವರೇ ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದಾರೆ ಎಂದು ಹೇಳಲಾಗಿದೆ. ಈಗ ಪೂಜಾ ಗಾಂಧಿ ಅವರು ಕರ್ನಾಟಕದ ಸೊಸೆ ಆಗುತ್ತಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಪೂಜಾ ಗಾಂಧಿ ನಟಿಸಿದ ಮೊದಲ ಸಿನಿಮಾ ‘ಮುಂಗಾರು ಮಳೆ’ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಗಣೇಶ್​ ಜೊತೆ ತೆರೆಹಂಚಿಕೊಂಡಿದ್ದ ಪೂಜಾ ಗಾಂಧಿ ಅವರು ರಾತ್ರೋರಾತ್ರಿ ಸ್ಟಾರ್​ ನಟಿಯಾದರು. ಆ ಬಳಿಕ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರಲು ಆರಂಭಿಸಿದವು. ಪುನೀತ್​ ರಾಜ್​ಕುಮಾರ್​ ಅವರಂತಹ ಸ್ಟಾರ್​ ಕಲಾವಿದರ ಜೊತೆ ನಟಿಸಿ ಇನ್ನಷ್ಟು ಜನಪ್ರಿಯತೆ ಪಡೆದರು. ವೈಯಕ್ತಿಕ ಬದುಕಿನಲ್ಲಿ ಪೂಜಾ ಗಾಂಧಿ ಅವರು ಕೆಲವು ಏಳು-ಬೀಳುಗಳನ್ನು ಕಂಡಿದ್ದಾರೆ. 2012ರಲ್ಲಿ ಅವರ ನಿಶ್ಚಿತಾರ್ಥ ನಡೆದಿತ್ತು. ಉದ್ಯಮಿ ಆನಂದ್​ ಗೌಡ ಜೊತೆ ಅವರು ಮದುವೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಂಬಂಧ ಮುರಿದುಬಿದ್ದಿತ್ತು.

Continue Reading

ಸಿನಿಮಾ

ದಕ್ಷಿಣ ಭಾರತದ ಗಾನಕೋಗಿಲೆ ಎಸ್. ಜಾನಕಿ ನಿಧನ: 88ನೇ ವಯಸ್ಸಿನಲ್ಲಿ ಸಂಗೀತ ಲೋಕದ ದಂತಕಥೆಗೆ ವಿದಾಯ

Published

on

By

ದಕ್ಷಿಣ ಭಾರತದ ಖ್ಯಾತ ಹಿನ್ನಲೆ ಗಾಯಕಿ ಎಸ್. ಜಾನಕಿ ಅವರು 88ನೇ ವಯಸ್ಸಿನಲ್ಲಿ ಮೈಸೂರಿನ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. “ದಕ್ಷಿಣ ಭಾರತದ ಗಾನಕೋಗಿಲೆ” ಎಂದೇ ಜನಪ್ರಿಯರಾಗಿದ್ದ ಅವರು ಭಾರತೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯಿಂದ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿದ ಎಸ್. ಜಾನಕಿ ಅವರು ತಮ್ಮ ಸಂಗೀತ ಪಯಣವನ್ನು ಆರಂಭಿಸಿ ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗವನ್ನು ತಮ್ಮ ಸುಮಧುರ ಕಂಠದಿಂದ ರಂಜಿಸಿದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅಪರೂಪದ ಸಾಧನೆ ಅವರದು.ಕನ್ನಡ ಚಿತ್ರರಂಗದಲ್ಲಿ ಎಸ್. ಜಾನಕಿ ಅವರ ಧ್ವನಿ ವಿಶೇಷ ಜನಪ್ರಿಯತೆ ಗಳಿಸಿತ್ತು. ಅವರ ಹಾಡುಗಳು ಇಂದಿಗೂ ಸಂಗೀತಾಸಕ್ತರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಭಾವಪೂರ್ಣ ಗಾಯನ, ಸ್ಪಷ್ಟ ಉಚ್ಚಾರಣೆ ಮತ್ತು ಧ್ವನಿಯ ವೈವಿಧ್ಯತೆ ಅವರ ಗಾಯನದ ಪ್ರಮುಖ ವೈಶಿಷ್ಟ್ಯಗಳಾಗಿದ್ದವು.ತಮ್ಮ ಅದ್ಭುತ ಸಂಗೀತ ಸೇವೆಗಾಗಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದರು. ಭಾರತೀಯ ಚಿತ್ರರಂಗದ ಅನೇಕ ಖ್ಯಾತ ಸಂಗೀತ ನಿರ್ದೇಶಕರು ಮತ್ತು ನಟರೊಂದಿಗೆ ಕೆಲಸ ಮಾಡಿ ಅಸಂಖ್ಯಾತ ಅಮರ ಗೀತೆಗಳನ್ನು ನೀಡಿದ್ದಾರೆ.ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಂಗೀತ ಲೋಕವು ಅಪರೂಪದ ಪ್ರತಿಭೆಯನ್ನು ಕಳೆದುಕೊಂಡಿದೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರು ಹಾಡಿದ ಸಾವಿರಾರು ಹಾಡುಗಳು ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಲಿದ್ದು, ಭಾರತೀಯ ಸಂಗೀತ ಇತಿಹಾಸದಲ್ಲಿ ಎಸ್. ಜಾನಕಿ ಅವರ ಹೆಸರು ಸದಾ ಚಿರಸ್ಥಾಯಿಯಾಗಿ ಉಳಿಯಲಿದೆ.

Continue Reading

ದೇಶ

11 ವರ್ಷದ ಕಾಯುವಿಕೆಗೆ ಫಲ! ‘ಲೆನಿನ್’ ಹಿಟ್ ಬಳಿಕ ಭಾವುಕರಾದ ಅಖಿಲ್ ಅಕ್ಕಿನೇನಿ

Published

on

ಬೆಂಗಳೂರು: ಟಾಲಿವುಡ್ ಯುವ ನಟ ಅಖಿಲ್ ಅಕ್ಕಿನೇನಿ ಅಭಿನಯದ ಬಹುನಿರೀಕ್ಷಿತ ‘ಲೆನಿನ್’ ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರದ ಯಶಸ್ಸಿನ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಅಖಿಲ್ ಭಾವುಕರಾಗಿ ತಮ್ಮ ತಂದೆ, ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿತ್ರದ ಯಶಸ್ಸಿನಿಂದ ಭಾವುಕರಾದ ಅಖಿಲ್, ತಂದೆಯನ್ನು ಬಿಗಿಯಾಗಿ ಅಪ್ಪಿಕೊಂಡು ಕಣ್ಣೀರಿಟ್ಟರು. ಮಗನ ಸಿನಿ ಪಯಣದ ಏಳುಬೀಳುಗಳನ್ನು ಹತ್ತಿರದಿಂದ ಕಂಡಿದ್ದ ನಾಗಾರ್ಜುನ ಕೂಡ ಅಷ್ಟೇ ಭಾವುಕರಾಗಿ ಅಖಿಲ್ ಅವರನ್ನು ಅಪ್ಪಿಕೊಂಡ ಕ್ಷಣ ಅಭಿಮಾನಿಗಳ ಮನಸೂರೆಗೊಂಡಿದೆ. ಈ ತಂದೆ-ಮಗನ ಅಪರೂಪದ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

2015ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಖಿಲ್ ಅಕ್ಕಿನೇನಿ ಹಲವು ನಿರೀಕ್ಷೆಗಳೊಂದಿಗೆ ಸಿನಿ ಜೀವನ ಆರಂಭಿಸಿದ್ದರೂ, ದೊಡ್ಡ ಮಟ್ಟದ ಯಶಸ್ಸಿಗಾಗಿ ಸುಮಾರು 11 ವರ್ಷಗಳ ಕಾಲ ಕಾಯಬೇಕಾಯಿತು. ಅದರಲ್ಲೂ 2023ರಲ್ಲಿ ಬಿಡುಗಡೆಯಾದ ‘ಏಜೆಂಟ್’ ಚಿತ್ರದ ಸೋಲು, ಶೂಟಿಂಗ್ ವೇಳೆ ಸಂಭವಿಸಿದ ಅಪಘಾತ, ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳು ಹಾಗೂ ಮೂರು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದು ಅವರ ವೃತ್ತಿಜೀವನಕ್ಕೆ ದೊಡ್ಡ ಸವಾಲಾಗಿತ್ತು.

ನಿರ್ದೇಶಕ ಮುರಳಿ ಕಿಶೋರ್ ಅಬ್ಬುರು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಲೆನಿನ್’ ಚಿತ್ರದಲ್ಲಿ ನಾಗಾರ್ಜುನ ಸಹ-ನಿರ್ಮಾಪಕರಾಗಿದ್ದಾರೆ. ಕೌಟುಂಬಿಕ ಬಾಂಧವ್ಯ, ಸಾಹಸ, ಪ್ರೇಮಕಥೆ ಹಾಗೂ ಮಹಾಭಾರತದ ಸ್ಫೂರ್ತಿಯ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಅಖಿಲ್ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಲೆನಿನ್’ ಚಿತ್ರದ ಯಶಸ್ಸು ಅಖಿಲ್ ಅಕ್ಕಿನೇನಿ ಅವರ ಸಿನಿ ಬದುಕಿಗೆ ಹೊಸ ಚೈತನ್ಯ ತುಂಬಿದ್ದು, ಟಾಲಿವುಡ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

Continue Reading

ದೇಶ

20 ಗಂಟೆಗಳ ಕಾಲ ನೀರಿನಡಿ ಸಾಹಸ! ‘ಮೈಸಾ’ ಸಿನಿಮಾದಲ್ಲಿ ಇತಿಹಾಸ ಸೃಷ್ಟಿಸಿದ ರಶ್ಮಿಕಾ ಮಂದಣ್ಣ

Published

on

ನವದೆಹಲಿ: ಕನ್ನಡತಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಮೈಸಾ’ (Mysaa) ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಚಿತ್ರದ ಪ್ರಮುಖ ಸಾಹಸ ದೃಶ್ಯಕ್ಕಾಗಿ ಅವರು ಯಾವುದೇ ಬಾಡಿ ಡಬಲ್ ಅಥವಾ ಡೂಪ್ ಬಳಸದೇ ಸ್ವತಃ ಅಂಡರ್‌ವಾಟರ್ (Underwater) ಫೈಟ್ ಸೀಕ್ವೆನ್ಸ್‌ನಲ್ಲಿ ಅಭಿನಯಿಸಿದ್ದು, ಮಹಿಳಾ ಪ್ರಧಾನ ನಟಿಯೊಬ್ಬರು ಇಂತಹ ಸಾಹಸ ಮಾಡಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

20 ಗಂಟೆಗಳ ಕಾಲ ನೀರಿನಡಿಯಲ್ಲೇ ಚಿತ್ರೀಕರಣ

ಈ ರೋಚಕ ಸಾಹಸ ದೃಶ್ಯದ ಚಿತ್ರೀಕರಣಕ್ಕಾಗಿ ರಶ್ಮಿಕಾ ಎರಡು ದಿನಗಳಲ್ಲಿ ಒಟ್ಟು 20 ಗಂಟೆಗಳ ಕಾಲ ನೀರಿನಡಿಯಲ್ಲೇ ಕಳೆದಿದ್ದಾರೆ. ಚಿತ್ರದ ನಿರ್ದೇಶಕ ರವೀಂದ್ರ ಪುಲ್ಲೆ (Ravindra Pulle) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರೀಕರಣದ ಅಪರೂಪದ ಚಿತ್ರಗಳನ್ನು ಹಂಚಿಕೊಂಡು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಹಂಚಿಕೊಂಡಿರುವ ಚಿತ್ರಗಳಲ್ಲಿ ರಶ್ಮಿಕಾ ವೆಟ್‌ಸೂಟ್ ಧರಿಸಿ ಡೈವಿಂಗ್ ತಂಡದೊಂದಿಗೆ ಸಾಹಸ ದೃಶ್ಯಕ್ಕೆ ಸಿದ್ಧತೆ ನಡೆಸುತ್ತಿರುವುದು ಕಾಣಿಸುತ್ತದೆ. ಮತ್ತೊಂದು ಚಿತ್ರದಲ್ಲಿ ಅವರ ಬೆನ್ನಿನ ಮೇಲಿನ ಗಾಯದ ಗುರುತುಗಳು ಪಾತ್ರದ ತೀವ್ರತೆಯನ್ನು ತೋರಿಸುತ್ತವೆ.

‘ಇದು ನನ್ನ ಜೀವನದ ಅತ್ಯಂತ ಕಠಿಣ ಚಿತ್ರೀಕರಣ’

ಈ ಅನುಭವದ ಬಗ್ಗೆ ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

“ಇತ್ತೀಚೆಗೆ ನಾನು ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಾಗಿದ್ದೆ. ಅದಕ್ಕೆ ಕಾರಣ ಇದೇ. ನನ್ನ ಜೀವನದಲ್ಲೇ ನಾನು ಎದುರಿಸಿದ ಅತ್ಯಂತ ಕಠಿಣ ಮತ್ತು ಸವಾಲಿನ ಚಿತ್ರೀಕರಣ ಇದಾಗಿದೆ. ಈ ಸಾಹಸಕ್ಕಾಗಿ ನಾವೆಲ್ಲರೂ ಸ್ವಲ್ಪ ಹುಚ್ಚುತನ ಮೆರೆದಿದ್ದೇವೆ. ಆದರೆ ಇದೇ ಅನುಭವ ನನಗೆ ಅಪಾರ ಉತ್ಸಾಹ ನೀಡಿದೆ.” ಎಂದು ಅವರು ತಿಳಿಸಿದ್ದಾರೆ.

ಗಿರಿಜನರ ಹಿನ್ನೆಲೆಯ ಆಕ್ಷನ್ ಥ್ರಿಲ್ಲರ್

‘ಮೈಸಾ’ ಚಿತ್ರವನ್ನು ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಿಸುತ್ತಿದ್ದು, ನಿರ್ದೇಶನವನ್ನು ರವೀಂದ್ರ ಪುಲ್ಲೆ ಮಾಡಿದ್ದಾರೆ. ಗಿರಿಜನ ಸಮುದಾಯದ ಹಿನ್ನೆಲೆಯ ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಶ್ಮಿಕಾ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪ್ಯಾನ್-ಇಂಡಿಯಾ ಆಕ್ಷನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಫಸ್ಟ್ ಲುಕ್‌ನಲ್ಲೇ ಸದ್ದು ಮಾಡಿದ್ದ ಸಿನಿಮಾ

ಕಳೆದ ವರ್ಷ ಬಿಡುಗಡೆಯಾದ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ರಶ್ಮಿಕಾ ರಕ್ತಸಿಕ್ತ ಅವತಾರದಲ್ಲಿ ಕೈಯಲ್ಲಿ ಆಯುಧ ಹಿಡಿದು ಕಾಣಿಸಿಕೊಂಡಿದ್ದು, ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಈಗ ಅಂಡರ್‌ವಾಟರ್ ಫೈಟ್ ದೃಶ್ಯದ ಸುದ್ದಿಯಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಚಿತ್ರದ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ‘ಮೈಸಾ’ ಸಿನಿಮಾ ಮುಂದಿನ ದಿನಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

Continue Reading

Trending