Connect with us

ರಾಜಕೀಯ

ಹೋಮದ ಪೂರ್ಣಾಹುತಿ ಬಳಿಕ ಪ್ರಸಾದ ಕೊಡುವ ಪದ್ಧತಿ, ಪ್ರಸಾದ ಕೊಡುವ ಸಮಯ ಬಂದಿದೆ”: ಡಿ.ವಿ. ಸದಾನಂದ ಗೌಡ

Published

on

ಬೆಂಗಳೂರು: “ದೊಡ್ಡ ದೊಡ್ಡ ಹೋಮ ಮಾಡಿ ಪೂರ್ಣಾಹುತಿ ಮಾಡಿದ ನಂತರ ಪ್ರಸಾದ ಕೊಡುತ್ತಾರೆ. ಆ ಪ್ರಸಾದ ಕೊಡುವ ಸಮಯಕ್ಕೆ ಬಂದಿದ್ದೇವೆ” ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಒಂದು ಕಾಲ ಕೂಡಿ ಬಂದಿದೆ. ಆ ಪ್ರಸಾದ ಕೊಡುವ ಸಮಯಕ್ಕೆ ಬಂದಿದ್ದೇವೆ. ಎಲ್ಲಾ ಸಂಸದರು, ಯತ್ನಾಳ್ ಟೀಮ್ ದೆಹಲಿಯಲ್ಲಿ ಇದ್ದಾರೆ. ದೆಹಲಿಯಲ್ಲಿ ಜೋಶಿ ನೇತೃತ್ವದಲ್ಲಿ ಸಂಸದರ ಸಭೆ ಮಾಡಿದ್ದಾರೆ. ಯತ್ನಾಳ್ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಶಿಸ್ತು ಸಮಿತಿ ಅಧ್ಯಕ್ಷರ ಮುಂದೆ ಯತ್ನಾಳ್ ಉತ್ತರ ಕೊಡುತ್ತಾರೆ. ನಮ್ಮಲ್ಲಿನ ಜಗಳ ವಿರೋಧಿಗಳಿಗೆ ಅಸ್ತ್ರ ಆಗುತ್ತಿದೆ” ಎಂದರು.

“ತರುಣ್ ಚುಗ್ ನಿನ್ನೆ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ. ನನಗೆ ಯಾವುದೇ ಸಂಬಂಧ ಇಲ್ಲ, ನಾನು ಅದಕ್ಕಾಗಿ ಬಂದಿಲ್ಲ ಅಂದರು. ದೆಹಲಿಗೆ ಈಗಾಗಲೇ ಅಧ್ಯಕ್ಷರು ಹೋಗಿ ಬಂದಿದ್ದಾರೆ. ಆರ್‌. ಅಶೋಕ್ ಕೂಡಾ ದೆಹಲಿಗೆ ಹೋಗಿದ್ದಾರೆ. ಯತ್ನಾಳ್ ಟೀಮ್ ಕೂಡಾ ದೆಹಲಿಯಲ್ಲೇ ಇದೆ. ಇದಕ್ಕಿಂತ ಇನ್ನು ಏನು ರಿಪೋರ್ಟ್ ಬೇಕು? ಎಲ್ಲರ ಕಡೆಯಿಂದಲೂ ವರದಿಯನ್ನು ಹೈಕಮಾಂಡ್ ಸ್ವೀಕರಿಸಿದೆ‌. ಇನ್ನು ಎರಡು ಮೂರು ದಿನಗಳಲ್ಲಿ ಒಂದು ನಿರ್ಧಾರಕ್ಕೆ ಬನ್ನಿ. ಯಾರೇ ತಪ್ಪು ಮಾಡಿದರೂ ಕ್ರಮ ಆಗಲಿ. ಇಲ್ಲಿ ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ” ಎಂದು ಕಿಡಿಕಾರಿದರು‌.

“ಚಮಚಾಗಿರಿ ಮಾಡುವುದರಿಂದ ಪಕ್ಷ ಸಂಘಟನೆ ಆಗಲ್ಲ. ದುಡ್ಡಿನ ಮೂಟೆ ಇಟ್ಟುಕೊಂಡು ಬಂದವರಿಂದ ಪಕ್ಷ ಸಂಘಟನೆ ಆಗಲ್ಲ. ಅತ್ಯಂತ ದೊಡ್ಡ ಶಿಸ್ತು ಉಲ್ಲಂಘನೆ ಸೋಮಶೇಖರ್ ಮತ್ತು ಹೆಬ್ಬಾರ್‌ ಅವರಿಂದ ಆಗಿದೆ. ತೇಪೆ ಹಾಕುವ ಕೆಲಸ ಈ ಬಾರಿ ಆಗಬಾರದು ಅಂತ ಹೈಕಮಾಂಡ್ ನಾಯಕರಿಗೆ ಹೇಳುತ್ತೇನೆ. ಅದು ಯಾರೇ ಆದರೂ ಕ್ರಮ ಆಗಬೇಕು. ಸ್ಥಳೀಯ ಚುನಾವಣೆ ಮೇಲೂ ಇದು ಪರಿಣಾಮ ಬೀರುತ್ತದೆ. ಯತ್ನಾಳ್ ಮಾಡಿರುವುದು ಇಡೀ ಲೋಕಕ್ಕೆ ಗೊತ್ತಿದೆ. ಫೈಟ್ ಮಾಡಲು ಒಂದು ತಂಡ ರಚನೆ ಆಗುವುದು ಸರಿಯಲ್ಲ. ಅವರೆಲ್ಲಾ ದೆಹಲಿಗೆ ಹೋಗಿದ್ದರೆ ಮತ್ತಷ್ಟು ಗೌರವ ಬರುತ್ತಿತ್ತು. ತೊಡೆ ತಟ್ಟಿ ಯತ್ನಾಳ್ ಟೀಮ್ ಹೋಗುವುದು ಸರಿಯಲ್ಲ. ಬಲ ಪ್ರದರ್ಶನ ಮಾಡುವುದಾದರೆ ಹೈಕಮಾಂಡ್ ಬೇಕಾಗಿಲ್ಲ ಅಲ್ವಾ?” ಎಂದು ಪ್ರಶ್ನಿಸಿದರು.

“ನಾವು ಹೈಕಮಾಂಡ್‌ಗೆ ಹೋಗಿ ವರದಿ ಕೊಡುವ ಮೂಲಕ ನಮ್ಮ ಗೌರವ ಹೆಚ್ಚಿಸಿಕೊಳ್ಳಬೇಕು. ಇದು ಬಯಲಾಟ ಇದ್ದಂತೆ. ಇವತ್ತು ಒಂದು ತಂಡದ ಆಟ, ನಾಳೆ ಮತ್ತೊಂದು ತಂಡದ ಆಟ. ರಾಷ್ಟ್ರೀಯ ಪ್ರಮುಖರು ತೀರ್ಮಾನ ಮಾಡಬೇಕು. ತಪ್ಪು ಇದ್ದವರನ್ನು ಹೊರ ಹಾಕಬೇಕು, ಅಶಿಸ್ತನ್ನು ಸರಿ ಮಾಡಬೇಕು. ಪ್ರತ್ಯೇಕ ಹೋರಾಟ ಮಾಡುವುದನ್ನು ನಿಲ್ಲಿಸಬೇಕು. ಬದಲಾವಣೆಯಿಂದ ಎಲ್ಲಾ ಸರಿ ಮಾಡಬಹುದು ಎಂದು ಅನ್ನಿಸಿದರೆ, ಅದಾದರೂ ಮಾಡಿ. ಸದಸ್ಯತ್ವದಲ್ಲಿ ನಾವು ಎಷ್ಟರಮಟ್ಟಿಗೆ ಸ್ಥಾನದಲ್ಲಿ ಇದ್ದರೆ ಏನು? ಪಕ್ಷದ ಜಗಳ ಬೀದಿಗೆ ಬಂದಿದೆ. ಒಂದು ಟೀಮ್ ವಕ್ಫ್​ ವಿರುದ್ಧ ಹೋರಾಟ ಮಾಡಿ ಜನರ ಬಳಿ ಹೋದ ಮೇಲೆ ಮತ್ತೊಂದು ತಂಡ ಹೋದರೆ ಪ್ರಯೋಜನ ಆಗುವುದಿಲ್ಲ” ಎಂದು ತಿಳಿಸಿದರು.

“ಡಿಸೆಂಬರ್ 7 ರಂದು ತೀರ್ಮಾನ ಆಗಲು ಉಸ್ತುವಾರಿಗಳ ಕೈಯಲ್ಲಿ ಏನೂ ಇಲ್ಲ. ಏನೇ ಆದರೂ ಜೆ.ಪಿ. ನಡ್ಡಾ ತೀರ್ಮಾನ ಮಾಡಬೇಕು. ಉಸ್ತುವಾರಿಗಳು ವರದಿ ಪಡೆದು ಹೈಕಮಾಂಡ್​ಗೆ ಕೊಡಬೇಕು ಅಷ್ಟೇ. ಆರ್. ಅಶೋಕ್ ಅವರ ಜೊತೆ ಮಾತನಾಡಿದ್ದೆ. ದೆಹಲಿಗೆ ಹೋಗುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ನಾವೆಲ್ಲರೂ ಮಾತನಾಡುವುದು ಸರಿ ಇದೆ ಅಂತ ಅಶೋಕ್ ಹೇಳಿದ್ದಾರೆ. ಪರಿಹಾರ ಇದ್ದೇ ಇದೆ, ಎಲ್ಲರೂ ತಾಳ್ಮೆಯಿಂದ ಇರಬೇಕು” ಎಂದರು.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

KPSC ರದ್ದು ಮಾಡುತ್ತೇನೆ ಎಂದಿದ್ದ ಪ್ರಿಯಾಂಕ್ ಖರ್ಗೆ ಈಗ ಏಕೆ ಸುಮ್ಮನಿದ್ದಾರೆ? ಹೆಚ್‌ಡಿಕೆ ಕಿಡಿ

Published

on

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿ ನಡೆಯುತ್ತಿರುವ ನೇಮಕಾತಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆಪಿಎಸ್‌ಸಿ ಬಗ್ಗೆ ಸಾರ್ವಜನಿಕರಲ್ಲಿ ಅಸಹ್ಯಕರ ಭಾವನೆ ಮೂಡಿದ್ದು, ಇಂತಹ ಸಂಸ್ಥೆ ಅಗತ್ಯವಿದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ ಎಂದು ಅವರು ಹೇಳಿದ್ದಾರೆ.

ಕೆಪಿಎಸ್‌ಸಿ ಎಇಇ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್‌ಡಿ ಕುಮಾರಸ್ವಾಮಿ, ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಕೆಪಿಎಸ್‌ಸಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

‘ಸಂಪೂರ್ಣ ಅಧಿಕಾರ ಸಿಕ್ಕರೆ KPSC ರದ್ದು ಮಾಡ್ತೀನಿ ಎಂದಿದ್ರಲ್ಲಾ’

ಪ್ರಿಯಾಂಕ್ ಖರ್ಗೆ ಅವರು ಹಿಂದೆ ಸಂಪೂರ್ಣ ಅಧಿಕಾರ ದೊರೆತರೆ ಕೆಪಿಎಸ್‌ಸಿಯನ್ನು ರದ್ದುಪಡಿಸುವುದಾಗಿ ಹೇಳಿದ್ದರು. ಇದೀಗ ಅಧಿಕಾರದಲ್ಲಿರುವ ಅವರು ಕೆಪಿಎಸ್‌ಸಿ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ ಎಂದು ಹೆಚ್‌ಡಿಕೆ ಪ್ರಶ್ನಿಸಿದರು.

ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಕೆಪಿಎಸ್‌ಸಿ ಪರಿಸ್ಥಿತಿ ಹಂತಹಂತವಾಗಿ ಹದಗೆಡುತ್ತಿದೆ. ಇಂತಹ ಸಂಸ್ಥೆಯನ್ನು ಹೇಗೆ ಸರಿಪಡಿಸುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾನೂನುಬಾಹಿರವಾಗಿ ಯಾರಿಗೂ ಸೂಚನೆ ನೀಡಿಲ್ಲ. ತಮ್ಮ ಸಂಬಂಧಿಕರು ಅಥವಾ ಆಪ್ತರಿಗೆ ಅನುಕೂಲವಾಗುವಂತೆ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನ ನೀಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. 2006ರಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾಗಿ ಅವರು ಹೇಳಿದರು.

ಎಇಇ ನೇಮಕಾತಿ ಕುರಿತು ಗಂಭೀರ ಆರೋಪ

ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ ಹೆಚ್‌ಡಿಕೆ, ಪ್ರಶ್ನೆಪತ್ರಿಕೆ ಸೇರಿದಂತೆ ಪರೀಕ್ಷಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಪ್ರಶ್ನೆಪತ್ರಿಕೆಯನ್ನು ರೆಸಾರ್ಟ್‌ಗೆ ತೆಗೆದುಕೊಂಡು ಹೋಗಲಾಗಿದೆ ಎಂಬ ಆರೋಪದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಒಎಂಆರ್‌ ಶೀಟ್‌ ತಿದ್ದಲಾಗಿದೆ, ಸಿಸಿಟಿವಿ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ ಹಾಗೂ ದೃಶ್ಯಾವಳಿಗಳಿಗೆ ಸಂಬಂಧಿಸಿದಂತೆ ಹಲವು ಅನುಮಾನಗಳಿವೆ ಎಂದು ಅವರು ಆರೋಪಿಸಿದರು. ಈ ವಿಚಾರದಲ್ಲಿ ಸರ್ಕಾರ ನ್ಯಾಯಾಲಯದ ಮುಂದೆ ತನ್ನ ನಿಲುವನ್ನು ಸ್ಪಷ್ಟವಾಗಿ ಮಂಡಿಸಬೇಕಿತ್ತು ಎಂದರು.

‘ಯುವಕರಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರಿ?’

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಎಷ್ಟು ಉದ್ಯೋಗಗಳನ್ನು ನೀಡಲಾಗಿದೆ ಎಂಬುದನ್ನು ಸರ್ಕಾರ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಸಿಗದೆ ಕಡಿಮೆ ಅಂಕ ಪಡೆದವರಿಗೆ ಉತ್ತಮ ರ‍್ಯಾಂಕ್ ದೊರೆತಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಣ ನೀಡಿದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಅವರು ಆರೋಪಿಸಿದರು.

ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ

ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ ಹಾಗೂ ಕಂಟ್ರೋಲರ್‌ಗಳ ಅಧಿಕಾರ ಮತ್ತು ಜವಾಬ್ದಾರಿಗಳ ಬಗ್ಗೆಯೂ ಹೆಚ್‌ಡಿಕೆ ಪ್ರಶ್ನೆಗಳನ್ನು ಎತ್ತಿದರು. ನೇಮಕಾತಿ ಅಕ್ರಮಗಳ ಆರೋಪ ಕೇಳಿಬಂದರೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

ಕೆಪಿಎಸ್‌ಸಿ ಅಕ್ರಮಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ ಅವರು, ಉದ್ಯೋಗಾಕಾಂಕ್ಷಿಗಳ ಹಿತ ಕಾಪಾಡಲು ಪಾರದರ್ಶಕ ನೇಮಕಾತಿ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.

‘ಬರೀ ಹೇಳಿಕೆ ಕೊಡಬೇಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿ. ಕೆಪಿಎಸ್‌ಸಿ ಯಾವಾಗ ಸರಿಪಡಿಸುತ್ತೀರಿ ಎಂಬುದನ್ನು ಜನರಿಗೆ ತಿಳಿಸಿ’ ಎಂದು ಸರ್ಕಾರದ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Continue Reading

ರಾಜಕೀಯ

KS Eshwarappa: 2028ರ ಚುನಾವಣೆಗೆ ಈಶ್ವರಪ್ಪ ಬಿಗ್ ಘೋಷಣೆ; ಶಿವಮೊಗ್ಗದಿಂದ ತಾವೋ, ಮಗನೋ ಸ್ಪರ್ಧೆ ಖಚಿತ!

Published

on

ಶಿವಮೊಗ್ಗ: ಬಿಜೆಪಿ ವಿರುದ್ಧದ ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ಬಹಿರಂಗಪಡಿಸಿರುವ ಹಿರಿಯ ರಾಜಕಾರಣಿ KS Eshwarappa, 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಾವಾಗಲಿ ಅಥವಾ ತಮ್ಮ ಮಗನಾಗಲಿ ಸ್ಪರ್ಧಿಸುವುದು ಶೇ.100ರಷ್ಟು ಖಚಿತ ಎಂದು ಘೋಷಿಸಿದ್ದಾರೆ. ಈಶ್ವರಪ್ಪ ಅವರ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಬಿಜೆಪಿ ಟಿಕೆಟ್ ನೀಡದ ವಿಚಾರದ ಬೇಸರ ಇನ್ನೂ ತಮ್ಮಲ್ಲಿದೆ ಎಂದು ಹೇಳಿದ್ದಾರೆ. ಪಕ್ಷದ ನಾಯಕರ ನಿರ್ಧಾರದಿಂದ ತಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮಗನಿಗೆ ಟಿಕೆಟ್ ನೀಡದಿದ್ದಕ್ಕೆ ಅಸಮಾಧಾನ

ಬಿ.ಎಸ್. ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ. ವಿಜಯೇಂದ್ರ ಮತ್ತು ಬಿ.ವೈ. ರಾಘವೇಂದ್ರ ಅವರಿಗೆ ರಾಜಕೀಯದಲ್ಲಿ ಅವಕಾಶ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೂ ಟಿಕೆಟ್ ನೀಡಲಾಗಿದೆ. ಆದರೆ ತಮ್ಮ ಮಗನಿಗೆ ಮಾತ್ರ ಅವಕಾಶ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ಈ ವಿಚಾರ ತಮ್ಮಲ್ಲಿ ಇನ್ನೂ ಬೇಸರ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ಇದೇ ಕಾರಣದಿಂದ ಬಿಜೆಪಿಯಲ್ಲಿನ ತಮ್ಮ ರಾಜಕೀಯ ಸಂಬಂಧಗಳ ಬಗ್ಗೆ ಈಶ್ವರಪ್ಪ ಅವರ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

‘ತಾವಾಗಲಿ, ಮಗನಾಗಲಿ ಸ್ಪರ್ಧೆ ಖಚಿತ’

2028ರ ವಿಧಾನಸಭಾ ಚುನಾವಣೆಯ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಈಶ್ವರಪ್ಪ, ಶಿವಮೊಗ್ಗ ನಗರ ಕ್ಷೇತ್ರದಿಂದ ತಾವಾಗಲಿ ಅಥವಾ ತಮ್ಮ ಮಗನಾಗಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿದ್ದಾರೆ.

ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಶಿವಮೊಗ್ಗ ನಗರ ಕ್ಷೇತ್ರದ ರಾಜಕೀಯದಲ್ಲಿ ತಮ್ಮ ಕುಟುಂಬದ ಪಾತ್ರ ಇರಲಿದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ಆದರೆ ಅಭ್ಯರ್ಥಿಯಾಗಿ ತಾವೇ ಸ್ಪರ್ಧಿಸುತ್ತಾರೆಯೇ ಅಥವಾ ತಮ್ಮ ಮಗನನ್ನು ಕಣಕ್ಕಿಳಿಸುತ್ತಾರೆಯೇ ಎಂಬುದನ್ನು ಅವರು ಇನ್ನೂ ಅಂತಿಮವಾಗಿ ತಿಳಿಸಿಲ್ಲ.

ಬಿಜೆಪಿ ನಾಯಕರೊಂದಿಗೆ ಸಂಪರ್ಕ ಮುಂದುವರಿಕೆ

ಇದೇ ವೇಳೆ ಬಿಜೆಪಿ ನಾಯಕರೊಂದಿಗೆ ತಮ್ಮ ಸಂಪರ್ಕ ಇನ್ನೂ ಮುಂದುವರಿದಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಪಕ್ಷದ ಹಲವು ನಾಯಕರು ತಮ್ಮೊಂದಿಗೆ ಮಾತನಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಪ್ರಸ್ತುತ ಹಲವು ಗಂಭೀರ ಸಮಸ್ಯೆಗಳಿವೆ ಎಂದು ಅಭಿಪ್ರಾಯಪಟ್ಟಿರುವ ಈಶ್ವರಪ್ಪ, ಇದೇ ಪರಿಸ್ಥಿತಿಯಲ್ಲಿ ಪಕ್ಷ ಮುಂದಿನ ಚುನಾವಣೆಯನ್ನು ಎದುರಿಸಿದರೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಥಾನಗಳನ್ನು ಗೆಲ್ಲುವುದು ಕಷ್ಟವಾಗಬಹುದು ಎಂದು ಹೇಳಿದ್ದಾರೆ.

ಪಕ್ಷ ಸಂಘಟನೆ ಬಲಪಡಿಸಬೇಕು

ಬಿಜೆಪಿಯನ್ನು ಮತ್ತಷ್ಟು ಸಂಘಟಿಸುವ ಅಗತ್ಯವಿದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಸದ್ಯಕ್ಕೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೈಕಮಾಂಡ್‌ನ ನಿರ್ಧಾರವನ್ನು ಗಮನಿಸುತ್ತಿರುವುದಾಗಿ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಈಶ್ವರಪ್ಪ ಅವರ ‘ತಾವಾಗಲಿ ಅಥವಾ ಮಗನಾಗಲಿ 2028ರಲ್ಲಿ ಶಿವಮೊಗ್ಗ ನಗರದಿಂದ ಸ್ಪರ್ಧೆ ಖಚಿತ’ ಎಂಬ ಹೇಳಿಕೆ, ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ ಶಿವಮೊಗ್ಗದ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

Continue Reading

ರಾಜ್ಯ

ಮೈಸೂರಿ ನಲ್ಲಿ Siddaramaiah ಕಾರಿಗೆ ಮುತ್ತಿಗೆ; 165 ಎಕರೆ ಭೂಮಿಗಾಗಿ ರೈತರ ಪ್ರತಿಭಟನೆ

Published

on

ಮೈಸೂರು: ಮಾಜಿ ಮುಖ್ಯಮಂತ್ರಿ Siddaramaiah ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ತಮ್ಮ ಜೀವನಾಧಾರವಾಗಿರುವ 165 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿದ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಕೆಎಸ್‌ಒಯು ಬಡಾವಣೆಯಲ್ಲಿ ಆಯೋಜಿಸಿದ್ದ ಪತ್ರಕರ್ತರ ನೂತನ ಭವನದ ಕಾಮಗಾರಿಗೆ ಚಾಲನೆ, ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಅಭಿನಂದನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮತ್ತು ಡಾ. ಯತೀಂದ್ರ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ರೈತರು ಏಕಾಏಕಿ ಪ್ರತಿಭಟನೆ ಆರಂಭಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು ಎಂದು ರೈತರು ಒತ್ತಾಯಿಸಿದರು.

ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಿದ ರೈತರು

ಕಾರ್ಯಕ್ರಮ ಮುಗಿಸಿ ಸಿದ್ದರಾಮಯ್ಯ ಅವರು ಹೊರಟ ಸಂದರ್ಭದಲ್ಲಿ ಪ್ರತಿಭಟನಾಕಾರರು ಅವರ ಕಾರನ್ನು ಸುತ್ತುವರಿದು ಘೋಷಣೆಗಳನ್ನು ಕೂಗಿದರು. ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಸಿದ್ದರಾಮಯ್ಯ ಅವರ ವಾಹನ ಸುಗಮವಾಗಿ ತೆರಳಲು ಪೊಲೀಸರು ಅನುವು ಮಾಡಿಕೊಟ್ಟರು.

ಇದಾದ ಬಳಿಕ ರೈತರು ಕಾರ್ಯಕ್ರಮದ ವೇದಿಕೆಯಲ್ಲಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲು ಮುಂದಾದರು. ರೈತರ ಪರವಾಗಿ ಬಿಜೆಪಿ ಮುಖಂಡ ಡಾ. ಶುಶ್ರುತ್ ಗೌಡ ಕೂಡ ಸಚಿವರನ್ನು ಭೇಟಿ ಮಾಡಿ, ಭೂಸ್ವಾಧೀನದಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದರು.

ಈ ವೇಳೆ ಯತೀಂದ್ರ ಸಿದ್ದರಾಮಯ್ಯ ಹಾಗೂ ಶುಶ್ರುತ್ ಗೌಡ ನಡುವೆ ಮಾತಿನ ಚಕಮಕಿ ನಡೆಯಿತು. “ನೀವ್ಯಾಕೆ ಈ ವಿಚಾರದಲ್ಲಿ ರಾಜಕೀಯ ಮಾಡಲು ಇಲ್ಲಿದ್ದೀರಿ?” ಎಂದು ಯತೀಂದ್ರ ಪ್ರಶ್ನಿಸಿದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಶಾಸಕರಾದ ಡಿ. ರವಿಶಂಕರ್ ಮತ್ತು ದರ್ಶನ್ ಧ್ರುವನಾರಾಯಣ್ ಮಧ್ಯಪ್ರವೇಶಿಸಿ ಸಚಿವರನ್ನು ಸಮಾಧಾನಪಡಿಸಿದರು.

165 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪದ ವರುಣಾ ವಿಧಾನಸಭಾ ಕ್ಷೇತ್ರದ ಮರಸೆ ಹಾಗೂ ಮುದರಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ಮಾಣ ಹಾಗೂ ಕೈಗಾರಿಕಾ ಯೋಜನೆಗಳಿಗಾಗಿ 165 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು KIADB ಮುಂದಾಗಿದೆ ಎನ್ನಲಾಗಿದೆ.

ಈ ಪ್ರದೇಶದಲ್ಲಿ ಭತ್ತ, ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ನೂರಾರು ಕುಟುಂಬಗಳು ಈ ಕೃಷಿ ಭೂಮಿಯನ್ನೇ ತಮ್ಮ ಜೀವನೋಪಾಯಕ್ಕೆ ಅವಲಂಬಿಸಿವೆ. ಹೀಗಾಗಿ ಭೂಮಿ ಸ್ವಾಧೀನವಾದರೆ ತಮ್ಮ ಕುಟುಂಬಗಳ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಹಾರ ಬೇಡ, ಭೂಮಿಯೇ ಬೇಕು ಎಂದ ರೈತರು

ಭೂಮಿಗೆ ಪರಿಹಾರ ನೀಡುವುದಕ್ಕಿಂತ ತಮ್ಮ ಕೃಷಿ ಜಮೀನನ್ನು ಉಳಿಸಿಕೊಡುವುದೇ ತಮ್ಮ ಪ್ರಮುಖ ಬೇಡಿಕೆ ಎಂದು ರೈತರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಪರ್ಯಾಯ ವ್ಯವಸ್ಥೆ ಅಥವಾ ಪರಿಹಾರ ನೀಡಿದರೂ ತಮ್ಮ ಜೀವನಾಧಾರವಾಗಿರುವ ಜಮೀನನ್ನು ಬಿಟ್ಟುಕೊಡಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ. ಮೈಸೂರಿನಲ್ಲಿ ನಡೆದ ಈ ಪ್ರತಿಭಟನೆ ಇದೀಗ KIADB ಭೂಸ್ವಾಧೀನ ಪ್ರಕ್ರಿಯೆ ಮತ್ತು ರೈತರ ಹಕ್ಕುಗಳ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ.

Continue Reading

Trending