ರಾಜಕೀಯ
ವ್ಯವಸ್ಥಿತವಾಗಿ JDS ಮುಗಿಸಲು ಸಂಚು ರೂಪಿಸಿದೆ BJP: ಸಚಿವ ಕೃಷ್ಣಭೈರೇಗೌಡ
ಮೈಸೂರು: ಜೆಡಿಎಸ್ ಮುಗಿಸುವುದು ಬಿಜೆಪಿಯವರ ಉದ್ದೇಶವಾಗಿದ್ದು, ಅದಕ್ಕಾಗಿ ವ್ಯವಸ್ಥಿತ ರೀತಿಯಲ್ಲಿಯೇ ಸ್ಕೆಚ್ ಹಾಕಿದ್ದಾರೆ. ಭವಿಷ್ಯದಲ್ಲಿ ಜೆಡಿಎಸ್ ಪಕ್ಷವನ್ನು ನುಂಗಿ ಹಾಕುತ್ತಾರೆ. ಆದರೆ, ‘ಜೆಡಿಎಸ್ ಉಳಿಯಬೇಕೆಂದು ಅಸೆಪಡುತ್ತೇನೆ’ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭಾನುವಾರ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಜೆಡಿಎಸ್ ಪಕ್ಷವನ್ನು ಮುಗಿಸಲು ವ್ಯವಸ್ಥಿತವಾಗಿ ಸ್ಕೆಚ್ ಹಾಕಿದೆ ಆದರೆ, ನಾನು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಉಳಿಯಬೇಕೆಂದು ಅಸೆ ಪಡುತ್ತೇನೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ತ್ರಿಕೋನ ಸ್ಪರ್ಧೆ ಇದ್ದಾಗ 97 ಸಾವಿರ ಮತ ಪಡೆದಿದ್ದರು. ಬಿಜೆಪಿ-ಜಾತ್ಯತೀತ ಜನತಾದಳ ಒಂದಾದ ಮೇಲೆ 10 ಸಾವಿರ ಮತಗಳಾದರೂ ಹೆಚ್ಚಾಗಬೇಕಿತ್ತು. ಹೇಗೆ 85 ಸಾವಿರ ಮತಗಳಿಗೆ ಇಳಿಯಿತು? ಬಿಜೆಪಿಯ ಮತಗಳು ಎಲ್ಲಿ ಹೋದವು? ಎಂದು ಪ್ರಶ್ನಿಸಿದರು.
ಬಿಜೆಪಿಯ ಒಂದು ಮತವೂ ಜೆಡಿಎಸ್ಗೆ ಬಂದಿಲ್ಲ. ಬಿಜೆಪಿಯವರು ಬೇಕೆಂದೇ ಕುಮಾರಸ್ವಾಮಿ ಮಗನನ್ನು ಕಣಕ್ಕಿಳಿಸಿ ಮತವನ್ನು ಕಾಂಗ್ರೆಸ್ಗೆ ಹಾಕಿಸಿದ್ದಾರೆ. ಬಿಜೆಪಿಯವರು ಜೆಡಿಎಸ್ ಬೆನ್ನಿಗೆ ಚೂರಿ ಹಾಕಿದ್ದಾರೆ. 25 ಸಾವಿರ ಮತಗಳಿಂದ ಯೋಗೇಶ್ವರ್ ಗೆಲ್ಲಬೇಕಾದರೆ ಯಾವ್ಯಾವ ಮೂಲೆಯಿಂದ ಸಹಾಯ ಬಂದಿದೆ ನೀವೆ ಆಲೋಚನೆ ಮಾಡಿ. ಯೋಗೇಶ್ವರ್ ಗೆಲುವಿಗೆ ಬಿಜೆಪಿ ಪರೋಕ್ಷವಾಗಿ ಸಹಾಯ ಮಾಡಿದೆ. ಬಿಜೆಪಿಯ ಉದ್ದೇಶ ಜನತದಾಳವನ್ನು ಮುಗಿಸುವುದೇ ಆಗಿದೆ. ಭವಿಷ್ಯದಲಿ ಜೆಡಿಎಸ್ ಪಕ್ಷವನ್ನು ನುಂಗಿ ಹಾಕುತ್ತದೆ ಎಂದು ಆರೋಪಿಸಿದರು.
ಸಿಎಂ ಸ್ಥಾನದ ರೇಸ್ನಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿದ, ಯಾರ್ಯಾರ ಜೀವನದಲ್ಲಿ ಏನೇನು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ಸರ್ಕಾರ ಮಾಡುತ್ತಿರುವ ಕೆಲಸಗಳ ಬಗ್ಗೆ ಚರ್ಚೆ ಆಗಬೇಕೇ ಹೊರತು, ನಿತ್ಯವೂ ಅಧಿಕಾರದ ಬಗ್ಗೆ ಚರ್ಚೆ ಸರಿಯಲ್ಲ. ರಾಜಕೀಯದಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳು ಆಗುತ್ತಿರುತ್ತವೆ. ಅಧಿಕಾರ ಶಾಶ್ವತವಲ್ಲ. ಸಮಯ ಬಂದಾಗ ಏನಾಗಬೇಕೋ ಅದು ಆಗುತ್ತದೆ’ ಎಂದುಕ ಹೇಳಿದರು.
ಸಿದ್ದರಾಮಯ್ಯ–ಶಿವಕುಮಾರ್ ನೇತೃತ್ವದಲ್ಲಿ ಜನಪರವಾದ ಕೆಲಸ ಮಾಡುತ್ತಿದ್ದೇವೆ. ಈಚೆಗೆ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವೇ ಅದಕ್ಕೆ ಸಾಕ್ಷಿ. ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಅಲ್ಲಿನ ಕುಟುಂಬ ರಾಜಕಾರಣವನ್ನು ಜನರು ಕಡೆಗಣಿಸಿದ್ದಾರೆ. ಜನರಿಗೆ ಕಾಂಗ್ರೆಸ್ ಬಗ್ಗೆ ಒಳ್ಳೆಯ ಭಾವನೆ ಬಂದಿದೆ ಎಂದು ಹೇಳಿದರು
ರಾಜ್ಯ
CM D K Shiv Kumar ಕೈ ಶಾಸಕರ ಜೊತೆ ಡಿಕೆಶಿ ಮಹತ್ವದ ಸಭೆ; ಅನುದಾನಕ್ಕೆ ಗ್ರೀನ್ ಸಿಗ್ನಲ್, SIRಗೆ ಫುಲ್ ಫೋಕಸ್
ಬೆಂಗಳೂರು: CM D K Shiv Kumar ಅವರು ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕಾಂಗ್ರೆಸ್ ಶಾಸಕರೊಂದಿಗೆ ದಿನಪೂರ್ತಿ ಸಭೆ ನಡೆಸಿ ಕ್ಷೇತ್ರಗಳ ಅಭಿವೃದ್ಧಿ, ಅನುದಾನ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಶಾಸಕರ ಕುಂದುಕೊರತೆ ಹಾಗೂ ಬೇಡಿಕೆಗಳನ್ನು ಆಲಿಸಿದ ಸಿಎಂ, ಸಾಧ್ಯವಾದಷ್ಟು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಸಚಿವರು ಹಾಗೂ ಶಾಸಕರು ಉಪಸ್ಥಿತರಿದ್ದರು. ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ಕೆಲವು ಶಾಸಕರ ಅಸಮಾಧಾನಕ್ಕೂ ಸಭೆಯಲ್ಲಿ ಗಮನ ನೀಡಲಾಗಿದೆ. ಶಾಸಕರೊಂದಿಗೆ ನೇರವಾಗಿ ಚರ್ಚಿಸಿದ ಸಿಎಂ, ಅವರ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳು ಮತ್ತು ಅನುದಾನದ ಅಗತ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಅನುದಾನಕ್ಕೆ ಶಾಸಕರ ಒತ್ತಾಯ
ಸಭೆಯಲ್ಲಿ ಬಹುತೇಕ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಬಜೆಟ್ನಲ್ಲಿ ಘೋಷಿಸಿರುವಂತೆ ಕ್ಷೇತ್ರವಾರು ಅನುದಾನ ಬಿಡುಗಡೆ ಮಾಡಬೇಕು. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚುವರಿ ಅನುದಾನ ಅಗತ್ಯವಿದೆ ಎಂದು ಶಾಸಕರು ಸಿಎಂ ಗಮನಕ್ಕೆ ತಂದಿದ್ದಾರೆ.
ಶಾಸಕರ ಬೇಡಿಕೆಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಕ್ಷೇತ್ರಗಳ ಅಭಿವೃದ್ಧಿ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಹಲವು ಶಾಸಕರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗಳಲ್ಲಿರುವ ಸಮಸ್ಯೆಗಳನ್ನೂ ಪ್ರಸ್ತಾಪಿಸಿದ್ದಾರೆ. ಸಚಿವರು ಶಾಸಕರ ಅಹವಾಲುಗಳಿಗೆ ಸ್ಪಂದಿಸಬೇಕು ಮತ್ತು ಶಾಸಕರ ಸಂಪರ್ಕಕ್ಕೆ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
SIR ಬಗ್ಗೆ ವಿಶೇಷ ಗಮನ
ಕಾಂಗ್ರೆಸ್ ಶಾಸಕರ ಸಭೆಯಲ್ಲಿ SIR (Special Intensive Revision) ವಿಚಾರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರನ್ನು ಗುರುತಿಸಿ, ಅವರ ಹೆಸರು ಪಟ್ಟಿಗೆ ಸೇರ್ಪಡೆಯಾಗುವಂತೆ ಸಹಕರಿಸಲು ಶಾಸಕರಿಗೆ ಸೂಚನೆ ನೀಡಲಾಗಿದೆ.
ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈತಪ್ಪದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಚುನಾವಣಾ ಆಯೋಗವು ಸುಮಾರು 43 ಲಕ್ಷ ಮತದಾರರಿಗೆ ನೋಟಿಸ್ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ, ನೋಟಿಸ್ ಪಡೆದವರಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ ಸಹಾಯ ಮಾಡುವಂತೆ ಶಾಸಕರಿಗೆ ಸಲಹೆ ನೀಡಲಾಗಿದೆ.
ಖಾಯಂ ನಿವಾಸ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯಲು ನೋಟಿಸ್ ಪಡೆದ ಮತದಾರರಿಗೆ ನೆರವು ನೀಡಬೇಕು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಗ್ಯಾರಂಟಿ ಸಮಿತಿ, ಭಾರತ್ ಜೋಡೋ ಸಂಘದ ಚರ್ಚೆ
ಸಭೆಯ ಬಳಿಕ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಅಧಿವೇಶನದ ಬಳಿಕ ಎಲ್ಲಾ ಶಾಸಕರು ಬೆಂಗಳೂರಿನಲ್ಲಿರುವ ಹಿನ್ನೆಲೆಯಲ್ಲಿ ಸಿಎಂ ಸಭೆ ಕರೆದಿದ್ದರು ಎಂದು ತಿಳಿಸಿದರು. SIR ಜೊತೆಗೆ ಗ್ರಾಮೀಣ ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಭಾರತ್ ಜೋಡೋ ಸಂಘ ರಚನೆ ಕುರಿತು ಚರ್ಚೆ ನಡೆದಿದೆ ಎಂದರು.
ಕಸ್ತೂರಿ ರಂಗನ್ ವರದಿ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಗಿದೆ. 2028ರ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಪ್ರಗತಿಪರ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಿಎಂ ಸಲಹೆ ನೀಡಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ಸಚಿವರು 15 ದಿನಕ್ಕೊಮ್ಮೆ ತಾಲೂಕುಗಳಿಗೆ ತೆರಳಿ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿಯೂ ಸಿಎಂ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಒಟ್ಟಿನಲ್ಲಿ, ಅನುದಾನ, SIR, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಕ್ಷೇತ್ರಾಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ನಡೆದ ಕಾಂಗ್ರೆಸ್ ಶಾಸಕರ ಸಭೆ ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆದುಕೊಂಡಿದೆ.
ಬೆಂಗಳೂರು
Nice Company ಖರೀದಿಗೆ ಸಿಎಂ ಯತ್ನ? ಕುಮಾರಸ್ವಾಮಿ ಗಂಭೀರ ಆರೋಪ, ದಾಖಲೆ ಬಿಡುಗಡೆ ಘೋಷಣೆ
ಬೆಂಗಳೂರು: ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗೆ ಸಂಬಂಧಿಸಿದ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ರಾಜ್ಯದ ಹಾಲಿ ಮುಖ್ಯಮಂತ್ರಿ ಬೇನಾಮಿ ಕಂಪನಿಗಳ ಮೂಲಕ Nice Company ಯನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, ಬಿಎಂಐಸಿ ಯೋಜನೆಯ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡಲು ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. ಈ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ವಾರ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ನೈಸ್ ಸಂಸ್ಥೆಯ ಅಕ್ರಮಗಳಲ್ಲಿ ರಾಜ್ಯದ ಹಾಲಿ ಮುಖ್ಯಮಂತ್ರಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ನೈಸ್ ಕಂಪನಿಯನ್ನು ಯಾರು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನತೆಯ ಮುಂದೆ ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.
‘ಬೇನಾಮಿ ಕಂಪನಿಗಳ ಮೂಲಕ ವ್ಯವಹಾರ’
ನೈಸ್ ಯೋಜನೆಯನ್ನು ಯಾರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಮತ್ತು ಈ ವ್ಯವಹಾರದಲ್ಲಿ ಬೇನಾಮಿ ಕಂಪನಿಗಳ ಮೂಲಕ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಮಾಹಿತಿ ತಮ್ಮ ಬಳಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ನೈಸ್ ಯೋಜನೆಗೂ ಮುಖ್ಯಮಂತ್ರಿಗೂ ಇರುವ ಸಂಬಂಧವೇನು? ನೈಸ್ ಸಂಸ್ಥೆಯೊಂದಿಗೆ ಯಾವುದೇ ಒಡಂಬಡಿಕೆ ಇದೆಯೇ? ಕಂಪನಿಯ ಮಾಲೀಕರೊಂದಿಗೆ ಯಾವ ರೀತಿಯ ಸಂಬಂಧ ಮತ್ತು ವ್ಯವಹಾರಗಳಿವೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ತಮ್ಮ ವಿರುದ್ಧ ಬೇನಾಮಿ ಆಸ್ತಿ ಹೊಂದಿರುವ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಕುಮಾರಸ್ವಾಮಿ ಪುನರುಚ್ಚರಿಸಿದರು. ತಮ್ಮ ಬಳಿ ಯಾವುದೇ ಬೇನಾಮಿ ಆಸ್ತಿ ಇದ್ದರೆ ಅದನ್ನು ಬಹಿರಂಗಪಡಿಸುವಂತೆ ಅವರು ಸವಾಲು ಹಾಕಿದರು.
‘ಮುಂದಿನ ವಾರ ದಾಖಲೆ ಬಿಡುಗಡೆ’
ನೈಸ್ ಯೋಜನೆಗೆ ಸಂಬಂಧಿಸಿದಂತೆ ತಾವು ಕೇವಲ ರಾಜಕೀಯ ಆರೋಪ ಮಾಡುತ್ತಿಲ್ಲ. ತಮ್ಮ ಬಳಿ ದಾಖಲೆಗಳಿದ್ದು, ಮುಂದಿನ ವಾರ ಅವುಗಳನ್ನು ಜನರ ಮುಂದಿಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನೈಸ್ ಯೋಜನೆಯಲ್ಲಿ ರೈತರ ಭೂಮಿ, ಒಪ್ಪಂದದ ನಿಯಮಗಳು ಹಾಗೂ ಸಂಸ್ಥೆಯ ವ್ಯವಹಾರಗಳ ಕುರಿತು ಈಗಾಗಲೇ ಜೆಡಿಎಸ್ ಸರ್ಕಾರದ ಗಮನ ಸೆಳೆದಿರುವ ಬೆನ್ನಲ್ಲೇ ಕುಮಾರಸ್ವಾಮಿ ಅವರ ಹೊಸ ಆರೋಪಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.
ಆದರೆ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರತಿಕ್ರಿಯೆ ಈ ವರದಿ ವೇಳೆಗೆ ಲಭ್ಯವಾಗಿಲ್ಲ. ಮುಂದಿನ ವಾರ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಇದೀಗ ಕುತೂಹಲ ಮೂಡಿಸಿದೆ.
ಬೆಂಗಳೂರು
Nice ಯೋಜನೆ ವಿರುದ್ಧ JDS ಸಮರ: ಸರ್ಕಾರಕ್ಕೆ 554 ಎಕರೆ ಭೂಮಿ ಕುರಿತು ಮಹತ್ವದ ಮನವಿ
ಬೆಂಗಳೂರು: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. Nice ಸಂಸ್ಥೆಯ ವಿರುದ್ಧ ಕಾನೂನು ಉಲ್ಲಂಘನೆ, ಹೆಚ್ಚುವರಿ ಭೂಮಿ ಬಳಕೆ ಹಾಗೂ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಗಳನ್ನು ಮಾಡಿರುವ JDS, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ಬಾಬು ನೇತೃತ್ವದ ನಿಯೋಗವು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ನೈಸ್ ಸಂಸ್ಥೆಯು ಯೋಜನೆಗೆ ಸಂಬಂಧಿಸಿದ ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಹಿಂದಿನ ಅಭಿಪ್ರಾಯಗಳನ್ನೂ ನಿಯೋಗ ಸರ್ಕಾರದ ಗಮನಕ್ಕೆ ತಂದಿದೆ.
ನೈಸ್ ಸಂಸ್ಥೆ ಸಂಗ್ರಹಿಸುತ್ತಿರುವ ಟೋಲ್ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್, ಅನಧಿಕೃತ ಟೋಲ್ ಸಂಗ್ರಹವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಒದಗಿಸಲಾಗಿದೆ ಎನ್ನಲಾದ 554 ಎಕರೆ ಜಮೀನು ಹಾಗೂ ಕೆರೆ-ಕಟ್ಟೆಗಳನ್ನು ಸರ್ಕಾರ ಕೂಡಲೇ ತನ್ನ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದೆ.
ಯೋಜನೆಯಲ್ಲಿ ನಡೆದಿರುವ ಆರ್ಥಿಕ ವ್ಯವಹಾರಗಳು ಮತ್ತು ಅಕ್ರಮಗಳನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡ ರಚಿಸಬೇಕು. ಸಂಸ್ಥೆಯ ಆರ್ಥಿಕ ವ್ಯವಹಾರಗಳ ಕುರಿತು ಸಮಗ್ರ ಲೆಕ್ಕಪರಿಶೋಧನೆ ನಡೆಸಬೇಕು. ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯನ್ನು ಸರ್ಕಾರದ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಹೊಸ ಕಾನೂನು ರೂಪಿಸಬೇಕು ಎಂಬುದು ಜೆಡಿಎಸ್ನ ಪ್ರಮುಖ ಬೇಡಿಕೆಗಳಾಗಿವೆ.
ಕುಮಾರಸ್ವಾಮಿ ಆರೋಪಕ್ಕೆ ಮತ್ತಷ್ಟು ಕಾವು
ಈ ನಡುವೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ನೈಸ್ ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನೈಸ್ ಯೋಜನೆ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನು ಕಬಳಿಸುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ನೈಸ್ ಅಕ್ರಮಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪವನ್ನೂ ಕುಮಾರಸ್ವಾಮಿ ಮಾಡಿದ್ದಾರೆ. ಬೇನಾಮಿ ಸಂಸ್ಥೆಗಳ ಮೂಲಕ ನೈಸ್ ಕಂಪನಿಯನ್ನು ಖರೀದಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವನ್ನು ಮಾಡಿರುವ ಅವರು, ಮುಂದಿನ ದಿನಗಳಲ್ಲಿ ದಾಖಲೆಗಳೊಂದಿಗೆ ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಜೆಡಿಎಸ್ ಮಾಡಿರುವ ಆರೋಪಗಳು ಮತ್ತು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ನೈಸ್ ಯೋಜನೆಗೆ ಸಂಬಂಧಿಸಿದ ಭೂಮಿ, ಟೋಲ್ ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
-
ಬೆಂಗಳೂರು17 ಗಂಟೆಗಳು agoKannada Sahitya Parishat ನ ಗೌರವ ದತ್ತಿ ಪ್ರಶಸ್ತಿ ಪ್ರಕಟ: 2025, 2026ನೇ ಸಾಲಿನ ಪುರಸ್ಕೃತರು ಇವರೇ!
-
ಬೆಂಗಳೂರು24 ಗಂಟೆಗಳು agoB Nagendra ವಿರುದ್ಧ ಬಿಜೆಪಿ-ಜೆಡಿಎಸ್ ದೂರು: ರಾಜ್ಯಪಾಲರಿಗೆ ಮನವಿ ಸಲ್ಲಿಕೆ
-
ದೇಶ22 ಗಂಟೆಗಳು agoIran ಮೇಲೆ America ದ ಹೊಸ ನಿರ್ಬಂಧ! ಭಾರತದ ಅಕ್ಕಿ, ಚಹಾ, ಔಷಧ ರಫ್ತಿಗೆ ಎದುರಾಯ್ತಾ ದೊಡ್ಡ ಹೊಡೆತ?
-
ದೇಶ21 ಗಂಟೆಗಳು agoChina Robot Revolution ರೋಬೋಟ್ ಗಳಿಗೆ ತರಬೇತಿ, ಯುವಕರಿಗೆ ಹೊಸ ಪಾಠ! ಚೀನಾ ಭವಿಷ್ಯದ ಉದ್ಯೋಗಕ್ಕಾಗಿ ಮಾಡುತ್ತಿರುವುದೇನು?
-
ಬೆಂಗಳೂರು23 ಗಂಟೆಗಳು agoUrvashi ಚಿತ್ರಮಂದಿರ ನೆಲಸಮಕ್ಕೆ ದಿಢೀರ್ ಬ್ರೇಕ್! Karnataka High Court ಆದೇಶದ ಹಿಂದಿರುವ ಕಾರಣವೇನು?
-
ಬೆಂಗಳೂರು23 ಗಂಟೆಗಳು agoSignal ನಲ್ಲಿ ನಿಂತಿದ್ದ ಬೈಕ್ ಸವಾರನಿಗೆ ಹಿಂಬದಿಯಿಂದ ಕಾರು ಡಿಕ್ಕಿ! 50 ಅಡಿ ದೂರಕ್ಕೆ ಹಾರಿ ಯುವಕ ಸಾವು
-
ದೇಶ24 ಗಂಟೆಗಳು agoCentre Government ವಿರುದ್ಧ ಮತ್ತೆ ಸಿಡಿದೆದ್ದ CJP! ಸೆ.5ರಂದು ನಡೆಯಲಿದೆ ಬೃಹತ್ ಪ್ರತಿಭಟನಾ ಮೆರವಣಿಗೆ
-
ಅಪರಾಧ17 ಗಂಟೆಗಳು agoRenukaswamy Murder Case ನಲ್ಲಿ ಮಹತ್ವದ ಬೆಳವಣಿಗೆ: ಮಾಫಿ ಸಾಕ್ಷಿಯಾದ ಪ್ರದೋಷ್, ಮುಂದೆ ಏನಾಗಲಿದೆ?
