Connect with us

ಬೆಂಗಳೂರು

ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ: ಹೆಚ್‌ಡಿಕೆ ಕರೆ

Published

on

ಬೆಂಗಳೂರು: ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಕರೆ ನೀಡಿದರು.

ಕಿಯೋನಿಕ್ಸ್ ವೆಂಡರ್ಸ್ಗಳಿಂದ ದಯಾ ಮರಣಕ್ಕೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ, ಸರ್ಕಾರದ ವಿರುದ್ಧ ಕಿಡಿಕಾರಿದರು. ನಾನು 60% ಕಮಿಷನ್ ಆರೋಪ ಮಾಡಿದಾಗ ಸರ್ಕಾರ, ಸಿಎಂ, ದಾಖಲೆ ಕೊಡಿ ಅಂತ ಹೇಳಿದ್ರು. ಹಂಗಾಮಿ ಕಂಟ್ರ್ಯಾಕ್ಟರ್‌ ಅಸೋಸಿಯೇಷನ್ ಅಧ್ಯಕ್ಷರು ಏನ್ ಹೇಳಿದ್ದಾರೆ. ಪರ್ಸೆಂಟೇಜ್ ಎಷ್ಟು ಇದೆ ಅಂತ ಅವರೇ ಹೇಳಿದ್ದಾರೆ. ಇದಕ್ಕಿಂತ ದಾಖಲಾತಿ ಸಾಕ್ಷಿ ಬೇಕಾ ಸಿಎಂಗೆ ಎಂದು ತಿರುಗೇಟು ನೀಡಿದರು.

ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡಗೆ ಹೇಳ್ತೀನಿ. ತಪ್ಪು ಮಾಡಿದವರ ಮೇಲೆ ಆಕ್ಷನ್ ತಗೊಳ್ಳಿ. 18 ತಿಂಗಳಲ್ಲಿ ಮಾಡಿದ ಕೆಲಸಕ್ಕೆ ಪೇಮೆಂಟ್ ಕೊಡದೇ ಹೋದರೆ ಅವರ ಬದುಕು ಏನಾಗಬೇಕು? ತಪ್ಪು ಮಾಡಿದವನಿಗೆ ಏನ್ ಬೇಕೋ ಕ್ರಮ ಮಾಡಿ. ಜನಪ್ರತಿನಿಧಿಗಳ ಅಕ್ರಮ ಮಾಡಿದ್ರೆ ಅವರ ಮೇಲೆ ಆಕ್ಷನ್ ತಗೊಳ್ಳಿ. ತನಿಖೆ ನಡೆ ವಾಸ್ತವಾಂಶ ಹೊರಗೆ ತೆಗೆಯೋಕೆ ಎಷ್ಟು ತಿಂಗಳು ಬೇಕು? ವರ್ಷಗಳೇ ಬೇಕಾ? ಕಿಯೋನಿಕ್ಸ್ ವೆಂಡರ್ಸ್ಗಳಿಗೆ ಹಣ ಬಿಡುಗಡೆಗೆ ಆಗ್ರಹಿಸಿದರು.

ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ. ಈ ಸರ್ಕಾರದಲ್ಲಿ ಸಾರ್ವಜನಿಕರ ಹಣ ಲೂಟಿ ಆಗ್ತಿದೆ. ಗುತ್ತಿಗೆದಾರರಿಗೆ ಮನವಿ ಮಾಡ್ತೀನಿ. ಗುತ್ತಿಗೆದಾರರು ಈ ರಾಜ್ಯ ಉಳಿಸಬೇಕು ಅಂತ ಇದ್ದರೆ, ಗುತ್ತಿಗೆದಾರರಲ್ಲಿ ಒಗ್ಗಟ್ಟು ಇದ್ದರೆ ಒಂದು ವರ್ಷ ಗುತ್ತಿಗೆದಾರರು ಯಾರು ಕೆಲಸ ಮಾಡಬೇಡಿ. ಈ ಸರ್ಕಾರದವರು ಅಂಧ್ರದವರನ್ನೋ ಯಾರನ್ನ ಕರೆದುಕೊಂಡು ಮಾಡಿಸಿಕೊಂಡು ಬರ್ತಾರೋ, ಪ್ಯಾಕೇಜ್ ಕೊಟ್ಟು ಮಾಡಿಸ್ತಾರೋ ನೋಡೋಣ. ಬರಲಿ ಯಾರು ಬಂದು ಮಾಡ್ತಾರೋ ಮಾಡಲಿ. ರಾಜ್ಯದಲ್ಲಿ ಕೆಟ್ಟ ಆಡಳಿತ ನಡೆಯುತ್ತಿದೆ. ಗುತ್ತಿಗೆದಾರರಿಗೆ ಕೈ ಜೋಡಿಸಿ ಮನವಿ ಮಾಡ್ತೀನಿ. ನೀವು ನಿಮ್ಮಲ್ಲಿ ಗುಂಪು ಮಾಡಿಕೊಂಡು, ನಿಮ್ಮಲ್ಲಿ ಒಡಕು ಬಂದರೆ ನಿಮ್ಮನ್ನೆ ಉಪಯೋಗ ಮಾಡಿಕೊಳ್ತಾರೆ. ನೀವು ಕಷ್ಟ ಅನುಭವಿಸುತ್ತಿದ್ದೀರಾ. ಇದೆಲ್ಲ ಕ್ಲೀನ್ ಆಗಬೇಕಾದ್ರೆ ಒಂದು ವರ್ಷ ಯಾರು ಗುತ್ತಿಗೆ ತೆಗೆದುಕೊಳ್ಳಬೇಡಿ. ಯಾರು ಕೆಲಸ ಮಾಡಬೇಡಿ ನಿಲ್ಲಿಸಿಬಿಡಿ. ಹೇಗೂ ಹೊಸ ಕೆಲಸ ಸರ್ಕಾರ ಕೊಡ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಮಾಡಿರೋ ಕೆಲಸಕ್ಕೆ ಕೇಳ್ತಿರೋದು. ಹೀಗಾಗಿ ಹಣ ಬರೋವರೆಗೂ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದು ಸಲಹೆ ನೀಡಿದರು.

ದಯಾ ಮರಣಕ್ಕೆ ಯಾಕೆ ಅರ್ಜಿ ಹಾಕ್ತೀರಾ? ಯಾಕೆ ಆತ್ಮಹತ್ಯೆ ಮಾಡಿಕೊಳ್ತೀರಾ. ನೀವು ತಪ್ಪು ಮಾಡಿದ್ದೀರಾ? ತಪ್ಪು ಮಾಡಿರೋದು ಈ ಸರ್ಕಾರ. ಅದರ ವಿರುದ್ಧ ಹೋರಾಟ ಮಾಡಿ. ದೃಢ ನಿರ್ಧಾರ ಮಾಡಿ ಹೋರಾಟ ಮಾಡಿ. ನೀವೇನು ಭಿಕ್ಷುಕರಲ್ಲ. ಕೆಲಸ ಮಾಡಿದ್ದೀರಾ ಹಣ ಕೇಳ್ತಿದ್ದೀರಾ. ಅದಕ್ಕೆ ಯಾಕೆ ದಯಾ ಮರಣ ಕೇಳ್ತೀರಾ. ಪ್ರಾಮಾಣಿಕವಾಗಿ ಕೆಲಸ ಮಾಡಿ ಯಾಕೆ ದಯಾ ಮರಣ ಕೇಳ್ತೀರಾ. ಪ್ರಾಮಾಣಿಕವಾಗಿ ಕೆಲಸ ಮಾಡದೆ ಬಿಲ್ ಮಾಡಿ ಹಣ ಹೊಡೆದಿರೋರು ಇದ್ದಾರೆ. ಅಧಿಕಾರಿಗಳು, ದೊಡ್ಡ ದೊಡ್ಡ ಗುತ್ತಿಗೆದಾರರು ಕೆಲಸವೇ ಮಾಡದೇ ಹಣ ಮಾಡಿರೋದು ಇದ್ದಾರೆ. ನೀವು ಕೆಲಸ ಮಾಡಿದ್ದೀರಾ. ಯಾಕೆ ಆತ್ಮಹತ್ಯೆ ಮಾಡಿಕೊಳ್ತೀರಾ ಎಂದು ಪ್ರಶ್ನಿಸಿದರು.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜ್ಯ

CM D K Shiv Kumar ಮತ್ತೆ ದೆಹಲಿಗೆ; ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಜೊತೆ ಮಹತ್ವದ ಚರ್ಚೆ

Published

on

ಬೆಂಗಳೂರು: CM D K Shiv Kumar ಅವರು ಗುರುವಾರವಷ್ಟೇ ದೆಹಲಿಗೆ ತೆರಳಿ ಬೆಂಗಳೂರಿಗೆ ವಾಪಸಾಗಿದ್ದರೂ, ಇದೀಗ ಮತ್ತೆ ಭಾನುವಾರ ದೆಹಲಿಗೆ ತೆರಳಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾಗಿರುವ ಸಚಿವ ಸ್ಥಾನ ಸೇರಿದಂತೆ ಸಂಪುಟಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ನಾಯಕರೊಂದಿಗೆ ಚರ್ಚೆ ನಡೆಸಲು ಅವರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಡಿ.ಕೆ. ಶಿವಕುಮಾರ್‌ ಅವರು ಭಾನುವಾರ ತಡರಾತ್ರಿ ಹೈಕಮಾಂಡ್‌ ನಾಯಕರೊಂದಿಗೆ ಮಾತುಕತೆ ನಡೆಸಿ, ಸೋಮವಾರ ಬೆಳಗ್ಗೆ ಬೆಂಗಳೂರಿಗೆ ವಾಪಸಾಗುವ ಸಾಧ್ಯತೆ ಇದೆ.

ಅನ್ನಪೂರ್ಣ ತುಕಾರಾಂಗೆ ಸಚಿವ ಸ್ಥಾನ?

ನಾಗೇಂದ್ರ ಅವರಿಂದ ತೆರವಾಗಿರುವ ಸಚಿವ ಸ್ಥಾನವನ್ನು ಅದೇ ಜಿಲ್ಲೆಯ ಹಾಗೂ ಅದೇ ಸಮುದಾಯಕ್ಕೆ ಸೇರಿದ ಅನ್ನಪೂರ್ಣ ತುಕಾರಾಂ ಅವರಿಗೆ ನೀಡುವ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಈ ಹಿಂದೆ ಕೂಡ ಅನ್ನಪೂರ್ಣ ಅವರ ಹೆಸರು ಸಚಿವ ಸ್ಥಾನಕ್ಕೆ ಕೇಳಿಬಂದಿದ್ದು, ಇದೀಗ ಡಿ.ಕೆ. ಶಿವಕುಮಾರ್‌ ಅವರ ದೆಹಲಿ ಭೇಟಿಯ ಹಿನ್ನೆಲೆಯಲ್ಲಿ ಈ ಚರ್ಚೆ ಮತ್ತಷ್ಟು ಬಲಗೊಂಡಿದೆ.

ಆದರೆ ಮತ್ತೊಂದು ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎನ್ನಲಾಗುತ್ತಿದೆ. ಈ ಸ್ಥಾನಕ್ಕಾಗಿ ಹಲವು ಹಿರಿಯ ಶಾಸಕರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ವಲಯದ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಆಪ್ತರಿಗೆ ಸ್ಥಾನ ನೀಡಲು ಒತ್ತಡ?

ಎರಡನೇ ಸಚಿವ ಸ್ಥಾನಕ್ಕೆ ತಮ್ಮ ಆಪ್ತ ಬಸವರಾಜ್ ಶಿವಣ್ಣನವರ್ ಅವರ ಹೆಸರನ್ನು ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಿವಣ್ಣನವರ್ ಅವರ ಹೆಸರನ್ನು ಪರಿಗಣಿಸಿರಲಿಲ್ಲ. ಇದರಿಂದ ಅವರು ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿವೆ. ಹೀಗಾಗಿ ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಕಾನೂನು ತಜ್ಞರೊಂದಿಗೆ ಡಿಕೆಶಿ ಸಭೆ

ದೆಹಲಿಗೆ ತೆರಳಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೇವಲ ಪಕ್ಷದ ರಾಜಕೀಯ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ನಡೆಸುತ್ತಿಲ್ಲ ಎನ್ನಲಾಗಿದೆ. ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುವ ಮುನ್ನ ಅವರು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿರುವ ರಾಜ್ಯದ ವಿವಿಧ ಪ್ರಕರಣಗಳ ಕುರಿತು ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ್ದಾರೆ.

ಕರ್ನಾಟಕಕ್ಕೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಗಳ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಡಿ.ಕೆ. ಶಿವಕುಮಾರ್‌ ಅವರ ದಿಢೀರ್‌ ದೆಹಲಿ ಪ್ರವಾಸವು ಇದೀಗ ರಾಜ್ಯ ರಾಜಕಾರಣದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾಗೇಂದ್ರ ಅವರಿಂದ ತೆರವಾಗಿರುವ ಸ್ಥಾನಕ್ಕೆ ಅನ್ನಪೂರ್ಣ ತುಕಾರಾಂ ಅವರೇ ಆಯ್ಕೆಯಾಗಲಿದ್ದಾರೆಯೇ ಅಥವಾ ಕಾಂಗ್ರೆಸ್‌ ಹೈಕಮಾಂಡ್‌ ಬೇರೆ ಅಭ್ಯರ್ಥಿಗೆ ಅವಕಾಶ ನೀಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

Continue Reading

ಬೆಂಗಳೂರು

Bengaluru Traffic Rules: ಸೆ.4ರಿಂದ ಫ್ಲೈಓವರ್‌ಗಳಲ್ಲಿ ವಾಹನಗಳ ಸಂಚಾರಕ್ಕೆ ಹೊಸ ನಿಯಮ

Published

on

ಬೆಂಗಳೂರು: ರಾಜಧಾನಿ Bengaluru ರಿನ ಪ್ರಮುಖ ಫ್ಲೈಓವರ್‌ಗಳು ಹಾಗೂ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸಂಚಾರ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ನಗರದ ವಿವಿಧ ಫ್ಲೈಓವರ್‌ಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸೆಪ್ಟೆಂಬರ್ 4ರಿಂದ ಹಲವು ಕಡೆಗಳಲ್ಲಿ ನಿಯಮಗಳು ಜಾರಿಗೆ ಬರಲಿವೆ.

ರಸ್ತೆ ಸುರಕ್ಷತೆ ಹೆಚ್ಚಿಸುವುದು, ಸಂಚಾರ ದಟ್ಟಣೆ ನಿಯಂತ್ರಿಸುವುದು ಹಾಗೂ ಗಂಭೀರ ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಿಜಿಎಸ್ ಫ್ಲೈಓವರ್‌ನಲ್ಲಿ ಭಾರಿ ವಾಹನಗಳಿಗೆ ನಿಷೇಧ

ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ 24 ಗಂಟೆಯೂ ನಿರ್ಬಂಧ ಇರಲಿದೆ. ಇತರೆ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

ಪೀಣ್ಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಆಟೋಗಳಿಗೆ ನೋ ಎಂಟ್ರಿ

ಪೀಣ್ಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಆಟೋ ರಿಕ್ಷಾಗಳು ಮತ್ತು ತ್ರಿಚಕ್ರದ ಗೂಡ್ಸ್ ಆಟೋಗಳಿಗೆ 24 ಗಂಟೆಯೂ ಸಂಚಾರ ನಿಷೇಧಿಸಲಾಗಿದೆ. ಭಾರಿ ಹಾಗೂ ಮಧ್ಯಮ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 10ರವರೆಗೆ ನಿರ್ಬಂಧ ವಿಧಿಸಲಾಗಿದೆ.

ಡಬಲ್ ಡೆಕ್ಕರ್ ಫ್ಲೈಓವರ್‌ಗೂ ಹೊಸ ನಿಯಮ

ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡವರೆಗೆ ಇರುವ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಲಾಗಿದೆ.

ಇದೇ ವೇಳೆ, ಸಂಜೀವನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗೆ ಇರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳಿಗೆ 24 ಗಂಟೆಯೂ ಪ್ರವೇಶ ನಿರ್ಬಂಧಿಸಲಾಗಿದೆ. ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಸಂಚಾರ ನಿರ್ಬಂಧವಿರಲಿದೆ.

ಎಲೆಕ್ಟ್ರಾನಿಕ್ ಸಿಟಿ ಕಾರಿಡಾರ್‌ನಲ್ಲೂ ನಿರ್ಬಂಧ

ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲಿ ದ್ವಿಚಕ್ರ ವಾಹನಗಳು, ಪ್ರಯಾಣಿಕರ ಆಟೋ ಹಾಗೂ ಗೂಡ್ಸ್ ಆಟೋಗಳಿಗೆ 24 ಗಂಟೆಯೂ ಸಂಚಾರ ನಿಷೇಧಿಸಲಾಗಿದೆ. ಎಲ್ಲಾ ಮಾದರಿಯ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿರ್ಬಂಧ ವಿಧಿಸಲಾಗಿದೆ.

ಯಾವ ದಿನದಿಂದ ನಿಯಮ ಜಾರಿ?

ಬಿಜಿಎಸ್ ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್ ಫ್ಲೈಓವರ್ ಮತ್ತು ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸೆಪ್ಟೆಂಬರ್ 4ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸೆಪ್ಟೆಂಬರ್ 11ರಿಂದ ನಿಯಮ ಅನ್ವಯವಾಗಲಿದೆ.

ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಜಾರಿಗೊಳಿಸಲಾಗುತ್ತಿರುವ ಹೊಸ ನಿಯಮಗಳಿಗೆ ವಾಹನ ಸವಾರರು ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಮನವಿ ಮಾಡಿದೆ.

.

Continue Reading

ಬೆಂಗಳೂರು

ಕ್ರಿಕೆಟ್ ದಿಗ್ಗಜನಾದರೂ ಇಷ್ಟೊಂದು ಸಿಂಪಲ್! Metro ದಲ್ಲಿ Javagal Srinath

Published

on

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್ ಹಾಗೂ ಕರ್ನಾಟಕದ ಕ್ರಿಕೆಟ್‌ ದಿಗ್ಗಜ Javagal Srinath ಅವರ ಸರಳತೆ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದೆ. ಬೆಂಗಳೂರಿನ ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟ್ರಾಲಿ ಬ್ಯಾಗ್ ಹಿಡಿದು ಪ್ರಯಾಣಿಸುತ್ತಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

1990ರ ದಶಕದಲ್ಲಿ ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸವಾಲಾಗಿದ್ದ ಜಾವಗಲ್ ಶ್ರೀನಾಥ್, ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕವೂ ಕ್ರಿಕೆಟ್‌ ಜಗತ್ತಿನೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿದ್ದಾರೆ. ಅವರು ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಶ್ರೀನಾಥ್

ವೈರಲ್ ಆಗಿರುವ ಫೋಟೋದಲ್ಲಿ ಜಾವಗಲ್ ಶ್ರೀನಾಥ್ ಅವರು ನೀಲಿ ಜೀನ್ಸ್ ಮತ್ತು ಆಕಾಶ ನೀಲಿ ಬಣ್ಣದ ಶರ್ಟ್ ಧರಿಸಿ, ತಮ್ಮ ಟ್ರಾಲಿ ಬ್ಯಾಗ್‌ನೊಂದಿಗೆ ಮೆಟ್ರೋದಲ್ಲಿ ನಿಂತಿರುವುದು ಕಂಡುಬಂದಿದೆ. ದೊಡ್ಡ ಕ್ರಿಕೆಟ್‌ ತಾರೆಯಾಗಿದ್ದರೂ ಯಾವುದೇ ಆಡಂಬರವಿಲ್ಲದೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಹಲವರು ಶ್ರೀನಾಥ್ ಅವರ ಸರಳ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಬೆಂಗಳೂರಿನಲ್ಲಿ ಅವರನ್ನು ಹಲವು ಬಾರಿ ಸಾಮಾನ್ಯ ವ್ಯಕ್ತಿಯಂತೆ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿದ್ದೇವೆ ಎಂದು ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದ ಕ್ರಿಕೆಟಿಗರ ಸರಳತೆಗೆ ಮೆಚ್ಚುಗೆ

ಜಾವಗಲ್ ಶ್ರೀನಾಥ್ ಅವರ ಈ ನಡೆ ಕರ್ನಾಟಕದ ಹಲವು ಕ್ರಿಕೆಟಿಗರ ಸರಳತೆಯನ್ನು ಅಭಿಮಾನಿಗಳಿಗೆ ನೆನಪಿಸಿದೆ. ರಾಹುಲ್ ದ್ರಾವಿಡ್ ಮತ್ತು ವೆಂಕಟೇಶ್ ಪ್ರಸಾದ್ ಅವರೂ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಆಡಂಬರವಿಲ್ಲದೆ ಕಾಣಿಸಿಕೊಳ್ಳುತ್ತಾರೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶ್ರೀನಾಥ್ ಅವರ ಸರಳತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮೈಸೂರಿನ ರೈಲು ನಿಲ್ದಾಣದಲ್ಲಿ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ರೈಲಿಗಾಗಿ ಕಾಯುತ್ತಿದ್ದ ಅವರ ಫೋಟೋ ಕೂಡ ವೈರಲ್ ಆಗಿತ್ತು. ಆಗಲೂ ಅಭಿಮಾನಿಗಳು ಅವರ ಸರಳ ಜೀವನಶೈಲಿಯನ್ನು ಮೆಚ್ಚಿಕೊಂಡಿದ್ದರು.

67 ಟೆಸ್ಟ್, 229 ಏಕದಿನ ಪಂದ್ಯ

ಜಾವಗಲ್ ಶ್ರೀನಾಥ್ ಭಾರತ ಪರ 67 ಟೆಸ್ಟ್ ಪಂದ್ಯಗಳು ಮತ್ತು 229 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ವೇಗದ ಬೌಲರ್ ಆಗಿ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಅವರು, ತಮ್ಮ ಕ್ರಿಕೆಟ್ ವೃತ್ತಿಜೀವನದ ಬಳಿಕ ಐಸಿಸಿ ಮ್ಯಾಚ್ ರೆಫರಿಯಾಗಿ ಹೊಸ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಇದೀಗ ಬೆಂಗಳೂರಿನ ಮೆಟ್ರೋದಲ್ಲಿನ ಅವರ ಫೋಟೋ ವೈರಲ್ ಆಗಿದ್ದು, ಪ್ರಸಿದ್ಧಿ ಮತ್ತು ಹುದ್ದೆಗಿಂತ ಸರಳತೆ ಹಾಗೂ ವಿನಯವೇ ವ್ಯಕ್ತಿಯ ನಿಜವಾದ ಗುಣವನ್ನು ತೋರಿಸುತ್ತದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Continue Reading

Trending