ದೇಶ
ಡ್ಯಾಂಡ್ರಫ್ ಜಾಹೀರಾತಿನಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರುಷ್ಕಾ! – ಇಬ್ಬರ ಲವ್ ಸ್ಟೋರಿಯನ್ನು ನೀವು ಓದಲೇಬೇಕು
ಇಂದು ಪ್ರೇಮಿಗಳ ದಿನಾಚರಣೆ. ಈ ದಿನಾಚರಣೆಯಂದು (Valentine’s Day) ಹಲವರು ಪ್ರೇಮ ಕಥೆಗಳನ್ನು ನೀವು ಓದಿರಬಹುದು. ಈ ಪಟ್ಟಿಗೆ ನೀವು ಓದಲೇಬೇಕಾದ ಮತ್ತು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾದ ಪ್ರೇಮ ಕಥೆ ಯಾವುದು ಎಂದರೆ ವಿರಾಟ್ ಕೊಹ್ಲಿ (Virat kohli) ಮತ್ತು ಅನುಷ್ಕಾ (Anushka Sharma) ಲವ್ ಸ್ಟೋರಿ. ಸೆಲೆಬ್ರಿಟಿಗಳು ಲವ್ (Love) ಮಾಡಿ ನಂತರ ಬ್ರೇಕಪ್ ಆಗುವುದು ಇಂದು ಹೊಸದೆನಲ್ಲ. ಆದರೆ ವಿರಷ್ಕಾ ಜೋಡಿ ಪ್ರೀತಿ ಮಾಡಿ ಮದುವೆಯಾಗುವುದರ ಜೊತೆ ಈಗಲೂ ಅನ್ಯೋನ್ಯವಾಗಿದ್ದಾರೆ. ಈ ಮೂಲಕ ನಿಜವಾದ ಪ್ರೇಮಿಗಳಿಗೆ ಆದರ್ಶವಾಗಿದ್ದಾರೆ.
ವಿರಾಟ್ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರು ಸೆಲೆಬ್ರಿಟಿಗಳು. ಈ ಇಬ್ಬರು ಸ್ಟಾರ್ಗಳು ಮೊದಲು ಭೇಟಿಯಾಗಿದ್ದು ಡ್ಯಾಂಡ್ರಫ್ ಜಾಹೀರಾತಿನಲ್ಲಿ. 2013ರಲ್ಲಿ ಟಿವಿ ಜಾಹೀರಾತಿನಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಆರ್ಸಿಬಿ ತಂಡದ ನಾಯಕನಾಗಿದ್ದರೆ ಅನುಷ್ಕಾ ಬಾಲಿವುಡ್ ಬೇಡಿಕೆಯ ನಟಿಯಾಗಿದ್ದರು.
ಜಾಹೀರಾತಿನಲ್ಲಿ ಇಬ್ಬರ ನಟನೆಯ ಕೆಮಿಸ್ಟ್ರಿ ವರ್ಕ್ ಆಯಿತು. ಪರಸ್ಪರ ಫೋನ್ ನಂಬರ್ ಬದಲಾವಣೆ ಆಯಿತು. ಆರಂಭದಲ್ಲಿ ಇಬ್ಬರು ಕದ್ದು ಮುಚ್ಚಿ ಡೇಟ್ ಮಾಡಲು ಆರಂಭಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಟೀಂ ಇಂಡಿಯಾದ (Team India) ಸ್ಟಾರ್ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದರು. ಪರಿಣಾಮ ಕದ್ದು ಮುಚ್ಚಿ ಸಾರ್ವಜನಿಕ ಸ್ಥಳಗಳಲ್ಲಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೋದರೂ ಜನರು ಗುರುತು ಹಿಡಿಯುತ್ತಿದ್ದರು ಜೊತೆಗೆ ಮಾಧ್ಯಮಗಳ ಕ್ಯಾಮೆರಾದ ಕಣ್ಣು ಇವರನ್ನು ಸೆರೆ ಹಿಡಿಯುತ್ತಿದ್ದವು. ಇಬ್ಬರ ಬಗ್ಗೆ ಅಂತೆ ಕಂತೆ ಸುದ್ದಿಗಳು ಪ್ರಕಟವಾಗುತ್ತಿದ್ದಂತೆ ಕೊಹ್ಲಿ ಮತ್ತು ಅನುಷ್ಕಾ ಸಾರ್ವಜನಿಕವಾಗಿಯೇ ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದರು.
2014ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಮುಂಬೈಗೆ ಲ್ಯಾಂಡ್ ಆದ ಕೊಹ್ಲಿ ತಮ್ಮ ನಿವಾಸಕ್ಕೆ ಹೋಗಿರಲಿಲ್ಲ. ಮೊದಲು ಹೋಗಿದ್ದು ಪ್ರಿಯತಮೆ ಅನುಷ್ಕಾ ಮನೆಗೆ. ಆ ವರ್ಷವೇ ನ್ಯೂಜಿಲೆಂಡ್ ಪ್ರವಾಸದ ಬಳಿಕ ವಿರಾಟ್ ಮನೆಗೂ ಅನುಷ್ಕಾ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದರು. ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರೂ ಹೆಚ್ಚು ಸುದ್ದಿಯಾಗಿದ್ದು 2014-15 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ. ಧೋನಿ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ನಿರ್ಧಾರ ತೆಗೆದುಕೊಂಡಾಗ ಕೊಹ್ಲಿಗೆ ನಾಯಕತ್ವ ಪಟ್ಟ ಸಿಕ್ಕಿತು. ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಗ್ಯಾಲರಿಯಲ್ಲಿ ಕುಳಿತು ವಿರಾಟ್ ಹುರಿದುಂಬಿಸುತ್ತಿದ್ದರು. ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ಶತಕ ಬಾರಿಸಿದ ಬಳಿಕ ವಿರಾಟ್ ಬ್ಯಾಟ್ ಮೂಲಕ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಸಹ ನೀಡಿದ್ದರು.
ಇಬ್ಬರು ಪ್ರೇಮಿಗಳ ಬಗ್ಗೆ ಅಂದಿನ ಟೀಂ ಇಂಡಿಯಾದ ಕೋಚ್ ಆಗಿದ್ದ ರವಿಶಾಸ್ತ್ರಿ ಮಾಧ್ಯಮದ ಬಳಿಯೂ ಹಂಚಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು. ಈ ವೇಳೆ ಅವರು ನನ್ನ ಬಳಿ ಬಂದು ಪ್ರವಾಸದ ಸಂದರ್ಭದಲ್ಲಿ ಪತ್ನಿಯರನ್ನು ಮಾತ್ರ ಕರೆದುಕೊಂಡು ಬರಲು ಬಿಸಿಸಿಐ ನುಮತಿ ನೀಡುತ್ತದೆ. ಆದರೆ ನಾನು ನನ್ನ ಗೆಳತಿಯನ್ನು ಕರೆದುಕೊಂಡು ಬರಬಹುದೇ ಎಂದು ಕೇಳಿದ್ದರು. ಕೊಹ್ಲಿಯಿಂದ ಈ ಪ್ರಸ್ತಾಪ ಬರುತ್ತಿದ್ದಂತೆ ನಾನು ಬಿಸಿಸಿಐ ಜೊತೆ ಕರೆ ಮಾಡಿ ಅನುಷ್ಕಾಗೆ ಬರಲು ಅನುಮತಿ ನೀಡಿದ್ದೆ ಎಂದು ತಿಳಿಸಿದ್ದರು.
ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಡಿಯನ್ ಹೈ ಕಮಿಷನ್ಗೆ ಭೇಟಿ ನೀಡಿದಾಗಲೂ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ನಂತರ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲೂ ಫ್ಲೈಯಿಂಗ್ ಕಿಸ್ ನೀಡಿ ಅನುಷ್ಕಾಗೆ ಸರ್ಪ್ರೈಸ್ ನೀಡಿದ್ದರು. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಮೆಂಟ್ನಲ್ಲಿ ಎಫ್ಸಿ ಗೋವಾ ತಂಡದ ಮಾಲೀಕರಾಗಿದ್ದ ಕೊಹ್ಲಿ ಅವರು ಅನುಷ್ಕಾ ಜೊತೆಗೂಡಿ ತಂಡವನ್ನು ಹುರಿದುಂಬಿಸುತ್ತಿದ್ದರು. ಆರ್ಸಿಬಿ ಪಂದ್ಯಗಳಲ್ಲಿ ಭಾಗವಹಿಸಿ ಕೊಹ್ಲಿಗೆ ಅನುಷ್ಕಾ ಚಿಯರ್ ಮಾಡುತ್ತಿದ್ದರು. ಆದರಲ್ಲೂ ಕೊಹ್ಲಿ ಬೇಗನೇ ಔಟಾದರೆ ಅನುಷ್ಕಾ ಬಹಳ ಬೇಜಾರ್ ಆಗುತ್ತಿದ್ದರು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗುತ್ತಿತ್ತು.
ಯುವರಾಜ್ ಸಿಂಗ್ ಹಾಗೂ ಮಾಜಿ ವೇಗಿ ಜಹೀರ್ ಖಾನ್ ವಿವಾಹ ಸಮಾರಂಭದಲ್ಲೂ ಇಬ್ಬರು ಜೊತೆಯಾಗಿ ಡ್ಯಾನ್ಸ್ ಮಾಡಿ ರಂಜಿಸಿದ್ದರು. 2015 ಮತ್ತು 2016 ರಲ್ಲಿ ಕೊಹ್ಲಿ ಆಟ ಮಂಕಾಗಿತ್ತು. ಕೊಹ್ಲಿ ಕಳಪೆ ಆಟಕ್ಕೆ ಅನುಷ್ಕಾನೇ ಕಾರಣ ಎಂದು ಕ್ರಿಕೆಟ್ ಅಭಿಮಾನಿಗಳು ಟೀಕಿಸಲು ಆರಂಭಿಸಿದ್ದರು. ಪದೇ ಗ್ಯಾಲರಿಯಲ್ಲಿ ಅನುಷ್ಕಾ ಕಾಣಿಸಿಕೊಳ್ಳುತ್ತಿರುವುದರಿಂದ ವಿರಾಟ್ ಕೆಟ್ಟ ಪ್ರದರ್ಶನ ನೀಡುತ್ತಿದ್ದಾರೆ ಎಂಬ ಮಾತುಗಳು ಬರತೊಡಗಿತು. ಜೊತೆ ಅನುಷ್ಕಾ ಶರ್ಮಾ ಅವರ ಪೇಜ್ನಲ್ಲೂ ಕೆಟ್ಟ ಕೆಟ್ಟ ಕಮೆಂಟ್ಗಳು ಬರತೊಡಗಿತು. ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ವಿರುದ್ಧ ಟ್ರೋಲ್ಗಳು ಹೆಚ್ಚಾಯಿತು.
ಟೀಕೆಗಳು ಜಾಸ್ತಿ ಆಗುತ್ತಿದ್ದಂತೆ ಅನುಷ್ಕಾ ಪರ ಮಾತನಾಡಿದ ಕೊಹ್ಲಿ, ಟ್ರೋಲ್ ಮಾಡುವ ಜನರಿಗೆ ನಾಚಿಕೆಯಾಗಬೇಕು. ಆಕೆ ಯಾವತ್ತೂ ತನಗೆ ಧನಾತ್ಮಕ ಚಿಂತನೆಯನ್ನು ನೀಡಿದ್ದಾಳೆ ಎಂದು ಬರೆದು ‘SHAME’ ಎಂದು ಬರೆದಿರುವ ಪೋಸ್ಟರ್ ಅನ್ನು ಪೋಸ್ಟ್ ಮಾಡಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು. 2016 ರಲ್ಲಿ ಮಾಡಿದ ಈ ಟ್ವೀಟ್ ಅನ್ನು 98 ಸಾವಿರ ಮಂದಿ ಲೈಕ್ ಮಾಡಿದ್ದರೆ 35 ಸಾವಿರ ಜನ ರಿಟ್ವೀಟ್ ಮಾಡಿ ಕೊಹ್ಲಿಗೆ ಬೆಂಬಲ ನೀಡಿದ್ದರು.
ಲವ್ ಸ್ಟೋರಿ ಚರ್ಚೆಯಾಗುತ್ತಿದ್ದಂತೆ ಇಬ್ಬರು ಪರಸ್ಪರ ಇನ್ಸ್ಟಾದಿಂದ ಅನ್ಫಾಲೋ ಮಾಡಿದ್ದರು. ಅಷ್ಟೇ ಅಲ್ಲದೇ ಇಬ್ಬರೂ ಸಾರ್ವಜನಿಕವಾಗಿ ಕಾಣಿಸುವುದನ್ನು ನಿಲ್ಲಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎಂಬ ವದಂತಿಯೂ ಬರತೊಡಗಿತು. ಮತ್ತೆ ನಮ್ಮ ವಿರುದ್ಧ ನೆಗೆಟಿವ್ ಅಭಿಪ್ರಾಯ ಬರಬಾರದು ಎಂದು ಇವರಿಬ್ಬರೂ ಉದ್ದೇಶಪೂರ್ವಕವಾಗಿ ಈ ನಿರ್ಧಾರ ಕೈಗೊಂಡಿದ್ದರು ಎಂಬ ಮಾತು ನಂತರ ಬಂದಿತ್ತು. ಕೆಲ ದಿನಗಳಲ್ಲಿ ಇಬ್ಬರು ಪರಸ್ಪರ ಫಾಲೋ ಮಾಡಿಕೊಂಡರು ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಬ್ರೇಕಪ್ ವದಂತಿಗೆ ಬ್ರೇಕ್ ಹಾಕಿದರು.
ಅಂತಿಮವಾಗಿ ಡಿಸೆಂಬರ್ 2017 ರಲ್ಲಿ ವಿರುಷ್ಕಾ (ವಿರಾಟ್+ ಅನುಷ್ಕಾ) ಜೋಡಿ ಇಟಲಿಯ ಟಸ್ಕನಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ಈ ಮದುವೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಜನವರಿ 2021 ರಲ್ಲಿ ಮಗಳು ವಾಮಿಕಾ ಜನಿಸಿದರೆ, ಫೆಬ್ರವರಿ 2024 ರಲ್ಲಿ ಅಕಾಯ್ ಜನಿಸಿದ್ದ.
ಹಲವು ಸಂದರ್ಶನಗಳಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಅನುಷ್ಕಾ ಬಂದಾಗಿನಿಂದ ನನ್ನಲ್ಲಿರುವ ಸಾಕಷ್ಟು ನೆಗೆಟಿವ್ ಯೋಚನೆಗಳು ದೂರ ಆಗಿದೆ. ನನಗೆ ಅನುಷ್ಕಾ ತುಂಬಾ ಕಫರ್ಟ್ ಜೋನ್ ಆಗಿದ್ದಾಳೆ ಎಂದು ಪತ್ನಿಯ ಮೇಲಿನ ಪ್ರೀತಿಯನ್ನು ವಿರಾಟ್ ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ದೇಶ
RBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ
ಮುಂಬೈ(ಮಹಾರಾಷ್ಟ್ರ): ಬ್ಯಾಂಕ್ಗಳು ಗ್ರಾಹಕರಿಂದ ಸಾಲ ವಸೂಲು ಮಾಡುವಾಗ ಅನುಸರಿಸಬೇಕಾದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು Reserve Bank of India (ಆರ್ಬಿಐ) ಪ್ರಕಟಿಸಿದೆ. ಸಾಲ ವಸೂಲಾತಿ ಏಜೆಂಟರಿಗೆ ಕಡ್ಡಾಯ ತರಬೇತಿ ಹಾಗೂ ಎಲ್ಲಾ ಫೋನ್ ಕರೆಗಳ ರೆಕಾರ್ಡಿಂಗ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
ಆರ್ಬಿಐ ಪ್ರಕಾರ, ಸಾಲ ವಸೂಲಾತಿ ಏಜೆಂಟ್ಗಳು ಸಾಲಗಾರರೊಂದಿಗೆ ಸಭ್ಯ ಮತ್ತು ನಾಗರಿಕ ರೀತಿಯಲ್ಲಿ ವರ್ತಿಸಬೇಕು. ಬ್ಯಾಂಕ್ಗಳು ಏಜೆಂಟ್ಗಳ ವರ್ತನೆ ಮೇಲೆ ಸಂಪೂರ್ಣ ಹೊಣೆಗಾರಿಕೆ ವಹಿಸಬೇಕು ಎಂದು ತಿಳಿಸಿದೆ.
ಫೋನ್ ಕರೆಗಳ ರೆಕಾರ್ಡ್ ಕಡ್ಡಾಯ
- ಸಾಲ ವಸೂಲಾತಿ ಏಜೆಂಟ್ಗಳು ಮಾಡುವ ಎಲ್ಲಾ ಕರೆಗಳನ್ನು ಬ್ಯಾಂಕ್ ರೆಕಾರ್ಡ್ ಮಾಡಬೇಕು
- ಸಾಲಗಾರರೊಂದಿಗೆ ಗೌರವಪೂರ್ಣ ಮಾತುಕತೆ ನಡೆಸಬೇಕು
- ಗ್ರಾಹಕರ ವೈಯಕ್ತಿಕ ಮಾಹಿತಿಯ ದುರುಪಯೋಗ ಮಾಡಬಾರದು
ಸಾಲ ವಸೂಲಾತಿ ವೇಳೆ ಪಾಲಿಸಬೇಕಾದ ನಿಯಮಗಳು
- ನಿಂದನೀಯ ಭಾಷೆ ಅಥವಾ ಬೆದರಿಕೆ ಸಂದೇಶಗಳ ಬಳಕೆ ನಿಷೇಧ
- ಸಾಲಗಾರರ ಮನೆಗೆ ಭೇಟಿ ನೀಡುವಾಗ ಸಭ್ಯತೆ ಕಾಪಾಡಿಕೊಳ್ಳಬೇಕು
- ಕುಟುಂಬದಲ್ಲಿ ದುಃಖ, ವಿಪತ್ತು, ಮದುವೆ ಅಥವಾ ಹಬ್ಬದ ಸಂದರ್ಭಗಳಲ್ಲಿ ವಸೂಲು ತಪ್ಪಿಸಬೇಕು
- ಗ್ರಾಹಕರ ಗೌಪ್ಯತೆ ಕಾಪಾಡುವುದು ಕಡ್ಡಾಯ
ತರಬೇತಿ ಕಡ್ಡಾಯಗೊಳಿಸಲು ಚಿಂತನೆ
ಸಾಲ ವಸೂಲಾತಿ ಏಜೆಂಟ್ಗಳು Indian Institute of Banking and Finance (IIBF) ನಡೆಸುವ ‘ಸಾಲ ವಸೂಲಾತಿ ತರಬೇತಿ’ಗೆ ಒಳಗಾಗಬೇಕು ಎಂಬುದನ್ನು ಕಡ್ಡಾಯಗೊಳಿಸುವ ಬಗ್ಗೆ ಆರ್ಬಿಐ ಚಿಂತನೆ ನಡೆಸಿದೆ.
ಈ ಕುರಿತು ಇತ್ತೀಚಿನ ಹಣಕಾಸು ನೀತಿ ಪರಿಶೀಲನೆ ವೇಳೆ ಗವರ್ನರ್ Sanjay Malhotra ಘೋಷಣೆ ಮಾಡಿದ್ದರು. ಬಳಿಕ ಕರಡು ಮಾರ್ಗಸೂಚಿ ಪ್ರಕಟವಾಗಿದೆ.
ಕಠಿಣ ಕ್ರಮಕ್ಕೆ ಕಾರಣವೇನು?
ಹಿಂದೆ ಬಿಹಾರದಲ್ಲಿ ಸಾಲ ವಸೂಲಾತಿ ಏಜೆಂಟ್ಗಳ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಏಜೆಂಟ್ಗಳ ಭೇಟಿಯ ಬಳಿಕ ಸಾಲಗಾರನ ಸಂಬಂಧಿಕ ಸಾವನ್ನಪ್ಪಿದ ಘಟನೆ ಸಹ ನಡೆದಿತ್ತು. ಇಂತಹ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿ ಆರ್ಬಿಐ ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
ರೆಪೊ ದರ ಸ್ಥಿರ
ಆರ್ಬಿಐ ಇತ್ತೀಚಿಗೆ ರೆಪೊ ದರವನ್ನು ಶೇ.5.25ರಲ್ಲಿ ಮುಂದುವರಿಸಲು ಸರ್ವಾನುಮತದಿಂದ ತೀರ್ಮಾನಿಸಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ Donald Trump ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.50ರಿಂದ 18ಕ್ಕೆ ಇಳಿಸುವುದಾಗಿ ಘೋಷಿಸಿದ್ದು, ಇದರಿಂದ ಭಾರತೀಯ ಆರ್ಥಿಕತೆಗೆ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ.
ದೇಶ
ಫುಟ್ಪಾತ್ನಲ್ಲಿ ಬೈಕ್ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ
ಕೇರಳ, ಫೆಬ್ರವರಿ 13: ದೊಡ್ಡ ರಸ್ತೆಗಳಿದ್ದರೂ ಫುಟ್ಪಾತ್ ಮೇಲೆ ಬೈಕ್ ಓಡಿಸುವ ಪ್ರವೃತ್ತಿ ಕಡಿಮೆಯಾಗುತ್ತಿಲ್ಲ. ವರ್ಷಕ್ಕೊಮ್ಮೆ ಫುಟ್ಪಾತ್ ನಿರ್ಮಾಣ ಮಾಡಿದರೂ ಕೆಲವೇ ತಿಂಗಳಲ್ಲಿ ವಾಹನಗಳ ಸಂಚಾರದಿಂದ ಅವು ಹಾಳಾಗುತ್ತಿವೆ.
ಈ ನಡುವೆ ಫುಟ್ಪಾತ್ನಲ್ಲಿ ಬಂದ ಬೈಕ್ನ್ನು ಮಹಿಳೆಯೊಬ್ಬರು ತಡೆದು ನಿಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ Kozhikode ನಗರದಲ್ಲಿ ನಡೆದಿದೆ.
ಧೈರ್ಯವಾಗಿ ಎದುರಿಸಿದ ಮಹಿಳೆ
ವಿಡಿಯೋದಲ್ಲಿ ಮಹಿಳೆ ಫುಟ್ಪಾತ್ನಲ್ಲಿ ಅಡ್ಡವಾಗಿ ನಿಂತು, “ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಬೇಕಿದ್ದರೆ ನೀವು ರಸ್ತೆಯಲ್ಲಿ ಹೋಗಿ” ಎಂದು ಬೈಕ್ ಸವಾರನಿಗೆ ಗದರಿಸುತ್ತಿರುವುದು ಕಾಣಿಸುತ್ತದೆ.
ಫುಟ್ಪಾತ್ ಪಾದಚಾರಿಗಳಿಗಾಗಿ ಮೀಸಲಾಗಿದ್ದು, ವಾಹನ ಸಂಚಾರಕ್ಕೆ ಅಲ್ಲ ಎಂಬ ಸಂದೇಶವನ್ನು ಮಹಿಳೆ ಸ್ಪಷ್ಟವಾಗಿ ನೀಡಿದ್ದಾರೆ.
ಪಾದಚಾರಿಗಳ ಸುರಕ್ಷತೆ ಪ್ರಶ್ನೆ
ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಕೆಲವರು ಫುಟ್ಪಾತ್ ಬಳಸಿ ಬೈಕ್ ಚಲಾಯಿಸುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಪಾದಚಾರಿಗಳ ಸುರಕ್ಷತೆ ಅಪಾಯಕ್ಕೊಳಗಾಗುತ್ತಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಮಹಿಳೆಯ ಧೈರ್ಯವನ್ನು ಹಲವರು ಶ್ಲಾಘಿಸುತ್ತಿದ್ದಾರೆ.
ದೇಶ
ರಾಜ್ಯ ಬಜೆಟ್ ಹೊಸ್ತಿಲಲ್ಲಿ ಮಂಡ್ಯ ನಿರೀಕ್ಷೆ: ಪ್ರವಾಸೋದ್ಯಮ, ರಸ್ತೆ, ಆರೋಗ್ಯಕ್ಕೆ ಒತ್ತು
ಮಂಡ್ಯ: ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ರಾಜ್ಯ ಬಜೆಟ್ನಲ್ಲಿ ಮಂಡ್ಯ ಜಿಲ್ಲೆಯ ಜನರಲ್ಲಿ ಭಾರೀ ನಿರೀಕ್ಷೆ ಮೂಡಿದೆ. ಚುನಾವಣೆ ದೃಷ್ಟಿಯಿಂದಾದರೂ ವಿಶೇಷ ಪ್ಯಾಕೇಜ್ ಮೂಲಕ ಜಿಲ್ಲೆಗೆ ಅನುದಾನ ಮಂಜೂರಾಗಬಹುದು ಎಂಬ ಆಶಾಭಾವನೆ ವ್ಯಕ್ತವಾಗಿದೆ.
ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಬೇಡಿಕೆ
ಜಿಲ್ಲೆಯಲ್ಲಿ ವಿಶ್ವವಿಖ್ಯಾತ Krishna Raja Sagara (ಕೆಆರ್ಎಸ್) ಬೃಂದಾವನ, Gaganachukki Falls, Ranganathittu Bird Sanctuary, Melukote, Srirangapatna, Adichunchanagiri ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿವೆ.
ಪ್ರವಾಸೋದ್ಯಮ ಇಲಾಖೆ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ 106 ಪ್ರವಾಸಿ ತಾಣಗಳಿದ್ದರೂ, ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಶ್ರೀರಂಗಪಟ್ಟಣವನ್ನು ಮೆಕ್ಸಿಕೊ ಅಥವಾ ಸಿಡ್ನಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಒತ್ತು ನೀಡಬೇಕು ಎಂದು ಇತಿಹಾಸತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಗನಚುಕ್ಕಿ ಜಲಪಾತದಲ್ಲಿ ರೋಪ್ವೇ ಅಳವಡಿಕೆಗೂ ಬೇಡಿಕೆ ಇದೆ.
ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ
ಜಿಲ್ಲೆಯ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಸ್ಥಿತಿ ದುರ್ಬಲವಾಗಿದೆ. ಮಂಡ್ಯ ನಗರದಲ್ಲಿ ರಸ್ತೆ ಪುನರ್ನಿರ್ಮಾಣಕ್ಕೆ ವಿಶೇಷ ಅನುದಾನ ಅಗತ್ಯವಿದೆ. ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಿಂದ ಉತ್ತರ ಬೈಪಾಸ್ ನಿರ್ಮಾಣಗೊಂಡಿದ್ದು, ದಕ್ಷಿಣ ಭಾಗದಲ್ಲೂ ಬೈಪಾಸ್ ನಿರ್ಮಾಣವಾದರೆ ರಿಂಗ್ರೋಡ್ ರೂಪುಗೊಳ್ಳಲಿದೆ.
ಆರೋಗ್ಯ ಮತ್ತು ಕೃಷಿಗೆ ಆದ್ಯತೆ
- ಮಂಡ್ಯದಲ್ಲಿ ಟ್ರಾಮಾ ಕೇರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
- ಹನಿ ಮತ್ತು ಏತ ನೀರಾವರಿ ಯೋಜನೆಗಳ ಅನುಷ್ಠಾನ
- ಎಲ್ಲಾ ನಾಲೆಗಳ ಆಧುನೀಕರಣ
- ಕೃಷಿ ಕೈಗಾರಿಕೆಗಳ ಸ್ಥಾಪನೆ
ಮೈಶುಗರ್ ಪುನಶ್ಚೇತನ ಬೇಡಿಕೆ
ಜಿಲ್ಲೆಯ ಹೆಮ್ಮೆಯ Mysore Sugar Company (ಮೈಶುಗರ್) ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಜನರು ಆಗ್ರಹಿಸಿದ್ದಾರೆ.
-
ಕ್ರೀಡೆ20 hours agoIND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
-
ದೇಶ21 hours agoHAL ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?
-
ದೇಶ23 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ದೇಶ24 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ದೇಶ20 hours agoವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ: “ಭಾರತಕ್ಕೆ ಮರಳದಿದ್ದರೆ ಅರ್ಜಿ ವಿಚಾರಣೆ ಇಲ್ಲ”
-
ದೇಶ21 hours agoಜೈರಾಮ್ ರಮೇಶ್ಗೆ ಸುಪ್ರೀಂಕೋರ್ಟ್ ಕಿಡಿ: “ಮಾಧ್ಯಮ ಪ್ರಚಾರಕ್ಕೇ ಅರ್ಜಿ?”
-
ದೇಶ23 hours agoಸಿಎಂ ಕುರ್ಚಿ ಉಳಿಸಿಕೊಳ್ಳಲು ಶಾಸಕರ ವಿದೇಶ ಪ್ರವಾಸ? ವಿಜಯೇಂದ್ರ ಗಂಭೀರ ಆರೋಪ
-
ಅಪರಾಧ24 hours agoBAIRATHI BASAVARJU BREAKING NEWS : ಸಿಐಡಿ ಲುಕ್ಔಟ್ ನೋಟಿಸ್ ಜಾರಿ, ತನಿಖೆ ತೀವ್ರ
