Connect with us

ದೇಶ

ನಿತ್ಯ ಮೊಟ್ಟೆ ಸೇವಿಸಿದರೆ ಏನಾಗುತ್ತೆ ಗೊತ್ತೇ?; ಎಗ್​ನಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಒಳ್ಳೆಯದಾ? ಸಂಶೋಧನೆ ಹೇಳುವುದಿಷ್ಟು!

Published

on

ಬಹುತೇಕ ಜನರು ಸೋಮವಾರದಿಂದ ಭಾನುವಾರದವರೆಗೆ ಅಂದ್ರೆ, ನಿತ್ಯ ಕನಿಷ್ಠ ಒಂದು ಮೊಟ್ಟೆ ಸೇವಿಸುತ್ತಾರೆ. ಆದ್ರೆ, ಕೆಲವರು ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವುದರಿಂದ ತಿನ್ನುವುದನ್ನು ನಿಲ್ಲಿಸಿದ್ದಾರೆ. ಇನ್ನು ಕೆಲವರು ಮೊಟ್ಟೆಯ ಬಿಳಿ ಭಾಗವನ್ನು ಸೇವಿಸುತ್ತಾರೆ, ಹಳದಿ ಭಾಗವನ್ನು ಪಕ್ಕಕ್ಕೆ ಇಡುತ್ತಾರೆ. ಇವೆರಡರಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಈಗ ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ತಜ್ಞರು ತಿಳಿಸುವುದೇನು?

ಮೊಟ್ಟೆಗಳಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿವೆ. ಇದು ದೃಷ್ಟಿ ಸುಧಾರಣೆ, ಹೃದಯದ ಆರೋಗ್ಯ ಮತ್ತು ತೂಕ ನಿರ್ವಹಣೆ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ. ಆದ್ರೆ, ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಅನೇಕ ಜನರು ಪ್ರತಿದಿನ ಮೊಟ್ಟೆ ತಿನ್ನುವುದಿಲ್ಲ. ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್: ಮೊಟ್ಟೆಯ ಬಿಳಿಭಾಗದಲ್ಲಿ ಪ್ರೋಟೀನ್ ಅಧಿಕ ಇರುತ್ತದೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ, ಹಳದಿ ಲೋಳೆಯಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಇರುವುದರಿಂದ ಅನೇಕ ಜನರು ಮೊಟ್ಟೆಗಳನ್ನು ಅನಾರೋಗ್ಯಕರವೆಂದು ಪರಿಗಣಿಸುತ್ತಾರೆ ಎಂದು ಮೇಯೋಕ್ಲಿನಿಕ್ (mayoclinic) ತಿಳಿಸಿದೆ. ಹೆಚ್ಚಿನ ಕೊಲೆಸ್ಟ್ರಾಲ್ ಹೃದಯ ಕಾಯಿಲೆಗೆ ಕಾರಣವಾಗುತ್ತದೆ ಎಂದು ಹಲವು ಅಧ್ಯಯನಗಳು ತೋರಿಸುತ್ತವೆ. ಇದರಿಂದಾಗಿ ಅನೇಕ ಜನರು ಕೊಲೆಸ್ಟ್ರಾಲ್ ಅಧಿಕವಾಗಿರುವ ಆಹಾರಗಳಿಂದ ದೂರವಿರುತ್ತಾರೆ. ಅವುಗಳಲ್ಲಿ ಮೊಟ್ಟೆಗಳು ಒಂದು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ಆರೋಗ್ಯಕ್ಕೆ ಉತ್ತಮ: ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿರುತ್ತದೆ. ಎರಡು ದೊಡ್ಡ ಮೊಟ್ಟೆಗಳು ಸರಿಸುಮಾರು 411 ಮಿಗ್ರಾಂ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ ಎಂದು ವೈದ್ಯರು ಹೇಳುತ್ತಾರೆ. ಆದರೆ, ಹಲವಾರು ಅಧ್ಯಯನಗಳ ಪ್ರಕಾರ, ದಿನಕ್ಕೆ 300 ಮಿಗ್ರಾಂಗಿಂತ ಹೆಚ್ಚು ಕೊಲೆಸ್ಟ್ರಾಲ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೃದಯ ಕಾಯಿಲೆ ಇರುವವರು ದಿನಕ್ಕೆ 200 ಮಿಗ್ರಾಂಗಿಂತ ಕಡಿಮೆ ಕೊಲೆಸ್ಟ್ರಾಲ್ ಸೇವಿಸುವುದು ಉತ್ತಮ ಎಂದು ನ್ಯಾಷನಲ್​ ಲೈಬ್ರರಿ ಆಫ್ ಮೆಡಿಷನ್ (National Library of Medicine) ಹೇಳುತ್ತದೆ. ಮೊಟ್ಟೆಗಳಲ್ಲಿ ಅತಿಯಾದ ಕೊಲೆಸ್ಟ್ರಾಲ್ ಇದ್ದು ಅದನ್ನು ತಿನ್ನಬಾರದು ಎಂದು ನೀವು ಭಾವಿಸಿದರೆ ಅದು ತಪ್ಪು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ವಿವರಿಸಲಾಗಿದೆ.

ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ (Harvard Health publishing) ವರದಿಯ ಪ್ರಕಾರ, ಕೊಲೆಸ್ಟ್ರಾಲ್ ಯಕೃತ್ತಿನಿಂದ ಉತ್ಪತ್ತಿಯಾಗುತ್ತದೆ ಎಂದು ಹೇಳುತ್ತದೆ. ಮೊಟ್ಟೆಯಂತಹ ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ಸೇವಿಸಿದಾಗ ಕೆಲವೊಮ್ಮೆ ಯಕೃತ್ತು ಕಡಿಮೆ ಕೊಲೆಸ್ಟ್ರಾಲ್ ಉತ್ಪಾದಿಸುತ್ತದೆ. ಇದರರ್ಥ ನೀವು ಪ್ರತಿದಿನ ಮೊಟ್ಟೆಗಳನ್ನು ಸೇವಿಸಿದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಜ್ಞರು ವಿವರಿಸುತ್ತಾರೆ.

ಹೃದಯ ಕಾಯಿಲೆ ಇರುವವರು: ಮೊಟ್ಟೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ, ತಜ್ಞರು ಹೇಳುವಂತೆ ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ ಅಥವಾ ಹೃದ್ರೋಗದ ಅಪಾಯ ಹೆಚ್ಚಾಗುವುದಿಲ್ಲ. ಅಧಿಕ ತೂಕ ಹೊಂದಿರುವವರು ಅಥವಾ ಅದರಿಂದ ಬಳಲುತ್ತಿರುವವರಲ್ಲಿಯೂ ಸಹ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಗ್ಲೈಸೆಮಿಕ್ ನಿಯಂತ್ರಣದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂದು ಹೇಳುತ್ತಾರೆ.

ಮೊಟ್ಟೆಗಳನ್ನು ತಿನ್ನುವುದರಿಂದ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆಯಾಗುತ್ತದೆ. ಮೊಟ್ಟೆಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಕಡಿಮೆ ಇರುವುದರಿಂದ ಹೃದ್ರೋಗ ಮತ್ತು ಮಧುಮೇಹ ರೋಗಿಗಳ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ. ಇದಲ್ಲದೇ, ಇದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Nalanda English Medium School ವಾರ್ಷಿಕೋತ್ಸವದಲ್ಲಿ ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನೃತ್ಯ ನಮನ

Published

on

By

ಬೆಂಗಳೂರು: ಜೆ.ಪಿ.ನಗರದಲ್ಲಿರುವ ಪ್ರತಿಷ್ಠಿತ ನNalanda English Medium School ವಾರ್ಷಿಕೋತ್ಸವ ಹಲವು ವಿಶೇಷತೆಗಳೊಂದಿಗೆ ಗಮನ ಸೆಳೆಯಿತು. ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ S.Janaki ಅವರ ವಿವಿಧ ಭಾಷೆಗಳ ಜನಪ್ರಿಯ ಹಾಡುಗಳನ್ನು ಗಾಯನ ಹಾಗೂ ನೃತ್ಯದ ಮೂಲಕ ಪ್ರಸ್ತುತಪಡಿಸಿ ಗಾನಕೋಗಿಲೆಗೆ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಮಿಸ್ ಇಂಡಿಯಾ ಕಿರೀಟ ವಿಜೇತೆ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದೆ ಸ್ಮೀತಾಪ್ರಭು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಶೈಕ್ಷಣಿಕ ಸಾಧನೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅತ್ಯಂತ ಅಗತ್ಯ ಎಂದು ಹೇಳಿದರು.

ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ ಎಂದು ಸ್ಮೀತಾಪ್ರಭು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನಮನ

ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಎಸ್. ಜಾನಕಿ ಅವರ ವಿವಿಧ ಭಾಷೆಗಳ ಹಾಡುಗಳನ್ನು ಗಾಯನ ಮತ್ತು ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ಸಂಗೀತ ಹಾಗೂ ನೃತ್ಯದ ಸುಂದರ ಸಂಯೋಜನೆ ಪ್ರೇಕ್ಷಕರ ಗಮನ ಸೆಳೆಯಿತು.

ವಿದ್ಯಾರ್ಥಿಗಳ ಈ ವಿಶೇಷ ಪ್ರದರ್ಶನದ ಮೂಲಕ ಅಗಲಿದ ಹಿರಿಯ ಗಾಯಕಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗೆ ಪಾಲಕರು ಹಾಗೂ ಶಿಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ

ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಸ್ಮೀತಾಪ್ರಭು ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕುಪ್ಪುರಾಜ್, ಕಾರ್ಯದರ್ಶಿ ಶಿವಶಂಕರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

Continue Reading

ದೇಶ

Mantralaya: ಇಂದಿನಿಂದ ಸಪ್ತರಾತ್ರೋತ್ಸವ ಆರಂಭ; ಮಹಾರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ

Published

on

By

ರಾಯಚೂರು: Mantralaya ದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 355ನೇ Aaradhana Mahotsavaಕ್ಕೆ ಇಂದಿನಿಂದ (ಆ.27) ಅದ್ಧೂರಿ ಚಾಲನೆ ದೊರೆಯಲಿದೆ. ಏಳು ದಿನಗಳ ಕಾಲ ನಡೆಯಲಿರುವ ಸಪ್ತರಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಇಂದು ಸಂಜೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಗೋ, ಗಜ, ಅಶ್ವ, ಧಾನ್ಯ ಹಾಗೂ ಲಕ್ಷ್ಮಿ ಪೂಜೆಯೊಂದಿಗೆ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗಲಿವೆ.

ಸೆ.2ರವರೆಗೆ ಸಪ್ತರಾತ್ರೋತ್ಸವ

ಆ.27ರಿಂದ ಸೆಪ್ಟೆಂಬರ್ 2ರವರೆಗೆ ಏಳು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ. ಆರಾಧನಾ ಮಹೋತ್ಸವದ ಪ್ರಮುಖ ದಿನಗಳಲ್ಲಿ ಆ.29ರಂದು ಪೂರ್ವಾರಾಧನೆ, ಆ.30ರಂದು ಮಧ್ಯಾರಾಧನೆ ಹಾಗೂ ಆ.31ರಂದು ಉತ್ತರಾರಾಧನೆ ನಡೆಯಲಿದೆ.

ಈ ಸಂದರ್ಭದಲ್ಲಿ ಮಂತ್ರಾಲಯ ಮಠದ ಆವರಣದಲ್ಲಿರುವ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಮೂರು ದಿನಗಳ ಕಾಲ ತೆಪ್ಪೋತ್ಸವ ಕೂಡ ಆಯೋಜಿಸಲಾಗಿದೆ. ಭಕ್ತರು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ.

ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ

ಆರಾಧನಾ ಮಹೋತ್ಸವದ ಅಂಗವಾಗಿ ಆ.29ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇನ್ನು ಆ.31ರಂದು ಆರಾಧನಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಮಹಾರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸುವ ಕಾರ್ಯಕ್ರಮವೂ ನಡೆಯಲಿದ್ದು, ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡುವ ನಿರೀಕ್ಷೆಯಿದೆ.

ಮಂತ್ರಾಲಯದಲ್ಲಿ ಈಗಾಗಲೇ ಆರಾಧನಾ ಮಹೋತ್ಸವದ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಕ್ತರ ಅನುಕೂಲಕ್ಕಾಗಿ ವಿವಿಧ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಏಳು ದಿನಗಳ ಈ ವಿಶೇಷ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸಲಿದ್ದಾರೆ.

Continue Reading

ಬೆಂಗಳೂರು

Anand Sweets: ಸಿಹಿ ತಿನ್ನುವಾಗ ನಾಲಿಗೆ, ಹಲ್ಲಿಗೆ ಗಾಯ; ₹2,050 ಖರೀದಿಗೆ ಕಾನೂನು ನೋಟಿಸ್

Published

on

By

ಬೆಂಗಳೂರು: Kempegowda International Airport ದಲ್ಲಿರುವ ಆನಂದ್ ಸ್ವೀಟ್ಸ್ ಮಳಿಗೆಯಿಂದ ಖರೀದಿಸಿದ್ದ ಸಿಹಿತಿಂಡಿಯಲ್ಲಿ ಕಲ್ಲಿನಂತಿರುವ ಗಟ್ಟಿಯಾದ ವಸ್ತು ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಹಿತಿಂಡಿ ಸೇವಿಸುವ ವೇಳೆ ನಾಲಿಗೆ ಹಾಗೂ ಹಲ್ಲಿಗೆ ಗಾಯವಾಗಿದೆ ಎಂದು ಆರೋಪಿಸಿರುವ ಗ್ರಾಹಕರು ಇದೀಗ ಸಂಸ್ಥೆಗೆ ಕಾನೂನು ನೋಟಿಸ್ ನೀಡಿದ್ದಾರೆ.

ಆಗಸ್ಟ್ 20ರಂದು ಸಂಜೆ 5.48ರ ಸುಮಾರಿಗೆ ಕಾರ್ತಿಕ್ ಗವಾಜಿ ಎಂಬುವವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆನಂದ್ ಸ್ವೀಟ್ಸ್ ಮಳಿಗೆಯಲ್ಲಿ ಒಟ್ಟು ₹2,050 ಮೌಲ್ಯದ ಸಿಹಿತಿಂಡಿಗಳನ್ನು ಖರೀದಿಸಿದ್ದರು. ಇದಕ್ಕಾಗಿ ಫೋನ್‌ಪೇ ಮೂಲಕ ಹಣ ಪಾವತಿಸಲಾಗಿದ್ದು, ವಹಿವಾಟಿನ ದಾಖಲೆಗಳು ತಮ್ಮ ಬಳಿ ಇರುವುದಾಗಿ ಕಾನೂನು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು ಎನ್ನಲಾಗಿದ್ದು, ಬಳಿಕ ಅವುಗಳನ್ನು ಸೇವಿಸುವ ಸಂದರ್ಭದಲ್ಲಿ ಗಟ್ಟಿಯಾದ, ಕಲ್ಲಿನಂತಿರುವ ವಸ್ತು ಪದೇಪದೇ ಸಿಕ್ಕಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಸಿಹಿತಿಂಡಿ ಸೇವಿಸುತ್ತಿದ್ದ ವ್ಯಕ್ತಿಯ ನಾಲಿಗೆ ಹಾಗೂ ಹಲ್ಲಿಗೆ ಗಾಯವಾಗಿದೆ ಎಂದು ದೂರಲಾಗಿದೆ.

ಆಹಾರ ಗುಣಮಟ್ಟದ ಬಗ್ಗೆ ಪ್ರಶ್ನೆ

ಘಟನೆ ಹಿನ್ನೆಲೆಯಲ್ಲಿ ಸಿಹಿತಿಂಡಿಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿದೆ. ಉತ್ಪನ್ನದ ತಯಾರಿಕೆ, ಪ್ಯಾಕಿಂಗ್, ಗುಣಮಟ್ಟ ಪರಿಶೀಲನೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

ಕಾನೂನು ನೋಟಿಸ್‌ನಲ್ಲಿ ಸಿಹಿತಿಂಡಿಗಾಗಿ ಪಾವತಿಸಿದ ₹2,050 ಹಣವನ್ನು ಮರುಪಾವತಿಸುವುದರ ಜೊತೆಗೆ ಗಾಯಗೊಂಡ ವ್ಯಕ್ತಿಯ ವೈದ್ಯಕೀಯ ಹಾಗೂ ದಂತ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವಂತೆ ಆಗ್ರಹಿಸಲಾಗಿದೆ. ದೈಹಿಕ ನೋವು, ಮಾನಸಿಕ ಸಂಕಷ್ಟ ಹಾಗೂ ಇತರ ನಷ್ಟಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕೂಡ ಬೇಡಿಕೆ ಇಡಲಾಗಿದೆ.

ದಾಖಲೆ ಸಂರಕ್ಷಣೆಗೆ ಸೂಚನೆ

ಸಂಬಂಧಿತ ಉತ್ಪನ್ನದ ಬ್ಯಾಚ್ ಅಥವಾ ಲಾಟ್ ವಿವರ, ಗುಣಮಟ್ಟ ಪರಿಶೀಲನಾ ದಾಖಲೆಗಳು ಹಾಗೂ ಉತ್ಪನ್ನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸಿಸಿಟಿವಿ ದೃಶ್ಯಗಳು, ಪಾವತಿ ದಾಖಲೆಗಳು, ಮಾರಾಟ ದಾಖಲೆಗಳು ಹಾಗೂ ಉತ್ಪನ್ನದ ಬ್ಯಾಚ್ ಮಾಹಿತಿಯನ್ನು ಸಂರಕ್ಷಿಸುವಂತೆಯೂ ಸೂಚಿಸಲಾಗಿದೆ.

ನೋಟಿಸ್ ಸ್ವೀಕರಿಸಿದ 48 ಗಂಟೆಗಳೊಳಗೆ ಲಿಖಿತ ಉತ್ತರ ನೀಡಬೇಕು ಎಂದು ಕಾರ್ತಿಕ್ ಗವಾಜಿ ಒತ್ತಾಯಿಸಿದ್ದಾರೆ. ಸೂಕ್ತ ಪ್ರತಿಕ್ರಿಯೆ ಅಥವಾ ಪರಿಹಾರ ದೊರೆಯದಿದ್ದರೆ ಗ್ರಾಹಕ ಆಯೋಗದ ಮೊರೆ ಹೋಗುವುದರ ಜೊತೆಗೆ ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆದರೆ, ಸಿಹಿತಿಂಡಿಯಲ್ಲಿ ಪತ್ತೆಯಾಗಿದೆ ಎನ್ನಲಾದ ವಸ್ತುವಿನ ನಿಖರ ಸ್ವರೂಪ ಹಾಗೂ ಆರೋಪದ ಸತ್ಯಾಸತ್ಯತೆ ಅಧಿಕೃತ ಪರಿಶೀಲನೆಯ ಬಳಿಕವೇ ಖಚಿತವಾಗಬೇಕಿದೆ. ಈ ಕುರಿತು ಆನಂದ್ ಸ್ವೀಟ್ಸ್ ಸಂಸ್ಥೆಯ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ.

Continue Reading

Trending