Connect with us

ರಾಜ್ಯ

Voter List ಯಲ್ಲಿ ನಿಮ್ಮ ಹೆಸರು ASDDO ಪಟ್ಟಿಯಲ್ಲಿದೆಯೇ? ಹೀಗೆ ಆನ್‌ಲೈನ್‌ನಲ್ಲಿ ಪರಿಶೀಲಿಸಿ, ತಪ್ಪಿದ್ದರೆ ತಕ್ಷಣ ಸರಿಪಡಿಸಿ

Published

on

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ Voter List ಯ ವಿಶೇಷ ಸಾಂದ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಭಾಗವಾಗಿ, ಸಾರ್ವಜನಿಕರು ತಮ್ಮ ಹೆಸರು ASDDO (Absent, Shifted, Dead, Duplicate and Others) ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ಈಗ ಆನ್‌ಲೈನ್ ಮೂಲಕವೇ ಪರಿಶೀಲಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ತಿಳಿಸಿದೆ.

ರಾಜ್ಯದ 5.54 ಕೋಟಿ ನೋಂದಾಯಿತ ಮತದಾರರಲ್ಲಿ 1.11 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ASDDO ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಸಾರ್ವಜನಿಕರು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕೃತ ವೆಬ್‌ಸೈಟ್ ಮೂಲಕ ಜಿಲ್ಲಾವಾರು ಪ್ರಕಟಿಸಿರುವ ASDDO ಪಟ್ಟಿಯನ್ನು ಪರಿಶೀಲಿಸಿ ತಮ್ಮ ಹೆಸರು ಹಾಗೂ ಅದರ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದು.

ತಪ್ಪಾಗಿ ಹೆಸರು ಸೇರಿದ್ದರೆ ಏನು ಮಾಡಬೇಕು?

ನೀವು ಇನ್ನೂ ಅದೇ ವಿಳಾಸದಲ್ಲಿ ವಾಸವಾಗಿದ್ದರೂ, ನಿಮ್ಮ ಹೆಸರನ್ನು ‘ಸ್ಥಳಾಂತರಗೊಂಡವರು’, ‘ಗೈರುಹಾಜರಾದವರು’ ಅಥವಾ ಇತರೆ ASDDO ವರ್ಗಗಳಲ್ಲಿ ತಪ್ಪಾಗಿ ಸೇರಿಸಿದ್ದರೆ ಆತಂಕಪಡುವ ಅಗತ್ಯವಿಲ್ಲ.

ಅಂತಹ ಸಂದರ್ಭಗಳಲ್ಲಿ ತಕ್ಷಣವೇ ನಿಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (BLO) ಅವರನ್ನು ಸಂಪರ್ಕಿಸಿ, ನೀವು ಅದೇ ವಿಳಾಸದಲ್ಲಿ ವಾಸಿಸುತ್ತಿರುವುದನ್ನು ದೃಢೀಕರಿಸಬೇಕು. ಬಿಎಲ್‌ಒ ನೀಡುವ ಸ್ವಯಂ ಘೋಷಣಾ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಿ ಅಗತ್ಯ ತಿದ್ದುಪಡಿ ಮಾಡಲಾಗುತ್ತದೆ.

ಆಗಸ್ಟ್ 17ರೊಳಗೆ ಕ್ರಮ ಕೈಗೊಳ್ಳಿ

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ASDDO ಪಟ್ಟಿಯಲ್ಲಿಯೇ ಉಳಿಯುವ ಮತದಾರರ ಹೆಸರುಗಳನ್ನು ಆಗಸ್ಟ್ 17ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಪರಿಶೀಲಿಸಿಕೊಂಡು, ತಪ್ಪಿದ್ದರೆ ಕೂಡಲೇ ಬಿಎಲ್‌ಒ ಮೂಲಕ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮುಂಬರುವ ಚುನಾವಣೆಗಳಲ್ಲಿ ಮತದಾನದ ಹಕ್ಕು ಕಳೆದುಕೊಳ್ಳದಿರಲು ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bengaluru ಟ್ರಾಫಿಕ್ ಪೊಲೀಸರನ್ನೇ ಕಂಗಾಲು ಮಾಡಿದ ಸ್ಕೂಟರ್ ಸವಾರ ಯಾರು? 170 ಉಲ್ಲಂಘನೆಗಳ ಹಿಂದಿನ ಕಥೆ ಏನು?

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ನಡುವೆಯೇ, ಒಂದೇ ಸ್ಕೂಟರ್ ಸವಾರ ಮಾಡಿದ ದಾಖಲೆ ಮಟ್ಟದ ಟ್ರಾಫಿಕ್ ಉಲ್ಲಂಘನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸವಾರನ ವಿರುದ್ಧ ಬರೋಬ್ಬರಿ 170ಕ್ಕೂ ಹೆಚ್ಚು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ₹96,000ಕ್ಕೂ ಅಧಿಕ ದಂಡ ಬಾಕಿ ಉಳಿದಿರುವುದು ಪೊಲೀಸರ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

ಸಂಚಾರ ಪೊಲೀಸರ ಮಾಹಿತಿ ಪ್ರಕಾರ, ಈ ಸ್ಕೂಟರ್ ಸವಾರ ನಗರದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಿಯಮ ಉಲ್ಲಂಘಿಸಿದ್ದಾನೆ. ಅದರಲ್ಲೂ ಆಶ್ಚರ್ಯಕರ ಸಂಗತಿಯೆಂದರೆ, ಒಂದೇ ಟ್ರಾಫಿಕ್ ಸಿಗ್ನಲ್‌ನಲ್ಲಿ 102 ಬಾರಿ ಕ್ಯಾಮೆರಾಗೆ ಸಿಕ್ಕಿಬಿದ್ದು ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ.

ಪರಿಶೀಲನೆ ವೇಳೆ ಈ ವಾಹನದ ವಿರುದ್ಧ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕಾಗಿ 141 ಪ್ರಕರಣಗಳು, ಸಿಗ್ನಲ್ ಜಂಪ್ ಮಾಡಿದ 30 ಪ್ರಕರಣಗಳು, ರಾಂಗ್ ರೂಟ್‌ನಲ್ಲಿ ಸಂಚರಿಸಿದ್ದು, ಅನಧಿಕೃತ ಪಾರ್ಕಿಂಗ್ ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಸಿದ ಪ್ರಕರಣಗಳೂ ದಾಖಲಾಗಿವೆ.

ಈ ಎಲ್ಲಾ ಉಲ್ಲಂಘನೆಗಳ ಒಟ್ಟು ದಂಡದ ಮೊತ್ತ ₹96 ಸಾವಿರ ದಾಟಿದ್ದು, ಇದುವರೆಗೂ ಯಾವುದೇ ದಂಡ ಪಾವತಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ರಸ್ತೆ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಇಂತಹ ನಿರಂತರ ಉಲ್ಲಂಘನೆ ಮಾಡುವ ಚಾಲಕರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಅಗತ್ಯವಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ವಾಹನ ಹಾಗೂ ಸವಾರನ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.

Continue Reading

ಸಿನಿಮಾ

ಖ್ಯಾತ ನಟ Pradeep Rawat ನಿಧನ; ‘ಗಜ’, ‘ಗಜಿನಿ’ ಖ್ಯಾತಿಯ ಹಿರಿಯ ಕಲಾವಿದ ಕ್ಯಾನ್ಸರ್‌ಗೆ ಬಲಿ

Published

on

ಮುಂಬೈ: ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಖ್ಯಾತಿ ಗಳಿಸಿದ್ದ ಹಿರಿಯ ನಟ ಪ್ರದೀಪ್ ರಾವತ್ (Pradeep Rawat) ಅವರು 74ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ದುಃಖದ ಸುದ್ದಿಯನ್ನು ನಟ ಯಶ್‌ಪಾಲ್ ಶರ್ಮಾ (Yashpal Sharma) ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಚಿತ್ರರಂಗದ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಭಾವುಕ ಸಂದೇಶ ಬರೆದ ಯಶ್‌ಪಾಲ್ ಶರ್ಮಾ, “ನಮ್ಮ ‘ಗಜಿನಿ’, ‘ಲಾಗಾನ್’ ಚಿತ್ರದ ದೇವಾ ಪ್ರದೀಪ್ ರಾವತ್ ಇನ್ನು ನಮ್ಮೊಂದಿಗಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಬರೆದು ಗೌರವ ನಮನ ಸಲ್ಲಿಸಿದ್ದಾರೆ.

ವರದಿಗಳ ಪ್ರಕಾರ, ಪ್ರದೀಪ್ ರಾವತ್ ಅವರು ದೀರ್ಘಕಾಲದಿಂದ ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ನಂತರ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು. ಆದರೆ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಪ್ರದೀಪ್ ರಾವತ್ ಅವರು ಕನ್ನಡದ ‘ಗಜ’, ತಮಿಳಿನ ‘ಗಜಿನಿ’, ತೆಲುಗಿನ ‘ಸೈ’, ಹಿಂದಿಯ ‘ಲಾಗಾನ್’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಶಕ್ತಿಶಾಲಿ ಖಳನಾಯಕ ಹಾಗೂ ಪ್ರಮುಖ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ವಿಶಿಷ್ಟ ಅಭಿನಯ ಮತ್ತು ಗಂಭೀರ ವ್ಯಕ್ತಿತ್ವ ಭಾರತೀಯ ಚಿತ್ರರಂಗದಲ್ಲಿ ಅವರಿಗೆ ವಿಶೇಷ ಸ್ಥಾನವನ್ನು ತಂದುಕೊಟ್ಟಿತ್ತು.

ಅವರ ನಿಧನದಿಂದ ಭಾರತೀಯ ಚಿತ್ರರಂಗ ಮತ್ತೋರ್ವ ಪ್ರತಿಭಾವಂತ ಕಲಾವಿದರನ್ನು ಕಳೆದುಕೊಂಡಿದ್ದು, ಅಭಿಮಾನಿಗಳು ಮತ್ತು ಸಿನಿತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

Continue Reading

ಬೆಂಗಳೂರು

Bike Taxi ಸೇವೆ ತಕ್ಷಣ ನಿಷೇಧಿಸಿ: ಸಾರಿಗೆ ಆಯುಕ್ತರ ಕಚೇರಿ ಮುಂದೆ ಆಟೋ ಚಾಲಕರ ಬೃಹತ್ ಪ್ರತಿಭಟನೆ

Published

on

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿ (Bike Taxi) ಸೇವೆಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಒತ್ತಾಯಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಒಕ್ಕೂಟ ಸಾರಿಗೆ ಆಯುಕ್ತರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದೆ. ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ನಗರಾದ್ಯಂತ Bengaluru Bandh ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಸಾರಿಗೆ ಆಯುಕ್ತರ ಕಚೇರಿ ಆವರಣದಲ್ಲಿ ನೂರಾರು ಆಟೋ ಹಾಗೂ ಕ್ಯಾಬ್ ಚಾಲಕರು ಸೇರಿ ಪ್ರತಿಭಟನೆ ನಡೆಸಿ, ಆ್ಯಪ್ ಆಧಾರಿತ ಕಂಪನಿಗಳು ನಿಯಮಬಾಹಿರವಾಗಿ ವೈಟ್‌ಬೋರ್ಡ್ ದ್ವಿಚಕ್ರ ವಾಹನಗಳನ್ನು ಪ್ರಯಾಣಿಕರ ಸಾರಿಗೆಗೆ ಬಳಸುತ್ತಿರುವುದರಿಂದ ತಮ್ಮ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.

ಚಾಲಕರ ಸಂಘಟನೆಯ ಮುಖಂಡರು ಮಾತನಾಡಿ, ತಾವು ಸರ್ಕಾರದ ನಿಯಮಗಳಂತೆ ಪರವಾನಗಿ ಪಡೆದು ತೆರಿಗೆ ಪಾವತಿಸಿ ವಾಹನ ಚಲಾಯಿಸುತ್ತಿದ್ದರೂ, ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಬೈಕ್ ಟ್ಯಾಕ್ಸಿಗಳು ರಸ್ತೆಗಿಳಿಯುತ್ತಿರುವುದರಿಂದ ಆಟೋ ಹಾಗೂ ಕ್ಯಾಬ್‌ಗಳಿಗೆ ಬಾಡಿಗೆ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಸಾವಿರಾರು ಚಾಲಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅವರು ಹೇಳಿದರು.

ಪ್ರತಿಭಟನೆ ವೇಳೆ ಮನವಿ ಸ್ವೀಕರಿಸಿದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿಗಳ ವಿರುದ್ಧ ಶೀಘ್ರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಈ ಭರವಸೆಯಿಂದ ತೃಪ್ತರಾಗದ ಚಾಲಕರು, ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ನಗರ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು.

ಇದೇ ವೇಳೆ ಆಟೋ ಹಾಗೂ ಕ್ಯಾಬ್ ಚಾಲಕರು ಸ್ವತಃ ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಗಳೂರು ನಗರದ 11 ಆರ್‌ಟಿಒ ಕಚೇರಿಗಳ ವ್ಯಾಪ್ತಿಯಲ್ಲಿ ವಿಶೇಷ ದಾಳಿ ನಡೆಯುತ್ತಿದ್ದು, ನಿಯಮ ಉಲ್ಲಂಘಿಸಿರುವ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಈ ಕಾರ್ಯಾಚರಣೆ ಒಂದು ವಾರ ಮುಂದುವರಿಯಲಿದ್ದು, ಅಗತ್ಯವಿದ್ದರೆ ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವುದಾಗಿಯೂ ಸಂಘಟನೆಗಳು ಘೋಷಿಸಿವೆ.

Continue Reading

Trending