ಬೆಂಗಳೂರು
‘ನನಗೆ ಸಚಿವ ಸ್ಥಾನ ಕೊಡಲೇಬೇಕು’: M. Krishnappa ಪಟ್ಟು ಸಡಿಲಿಸಿಲ್ಲ; ಕಾಂಗ್ರೆಸ್ ಮನವೊಲಿಕೆ ಮುಂದುವರಿಕೆ
ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ (M. Krishnappa) ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನನಗೆ ಸಚಿವ ಸ್ಥಾನ ನೀಡಲೇಬೇಕು. ಅದನ್ನು ಬಿಟ್ಟು ಬೇರೆ ಯಾವುದೇ ಮಾತುಕತೆಗೆ ಅವಕಾಶವಿಲ್ಲ” ಎಂದು ಅವರು ಖಡಕ್ ಸಂದೇಶ ರವಾನಿಸಿದ್ದಾರೆ.
ಹರಿಪ್ರಸಾದ್ ಜೊತೆ ಮಾತುಕತೆ, ಆದರೆ ನಿಲುವು ಯಥಾಸ್ಥಿತಿ
ಸಚಿವ ಸ್ಥಾನ ಕೈತಪ್ಪಿದ ಬಳಿಕ ಕೃಷ್ಣಪ್ಪ ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ D.K.Shivkumar, ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ B.K.Hari Prasad ಭೇಟಿ ನೀಡಿ ಮಾತುಕತೆ ನಡೆಸಿದರು. ಆದರೆ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷ್ಣಪ್ಪ, “ಸಚಿವ ಸ್ಥಾನ ನೀಡುವುದನ್ನು ಬಿಟ್ಟು ಬೇರೆ ಯಾವುದೇ ಚರ್ಚೆಗೆ ಆಸ್ಪದವಿಲ್ಲ. ನನಗೆ ಕೂಡಲೇ ಸಚಿವ ಸ್ಥಾನ ನೀಡಬೇಕು” ಎಂದು ಪುನರುಚ್ಚರಿಸಿದರು.
‘ನಾಯಕರು ಸ್ನೇಹಿತರು, ಆದರೆ ಸಚಿವ ಸ್ಥಾನ ಬೇಕು’
“ನಾಯಕರು ಮನೆಗೆ ಬಂದು ಹೋಗುವುದು ಸಹಜ. ಅವರೆಲ್ಲರೂ ನಮ್ಮ ಸ್ನೇಹಿತರು. ಆದರೆ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಈಗಲೂ ಅದನ್ನು ತಕ್ಷಣ ನೀಡಬೇಕು ಎಂಬುದೇ ನನ್ನ ಬೇಡಿಕೆ” ಎಂದು ಕೃಷ್ಣಪ್ಪ ಹೇಳಿದರು.
ರಾಹುಲ್ ಗಾಂಧಿ ಮಾತನಾಡಲಿದ್ದಾರೆ: ಹರಿಪ್ರಸಾದ್
ಕೃಷ್ಣಪ್ಪ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಬಿ.ಕೆ. ಹರಿಪ್ರಸಾದ್, “ನಮ್ಮಿಬ್ಬರಿಗೂ 45-50 ವರ್ಷಗಳ ಆತ್ಮೀಯ ಸಂಬಂಧವಿದೆ. ಹಿರಿಯ ನಾಯಕರಿಗೆ ಸ್ಥಾನಮಾನ ಸಿಗದಿದ್ದಾಗ ಬೇಸರವಾಗುವುದು ಸಹಜ. ಅವರ ನೋವನ್ನು ಈಗಾಗಲೇ ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗಿದೆ” ಎಂದು ಹೇಳಿದರು.
“ಇನ್ನೂ ಕೆಲವೇ ದಿನಗಳಲ್ಲಿ ರಾಹುಲ್ ಗಾಂಧಿಯವರೇ ನೇರವಾಗಿ ಕೃಷ್ಣಪ್ಪ ಅವರೊಂದಿಗೆ ಮಾತನಾಡಿ ಸಮಾಧಾನಪಡಿಸಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಅವರು ತಿಳಿಸಿದರು.
‘ಪಕ್ಷಕ್ಕೆ ಯಾವುದೇ ಧಕ್ಕೆ ಆಗದಂತೆ ನಡೆದುಕೊಂಡಿದ್ದಾರೆ’
ಸಚಿವ ಸ್ಥಾನ ಸಿಗದಿದ್ದರೂ ಕೃಷ್ಣಪ್ಪ ಅವರು ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ನಡೆದುಕೊಂಡಿದ್ದಾರೆ ಎಂದು ಹರಿಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.
“ಅವರಿಗೆ ಯಾವ ಸ್ಥಾನಮಾನ ಅಥವಾ ಜವಾಬ್ದಾರಿ ನೀಡಬೇಕು ಎಂಬುದನ್ನು ರಾಹುಲ್ ಗಾಂಧಿಯವರೇ ನಿರ್ಧರಿಸಲಿದ್ದಾರೆ. ರಾಜಕೀಯವು ಸಾಧ್ಯತೆಗಳ ಆಟ. ಯಾವಾಗ ಏನು ಬೇಕಾದರೂ ಆಗಬಹುದು. ಆದ್ದರಿಂದ ಎಲ್ಲರೂ ಸಕಾರಾತ್ಮಕವಾಗಿರಬೇಕು” ಎಂದು ಅವರು ಹೇಳಿದರು.
ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆಯ ಬಳಿಕ ಉಂಟಾಗಿರುವ ಅಸಮಾಧಾನವನ್ನು ಶಮನಗೊಳಿಸಲು ಪಕ್ಷದ ಹಿರಿಯ ನಾಯಕರು ನಡೆಸುತ್ತಿರುವ ಮನವೊಲಿಕೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗಳು ಯಾವ ತಿರುವು ಪಡೆಯಲಿವೆ ಎಂಬುದರ ಮೇಲೆ ರಾಜಕೀಯ ವಲಯದ ಗಮನ ನೆಟ್ಟಿದೆ.
ರಾಜ್ಯ
ವಿಧಾನಸೌಧದಲ್ಲಿ Gayathri Shanthegowda ಅಧಿಕಾರ ಸ್ವೀಕಾರ; ರಾಜಕೀಯ ವಲಯದಲ್ಲಿ ಸಂಚಲನ
ಬೆಂಗಳೂರು: ಸುದೀರ್ಘ ಕಾನೂನು ಹೋರಾಟದಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ನಾಯಕಿ ಎ.ವಿ. ಗಾಯತ್ರಿ ಶಾಂತೇಗೌಡ (Gayathri Shanthegowda) ಅವರು ಇಂದು ಕರ್ನಾಟಕ ವಿಧಾನ ಪರಿಷತ್ (MLC) ಸದಸ್ಯೆಯಾಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನ ಬೆನ್ನಲ್ಲೇ ನಡೆದ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವಿಧಾನಸೌಧದಲ್ಲಿ ನಡೆದ ಪ್ರಮಾಣವಚನ ಸಮಾರಂಭ
ಬೆಂಗಳೂರಿನ ವಿಧಾನಸೌಧದ ಸಭಾಪತಿಯವರ ಕಚೇರಿ (ಕೊಠಡಿ ಸಂಖ್ಯೆ-117) ಯಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ನಡೆದ ವಿಶೇಷ ಸಮಾರಂಭದಲ್ಲಿ ಸಭಾಪತಿಯವರು ಗಾಯತ್ರಿ ಶಾಂತೇಗೌಡ ಅವರಿಗೆ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಹಲವು ಶಾಸಕರು, ಜನಪ್ರತಿನಿಧಿಗಳು, ಬೆಂಬಲಿಗರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು, ನೂತನ ಸದಸ್ಯೆಗೆ ಅಭಿನಂದನೆ ಸಲ್ಲಿಸಿದರು.
ಏನಿದು ಪ್ರಕರಣ?
ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಕೇವಲ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಆದರೆ, ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿರುವುದನ್ನು ಪ್ರಶ್ನಿಸಿ ಗಾಯತ್ರಿ ಶಾಂತೇಗೌಡ ಅವರು ಮೊದಲು ಕರ್ನಾಟಕ ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟ ಆರಂಭಿಸಿದ್ದರು.
ಹೈಕೋರ್ಟ್ ಗಾಯತ್ರಿ ಶಾಂತೇಗೌಡ ಪರ ತೀರ್ಪು ನೀಡಿದ ಬಳಿಕ, ಅದನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸುಮಾರು ಮೂರೂವರೆ ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಗಾಯತ್ರಿ ಶಾಂತೇಗೌಡ ಅವರ ವಾದವನ್ನು ಮಾನ್ಯ ಮಾಡಿದ್ದು, ಎಂ.ಕೆ. ಪ್ರಾಣೇಶ್ ಅವರ ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದುಗೊಳಿಸಿದೆ.
ಈ ತೀರ್ಪಿನ ಪರಿಣಾಮವಾಗಿ ಉಳಿದಿರುವ ಸುಮಾರು ಒಂದೂವರೆ ವರ್ಷದ ಅವಧಿಗೆ ಗಾಯತ್ರಿ ಶಾಂತೇಗೌಡ ಅವರು ನೂತನ ವಿಧಾನ ಪರಿಷತ್ ಸದಸ್ಯೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ರಾಜಕೀಯ ವಲಯದಲ್ಲಿ ಚರ್ಚೆ
ಕಾನೂನು ಸಮರದ ಮೂಲಕ ಸದಸ್ಯತ್ವ ಪಡೆದುಕೊಂಡಿರುವ ಗಾಯತ್ರಿ ಶಾಂತೇಗೌಡ ಅವರ ಪ್ರಮಾಣವಚನ ಕಾರ್ಯಕ್ರಮ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ. ಕಾರ್ಯಕರ್ತರು ಹಾಗೂ ಬೆಂಬಲಿಗರು ಅವರಿಗೆ ಶುಭಾಶಯ ಕೋರಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ
ಸಭಾಪತಿ ಸ್ಥಾನಕ್ಕೆ Basavaraj Horatti ರಾಜೀನಾಮೆ: ಡಿಕೆ ಶಿವಕುಮಾರ್ ಭೇಟಿ ಬಳಿಕ ರಾಜಕೀಯ ಚರ್ಚೆ ತೀವ್ರ
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರು ಆಗಸ್ಟ್ 14ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರನ್ನು ಭೇಟಿ ಮಾಡಿ ಮಹತ್ವದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಯವರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ ಹೊರಟ್ಟಿ, ರಾಜ್ಯ ರಾಜಕೀಯ ಹಾಗೂ ವಿಧಾನ ಪರಿಷತ್ನ ಮುಂದಿನ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಗೌರವಯುತವಾಗಿ ಸ್ಥಾನ ತೊರೆಯುವ ನಿರ್ಧಾರ
ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ಗೆ ಸಂಖ್ಯಾಬಲ ಹೆಚ್ಚಿರುವ ಹಿನ್ನೆಲೆಯಲ್ಲಿ, ಸಭಾಪತಿ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್ ಅವರನ್ನು ಆಯ್ಕೆ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಾನ ಬಿಟ್ಟುಕೊಡುವಂತೆ ಹೊರಟ್ಟಿಗೆ ಮನವಿ ಮಾಡಲಾಗಿತ್ತು ಎನ್ನಲಾಗಿದೆ.
ಅವಿಶ್ವಾಸ ನಿರ್ಣಯವನ್ನು ಎದುರಿಸಿ ಸದನದ ಘನತೆಗೆ ಧಕ್ಕೆ ತರುವ ಬದಲು ಗೌರವಯುತವಾಗಿ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿರುವುದಾಗಿ ಹೊರಟ್ಟಿ ತಿಳಿಸಿದ್ದಾರೆ.
ರಾಜೀನಾಮೆಗೆ ಮುನ್ನ ಸದನದಲ್ಲೇ ಹೇಳಿಕೆ
ಸಭಾಪತಿ ಸ್ಥಾನದಿಂದ ಕೆಳಗಿಳಿಯುವ ಮೊದಲು, ತಮ್ಮ ರಾಜೀನಾಮೆಗೆ ಕಾರಣವಾದ ರಾಜಕೀಯ ಸನ್ನಿವೇಶಗಳು ಹಾಗೂ ಶಾಸಕಾಂಗದ ಪರಂಪರೆಯ ಬಗ್ಗೆ ವಿಧಾನ ಪರಿಷತ್ ಅಧಿವೇಶನದಲ್ಲೇ ವಿವರವಾಗಿ ಮಾತನಾಡುವುದಾಗಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಬಳಿಕ ಅವರು ಅಧಿಕೃತವಾಗಿ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ.
ಸಲೀಂ ಅಹ್ಮದ್, ಉಮಾಶ್ರೀಗೆ ಹೊಸ ಜವಾಬ್ದಾರಿ?
ಮೂಲಗಳ ಪ್ರಕಾರ, ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಹಾಗೂ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾಗಿದೆ. ಈ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ವಿಧಾನ ಪರಿಷತ್ನಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ.
ರಾಜ್ಯ
Cabinet Expansion ವಿಸ್ತರಣೆ ಬಳಿಕ ಜಮೀರ್ ಮಾತು ವೈರಲ್: ‘ಬೆಳೆಯುವವರನ್ನು ಮುಗಿಸಲು ಯತ್ನ’
ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್ರಚನೆ (Cabinet Expansion) ಮತ್ತು ರಾಜಕೀಯ ಬೆಳವಣಿಗೆಗಳ ನಡುವೆಯೇ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜಕೀಯದಲ್ಲಿ ಬೆಳೆಯುತ್ತಿರುವ ನಾಯಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, “ಯಾರಾದರೂ ರಾಜಕೀಯವಾಗಿ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಗೊತ್ತಾದಾಗ ಅವರನ್ನು ಮುಗಿಸಲು ಪ್ರಯತ್ನಗಳು ನಡೆಯುತ್ತವೆ. ನನ್ನ ವಿಚಾರದಲ್ಲೂ ಹಾಗೆಯೇ ಆಗಿದೆ. ಸಚಿವ ಬಿ. ನಾಗೇಂದ್ರ ಅವರ ವಿಚಾರದಲ್ಲೂ ಇದೇ ರೀತಿಯ ಬೆಳವಣಿಗೆ ನಡೆದಿದೆ” ಎಂದು ಅಭಿಪ್ರಾಯಪಟ್ಟರು.
ಸಚಿವ ಸ್ಥಾನ ಸಿಗದಿದ್ದರೆ ಅಸಮಾಧಾನ ಸಹಜ
ಸಂಪುಟ ಪುನರ್ರಚನೆ ಹಿನ್ನೆಲೆಯಲ್ಲಿ ಕೆಲ ಶಾಸಕರು ವ್ಯಕ್ತಪಡಿಸುತ್ತಿರುವ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನ ಸಿಗದಾಗ ಅಸಮಾಧಾನ ವ್ಯಕ್ತವಾಗುವುದು ಸಹಜ ಎಂದರು.
“ಆ ಅಸಮಾಧಾನವನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಅಗತ್ಯವಿಲ್ಲ. ಪ್ರತಿಯೊಬ್ಬ ಶಾಸಕರಿಗೂ ತಮ್ಮದೇ ಆದ ನಿರೀಕ್ಷೆಗಳಿರುತ್ತವೆ. ಅವಕಾಶ ಸಿಗದಿದ್ದರೆ ಬೇಸರ ವ್ಯಕ್ತಪಡಿಸುವುದು ಸಹಜ” ಎಂದು ಅವರು ಹೇಳಿದರು.
‘ಹಣ ಕೊಟ್ಟರೆ ಸಚಿವ ಸ್ಥಾನ’ ಆರೋಪಕ್ಕೆ ಸ್ಪಷ್ಟನೆ
ಇತ್ತೀಚೆಗೆ ಕೆಲ ಕಾಂಗ್ರೆಸ್ ಶಾಸಕರು ‘ಹೈಕಮಾಂಡ್ಗೆ ಹಣ ಕೊಟ್ಟರೆ ಸಚಿವ ಸ್ಥಾನ ಸಿಗುತ್ತದೆ’ ಎಂಬ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ಖಾನ್, ಆ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.
“ಇಂತಹ ಮಾತುಗಳು ಕೇವಲ ಊಹಾಪೋಹಗಳು. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಹಣದ ಪಾತ್ರವಿದೆ ಎನ್ನುವುದು ಸರಿಯಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ನಲ್ಲಿ ಮೂಡಿರುವ ಅಸಮಾಧಾನದ ನಡುವೆ ಜಮೀರ್ ಅಹ್ಮದ್ ಖಾನ್ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
-
ದೇಶ22 ಗಂಟೆಗಳು ago135 ವರ್ಷ ಹಳೆಯ ಬ್ಯಾಂಕಿಂಗ್ ಕಾನೂನು ರದ್ದು! ಲೋಕಸಭೆಯಲ್ಲಿ ‘Bankers’ Books Evidence Bill 2026’ ಅಂಗೀಕಾರ
-
ಆರೋಗ್ಯ22 ಗಂಟೆಗಳು agoCancer ರೋಗಿಗಳಿಗೆ ಗುಡ್ ನ್ಯೂಸ್! ಬೆಂಗಳೂರಿನಲ್ಲಿ ವಿಶ್ವದ ಅತ್ಯಾಧುನಿಕ MR-Linac ಚಿಕಿತ್ಸೆ ಆರಂಭ
-
ರಾಜ್ಯ22 ಗಂಟೆಗಳು ago‘ನಾನು DK Shivakumar ಮನೆಮಗ, ಶಿವನ ಮುಂದೆ ಇರುವ ಬಸವ ನಾನು’ : ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ವೈರಲ್
-
ಆರೋಗ್ಯ22 ಗಂಟೆಗಳು agoChandipura Virus ಎಚ್ಚರಿಕೆ: ಮಕ್ಕಳಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ!
-
ಬೆಂಗಳೂರು4 ಗಂಟೆಗಳು agoBengaluru ಗೆ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರ ಪುರಪ್ರವೇಶ ಇಂದು: ಚಾಮರಾಜಪೇಟೆಯಲ್ಲಿ ಭವ್ಯ ಮೆರವಣಿಗೆ
-
ಅಪರಾಧ5 ಗಂಟೆಗಳು agoB Khata A Khata ಪರಿವರ್ತನೆಗೆ ₹40 ಸಾವಿರ ಲಂಚ ಬೇಡಿಕೆ ಆರೋಪ! GBA ಕಚೇರಿಯಲ್ಲಿ ಸಾರ್ವಜನಿಕರ ಆಕ್ರೋಶ, ವೈರಲ್ ವಿಡಿಯೋ
-
ದೇಶ3 ಗಂಟೆಗಳು ago‘BJP ಯಲ್ಲಿ ನನಗೆ ಇಷ್ಟದ ನಾಯಕ ಇವರೇ’ ಎಂದ ರಾಹುಲ್ ಗಾಂಧಿ; ಹೆಸರು ಕೇಳಿ ಎಲ್ಲರೂ ಶಾಕ್!
-
ದೇಶ22 ಗಂಟೆಗಳು agoKochi ವಿಮಾನದಲ್ಲಿ ಭಯಾನಕ ಕ್ಷಣ! ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಭಾರತೀಯನ ವಿರುದ್ಧ ಪ್ರಕರಣ
