ಬೆಂಗಳೂರು
BDA ಮಹತ್ವದ ನಿರ್ಧಾರ: ಗಿನ್ನೆಸ್ ದಾಖಲೆ ಸಸಿಗಳಿಗಾಗಿ ವಿಶೇಷ ವೆಬ್ ಪೋರ್ಟಲ್, GPS ಮೂಲಕ ಟ್ರ್ಯಾಕಿಂಗ್!
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಗಿನ್ನೆಸ್ ವಿಶ್ವ ದಾಖಲೆಗಾಗಿ ನೆಟ್ಟಿರುವ ಲಕ್ಷಾಂತರ ಸಸಿಗಳ ನಿರ್ವಹಣೆ ಮತ್ತು ಬೆಳವಣಿಗೆಯ ಮೇಲೆ ನಿಗಾ ಇಡಲು ವಿಶೇಷ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲು ಮುಂದಾಗಿದೆ. ಬೃಹತ್ ಸಸಿ ನೆಡುವ ಅಭಿಯಾನದ ಬಳಿಕ ಗಿಡಗಳ ನಿರ್ವಹಣೆ ಕುರಿತು ಸಾರ್ವಜನಿಕರಿಂದ ದೂರುಗಳು ಮತ್ತು ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ನೂತನ ಪೋರ್ಟಲ್ನಲ್ಲಿ ಪ್ರತಿಯೊಂದು ಸಸಿ ನೆಟ್ಟಿರುವ ಸ್ಥಳದ GPS ಮಾಹಿತಿ, ವಾರಕ್ಕೊಮ್ಮೆ ನವೀಕರಿಸುವ ನಿರ್ವಹಣಾ ದಾಖಲೆಗಳು ಹಾಗೂ ಗಿಡಗಳ ಪ್ರಸ್ತುತ ಆರೋಗ್ಯದ ಸ್ಥಿತಿಯನ್ನು ದಾಖಲಿಸಲಾಗುತ್ತದೆ. ಆಯಾ ಪ್ರದೇಶಗಳಲ್ಲಿನ ಸಸಿಗಳ ನಿರ್ವಹಣೆಯ ಹೊಣೆ ಹೊತ್ತಿರುವ NGOಗಳ ವಿವರಗಳನ್ನೂ ಪೋರ್ಟಲ್ನಲ್ಲಿ ಪ್ರಕಟಿಸಲಾಗುತ್ತದೆ.
ಇದರಿಂದ ಅಭಿಯಾನದಲ್ಲಿ ಭಾಗವಹಿಸಿ ಸಸಿ ನೆಟ್ಟಿರುವ ನಾಗರಿಕರು ತಮ್ಮ ಗಿಡದ ಪ್ರಸ್ತುತ ಸ್ಥಿತಿ ಹಾಗೂ ಬೆಳವಣಿಗೆಯನ್ನು ಆನ್ಲೈನ್ನಲ್ಲೇ ಪರಿಶೀಲಿಸಬಹುದು.
ಗಿಡಗಳ ನಿರ್ವಹಣೆ ಬಗ್ಗೆ ದೂರು ನೀಡಲು ಅವಕಾಶ
ಪೋರ್ಟಲ್ ಕೇವಲ ಮಾಹಿತಿ ನೀಡುವ ವೇದಿಕೆಯಾಗಿರುವುದಿಲ್ಲ. ಸಸಿ ನಿರ್ವಹಣೆ ಸರಿಯಾಗಿ ನಡೆಯದಿದ್ದರೆ ಸಾರ್ವಜನಿಕರು ಆನ್ಲೈನ್ ಮೂಲಕವೇ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಇದರ ಜತೆಗೆ, ಸಸಿ ನೆಟ್ಟ ಪ್ರದೇಶಗಳನ್ನು ದತ್ತು ಪಡೆಯಲು ಬಯಸುವ ಸಂಸ್ಥೆಗಳು, ಸ್ಥಳೀಯ ತಳಿಯ ಸಸಿಗಳು ಅಥವಾ ಗೊಬ್ಬರವನ್ನು ದೇಣಿಗೆಯಾಗಿ ನೀಡಲು ಇಚ್ಛಿಸುವವರು ಹಾಗೂ ಶಾಲೆಗಳ ಶೈಕ್ಷಣಿಕ ಪ್ರವಾಸಕ್ಕಾಗಿ ಸಸಿ ನೆಟ್ಟ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರಿಗೂ ಪೋರ್ಟಲ್ ಮೂಲಕ ಅವಕಾಶ ಕಲ್ಪಿಸುವ ಯೋಜನೆ ಇದೆ.
12 ಗಂಟೆಯಲ್ಲಿ 15 ಲಕ್ಷಕ್ಕೂ ಹೆಚ್ಚು ಸಸಿ ನೆಟ್ಟು ದಾಖಲೆ
ಕಳೆದ ಜುಲೈನಲ್ಲಿ BDA ಕೇವಲ 12 ಗಂಟೆಗಳ ಅವಧಿಯಲ್ಲಿ 15 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿತ್ತು. ಆದರೆ ದಾಖಲೆ ನಿರ್ಮಿಸುವುದಷ್ಟೇ ಉದ್ದೇಶವಲ್ಲ, ನೆಟ್ಟ ಸಸಿಗಳನ್ನು ಹಲವು ವರ್ಷಗಳ ಕಾಲ ಸಂರಕ್ಷಿಸಿ ಬೆಂಗಳೂರಿನ ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BDAಯ ಈ ನಿರ್ಧಾರವನ್ನು ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ. ಇದೇ ರೀತಿಯ ದೊಡ್ಡ ಪ್ರಮಾಣದ ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿರುವ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಸೇರಿದಂತೆ ಇತರ ಸರ್ಕಾರಿ ಸಂಸ್ಥೆಗಳೂ ಸಸಿಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಇಂತಹ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
ರಾಜ್ಯ
ಅಧಿಕಾರ ವಾಪಸ್ ಪಡೆದರೂ ಸಿಎಂ ಮಾತಿಗೆ ತಲೆಬಾಗುತ್ತೇನೆ: ಸಚಿವ Magadi Balakrishna
ಬೆಂಗಳೂರು: ಅಧಿಕಾರ ಹಂಚಿಕೆ ಹಾಗೂ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಚರ್ಚೆಗಳ ನಡುವೆ ಸಚಿವ Magadi Balakrishna ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಯಾವುದೇ ತೀರ್ಮಾನ ಕೈಗೊಂಡರೂ ಪಕ್ಷದ ಹಿತದೃಷ್ಟಿಯಿಂದ ಅದಕ್ಕೆ ತಲೆಬಾಗುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕೃಷ್ಣ, “ನಮಗೆ ಅಧಿಕಾರ ಕೊಟ್ಟವರು ಯಾರು? ಮುಖ್ಯಮಂತ್ರಿಗಳು. ಅವರು ಏನೇ ತೀರ್ಮಾನ ತೆಗೆದುಕೊಂಡರೂ ಪಕ್ಷದ ಹಿತದೃಷ್ಟಿಯಿಂದ ನಾವು ತಲೆಬಾಗುತ್ತೇವೆ. ಮುಖ್ಯಮಂತ್ರಿ ಹೇಳಿದಂತೆ ನಾವು ಕೇಳುತ್ತೇವೆ” ಎಂದು ಹೇಳಿದ್ದಾರೆ.
ಎಂ. ಕೃಷ್ಣಪ್ಪ ಸಚಿವ ಸ್ಥಾನಕ್ಕೆ ಪಟ್ಟು
ಎಂ. ಕೃಷ್ಣಪ್ಪ ಅವರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಕುರಿತು ಪ್ರತಿಕ್ರಿಯಿಸಿದ ಬಾಲಕೃಷ್ಣ, ಕೃಷ್ಣಪ್ಪ ಅವರು ಪಕ್ಷದ ಪ್ರಮುಖ ಹಾಗೂ ಪ್ರಭಾವಿ ನಾಯಕರಾಗಿದ್ದಾರೆ ಎಂದು ಹೇಳಿದರು.
“ನಮ್ಮ ಪಕ್ಷದಲ್ಲಿ 100ಕ್ಕೂ ಹೆಚ್ಚು ಪವರ್ಫುಲ್ ಶಾಸಕರಿದ್ದಾರೆ. ಆದರೆ ಸಚಿವ ಸ್ಥಾನ ನೀಡಲು 33 ಮಂದಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಎಲ್ಲರೂ ಹೊಂದಿಕೊಂಡು ಹೋಗಬೇಕಾಗಿದೆ. ಇಂದು ಏನಾದರೂ ತಪ್ಪಾಗಿದ್ದರೆ ಮುಂದೆ ಒಳ್ಳೆಯ ಅವಕಾಶ ಬರಬಹುದು ಎಂಬ ಭಾವನೆಯಿಂದ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.
ಸಚಿವ ಸ್ಥಾನ ಸೇರಿದಂತೆ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಅಂತಿಮ ತೀರ್ಮಾನವನ್ನು ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಕೈಗೊಳ್ಳಲಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.
ಜೆಡಿಎಸ್ ಪಾದಯಾತ್ರೆಗೆ ಟಾಂಗ್
ಇದೇ ವೇಳೆ ಜೆಡಿಎಸ್ ಪಾದಯಾತ್ರೆ ಕುರಿತು ಮಾತನಾಡಿದ ಸಚಿವ ಬಾಲಕೃಷ್ಣ, ಇದು ಪಾದಯಾತ್ರೆಯಲ್ಲ, “ಪ್ರಾಯಶ್ಚಿತ್ತ ಯಾತ್ರೆ” ಎಂದು ವ್ಯಂಗ್ಯವಾಡಿದರು.
ಪಾದಯಾತ್ರೆಯಲ್ಲಿ ಭಾಗವಹಿಸುವವರು ಆ ಭಾಗದ ರೈತರಲ್ಲ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮಾತ್ರ ಭಾಗವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಿಡದಿ ಟೌನ್ಶಿಪ್ ಯೋಜನೆ ಕುರಿತು ವಾಗ್ದಾಳಿ
ಬಿಡದಿ ಟೌನ್ಶಿಪ್ ಯೋಜನೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲೇ ಆರಂಭವಾಗಿತ್ತು ಎಂದು ಬಾಲಕೃಷ್ಣ ಹೇಳಿದರು. ಕುಮಾರಸ್ವಾಮಿ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಯೋಜನೆಯನ್ನು ಕೈಬಿಡಬಹುದಿತ್ತು. ಆದರೆ ಸ್ಥಳೀಯ ರೈತರು ಮನವಿ ಮಾಡಿದ ಸಂದರ್ಭದಲ್ಲಿ ಇದನ್ನು ತಮ್ಮ ಕನಸಿನ ಕೂಸು ಎಂದು ಹೇಳಿ ಯೋಜನೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದರು ಎಂದು ಅವರು ಆರೋಪಿಸಿದರು.
ಈಗ ರೈತರ ಒತ್ತಾಯದ ಹಿನ್ನೆಲೆಯಲ್ಲಿ ಸರ್ಕಾರದ ಷೇರಿಂಗ್ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ. ಹಿಂದೆ ನೀಡಲಾಗುತ್ತಿದ್ದ ಮೊತ್ತಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡಲು ತೀರ್ಮಾನಿಸಲಾಗಿದ್ದು, ಕೆಲವು ರೈತರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲು ಮುಖ್ಯಮಂತ್ರಿ ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.
ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಬೆಂಗಳೂರು
Jnanabharathi ಕ್ಯಾಂಪಸ್ನಲ್ಲಿ ಸಾರ್ವಜನಿಕ ವಾಹನಗಳಿಗೆ ಬ್ರೇಕ್: ವಿದ್ಯಾರ್ಥಿನಿ ಸಾವಿನ ಬಳಿಕ ಮಹತ್ವದ ನಿರ್ಧಾರ
ಬೆಂಗಳೂರು: ಬೆಂಗಳೂರಿನ Jnanabharathi ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮಹತ್ವದ ಕ್ರಮ ಕೈಗೊಂಡಿದೆ. ಕ್ಯಾಂಪಸ್ನ ಗಾಂಧಿ ರಸ್ತೆಯಲ್ಲಿ ಶೀಘ್ರದಲ್ಲೇ ಸಾರ್ವಜನಿಕರ ವಾಹನ ಸಂಚಾರ ಹಾಗೂ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ತೀರ್ಮಾನಿಸಲಾಗಿದೆ.
ಇತ್ತೀಚೆಗೆ ಜ್ಞಾನಭಾರತಿ ಆವರಣದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೃಶ್ಯಕಲೆ ವಿಭಾಗದ ವಿದ್ಯಾರ್ಥಿನಿ ಮಾನಸಾ ಅಕಾಲಿಕವಾಗಿ ಮೃತಪಟ್ಟಿದ್ದರು. ಈ ಘಟನೆ ವಿದ್ಯಾರ್ಥಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಕ್ಯಾಂಪಸ್ನೊಳಗೆ ಸಾರ್ವಜನಿಕ ವಾಹನಗಳ ಪ್ರವೇಶವನ್ನು ನಿಷೇಧಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು.
ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಸುರಕ್ಷತಾ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯ ಆಡಳಿತ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಕುಲಪತಿಗಳ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಶಾಂತಿಯುತ ವಾತಾವರಣ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಸಾರ್ವಜನಿಕ ವಾಹನಗಳ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸುವ ಮುನ್ನ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ, ತಾತ್ಕಾಲಿಕವಾಗಿ ಏಕಮುಖ ಸಂಚಾರ ವ್ಯವಸ್ಥೆ, ಸಿಸಿಟಿವಿ ಕಣ್ಗಾವಲು ಹಾಗೂ ಪಾದಚಾರಿ ಮಾರ್ಗಗಳ ಸುಧಾರಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದರ ಜೊತೆಗೆ ಕ್ಯಾಂಪಸ್ನಲ್ಲಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಹಾಗೂ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕ್ಯಾಂಪಸ್ ಪ್ರವೇಶ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ.
ಜ್ಞಾನಭಾರತಿ ಆವರಣದಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿಯಂತ್ರಣದಿಂದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗಲಿದೆ ಎಂದು ವಿಶ್ವವಿದ್ಯಾಲಯ ಆಡಳಿತ ನಿರೀಕ್ಷಿಸಿದೆ.
ರಾಜ್ಯ
Private School Admission: ಡೊನೇಷನ್ ಪಡೆದರೆ 10 ಪಟ್ಟು ದಂಡ! ಶಿಕ್ಷಣ ಇಲಾಖೆ ಖಡಕ್ ಎಚ್ಚರಿಕೆ
ಬೆಂಗಳೂರು: ರಾಜ್ಯದ ಖಾಸಗಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ (Private School Admission) ಸಂದರ್ಭದಲ್ಲಿ ಕಾನೂನುಬಾಹಿರವಾಗಿ ಡೊನೇಷನ್ ಅಥವಾ ಕ್ಯಾಪಿಟೇಷನ್ ಶುಲ್ಕ ವಸೂಲಿ ಮಾಡುವುದಕ್ಕೆ ಶಾಲಾ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕಡಿವಾಣ ಹಾಕಿದೆ.
ಪೋಷಕರಿಂದ ಅಕ್ರಮವಾಗಿ ಡೊನೇಷನ್ ಪಡೆದಿರುವುದು ಸಾಬೀತಾದರೆ, ಶಾಲೆಗಳಿಂದ ವಸೂಲಿ ಮಾಡಿದ ಮೊತ್ತದ 10 ಪಟ್ಟು ದಂಡ ವಿಧಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಎಚ್ಚರಿಕೆ ನೀಡಿದ್ದಾರೆ.
ಡೊನೇಷನ್ ಪಡೆದರೆ 10 ಪಟ್ಟು ದಂಡ
ಖಾಸಗಿ ಶಾಲೆಗಳು ಪ್ರವೇಶಾತಿ ಹೆಸರಿನಲ್ಲಿ ಪೋಷಕರಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಹಣವನ್ನು ಡೊನೇಷನ್ ಅಥವಾ ಕ್ಯಾಪಿಟೇಷನ್ ಶುಲ್ಕದ ರೂಪದಲ್ಲಿ ಪಡೆಯುವಂತಿಲ್ಲ. ನಿಯಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಹಣ ಸಂಗ್ರಹಿಸಿರುವುದು ದೃಢಪಟ್ಟರೆ, ಸಂಗ್ರಹಿಸಿದ ಮೊತ್ತದ 10 ಪಟ್ಟು ದಂಡ ವಿಧಿಸಲಾಗುತ್ತದೆ.
ಇದರಿಂದಾಗಿ ಪ್ರವೇಶಾತಿ ಸಂದರ್ಭದಲ್ಲಿ ಹೆಚ್ಚುವರಿ ಹಣಕ್ಕೆ ಒತ್ತಾಯಿಸುವ ಶಾಲೆಗಳ ವಿರುದ್ಧ ಪೋಷಕರು ದೂರು ನೀಡಲು ಅವಕಾಶವಿದೆ.
Admission Test, Interviewಗೂ ನಿಷೇಧ
ಇದರ ಜತೆಗೆ ಖಾಸಗಿ ಶಾಲೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಅಥವಾ ಪೋಷಕರಿಗೆ ಸಂದರ್ಶನ ನಡೆಸುವುದು ಹಾಗೂ ಪ್ರವೇಶ ಪರೀಕ್ಷೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ನಿಯಮವನ್ನು ಮೊದಲ ಬಾರಿಗೆ ಉಲ್ಲಂಘಿಸಿದರೆ ₹25,000 ದಂಡ ವಿಧಿಸಲಾಗುತ್ತದೆ. ಅದೇ ತಪ್ಪು ಪುನರಾವರ್ತನೆಯಾದರೆ ₹50,000 ದಂಡ ವಿಧಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
SATSನಲ್ಲಿ ಶುಲ್ಕ ವಿವರ ಪ್ರಕಟಿಸಬೇಕು
ಪ್ರತಿಯೊಂದು ಖಾಸಗಿ ಶಾಲೆಯೂ ತನ್ನಲ್ಲಿ ಜಾರಿಯಲ್ಲಿರುವ ನಿಗದಿತ ಶುಲ್ಕದ ಸಂಪೂರ್ಣ ವಿವರಗಳನ್ನು ಶಾಲೆಯ ನೋಟಿಸ್ ಬೋರ್ಡ್ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಜೊತೆಗೆ SATS ತಂತ್ರಾಂಶದಲ್ಲಿಯೂ ಶುಲ್ಕದ ಮಾಹಿತಿಯನ್ನು ದಾಖಲಿಸಬೇಕು.
ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಶಾಲಾ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಪೋಷಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳದಂತೆ ತಡೆಯುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
-
ರಾಜ್ಯ21 ಗಂಟೆಗಳು agoFoot Path ತೆರವುಗೊಳಿಸಿ, ಇಲ್ಲದಿದ್ದರೆ ಕಾನೂನು ಕ್ರಮ: ವ್ಯಾಪಾರಿಗಳಿಗೆ ಎಚ್ಚರಿಕೆ
-
ಸಿನಿಮಾ21 ಗಂಟೆಗಳು ago‘The Paradise’ ಟೀಸರ್ ಔಟ್: ಜಡಾಲ್ ಆಗಿ ನಾನಿಯ ರೌದ್ರಾವತಾರ ವೈರಲ್
-
ರಾಜ್ಯ21 ಗಂಟೆಗಳು agoGruha Lakshmi Update: ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆರಂಭ
-
ದೇಶ22 ಗಂಟೆಗಳು ago‘FIFA World Cup 2026’ ವಾಟ್ಸಾಪ್ ಗ್ರೂಪ್ನಿಂದ ಬಯಲಾಯ್ತು NEET ಪ್ರಶ್ನೆಪತ್ರಿಕೆ ಸೋರಿಕೆ!
-
ರಾಜ್ಯ22 ಗಂಟೆಗಳು agoSiddaramaiah ವಿರುದ್ಧ ಪ್ರತಾಪ್ ಸಿಂಹ ಕಿಡಿ: ‘ಮಗನಿಗಾಗಿ ಎಲ್ಲರ ರಾಜಕೀಯ ಮುಗಿಸಿದರು’
-
ರಾಜ್ಯ24 ಗಂಟೆಗಳು agoCauvery ನೀರಿನ ಕದನ: ಸದನದಲ್ಲಿ ವಿಜಯ್ Vs ಉದಯನಿಧಿ ಸ್ಟಾಲಿನ್ ಭಾರೀ ವಾಗ್ವಾದ!
-
ದೇಶ21 ಗಂಟೆಗಳು agoCM Vijay ದಾಂಪತ್ಯಕ್ಕೆ ಬಿಗ್ ರಿಲೀಫ್! ವಿಚ್ಛೇದನ ಅರ್ಜಿ ಹಿಂಪಡೆದ ಸಂಗೀತ
-
ಸಿನಿಮಾ24 ಗಂಟೆಗಳು ago₹1 Crore ಸಾಲ, ಮನೆ ಬಾಗಿಲಿಗೆ ರಿಕವರಿ ಏಜೆಂಟ್ಸ್; ಕಣ್ಣೀರು ತರಿಸುವ ನಟಿ Susmita Mukherjee ಜೀವನ ಕಥೆ
