Connect with us

ಸಿನಿಮಾ

‘Toxic’ನಲ್ಲಿ ಯುವಪೀಳಿಗೆಯ ಗೊಂದಲಗಳ ಪ್ರತಿಬಿಂಬ: ಟ್ರೇಲರ್ ಬಿಡುಗಡೆ ವೇಳೆ ಯಶ್ ಮಾತು

Published

on

ಬೆಂಗಳೂರು: ರಾಕಿಂಗ್ ಸ್ಟಾರ್ Yash ಅಭಿನಯದ ಬಹುನಿರೀಕ್ಷಿತ ‘Toxic: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic Trailer) ಚಿತ್ರದ ಟ್ರೇಲರ್ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ಈ ಡಾರ್ಕ್ ಹಾಗೂ ಸ್ಟೈಲಿಶ್ ಸಿನಿಮಾದ ಮೊದಲ ಝಲಕ್ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ Toxic Trailer ಅನಾವರಣಗೊಂಡಿದ್ದು, ಯಶ್ ರಾಯ್, ರೂಮಿ ಹಾಗೂ ಟಿಕೆಟ್ ಸೇರಿದಂತೆ ಪ್ರಮುಖ ಪಾತ್ರಗಳ ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ದಾರಿ ಯಾವುದಾದರೂ ಇರಬಹುದು, ಗುರಿ ಮುಟ್ಟಬೇಕು’

ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಜೀವನದಲ್ಲಿ ಗುರಿ ಸಾಧಿಸುವುದೇ ಮುಖ್ಯವಾಗಿದ್ದು, ಆ ಹಾದಿಯಲ್ಲಿ ಹೋರಾಟ ಸಹಜ ಎಂದು ಹೇಳಿದ್ದಾರೆ.

“ದಾರಿ ಯಾವುದಾದರೂ ಆಗಬಹುದು, ಗುರಿ ಮುಟ್ಟಬೇಕು. ಆ ದಾರಿಗಳಲ್ಲಿ ಹೋರಾಟ ಇರುತ್ತದೆ. ಹೋರಾಡಿಕೊಂಡೇ ಗುರಿ ಮುಟ್ಟಬೇಕು” ಎಂದು ಯಶ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ವರನಟ ಡಾ. ರಾಜ್‌ಕುಮಾರ್ ಅವರ ಸಿನಿಮಾದ ಜನಪ್ರಿಯ ಗೀತೆ ಸಾಲುಗಳನ್ನು ನೆನಪಿಸಿಕೊಂಡ ಯಶ್, ‘ಕಾಲಕ್ಕೆ ತಕ್ಕಂತೆ ನಡೀಬೇಕು, ತಾಳಕ್ಕೆ ತಕ್ಕಂತೆ ಕುಣೀಬೇಕು’ ಎಂದರು.

‘ಕನ್ನಡಿಗರು ತಲೆ ತಗ್ಗಿಸೋಕೆ ನಾವ್ ಬಿಡಲ್ಲ’

ಟಾಕ್ಸಿಕ್ ಚಿತ್ರವು ಇಂದಿನ ಯುವಪೀಳಿಗೆಯ ಮನಸ್ಥಿತಿ ಹಾಗೂ ಅವರಲ್ಲಿರುವ ಗೊಂದಲಗಳನ್ನು ಪ್ರತಿನಿಧಿಸುವ ಸಿನಿಮಾ ಆಗಲಿದೆ ಎಂದು ಯಶ್ ಹೇಳಿದ್ದಾರೆ.

ಚಿತ್ರ ತುಂಬಾ ಆಳವಾದ ವಿಷಯಗಳನ್ನು ಒಳಗೊಂಡಿದ್ದು, ಮನುಷ್ಯರಿಗೆ ಬೇಕಾದಂತಹ ಒಂದು ಅದ್ಭುತ ಸಿನಿಮಾವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

“ಕನ್ನಡಿಗರು ಹೆಮ್ಮೆಯಿಂದ ಹೇಳಬಹುದು. ಕನ್ನಡಿಗರು ತಲೆ ತಗ್ಗಿಸೋಕೆ ನಾವ್ ಬಿಡಲ್ಲ. ತಲೆ ಎತ್ತಿಕೊಂಡೇ ಓಡಾಡುವ ಹಾಗಿರುತ್ತೆ. ಹೆಮ್ಮೆಯಿಂದ ಸಿನಿಮಾ ನೋಡಬಹುದು” ಎಂದು ಯಶ್ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

‘ಟಾಕ್ಸಿಕ್‌ಗಾಗಿ ಸೇರಿರುವುದಕ್ಕೆ ಕಾರಣ ಕರ್ನಾಟಕದ ಜನತೆ’

ಕಾರ್ಯಕ್ರಮದ ಆರಂಭದಲ್ಲೇ ‘ಮೊದಲು ನಾನು ಕನ್ನಡದಲ್ಲೇ ಮಾತನಾಡುತ್ತೀನಿ’ ಎಂದು ಹೇಳಿದ ಯಶ್, ಟಾಕ್ಸಿಕ್ ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಕರ್ನಾಟಕದ ಜನತೆ ನೀಡಿದ ಪ್ರೀತಿ ಮತ್ತು ಬೆಂಬಲವೇ ಪ್ರಮುಖ ಕಾರಣ ಎಂದು ಹೇಳಿದರು.

ತಮ್ಮ ಪ್ರತಿಯೊಂದು ಗೆಲುವಿನ ಹಿಂದೆಯೂ ಅಭಿಮಾನಿಗಳು ನೀಡಿದ ಶಕ್ತಿ ಮತ್ತು ಜವಾಬ್ದಾರಿ ಇದೆ. ಪ್ರತಿ ಸಿನಿಮಾದ ಗೆಲುವನ್ನು ವೈಯಕ್ತಿಕ ಗೆಲುವಾಗಿ ನೋಡುವುದಿಲ್ಲ. ಬದಲಿಗೆ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಬೇಕು ಎಂಬ ಜವಾಬ್ದಾರಿಯಾಗಿ ಪರಿಗಣಿಸುತ್ತೇನೆ ಎಂದು ಯಶ್ ಹೇಳಿದರು.

‘ನಿಮ್ಮ ಆಶೀರ್ವಾದ ಇರಲಿ, ಯಶ್ ಮೇಲೆ ನಂಬಿಕೆ ಇರಲಿ’

‘ಟಾಕ್ಸಿಕ್’ ಸಿನಿಮಾ ಅಭಿಮಾನಿಗಳು ನೀಡಿದ ಹಿಂದಿನ ಗೆಲುವಿನ ಪ್ರತೀಕವಾಗಿದ್ದು, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಯಶ್ ಹೇಳಿದರು.

ಕರ್ನಾಟಕದ ಜನತೆ ತಮ್ಮ ಮೇಲೆ ಇಟ್ಟಿರುವ ನಂಬಿಕೆ ಮುಂದುವರಿಯಬೇಕು. ಸಿನಿಮಾಗೆ ಎಲ್ಲರ ಆಶೀರ್ವಾದ ಇರಲಿ ಎಂದು ರಾಕಿಂಗ್ ಸ್ಟಾರ್ ಮನವಿ ಮಾಡಿದರು.

ಇದೇ ವೇಳೆ ನಟಿಯರಾದ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ಸೇರಿದಂತೆ ಚಿತ್ರದ ಸಹ ಕಲಾವಿದರನ್ನೂ ಯಶ್ ಮುಕ್ತಕಂಠದಿಂದ ಶ್ಲಾಘಿಸಿದರು.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಸಿನಿಮಾ

‘Toxic’ Trailer Out: YASH ಅಬ್ಬರಕ್ಕೆ ಬೆಚ್ಚಿಬಿದ್ದ ಸಿನಿಪ್ರೇಮಿಗಳು, ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್

Published

on

ಬೆಂಗಳೂರು: ರಾಕಿಂಗ್ ಸ್ಟಾರ್ YASH ಅಭಿನಯದ ಬಹುನಿರೀಕ್ಷಿತ ‘Toxic: A Fairy Tale for Grown-Ups’ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಯಶ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದ ಟ್ರೇಲರ್ ಆಗಸ್ಟ್ 8ರಂದು ಸಂಜೆ 7.01ಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅನಾವರಣಗೊಂಡಿದೆ.

ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ಯಶ್ ಅವರ ವಿಭಿನ್ನ ಆ್ಯಕ್ಷನ್ ಲುಕ್ ಮತ್ತು ಚಿತ್ರದ ಭರ್ಜರಿ ಮೇಕಿಂಗ್ ಅಭಿಮಾನಿಗಳ ಗಮನ ಸೆಳೆದಿದೆ. ಚಿತ್ರದ ಗ್ಲಿಂಪ್ಸ್ ಮತ್ತು ಟೀಸರ್ ಬಳಿಕ ಇದೀಗ ಟ್ರೇಲರ್ ಕೂಡ ಸಿನಿಪ್ರೇಮಿಗಳಲ್ಲಿ Toxic Movie ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಯಶ್ ಅವರ ಹೊಸ ಅವತಾರಕ್ಕೆ ಮೆಚ್ಚುಗೆ

ಟ್ರೇಲರ್‌ನಲ್ಲಿ ಯಶ್ ಅವರ ಸ್ಟೈಲಿಶ್ ಲುಕ್, ಆ್ಯಕ್ಷನ್ ದೃಶ್ಯಗಳು ಹಾಗೂ ವಿಭಿನ್ನ ಬಾಡಿ ಲ್ಯಾಂಗ್ವೇಜ್ ಗಮನ ಸೆಳೆಯುತ್ತಿವೆ. ಕೆಜಿಎಫ್ ಸರಣಿಯ ಬಳಿಕ ಮತ್ತೊಂದು ವಿಭಿನ್ನ ಲೋಕದ ಕಥೆಯೊಂದಿಗೆ ಯಶ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಕುತೂಹಲಕ್ಕೆ ಪ್ರಮುಖ ಕಾರಣವಾಗಿದೆ.

ಚಿತ್ರದ ಟೈಟಲ್‌ಗೆ ತಕ್ಕಂತೆ ಡಾರ್ಕ್ ಹಾಗೂ ಸ್ಟೈಲಿಶ್ ಟೋನ್ ಹೊಂದಿರುವ ಟ್ರೇಲರ್, ಸಿನಿಮಾ ಯಾವ ರೀತಿಯ ಕಥೆಯನ್ನು ಹೇಳಲಿದೆ ಎಂಬ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಬಹುದೊಡ್ಡ ತಾರಾಗಣ

ಗೀತು ಮೋಹನ್‌ದಾಸ್ ನಿರ್ದೇಶನದ Toxic ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಹಾಗೂ ಯಶ್ ಜಂಟಿಯಾಗಿ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳಲ್ಲೂ ಬಿಡುಗಡೆ ಮಾಡಲು ಸಿದ್ಧತೆ ಮಾಡಲಾಗಿದೆ.

ಆಗಸ್ಟ್ 26ಕ್ಕೆ ‘Toxic’ ಗ್ರ್ಯಾಂಡ್ ರಿಲೀಸ್

ಬ್ಲಾಕ್‌ಬಸ್ಟರ್ KGF Chapter 2 ಬಳಿಕ ಸುಮಾರು ನಾಲ್ಕು ವರ್ಷಗಳ ನಂತರ ಯಶ್ ಮತ್ತೆ ದೊಡ್ಡ ಪರದೆಗೆ ಮರಳುತ್ತಿದ್ದಾರೆ. ಹೀಗಾಗಿ Toxic Movie Release ಬಗ್ಗೆ ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿದೆ.

ಹಲವು ವಿಳಂಬಗಳ ಬಳಿಕ ಚಿತ್ರವು ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಕರ್ನಾಟಕದಲ್ಲಿ ಚಿತ್ರದ ಬಿಡುಗಡೆ ದೊಡ್ಡ ಮಟ್ಟದಲ್ಲಿ ನಡೆಯಲಿದ್ದು, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಿನ ಸ್ಕ್ರೀನ್‌ಗಳು ಮತ್ತು ಪ್ರದರ್ಶನಗಳನ್ನು ಹೊಂದುವ ನಿರೀಕ್ಷೆಯಿದೆ.

ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ

ಟ್ರೇಲರ್ ಬಿಡುಗಡೆಯಾದ ಬಳಿಕ ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಶ್ ಅವರ ಆ್ಯಕ್ಷನ್ ಲುಕ್, ಚಿತ್ರದ ದೃಶ್ಯ ವೈಭವ ಹಾಗೂ ಗೀತು ಮೋಹನ್‌ದಾಸ್ ಅವರ ವಿಭಿನ್ನ ನಿರೂಪಣಾ ಶೈಲಿ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದೀಗ ಟ್ರೇಲರ್ ಮೂಲಕ ಕುತೂಹಲ ಹೆಚ್ಚಿಸಿರುವ Toxic, ಆಗಸ್ಟ್ 26ರಂದು ಚಿತ್ರಮಂದಿರಕ್ಕೆ ಬಂದ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ದಾಖಲೆ ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Continue Reading

ಸಿನಿಮಾ

‘The Paradise’ ಟೀಸರ್ ಔಟ್: ಜಡಾಲ್ ಆಗಿ ನಾನಿಯ ರೌದ್ರಾವತಾರ ವೈರಲ್

Published

on

ಬೆಂಗಳೂರು: ನ್ಯಾಚುರಲ್ ಸ್ಟಾರ್ ನಾನಿ (Nani) ಅಭಿನಯದ ಬಹುನಿರೀಕ್ಷಿತ ಪ್ಯಾನ್-ವರ್ಲ್ಡ್ ಸಿನಿಮಾ ‘ದಿ ಪ್ಯಾರಡೈಸ್’ (The Paradise) ಟೀಸರ್ ಬಿಡುಗಡೆಯಾಗಿ ಸಿನಿಪ್ರಿಯರಲ್ಲಿ ಭಾರೀ ಸಂಚಲನ ಮೂಡಿಸಿದೆ. ‘ದಸರಾ’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಶ್ರೀಕಾಂತ್ ಒಡೆಲ ಮತ್ತು ನಾನಿ ಮತ್ತೊಮ್ಮೆ ಒಂದಾಗಿರುವ ಈ ಸಿನಿಮಾ, ಮಾಸ್ ಆಕ್ಷನ್ ಹಾಗೂ ಭಾವನಾತ್ಮಕ ಕಥಾಹಂದರದ ಮೂಲಕ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.

ಎಸ್ಎಲ್ವಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಸುಧಾಕರ್ ಚೆರುಕೂರಿ ಬೃಹತ್ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಿಡುಗಡೆಯಾದ ಟೀಸರ್‌ನಲ್ಲಿ ಕತ್ತಲೆ, ದೌರ್ಜನ್ಯ ಮತ್ತು ಹಿಂಸೆಯಿಂದ ಕೂಡಿದ ಲೋಕವನ್ನು ಅನಾವರಣಗೊಳಿಸಲಾಗಿದ್ದು, ಶೋಷಿತರ ಪರವಾಗಿ ಹೋರಾಡುವ ‘ಜಡಾಲ್’ ಪಾತ್ರದಲ್ಲಿ ನಾನಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್‌ನಲ್ಲಿ ಮರುಮರು ಕಾಣಿಸಿಕೊಳ್ಳುವ ಕಾಗೆಯ ಸಂಕೇತ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಜನರ ಆಕ್ರೋಶವನ್ನು ಪ್ರತಿನಿಧಿಸುತ್ತದೆ. ಕೊಡಲಿ ಕಾಳಗ, ಜೈಲಿನೊಳಗಿನ ಭೀಕರ ಫೈಟ್, ಖಡ್ಗ ಕಾಳಗ, ಮುಷ್ಟಿಯುದ್ಧ ಹಾಗೂ ಸ್ಫೋಟಕ ಆಕ್ಷನ್ ದೃಶ್ಯಗಳು ಟೀಸರ್‌ಗೆ ಮತ್ತಷ್ಟು ತೀವ್ರತೆ ನೀಡಿದ್ದಾರೆ. ನಾನಿಯ ಹೊಸ ಲುಕ್ ಹಾಗೂ ಅವರ ಸಂಭಾಷಣೆಗಳು ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿವೆ.

ಚಿತ್ರದಲ್ಲಿ ಹಿರಿಯ ನಟ ಮೋಹನ್ ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಾಘವ್ ಜುಯಲ್, ಕಯಾದು ಲೋಹರ್, ಸೊನಾಲಿ ಕುಲಕರ್ಣಿ ಮತ್ತು ಸಂಪೂರ್ಣೇಶ್ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಿನ್ನೆಲೆ ಸಂಗೀತ ಟೀಸರ್‌ಗೆ ದೊಡ್ಡ ಬಲ ನೀಡಿದ್ದು, ದೃಶ್ಯಗಳ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಛಾಯಾಗ್ರಹಣವನ್ನು ಸಿ.ಎಚ್. ಸಾಯಿ ನಿರ್ವಹಿಸಿದ್ದು, ಅವಿನಾಶ್ ಕೊಲ್ಲಾ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

‘ದಿ ಪ್ಯಾರಡೈಸ್’ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದು ನಾನಿಯ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆ ಸಿನಿ ವಲಯದಲ್ಲಿ ವ್ಯಕ್ತವಾಗಿದೆ.

Continue Reading

ಸಿನಿಮಾ

₹1 Crore ಸಾಲ, ಮನೆ ಬಾಗಿಲಿಗೆ ರಿಕವರಿ ಏಜೆಂಟ್ಸ್; ಕಣ್ಣೀರು ತರಿಸುವ ನಟಿ Susmita Mukherjee ಜೀವನ ಕಥೆ

Published

on

ಮುಂಬೈ: ಬಾಲಿವುಡ್‌ನ ಹಿರಿಯ ನಟಿ ಸುಸ್ಮಿತಾ ಮುಖರ್ಜಿ (Susmita Mukherjee) ತಮ್ಮ ಜೀವನದ ಅತ್ಯಂತ ಕಠಿಣ ಹಂತದ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಮಾತನಾಡಿದ್ದು, ₹1 ಕೋಟಿ ಸಾಲ ತೀರಿಸಲು ತಾವು ಇಷ್ಟವಿಲ್ಲದ C-ಗ್ರೇಡ್ ಹಾಗೂ ಮಹಿಳೆಯರನ್ನು ಅವಮಾನಿಸುವ ಸಿನಿಮಾಗಳಲ್ಲೂ ನಟಿಸಬೇಕಾಯಿತು ಎಂದು ಬಹಿರಂಗಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಜೀವನದ ಆ ಸಂಕಷ್ಟದ ದಿನಗಳನ್ನು ನೆನೆದು ಭಾವುಕರಾದರು.

“ಹೌದು… ಆತ್ಮವನ್ನೇ ಮಾರಿಕೊಂಡೆ”

“ನೀವು ಯಾಕೆ ಮಹಿಳೆಯರನ್ನು ಅವಮಾನಿಸುವ, C-ಗ್ರೇಡ್ ಸಿನಿಮಾಗಳಲ್ಲಿ ನಟಿಸಿದಿರಿ?” ಎಂಬ ಪ್ರಶ್ನೆಗೆ ಉತ್ತರಿಸಿದ ಸುಸ್ಮಿತಾ,

“ಹೌದು, ನಾನು ಆತ್ಮವನ್ನೇ ಮಾರಿಕೊಂಡೆ. ಆಗಲೂ ನನಗೆ ಅದು ಇಷ್ಟವಾಗಿರಲಿಲ್ಲ, ಈಗಲೂ ಆ ಕೆಲಸದ ಬಗ್ಗೆ ಹೆಮ್ಮೆ ಇಲ್ಲ. ಆದರೆ ಅದು ನನ್ನ ಅನಿವಾರ್ಯತೆ ಆಗಿತ್ತು,” ಎಂದು ಹೇಳಿದ್ದಾರೆ.

2002ರಲ್ಲಿ ಕಂಪನಿ ದಿವಾಳಿ

ಸುಸ್ಮಿತಾ ಮುಖರ್ಜಿ ಮತ್ತು ಅವರ ಪತಿ ನಡೆಸುತ್ತಿದ್ದ ‘ಪ್ರಯಾಸ್ ಪ್ರೊಡಕ್ಷನ್’ ಎಂಬ ಮಾಧ್ಯಮ ಸಂಸ್ಥೆ 2002ರಲ್ಲಿ ದಿವಾಳಿಯಾಗಿತ್ತು.

ತಂತ್ರಜ್ಞಾನದಲ್ಲಾದ ಬದಲಾವಣೆಗಳಿಂದ ಕಂಪನಿಗೆ ಭಾರೀ ನಷ್ಟ ಉಂಟಾಗಿ ಸುಮಾರು ₹1 ಕೋಟಿ ಸಾಲ ಮಾಡಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

“ನಮ್ಮ ಮನೆಗೆ ಸಾಲ ವಸೂಲಾತಿ ಸಿಬ್ಬಂದಿ ಪ್ರತಿದಿನ ಬರುತ್ತಿದ್ದರು. ನಿಂದಿಸುತ್ತಿದ್ದರು. ಆ ಸಮಯದಲ್ಲಿ ನನ್ನ ಮಕ್ಕಳು ತುಂಬಾ ಚಿಕ್ಕವರಾಗಿದ್ದರು. ಮನೆ ನಡೆಸಲು ಹಾಗೂ ಸಾಲ ತೀರಿಸಲು ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡಲೇಬೇಕಾಯಿತು,” ಎಂದು ಅವರು ನೆನಪಿಸಿಕೊಂಡರು.

ಮಕ್ಕಳ ಶಿಕ್ಷಣಕ್ಕಾಗಿ ಕಠಿಣ ನಿರ್ಧಾರ

ಸಾಲ ತೀರಿಸುವ ಜೊತೆಗೆ ತಮ್ಮ ಮಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಆಸೆಯಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಓದಲು ಕಳುಹಿಸಿದ್ದೆ ಎಂದು ಸುಸ್ಮಿತಾ ಹೇಳಿದರು.

ಈ ಶಿಕ್ಷಣ ವೆಚ್ಚವನ್ನು ಭರಿಸಲು ಹೆಚ್ಚು ಹಣ ಸಂಪಾದಿಸುವ ಅಗತ್ಯವಿದ್ದ ಕಾರಣ, ಬಂದ ಅವಕಾಶಗಳನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು.

“ಈಗ ಆತ್ಮಕ್ಕೆ ಇಷ್ಟವಾದ ಕೆಲಸ ಮಾತ್ರ ಮಾಡುತ್ತೇನೆ”

ಸದ್ಯ ಜೀವನದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವ ಸುಸ್ಮಿತಾ,

“ಈಗ ನನ್ನ ಆತ್ಮಕ್ಕೆ ಇಷ್ಟವಾಗದ ಕೆಲಸವನ್ನು ಮಾಡುವುದಿಲ್ಲ. ಗೌರವಯುತವಾದ ಕೆಲಸಗಳನ್ನೇ ಮಾಡುತ್ತೇನೆ. ನನಗೆ ಸಿಗುತ್ತಿರುವ ಪ್ರಾಜೆಕ್ಟ್‌ಗಳಿಂದ ಸಂತೋಷವಾಗಿದೆ,” ಎಂದು ತಿಳಿಸಿದ್ದಾರೆ.

“ನಟರಿಗೆ ಯಾವಾಗಲೂ ಆಯ್ಕೆ ಇರುವುದಿಲ್ಲ”

ಕೊನೆಯಲ್ಲಿ ಸಿನಿಮಾ ಕ್ಷೇತ್ರದ ವಾಸ್ತವತೆಯನ್ನು ವಿವರಿಸಿದ ಅವರು,

“ನಾವು ನಟರು. ಪ್ರತಿಯೊಂದು ಪಾತ್ರವನ್ನೂ ಆಯ್ಕೆ ಮಾಡುವ ಅವಕಾಶ ಯಾವಾಗಲೂ ಇರುವುದಿಲ್ಲ. ಕೆಲವೊಮ್ಮೆ ಮನೆಯ ಜೀವನ ಸಾಗಿಸಲು ಇಷ್ಟವಿಲ್ಲದ ಕೆಲಸವನ್ನೂ ಮಾಡಬೇಕಾಗುತ್ತದೆ,” ಎಂದು ಹೇಳಿದ್ದಾರೆ.

ಸುಸ್ಮಿತಾ ಮುಖರ್ಜಿ ಅವರ ಈ ಭಾವುಕ ಬಹಿರಂಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಆರ್ಥಿಕ ಸಂಕಷ್ಟದ ಸಮಯದಲ್ಲಿ ಕಲಾವಿದರು ಎದುರಿಸುವ ಕಠಿಣ ವಾಸ್ತವದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ.

Continue Reading

Trending