ರಾಜ್ಯ
CM Vijay ಅಬ್ಬರದ ಭಾಷಣಕ್ಕೆ ಉದಯನಿಧಿ ಸ್ಟಾಲಿನ್ ತಿರುಗೇಟು: ಡಮ್ಮಿ ಸಿಎಂ ಎಂದು ವ್ಯಂಗ್ಯ
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ (ಸೆ. 07) ಡಿಎಂಕೆ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ನಡೆಸಿದ ಅಬ್ಬರದ ಹಾಗೂ ಉಗ್ರ ಭಾಷಣಕ್ಕೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ತೀವ್ರ ತಿರುಗೇಟು ನೀಡಿದ್ದಾರೆ. ಜಾರಿ ನಿರ್ದೇಶನಾಲಯದ (ED) ಆರೋಪಗಳನ್ನು ಉಲ್ಲೇಖಿಸಿ ವಿಜಯ್ ನಡೆಸಿದ ವಾಗ್ದಾಳಿಯನ್ನು ಕಟುವಾಗಿ ಟೀಕಿಸಿರುವ ಉದಯನಿಧಿ, ಇಡಿ ಆರೋಪಗಳ ಪ್ರತಿಗಳನ್ನು ಮುದ್ರಿಸಲು ಮೂರು ದಿನಗಳ ಕಾಲಾವಕಾಶ ಬೇಕಿತ್ತೇ ಎಂದು ಪ್ರಶ್ನಿಸಿದ್ದು, ಇದು ಕೇವಲ “ಡಮ್ಮಿ ಸಿಎಂ ಹಾಗೂ ಕ್ಯಾಮೆರಾ-ಆಕ್ಷನ್ ಡ್ರಾಮಾ” ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಸರಣಿ ಪೋಸ್ಟ್ ಹಾಕಿರುವ ಉದಯನಿಧಿ ಸ್ಟಾಲಿನ್, ಜಾರಿ ನಿರ್ದೇಶನಾಲಯದ ಆರೋಪಗಳನ್ನು ಮುದ್ರಿಸಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಮೂರು ದಿನ ಯಾಕೆ ಬೇಕಾಯಿತು ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಪ್ರತಿಕ್ರಿಯೆಯು ಯಾವುದೇ ಸ್ಪಷ್ಟತೆಯಿಲ್ಲದೆ, ಕೇವಲ ದೋಷಾರೋಪಣೆ ಮತ್ತು ವಿಷಯಾಂತರ ಮಾಡುವ (Diversion tactics) ತಂತ್ರಗಳಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ. ಯಾವುದೇ ಪೂರ್ವಸಿದ್ಧತೆಯಿಲ್ಲದೆ, ಕೇವಲ ರೋಲ್, ಕ್ಯಾಮೆರಾ, ಆಕ್ಷನ್ ಶೈಲಿಯಲ್ಲಿ ಚಲನಚಿತ್ರದ ಸಂಭಾಷಣೆಯಂತಿದೆ ಎಂದು ಲೇವಡಿ ಮಾಡಿರುವ ಅವರು, ಇದೊಂದು ರೀತಿ ಡಮ್ಮಿ ಸಿಎಂ ವರ್ತನೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಹೆದರಿ ಮತ್ತೆ ಓಡಬೇಡಿ, ಮುಂದಿನ ಬಾರಿಯಾದರೂ ಉತ್ತಮ ಸಿದ್ಧತೆಯೊಂದಿಗೆ ಸದನಕ್ಕೆ ಬನ್ನಿ ಎಂದು ವಿಜಯ್ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಸಿಎಂ ವಿಜಯ್ ಹೇಳಿದ್ದೇನು?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ವಿಧಾನಸಭೆಯಲ್ಲಿ ಇಲ್ಲಿಯವರೆಗೆ ಸಾಕಷ್ಟು ಶಾಂತ ರೀತಿಯಲ್ಲಿದ್ದ ಸಿಎಂ ವಿಜಯ್, ಸೋಮವಾರದ ಅಧಿವೇಶನದಲ್ಲಿ ಮೊದಲ ಬಾರಿಗೆ ಡಿಎಂಕೆ ನಾಯಕರ ವಿರುದ್ಧ ರೋಷಾವೇಷದಿಂದ ಮಾತನಾಡಿದರು. ಡಿಎಂಕೆ ನಾಯಕರು ಪಕ್ಷದ ನಿಧಿ ಹೆಸರಿನಲ್ಲಿ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದಾರೆ ಎಂದು ಇಡಿ ವರದಿಯನ್ನು ಉಲ್ಲೇಖಿಸಿ ಕಠಿಣ ಆರೋಪಗಳನ್ನು ಮಾಡಿದರು.
ಪಕ್ಷದ ನಿಧಿಯ ಹೆಸರಿನಲ್ಲಿ ಹಣ ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ಸಚಿವ ಸೆಂಥಿಲ್ ಬಾಲಾಜಿ ಅವರ ಹೆಸರನ್ನು ಇಡಿ ಪ್ರಸ್ತಾಪಿಸಿದೆ ಎಂದು ವಿಜಯ್ ಸದನದಲ್ಲಿ ತಿಳಿಸಿದರು. ಅಷ್ಟೇ ಅಲ್ಲದೇ, 1976ರಲ್ಲಿ ಆಗಿನ ಡಿಎಂಕೆ ಸರ್ಕಾರದ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ರಚಿಸಲಾಗಿದ್ದ ಹಿರಿಯ ಸರ್ಕಾರಿಯಾ ಆಯೋಗದ ವರದಿ ಮತ್ತು ‘ವೀರಾನಂ’ ಕುಡಿಯುವ ನೀರಿನ ಯೋಜನೆಯ ಪರಿಶೀಲನೆಯನ್ನು ಉಲ್ಲೇಖಿಸಿದರು. ಮಾಜಿ ಸಿಎಂ ಎಂ. ಕರುಣಾನಿಧಿ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ ಎಂದರು.
ವರದಿಯನ್ನು ಮತ್ತಷ್ಟು ಆಳವಾಗಿ ಉಲ್ಲೇಖಿಸಿದ ಅವರು, 16 ಕೋಟಿ ರೂ.ಗಿಂತಲೂ ಹೆಚ್ಚಿನ ಮೌಲ್ಯದ ಯೋಜನೆಗಾಗಿ ಪೈಪ್ಗಳ ತಯಾರಿಕೆ ಮತ್ತು ಪೂರೈಕೆಯ ಗುತ್ತಿಗೆಯನ್ನು ‘ಸತ್ಯನಾರಾಯಣ ಬ್ರದರ್ಸ್’ ಸಂಸ್ಥೆಗೆ ನೀಡಿದ ವಿಷಯದಲ್ಲಿ ಭಾರಿ ಗೋಲ್ಮಾಲ್ ಹಾಗೂ ಆರೋಪಗಳು ಕೇಳಿಬಂದಿದ್ದವು ಎಂದು ವಿವರಿಸಿದರು. 1970 ಮತ್ತು 1974ರ ನಡುವಿನ ಅವಧಿಯಲ್ಲಿ ಶೇಕಡಾ 2.5ರಷ್ಟು ಕಮಿಷನ್ ನೀಡುವಂತೆ ಬೇಡಿಕೆ ಇಟ್ಟಿದ್ದರ ಬಗ್ಗೆ ಹಾಗೂ ವಿವಿಧ ಕಂತುಗಳಲ್ಲಿ ಒಟ್ಟು ಸುಮಾರು 29 ಲಕ್ಷ ರೂ. ಹಣವನ್ನು ಪಾವತಿಸಿದ್ದರ ಬಗ್ಗೆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದರು. ತಮಿಳುನಾಡು ರಾಜಕೀಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವಿನ ಈ ನೇರಾ ನೇರ ವಾ್ದಸಮರವು ರಾಜ್ಯದಲ್ಲಿ ತೀವ್ರ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.
ಬೆಂಗಳೂರು
Medahalli ಸರ್ವಿಸ್ ರಸ್ತೆಯಲ್ಲಿ ಅಕ್ರಮ ಚಟುವಟಿಕೆಗಳ ಅಟ್ಟಹಾಸ: ಸಾರ್ವಜನಿಕರ ಆತಂಕ
ಬೆಂಗಳೂರು: ರಾಜಧಾನಿ ಬೆಂಗಳೂರಿನ ವೈಟ್ಫೀಲ್ಡ್ ವಿಭಾಗಕ್ಕೆ ಒಳಪಡುವ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ ಸರ್ವಿಸ್ ರಸ್ತೆ (Medahalli Service Road) ಈಗ ಅಕ್ರಮ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬ ಗಂಭೀರ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಐಟಿ ಸಂಪರ್ಕ ಕೊಂಡಿಯಾಗಿರುವ ವೈಟ್ಫೀಲ್ಡ್ನಂತಹ ಪ್ರತಿಷ್ಠಿತ ವಿಭಾಗದಲ್ಲೇ ಇಂತಹ ರೆಡ್ ಲೈಟ್ ಮಾದರಿಯ ಅಕ್ರಮ ದಂಧೆಗಳು ನಿರಂತರವಾಗಿ ನಡೆಯುತ್ತಿರುವುದು ಸ್ಥಳೀಯರು ಹಾಗೂ ದಾರಿಹೋಕರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದೆ.
ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಸಕ್ರಿಯವಾಗುವ ತಂಡ
ಪ್ರತಿದಿನ ಸಂಜೆ ಕತ್ತಲಾಗುತ್ತಿದ್ದಂತೆ ಈ ಸರ್ವಿಸ್ ರಸ್ತೆಯಲ್ಲಿ ನಿರ್ದಿಷ್ಟ ಅಕ್ರಮ ಗುಂಪೊಂದು ಸಕ್ರಿಯವಾಗುತ್ತದೆ. ರಸ್ತೆ ಬದಿಯಲ್ಲಿ ನಿಂತುಕೊಂಡು, ಹೋಗಿ ಬರುವ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಕೈ ಸನ್ನೆ ಮಾಡಿ ಕರೆಯುವುದು ಇವರ ದಿನಚರಿಯಾಗಿದೆ. ಈ ಗುಂಪಿನಲ್ಲಿ ಟ್ರಾನ್ಸ್ಜೆಂಡರ್ಗಳು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕರ ಬಳಿ ಬಹಿರಂಗವಾಗಿಯೇ ಹಣದ ಚೌಕಾಸಿ ನಡೆಸುವ ಈ ಗುಂಪು, ಐನೂರು ರೂಪಾಯಿ ಕೊಟ್ಟರೆ ಬರುತ್ತೇವೆ, ಮುನ್ನೂರು ರೂಪಾಯಿ ಕೊಟ್ಟರೆ ಬರುವುದಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತದೆ. ಯಾರಾದರೂ ಈ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದರೆ ಅಥವಾ ವಾಗ್ವಾದಕ್ಕೆ ಇಳಿದರೆ, “ನಾವೇ ಪೊಲೀಸರಿಗೆ ಕರೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಹೆದರಿಸುವುದು ಇಲ್ಲಿ ನಿತ್ಯದ ಸನ್ನಿವೇಶವಾಗಿದೆ.
ಕೂಲಿ ಕಾರ್ಮಿಕರು ಮತ್ತು ಉದ್ಯೋಗಿಗಳೇ ಮುಖ್ಯ ಗುರಿ
ಈ ಅಕ್ರಮ ಜಾಲದ ಮುಖ್ಯ ಗುರಿ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ಕೂಲಿ ಕಾರ್ಮಿಕರು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು. ಕಾಮದ ಆಸೆ ತೋರಿಸಿ ಜನರನ್ನು ಕತ್ತಲ ಪ್ರದೇಶಗಳಿಗೆ ಕರೆದುಕೊಂಡು ಹೋಗಿ, ಅಸಭ್ಯವಾಗಿ ವರ್ತಿಸುತ್ತಾ ಅವರ ಬಳಿ ಇರುವ ಹಣ, ಮೊಬೈಲ್ ಹಾಗೂ ಮೌಲ್ಯಯುತ ವಸ್ತುಗಳನ್ನು ದೋಚಿ ಪರಾರಿಯಾಗುವುದು ಇಲ್ಲಿ ಸಾಮಾನ್ಯವಾಗಿದೆ. ನಂಬಿ ಹೋದವರು ತಮ್ಮ ಜೇಬು ಖಾಲಿ ಮಾಡಿಕೊಂಡು, ಮಾನ ಮುಚ್ಚಿಕೊಳ್ಳಲು ಸುಮ್ಮನಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಟುಂಬಗಳು ಮತ್ತು ಹಿರಿಯ ನಾಗರಿಕರಿಗೆ ಸಂಚಾರ ಸವಾಲು
ಈ ಅಕ್ರಮ ದಂಧೆಯ ಪರಿಣಾಮವಾಗಿ ಸಭ್ಯ ನಾಗರಿಕರು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳೊಂದಿಗೆ ಸಂಚರಿಸುವ ಕುಟುಂಬಗಳಿಗೆ ಈ ರಸ್ತೆಯಲ್ಲಿ ಓಡಾಡುವುದೇ ಒಂದು ದೊಡ್ಡ ಸವಾಲಾಗಿದೆ. ಅಸಭ್ಯ ವರ್ತನೆಗಳು ಕಣ್ಣಿಗೆ ಬೀಳುವುದರಿಂದ ಸಾರ್ವಜನಿಕರು ತೀವ್ರ ಮುಜುಗರ ಮತ್ತು ಭಯದಿಂದ ಓಡಾಡುವಂತಾಗಿದೆ. ಯಾವುದೇ ಸಮಯದಲ್ಲೂ ಅನಾಹುತ ಸಂಭವಿಸಬಹುದು ಎಂಬ ಭೀತಿ ಸಂಚಾರ ಸವಾರರಲ್ಲಿ ಮನೆಮಾಡಿದೆ.
ವೈರಲ್ ಆದರೂ ಕ್ರಮ ಕೈಗೊಳ್ಳದ ಪೊಲೀಸರು?
ಈ ಅಶ್ಲೀಲ ದಂಧೆಯ ದೃಶ್ಯಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಭಾರಿ ವೈರಲ್ ಆಗಿವೆ. ಆದಾಗ್ಯೂ, ವೈಟ್ಫೀಲ್ಡ್ ವಿಭಾಗದ ಪೊಲೀಸರು ಹಾಗೂ ಅವಲಹಳ್ಳಿ ಠಾಣೆಯ ಸಿಬ್ಬಂದಿ ಈವರೆಗೆ ಯಾವುದೇ ಸೂಕ್ತ ಅಥವಾ ಗಂಭೀರ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತುರ್ತು ನೆರವಿಗಾಗಿ ನಾಗರಿಕರು ‘112’ ತುರ್ತು ಸಹಾಯವಾಣಿಗೆ ಕರೆ ಮಾಡಿದರೂ, ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಈ ಅಕ್ರಮ ಗುಂಪು ಅಲ್ಲಿಂದ ಕಾಲ್ಕಿತ್ತು ತಲೆಮರೆಸಿಕೊಳ್ಳುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಆದ್ದರಿಂದ, ಗೃಹ ಇಲಾಖೆ ಹಾಗೂ ಬೆಂಗಳೂರು ನಗರ ಪೊಲೀಸ್ ಹಿರಿಯ ಅಧಿಕಾರಿಗಳು ತಕ್ಷಣವೇ ಜಾಗೃತರಾಗಿ, ಮೇಡಹಳ್ಳಿ ಸರ್ವಿಸ್ ರಸ್ತೆಯಲ್ಲಿ ನಿರಂತರ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಈ ಅಕ್ರಮ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಬಲವಾದ ಆಗ್ರಹವಾಗಿದೆ.
ರಾಜಕೀಯ
ಮಹಿಳೆಯರ ವಿರುದ್ಧದ ದ್ವರ್ಥಾರ್ಥಕ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ; ಡಿಎಂಕೆ ನಾಯಕರಿಗೆ CM Vijay ಎಚ್ಚರಿಕೆ
ಚೆನ್ನೈ: ಮಹಿಳೆಯರ ವಿರುದ್ಧದ ವೈಯಕ್ತಿಕ ದಾಳಿ ಹಾಗೂ ದ್ವರ್ಥಾರ್ಥಕ (Double Meaning) ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಮಿಳುನಾಡು CM Vijay (Vijay) ಅವರು ಆಡಳಿತ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಅವರ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಚರ್ಚೆ ಕಾವೇರಿದೆ. ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಸಿಎಂ ವಿಜಯ್, ರಾಜಕೀಯದಲ್ಲಿ ಎಷ್ಟೇ ತೀವ್ರವಾದ ಟೀಕೆ-ಟಿಪ್ಪಣಿಗಳಿದ್ದರೂ ಅದನ್ನು ಸೈದ್ಧಾಂತಿಕವಾಗಿ ಎದುರಿಸಬೇಕೇ ಹೊರತು ಮಹಿಳೆಯರ ತೇಜೋವಧೆ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ.
ವಿವಾದಕ್ಕೆ ಮುಖ್ಯ ಕಾರಣವೇನು?
ಕಾವೇರಿ ನೀರು ಹಂಚಿಕೆ ಪ್ರತಿಭಟನೆಯ ವೇಳೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಶಾ ಅವರ ಹೆಸರನ್ನು ಪ್ರಸ್ತಾಪಿಸಿ ಆಡಿದ ಕೆಲವು ಮಾತುಗಳು ತಮಿಳುನಾಡು ರಾಜಕಾರಣದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದ್ದವು. ಈ ಘಟನೆಯ ನಂತರ ವ್ಯಾಪಕ ಟೀಕೆಗಳು ವ್ಯಕ್ತವಾಗಿ, ಉದಯನಿಧಿ ಅವರ ಬಂಧನ ಮತ್ತು ಬಿಡುಗಡೆ ಪ್ರಕ್ರಿಯೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಪ್ರಸ್ತುತ ವಿಧಾನಸಭೆಯಲ್ಲಿ ಮಾತನಾಡಿರುವ ಸಿಎಂ ವಿಜಯ್, ಅಸಂಸದೀಯ ಶಬ್ದಗಳ ಬಳಕೆಯನ್ನು ಕಟುವಾಗಿ ವಿರೋಧಿಸಿದ್ದಾರೆ. “ತಮ್ಮ ರಾಜಕೀಯ ಗೆಲುವಿಗೆ ಮಹಿಳೆಯರೇ ಮುಖ್ಯ ಕಾರಣ” ಎಂದು ಬಲವಾಗಿ ಸ್ಮರಿಸಿದ ಅವರು, ಸಾರ್ವಜನಿಕ ಜೀವನದಲ್ಲಿರುವವರು ಮಾತನಾಡುವಾಗ ನಿಂದನಾತ್ಮಕ ಹಾಗೂ ಕೀಳುಮಟ್ಟದ ಭಾಷೆಯನ್ನು ಬಳಸಬಾರದು ಎಂದು ಅಗ್ರಹಿಸಿದ್ದಾರೆ.
ಸಭೆಯಲ್ಲಿ ವಿಜಯ್ ನೀಡಿದ ಸ್ಪಷ್ಟನೆ
ವಿಧಾನಸಭೆಯಲ್ಲಿ ಮಾತನಾಡುತ್ತಾ ಸಿಎಂ ವಿಜಯ್, “ನಾವು ರಾಜಕೀಯವಾಗಿ ಯಾರನ್ನು ಬೇಕಾದರೂ ಟೀಕಿಸಬಹುದು, ಅದು ಅಭಿವೃದ್ಧಿಯ ಚರ್ಚೆಯಾಗಬಹುದು. ಆದರೆ ಇದರ ಹೆಸರಿನಲ್ಲಿ ಮಹಿಳೆಯರನ್ನು ಅಥವಾ ಇವರನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಕೀಳುಮಟ್ಟದಲ್ಲಿ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ” ಎಂದು ಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೆಲವರು ಮಹಿಳೆಯರ ವಿರುದ್ಧ ದ್ವರ್ಥಾರ್ಥಕ ಪದಗಳನ್ನು ಬಳಸುತ್ತಿರುವುದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅವರು ಎಚ್ಚರಿಸಿದರು. ಅಲ್ಲದೆ, ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಇದೇ ವಿಧಾನಸಭೆಯಲ್ಲಿ ಎದುರಿಸಿದ್ದ ಅವಮಾನಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿ, ಸದನದಲ್ಲಿ ಮಹಿಳೆಯರಿಗೆ ಎಲ್ಲ ಕಾಲದಲ್ಲೂ ಸೂಕ್ತ ಗೌರವ ಸಿಗಬೇಕು ಎಂದು ಒತ್ತಾಯಿಸಿದರು.
ವಿಜಯ್ ಅವರ ಈ ಖಡಕ್ ಎಚ್ಚರಿಕೆಯು ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಡಿಎಂಕೆ ಹಾಗೂ ಟಿವಿಕೆ (TVK) ನಡುವಿನ ರಾಜಕೀಯ ಸೆಣಸಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ಮಹಿಳಾ ಪರ ನಿಲುವನ್ನು ಸ್ಪಷ್ಟಪಡಿಸಿರುವ ವಿಜಯ್ ಅವರ ಮಾತುಗಳು ರಾಜ್ಯದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
ಬೆಂಗಳೂರು
MLA S T Soma Shekhar ಉಪಸ್ಥಿತಿಯಲ್ಲಿ Ranga Narthana Dance Academy ಲೋಕಾರ್ಪಣೆ
ಬೆಂಗಳೂರು: ಕಲೆ ಮತ್ತು ಸಂಸ್ಕೃತಿಯ ತವರು ಎನಿಸಿರುವ ರಾಜಧಾನಿ ಬೆಂಗಳೂರಿನಲ್ಲಿ ನೃತ್ಯಾಸಕ್ತರಿಗೆ ಸಿಹಿದು ಸುದ್ದಿಯೊಂದು ಸಿಕ್ಕಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಅಂಜನಾನಗರದ ಎಂ.ಯು.ಟಿ ಫೈನಾನ್ಸ್ ಹತ್ತಿರವಿರುವ ಎಸ್.ಎಂ.ಎಂ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ‘ರಂಗ ನರ್ತನ ಡ್ಯಾನ್ಸ್ ಅಕಾಡೆಮಿ’ (Ranga Narthana Dance Academy) ಯ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ. ಕಲಾ ಲೋಕಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಹಾಗೂ ಯುವ ಸಮುದಾಯದಲ್ಲಿ ನೃತ್ಯದ ಬಗ್ಗೆ ಆಸಕ್ತಿ ಮೂಡಿಸುವ ಸದುದ್ದೇಶದಿಂದ ಈ ಅಕಾಡೆಮಿಯನ್ನು ಆರಂಭಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಯಶವಂತಪುರ ಕ್ಷೇತ್ರದ ಜನಪ್ರಿಯ MLA S T Soma Shekhar ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಲೆ ಮತ್ತು ಸಂಸ್ಕೃತಿಯು ನಮ್ಮ ಸಮಾಜದ ಜೀವನಾಡಿಯಾಗಿದ್ದು, ಇಂತಹ ನೃತ್ಯ ಅಕಾಡೆಮಿಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡಲಿವೆ ಎಂದು ಶುಭ ಹಾರೈಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೆರೋಹಳ್ಳಿಯ ಪ್ರಮುಖ ಕಾಂಗ್ರೆಸ್ ಮುಖಂಡರಾದ ಶ್ರೀ ಅಂಜನ್ ಸದಾಶಿವಯ್ಯ (Anjan Sadashivaiah Herohalli) ಅವರು, ಇಂದಿನ ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದು, ನಮ್ಮ ಸಾಂಪ್ರದಾಯಿಕ ಕಲೆ ಹಾಗೂ ನೃತ್ಯ ಪ್ರಕಾರಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಸ್ಥಳೀಯ ಯುವಕರಿಗೆ ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇಂತಹ ಅಕಾಡೆಮಿಗಳು ಬಹಳಷ್ಟು ಸಹಕಾರಿಯಾಗಲಿದ್ದು, ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಆಶಿಸಿದರು. ಹೆರೋಹಳ್ಳಿ ಬ್ಲಾಕ್ ಅಧ್ಯಕ್ಷರಾದ ಶ್ರೀಮತಿ ಸುಮಾ ಜನಾರ್ಧನ್, ಬ್ಯಾಡರಹಳ್ಳಿ ವಾರ್ಡ್-15ರ ಅಧ್ಯಕ್ಷರಾದ ಶ್ರೀ ಆದಿತ್ಯ ರಮೇಶ್, ಹೆರೋಹಳ್ಳಿ ವಾರ್ಡ್ ಅಧ್ಯಕ್ಷರಾದ ಶ್ರೀ ಕೆ ಲೋಕೇಶ್ ಹಾಗೂ ಹೆರೋಹಳ್ಳಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಹೇಮಾವತಿ ವಿ.ಜಿ. ಅವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
ಸೋಮವಾರವಾದ ಸೆಪ್ಟೆಂಬರ್ 7, 2026ರಂದು ನಡೆದ ಈ ಉದ್ಘಾಟನಾ ಸಮಾರಂಭಕ್ಕೆ KA17 ಬ್ರೈಟ್ ಸಿನಿಮಾಸ್, PPG-ಗ್ಲಾಮಪ್ ಮೇಕುವರ್ ಹಾಗೂ N5 ಫೋಟೋಗ್ರಫಿ ಸಂಸ್ಥೆಗಳು ವಿಶೇಷ ಪಾಲುದಾರರಾಗಿ (Special Partners) ಸಾಥ್ ನೀಡಿವೆ. ಅಂಜನಾನಗರದ ಬಿ-91 ವಿಳಾಸದಲ್ಲಿರುವ ಈ ಅಕಾಡೆಮಿಯು ಭರತನಾಟ್ಯ, ಪಾಶ್ಚಿಮಾತ್ಯ ನೃತ್ಯ ಹಾಗೂ ವಿವಿಧ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ವೃತ್ತಿಪರ ತರಬೇತಿಯನ್ನು ನೀಡಲಿದೆ. ಕಲಾ ರಸಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು, ನೃತ್ಯಾಸಕ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
