Connect with us

ಚುನಾವಣೆ

ಜನತಂತ್ರದ ಹಬ್ಬ – ಚುನಾವಣಾ ಖರ್ಚು ವೆಚ್ಚ ಹೇಗೆ ನಡೆಯುತ್ತೆ? – ಈ ಬಾರಿ ಅಂದಾಜಿಸಿರುವ ವೆಚ್ಚ ಎಷ್ಟು?

Published

on

2024ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್‌ 19 ರಿಂದ ಮೊದಲ ಹಂತದ ಚುನಾವಣೆ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಚುನಾವಣೆಗೆ ಆಗುವ ಖರ್ಚು ಸಾವಿರಾರು ಕೋಟಿ ರೂ.ಗಳ ಗಡಿ ದಾಟಿದೆ. 1952ರಲ್ಲಿ ನಡೆದ ದೇಶದ ಮೊದಲ ಲೋಕಸಭಾ ಚುನಾವಣೆಗೆ ಸುಮಾರು 10.45 ಕೋಟಿ ರೂ. ಖರ್ಚಾಗಿತ್ತು. ಆದ್ರೆ 2004ರ ಚುನಾವಣೆಯಿಂದ ಸಾವಿರ ಕೋಟಿ ರೂ.ಗಳ ಗಡಿ ದಾಟಿದೆ. ಈ ಬಾರಿ ಚುನಾವಣೆಗೆ ಒಟ್ಟು 7,000 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಇದು ಜಗತ್ತಿನ ಅತಿ ವೆಚ್ಚದಾಯಕ ಚುನಾವಣೆಗಳಲ್ಲಿ ಒಂದಾಗಿದ್ದು, ಆಯೋಗದ ವೆಚ್ಚದ ಜೊತೆಗೆ ಅಭ್ಯರ್ಥಿಗಳ ಲೆಕ್ಕಕ್ಕೆ ಸಿಗದ ಚುನಾವಣಾ ಖರ್ಚನ್ನು ಲೆಕ್ಕ ಹಾಕಿದರೆ ಹತ್ತಾರು ಸಾವಿರ ಕೋಟಿ ರೂ. ವೆಚ್ಚದ ಬಾಬ್ತು ಹಿಗ್ಗುತ್ತದೆ. ಆದ್ರೆ ಚುನಾವಣಾಧಿಕಾರಿಗಳು ಜನರಿಗೆ ಆಮಿಷ ಒಡ್ಡುವುದನ್ನು ತಡೆಯಲು ಅಲ್ಲಲ್ಲಿ ಅಭ್ಯರ್ಥಿಗಳು ಹಂಚುವ ಹಣ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದು, ಪಾರದರ್ಶಕ ಚುನಾವಣೆಗೆ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ ನಗದು, ಮಧ್ಯ, ಡ್ರಗ್ಸ್‌, ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಚುನಾವಣೆ ಮುಗಿಯುವಷ್ಟರಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ.

ಚುನಾವಣಾ ಪ್ರಚಾರ ತಂತ್ರ ಹೇಗೆ?
ಮತದಾರರನ್ನು ತಲುಪಲು ಅಭ್ಯರ್ಥಿಗಳು ನಾನಾ ರೀತಿಯ ಪ್ರಚಾರದ ಮೊರೆ ಹೋಗುತ್ತಾರೆ. ತಾರಾ ಪ್ರಚಾಕರನ್ನು ಕರೆತಂದು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಜೊತೆಗೆ ಬಿರುಸಿನ ಪ್ರಚಾರಕ್ಕಾಗಿ ಬಾಡಿಗೆ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆಲ್ಲಾ ಆಯೋಗ ವಿಧಿಸಿರುವ ವೆಚ್ಚದ ಮಿತಿಯಲ್ಲೇ ವಿನಿಯೋಗ ಆಗಬೇಕು. 2022ರ ಜ.6ರಿಂದ ಜಾರಿಯಲ್ಲಿರುವಂತೆ ಲೋಕಸಭೆ ಕ್ಷೇತ್ರದ ಪ್ರತಿ ಅಭ್ಯರ್ಥಿಯು ಗರಿಷ್ಠ 95 ಲಕ್ಷ ರೂ.ವರೆಗೆ ವೆಚ್ಚ ಮಾಡಬಹುದು. ಪ್ರತಿ ಖರ್ಚಿಗೂ ಲೆಕ್ಕ ಕೊಡುವುದು ಕಡ್ಡಾಯ. ಉಮೇದುವಾರಿಕೆ ಸಲ್ಲಿಸುವ ಸಮಯದಿಂದಲೇ ಅಭ್ಯರ್ಥಿಯ ವೆಚ್ಚದ ಲೆಕ್ಕ ಶುರುವಾಗುತ್ತದೆ. ಅಂದಿನಿಂದ ನಿತ್ಯ ಅವರು ಬಳಸುವ ವಾಹನದ ಇಂಧನ ವೆಚ್ಚ ಸೇರಿದಂತೆ ಇತರೆ ವೆಚ್ಚಗಳು ಅವರ ಲೆಕ್ಕಕ್ಕೆ ಜಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ಚುನಾವಣಾ ವೆಚ್ಚವನ್ನು ಯೋಜಿತ ರೀತಿಯಲ್ಲಿ ನಿಭಾಯಿಸಿ ಲೆಕ್ಕ ತಪ್ಪದಂತೆ ಪ್ರಚಾರ ನಡೆಸಬೇಕಿದೆ.

ತಾರಾ ಪ್ರಚಾರಕರ ವೆಚ್ಚ ಹೇಗೆ ನಡೆಯುತ್ತೆ?
ಚುನಾವಣೆ ವೇಳೆ ಸಮಾವೇಶ, ರೋಡ್‌ ಶೋ, ರ‍್ಯಾಲಿ ಈ ರೀತಿ ಬೇರೆ ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದ್ದರಿಂದ ಬೃಹತ್ ಸಮಾವೇಶ ಮತ್ತು ರೋಡ್‌ ಶೋಗಳು ಚುನಾವಣಾ ವೆಚ್ಚ ರಾಜಕೀಯ ಪಕ್ಷಗಳ ಲೆಕ್ಕಕ್ಕೇ ಸೇರುತ್ತದೆ. ಅಲ್ಲದೇ ತಾರಾ ಪ್ರಚಾರಕರೂ ಪಾಲ್ಗೊಳ್ಳುವ ಸಭೆ, ಸಮಾವೇಶ, ರೋಡ್‌ ಶೋಗಳಲ್ಲಿ ಅಭ್ಯರ್ಥಿಯ ಫೋಟೋ, ವೀಡಿಯೋಗಳು ಇಲ್ಲದೇ ಇದ್ದರೇ, ತಾರಾ ಪ್ರಚಾರಕರು ಅಭ್ಯರ್ಥಿಯ ಹೆಸರನ್ನೇ ಹೇಳದಿದ್ದರೆ ಅದರ ಸಂಪೂರ್ಣ ಖರ್ಚು ಸಹ ಪಕ್ಷದ ಲೆಕ್ಕಕ್ಕೇ ಬರುತ್ತದೆ. ಒಂದು ವೇಳೆ ತಾರಾ ಪ್ರಚಾರಕರೊಂದಿಗೆ ಅಭ್ಯರ್ಥಿಯೂ ಪಾಲ್ಗೊಂಡರೆ, ಅಭ್ಯರ್ಥಿಯ ಫೋಟೋ ವೀಡಿಯೋಗಳನ್ನು ಬಳಕೆ ಮಾಡಿಕೊಂಡರೆ, ಆ ವೆಚ್ಚವು ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಹಂಚಿಕೆಯಾಗುತ್ತದೆ. ಅಭ್ಯರ್ಥಿ ಪಾಲ್ಗೊಳ್ಳದೇ ತಾರಾ ಪ್ರಚಾರಕರು ಅಭ್ಯರ್ಥಿಯ ಹೆಸರು ಪ್ರಸ್ತಾಪಿಸಿ ಪ್ರಚಾರ ನಡೆಸಿದರೆ, ವೆಚ್ಚದ ಅರ್ಧಪಾಲು ಅಭ್ಯರ್ಥಿಯ ಲೆಕ್ಕಕ್ಕೆ ಬರುತ್ತದೆ.

ಅಲ್ಲದೇ ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ಬಳಿಕ, ಮತದಾನದ ಅವಧಿ ಮುಗಿಯುವವರೆಗಿನ ಅಭ್ಯರ್ಥಿಗಳ ವೆಚ್ಚ, ವಿವರವನ್ನು ಮೂರು ಬಾರಿ ಪರಿಶೀಲಿಸಲಾಗುತ್ತದೆ. ಅಭ್ಯರ್ಥಿಯು ಅನುಮತಿ ಪಡೆದಿದ್ದಕ್ಕಿಂತ ಹೆಚ್ಚಿನ ವೆಚ್ಚ ಮಾಡಿದ್ದರೆ, ವೀಡಿಯೋ ದಾಖಲೆ ಆಧರಿಸಿ ಅದನ್ನು ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ.

ಪಕ್ಷ ಬೇರೆ-ಅಭ್ಯರ್ಥಿ ಲೆಕ್ಕ ಬೇರೆ:
ಪ್ರಚಾರ ದೃಷ್ಟಿಯಿಂದ ನಡೆಸುವ ಸಭೆ, ಸಮಾರಂಭ, ಸಮಾವೇಶ, ರೋಡ್‌ ಶೋಗೆ ತಗಲುವ ವೆಚ್ಚವನ್ನು ಅನುಮತಿ ಪಡೆಯುವ ಪಕ್ಷ ಹಾಗೂ ಅಭ್ಯರ್ಥಿಗೆ ಹಂಚಿಕೆ ಮಾಡಲು ನಿರ್ದಿಷ್ಟ ವರ್ಗೀಕರಣವಿದೆ. ಕಣದಲ್ಲಿರುವ ಅಭ್ಯರ್ಥಿಗಳು ನಿತ್ಯ ವಾಹನಗಳಿಗೆ ಬಳಸುವ ಇಂಧನ, ಇತರೇ ಖರ್ಚು ವೆಚ್ಚಗಳು ಅಭ್ಯರ್ಥಿಯ ಲೆಕ್ಕಕ್ಕೆ ಸೇರುತ್ತದೆ. ಜೊತೆಗೆ ರೋಡ್‌ ಶೋ, ರ‍್ಯಾಲಿ, ಸಮಾವೇಶಗಳಿಗೆ ಪಡೆಯುವ ಅನುಮತಿ ಆಧರಿಸಿ, ವೆಚ್ಚವನ್ನು ಲೆಕ್ಕ ಹಾಕಿ, ಪಕ್ಷ ಅಥವಾ ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಇರುವಂತೆ ಪಕ್ಷಕ್ಕೆ ಮಿತಿಯಿಲ್ಲ, ಅದ್ರೆ ಪ್ರತಿ ಖರ್ಚಿಗೂ ಲೆಕ್ಕ ಕೊಡುವುದು ಕಡ್ಡಾಯ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ವೆಚ್ಚ ಯಾವ ವರ್ಷದಲ್ಲಿ ಎಷ್ಟಿತ್ತು? ಈ ವರ್ಷ ಎಷ್ಟು?
ಪ್ರಸಕ್ತ ವರ್ಷ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರಸಕ್ತ ವರ್ಷದ ಚುನಾವಣಾ ಪ್ರಕ್ರಿಯೆಗೆ 7000 ಕೋಟಿ ರೂ.ನಷ್ಟು ವೆಚ್ಚ ತಗುಲಲಿದೆ ಎಂದು ಅಂದಾಜಿಸಿದ್ದು, ಈ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.
* 1952ರಲ್ಲಿ ನಡೆದ ದೇಶದ ಮೊದಲ ಲೋಕಸಭಾ ಚುನಾವಣೆಗೆ 10.45 ಕೋಟಿ ರೂ. ವೆಚ್ಚ ತಗುಲಿತ್ತು.
* 2004ರಲ್ಲಿ ಚುನಾವಣಾ ವೆಚ್ಚ ಸಾವಿರ ಕೋಟಿ ಗಡಿ ದಾಟಿತ್ತು. ಆಗ 1,113 ಕೋಟಿ ರೂ. ಖರ್ಚಾಗಿತ್ತು.
* 2009ರಲ್ಲಿ 1,483 ಕೋಟಿ ರೂ.ಗಳಷ್ಟು ಚುನಾವಣಾ ವೆಚ್ಚ ಖರ್ಚಾಗಿತ್ತು.
* 2014ರ ಚುನಾವಣೆಯಲ್ಲಿ ಒಟ್ಟು 3,870 ಕೋಟಿ ರೂ. ವೆಚ್ಚವಾಗಿತ್ತು.
* 2019ರ ಚುನಾವಣೆಯಲ್ಲಿ 4,000 ಕೋಟಿ ರೂ. ಖರ್ಚಾಗಿತ್ತು. ಈ ಬಾರಿ 7,000 ಕೋಟಿ ರೂ. ವೆಚ್ಚ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

ದೇಶ

ಪಂಜಾಬ್ ಚುನಾವಣೆಗೆ Waris Punjab De ಮೊದಲ ಅಭ್ಯರ್ಥಿ; ಸತ್ವಂತ್ ಸಿಂಗ್ ಕಣಕ್ಕೆ

Published

on

ಚಂಡೀಗಢ: 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿರುವ ಬೆನ್ನಲ್ಲೇ, ಅಕಾಲಿ ದಳ್ Waris Punjab De ತನ್ನ ಮೊದಲ ಅಭ್ಯರ್ಥಿಯನ್ನು ಘೋಷಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗಿದ್ದ ಕೆಹರ್ ಸಿಂಗ್ ಅವರ ಪುತ್ರ ಸತ್ವಂತ್ ಸಿಂಗ್ ಅವರನ್ನು ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಈ ಘೋಷಣೆ ಪಂಜಾಬ್‌ನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇಂದಿರಾ ಗಾಂಧಿ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಕೆಹರ್ ಸಿಂಗ್ ದೋಷಿಯಾಗಿದ್ದರು. ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಇದೀಗ ಅವರ ಪುತ್ರನಿಗೆ 2027 Punjab Assembly Election ಟಿಕೆಟ್ ನೀಡಿರುವುದು ಪಂಥಿಕ್ ರಾಜಕೀಯದಲ್ಲಿ ಗಮನ ಸೆಳೆದಿದೆ.

ತ್ಯಾಗ ಮಾಡಿದ ಕುಟುಂಬಗಳಿಗೆ ಗೌರವ: ತರ್ಸೆಮ್ ಸಿಂಗ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರ್ಸೆಮ್ ಸಿಂಗ್, ಪಕ್ಷದ ರಾಜಕೀಯ ಕೇವಲ ಅಧಿಕಾರ ಹಿಡಿಯುವುದಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದ್ದಾರೆ. ಪಂಥಿಕ್ ತತ್ವಗಳು, ಪಂಜಾಬ್‌ನ ಹಕ್ಕುಗಳು ಹಾಗೂ ಸಮುದಾಯಕ್ಕಾಗಿ ತ್ಯಾಗ ಮಾಡಿದ ಕುಟುಂಬಗಳ ಗೌರವವನ್ನು ಎತ್ತಿಹಿಡಿಯುವುದು ಪಕ್ಷದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಪಂಥ್ ಮತ್ತು ಸಮುದಾಯಕ್ಕಾಗಿ ತ್ಯಾಗ ಮಾಡಿದ ಕುಟುಂಬಗಳನ್ನು ಪಕ್ಷ ಕಡೆಗಣಿಸುತ್ತಿದೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಆದರೆ, ಮೊದಲ ಅಭ್ಯರ್ಥಿಯಾಗಿಯೇ ಅಂತಹ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಮೂಲಕ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ತರ್ಸೆಮ್ ಸಿಂಗ್ ಹೇಳಿದ್ದಾರೆ.

ಬಸ್ಸಿ ಪಠಾನಾದಲ್ಲಿ ಪಂಥಿಕ್ ಮತಗಳ ಲೆಕ್ಕಾಚಾರ

ಸತ್ವಂತ್ ಸಿಂಗ್ ಅವರ ಅಭ್ಯರ್ಥಿತನವು ಬಸ್ಸಿ ಪಠಾನಾ ಕ್ಷೇತ್ರದಲ್ಲಿ Panthic Politics in Punjab ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅವರ ಕುಟುಂಬದ ಹಿನ್ನೆಲೆ ಮತದಾರರ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸಿದೆ.

2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಪಡೆದಿತ್ತು. ಕಾಂಗ್ರೆಸ್ 18 ಸ್ಥಾನಗಳಿಗೆ ಸೀಮಿತವಾಗಿತ್ತು. ಇದೀಗ 2027ರ ಚುನಾವಣೆಯಲ್ಲಿ ಪಂಥಿಕ್ ರಾಜಕೀಯದ ಪ್ರಭಾವ ಎಷ್ಟಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Continue Reading

ಬೆಂಗಳೂರು

SIR ಸಮೀಕ್ಷೆ ವೇಳೆ ಸರ್ಕಾರಿ ಅಧಿಕಾರಿಗೆ ಹಲ್ಲೆ: ಡಿ.ಜೆ.ಹಳ್ಳಿಯಲ್ಲಿ ಇಬ್ಬರು ಆರೋಪಿಗಳ ಬಂಧನ

Published

on

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಕಾರ್ಯಾಚರಣೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಜೀವನಹಳ್ಳಿ (D J Halli) ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಯಾರಬ್ ಮತ್ತು ದಸ್ತಗೀರ್ ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಸುಮಾರು 1.30 ಗಂಟೆ ವೇಳೆಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಸ್ಲಂ ಡೆವಲಪ್‌ಮೆಂಟ್ ಬೋರ್ಡ್ ಅಧಿಕಾರಿಗಳ ತಂಡವು ಡಿ.ಜೆ.ಹಳ್ಳಿಯ ರೋಶನ್ ನಗರದಲ್ಲಿರುವ ಕೌಸರ್ ಮಸೀದಿ ಸಮೀಪ SIR ಸಮೀಕ್ಷೆ ನಡೆಸುತ್ತಿತ್ತು.

ಈ ವೇಳೆ ಸ್ಥಳಕ್ಕೆ ಬಂದ ದಸ್ತಗೀರ್, ತನಗೂ SIR ಫಾರ್ಮ್ ನೀಡುವಂತೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾನೆ. ಆದರೆ ಆತ ಈಗಾಗಲೇ ಜಯನಗರಕ್ಕೆ ವಾಸ್ತವ್ಯ ಬದಲಾಯಿಸಿರುವುದರಿಂದ ಆ ಪ್ರದೇಶದಲ್ಲಿ ಫಾರ್ಮ್ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಈ ಉತ್ತರದಿಂದ ಆಕ್ರೋಶಗೊಂಡ ದಸ್ತಗೀರ್ ಹಾಗೂ ಆತನಿಗೆ ಬೆಂಬಲ ನೀಡಿದ ಯಾರಬ್, ಕರ್ತವ್ಯದಲ್ಲಿದ್ದ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅಧಿಕಾರಿಗೆ ಗಾಯ

ಹಲ್ಲೆಯಲ್ಲಿ ಸ್ಲಂ ಡೆವಲಪ್‌ಮೆಂಟ್ ಬೋರ್ಡ್‌ನ ಸೂಪರಿಂಟೆಂಡೆಂಟ್ ಫಕೀರಪ್ಪ ಗಾಯಗೊಂಡಿದ್ದಾರೆ. ಆರೋಪಿಗಳು ಮುಖ ಹಾಗೂ ಕಟಿ ಭಾಗಕ್ಕೆ ಹೊಡೆದಿದ್ದು, ಬೆನ್ನಿನ ಮೇಲೂ ಹಲ್ಲೆ ನಡೆಸಿದ ಪರಿಣಾಮ ಅವರ ತುಟಿಗೆ ಗಾಯವಾಗಿ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ.

ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದು, ಗಾಯಗೊಂಡ ಅಧಿಕಾರಿಯನ್ನು ತಕ್ಷಣ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪ್ರಕರಣ ದಾಖಲು, ಇಬ್ಬರ ಬಂಧನ

ಚಿಕಿತ್ಸೆಯ ಬಳಿಕ ಫಕೀರಪ್ಪ ಅವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

ಬೆಂಗಳೂರು

GBA ಸೇರಿ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ಡಿಸೆಂಬರ್ ಒಳಗೆ; ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

Published

on

ನವದೆಹಲಿ: ಬೆಂಗಳೂರು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆ ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು (Local Body Elections) ನಿಗದಿತ ಅವಧಿಯೊಳಗೆ ನಡೆಸಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳು ಹಾಗೂ ಚುನಾವಣಾ ಸಿದ್ಧತೆಗಳ ಕುರಿತು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಚುನಾವಣೆಗಳನ್ನು ಅನಗತ್ಯವಾಗಿ ಮುಂದೂಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರಕಾರ, ಬೆಂಗಳೂರು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮೊದಲಿಗೆ ಆಗಸ್ಟ್ 31ರೊಳಗೆ ನಡೆಸುವ ಉದ್ದೇಶ ಹೊಂದಲಾಗಿತ್ತು. ಆದರೆ ಎಸ್‌ಐಆರ್ (SIR) ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹಾಗೂ ಕೆಲವು ತಾಂತ್ರಿಕ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚಿನ ಕಾಲಾವಕಾಶ ಕೋರಿತ್ತು.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಿಎಂ, ಚುನಾವಣೆ ಪ್ರಕ್ರಿಯೆಯನ್ನು ವಿಳಂಬ ಮಾಡುವುದು ಸರ್ಕಾರದ ಉದ್ದೇಶವಲ್ಲ ಎಂದು ಪುನರುಚ್ಚರಿಸಿದರು.

ಬೆಂಗಳೂರು ಮಾತ್ರವಲ್ಲದೆ, ರಾಜ್ಯದಲ್ಲಿ ಬಾಕಿ ಉಳಿದಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ಚುನಾವಣೆಗಳನ್ನು ಈ ವರ್ಷದ ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿ ಆಶಯಕ್ಕೆ ಅನುಗುಣವಾಗಿ ಗ್ರಾಮ ಪಂಚಾಯತ್‌ನಿಂದ ಮಹಾನಗರ ಪಾಲಿಕೆವರೆಗೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಯುವ ನಾಯಕತ್ವ ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಗಡುವಿನ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳನ್ನು ವೇಗಗೊಳಿಸುವ ಸಾಧ್ಯತೆ ಇದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡ ಬಳಿಕ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ. ಇದರಿಂದ GBA ಚುನಾವಣೆ ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

Continue Reading

Trending