Connect with us

ಚುನಾವಣೆ

ಜನತಂತ್ರದ ಹಬ್ಬ – ಚುನಾವಣಾ ಖರ್ಚು ವೆಚ್ಚ ಹೇಗೆ ನಡೆಯುತ್ತೆ? – ಈ ಬಾರಿ ಅಂದಾಜಿಸಿರುವ ವೆಚ್ಚ ಎಷ್ಟು?

Published

on

2024ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್‌ 19 ರಿಂದ ಮೊದಲ ಹಂತದ ಚುನಾವಣೆ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಚುನಾವಣೆಗೆ ಆಗುವ ಖರ್ಚು ಸಾವಿರಾರು ಕೋಟಿ ರೂ.ಗಳ ಗಡಿ ದಾಟಿದೆ. 1952ರಲ್ಲಿ ನಡೆದ ದೇಶದ ಮೊದಲ ಲೋಕಸಭಾ ಚುನಾವಣೆಗೆ ಸುಮಾರು 10.45 ಕೋಟಿ ರೂ. ಖರ್ಚಾಗಿತ್ತು. ಆದ್ರೆ 2004ರ ಚುನಾವಣೆಯಿಂದ ಸಾವಿರ ಕೋಟಿ ರೂ.ಗಳ ಗಡಿ ದಾಟಿದೆ. ಈ ಬಾರಿ ಚುನಾವಣೆಗೆ ಒಟ್ಟು 7,000 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಇದು ಜಗತ್ತಿನ ಅತಿ ವೆಚ್ಚದಾಯಕ ಚುನಾವಣೆಗಳಲ್ಲಿ ಒಂದಾಗಿದ್ದು, ಆಯೋಗದ ವೆಚ್ಚದ ಜೊತೆಗೆ ಅಭ್ಯರ್ಥಿಗಳ ಲೆಕ್ಕಕ್ಕೆ ಸಿಗದ ಚುನಾವಣಾ ಖರ್ಚನ್ನು ಲೆಕ್ಕ ಹಾಕಿದರೆ ಹತ್ತಾರು ಸಾವಿರ ಕೋಟಿ ರೂ. ವೆಚ್ಚದ ಬಾಬ್ತು ಹಿಗ್ಗುತ್ತದೆ. ಆದ್ರೆ ಚುನಾವಣಾಧಿಕಾರಿಗಳು ಜನರಿಗೆ ಆಮಿಷ ಒಡ್ಡುವುದನ್ನು ತಡೆಯಲು ಅಲ್ಲಲ್ಲಿ ಅಭ್ಯರ್ಥಿಗಳು ಹಂಚುವ ಹಣ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದು, ಪಾರದರ್ಶಕ ಚುನಾವಣೆಗೆ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ ನಗದು, ಮಧ್ಯ, ಡ್ರಗ್ಸ್‌, ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಚುನಾವಣೆ ಮುಗಿಯುವಷ್ಟರಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ.

ಚುನಾವಣಾ ಪ್ರಚಾರ ತಂತ್ರ ಹೇಗೆ?
ಮತದಾರರನ್ನು ತಲುಪಲು ಅಭ್ಯರ್ಥಿಗಳು ನಾನಾ ರೀತಿಯ ಪ್ರಚಾರದ ಮೊರೆ ಹೋಗುತ್ತಾರೆ. ತಾರಾ ಪ್ರಚಾಕರನ್ನು ಕರೆತಂದು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಜೊತೆಗೆ ಬಿರುಸಿನ ಪ್ರಚಾರಕ್ಕಾಗಿ ಬಾಡಿಗೆ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆಲ್ಲಾ ಆಯೋಗ ವಿಧಿಸಿರುವ ವೆಚ್ಚದ ಮಿತಿಯಲ್ಲೇ ವಿನಿಯೋಗ ಆಗಬೇಕು. 2022ರ ಜ.6ರಿಂದ ಜಾರಿಯಲ್ಲಿರುವಂತೆ ಲೋಕಸಭೆ ಕ್ಷೇತ್ರದ ಪ್ರತಿ ಅಭ್ಯರ್ಥಿಯು ಗರಿಷ್ಠ 95 ಲಕ್ಷ ರೂ.ವರೆಗೆ ವೆಚ್ಚ ಮಾಡಬಹುದು. ಪ್ರತಿ ಖರ್ಚಿಗೂ ಲೆಕ್ಕ ಕೊಡುವುದು ಕಡ್ಡಾಯ. ಉಮೇದುವಾರಿಕೆ ಸಲ್ಲಿಸುವ ಸಮಯದಿಂದಲೇ ಅಭ್ಯರ್ಥಿಯ ವೆಚ್ಚದ ಲೆಕ್ಕ ಶುರುವಾಗುತ್ತದೆ. ಅಂದಿನಿಂದ ನಿತ್ಯ ಅವರು ಬಳಸುವ ವಾಹನದ ಇಂಧನ ವೆಚ್ಚ ಸೇರಿದಂತೆ ಇತರೆ ವೆಚ್ಚಗಳು ಅವರ ಲೆಕ್ಕಕ್ಕೆ ಜಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ಚುನಾವಣಾ ವೆಚ್ಚವನ್ನು ಯೋಜಿತ ರೀತಿಯಲ್ಲಿ ನಿಭಾಯಿಸಿ ಲೆಕ್ಕ ತಪ್ಪದಂತೆ ಪ್ರಚಾರ ನಡೆಸಬೇಕಿದೆ.

ತಾರಾ ಪ್ರಚಾರಕರ ವೆಚ್ಚ ಹೇಗೆ ನಡೆಯುತ್ತೆ?
ಚುನಾವಣೆ ವೇಳೆ ಸಮಾವೇಶ, ರೋಡ್‌ ಶೋ, ರ‍್ಯಾಲಿ ಈ ರೀತಿ ಬೇರೆ ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದ್ದರಿಂದ ಬೃಹತ್ ಸಮಾವೇಶ ಮತ್ತು ರೋಡ್‌ ಶೋಗಳು ಚುನಾವಣಾ ವೆಚ್ಚ ರಾಜಕೀಯ ಪಕ್ಷಗಳ ಲೆಕ್ಕಕ್ಕೇ ಸೇರುತ್ತದೆ. ಅಲ್ಲದೇ ತಾರಾ ಪ್ರಚಾರಕರೂ ಪಾಲ್ಗೊಳ್ಳುವ ಸಭೆ, ಸಮಾವೇಶ, ರೋಡ್‌ ಶೋಗಳಲ್ಲಿ ಅಭ್ಯರ್ಥಿಯ ಫೋಟೋ, ವೀಡಿಯೋಗಳು ಇಲ್ಲದೇ ಇದ್ದರೇ, ತಾರಾ ಪ್ರಚಾರಕರು ಅಭ್ಯರ್ಥಿಯ ಹೆಸರನ್ನೇ ಹೇಳದಿದ್ದರೆ ಅದರ ಸಂಪೂರ್ಣ ಖರ್ಚು ಸಹ ಪಕ್ಷದ ಲೆಕ್ಕಕ್ಕೇ ಬರುತ್ತದೆ. ಒಂದು ವೇಳೆ ತಾರಾ ಪ್ರಚಾರಕರೊಂದಿಗೆ ಅಭ್ಯರ್ಥಿಯೂ ಪಾಲ್ಗೊಂಡರೆ, ಅಭ್ಯರ್ಥಿಯ ಫೋಟೋ ವೀಡಿಯೋಗಳನ್ನು ಬಳಕೆ ಮಾಡಿಕೊಂಡರೆ, ಆ ವೆಚ್ಚವು ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಹಂಚಿಕೆಯಾಗುತ್ತದೆ. ಅಭ್ಯರ್ಥಿ ಪಾಲ್ಗೊಳ್ಳದೇ ತಾರಾ ಪ್ರಚಾರಕರು ಅಭ್ಯರ್ಥಿಯ ಹೆಸರು ಪ್ರಸ್ತಾಪಿಸಿ ಪ್ರಚಾರ ನಡೆಸಿದರೆ, ವೆಚ್ಚದ ಅರ್ಧಪಾಲು ಅಭ್ಯರ್ಥಿಯ ಲೆಕ್ಕಕ್ಕೆ ಬರುತ್ತದೆ.

ಅಲ್ಲದೇ ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ಬಳಿಕ, ಮತದಾನದ ಅವಧಿ ಮುಗಿಯುವವರೆಗಿನ ಅಭ್ಯರ್ಥಿಗಳ ವೆಚ್ಚ, ವಿವರವನ್ನು ಮೂರು ಬಾರಿ ಪರಿಶೀಲಿಸಲಾಗುತ್ತದೆ. ಅಭ್ಯರ್ಥಿಯು ಅನುಮತಿ ಪಡೆದಿದ್ದಕ್ಕಿಂತ ಹೆಚ್ಚಿನ ವೆಚ್ಚ ಮಾಡಿದ್ದರೆ, ವೀಡಿಯೋ ದಾಖಲೆ ಆಧರಿಸಿ ಅದನ್ನು ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ.

ಪಕ್ಷ ಬೇರೆ-ಅಭ್ಯರ್ಥಿ ಲೆಕ್ಕ ಬೇರೆ:
ಪ್ರಚಾರ ದೃಷ್ಟಿಯಿಂದ ನಡೆಸುವ ಸಭೆ, ಸಮಾರಂಭ, ಸಮಾವೇಶ, ರೋಡ್‌ ಶೋಗೆ ತಗಲುವ ವೆಚ್ಚವನ್ನು ಅನುಮತಿ ಪಡೆಯುವ ಪಕ್ಷ ಹಾಗೂ ಅಭ್ಯರ್ಥಿಗೆ ಹಂಚಿಕೆ ಮಾಡಲು ನಿರ್ದಿಷ್ಟ ವರ್ಗೀಕರಣವಿದೆ. ಕಣದಲ್ಲಿರುವ ಅಭ್ಯರ್ಥಿಗಳು ನಿತ್ಯ ವಾಹನಗಳಿಗೆ ಬಳಸುವ ಇಂಧನ, ಇತರೇ ಖರ್ಚು ವೆಚ್ಚಗಳು ಅಭ್ಯರ್ಥಿಯ ಲೆಕ್ಕಕ್ಕೆ ಸೇರುತ್ತದೆ. ಜೊತೆಗೆ ರೋಡ್‌ ಶೋ, ರ‍್ಯಾಲಿ, ಸಮಾವೇಶಗಳಿಗೆ ಪಡೆಯುವ ಅನುಮತಿ ಆಧರಿಸಿ, ವೆಚ್ಚವನ್ನು ಲೆಕ್ಕ ಹಾಕಿ, ಪಕ್ಷ ಅಥವಾ ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಇರುವಂತೆ ಪಕ್ಷಕ್ಕೆ ಮಿತಿಯಿಲ್ಲ, ಅದ್ರೆ ಪ್ರತಿ ಖರ್ಚಿಗೂ ಲೆಕ್ಕ ಕೊಡುವುದು ಕಡ್ಡಾಯ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ವೆಚ್ಚ ಯಾವ ವರ್ಷದಲ್ಲಿ ಎಷ್ಟಿತ್ತು? ಈ ವರ್ಷ ಎಷ್ಟು?
ಪ್ರಸಕ್ತ ವರ್ಷ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರಸಕ್ತ ವರ್ಷದ ಚುನಾವಣಾ ಪ್ರಕ್ರಿಯೆಗೆ 7000 ಕೋಟಿ ರೂ.ನಷ್ಟು ವೆಚ್ಚ ತಗುಲಲಿದೆ ಎಂದು ಅಂದಾಜಿಸಿದ್ದು, ಈ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.
* 1952ರಲ್ಲಿ ನಡೆದ ದೇಶದ ಮೊದಲ ಲೋಕಸಭಾ ಚುನಾವಣೆಗೆ 10.45 ಕೋಟಿ ರೂ. ವೆಚ್ಚ ತಗುಲಿತ್ತು.
* 2004ರಲ್ಲಿ ಚುನಾವಣಾ ವೆಚ್ಚ ಸಾವಿರ ಕೋಟಿ ಗಡಿ ದಾಟಿತ್ತು. ಆಗ 1,113 ಕೋಟಿ ರೂ. ಖರ್ಚಾಗಿತ್ತು.
* 2009ರಲ್ಲಿ 1,483 ಕೋಟಿ ರೂ.ಗಳಷ್ಟು ಚುನಾವಣಾ ವೆಚ್ಚ ಖರ್ಚಾಗಿತ್ತು.
* 2014ರ ಚುನಾವಣೆಯಲ್ಲಿ ಒಟ್ಟು 3,870 ಕೋಟಿ ರೂ. ವೆಚ್ಚವಾಗಿತ್ತು.
* 2019ರ ಚುನಾವಣೆಯಲ್ಲಿ 4,000 ಕೋಟಿ ರೂ. ಖರ್ಚಾಗಿತ್ತು. ಈ ಬಾರಿ 7,000 ಕೋಟಿ ರೂ. ವೆಚ್ಚ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

ಚುನಾವಣೆ

ನರೋತ್ತಮ್ ಮಿಶ್ರಾಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಭಾರೀ ಬಂಡಾಯ! ರಸ್ತೆ ತಡೆ, ಕಲ್ಲು ತೂರಾಟ, ಹಲವು ರಾಜೀನಾಮೆ

Published

on

ಭೋಪಾಲ್: ಮಧ್ಯಪ್ರದೇಶದ ದತಿಯಾ ವಿಧಾನಸಭಾ ಉಪಚುನಾವಣೆಗೆ ಮಾಜಿ ಗೃಹಸಚಿವ ನರೋತ್ತಮ್ ಮಿಶ್ರಾ ಅವರಿಗೆ ಬಿಜೆಪಿ ಟಿಕೆಟ್ ನೀಡದೆ, ಅವರ ಬದಲಿಗೆ ಅಶುತೋಷ್ ತಿವಾರಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ನಿರ್ಧಾರವನ್ನು ವಿರೋಧಿಸಿ ದತಿಯಾ ಬಿಜೆಪಿ ಘಟಕದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಜಿಲ್ಲಾಧ್ಯಕ್ಷ ರಘುವೀರ್ ಶರಣ್ ಸೇರಿದಂತೆ ಹಲವು ಕೌನ್ಸಿಲರ್‌ಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಟಿಕೆಟ್ ನಿರಾಕರಣೆಯ ಸುದ್ದಿ ಹೊರಬಿದ್ದ ತಕ್ಷಣ ಸಾವಿರಾರು ಬೆಂಬಲಿಗರು NH-44 ಝಾನ್ಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪರಿಣಾಮ ಸುಮಾರು 15 ಕಿಲೋಮೀಟರ್‌ಗಳಷ್ಟು ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು. ಪ್ರತಿಭಟನೆ ವೇಳೆ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಯಿತು.

ದತಿಯಾ ಎಸ್‌ಪಿ ಮಯೂರ್ ಖಾಂಡೇಲ್ವಾಲ್ ಅವರ ಪ್ರಕಾರ, 3,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಮಾರುಕಟ್ಟೆ ಬಂದ್ ಮಾಡಲು ಯತ್ನಿಸಿದ್ದು, ಹಲವು ಬಾರಿ ಮನವಿ ಮಾಡಿದರೂ ರಸ್ತೆ ತಡೆ ಹಿಂಪಡೆಯಲಿಲ್ಲ. ಬಳಿಕ ಪೊಲೀಸರು ಅಶ್ರುವಾಯು ಬಳಸಿದರೂ ಕಲ್ಲು ತೂರಾಟ ಮತ್ತಷ್ಟು ತೀವ್ರಗೊಂಡಿತು. ಘಟನೆಯಲ್ಲಿ ಆರುಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಹೆಚ್ಚುವರಿ ಎಸ್‌ಪಿ ಹಾಗೂ ಎಸ್‌ಪಿಗೂ ಗಾಯಗಳಾಗಿವೆ. ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಯಾರು ನರೋತ್ತಮ್ ಮಿಶ್ರಾ?

ನರೋತ್ತಮ್ ಮಿಶ್ರಾ ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಗೃಹಸಚಿವರಾಗಿದ್ದಾರೆ. 2008ರಿಂದ ದತಿಯಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಅವರು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಗೃಹ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ, ನಗರಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಸಚಿವಾಲಯಗಳನ್ನು ನಿರ್ವಹಿಸಿದ್ದರು.

ಉಪಚುನಾವಣೆ ಏಕೆ ನಡೆಯುತ್ತಿದೆ?

ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರತಿ ವಿರುದ್ಧ ವಂಚನೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬಳಿಕ ಅವರ ಶಾಸಕ ಸ್ಥಾನ ರದ್ದುಗೊಂಡಿದೆ. ಇದರ ಪರಿಣಾಮವಾಗಿ ದತಿಯಾ ಕ್ಷೇತ್ರಕ್ಕೆ ಜುಲೈ 30ರಂದು ಉಪಚುನಾವಣೆ ನಡೆಯಲಿದ್ದು, ಆಗಸ್ಟ್ 3ರಂದು ಮತ ಎಣಿಕೆ ನಡೆಯಲಿದೆ. ಟಿಕೆಟ್ ಘೋಷಣೆಯ ಬೆನ್ನಲ್ಲೇ ಬಿಜೆಪಿ ಒಳಜಗಳ ತೀವ್ರಗೊಂಡಿರುವುದು ಚುನಾವಣೆಗೆ ಹೊಸ ತಿರುವು ನೀಡಿದೆ.

Continue Reading

ಚುನಾವಣೆ

ಐದು ನಗರ ಪಾಲಿಕೆ ಚುನಾವಣೆ ಕಾವು: ಕಾಂಗ್ರೆಸ್ ಸೇರಿದಂತೆ ಪಕ್ಷಗಳಲ್ಲಿ ಚಟುವಟಿಕೆ ಜೋರು

Published

on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಆಗಸ್ಟ್ 31ರೊಳಗೆ ಕಡ್ಡಾಯವಾಗಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದ್ದು, ಆಗಸ್ಟ್ ಮೂರನೇ ವಾರದಲ್ಲಿ ಮತದಾನ ನಡೆಯುವ ನಿರೀಕ್ಷೆ ಮೂಡಿದೆ.

ಸುಪ್ರೀಂ ಕೋರ್ಟ್ ಮೊದಲು ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಸಿಬ್ಬಂದಿ ಕೊರತೆ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಪರಿಗಣಿಸಿ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ. ಆದರೆ ಇದೇ ಅಂತಿಮ ಅವಕಾಶವಾಗಿದ್ದು, ಮತ್ತೊಮ್ಮೆ ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರವು ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಚುನಾವಣಾ ಪ್ರಕ್ರಿಯೆ ವೇಗ ಪಡೆಯಲು ಕಾರಣವಾಗಿದೆ. ಈ ಬೆಳವಣಿಗೆಯ ನಂತರ ರಾಜ್ಯ ಚುನಾವಣಾ ಆಯೋಗ ಸದ್ದಿಲ್ಲದೇ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದೆ.

ಮತದಾರರ ಪಟ್ಟಿ ಅಂತಿಮಗೊಳಿಸುವುದು, ಮತಗಟ್ಟೆಗಳ ಗುರುತಿಸುವಿಕೆ, ಚುನಾವಣಾ ಸಿಬ್ಬಂದಿ ನಿಯೋಜನೆ ಹಾಗೂ ಇತರೆ ಆಡಳಿತಾತ್ಮಕ ಕಾರ್ಯಗಳು ಈಗಾಗಲೇ ನಡೆಯುತ್ತಿವೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಜುಲೈ 10ರೊಳಗೆ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವೇಳಾಪಟ್ಟಿ ಘೋಷಣೆಯಾದ ತಕ್ಷಣ ಜಿಬಿಎ ವ್ಯಾಪ್ತಿಯಲ್ಲಿ ಮಾದರಿ ನೀತಿಸಂಹಿತೆ ಜಾರಿಗೆ ಬರಲಿದೆ.

ಇತ್ತ ರಾಜಕೀಯ ಪಕ್ಷಗಳೂ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿವೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಐದು ನಗರ ಪಾಲಿಕೆಗಳ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಂಘಟನಾ ಚಟುವಟಿಕೆಗಳನ್ನು ತೀವ್ರಗೊಳಿಸುವಂತೆ ಸೂಚಿಸಿದೆ. ಮನೆಮನೆಗೆ ಭೇಟಿ, ಸರ್ಕಾರದ ಸಾಧನೆಗಳ ಪ್ರಚಾರ, ಗ್ಯಾರಂಟಿ ಯೋಜನೆಗಳ ಮಾಹಿತಿ ಹಾಗೂ ವಾರ್ಡ್‌ವಾರು ಮತದಾರರ ಸಂಪರ್ಕ ಅಭಿಯಾನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಜಿಬಿಎ ಚುನಾವಣೆಗಳು ಬೆಂಗಳೂರು ನಗರ ಆಡಳಿತದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಚುನಾವಣೆಗಳಾಗಿದ್ದು, ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

Continue Reading

ಚುನಾವಣೆ

GBA ELECTION : ಜುಲೈ ಮೊದಲ ವಾರದಲ್ಲೇ ವೇಳಾಪಟ್ಟಿ? ಬೆಂಗಳೂರು ರಾಜಕೀಯ ಕಣ ರಂಗೇರಲು ಸಜ್ಜು

Published

on

ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರಪಾಲಿಕೆಗಳ ಚುನಾವಣೆ ಆಗಸ್ಟ್ 31ರೊಳಗೆ ನಡೆಸುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಆಯೋಗವು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದೆ.

ಮೂಲಗಳ ಪ್ರಕಾರ, ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಜುಲೈ 10ರೊಳಗೆ ದಿನಾಂಕ ಘೋಷಣೆಯಾಗಬಹುದು ಎಂದು ಹೇಳಲಾಗುತ್ತಿದ್ದು, ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ಬೆಂಗಳೂರು ನಗರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಆಗಸ್ಟ್ ಮೂರನೇ ವಾರದಲ್ಲಿ ಮತದಾನ ನಡೆಸುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ.

ಈ ಹಿಂದೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ ಸಿಬ್ಬಂದಿ ಕೊರತೆಯನ್ನು ಪರಿಗಣಿಸಿ ನ್ಯಾಯಾಲಯವು ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿತ್ತು. ಜೊತೆಗೆ, ಯಾವುದೇ ಕಾರಣಕ್ಕೂ ಮತ್ತೆ ಚುನಾವಣೆ ಮುಂದೂಡುವ ಪ್ರಸ್ತಾಪವನ್ನು ತನ್ನ ಮುಂದೆ ತರಬಾರದು ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ನೀಡುವಂತೆ ಸರ್ಕಾರ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಅಂತಿಮಗೊಳಿಸುವುದು, ಮತಗಟ್ಟೆಗಳ ಸಿದ್ಧತೆ ಹಾಗೂ ಸಿಬ್ಬಂದಿ ನಿಯೋಜನೆ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದೆ. ರಾಜಕೀಯ ಪಕ್ಷಗಳೂ ಚುನಾವಣೆಗೆ ಸಜ್ಜಾಗಿವೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಕಾರ್ಯಕರ್ತರಿಗೆ ಸೂಚನೆ ನೀಡಿದೆ. ಬಿಜೆಪಿ, ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದ ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸುತ್ತಿದೆ. ಇತ್ತ ಬಿಜೆಪಿ-ಜೆಡಿಎಸ್ ಮೈತ್ರಿಯೂ ಚುನಾವಣಾ ಅಖಾಡಕ್ಕೆ ಸಜ್ಜಾಗಿದ್ದು, ಪಂಚ ಪಾಲಿಕೆ ಚುನಾವಣೆ ಭಾರೀ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆ ಮೂಡಿದೆ.

Continue Reading

Trending