Connect with us

ದೇಶ

ಜಟಿಂಗ’ ಎಂಬ ‘ಹಕ್ಕಿ ಆತ್ಮಹತ್ಯೆ ಕಣಿವೆ’: ಸಂಶೋಧಕರಿಗೂ ಅಚ್ಚರಿ ತಂದ ಘಟನೆ; ಹೀಗೊಂದು ನಿಗೂಢ ಹಳ್ಳಿ!

Published

on

ಗುವಾಹಟಿ, ಅಸ್ಸಾಂ: ಕಳೆದ ಐದಾರು ದಶಕಗಳಿಂದ ಅಸ್ಸಾಂನ ಜಟಿಂಗದಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಮಾನವು ನಿಗೂಢ ಹಾಗೂ ಊಹಾಪೋಹಕ್ಕೆ ಕಾರಣವಾಗಿದೆ. ಈಶಾನ್ಯ ಭಾರತದ ಅಸ್ಸಾಂನ ಸುಂದರ ದಿಮಾ ಹಸಾವೊ ಜಿಲ್ಲೆಯಲ್ಲಿರುವ ಜಟಿಂಗಾ ಗ್ರಾಮವು ಈ ವಿಚಿತ್ರ ಘಟನೆಯಿಂದಾಗಿ ಜಾಗತಿಕ ಗಮನ ಸೆಳೆದಿತ್ತು. ಜಟಿಂಗಾದಲ್ಲಿ 70 ರಿಂದ 90ರ ದಶಕದಲ್ಲಿ ಸಂಭವಿಸಿದ ವಲಸೆ ಹಕ್ಕಿಗಳ ಹಿಂಡುಗಳು ಸಾವು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಲ್ಲದೇ, ಇದು ನಿಗೂಢವಾಗಿಯೇ ಉಳಿದಿತ್ತು. ಇನ್ನೊಂದೆಡೆ, ಪಕ್ಷಿಗಳ ಸಾವಿನ ಬಗ್ಗೆ ಹಲವಾರು ನಿಗೂಢ ಕಥೆಗಳೂ ಇವೆ.

ಕೆಲವರು ಇದನ್ನು ಅಲೌಕಿಕ ವಿದ್ಯಮಾನ ಎಂದೇ ನಂಬಿದ್ದರೆ, ಹಲವರು ವಿದ್ಯುತ್ಕಾಂತೀಯ ಶಕ್ತಿಗಳೇ ಪಕ್ಷಿಗಳ ಸಾವಿಗೆ ಕಾರಣ ಎಂದು ಹೇಳಿದ್ದರು. ಈ ಕುತೂಹಲಕಾರಿ ಘಟನೆಯು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ನಂತಹ ಪ್ರಸಿದ್ಧ ಸಂಸ್ಥೆಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಪಕ್ಷಿವಿಜ್ಞಾನಿಗಳ ಗಮನ ಸೆಳೆಯಿತು. ಈ ರಹಸ್ಯ ಬೇಧಿಸುವುದು ಒಂದು ಮಹತ್ವದ ಸವಾಲಾಗಿತ್ತು ಕೂಡಾ. ಅಲೌಕಿಕ ಶಕ್ತಿಗಳ ಕುರಿತಂತೆ ಸ್ಥಳೀಯ ಬುಡಕಟ್ಟು ಸಮುದಾಯಗಳಲ್ಲಿ ಆಳವಾಗಿ ಬೇರೂರಿರುವ ನಂಬಿಕೆಯೂ ಕೂಡ ಈ ಘಟನೆಯ ಸುತ್ತ ಆವರಿಸಿಕೊಂಡಿದೆ.

ಜಟಿಂಗ ಪಕ್ಷಿಗಳ ಆತ್ಮಹತ್ಯೆಯ ವಿಶ್ವಪ್ರಸಿದ್ಧ ಕೇಂದ್ರವಾಗಿದ್ದು ಹೇಗೆ?: ಜಟಿಂಗವು ಸುತ್ತಲೂ ಬೆಟ್ಟಗಳಿಂದ ಕೂಡಿರುವ ಕಣಿವೆ ಪ್ರದೇಶವಾಗಿದೆ. 70 ಮತ್ತು 80ರ ದಶಕದಲ್ಲಿ, ಜಟಿಂಗದಲ್ಲಿ ಒಂದು ವಿಚಿತ್ರ ವಿದ್ಯಮಾನ ಘಟಿಸಿತು. ಪ್ರತಿ ವರ್ಷ ಆಗಸ್ಟ್ ಅಂತ್ಯದಿಂದ ನವೆಂಬರ್​​ವರೆಗೆ ಬರುವ ವಲಸೆ ಹಕ್ಕಿಗಳ ಹಿಂಡು, ರಾತ್ರಿಯಲ್ಲಿ ಕೃತಕ ದೀಪಗಳಿಗೆ ಆಕರ್ಷಿತವಾಗಿ, ಬಳಿಕ ನೆಲಕ್ಕೆ ಅಪ್ಪಳಿಸಿ ಸಾಯುತ್ತಿದ್ದವು. ಇದು ಸ್ಥಳೀಯ ಜನರಿಗೆ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿತ್ತು.

ಈಗ ಜಟಿಂಗದಲ್ಲಿ ವಲಸೆ ಹಕ್ಕಿಗಳ ಸಂರಕ್ಷಣೆ ಮತ್ತು ರಕ್ಷಣೆಯಲ್ಲಿ ತೊಡಗಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಜೋಸ್ರಿಂಗ್‌ಡಾವೊ ಫೋಂಗ್ಲೋ ಅವರು ಹಳೆಯ ಸ್ಥಳೀಯ ಕಥೆಯೊಂದನ್ನು ‘ಈಟಿವಿ ಭಾರತ’ದೊಂದಿಗೆ ಹಂಚಿಕೊಂಡಿದ್ದಾರೆ. ”ದಶಕಗಳ ಹಿಂದೆ, ಜಟಿಂಗದಲ್ಲಿ ಗ್ರಾಮಸ್ಥರು ಉರುವಲಿನ ಮೇಲೆ ಆಹಾರ ಬೇಯಿಸುತ್ತಿದ್ದರು. ಇದ್ದಕ್ಕಿದ್ದಂತೆ, ಒಂದು ಪಕ್ಷಿ ಬೆಂಕಿಗೆ ಬಿದ್ದು ಸತ್ತಿತು. ತದನಂತರ, ಅನೇಕ ಪಕ್ಷಿಗಳು ಅದನ್ನು ಅನುಸರಿಸಿ, ಬೆಂಕಿಗೆ ಹಾರಿ ನಾಶವಾದವು. ಆಗ, ಅಲೌಕಿಕ ಶಕ್ತಿಗೆ ಹೆದರಿದ ಗ್ರಾಮಸ್ಥರು ಗ್ರಾಮವನ್ನೇ ತೊರೆದರು. ಈ ಘಟನೆಯು ಜಟಿಂಗನಲ್ಲಿನ ಪಕ್ಷಿಗಳ ಆತ್ಮಹತ್ಯೆಯ ವಿದ್ಯಮಾನವನ್ನು ಬೆಳಕಿಗೆ ತಂದಿತು. ಅಲ್ಲದೆ, ಅದೊಂದು ತೀವ್ರ ನಿಗೂಢ ವಿಷಯವಾಗಿ ಮಾರ್ಪಟ್ಟಿತು” ಎನ್ನುತ್ತಾರೆ ಜೋಸ್ರಿಂಗ್‌ಡಾವೊ ಫೋಂಗ್ಲೋ.

ಜಟಿಂಗ ವಿದ್ಯಮಾನ ಎಂದರೇನು?: ಭೌಗೋಳಿಕ ಮತ್ತು ವಿಶಿಷ್ಟ ಗುಣಲಕ್ಷಣಗಳಿಂದ ಜಟಿಂಗವು ವಿಶೇಷ ಆಕರ್ಷಕ ಸ್ಥಳವಾಗಿದೆ. 90ರ ದಶಕದವರೆಗೆ, BNHS ವಿಜ್ಞಾನಿಗಳು ಮತ್ತು ಇತರ ಸಂಶೋಧಕರ ತಂಡವು ಈ ವಿದ್ಯಮಾನದ ಅಧ್ಯಯನಕ್ಕೆ ಆಗಮಿಸಿದಾಗ, ಜಟಿಂಗದಲ್ಲಿನ ಪಕ್ಷಿಗಳ ಆತ್ಮಹತ್ಯೆಯು ಬರ್ಮುಡಾ ಟ್ರಯಾಂಗಲ್​ನ್ನು ಹೋಲುವ ನಿಗೂಢ ಘಟನೆಯಂತೆ ಕಂಡು ಬಂದಿತ್ತು. ಜೊತೆಗೆ, ಸಾರ್ವಜನಿಕರು ಮತ್ತು ಮಾಧ್ಯಮಗಳನ್ನು ಹೆಚ್ಚಾಗಿ ಆಕರ್ಷಿಸಿತ್ತು. ಹಲವು ವರ್ಷಗಳಿಂದ, ಪಕ್ಷಿಶಾಸ್ತ್ರಜ್ಞರು ಮತ್ತು ತಜ್ಞರು ಈ ವಲಸೆ ಹಕ್ಕಿಗಳ ಸಾವಿಗೆ ಕಾರಣ, ವಿವರಣೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ, ‘ಪಕ್ಷಿ ಆತ್ಮಹತ್ಯೆಗಳು’ ಎಂದೇ ಕರೆಯಲ್ಪಟ್ಟಿತು.

ವಾಸ್ತವದಲ್ಲಿ, ವಲಸೆ ಹಕ್ಕಿಗಳು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಜಟಿಂಗಕ್ಕೆ ಆಗಮಿಸುತ್ತವೆ. ಆದರೂ ಈ ಪ್ರದೇಶದಲ್ಲಿನ ಮಂಜಿನ ರಾತ್ರಿಗಳು, ಜನವಸತಿ ಪ್ರದೇಶಗಳಲ್ಲಿನ ಕೃತಕ ಬೆಳಕಿನ ಮೂಲಗಳು ಈ ಪಕ್ಷಿಗಳನ್ನು ಆಕರ್ಷಿಸಿವೆ. ಅವು ದಕ್ಷಿಣದಿಂದ ಉತ್ತರ ದಿಕ್ಕಿನತ್ತ ಹಾರುವಾಗ, ದೀಪಗಳ ಸೆಳೆತಕ್ಕೆ ಒಳಗಾಗುವುದಲ್ಲದೇ, ದಟ್ಟ ಕಾಡುಗಳಲ್ಲಿನ ಮರಗಳು ಮತ್ತು ಬಿದಿರುಗಳಿಗೆ ಡಿಕ್ಕಿ ಹೊಡೆಯುತ್ತವೆ. ಆಗ ಈ ಹಕ್ಕಿಗಳು, ದಿಗ್ಭ್ರಮೆಗೊಳ್ಳುವುದಲ್ಲದೇ, ಗಾಯಗೊಂಡು ಹಾರಲಾಗದೆ ಪ್ರಾಣ ಬಿಟ್ಟಿವೆ. ಬೆಳಕಿನ ಮೂಲಗಳ ಮೇಲಿನ ಆಕರ್ಷಣೆಯೇ ಈ ವಿದ್ಯಮಾನಕ್ಕೆ ಮೂಲ ಕಾರಣವಾಗಿದೆ.

ವಲಸೆ ಹಕ್ಕಿಗಳು ಜಟಿಂಗದತ್ತ ಸೆಳೆಯಲ್ಪಡುವುದು ಏಕೆ?: ಜಟಿಂಗ ಬೆಟ್ಟಗಳಿಂದ ಸುತ್ತುವರಿದ ಕಿರಿದಾದ ಕಣಿವೆ ಪ್ರದೇಶ. ಒಂದು ಕಡೆ ಅಸ್ಸಾಂನ ಬರಾಕ್ ಕಣಿವೆ ಮತ್ತು ಇನ್ನೊಂದು ಕಡೆ ನಾಗಾವ್ ಬಯಲು ಪ್ರದೇಶವಿದೆ. ಇತರ ಎರಡು ಬದಿಗಳು ಚಿರಾಪುಂಜಿ ಮತ್ತು ಮಣಿಪುರದಂತೆಯೇ ಮೇಘಾಲಯದ ಮಳೆ ಸಮೃದ್ಧ ಪ್ರದೇಶಗಳ ಗಡಿಗಳಾಗಿವೆ. ವಲಸೆ ಹಕ್ಕಿಗಳು ವರ್ಷದ ನಿರ್ದಿಷ್ಟ ಸಮಯದಲ್ಲಿ ಇಲ್ಲಿಗೆ ಬಂದು ಸೇರುತ್ತವೆ. ಆದರೆ, ದೂರದ ಹಾರಾಟದ ಸಾಮರ್ಥ್ಯ ಹೊಂದಿರುವ ಈ ಪಕ್ಷಿಗಳು ಜಟಿಂಗದಲ್ಲಿ ಏಕೆ ದುರ್ಬಲಗೊಳ್ಳುತ್ತವೆ ಮತ್ತು ಬೆಳಕಿಗೆ ಬಲಿಯಾಗುತ್ತವೆ? ಎಂಬುದು ಪ್ರಶ್ನೆಯಾಗಿದೆ.

ಈ ಬಗ್ಗೆ ಹೆಸರಾಂತ ನಿಸರ್ಗಶಾಸ್ತ್ರಜ್ಞ ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಅಡಿಯಲ್ಲಿ ಇಂಡಿಯಾ ಬರ್ಡ್ಸ್ ಕನ್ಸರ್ವೇಶನ್ ನೆಟ್‌ವರ್ಕ್​ನ (IBCN) ಸದಸ್ಯ ಮತ್ತು ಮೆಗಾಮಿಕ್ಸ್ ನೇಚರ್ ಕ್ಲಬ್‌ನ ಸಂಚಾಲಕರಾದ ದೇಬಜಿತ್ ಫುಕನ್ ಅವರು ಹಲವಾರು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಫುಕನ್ ಹೇಳುವಂತೆ, “ಜಟಿಂಗವು ಕಿರಿದಾದ, ತಗ್ಗು ಕಣಿವೆಯಾಗಿದೆ. ವಲಸೆ ಹಕ್ಕಿಗಳ ಸಂಖ್ಯೆ ಹೆಚ್ಚಾದಂತೆ ಆಹಾರದ ಕೊರತೆಯೂ ಉಲ್ಬಣಗೊಳ್ಳುತ್ತದೆ. ಹಸಿವಿನಿಂದ ದುರ್ಬಲಗೊಂಡ ಈ ಪಕ್ಷಿಗಳು ಈ ಪ್ರದೇಶದಲ್ಲಿ ದೀರ್ಘ ಹಾರಾಟ ಮಾಡಲು ಹಾಗೂ ದೂರವನ್ನು ಕ್ರಮಿಸಲು ಸಾಧ್ಯವಾಗುವುದಿಲ್ಲ”.

ಎರಡನೆಯದಾಗಿ, ವಲಸೆಯ ಋತುವಿನಲ್ಲಿ ಜಟಿಂಗದಲ್ಲಿನ ತೇವಾಂಶದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಸಾಕಷ್ಟು ಆಮ್ಲಜನಕವಿಲ್ಲದೇ ಪಕ್ಷಿಗಳು ದುರ್ಬಲಗೊಂಡಿರುತ್ತವೆಯಲ್ಲದೆ, ಗಾಳಿಯ ಹುಡುಕಾಟದಲ್ಲಿ ಮೇಲಕ್ಕೆ ಏರುತ್ತವೆ. ಆದರೆ, ಸಮತಟ್ಟಾದ ಭೂಪ್ರದೇಶಗಳಲ್ಲಿ ಗಾಳಿ ಸಿಗದೆ ಮತ್ತಷ್ಟು ಶಕ್ತಿಹೀನಗೊಳ್ಳುತ್ತವೆ. ಪರಿಣಾಮ, ಯಾವುದೇ ಬೆಳಕು ಈ ನಿಶ್ಯಕ್ತಗೊಂಡ ಪಕ್ಷಿಗಳನ್ನು ಆಕರ್ಷಿಸುತ್ತದೆ. ಇದರಿಂದಾಗಿ ಅವು ದಿಗ್ಭ್ರಮೆಗೊಳ್ಳುವುದಲ್ಲದೆ, ಮತ್ತಷ್ಟು ದುರ್ಬಲವಾಗುತ್ತವೆ. ಹಿಂದೆ, ಸ್ಥಳೀಯರು ಆಹಾರ ಮತ್ತು ಬೇಟೆಯ ಆನಂದಕ್ಕಾಗಿ ಈ ಪಕ್ಷಿಗಳನ್ನು ಬಲೆಗೆ ಬೀಳಿಸಿ ಕೊಲ್ಲುತ್ತಿದ್ದರು. ಇದು ನಿಜವಾಗಿಯೂ ಪಕ್ಷಿ ಆತ್ಮಹತ್ಯೆ ಅಲ್ಲ, ಬದಲಿಗೆ ಭೌಗೋಳಿಕ ಮತ್ತು ಹವಾಮಾನ ಅಂಶಗಳ ಪರಿಣಾಮವಾಗಿದೆ” ಎಂದು ಪುಕನ್​ ಹೇಳಿದ್ದಾರೆ.

ಹಕ್ಕಿ ಆತ್ಮಹತ್ಯೆಯ ಹಿಂದಿನ ರಹಸ್ಯವೇನು?: “ಬೆಳಕಿನ ಮೂಲಗಳಿಂದ ಆಕರ್ಷಿತವಾದ ದುರ್ಬಲ ಪಕ್ಷಿಗಳು ಮನುಷ್ಯರಿಂದಲೇ ಕೊಲ್ಲಲ್ಪಟ್ಟವು. ಸ್ಥಳೀಯರು ಈ ಪಕ್ಷಿಗಳನ್ನು ಆಹಾರಕ್ಕಾಗಿ ಬೇಟೆಯಾಡುವ ಸಾಂಪ್ರದಾಯಿಕ ಅಭ್ಯಾಸವನ್ನೂ ಕೂಡ ಹೊಂದಿದ್ದರು. ವೈಜ್ಞಾನಿಕ ತಿಳುವಳಿಕೆಯ ಕೊರತೆಯು ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ ಎಂಬ ವ್ಯಾಪಕ ನಂಬಿಕೆಗೆ ಕಾರಣವಾಯಿತು” ಎಂದು ದೇಬಜಿತ್ ಫುಕನ್ ವಿವರಿಸುತ್ತಾರೆ.

ಸ್ಥಳೀಯ ಸಂರಕ್ಷಣಾಕಾರ ಜೋಸ್ರಿಂಗ್ಡಾವೊ ಫೋಂಗ್ಲೋ ಪ್ರಕಾರ, “ಹಿಂದೆ, ಜಟಿಂಗದ ಗ್ರಾಮಸ್ಥರು ಆಹಾರಕ್ಕಾಗಿ ಪಕ್ಷಿಗಳನ್ನು ಬಲೆಗೆ ಬೀಳಿಸಿ ಕೊಲ್ಲುತ್ತಿದ್ದರು. ಅಲ್ಲದೆ, ಬೇಟೆಯಾಡುವ ಪಕ್ಷಿಗಳು ಮನರಂಜನಾ ಚಟುವಟಿಕೆಯಾಗಿಯೂ ಮಾರ್ಪಟ್ಟವು. ಜನರು ಪಕ್ಷಿಗಳನ್ನು ಆಕರ್ಷಿಸಲು ಸೀಮೆಎಣ್ಣೆ ದೀಪಗಳು ಮತ್ತು ಶಕ್ತಿಯುತ ಹ್ಯಾಲೊಜೆನ್ ದೀಪಗಳನ್ನು ಬಳಸಿ ಬಲೆಗೆ ಬೀಳಿಸುತ್ತಿದ್ದರು”.

2010ರಲ್ಲಿ, ಬ್ಲೂ ಹಿಲ್ಸ್ ಸೊಸೈಟಿ, ಎನ್‌ಜಿಒ, ಅರಣ್ಯ ಇಲಾಖೆ, ನಾರ್ತ್ ಕ್ಯಾಚಾರ್ ಹಿಲ್ಸ್ ಸ್ವಾಯತ್ತ ಮಂಡಳಿ ಮತ್ತು ಜಿಲ್ಲಾಡಳಿತದ ಸಹಯೋಗದ ಪ್ರಯತ್ನವು ಪಕ್ಷಿಗಳ ಬೇಟೆಯ ವಿರುದ್ಧ ಜಾಗೃತಿ ಅಭಿಯಾನಗಳನ್ನು ಹುಟ್ಟುಹಾಕಿತು. ಇದರ ಪರಿಣಾಮವಾಗಿ, ಜಟಿಂಗದಲ್ಲೀಗ ಪಕ್ಷಿಗಳ ಬೇಟೆ ಇದೀಗ ಗಣನೀಯವಾಗಿ ಕಡಿಮೆಯಾಗಿದೆ.

ಮತ್ತಷ್ಟು ವಿವರಣೆ ನೀಡಿದ ಫೋಂಗ್ಲೋ, “ಜಿಲ್ಲಾಡಳಿತವು ಪಕ್ಷಿ ಬೇಟೆಯ ಮೇಲೆ ನಿಷೇಧ ವಿಧಿಸಿದೆ, ಇದು ಪಕ್ಷಿಗಳ ಸಾವಿನ ಇಳಿಕೆಗೆ ಕಾರಣವಾಗಿದೆ. ಹೆಚ್ಚುವರಿಯಾಗಿ, ಉತ್ತರ ಕ್ಯಾಚಾರ್ ಹಿಲ್ಸ್ ಸ್ವಾಯತ್ತ ಮಂಡಳಿಯು ವಲಸೆ ಹಕ್ಕಿ ಸಂರಕ್ಷಣೆ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜಟಿಂಗ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವವು ಕ್ರಮೇಣ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿ ಮಾರ್ಪಟ್ಟಿದೆ”.

ಜಟಿಂಗ ಇನ್ನೂ ನಿಗೂಢವೇ?: ಜಟಿಂಗವು ಈಗ ಪಕ್ಷಿ ಆತ್ಮಹತ್ಯೆಗಳ ಕೇಂದ್ರ ಎಂಬ ನಿಗೂಢತೆಯಿಂದ ಹೊರಬಂದಿದೆ. ವಲಸೆ ಹಕ್ಕಿಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಸ್ಥಳೀಯ ಪ್ರಯತ್ನಗಳು ನಡೆಯುತ್ತಿವೆ. ಎರಡು ದಶಕಗಳ ಹಿಂದೆಯೇ ಈ ನಿಗೂಢವನ್ನು ಪರಿಹರಿಸಲಾಗಿದ್ದರೂ, ಜಟಿಂಗದಲ್ಲಿ ಪಕ್ಷಿ ಸಂರಕ್ಷಣೆಗೆ ಸಾಕಷ್ಟು ಸವಾಲುಗಳಿವೆ. ತಂತ್ರಜ್ಞಾನ ಮತ್ತು ಮಾನವನ ಅತಿಕ್ರಮಣದಿಂದ ಜಟಿಂಗದಲ್ಲಿ ವಲಸೆ ಹಕ್ಕಿಗಳ ಆವಾಸಸ್ಥಾನವು ಈ ಮೊದಲಿನಂತಿಲ್ಲ.

ಜೋಸ್ರಿಂಗ್‌ಡಾವೊ ಫೋಂಗ್ಲೊ ಪ್ರಕಾರ, “ಜಟಿಂಗಕ್ಕೆ ಭೇಟಿ ನೀಡುವ ವಲಸೆ ಹಕ್ಕಿಗಳ ಸಂಖ್ಯೆ ಹಿಂದಿನದಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆಯಾಗಿದೆ. ಪಕ್ಷಿಗಳ ವಲಸೆಯು ಜಟಿಂಗಕ್ಕೆ ಸಮೀಪವಿರುವ ದೋಹಿಂಗ್ ಗ್ರಾಮದತ್ತ ಬದಲಾಗುತ್ತಿದೆ. ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳೂ ಕೂಡ ಈ ಬದಲಾವಣೆಗೆ ಪ್ರಾಥಮಿಕ ಕಾರಣಗಳಾಗಿವೆ”.

ದೇಬಜಿತ್ ಫುಕನ್ ಹೇಳುವಂತೆ, “ಹವಾಮಾನ ಬದಲಾವಣೆಯಿಂದಾಗಿ ತೇವಾಂಶದ ಮಟ್ಟ ಕಡಿಮೆಯಾಗುವುದು ಮತ್ತು ಕಡಿಮೆ ಮಳೆಯು ವಲಸೆ ಹಕ್ಕಿಗಳ ಜನಸಂಖ್ಯೆಯಲ್ಲಿ ಇಳಿಮುಖಕ್ಕೆ ಕಾರಣವಾಗಿದೆ. ಮಾನವ ಚಟುವಟಿಕೆಗಳು ಜಟಿಂಗದ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿವೆ.”

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Liver ಚಿಕಿತ್ಸೆಗೆ ಗುಡ್ ನ್ಯೂಸ್: ಹಲವು ತಜ್ಞರು ಒಂದೇ ಕಡೆ, ರೋಗಿಗಳಿಗೆ ಸುಲಭ ಚಿಕಿತ್ಸೆ

Published

on

By

ಬೆಂಗಳೂರು: ಯಕೃತ್ತಿನಲ್ಲಿ ಕಂಡುಬರುವ ಗಂಟು, ಗೆಡ್ಡೆ ಹಾಗೂ ಅಸಹಜ ಬೆಳವಣಿಗೆಗಳಿಗೆ ಸಮನ್ವಯದ ತಪಾಸಣೆ, ನಿಖರ ರೋಗನಿರ್ಣಯ ಮತ್ತು ಸಮಗ್ರ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಬೆಂಗಳೂರಿನ ಕೆಂಗೇರಿಯಲ್ಲಿರುವ ಫೋರ್ಟಿಸ್ ಹೆಲ್ತ್‌ಕೇರ್ ಜಾಲದ ಭಾಗವಾಗಿರುವ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಲಾಗಿದೆ.

ರೋಗಿಗಳು ವಿವಿಧ ವೈದ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಒಂದೇ ರೀತಿಯ ಪರೀಕ್ಷೆಗಳನ್ನು ಪುನರಾವರ್ತಿಸುವ ಅಗತ್ಯವನ್ನು ಕಡಿಮೆ ಮಾಡುವುದು ಕ್ಲಿನಿಕ್‌ನ ಪ್ರಮುಖ ಉದ್ದೇಶವಾಗಿದೆ. ಯಕೃತ್ತಿನ ತಜ್ಞರು, ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ ತಜ್ಞರು, ಜಠರ-ಕರುಳಿನ ತಜ್ಞರು, ರೇಡಿಯಾಲಜಿಸ್ಟ್‌ಗಳು, ಕ್ಯಾನ್ಸರ್ ತಜ್ಞರು, ರೋಗಶಾಸ್ತ್ರ ತಜ್ಞರು ಹಾಗೂ ಪೌಷ್ಟಿಕ ಆಹಾರ ತಜ್ಞರು ಒಂದೇ ತಂಡವಾಗಿ ರೋಗಿಯ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ವೈದ್ಯಕೀಯ ಜಠರರೋಗ ಶಾಸ್ತ್ರ, ಹೆಪಟಾಲಜಿ ಮತ್ತು ಸುಧಾರಿತ ಎಂಡೋಸ್ಕೋಪಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಲಹೆಗಾರ ಡಾ. ಆದರ್ಶ್ ಸಿ.ಕೆ. ಮಾತನಾಡಿ, ನಿಯಮಿತ ತಪಾಸಣೆ ವೇಳೆ ಯಕೃತ್ತಿನ ಗೆಡ್ಡೆಗಳು ಮತ್ತು ದ್ರವ ತುಂಬಿದ ಚೀಲಗಳು ಆಕಸ್ಮಿಕವಾಗಿ ಪತ್ತೆಯಾಗುತ್ತಿರುವುದು ಹೆಚ್ಚಾಗಿದೆ. ಇವುಗಳಲ್ಲಿ ಅನೇಕವು ಅಪಾಯಕಾರಿಯಲ್ಲದಿದ್ದರೂ, ಕೆಲವು ಯಕೃತ್ತಿನ ಕಾಯಿಲೆ ಅಥವಾ ಆರಂಭಿಕ ಹಂತದ ಕ್ಯಾನ್ಸರ್‌ನ ಸೂಚನೆಯಾಗಿರಬಹುದು. ಹೀಗಾಗಿ ಯಾವ ಗೆಡ್ಡೆಗೆ ಚಿಕಿತ್ಸೆ ಬೇಕು ಮತ್ತು ಯಾವುದನ್ನು ಮೇಲ್ವಿಚಾರಣೆ ಮಾಡಿದರೆ ಸಾಕು ಎಂಬುದನ್ನು ಗುರುತಿಸುವುದು ಪ್ರಮುಖ ಸವಾಲಾಗಿದೆ ಎಂದು ಹೇಳಿದ್ದಾರೆ.

ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಗೋಪಸೆಟ್ಟಿ, ಚಿಕಿತ್ಸೆಯ ನಿರ್ಧಾರವು ಗೆಡ್ಡೆಯ ಗಾತ್ರ ಮತ್ತು ಸ್ಥಳಕ್ಕೆ ಮಾತ್ರ ಸೀಮಿತವಾಗಿರದೆ ಯಕೃತ್ತಿನ ಕಾರ್ಯಕ್ಷಮತೆ ಹಾಗೂ ರೋಗಿಯ ಒಟ್ಟಾರೆ ಆರೋಗ್ಯವನ್ನೂ ಆಧರಿಸಿರಬೇಕು ಎಂದು ತಿಳಿಸಿದ್ದಾರೆ. ಸಮಗ್ರ ಮೌಲ್ಯಮಾಪನದಿಂದ ಸೂಕ್ತ ಚಿಕಿತ್ಸೆಯನ್ನು ಆಯ್ಕೆ ಮಾಡುವುದರ ಜೊತೆಗೆ, ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು ಎಂದಿದ್ದಾರೆ.

ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಬಗಲಿ ಮಾತನಾಡಿ, ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಿರುವುದು ರೋಗಿ ಕೇಂದ್ರಿತ ಹಾಗೂ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದ ಆರೋಗ್ಯ ಸೇವೆ ಒದಗಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಪರಿಣತಿಯನ್ನು ಒಂದೇ ವ್ಯವಸ್ಥೆಯಲ್ಲಿ ಒದಗಿಸುವ ಮೂಲಕ ಚಿಕಿತ್ಸಾ ಫಲಿತಾಂಶ ಮತ್ತು ರೋಗಿಗಳ ಅನುಭವ ಸುಧಾರಿಸುವುದು ಕ್ಲಿನಿಕ್‌ನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಯಕೃತ್ತಿನ ಚೀಲಗಳು, ರಕ್ತನಾಳದ ಗೆಡ್ಡೆಗಳು, ಫೋಕಲ್ ನೊಡ್ಯುಲರ್ ಹೈಪರ್‌ಪ್ಲಾಸಿಯಾ, ಯಕೃತ್ತಿನ ಕ್ಯಾನ್ಸರ್, ದೇಹದ ಇತರ ಭಾಗಗಳಿಂದ ಯಕೃತ್ತಿಗೆ ಹರಡಿದ ಕ್ಯಾನ್ಸರ್ ಹಾಗೂ ಸಂಕೀರ್ಣ ಯಕೃತ್ತಿನ ಗೆಡ್ಡೆಗಳಿಗೆ ಇಲ್ಲಿ ಸಮಗ್ರ ಮೌಲ್ಯಮಾಪನ ಮತ್ತು ಚಿಕಿತ್ಸಾ ಸಲಹೆ ದೊರೆಯಲಿದೆ. ರೋಗನಿರ್ಣಯದ ನಿಖರತೆ ಹೆಚ್ಚಿಸುವುದು ಮತ್ತು ಚಿಕಿತ್ಸೆಯಲ್ಲಿನ ವಿಳಂಬ ಕಡಿಮೆ ಮಾಡುವುದು ಕ್ಲಿನಿಕ್‌ನ ಪ್ರಮುಖ ಗುರಿಯಾಗಿದೆ.

Continue Reading

ದೇಶ

Nepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್

Published

on

By

ಬಹ್ರೈಚ್: Nepal flood ದಲ್ಲಿ ಉಂಟಾದ ಭೀಕರ ಜಲಪ್ರಳಯದ ರಭಸಕ್ಕೆ ಸಿಲುಕಿದ್ದ 5 ಕಾಡಾನೆಗಳ ಹಿಂಡು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಟರ್ನಿಯಾಘಾಟ್ ಬಳಿಯ ಗಿರ್ಜಾಪುರಿ ಬ್ಯಾರೇಜ್ ಸಮೀಪ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದೆ. ಆಗಸ್ಟ್ 25ರಂದು ನಡೆದ ಈ ಘಟನೆಯಲ್ಲಿ ಮೂರು ವಯಸ್ಕ ಆನೆಗಳು ಹಾಗೂ ಎರಡು ಮರಿಗಳು ಪ್ರವಾಹದ ಸುಳಿಗೆ ಸಿಲುಕಿದ್ದವು.

ಕೌಡಿಯಾಲ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಆನೆಗಳ ಹಿಂಡು ಸಂಕಷ್ಟಕ್ಕೆ ಸಿಲುಕಿತ್ತು. ನೀರಿನ ರಭಸ ಹೆಚ್ಚಿದ್ದರಿಂದ ಆನೆ ಮರಿಗಳಿಗೆ ತೇಲುವುದು ಕಷ್ಟವಾಗಿತ್ತು. ಈ ವೇಳೆ ವಯಸ್ಕ ಆನೆಗಳು ಮರಿಗಳನ್ನು ಸುತ್ತುವರಿದು ನಿಂತು, ಅವುಗಳನ್ನು ಪ್ರವಾಹದ ರಭಸದಿಂದ ರಕ್ಷಿಸಲು ಪ್ರಯತ್ನಿಸಿರುವುದು ಗಮನ ಸೆಳೆದಿದೆ.

ಮರಿಗಳನ್ನು ಬಿಟ್ಟು ಕದಲದ ದೊಡ್ಡ ಆನೆಗಳು

ಪ್ರವಾಹದ ನೀರು ಅಪಾಯಕಾರಿಯಾಗಿ ಹರಿಯುತ್ತಿದ್ದರೂ ವಯಸ್ಕ ಆನೆಗಳು ಮರಿಗಳನ್ನು ಏಕಾಂಗಿಯಾಗಿ ಬಿಡಲಿಲ್ಲ. ಅವುಗಳ ಸುತ್ತಲೂ ನಿಂತು ಮರಿಗಳಿಗೆ ರಕ್ಷಣೆ ನೀಡುವ ಮೂಲಕ ಸುರಕ್ಷಿತವಾಗಿ ದಡ ಸೇರುವಂತೆ ನೆರವಾದವು.

ಈ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೂ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.

ಬ್ಯಾರೇಜ್ ಗೇಟ್‌ಗಳನ್ನು ಬಂದ್ ಮಾಡಿದ ಅಧಿಕಾರಿಗಳು

ಆನೆಗಳ ಹಿಂಡು ಅಪಾಯದಲ್ಲಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬಳಿಕ ಗಿರ್ಜಾಪುರಿ ಬ್ಯಾರೇಜ್‌ನ ಗೇಟ್‌ಗಳನ್ನು ಮುಚ್ಚಲಾಗಿದ್ದು, ನೀರಿನ ಹರಿವಿನ ವೇಗವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ನೀರಿನ ರಭಸ ಕಡಿಮೆಯಾದ ಬಳಿಕ ವಯಸ್ಕ ಆನೆಗಳು ಚೇತರಿಸಿಕೊಂಡಿವೆ. ನಂತರ ಅವು ಎರಡು ಆನೆ ಮರಿಗಳನ್ನು ಸುರಕ್ಷಿತವಾಗಿ ದಂಡೆಯತ್ತ ಕರೆದೊಯ್ದಿವೆ.

ಸುರಕ್ಷಿತವಾಗಿ ಕಾಡಿಗೆ ಮರಳಿದ ಆನೆಗಳು

ಆನೆಗಳ ಹಿಂಡು ದಡ ತಲುಪಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಬ್ಯಾರೇಜ್ ಪ್ರದೇಶದಿಂದ ದೂರಕ್ಕೆ ಕಳುಹಿಸಿ ಸುರಕ್ಷಿತವಾಗಿ ಕಾಡಿನತ್ತ ಸಾಗುವಂತೆ ಮಾಡಿದ್ದಾರೆ.

ಆಪತ್ತಿನ ಸಮಯದಲ್ಲೂ ಮರಿಗಳನ್ನು ಬಿಟ್ಟು ಹೋಗದೆ ಅವುಗಳನ್ನು ಸುತ್ತುವರಿದು ರಕ್ಷಿಸಿದ ಆನೆಗಳ ವರ್ತನೆ ಸಾರ್ವಜನಿಕರ ಗಮನ ಸೆಳೆದಿದೆ. ಮತ್ತೊಂದೆಡೆ, ಪರಿಸ್ಥಿತಿಯನ್ನು ತ್ವರಿತವಾಗಿ ಅರಿತು ನೀರಾವರಿ ಇಲಾಖೆಯ ಸಹಕಾರದೊಂದಿಗೆ ಬ್ಯಾರೇಜ್ ಗೇಟ್‌ಗಳನ್ನು ಬಂದ್ ಮಾಡಿ ಆನೆಗಳ ಜೀವ ಉಳಿಸಿದ ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಗೂ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

ರಾಜ್ಯ

Mysuru ರಲ್ಲೂ ಭೂಸ್ವಾಧೀನ ವಿವಾದ: 165 ಎಕರೆ ಕೃಷಿ ಭೂಮಿಗೆ KIADB ನೋಟಿಸ್, ರೈತರ ಆಕ್ರೋಶ

Published

on

By

ಮೈಸೂರು: ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದದ ಬೆನ್ನಲ್ಲೇ ಇದೀಗ Mysuru ಜಿಲ್ಲೆಯಲ್ಲೂ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 165 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದ್ದು, ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದ ಸಮೀಪದಲ್ಲಿರುವ ವರುಣಾ ಕ್ಷೇತ್ರದ ಮರಸೆ ಹಾಗೂ ಮದರಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಈ ಪ್ರದೇಶದ ಜಮೀನುಗಳಲ್ಲಿ ರೈತರು ಅಡಕೆ, ಬಾಳೆ, ತೆಂಗು, ಭತ್ತ ಸೇರಿದಂತೆ ವಿವಿಧ ವಾಣಿಜ್ಯ ಹಾಗೂ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಫಲವತ್ತಾದ ಜಮೀನು ಕೈಗಾರಿಕೆಗೆ?

ತಮ್ಮ ಜೀವನಾಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ಜಮೀನುಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಸ್ಥಳೀಯ ರೈತರು ಪಟ್ಟುಹಿಡಿದಿದ್ದಾರೆ.

ವಿಮಾನ ನಿಲ್ದಾಣದ ಸಮೀಪವಿರುವ ಮರಸೆ-ಮದರಗಳ್ಳಿ ಭಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಉದ್ದೇಶದಿಂದ KIADB ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದಾಗಿ ತಿಳಿದುಬಂದಿದೆ. ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದರೆ ತಮ್ಮ ಕೃಷಿ ಮತ್ತು ಜೀವನೋಪಾಯಕ್ಕೆ ತೀವ್ರ ಹೊಡೆತ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಡದಿ ಮಾದರಿಯಲ್ಲಿ ಮೈಸೂರಲ್ಲೂ ಹೋರಾಟ?

ಬೆಂಗಳೂರು ಸಮೀಪದ ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಮಾದರಿಯಲ್ಲೇ ಮೈಸೂರಿನಲ್ಲೂ ಪ್ರತಿಭಟನೆ ತೀವ್ರಗೊಳಿಸಲು ರೈತ ಸಂಘಟನೆಗಳು ಹಾಗೂ ಭೂಮಾಲೀಕರು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

165 ಎಕರೆ ಕೃಷಿ ಭೂಮಿ ಸ್ವಾಧೀನದ ವಿಚಾರ ಇದೀಗ ವರುಣಾ ಕ್ಷೇತ್ರದಲ್ಲಿ ರಾಜಕೀಯ ಹಾಗೂ ರೈತ ಹೋರಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸರ್ಕಾರದ ಭೂಸ್ವಾಧೀನ ಪ್ರಸ್ತಾವನೆಗೆ ರೈತರ ಪ್ರತಿಕ್ರಿಯೆ ಮತ್ತು ಮುಂದಿನ ಕ್ರಮಗಳತ್ತ ಇದೀಗ ಗಮನ ಹರಿದಿದೆ

Continue Reading

Trending