Connect with us

ಆರೋಗ್ಯ

ದೊಡ್ಡಪತ್ರೆ:ಪುಟ್ಟ ಎಲೆಗಳ ದೊಡ್ಡ ಪ್ರಯೋಜನಗಳು!

Published

on

ದೊಡ್ಡಪತ್ರೆ

ನಮ್ಮ ಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ ದೊಡ್ಡಪತ್ರೆಯೂ ಒಂದು.ಮನೆಯ ಹಿತ್ತಲಿನಲ್ಲಿರುವ ಅದೆಷ್ಟೋ ಸಸ್ಯಗಳು ಸಾಮಾನ್ಯ ಕಾಯಿಲೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ಹೂವಿನ ಗಿಡಗಳ ನಡುವೆಯೇ ಬೆಳೆದು ಆರೋಗ್ಯ ವೃದ್ಧಿಸುವ ಕೆಲಸ ಮಾಡುವ ಪುಟ್ಟ ಪುಟ್ಟ ಗಿಡಗಳ ಆರೋಗ್ಯ ಗುಣ ಮಾತ್ರ ಬಹು ದೊಡ್ಡದು. ಅದರಲ್ಲಿ ದೊಡ್ಡ ಪತ್ರೆ ಗಿಡ ಕೂಡ ಒಂದು. ಸಾಮಾನ್ಯವಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿ ಈ ದೊಡ್ಡ ಪತ್ರೆ ಗಿಡ ಕಂಡು ಬರುತ್ತದೆ. ಇದನ್ನು ಪುಟ್ಟ ಪಾಟ್‌ನಲ್ಲಿಯೂ ಇಟ್ಟು ಬೆಳೆಸಬಹುದಾಗಿದೆ. ಇದನ್ನು ಸಾಂಬಾರ ಸೊಪ್ಪು ಅಥವಾ ಅಜವನ ಗಿಡ ಎಂದೂ ಕರೆಯುತ್ತಾರೆ.ದೊಡ್ಡಪತ್ರೆಯು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು, ಇದರ ಎಲೆಗಳು ದೊಡ್ಡ ಮತ್ತು ದಪ್ಪವಾಗಿದ್ದು ಕಡು ಸುವಾಸನೆಯನ್ನು ಹೊಂದಿರುತ್ತವೆ, ದೊಡ್ಡಪತ್ರೆಯ ರಂಬೆಗಳು ಮತ್ತು ಹೂಗಳು ಚಿಕ್ಕದಾಗಿದೆ.ಆಫ್ರಿಕಾ ದೇಶಗಳಲ್ಲಿ ಇದನ್ನು ಪುದೀನಾದ ಬದಲಿಗೆ ಖಾದ್ಯಗಳಲ್ಲಿ ಬಳಸುತ್ತಾರೆ. ದಕ್ಷಿಣಭಾರತದಲ್ಲಿ ಸಾಮಾನ್ಯವಾಗಿ ಇದನ್ನು ಜ್ವರ, ಶೀತ, ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ದೊಡ್ಡಪತ್ರೆಯ ಚಟ್ನಿ, ತಂಬುಳಿ ಮಾಡಲಾಗುತ್ತದೆ. ಈಗ ಈ ದೊಡ್ಡ ಪತ್ರೆ ಸೊಪ್ಪು ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಆಹಾರ ಸೇವನೆಯಲ್ಲಿ ಬದಲಾವಣೆ, ಹವಾಮಾನದಲ್ಲಿನ ವ್ಯತ್ಯಾಸದಿಂದ ಶ್ವಾಸಕೋಶದಲ್ಲಿ ಕಫ ಕಟ್ಟಿಕೊಳ್ಳುತ್ತದೆ. ಇದರಿಂದ ಶೀತವಾದರೆ ಎಷ್ಟು ದಿನವಾದರೂ ಕಡಿಮೆಯಾಗುವುದಿಲ್ಲ. ಇದಕ್ಕೆ ದೊಡ್ಡ ಪತ್ರೆ ಸೊಪ್ಪು ಉತ್ತಮ ಮನೆಮದ್ದಾಗಿದೆ. ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ. ಚಿಕ್ಕ ಮಕ್ಕಳಿಗೂ ಕೂಡ ಈ ದೊಡ್ಡ ಪತ್ರೆ ಸೊಪ್ಪನ್ನು ಔಷಧವಾಗಿ ಬಳಸಬಹುದಾಗಿದೆ.ದೊಡ್ಡ ಪತ್ರೆ ಸೊಪ್ಪನ್ನು ಕೊಯ್ದು ತಂದು ಬೆಂಕಿಯಲ್ಲಿ ಸುಟ್ಟು ಅದರ ರಸವನ್ನು ತೆಗದು ಅದಕ್ಕೆ ಅರ್ಧ ಚಮಚ ಬೆಲ್ಲ ಸೇರಿಸಿ ಕುಡಿದರೆ ಒಂದೆ ದಿನದಲ್ಲಿ ಶೀತ, ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಯಾಗುತ್ತದೆ.ದೊಡ್ಡ ಪತ್ರೆ ಸೊಪ್ಪನ್ನು ಬೆಂಕಿಯ ಮೇಲೆ ಇಟ್ಟು ಬಾಡಿಸಿ ನಂತರ ಅದನ್ನು ನೆತ್ತಿಗೆ ಹಾಕಿದರೆ ದೇಹದಲ್ಲಿನ ತಣ್ಣನೆಯ ಅಂಶ ನಿವಾರಣೆಯಾಗಿ ಜ್ವರ, ಶೀತ ಕಡಿಮೆಯಾಗುತ್ತದೆ. ಮಕ್ಕಳಿಗೆ ಇದು ಬೆಸ್ಟ್‌ ಔಷಧವಾಗಿದೆ.ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆ ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ. ಈ ಎಲೆಗಳ ಪೇಸ್ಟ್ ತಯಾರಿಸಿ ಅದನ್ನು ಚೇಳು ಕಚ್ಚಿದ ಗಾಯಕ್ಕೆ ಹಚ್ಚಿದರೆ ನೋವು ದೂರವಾಗುತ್ತದೆ. ಒಂದು ವಾರದವರೆಗೆ ದೊಡ್ಡ ಪತ್ರೆಯ ಎಲೆಗಳನ್ನು ತಿಂದರೆ ಅರಿಶಿಣ ಕಾಮಾಲೆ ವಾಸಿಯಾಗುತ್ತದೆ. ದೊಡ್ಡಪತ್ರೆಯನ್ನು ಜೀರಿಗೆ, ಎಳ್ಳಿನೊಂದಿಗೆ ಹುರಿದು ಕಾಯಿತುರಿ ಜೊತೆ ರುಬ್ಬಿ ಅದಕ್ಕೆ ಉಪ್ಪು, ಮಜ್ಜಿಗೆ ಹಾಕಿ ತಂಬುಳಿ ಮಾಡಿ ಕುಡಿದರೆ ಪಿತ್ತದ ಖಾಯಿಲೆಗಳು ಗುಣಮುಖವಾಗುವುದು.ದೊಡ್ಡಪತ್ರೆ ಎಲೆಯನ್ನು ಉಪ್ಪಿನ ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ. ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕುತ್ತಿದ್ದರೆ ಹುಳುಕಡ್ಡಿಯ ನಿವಾರಣೆಯಾಗುತ್ತದೆ. ದೊಡ್ಡ ಪತ್ರೆಯಲ್ಲಿ ವಿಟಮಿನ್‌ ಸಿ, ಫೈಬರ್‌ ಮತ್ತು ಕ್ಯಾಲ್ಸಿಯಂ ಗುಣ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ.ದೊಡ್ಡ ಪತ್ರೆಯ ಗಿಡದ ಎಲೆಯನ್ನು ತಂದು ಬಾಡಿಸಿ ರಸ ತೆಗೆದು ಜೇನುತುಪ್ಪ ಸೇರಿಸಿ ಕುಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಅರಿಸಿನ ಕಾಮಾಲೆ ಇದ್ದವರಿಗೂ ದೊಡ್ಡ ಪತ್ರೆ ಸೊಪ್ಪು ಉತ್ತಮ ಮನೆ ಮದ್ದಾಗಿದೆ. ಈ ಎಲೆಯನ್ನು ಆಹಾರ ರೂಪದಲ್ಲಿ ಅಂದರೆ ಚಟ್ನಿ, ತಂಬುಳಿ ಮಾಡಿ ಸೇವಿಸಿದರೆ ಕೆಲವೇ ದಿನಗಳಲ್ಲಿ ಕಾಯಿಲೆ ಚೇತರಿಕೆಯನ್ನು ಕಾಣುತ್ತದೆ. ಕಂಬಳಿ ಹುಳ, ಇಸುಬು ಇಂತಹ ಕೀಟಗಳು ಕಚ್ಚಿದ್ದರೆ ಸಹಿಸಲಾರದ ಉರಿ ಚರ್ಮಕ್ಕಾಗುತ್ತದೆ. ಇದನ್ನು ತಡೆಯಲು ಈ ದೊಡ್ಡ ಪತ್ರೆ ಸೊಪ್ಪು ಸಹಾಯಕವಾಗಿದೆ.
ದೊಡ್ಡ ಪತ್ರೆ ಎಲೆಯ ರಸಕ್ಕೆ ಬೆಲ್ಲ ಸೇರಿಸಿ ಕುಡಿದಾಗ ಬೆಲ್ಲ ಕೂಡ ದೇಹಕ್ಕೆ ಒಳ್ಳೆಯ ಪದಾರ್ಥವಾಗಿದೆ. ಇದು ದೇಹದಿಂದ ವಿಷಯುಕ್ತ ಪದಾರ್ಥವನ್ನು ಹೊರಹಾಕಲು ನೆರವಾಗುತ್ತದೆ. ಆದ್ದರಿಂದ ನಿಮ್ಮ ಮನೆಯ ಹಿತ್ತಲಿನಲ್ಲಿ ದೊಡ್ಡ ಪತ್ರೆ ಸೊಪ್ಪಿದ್ದರೆ ಜೋಪಾನ ಮಾಡಿ ಉಳಿಸಿಕೊಳ್ಳ.

Continue Reading

ಆರೋಗ್ಯ

Rare Medical Condition ಪುರುಷ ಕ್ರೋಮೋಸೋಮ್, ಪುರುಷನ ದೇಹಲಕ್ಷಣ… ಆದರೆ ಒಳಗೆ ಗರ್ಭಕೋಶ! ಈ ಅಪರೂಪದ ಕಾಯಿಲೆ ಯಾವುದು?

Published

on

ನವದೆಹಲಿ: Rare Medical Condition ಮಕ್ಕಳಾಗದ ಕಾರಣ ವೈದ್ಯಕೀಯ ತಪಾಸಣೆಗೆ ತೆರಳಿದ್ದ 24 ವರ್ಷದ ಯುವಕನ ದೇಹದಲ್ಲಿ ಸಂಪೂರ್ಣವಾಗಿ ಬೆಳೆದ ಗರ್ಭಕೋಶ ಪತ್ತೆಯಾಗಿರುವ ಅಪರೂಪದ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಯುವಕನ ದೇಹದಲ್ಲಿ ಗರ್ಭಕೋಶದ ಜೊತೆಗೆ ಎರಡೂ ವೃಷಣಗಳು ಹೊಟ್ಟೆಯೊಳಗೆ ಇರುವುದನ್ನು ವೈದ್ಯಕೀಯ ತಪಾಸಣೆ ವೇಳೆ ಪತ್ತೆಹಚ್ಚಲಾಗಿದೆ.

ನೋಡಲು ಯುವಕ ಸಾಮಾನ್ಯ ಪುರುಷನ ದೈಹಿಕ ಲಕ್ಷಣಗಳನ್ನು ಹೊಂದಿದ್ದನು. ಯಾವುದೇ ಪ್ರಮುಖ ರೋಗಲಕ್ಷಣಗಳೂ ಕಾಣಿಸಿಕೊಂಡಿರಲಿಲ್ಲ. ಆದರೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ಪರೀಕ್ಷೆ ನಡೆಸಿದಾಗ ವೃಷಣಕೋಶದಲ್ಲಿ ಎರಡೂ ವೃಷಣಗಳು ಇಲ್ಲದಿರುವುದು ಕಂಡುಬಂದಿದೆ. ವೀರ್ಯ ಪರೀಕ್ಷೆಯಲ್ಲಿಯೂ ವೀರ್ಯಾಣುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ವೈದ್ಯರು ಹೆಚ್ಚಿನ ಪರೀಕ್ಷೆಗಳಿಗೆ ಸೂಚಿಸಿದರು.

ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಯ್ತು ಗರ್ಭಕೋಶ

ಮೊದಲಿಗೆ ಕ್ರೋಮೋಸೋಮ್ ಪರೀಕ್ಷೆ ನಡೆಸಿದಾಗ ಯುವಕನಲ್ಲಿ ಸಾಮಾನ್ಯ XY ಪುರುಷ ಕ್ರೋಮೋಸೋಮ್‌ಗಳು ಇರುವುದು ದೃಢಪಟ್ಟಿತು. ಆದರೆ ಅಲ್ಟ್ರಾಸೌಂಡ್ ಹಾಗೂ ಎಂಆರ್‌ಐ ಸ್ಕ್ಯಾನ್ ನಡೆಸಿದಾಗ ದೇಹದ ಒಳಭಾಗದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಯಾಗಿರುವ ಗರ್ಭಕೋಶ ಪತ್ತೆಯಾಯಿತು.

ಇದರ ಜೊತೆಗೆ ಎರಡೂ ವೃಷಣಗಳು ಹೊಟ್ಟೆಯೊಳಗೆ ಇರುವುದೂ ಪತ್ತೆಯಾಯಿತು. ಹೊರಭಾಗದಲ್ಲಿ ಪುರುಷನ ದೈಹಿಕ ಲಕ್ಷಣಗಳಿದ್ದರೂ ದೇಹದೊಳಗೆ ಗರ್ಭಕೋಶ ಸೇರಿದಂತೆ ಮಹಿಳೆಯರಲ್ಲಿ ಕಂಡುಬರುವ ಸಂತಾನೋತ್ಪತ್ತಿ ಅಂಗಗಳ ಕೆಲವು ರಚನೆಗಳು ಉಳಿದುಕೊಂಡಿರುವುದು ವೈದ್ಯರಿಗೆ ಅಪರೂಪದ ಪ್ರಕರಣವಾಗಿ ಕಂಡುಬಂದಿದೆ.

ಯಾವ ಕಾಯಿಲೆಯಿಂದ ಇದು ಸಂಭವಿಸುತ್ತದೆ?

ಪುರುಷ ಸಂತಾನೋತ್ಪತ್ತಿ ಆರೋಗ್ಯ ತಜ್ಞರ ಪ್ರಕಾರ, ಈ ರೀತಿಯ ಸ್ಥಿತಿಗೆ ‘ಪರ್ಸಿಸ್ಟೆಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್’ (Persistent Mullerian Duct Syndrome – PMDS) ಕಾರಣವಾಗಬಹುದು.

ಇದು ಲೈಂಗಿಕ ಬೆಳವಣಿಗೆಗೆ ಸಂಬಂಧಿಸಿದ ಅತ್ಯಂತ ಅಪರೂಪದ ಅಸ್ವಸ್ಥತೆಯಾಗಿದ್ದು, ಪುರುಷ ಕ್ರೋಮೋಸೋಮ್ ಹಾಗೂ ಸಾಮಾನ್ಯ ಪುರುಷ ಬಾಹ್ಯ ಜನನಾಂಗಗಳನ್ನು ಹೊಂದಿರುವ ವ್ಯಕ್ತಿಯಲ್ಲಿ ಗರ್ಭಕೋಶ ಮತ್ತು ಕೆಲವೊಮ್ಮೆ ಫಾಲೋಪಿಯನ್ ಟ್ಯೂಬ್‌ಗಳಂತಹ ರಚನೆಗಳು ದೇಹದಲ್ಲಿ ಉಳಿದುಕೊಳ್ಳುತ್ತವೆ.

ಸಾಮಾನ್ಯವಾಗಿ ಗಂಡು ಭ್ರೂಣದ ಬೆಳವಣಿಗೆಯ ಸಂದರ್ಭದಲ್ಲಿ ವೃಷಣಗಳು ಆಂಟಿ-ಮುಲ್ಲೇರಿಯನ್ ಹಾರ್ಮೋನ್ (AMH) ಅನ್ನು ಉತ್ಪಾದಿಸುತ್ತವೆ. ಈ ಹಾರ್ಮೋನ್ ಮುಲ್ಲೇರಿಯನ್ ನಾಳದಿಂದ ಬೆಳೆಯುವ ಗರ್ಭಕೋಶದಂತಹ ರಚನೆಗಳು ಬೆಳವಣಿಗೆಯಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆದರೆ AMH ಉತ್ಪಾದನೆಯಲ್ಲಿ ಸಮಸ್ಯೆ ಉಂಟಾದರೆ ಅಥವಾ ದೇಹವು ಈ ಹಾರ್ಮೋನ್‌ಗೆ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ, ಸಾಮಾನ್ಯವಾಗಿ ಅಳಿದುಹೋಗಬೇಕಾದ ಈ ರಚನೆಗಳು ದೇಹದಲ್ಲಿ ಉಳಿದುಕೊಳ್ಳಬಹುದು. ಇದರಿಂದ ಪುರುಷನ ದೇಹದಲ್ಲಿ ಗರ್ಭಕೋಶ ಸೇರಿದಂತೆ ಕೆಲವು ಮುಲ್ಲೇರಿಯನ್ ರಚನೆಗಳು ಕಂಡುಬರುವ ಸಾಧ್ಯತೆಯಿದೆ.

ವೃಷಣಗಳು ಹೊಟ್ಟೆಯಲ್ಲಿದ್ದರೆ ಸಂತಾನೋತ್ಪತ್ತಿಗೆ ಸಮಸ್ಯೆ ಏಕೆ?

ಸಾಮಾನ್ಯವಾಗಿ ವೀರ್ಯಾಣುಗಳ ಉತ್ಪಾದನೆಗೆ ದೇಹದ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ ತಾಪಮಾನ ಅಗತ್ಯವಿರುತ್ತದೆ. ಆದರೆ ವೃಷಣಗಳು ಹೊಟ್ಟೆಯೊಳಗೆ ಉಳಿದುಕೊಂಡರೆ ಹೆಚ್ಚಿನ ದೇಹದ ಉಷ್ಣತೆಯಿಂದ ವೀರ್ಯಾಣು ಉತ್ಪಾದನೆಗೆ ಅಡ್ಡಿಯಾಗಬಹುದು.

ಇದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು ಅಥವಾ ಕೆಲವು ಸಂದರ್ಭಗಳಲ್ಲಿ ವೀರ್ಯಾಣು ಉತ್ಪಾದನೆಯೇ ಸ್ಥಗಿತಗೊಳ್ಳಬಹುದು. ವೀರ್ಯ ಹೊರಬರುವ ಮಾರ್ಗದಲ್ಲಿ ಅಡಚಣೆ, ಹಾರ್ಮೋನ್‌ಗಳಲ್ಲಿನ ಏರುಪೇರು ಅಥವಾ ವೃಷಣಗಳ ಬೆಳವಣಿಗೆಯಲ್ಲಿನ ಸಮಸ್ಯೆಗಳೂ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

ವೃಷಣಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು ವೀರ್ಯಾಣುಗಳು ಉತ್ಪತ್ತಿಯಾಗುತ್ತಿದ್ದರೆ, ನೈಸರ್ಗಿಕವಾಗಿ ಸಂತಾನ ಪಡೆಯುವ ಸಾಧ್ಯತೆ ಇರಬಹುದು. ವೀರ್ಯಾಣುಗಳ ಕೊರತೆ ಕಂಡುಬಂದರೆ ವೈದ್ಯರು ವೃಷಣದಿಂದ ನೇರವಾಗಿ ವೀರ್ಯಾಣುಗಳನ್ನು ಪಡೆಯುವ ಮೂಲಕ ಐವಿಎಫ್ ಅಥವಾ ಐಸಿಎಸ್‌ಐನಂತಹ ಸಹಾಯಕ ಸಂತಾನೋತ್ಪತ್ತಿ ವಿಧಾನಗಳನ್ನು ಪರಿಗಣಿಸಬಹುದು.

ಗರ್ಭಕೋಶ ಮತ್ತು ವೃಷಣಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗಿದೆ

ಈ ಪ್ರಕರಣದಲ್ಲಿ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ದೇಹದೊಳಗಿದ್ದ ಗರ್ಭಕೋಶ ಹಾಗೂ ಎರಡೂ ವೃಷಣಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.

ಹೊಟ್ಟೆಯೊಳಗೆ ಉಳಿದುಕೊಂಡಿರುವ ವೃಷಣಗಳಲ್ಲಿ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಬೆಳೆಯುವ ಅಪಾಯ ಇರುವುದರಿಂದ ಅವುಗಳನ್ನು ತೆಗೆದುಹಾಕುವುದು ಅಗತ್ಯವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ತೆಗೆದುಹಾಕಲಾದ ಅಂಗಾಂಶಗಳನ್ನು ಬಯಾಪ್ಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ ಅತ್ಯಂತ ಕನಿಷ್ಠ ಮಟ್ಟದ ಕ್ಯಾನ್ಸರ್ ಲಕ್ಷಣಗಳು ಕಂಡುಬಂದಿವೆ ಎಂದು ತಿಳಿಸಲಾಗಿದೆ.

ವೃಷಣಗಳನ್ನು ಹೊಟ್ಟೆಯೊಳಗೆ ಹಾಗೆಯೇ ಉಳಿಸಿದ್ದರೆ ಭವಿಷ್ಯದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದಿತ್ತು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಅತ್ಯಂತ ಅಪರೂಪದ ವೈದ್ಯಕೀಯ ಸ್ಥಿತಿ

ವೈದ್ಯಕೀಯ ದಾಖಲೆಗಳ ಪ್ರಕಾರ ಪರ್ಸಿಸ್ಟೆಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್ ಅತ್ಯಂತ ಅಪರೂಪದ ಸ್ಥಿತಿಯಾಗಿದೆ. ಇಂತಹ ಪ್ರಕರಣಗಳು ಕೆಲವೇ ಸಂಖ್ಯೆಯಲ್ಲಿ ವರದಿಯಾಗಿವೆ.

ಪುರುಷನಾಗಿ ಬೆಳೆದ ವ್ಯಕ್ತಿಯಲ್ಲಿ ಗರ್ಭಕೋಶ ಪತ್ತೆಯಾಗುವುದನ್ನು ಕೇವಲ ವಿಚಿತ್ರ ವೈದ್ಯಕೀಯ ಪ್ರಕರಣವೆಂದು ನೋಡದೆ, ಸಂತಾನೋತ್ಪತ್ತಿ ಆರೋಗ್ಯದ ಸಮಸ್ಯೆಗಳ ಹಿಂದಿರುವ ಅಪರೂಪದ ಅಂಗರಚನಾ ಅಥವಾ ಬೆಳವಣಿಗೆಯ ಅಸಹಜತೆಗಳ ಸೂಚನೆಯಾಗಿಯೂ ಪರಿಗಣಿಸಬೇಕಾಗಿದೆ.

ವೀರ್ಯಾಣುಗಳ ಕೊರತೆ, ದೇಹದೊಳಗೆ ಉಳಿದುಕೊಂಡಿರುವ ವೃಷಣಗಳು ಅಥವಾ ಕಾರಣ ತಿಳಿಯದ ಬಂಜೆತನದ ಸಮಸ್ಯೆ ಇರುವ ಸಂದರ್ಭಗಳಲ್ಲಿ ಅಗತ್ಯವಿದ್ದರೆ ಸ್ಕ್ಯಾನಿಂಗ್, ಹಾರ್ಮೋನ್ ಹಾಗೂ ಆನುವಂಶಿಕ ಪರೀಕ್ಷೆಗಳನ್ನು ನಡೆಸುವುದು ಮಹತ್ವದ್ದಾಗಿದೆ. ಇಂತಹ ಪ್ರಕರಣಗಳಲ್ಲಿ ಆಂಡ್ರಾಲಜಿ, ಸಂತಾನೋತ್ಪತ್ತಿ ಎಂಡೋಕ್ರೈನಾಲಜಿ ಮತ್ತು ಜೆನೆಟಿಕ್ಸ್ ತಜ್ಞರ ಸಮಗ್ರ ತಪಾಸಣೆ ಸಹಾಯಕವಾಗಬಹುದು.

Continue Reading

ಆರೋಗ್ಯ

Heart attack ಕ್ಕೆ ದಪ್ಪ ದೇಹವೇ ಕಾರಣವಲ್ಲ! 30ರ ನಂತರ ಈ ಪರೀಕ್ಷೆಗಳನ್ನು ಮರೆಯಬೇಡಿ

Published

on

ಬೆಂಗಳೂರು: ದೈಹಿಕವಾಗಿ ತೆಳ್ಳಗೆ ಅಥವಾ ಸಣ್ಣ ಮೈಕಟ್ಟು ಹೊಂದಿರುವುದು ವ್ಯಕ್ತಿ ಸಂಪೂರ್ಣ ಆರೋಗ್ಯವಾಗಿದ್ದಾನೆ ಅಥವಾ ಆತನ ಹೃದಯ ಸದೃಢವಾಗಿದೆ ಎಂಬುದಕ್ಕೆ ಯಾವುದೇ ಖಾತರಿಯಲ್ಲ. ಹೊರನೋಟಕ್ಕೆ ಫಿಟ್ ಆಗಿ ಕಾಣುವ, ನಿಯಮಿತವಾಗಿ ವಾಕಿಂಗ್ ಅಥವಾ ಜಾಗಿಂಗ್ ಮಾಡುವ ಹಾಗೂ ಧೂಮಪಾನ ಮಾಡದವರಲ್ಲಿಯೂ Heart attack ಕಾಣಿಸಿಕೊಂಡಿರುವ ಹಲವು ಘಟನೆಗಳಿವೆ.

ವ್ಯಕ್ತಿಯು ಮೇಲ್ನೋಟಕ್ಕೆ ದಪ್ಪವಾಗಿ ಕಾಣಿಸದಿದ್ದರೂ ದೇಹದ ಒಳಗಿನ ಪ್ರಮುಖ ಅಂಗಗಳಾದ ಲಿವರ್, ಪ್ಯಾಂಕ್ರಿಯಾಸ್ ಮತ್ತು ಹೃದಯದ ಸುತ್ತ ಅಪಾಯಕಾರಿ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗಿರಬಹುದು. ವಿಶೇಷವಾಗಿ ಹೃದಯದ ಸುತ್ತ ಕೊಬ್ಬು ಹೆಚ್ಚಾದರೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚುತ್ತದೆ.

ಹೃದಯಾಘಾತಕ್ಕೆ ಪ್ರಮುಖ ಕಾರಣಗಳೇನು?

ಹೃದಯ ಕಾಯಿಲೆ ಕೇವಲ ಅಧಿಕ ತೂಕದಿಂದ ಮಾತ್ರ ಉಂಟಾಗುವುದಿಲ್ಲ. ಕುಟುಂಬದಲ್ಲಿ ಹೃದಯ ಕಾಯಿಲೆಯ ಇತಿಹಾಸ, ಕೊಲೆಸ್ಟ್ರಾಲ್ ಅಸಮತೋಲನ, ಅಧಿಕ ರಕ್ತದೊತ್ತಡ, ಇನ್ಸುಲಿನ್ ಪ್ರತಿರೋಧ, ದೀರ್ಘಕಾಲದ ಮಾನಸಿಕ ಒತ್ತಡ, ಕಳಪೆ ನಿದ್ರೆ ಮತ್ತು ಧೂಮಪಾನದಂತಹ ಹಲವು ಅಂಶಗಳು ಹೃದಯರೋಗದ ಅಪಾಯವನ್ನು ಹೆಚ್ಚಿಸಬಹುದು.

ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ, ಬೆಂಗಳೂರಿನ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಲಹೆಗಾರರಾದ ಡಾ. ರವೀಂದ್ರನಾಥ್ ರೆಡ್ಡಿ ಅವರ ಪ್ರಕಾರ, ವ್ಯಕ್ತಿಯ ಬಾಡಿ ಮಾಸ್ ಇಂಡೆಕ್ಸ್ ಸಾಮಾನ್ಯವಾಗಿದ್ದರೂ ದೇಹದ ಒಳಭಾಗದಲ್ಲಿ, ವಿಶೇಷವಾಗಿ ಲಿವರ್, ಹೃದಯ ಮತ್ತು ಕರುಳಿನ ಸುತ್ತ ಅಪಾಯಕಾರಿ ಕೊಬ್ಬು ಸಂಗ್ರಹವಾಗಿರಬಹುದು.

ಇಂತಹ ಸ್ಥಿತಿಯನ್ನು ವೈದ್ಯಕೀಯವಾಗಿ ‘ಚಯಾಪಚಯ ಬೊಜ್ಜು, ಸಾಮಾನ್ಯ ತೂಕ’ ಎಂದು ಕರೆಯಲಾಗುತ್ತದೆ. ಹೊರಗೆ ದೇಹ ತೆಳ್ಳಗಿದ್ದರೂ ಒಳಗೆ ಸಂಗ್ರಹವಾಗಿರುವ ಕೊಬ್ಬು ದೀರ್ಘಕಾಲದಲ್ಲಿ ದೇಹದಲ್ಲಿ ಉರಿಯೂತ ಹಾಗೂ ರಕ್ತನಾಳಗಳ ಹಾನಿಗೆ ಕಾರಣವಾಗಬಹುದು. ಕೆಲವೊಮ್ಮೆ ಯಾವುದೇ ಸ್ಪಷ್ಟ ಬಾಹ್ಯ ಲಕ್ಷಣಗಳಿಲ್ಲದೆ ಸಮಸ್ಯೆ ಮುಂದುವರಿದು, ತುರ್ತು ಹೃದಯ ಸಂಬಂಧಿತ ಪರಿಸ್ಥಿತಿಗೆ ಕಾರಣವಾಗುವ ಸಾಧ್ಯತೆಯೂ ಇದೆ.

ಯಾರಲ್ಲಿ ಹೃದಯಾಘಾತದ ಅಪಾಯ ಹೆಚ್ಚು?

ತೀವ್ರ ಕೆಲಸದ ಒತ್ತಡದಲ್ಲಿರುವ ಯುವ ವೃತ್ತಿಪರರು, ಕುಟುಂಬದಲ್ಲಿ ಹೃದಯರೋಗದ ಇತಿಹಾಸ ಹೊಂದಿರುವವರು, ಧೂಮಪಾನಿಗಳು ಹಾಗೂ ರೋಗನಿರ್ಣಯವಾಗದ ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆ ಹೊಂದಿರುವವರಲ್ಲಿ ಅಪಾಯ ಹೆಚ್ಚಿರಬಹುದು.

ಅದೇ ರೀತಿ, ತಾವು ಸಂಪೂರ್ಣ ಆರೋಗ್ಯವಾಗಿದ್ದೇವೆ ಎಂಬ ನಂಬಿಕೆಯಿಂದ ನಿಯಮಿತ ಆರೋಗ್ಯ ತಪಾಸಣೆ ಅಥವಾ ವ್ಯಾಯಾಮವನ್ನು ನಿರ್ಲಕ್ಷಿಸುವವರೂ ಎಚ್ಚರಿಕೆಯಿಂದ ಇರಬೇಕು.

ಮಹಿಳೆಯರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳ ಲಕ್ಷಣಗಳು ಪುರುಷರಿಗಿಂತ ವಿಭಿನ್ನವಾಗಿರಬಹುದು. ಎದೆನೋವು ಸ್ಪಷ್ಟವಾಗಿ ಕಾಣಿಸಿಕೊಳ್ಳದಿರುವ ಸಾಧ್ಯತೆಯಿದ್ದು, ಅಸಾಮಾನ್ಯ ದಣಿವು ಅಥವಾ ಇತರ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ರೋಗ ಪತ್ತೆ ತಡವಾಗಬಹುದು.

30ರ ನಂತರ ಈ ಪರೀಕ್ಷೆಗಳ ಬಗ್ಗೆ ಗಮನವಿರಲಿ

ದೈಹಿಕವಾಗಿ ಸದೃಢವಾಗಿರುವುದು ಹೃದಯರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅದು ಅಪಾಯವನ್ನು ಸಂಪೂರ್ಣವಾಗಿ ನಿವಾರಿಸುವುದಿಲ್ಲ. ಆದ್ದರಿಂದ 30 ವರ್ಷ ಮೇಲ್ಪಟ್ಟವರು, ದೇಹ ತೆಳ್ಳಗಿರಲಿ ಅಥವಾ ದಪ್ಪವಾಗಿರಲಿ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ.

ಲಿಪಿಡ್ ಪ್ರೊಫೈಲ್, ರಕ್ತದಲ್ಲಿನ ಸಕ್ಕರೆ ಮಟ್ಟ, ರಕ್ತದೊತ್ತಡ ಮತ್ತು ಎಚ್‌ಬಿಎ1ಸಿ ಸೇರಿದಂತೆ ಅಗತ್ಯ ಪರೀಕ್ಷೆಗಳನ್ನು ವೈದ್ಯರ ಸಲಹೆಯಂತೆ ಮಾಡಿಸಿಕೊಳ್ಳಬಹುದು.

ಕುಟುಂಬದಲ್ಲಿ ಹೃದಯರೋಗದ ಇತಿಹಾಸವಿದ್ದರೆ, ವೈದ್ಯರ ಸಲಹೆಯ ಮೇರೆಗೆ ಕೊರೊನರಿ ಕ್ಯಾಲ್ಸಿಯಂ ಸ್ಕೋರ್ ಅಥವಾ ಸೂಕ್ತ ಹೃದಯ ಪರೀಕ್ಷೆಗಳನ್ನು ಪರಿಗಣಿಸಬಹುದು.

ಆರೋಗ್ಯಕರ ಜೀವನಶೈಲಿ ಅತ್ಯಗತ್ಯ

ಒತ್ತಡವನ್ನು ನಿಯಂತ್ರಿಸುವುದು, ಸಾಕಷ್ಟು ನಿದ್ರೆಗೆ ಆದ್ಯತೆ ನೀಡುವುದು, ನಿಯಮಿತ ದೈಹಿಕ ಚಟುವಟಿಕೆ ಮಾಡುವುದು ಹಾಗೂ ತಂಬಾಕು ಸೇವನೆಯಿಂದ ಸಂಪೂರ್ಣವಾಗಿ ದೂರವಿರುವುದು ಹೃದಯದ ಆರೋಗ್ಯಕ್ಕೆ ಪ್ರಮುಖವಾಗಿದೆ.

ಒಬ್ಬ ವ್ಯಕ್ತಿಯ ಬಾಹ್ಯ ನೋಟದಿಂದ ಮಾತ್ರ ಹೃದಯದ ಆರೋಗ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ದೇಹದ ತೂಕ ಸಾಮಾನ್ಯವಾಗಿದ್ದರೂ ಇತರ ಅಪಾಯದ ಅಂಶಗಳಿದ್ದರೆ ವೈದ್ಯಕೀಯ ತಪಾಸಣೆ ಅಗತ್ಯವಾಗಬಹುದು. ಹೀಗಾಗಿ ಹೃದಯ ಸಂಬಂಧಿತ ತುರ್ತು ಪರಿಸ್ಥಿತಿ ಎದುರಾಗುವವರೆಗೆ ಕಾಯುವುದಕ್ಕಿಂತ ಮುನ್ನೆಚ್ಚರಿಕೆ ಮತ್ತು ನಿಯಮಿತ ಆರೋಗ್ಯ ತಪಾಸಣೆಗೆ ಆದ್ಯತೆ ನೀಡುವುದು ಉತ್ತಮ.

Continue Reading

ಬೆಂಗಳೂರು

ಬೆಂಗಳೂರು PGಗಳ ಮೇಲೆ ಅಧಿಕಾರಿಗಳ ದಾಳಿ: 64 ಕಡೆ ಪರಿಶೀಲನೆ, 23 ಪಿಜಿಗಳಿಗೆ ನೋಟಿಸ್

Published

on

ಬೆಂಗಳೂರು, ಸೆಪ್ಟೆಂಬರ್ 5: ಬೆಂಗಳೂರಿನ PG ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಹಾಗೂ ಅನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಒಂದೇ ದಿನ 64 ಪಿಜಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಪಿಜಿಗಳಲ್ಲಿನ ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅಡುಗೆಮನೆಯ ಸ್ವಚ್ಛತೆ, ಆಹಾರ ತಯಾರಿಸುವ ಸ್ಥಳದ ನೈರ್ಮಲ್ಯ, ಕಚ್ಚಾ ವಸ್ತುಗಳ ಗುಣಮಟ್ಟ ಹಾಗೂ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ವಿಧಾನಗಳ ಬಗ್ಗೆಯೂ ತಪಾಸಣೆ ನಡೆಸಲಾಗಿದೆ.

ಅವಧಿ ಮೀರಿದ ಆಹಾರ ಪದಾರ್ಥ ಪತ್ತೆ

ತಪಾಸಣೆ ವೇಳೆ ಕೆಲವು ಪಿಜಿಗಳಲ್ಲಿ ಅವಧಿ ಮೀರಿದ ಹಾಗೂ ಮಿಸ್‌ಬ್ರ್ಯಾಂಡೆಡ್ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅವಧಿ ಮೀರಿದ ಮೊಸರು, ಬಿಸಿಬೇಳೆ ಬಾತ್ ಪೌಡರ್, ಅಕ್ಕಿ ಹಿಟ್ಟು, ಸಿಂಥೆಟಿಕ್ ಫುಡ್ ಕಲರ್, ಕಾಳುಮೆಣಸು ಹಾಗೂ ಮಿಸ್‌ಬ್ರ್ಯಾಂಡೆಡ್ ಮಿಶ್ರಣ ಸೇರಿದಂತೆ ಹಲವು ಪದಾರ್ಥಗಳು ಪತ್ತೆಯಾಗಿವೆ.

ಆಹಾರ ಪದಾರ್ಥಗಳ ತಯಾರಿಕೆ ಮತ್ತು ಬಳಕೆಯ ಅವಧಿ, ಉತ್ಪನ್ನಗಳ ಲೇಬಲಿಂಗ್ ಹಾಗೂ ಗುಣಮಟ್ಟದ ಮಾನದಂಡಗಳನ್ನು ಪಿಜಿಗಳು ಪಾಲಿಸುತ್ತಿವೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಬೊಮ್ಮಸಂದ್ರದ PGಯಲ್ಲಿ ಗಂಭೀರ ಅಸಡ್ಡೆ

ಬೊಮ್ಮಸಂದ್ರದ ನಂದನ ಎಲೈಟ್ ಪಿಜಿಯಲ್ಲಿ ನಡೆಸಿದ ತಪಾಸಣೆ ವೇಳೆ ಗಂಭೀರ ನೈರ್ಮಲ್ಯ ಲೋಪಗಳು ಕಂಡುಬಂದಿವೆ. ಊಟದ ಮೇಜಿನ ಮೇಲೆಯೇ ಆಹಾರ ಪದಾರ್ಥಗಳ ಜೊತೆಗೆ ತಿಗಣೆ ನಿವಾರಣೆಗೆ ಬಳಸುವ ಪೌಡರ್ ಇಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಇದಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ ಇರುವ ಸ್ಥಳದಲ್ಲೇ ಆಹಾರಕ್ಕೆ ಸಂಬಂಧಿಸದ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ. ಆಹಾರ ಪದಾರ್ಥಗಳು ಹಾಗೂ ಇತರೆ ವಸ್ತುಗಳನ್ನು ಸೂಕ್ತವಾಗಿ ಪ್ರತ್ಯೇಕಿಸದೆ ಇಟ್ಟಿರುವುದನ್ನೂ ಅಧಿಕಾರಿಗಳು ಗಮನಿಸಿದ್ದಾರೆ.

ನಿಯಮ ಉಲ್ಲಂಘನೆ ಮತ್ತು ನೈರ್ಮಲ್ಯದ ವಿಚಾರದಲ್ಲಿ ಗಂಭೀರ ಅಸಡ್ಡೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ನಂದನ ಎಲೈಟ್ ಪಿಜಿಯ ಡೈನಿಂಗ್ ಏರಿಯಾವನ್ನು ಸೀಲ್ ಮಾಡಿದ್ದಾರೆ.

23 ಪಿಜಿಗಳಿಗೆ ನೋಟಿಸ್

ಒಟ್ಟು 64 ಪಿಜಿಗಳಲ್ಲಿ ನಡೆದ ತಪಾಸಣೆ ವೇಳೆ ನೈರ್ಮಲ್ಯ ಕೊರತೆ, ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದ ಹಲವು ಲೋಪಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ 23 ಪಿಜಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಪಿಜಿಗಳಲ್ಲಿ ವಾಸಿಸುವವರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸುವುದು ಪಿಜಿ ನಿರ್ವಹಣೆಯ ಜವಾಬ್ದಾರಿಯಾಗಿದೆ. ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿ ನಿಗದಿತ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ.

ಮುಂದಿನ ದಿನಗಳಲ್ಲಿಯೂ ನಿಯಮ ಉಲ್ಲಂಘಿಸುವ ಪಿಜಿಗಳ ವಿರುದ್ಧ ತಪಾಸಣೆ ಹಾಗೂ ಅಗತ್ಯ ಕಾನೂನು ಕ್ರಮ ಮುಂದುವರಿಯುವ ಸಾಧ್ಯತೆಯಿದೆ. ಇದರಿಂದ ಬೆಂಗಳೂರಿನ ಪಿಜಿಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ಮತ್ತೆ ಗಮನ ಹರಿಸುವಂತಾಗಿದೆ.

Continue Reading

Trending