ದೇಶ
ಮುಂದೆ ಸ್ನೇಹದ ಹಸ್ತ, ಹಿಂದೆ ಬೆನ್ನಿಗೆ ಚೂರಿ! ಈ ಕಾರಣಕ್ಕೆ ಭಾರತ ಅಂದ್ರೆ ಉರಿದು ಬೀಳ್ತಿರೋ ಟ್ರಂಪ್!
ಡೊನಾಲ್ಡ್ ಟ್ರಂಪ್ (Donald Trump) ಅಂದ್ರೆನೆ ವಿವಾದಗಳ ಸರದಾರ. ಅವರ ಮಾತುಗಳು, ಅವರ ನೀತಿಗಳು ಜಗತ್ತಿನ ಬಹಳಷ್ಟು ದೇಶಗಳಿಗೆ ತಲೆನೋವು ತಂದಿದೆ. ಅದರಲ್ಲೂ ಭಾರತದ (India) ಜೊತೆಗಿನ ಅವರ ಸಂಬಂಧ ಸ್ವಲ್ಪ ವಿಚಿತ್ರವಾಗಿದೆ. ಕೆಲವೊಮ್ಮೆ ಸ್ನೇಹದ ಹಸ್ತ ಚಾಚಿದ್ರೆ, ಇನ್ನೊಂದ್ಸಲ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಉರಿ ಉರಿ ಅನ್ನೋ ಹಾಗೆ ಮಾಡ್ತಾರೆ. ಭಾರತ-ಪಾಕ್ ನಡುವೆ ಬಂದು ನಾನೇ ಕದನ ವಿರಾಮ (Ceasefire) ಮಾಡಿಸಿದ್ದು ಅಂತ ಮೊದಲು ಹೇಳಿದ್ದರು. ಆದ್ರೆ ಇದ್ದಕ್ಕಿದ್ದ ಹಾಗೇ ಯೂಟರ್ನ್ ಹೊಡೆದುಬಿಟ್ರು. ನಾನು ಕದನ ವಿರಾಮ ಮಾಡಿಸಿಲ್ಲ ಅಂತ ಹೇಳಿದ್ರು. ಇದೆಲ್ಲ ನೋಡ್ತಿದ್ರೆ ಟ್ರಂಪ್ ಯಾಕೋ ಭಾರತಕ್ಕೆ ಪರೋಕ್ಷವಾಗಿ ಬೆನ್ನಿಗೆ ಚೂರಿ ಹಾಕ್ತಿದ್ದಾರೆ ಅನ್ನೋ ಪ್ರಶ್ನೆಗಳು ಎದ್ದಿವೆ.
ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿದ್ದಾಗ ಭಾರತ ಮತ್ತೆ ಅಮೆರಿಕಾ ನಡುವಿನ ವ್ಯಾಪಾರ ಸಂಬಂಧದಲ್ಲಿ ಬಹಳಷ್ಟು ಏರಿಳಿತಗಳು ಆಗಿದ್ದವು. ಟ್ರಂಪ್ ಅವರು ಭಾರತದ ವ್ಯಾಪಾರ ನೀತಿಗಳ ಬಗ್ಗೆ ಪದೇ ಪದೇ ಟೀಕೆ ಮಾಡ್ತಿದ್ರು. ಭಾರತ ಅಮೆರಿಕಾದ ವಸ್ತುಗಳ ಮೇಲೆ ಹೆಚ್ಚು ಸುಂಕ (ಟ್ಯಾರಿಫ್) ವಿಧಿಸುತ್ತೆ ಅಂತ ಅವರ ಆರೋಪ. ಆದ್ರೆ ಭಾರತ ಮಾತ್ರ ಇದಕ್ಕೆ ತಲೆಬಾಗಲಿಲ್ಲ. ಅಮೆರಿಕಾ ಹೇಳಿದ ಹಾಗೆಲ್ಲಾ ಒಪ್ಪಿಕೊಳ್ಳಲಿಲ್ಲ.
ಆದ್ರೆ ಚೀನಾ ಮಾತ್ರ ಅಮೆರಿಕಾ ಹೇಳಿದ ಹಾಗೆಲ್ಲಾ ಒಪ್ಪಿಕೊಂಡಿತ್ತು. ಟ್ರಂಪ್ ಒತ್ತಡಕ್ಕೆ ಮಣಿದು ಚೀನಾ ತನ್ನ ವ್ಯಾಪಾರ ನೀತಿಗಳಲ್ಲಿ ಬದಲಾವಣೆ ತಂದಿತ್ತು. ಆದ್ರೆ ಭಾರತ ಮಾತ್ರ ತನ್ನ ನಿಲುವಿಗೆ ಬದ್ಧವಾಗಿತ್ತು. ಇದು ಟ್ರಂಪ್ಗೆ ಸ್ವಲ್ಪ ಬೇಸರ ತರಿಸಿತ್ತು. ಅದಕ್ಕೆ ಅವರು ಪರೋಕ್ಷವಾಗಿ ಭಾರತಕ್ಕೆ ಟಾಂಗ್ ಕೊಡೋಕೆ ಶುರು ಮಾಡಿದ್ರು.
ಟ್ರಂಪ್ ಪ್ರಕಾರ, ಭಾರತ ಅಮೆರಿಕಾದ ವಸ್ತುಗಳ ಮೇಲೆ ವಿಧಿಸುವ ಸುಂಕ ತುಂಬಾನೇ ಜಾಸ್ತಿ. ಇದರಿಂದ ಅಮೆರಿಕಾದ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡೋಕೆ ಕಷ್ಟವಾಗುತ್ತೆ ಅಂತ ಅವರು ಹೇಳ್ತಿದ್ರು. ಅಷ್ಟೇ ಅಲ್ಲ, ಭಾರತ ಅಮೆರಿಕಾದಿಂದ ಆಮದು ಮಾಡಿಕೊಳ್ಳೋ ವಸ್ತುಗಳ ಮೇಲೆ ಹೆಚ್ಚು ಸುಂಕ ವಿಧಿಸಿ, ಅಮೆರಿಕಾದ ಮಾರುಕಟ್ಟೆಗೆ ಭಾರತದ ವಸ್ತುಗಳು ಸುಲಭವಾಗಿ ಬರೋ ಹಾಗೆ ಮಾಡ್ತಿದೆ ಅಂತ ಅವರು ಆರೋಪಿಸಿದ್ರು.
ವ್ಯಾಪಾರದ ಬಗ್ಗೆ ಕಿರಿಕ್!
ಟ್ರಂಪ್ ಅವರಿಗೆ ಭಾರತದ ವ್ಯಾಪಾರ ನೀತಿಗಳು ಇಷ್ಟವಾಗಲ್ಲ. ಯಾಕಂದ್ರೆ ಅವರ ಪ್ರಕಾರ ಭಾರತ ಅಮೆರಿಕಾದ ವಸ್ತುಗಳ ಮೇಲೆ ಬಹಳಷ್ಟು ಸುಂಕ ವಿಧಿಸುತ್ತೆ. ಅಮೆರಿಕಾ-ಭಾರತದ ನಡುವಿನ ವ್ಯಾಪಾರದಲ್ಲಿ ಅಸಮತೋಲನ ಇದೆ ಅಂತ ಅವರು ಪದೇ ಪದೇ ಹೇಳ್ತಾರೆ.
ಅವರ ಆಡಳಿತದ ಟೈಮಲ್ಲಿ ಭಾರತದಿಂದ ಅಮೆರಿಕಾಗೆ ಹೋಗೋ ಕೆಲವು ವಸ್ತುಗಳ ಮೇಲೆ ಸಿಗ್ತಿದ್ದ ವ್ಯಾಪಾರ ಸೌಲಭ್ಯಗಳನ್ನ ರದ್ದು ಮಾಡಿದ್ರು. ಇದರಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧದಲ್ಲಿ ಸ್ವಲ್ಪ ಬಿರುಕು ಬಿತ್ತು.
ಭಾರತ ಮತ್ತೆ ಪಾಕಿಸ್ತಾನದ ನಡುವೆ ಕಾಶ್ಮೀರ ವಿವಾದದ ಬಗ್ಗೆ ಟ್ರಂಪ್ ಕೊಡುವ ಹೇಳಿಕೆಗಳು ಭಾರತದಲ್ಲಿ ಬಹಳಷ್ಟು ವಿವಾದ ಸೃಷ್ಟಿಸಿವೆ. ಅದರಲ್ಲೂ ಅವರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸೋಕೆ ಬಂದಾಗ ಭಾರತಕ್ಕೆ ಉರಿ ಉರಿ ಅನ್ನೋ ಹಾಗಾಯಿತು. ಯಾಕಂದ್ರೆ ಕಾಶ್ಮೀರ ಭಾರತ ಮತ್ತೆ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯ, ಇದರಲ್ಲಿ ಮೂರನೇ ವ್ಯಕ್ತಿ ತಲೆ ಹಾಕೋದು ಭಾರತಕ್ಕೆ ಇಷ್ಟವಿಲ್ಲ.
ಇತ್ತೀಚೆಗೆ ಟ್ರಂಪ್ ಭಾರತದ ವ್ಯಾಪಾರ ನೀತಿಗಳ ಬಗ್ಗೆ ಮತ್ತೆ ಮಾತಾಡಿದ್ದಾರೆ. ಭಾರತದ ಸುಂಕಗಳು ಮತ್ತೆ ಆಪಲ್ ಕಂಪನಿ ಭಾರತದಲ್ಲಿ ಉತ್ಪಾದನೆ ಮಾಡ್ತಿರೋದರ ಬಗ್ಗೆ ಅವರ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ. ಈ ಮಾತುಗಳು ಭಾರತದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿವೆ. ಇವೆಲ್ಲಾ ಕಾರಣಗಳಿಂದ ಭಾರತದ ಕೆಲವರಿಗೆ ಟ್ರಂಪ್ ಬಗ್ಗೆ ಅಸಮಾಧಾನ ಇದೆ. ಆದ್ರೆ ಟ್ರಂಪ್ ಅವರ ಮಾತುಗಳು ಕೆಲವೊಮ್ಮೆ ರಾಜಕೀಯ ಲಾಭಕ್ಕೋಸ್ಕರ ಇರುತ್ತೆ. ಆದ್ರೆ ಭಾರತದ ಜೊತೆಗಿನ ಸಂಬಂಧ ಅವರಿಗೆ ಮುಖ್ಯ ಅನ್ನೋದು ಕೂಡಾ ನಿಜ.
ಹಾಗಾಗಿ ಟ್ರಂಪ್ ಅವರ ಮಾತುಗಳನ್ನ ಬಹಳಷ್ಟು ಜನ ಗಂಭೀರವಾಗಿ ತಗೊಳಲ್ಲ. ಯಾಕಂದ್ರೆ ಅವರ ಮಾತುಗಳು ಯಾವಾಗ ಬೇಕಾದ್ರೂ ಬದಲಾಗಬಹುದು ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಭಾರತದ ಜೊತೆಗಿನ ಅವರ ವ್ಯಾಪಾರ ಸಂಬಂಧಗಳು ಮಾತ್ರ ಯಾವಾಗ್ಲೂ ಚರ್ಚೆಗೆ ಗ್ರಾಸವಾಗ್ತಾನೆ ಇರುತ್ತೆ.
ದೇಶ
ಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ
ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಭಾನುವಾರ ಭಾವುಕ ವಿದಾಯ ನೀಡಲಾಯಿತು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದ್ದು, ಮೈಸೂರು ಜಿಲ್ಲಾಡಳಿತದಿಂದ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಎಸ್. ಜಾನಕಿ ಅವರ ಪತಿ ರಾಮಪ್ರಸಾದ್ ಅವರು 1997ರಲ್ಲೇ ನಿಧನರಾಗಿದ್ದರು. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಕೂಡ 2026ರ ಜನವರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಟುಂಬದಲ್ಲಿ ಪುರುಷ ವಾರಸುದಾರರಿಲ್ಲದ ಕಾರಣ, ಜಾನಕಿ ಅವರ ಮೊಮ್ಮಗಳು ಅಪ್ಸರಾ ಕುಟುಂಬದ ಪರವಾಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅಜ್ಜಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಭಾವುಕ ಕ್ಷಣ ಕಂಡು ಸ್ಥಳದಲ್ಲಿದ್ದ ಅಭಿಮಾನಿಗಳು ಕಣ್ಣೀರಿಟ್ಟರು.
1956ರಲ್ಲಿ ರಾಮಪ್ರಸಾದ್ ಅವರನ್ನು ವಿವಾಹವಾಗಿದ್ದ ಎಸ್. ಜಾನಕಿ, ತಮ್ಮ ಪತಿಯನ್ನು ಪ್ರೀತಿಯಿಂದ ‘ರಾಮು’ ಎಂದು ಕರೆಯುತ್ತಿದ್ದರು. ಜಾನಕಿ ಅವರ ಸಂಗೀತ ಪಯಣದಲ್ಲಿ ರಾಮಪ್ರಸಾದ್ ಸದಾ ಬೆಂಬಲವಾಗಿ ನಿಂತಿದ್ದು, ಅವರ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದರು ಎಂದು ಕುಟುಂಬದವರು ನೆನಪಿಸಿಕೊಂಡರು.
ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಅಮರ ಗೀತೆಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ, 2017ರ ಅಕ್ಟೋಬರ್ 28ರಂದು ಮೈಸೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಾಯನಕ್ಕೆ ವಿದಾಯ ಹೇಳಿದ್ದರು. ಮಲಯಾಳಂ ಚಿತ್ರದ ‘ಅಮ್ಮ ಪೂವಿನುಂ’ ಜೋಗುಳ ಗೀತೆ ಅವರ ಗಾಯನ ಬದುಕಿನ ಕೊನೆಯ ದಾಖಲಾದ ಹಾಡಾಗಿ ಉಳಿದಿದೆ.
ಗಾನಕೋಗಿಲೆ ಎಸ್. ಜಾನಕಿ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಮಧುರ ಕಂಠ, ಅಮರ ಗೀತೆಗಳು ಮತ್ತು ಅಪಾರ ಸಂಗೀತ ಸೇವೆ ಭಾರತೀಯ ಸಂಗೀತ ಲೋಕದಲ್ಲಿ ಸದಾಕಾಲ ಜೀವಂತವಾಗಿರಲಿವೆ.
ದೇಶ
ಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳನ್ನು ವೈಭವೀಕರಿಸುವ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ‘Legends and Personalities of Jammu and Kashmir’ ಪುಸ್ತಕದ ಪ್ರಕಟಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಕೌಂಟರ್ ಇಂಟೆಲಿಜೆನ್ಸ್ ವಿಂಗ್ (CIK) ಮೂವರು ಪ್ರಕಾಶಕರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಪುಸ್ತಕದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿ ನಾಯಕರನ್ನು ಜಮ್ಮು-ಕಾಶ್ಮೀರದ ಪ್ರಮುಖ ವ್ಯಕ್ತಿಗಳಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬಂಧಿತರಲ್ಲಿ ಇಬ್ಬರು ದೆಹಲಿ ಮೂಲದವರಾಗಿದ್ದು, ಮತ್ತೊಬ್ಬರು ಜಮ್ಮುವಿನ ನಿವಾಸಿಯಾಗಿದ್ದಾರೆ. ಈ ಹಿಂದೆ ದೆಹಲಿ ಮತ್ತು ಜಮ್ಮುವಿನ ವಿವಿಧ ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಡಿಜಿಟಲ್ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ ಆರೋಪವೂ ಕೇಳಿಬಂದಿದ್ದು, ತನಿಖಾ ತಂಡ ಡೇಟಾವನ್ನು ಮರುಪಡೆದಿದೆ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆಯ ಭಾಗವಾಗಿ ಪುಸ್ತಕದ ಲೇಖಕರೊಬ್ಬರನ್ನು ರಾಜಸ್ಥಾನದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತೊಬ್ಬ ಲೇಖಕರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆಯಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ. ಈಗಾಗಲೇ ಒಬ್ಬ ಪ್ರಾಂಶುಪಾಲರು ಸೇರಿದಂತೆ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪುಸ್ತಕದ ಪ್ರಕಟಣೆ, ಮುದ್ರಣ ಹಾಗೂ ಪ್ರಚಾರಕ್ಕೆ ಸಂಬಂಧಿಸಿದವರ ವಿರುದ್ಧ ಯುಎಪಿಎ (UAPA) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು
Shakthi Scheme ಬಳಿಕ BMTC ಸೇವೆ ಹೇಗಿದೆ? ಬಸ್ನಲ್ಲಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕ ಉತ್ತರ
ಬೆಂಗಳೂರು: Shakthi Scheme ಜಾರಿಯಾದ ಬಳಿಕ ಬಿಎಂಟಿಸಿ ಸೇವೆಗಳ ನೈಜ ಸ್ಥಿತಿ ತಿಳಿಯಲು ಸಾರಿಗೆ ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ಬಸ್ನಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದರು. ಜಯಮಹಲ್, ಆರ್.ಟಿ.ನಗರ, ಸಿಬಿಐ ರಸ್ತೆ, ಹೆಬ್ಬಾಳ ಹಾಗೂ ನಾಗವಾರ ಮಾರ್ಗಗಳಲ್ಲಿ ಪ್ರಯಾಣಿಸಿದ ಸಚಿವರು, ಸಾರ್ವಜನಿಕರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದರು.
ಈ ವೇಳೆ ಹೆಬ್ಬಾಳ ಮಾರ್ಗದ ಬಸ್ನಲ್ಲಿ ಸಚಿವರಿಗೆ ಅಚ್ಚರಿಯ ಅನುಭವ ಎದುರಾಯಿತು. ಟಿಕೆಟ್ ಪಡೆಯಲು ಅವರು ₹100 ಮುಖಬೆಲೆಯ ನೋಟು ನೀಡಿದಾಗ, ಅವರನ್ನು ಗುರುತಿಸದ ಕಂಡಕ್ಟರ್ ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬಸ್ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಸಚಿವರು ಯಾವುದೇ ವಾಗ್ವಾದ ನಡೆಸದೆ ಬಸ್ನಿಂದ ಇಳಿದು, ಬಳಿಕ ಚಿಲ್ಲರೆ ಹಣ ಹೊಂದಿಸಿಕೊಂಡು ಮತ್ತೊಂದು ಬಸ್ನಲ್ಲಿ ಪ್ರಯಾಣ ಮುಂದುವರಿಸಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪರಿಶೀಲನೆ ವೇಳೆ ಮತ್ತೊಂದು ಗಂಭೀರ ಲೋಪವೂ ಸಚಿವರ ಗಮನಕ್ಕೆ ಬಂತು. ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕೈ ತೋರಿಸಿದರೂ ಬಸ್ ನಿಲ್ಲಿಸದೇ ಚಾಲಕ ಮುಂದಕ್ಕೆ ಚಲಿಸಿದ್ದನ್ನು ಅವರು ಖುದ್ದಾಗಿ ವೀಕ್ಷಿಸಿದರು. ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸಂಬಂಧಿಸಿದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಚಿವರ ಆದೇಶದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸಾರಿಗೆ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ನಿರ್ಲಕ್ಷ್ಯ ತೋರಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬೈರತಿ ಸುರೇಶ್ ನೀಡಿದ್ದಾರೆ.
-
ಬೆಂಗಳೂರು15 hours agoಬೇಡ ಬ್ರೋ: ಡ್ರಗ್ಸ್ ವಿರುದ್ಧ MLA ಎಸ್.ಟಿ. ಸೋಮಶೇಖರ್ ಖಡಕ್ ಎಚ್ಚರಿಕೆ; ಯುವಕರಿಗೆ ಮಹತ್ವದ ಸಂದೇಶ
-
ಸುತ್ತ ಮುತ್ತ17 hours agoBorivali Railway Station Viral Video ಪ್ರೇಮಿಗಳ ಹಂಗಾಮಾ? 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿದ ವೈರಲ್ ವಿಡಿಯೋ
-
ದೇಶ14 hours agoಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ
-
ದೇಶ15 hours agoManmohan Singh ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರ ಪುಸ್ತಕದಲ್ಲಿ ಹೊಸ ಬಹಿರಂಗ; ರಾಜಕೀಯ ವಲಯದಲ್ಲಿ ಚರ್ಚೆ
-
ರಾಜ್ಯ17 hours agoS Janaki ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ನಾಮಕರಣ ಮಾಡಿ: ಕೇರ್ಟೇಕರ್ ನವೀನ್ ಮನವಿ
-
ದೇಶ14 hours agoಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ
-
ರಾಜ್ಯ21 hours agoಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿಗೆ ಅಂತಿಮ ನಮನ; ಅಭಿಮಾನಿಗಳ ಕಣ್ಣೀರಿನ ಸಾಗರ
-
ಕ್ರೀಡೆ15 hours agoSouth Africa ಫುಟ್ಬಾಲ್ಗೆ ಆಘಾತ; ಜೇಡನ್ ಆಡಮ್ಸ್ ಅಕಾಲಿಕ ನಿಧನ
