ದೇಶ
ಇಂದಿರಾಗಾಂಧಿ ಅವರ ಆ ಒಂದು ಮಾತು: ಎಸ್.ಎಂ.ಕೃಷ್ಣ ಕಾಂಗ್ರೆಸ್ ಸೇರಿದ್ದೇ ರೋಚಕ

ಬೆಂಗಳೂರು: ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಸೇರಿದ್ದು ಕೂಡ ರೋಚಕವಾಗಿದೆ. ಇಂದಿರಾ ಗಾಂಧಿ ಅವರೇ ಎಸ್.ಎಂ ಕೃಷ್ಣ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದರು.
ಅಂದು ದೆಹಲಿಯಲ್ಲಿ ಪ್ರಧಾನಿ ಇಂದಿರಾಗಾಂಧಿ ನೇತೃತ್ವದಲ್ಲಿ ಸಭೆಯೊಂದು ಏರ್ಪಾಡಾಗಿತ್ತು. ಸಭೆ ಆರಂಭವಾಯಿತು. ಆದರೆ ಸಭೆಯ ಕಾರ್ಯಸೂಚಿಯನ್ನು ಓದಬೇಕಿದ್ದ ಇಂದಿರಾಗಾಂಧಿ ಅವರಿಗೆ ಗಂಟಲು ಕೈ ಕೊಟ್ಟಿತ್ತು. ಹೀಗಾಗಿ ಕಾರ್ಯಸೂಚಿಯನ್ನು ಓದಲಾಗದ ಇಂದಿರಾಗಾಂಧಿ ಮೌನವಾಗಿ ಸಭೆಯ ಸುತ್ತ ಕಣ್ಣಾಡಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಗಣ್ಯ ಅತಿಥಿಗಳು ತಮ್ಮತ್ತಲೇ ನೋಡುತ್ತಿದ್ದರು.
ಸಭೆಯಲ್ಲಿ ಮುಂದೇನು ಮಾಡಬೇಕು ಅಂತ ಇಂದಿರಾಗಾಂಧಿ ಯೋಚಿಸುತ್ತಿದ್ದಂತೆಯೇ ಸಭೆಯ ಕೊನೆಯಲ್ಲಿ ನಿಂತಿದ್ದ ಯುವ ಸಂಸದರೊಬ್ಬರು ಅವರ ಕಣ್ಣಿಗೆ ಕಾಣಿಸಿದ್ದರು. ಆ ಯುವ ಸಂಸದರ ಕತೆಯಾದರೂ ಅಷ್ಟೇ. ಅವರಿಗೆ ಸಭೆಯಲ್ಲಿ ಕೂರಲು ಕುರ್ಚಿ ಸಿಕ್ಕಿರಲಿಲ್ಲ. ಹೀಗಾಗಿ ಕುರ್ಚಿ ಹುಡುಕುತ್ತಿದ್ದ ಅವರಿಗೆ ಒಂದು ಕುರ್ಚಿ ಕಾಣಿಸಿತ್ತು. ಆದರೆ ಖಾಲಿ ಇದ್ದ ಕುರ್ಚಿ ಸ್ವತ: ಪ್ರಧಾನಿ ಇಂದಿರಾಗಾಂಧಿ ಅವರ ಪಕ್ಕದಲ್ಲಿತ್ತು. ಹಾಗಂತಲೇ ಮುಂದೇನು ಮಾಡಬೇಕು ಎನ್ನುವಂತೆ ಅವರು ಇಂದಿರಾ ಗಾಂಧಿ ಕಡೆ ನೋಡಿದ್ದರು. ಆ ಕ್ಷಣದಲ್ಲಿ ಪ್ರಧಾನಿ ಇಂದಿರಾ ಮತ್ತು ಆ ಯುವ ಸಂಸದರ ಕಣ್ಣು ಪರಸ್ಪರ ಸಂಧಿಸಿದವು. ಹೀಗೆ ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಿದ್ದಂತೆಯೇ ಒಂದು ವಿಸ್ಮಯ ಸಂಭವಿಸಿತು.
ಅದು ಏನೆಂದರೆ ಇಂದಿರಾ ಗಾಂಧಿ ತಕ್ಷಣವೇ ಅ ಯುವ ಸಂಸದರನ್ನು ತಮ್ಮ ಬಳಿ ಬರುವಂತೆ ಸೂಚಿಸಿದ್ದರು. ಸ್ವತ: ಪ್ರಧಾನಿಯೇ ತಮ್ಮ ಬಳಿ ಬರುವಂತೆ ಸೂಚಿಸಿದಾಗ ಸಂಸದ ಬೆರಗಾಗಿದ್ದಾರಾದರೂ ಅದೇ ಅಮಯಕ್ಕೆ ಪುಳಕಿತರಾದರು. ಹೀಗಾಗಿ ಅದೇ ಭಾವದಲ್ಲಿ ಇಂದಿರಾ ಹತ್ತಿರ ಹೋದಾಗ ಅವರು ತಮ್ಮ ಪಕ್ಕದ ಕುರ್ಚಿಯಲ್ಲಿ ಕೂರುವಂತೆ ಸೂಚಿಸಿದ್ದರು. ಹೀಗೆ ತಮ್ಮ ಪಕ್ಕ ಕುಳಿತ ಸಂಸದರ ಮುಂದೆ, ತಮ್ಮ ಮುಂದಿದ್ದ ಕಾರ್ಯಸೂಚಿಯನ್ನು ತಳ್ಳಿದ ಇಂದಿರಾ ಅವರು ಸಭೆಯಲ್ಲಿ ಅದನ್ನು ಓದುವಂತೆ, ಸಭೆಯ ನಡಾವಳಿಗಳನ್ನು ನೋಡಿಕೊಳ್ಳಲು ಸೂಚಿಸಿದ್ದರು.
ದೇಶದ ಪ್ರಧಾನಿ ತಮಗೆ ನೀಡಿದ ಈ ಜವಾಬ್ದಾರಿಯನ್ನು ಆ ಸಂಸದರು ಎಷ್ಟು ಚೆನ್ನಾಗಿ ನಿರ್ವಹಿಸಿದ್ದರೆಂದರೆ ಅವರ ಅಸ್ಖಲಿತ ಭಾಷೆ ಇಂದಿರಾಗಾಂಧಿ ಸೇರಿದಂತೆ ಇಡೀ ಸಭೆಯನ್ನು ಮಂತ್ರಮುಗ್ಧಗೊಳಿಸಿತ್ತು. ಸಭೆ ಮುಗಿದ ನಂತರ ಆ ಯುವ ಸಂಸದರನ್ನು ಮೆಚ್ಚುಗೆಯ ಕಣ್ಣುಗಳಿಂದ ನೋಡಿದ ಇಂದಿರಾಗಾಂಧಿ ತಮ್ಮ ಕೈಯಲ್ಲಿದ್ದ ಒಂದು ಚೀಟಿಯನ್ನು ಕೊಟ್ಟಿದ್ದರು.
ನೋಡಿದರೆ ಅದರಲ್ಲಿ ‘ಕಮ್ ಅಂಡ್ ಮೀಟ್ ಮೀ’ ಅಂತ ಆಹ್ವಾನ ಇತ್ತು. ಹೀಗೆ ತಮ್ಮನ್ನು ಭೇಟಿ ಮಾಡಲು ಖುದ್ದು ಪ್ರಧಾನಿಯೇ ಆಹ್ವಾನ ನೀಡಿದ್ದಾರೆಂದರೆ ಸುಮ್ಮನಿರಲು ಸಾಧ್ಯವೇ?. ಹಾಗಾಗಿ, ಆ ಸಂಸದರು ನಿಗದಿತ ಸಮಯಕ್ಕೆ ಇಂದಿರಾ ಅವರ ಚೇಂಬರಿಗೆ ಹೋಗಿ ಭೇಟಿ ಮಾಡಿದ್ದರು. ಅಷ್ಟೊತ್ತಿಗಾಗಲೇ ಗಂಟಲು ಬೇನೆಯಿಂದ ಸ್ವಲ್ಪ ರಿಲೀಫ್ ಆಗಿದ್ದ ಇಂದಿರಾ ಯುವ ಸಂಸದರ ಪೂರ್ವಾಪರವನ್ನು ವಿಚಾರಿಸಿದ್ದರು.
ಆಗ ಆ ಸಂಸದರು, ಮೇಡಂ, ನನ್ನ ಹೆಸರು ಎಸ್.ಎಂ. ಕೃಷ್ಣ. ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಪ್ರತಿನಿಧಿಯಾಗಿ ಸಂಸತ್ತಿಗೆ ಅಯ್ಕೆಯಾಗಿದ್ದೇನೆ ಅಂತ ವಿವರಿಸಿದ್ದರು. ಆಗೆಲ್ಲ ತುಂಬ ವಿಶ್ವಾಸದಿಂದ ಮಾತನಾಡಿದ ಇಂದಿರಾಗಾಂಧಿ ಅವರು, ನೀವು ಪ್ರಜಾ ಸೋಷಲಿಸ್ಟ್ ಪಾರ್ಟಿಯವರು ಏಕೆ ಹೋರಾಡುತ್ತಿದ್ದೀರೋ? ಅದನ್ನು ಜಾರಿಗೊಳಿಸಲೆಂದೇ ನಮ್ಮ ಪಕ್ಷ, ಸರ್ಕಾರ ಹೋರಾಡುತ್ತಿದೆ. ಹೀಗಾಗಿ ನೀವೆಲ್ಲ ಪ್ರತ್ಯೇಕವಾಗಿರುವ ಬದಲು ಕಾಂಗ್ರೆಸ್ ಪಕ್ಷಕ್ಕೇ ಬನ್ನಿ ಅಂತ ಆಹ್ವಾನ ನೀಡಿದ್ದರು. ಹೀಗೆ ಪ್ರಧಾನಿ ನೀಡಿದ ಆಹ್ವಾನದ ಬಗ್ಗೆ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಸಭೆಯಲ್ಲಿ ವಿವರಿಸಿದ್ದಾರಾದರೂ ಸಭೆ ಅದನ್ನು ಒಪ್ಪಲಿಲ್ಲ. ಹೀಗಾಗಿ ತಮ್ಮ ಪಕ್ಷದ ನಿಲುವನ್ನು ಕೃಷ್ಣ ಅವರು ಇಂದಿರಾಗೆ ಹೇಳಿದ್ದರು. ಯಾರೂ ಬರದಿದ್ದರೇನು ನೀವಾದರೂ ಬನ್ನಿ. ನೀವು ಬೆಳೆಯುವ ದಾರಿ ದೊಡ್ಡದಿದೆ ಎಂದರಂತೆ.
ಇಂದಿರಾಗಾಂಧಿ ಅವರ ಈ ವಿಶ್ವಾಸಪೂರ್ವಕ ಆಹ್ವಾನವನ್ನು ತಿರಸ್ಕರಿಸಲು ಎಸ್.ಎಂ. ಕೃಷ್ಣ ಅವರಿಗೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಒಂದು ದಿನ ಅವರು ಕಾಂಗ್ರೆಸ್ ಹಡಗು ಹತ್ತಿದರು. ಇಂದಿರಾಗಾಂಧಿ ಹೇಳಿದಂತೆ ತಮ್ಮ ಬದುಕಿನಲ್ಲಿ ಬಹುದೊಡ್ಡ ಹಾದಿಯನ್ನು ಕೃಷ್ಣ ಅವರು ಕ್ರಮಿಸಿದರು. ರಾಜ್ಯದ ಚುಕ್ಕಾಣಿ ಹಿಡಿದು ಕರ್ನಾಟಕ ತಿರುಗಿ ನೋಡುವಂತೆ ಮಾಡಿದ ಹೆಗ್ಗಳಿಕೆ ಎಸ್.ಎಂ.ಕೃಷ್ಣ ಅವರದ್ದು.
ದೇಶ
ನವರಾತ್ರಿ ಸಮಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕ ದಾಳಿ ಎಚ್ಚರಿಕೆ – ಭದ್ರತೆ ಬಿಗಿ ಕ್ರಮ

ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ನವರಾತ್ರಿಯ ವೇಳೆ ಭಯೋತ್ಪಾದಕ ದಾಳಿಯ ಅಪಾಯವಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಯಲ್ಲಿದೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಆಗಸ್ಟ್ 4ರಂದು ಎಚ್ಚರಿಕೆ ಪ್ರಕಟಿಸಿ, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಭಯೋತ್ಪಾದನೆ ಅಥವಾ ಸಮಾಜ ವಿರೋಧಿ ಶಕ್ತಿಗಳಿಂದ ದಾಳಿ ಸಂಭವಿಸಬಹುದೆಂದು ಸೂಚಿಸಿದೆ.
🕵️ ಗುಪ್ತಚರ ಮೂಲದ ಮಹತ್ವದ ಎಚ್ಚರಿಕೆ:
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಏರ್ಸ್ಟ್ರಿಪ್ಗಳು, ಹೆಲಿಪ್ಯಾಡ್ಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳಾಗಿ ಈ ಕೆಳಗಿನ ಕ್ರಮಗಳು ಜಾರಿಗೆ ಬಂದಿವೆ:
- ಸಿಬ್ಬಂದಿ ಮತ್ತು ಸಂದರ್ಶಕರ ಗುರುತಿನ ಪರಿಶೀಲನೆ
- ಸಿಸಿಟಿವಿ ಕಣ್ಗಾವಲು ಬಿಗಿತ
- ಸರಕು, ಪಾರ್ಸೆಲ್ ಮತ್ತು ಮೇಲ್ಗಳ ತಪಾಸಣೆ
- ಸ್ಥಳೀಯ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಹಕಾರ
🇮🇳 ರಾಷ್ಟ್ರೀಯ ಭದ್ರತೆಗೆ ಒತ್ತು:
ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳು ಈ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗಳನ್ನು ಸಿದ್ಧವಾಗಿಡಬೇಕು. ತಪಾಸಣೆ ವಿಳಂಬದ ಸಾಧ್ಯತೆಯಿರುವುದರಿಂದ ಸಹಕಾರ ನೀಡುವಂತೆ BCAS ಮನವಿ ಮಾಡಿದೆ.
ದೇಶ
ಅಮೆರಿಕ-ರಷ್ಯಾ ವ್ಯವಹಾರ: ಭಾರತದ ಟೀಕೆಗೆ ಟ್ರಂಪ್ ನುಣುಚು ಪ್ರತಿಕ್ರಿಯೆ

ವಾಷಿಂಗ್ಟನ್: ರಷ್ಯಾದಿಂದ ಈಗಲೂ ವ್ಯವಹಾರ ನಡೆಸುತ್ತಿರುವ ಅಮೆರಿಕದ ಕುರಿತಾಗಿ ಭಾರತ ಮಾಡಿರುವ ಗಂಭೀರ ಆರೋಪಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಆರೋಪಿಸಿದಂತೆ, ಅಮೆರಿಕ 2024ರಲ್ಲಿ 1.1 ಶತಕೋಟಿ ಡಾಲರ್ ಮೌಲ್ಯದ ರಸಗೊಬ್ಬರ, 878 ಮಿಲಿಯನ್ ಡಾಲರ್ ಮೌಲ್ಯದ ಪಲ್ಲಾಡಿಯಮ್ ಸೇರಿದಂತೆ ಹಲವು ಅಮೂಲ್ಯ ಲೋಹಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಯುರೇನಿಯಂ ಹೆಕ್ಸಾಫ್ಲೋರೈಡ್ನಂತಹ ಪರಮಾಣು ಉತ್ಪನ್ನಗಳ ಆಮದು ಕೂಡ ಮುಂದುವರಿದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಟ್ರಂಪ್, “ನನಗೆ ಈ ವ್ಯಾಪಾರದ ವಿವರಗಳು ತಿಳಿದಿಲ್ಲ, ನಾನು ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಭಾರತದ ಖಡಕ್ ಪ್ರತಿಕ್ರಿಯೆ:
ಭಾರತ, ತನ್ನ ರಷ್ಯಾ ತೈಲ ಆಮದು ಬಗ್ಗೆ ಅಮೆರಿಕದ ಟೀಕೆಗೆ ಅಂಕಿ-ಅಂಶಗಳೊಂದಿಗೆ ತಿರುಗೇಟು ನೀಡಿದೆ. ಯುರೋಪ್ ದೇಶಗಳೇ ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ಎಲ್ಎನ್ಜಿ, ರಸಗೊಬ್ಬರ, ಲೋಹಗಳನ್ನು ಆಮದು ಮಾಡಿಕೊಳ್ಳುತ್ತಿವೆ. 2024ರಲ್ಲಿ ಯುರೋಪಿಯನ್ ಒಕ್ಕೂಟವು 67.5 ಬಿಲಿಯನ್ ಯುರೋಗಳಷ್ಟು ಸರಕು ವ್ಯಾಪಾರ ಹಾಗೂ 17.2 ಬಿಲಿಯನ್ ಯುರೋಗಳಷ್ಟು ಸೇವಾ ವ್ಯಾಪಾರವನ್ನು ರಷ್ಯಾ ಜೊತೆ ನಡೆಸಿದೆ.
ಟ್ರಂಪ್ ಅವರ ಆರೋಪ:
ಟ್ರಂಪ್ ಹೇಳುವಂತೆ, ಭಾರತ ರಷ್ಯಾದ ತೈಲವನ್ನು ಖರೀದಿ ಮಾಡುತ್ತಿದ್ದು, ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ಅವರು ಈ ಕಾರಣಕ್ಕಾಗಿ ಭಾರತದಿಂದ ಸಂಗ್ರಹಿಸಬೇಕಾದ ಸುಂಕವನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.
ಭಾರತದ ನಿಲುವು:
ಭಾರತ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇಂಧನದ ದರಗಳನ್ನು ಜನತೆಗೆ ಕೈಗೆಟುಕುವಂತೆ ಇರಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕ್ರೀಡೆ
ರಿಷಭ್ ಪಂತ್ ಮಾನವೀಯತೆ: ಬಡ ವಿದ್ಯಾರ್ಥಿನಿಗೆ BCA ಪ್ರವೇಶಕ್ಕೆ ₹40,000 ನೆರವು!

ಬಾಗಲಕೋಟೆ: ಟೀಂ ಇಂಡಿಯಾದ ವಿಕೆಟ್ ಕೀಪರ್ ಹಾಗೂ ತೀಕ್ಷ್ಣ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು ಕ್ರೀಡಾಕ್ಷೇತ್ರದಷ್ಟೇ ದಾನಶೀಲತೆಯಲ್ಲೂ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಆರ್ಥಿಕ ನೆರವು ನೀಡಿ ಜನಮನ ಗೆದ್ದಿದ್ದಾರೆ.
ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ ದ್ವಿತೀಯ ಪಿಯುಸಿಯಲ್ಲಿ 85% ಅಂಕ ಗಳಿಸಿದ್ದರೂ, ಮನೆ ಪರಿಸ್ಥಿತಿಯಿಂದ BCA ಕೋರ್ಸ್ಗೆ ಸೇರುವ ಕನಸು ತೊಡೆತಗೊಂಡಿತ್ತು. ತಂದೆ ಚಿಕ್ಕ ಟೀ ಅಂಗಡಿ ನಡೆಸುವವರಾಗಿದ್ದು ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ.
ಇದನ್ನು ಗುತ್ತಿಗೆದಾರ ಅನಿಲ್ ಹುಣಸಿಕಟ್ಟಿ ಅವರು ಗಮನಿಸಿ, ತಮ್ಮ ಸಂಪರ್ಕಗಳಿಂದ ರಿಷಭ್ ಪಂತ್ ಅವರ ಗಮನಕ್ಕೆ ತಂದರು. ಇದನ್ನು ಕೇಳಿದ ಪಂತ್, ಜುಲೈ 17ರಂದು ₹40,000 ನೇರವಾಗಿ BLDE ಕಾಲೇಜಿನ ಖಾತೆಗೆ ವರ್ಗಾಯಿಸಿ, ಜ್ಯೋತಿಯ ಮೊದಲ ಸೆಮಿಸ್ಟರ್ ಶುಲ್ಕವನ್ನು ಭರಿಸಿದರು.
ಜ್ಯೋತಿ ಎಮೋಶನಲ್ ಆಗಿ, “ರಿಷಭ್ ಪಂತ್ ಸಹಾಯದಿಂದ ನನ್ನ ಕನಸು ಸಾಧ್ಯವಾಯಿತು. ಅವರಿಗೆ ದೇವರು ಆಯುಷ್ಯ ಕೊಡಲಿ,” ಎಂದಿದ್ದಾರೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ