Connect with us

ಕ್ರೀಡೆ

ಸಿಟ್ಟಿನಿಂದ ರಹಾನೆ ಕಿಟ್‌ಬ್ಯಾಗ್‌ ಒದ್ದಿದ್ದ ಜೈಸ್ವಾಲ್‌ – ಮುಂಬೈ ತಂಡ ತೊರೆಯಲು ಅಸಲಿ ಕಾರಣ ರಿವೀಲ್‌

Published

on

ಮುಂಬೈ: ಕೆಲ ವರ್ಷಗಳಿಂದ ಮುಂಬೈ (Mumbai) ತಂಡದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಜೊತೆಗಿನ ಸಂಬಂಧ ಹಳಸಿದ್ದರಿಂದ 23 ವರ್ಷದ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಗೋವಾ (Goa) ತಂಡಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ.

2025 ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡ ಜಮ್ಮು ಮತ್ತು ಕಾಶ್ಮೀರ (Jammu Kashmir) ವಿರುದ್ಧ ಸೋತಿತ್ತು. ಸೋತ ನಂತರ ತಂಡ ಸಭೆಯಲ್ಲಿ ರಹಾನೆ ಮತ್ತು ಕೋಚ್ ಓಂಕಾರ್ ಸಾಲ್ವಿ ಅವರು ಜೈಸ್ವಾಲ್‌ ಅವರನ್ನು ಟಾರ್ಗೆಟ್‌ ಮಾಡಿದ್ದರು. ಇದರಿಂದ ಸಿಟ್ಟಾದ ಜೈಸ್ವಾಲ್‌ ರಹಾನೆ ಕಿಟ್‌ ಬ್ಯಾಗ್‌ ಅನ್ನು ಒದ್ದಿದ್ದರು.

ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ 4 ಮತ್ತು 26 ರನ್ ಹೊಡೆದಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 120 ರನ್‌ಗಳಿಗೆ ಆಲೌಟ್‌ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 290 ರನ್‌ಗಳಿಗೆ ಆಲೌಟ್‌ ಆಗಿ 5 ವಿಕೆಟ್‌ಗಳ ಸೋಲನ್ನು ಅನುಭವಿಸಿತ್ತು.

ರಹಾನೆ ಮತ್ತು ತಂಡದ ಕೋಚ್‌ ಓಂಕಾರ್‌ ಸಾಲ್ವಿ ಪಂದ್ಯದ ನಂತರ ಜೈಸ್ವಾಲ್ ಅವರ ಆಟದ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಆದರೆ ತಂಡದ ಸೋಲಿಗೆ ತನ್ನನ್ನು ಒಬ್ಬನನ್ನೇ ಹೊಣೆ ಮಾಡಿದ್ದಕ್ಕೆ ಜೈಸ್ವಾಲ್‌ ಸಿಟ್ಟಾಗಿದ್ದರು.

ರಹಾನೆ ಮತ್ತು ಜೈಸ್ವಾಲ್‌ ನಡುವಿನ ಸಂಬಂಧ ಹಾಳಾಗಲು ಜಮ್ಮು ಕಾಶ್ಮೀರ ವಿರುದ್ಧ ಸೋಲು ಒಂದೇ ಕಾರಣವಲ್ಲ. 2022 ರಲ್ಲಿ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಎದುರಾಳಿ ತಂಡದ ರವಿತೇಜ ಅವರ ಮೇಲೆ ಸ್ಲೆಡ್ಜಿಂಗ್ ಮಾಡಿದ್ದಕ್ಕಾಗಿ ಜೈಸ್ವಾಲ್ ಅವರನ್ನು ಮೈದಾನದಿಂದ ರಹಾನೆ ಹೊರಹೋಗುವಂತೆ ಸೂಚಿಸಿದ್ದರು. ಈ ಘಟನೆಯ ಬಳಿಕ ಜೈಸ್ವಾಲ್‌ ಮತ್ತು ರಹಾನೆ ನಡುವಿನ ಸಂಬಂಧ ಹಳಸಲು ಆರಂಭವಾಯಿತು.

ಸ್ಲೆಡ್ಜಿಂಗ್‌ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಜೈಸ್ವಾಲ್‌, ಯಾರಿಗೂ ಸ್ಲೆಡ್ಜ್‌ ಬಗ್ಗೆ ನಿಜವಾಗಿಯೂ ತಿಳಿಯುವುದಿಲ್ಲ.ಯಾರಾದರೂ ನನ್ನ ತಾಯಿ ಅಥವಾ ನನ್ನ ಸಹೋದರಿಯ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಸಹಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಜೈಸ್ವಾಲ್ ಮಂಗಳವಾರ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ ಬಿಟ್ಟು ಗೋವಾಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಆಡಳಿತ ಮಂಡಳಿ ಅವರ ವಿನಂತಿಯನ್ನು ಸ್ವೀಕರಿಸಿತ್ತು. ಹೀಗಾಗಿ ಜೈಸ್ವಾಲ್ 2025-26ರ ಋತುವಿನಿಂದ ಗೋವಾ ಪರ ಆಡಲಿದ್ದಾರೆ.

ಭಾರತದ ಎಲ್ಲ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ತಂಡದಲ್ಲಿಲ್ಲದಿದ್ದಾಗ ದೇಶೀಯ ಕ್ರಿಕೆಟ್ ಆಡಬೇಕು ಎಂಬ ಬಿಸಿಸಿಐ ಕಟ್ಟುನಿಟ್ಟಿನ ನಿರ್ದೇಶನ ಜಾರಿ ಮಾಡಿದೆ. ನಿರ್ದೇಶನದ ಅನ್ವಯ ಜೈಸ್ವಾಲ್ ಕೊನೆಯದಾಗಿ ಜನವರಿ 23-25ರ ಅವಧಿಯಲ್ಲಿ ನಡೆದ ರಣಜಿ ಟ್ರೋಫಿ ಗ್ರೂಪ್ ಎ ಲೀಗ್ ಸುತ್ತಿನ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆಡಿದ್ದರು.

ಜೈಸ್ವಾಲ್‌ ಅವರು ಮುಂಬೈನಿಂದ ಗೋವಾಕ್ಕೆ ನಿಷ್ಠೆ ಬದಲಿಸಿದ ಮೂರನೇ ಕ್ರಿಕೆಟರ್‌ ಆಗಿದ್ದಾರೆ. ಈ ಹಿಂದೆ ಸಚಿನ್‌ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಿದ್ದೇಶ್‌ ಲಾಡ್‌ ಅವರು 2022–23 ರಿಂದ ಗೋವಾ ಪರ ಆಡಿದ್ದರು. ಇವರಲ್ಲಿ ಲಾಡ್ ಅವರು ಎಂಸಿಎ ನಿಯಮದಂತೆ ‘ಕೂಲಿಂಗ್ ಆಫ್‌’ ಅವಧಿ ಪೂರೈಸಿ ಮತ್ತೆ ಮುಂಬೈ ತಂಡಕ್ಕೆ ಮರಳಿದ್ದಾರೆ.

ಕ್ರೀಡೆ

ಗ್ಯಾಸ್‌ಗಾಗಿ ಜನ ಸಾಲು, ಟಿಕೆಟ್‌ಗಾಗಿ ಪಿಎ ಸಾಲು: ಶಾಸಕರಿಗೆ ಟೀಕೆ!

Published

on

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ, ಜನಪ್ರತಿನಿಧಿಗಳ ವರ್ತನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಆಟೋ ಚಾಲಕರು ಗ್ಯಾಸ್‌ಗಾಗಿ ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವಾಗ, ಇನ್ನೊಂದು ಕಡೆ ಶಾಸಕರು IPL 2026 ಟಿಕೆಟ್ ಪಡೆಯಲು ತಮ್ಮ ಪಿಎಗಳನ್ನು ಕ್ಯೂನಲ್ಲಿ ನಿಲ್ಲಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾಹಿತಿಯ ಪ್ರಕಾರ, ಸರ್ಕಾರ ಮತ್ತು Karnataka State Cricket Association (KSCA) ನಡುವೆ ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಒಪ್ಪಂದವಾಗಿದೆ. ಇದರ ಹಿನ್ನೆಲೆಯಲ್ಲಿ, Royal Challengers Bengaluru ಮತ್ತು Chennai Super Kings ನಡುವಿನ ಪಂದ್ಯಕ್ಕೆ ಟಿಕೆಟ್ ಪಡೆಯಲು ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಗಮನ ಸೆಳೆದಿವೆ.

ಸ್ಪೀಕರ್ ಕಚೇರಿಯಲ್ಲೇ ಟಿಕೆಟ್ ವಿತರಣೆ ನಡೆಯುತ್ತಿರುವುದರಿಂದ, ಶಾಸಕರ ಸೂಚನೆ ಮೇರೆಗೆ ಪಿಎಗಳು ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.

ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆ, ದೈನಂದಿನ ಸಮಸ್ಯೆಗಳ ನಡುವೆ ಈ ರೀತಿಯ ಘಟನೆಗಳು ಸಾರ್ವಜನಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ.

ರಾಜಕೀಯ ವಲಯದಲ್ಲಿಯೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Continue Reading

ಅಪರಾಧ

ಐಪಿಎಲ್ ಟಿಕೆಟ್ ಕ್ರೇಜ್ ನಡುವೆ ದೊಡ್ಡ ಮೋಸ: ಟೆಕ್ಕಿಗೆ ₹1.46 ಲಕ್ಷ ನಷ್ಟ!

Published

on

ಬೆಂಗಳೂರು, ಏಪ್ರಿಲ್ 04: ನಗರದಲ್ಲಿ IPL 2026 ಟಿಕೆಟ್ ಕ್ರೇಜ್ ಜೋರಾಗಿರುವ ನಡುವೆ ಆನ್‌ಲೈನ್ ಮೋಸದ ಪ್ರಕರಣವೂ ಬೆಳಕಿಗೆ ಬಂದಿದೆ. ಅನಧಿಕೃತ ಪ್ಲಾಟ್‌ಫಾರ್ಮ್ ಮೂಲಕ ಟಿಕೆಟ್ ಖರೀದಿಸಲು ಯತ್ನಿಸಿದ ಟೆಕ್ಕಿ ಒಬ್ಬರು ₹1.46 ಲಕ್ಷ ಕಳೆದುಕೊಂಡಿರುವ ಘಟನೆ ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

Bengaluruನ ಬಿ. ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ, Instagramನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮೋಸಕ್ಕೆ ಒಳಗಾಗಿದ್ದಾರೆ. ಆತ ತನ್ನನ್ನು M. Chinnaswamy Stadium ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡು ನಂಬಿಕೆ ಮೂಡಿಸಿದ್ದಾನೆ.

ಮೊದಲಿಗೆ ಎರಡು ಟಿಕೆಟ್‌ಗಳಿಗೆ ₹3,700 ಕೇಳಿದ ಆರೋಪಿಯು, ಬಳಿಕ ಭದ್ರತಾ ಠೇವಣಿ, ಐಡಿ ಕಾರ್ಡ್ ಮತ್ತು ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾನೆ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದಾನೆ.

ಆತನ ಮಾತು ನಂಬಿದ ಟೆಕ್ಕಿ, ತನ್ನ ಹಾಗೂ ತಾಯಿಯ ಖಾತೆಯಿಂದ ಯುಪಿಐ ಮೂಲಕ ಒಟ್ಟು ₹1.46 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ಬಳಿಕ ಆರೋಪಿಯು ಟಿಕೆಟ್ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾನೆ.

ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಐಪಿಎಲ್ ಟಿಕೆಟ್ ಖರೀದಿಸುವಾಗ ಅಧಿಕೃತ ವೆಬ್‌ಸೈಟ್ ಅಥವಾ ಮಾನ್ಯ ಮಾರಾಟಗಾರರ ಮೂಲಕವೇ ಖರೀದಿಸಲು ಸಲಹೆ ನೀಡಿದ್ದಾರೆ. ಅನಧಿಕೃತ ಲಿಂಕ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯವಹಾರ ಮಾಡುವುದರಿಂದ ಇಂತಹ ಮೋಸಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

Continue Reading

ಕ್ರೀಡೆ

“ಆ ಮಾತುಗಳು ನನ್ನದಲ್ಲ”: ಯುವಿ ಸ್ಪಷ್ಟನೆ, ಧೋನಿ-ಕಪಿಲ್‌ಗೆ ಕ್ಷಮೆ

Published

on

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ Yuvraj Singh ಅವರು ವಿಶ್ವಕಪ್ ವಿಜೇತ ನಾಯಕರುಗಳಾದ Mahendra Singh Dhoni ಮತ್ತು Kapil Dev ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಯುವರಾಜ್, ತಮ್ಮ ತಂದೆ Yograj Singh ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕ್ಷಮೆಯಾಚನೆ ಮಾಡಿದ್ದಾರೆ. “ನನ್ನ ತಂದೆಯ ಮಾತುಗಳಿಗಾಗಿ ನಾನು ಹೃತ್ಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಆ ಮಾತುಗಳು ನನ್ನವು ಅಲ್ಲ ಎಂಬುದು ನಿಮಗೆ ತಿಳಿದಿದೆ. ನೀವು ಇಬ್ಬರೂ ಭಾರತಕ್ಕೆ ನೀಡಿದ ಕೊಡುಗೆ ಅಪಾರ” ಎಂದು ಯುವರಾಜ್ ಹೇಳಿದ್ದಾರೆ.

ಈ ಹಿಂದೆ ಯೋಗರಾಜ್ ಸಿಂಗ್ ಹಲವಾರು ಬಾರಿ ಧೋನಿ ಮತ್ತು ಕಪಿಲ್ ದೇವ್ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ವಿಶೇಷವಾಗಿ, ಯುವರಾಜ್ ಅವರ ವೃತ್ತಿಜೀವನದ ಸಂಕಷ್ಟದ ಸಂದರ್ಭದಲ್ಲಿ ಕೆಲವು ಆಟಗಾರರು ಬೆಂಬಲ ನೀಡಲಿಲ್ಲ ಎಂದು ಆರೋಪಿಸಿದ್ದರು. 2011ರ ವಿಶ್ವಕಪ್ ವೇಳೆ ತಂಡದ ಆಯ್ಕೆ ವಿಚಾರದಲ್ಲಿ ಧೋನಿ ವಿರುದ್ಧವೂ ಯೋಗರಾಜ್ ಟೀಕಿಸಿದ್ದರು.

ಇದೇ ವೇಳೆ, 1983ರ ವಿಶ್ವಕಪ್ ಸಮಯದಲ್ಲಿ ಕಪಿಲ್ ದೇವ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದರಿಂದ ಈ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈ ಎಲ್ಲಾ ಹೇಳಿಕೆಗಳಿಂದ ಕ್ರಿಕೆಟ್ ವಲಯದಲ್ಲಿ ವಿವಾದ ಉಂಟಾಗಿತ್ತು.

ಈಗ ಯುವರಾಜ್ ಸಿಂಗ್ ಸ್ವತಃ ಮುಂದಾಗಿ ಕ್ಷಮೆ ಕೇಳಿರುವುದು ವಿವಾದಕ್ಕೆ ತೆರೆ ಬೀಳುವ ಸೂಚನೆ ನೀಡಿದೆ. ಕ್ರೀಡಾ ವಲಯದಲ್ಲಿ ಪರಸ್ಪರ ಗೌರವ ಮುಖ್ಯ ಎಂಬ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

Continue Reading

Trending