Connect with us

ದೇಶ

ಅಜಿತ್ ಪವಾರ್ Vs ಐಪಿಎಸ್ ಅಧಿಕಾರಿ: ಅಕ್ರಮ ಮಣ್ಣು ಕೇಸ್‌ನಲ್ಲಿ ಬಿಸಿ ಬಿಸಿ ವಾಗ್ವಾದ, ವಿಡಿಯೋ ವೈರಲ್

Published

on

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ನಡುವೆ ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣದ ಕುರಿತು ನಡೆದ ಟೈಟ್ ವಾಗ್ವಾದ, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.

ಸೋಲಾಪುರ ಜಿಲ್ಲೆಯ ಕುರ್ಡು ಗ್ರಾಮದಲ್ಲಿ ಆಗಸ್ಟ್ 31ರಂದು ಈ ಘಟನೆ ನಡೆದಿದೆ. ಅಕ್ರಮ ಮಣ್ಣು ತೆಗೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗೀಯ ಪೊಲೀಸ್ ಅಧಿಕಾರಿ (DSP) ಅಂಜನಾ ಕೃಷ್ಣ ಅವರೊಂದಿಗೆ ಅಜಿತ್ ಪವಾರ್ ಫೋನ್ ಮೂಲಕ ಮಾತನಾಡಿದ್ದು, ಆ ಸಂಭಾಷಣೆಯ ವೀಡಿಯೋ ಕ್ಲಿಪ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಜಿತ್ ಪವಾರ್ ಆದೇಶ: “ತಕ್ಷಣ ಕಾರ್ಯಾಚರಣೆ ನಿಲ್ಲಿಸಿ”

ಅಜಿತ್ ಪವಾರ್, ಅವರ ಧ್ವನಿಯಲ್ಲಿ, “ನಾನು ಉಪಮುಖ್ಯಮಂತ್ರಿ, ತಕ್ಷಣ ಕಾರ್ಯಾಚರಣೆ ನಿಲ್ಲಿಸಿ ಅಲ್ಲಿಂದ ತೆರಳಿರಿ” ಎಂದು ಸೂಚನೆ ನೀಡಿದ್ದಾರೆ. ಆದರೆ ಅಂಜನಾ ಕೃಷ್ಣ, ಅಜಿತ್ ಪವಾರ್ ಧ್ವನಿಯನ್ನು ಗುರುತಿಸದೇ, “ನೀವು ನನಗೆ ಕರೆ ಮಾಡಬೇಡಿ, ನನ್ನ ಮೊಬೈಲ್‌ಗೆ ಕರೆ ಮಾಡಿ” ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ಆಕ್ರೋಶದಿಂದ ಪವಾರ್, “ನೀವು ನನ್ನನ್ನು ಗುರುತಿಸುತ್ತಿಲ್ಲವಲ್ಲ, ನಿನಗೆ ಎಷ್ಟು ಧೈರ್ಯ? ನಿನ್ನ ನಂಬರ್ ಕೊಡು, ವಿಡಿಯೋ ಕಾಲ್ ಮಾಡ್ತೀನಿ” ಎಂಬಂತೆಯೂ ಹೇಳಿದ್ದಾರೆ. ಜೊತೆಗೆ, “ನಿನ್ನ ಮೇಲಿನ ಅಧಿಕಾರಿಗಳಿಗೆ ಹೇಳಿ ಕ್ರಮ ತೆಗೆದುಕೊಳ್ಳಬೇಕಾ?” ಎಂಬ ತೀವ್ರ ಪ್ರಶ್ನೆಯನ್ನೂ ಎಸೆದಿದ್ದಾರೆ.

ವೈರಲ್ ವೀಡಿಯೋ, ಹೊಸ ಚರ್ಚೆಗೆ ದಾರಿ

ಈ ವಿಡಿಯೋ ಕೇವಲ ಎರಡು ನಿಮಿಷದದ್ದಾಗಿದ್ದರೂ, ಇದರಿಂದ ಉಂಟಾದ ರಾಜಕೀಯ ದಿಗ್ಗಜ ಮತ್ತು ಕಾನೂನು ಅಧಿಕಾರಿಯ ನಡುವಿನ ಘರ್ಷಣೆ ಇಂದು ಮಾಧ್ಯಮಗಳಲ್ಲಿ ಹೊಸ ಚರ್ಚೆಗೆ ದಾರಿ ಮಾಡಿದೆ. ಇದರಲ್ಲಿ ಪವಾರ್ ಅವರು ವಿಡಿಯೋ ಕಾಲ್ ಮೂಲಕ DSPಅನ್ನು ಸ್ಥಳದಿಂದ ಹೊರಡುವಂತೆ ಒತ್ತಾಯಿಸುತ್ತಿರುವ ದೃಶ್ಯವಿದೆ.

ಇದೇ ವೇಳೆ, ಸಾರ್ವಜನಿಕರು ಮತ್ತು ರಾಜಕೀಯ ವಲಯದಲ್ಲಿ ಈ ಘಟನೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಅಜಿತ್ ಪವಾರ್ ಅವರ ಹಸ್ತಕ್ಷೇಪ ನ್ಯಾಯಸಮ್ಮತವೇ?, ಅಧಿಕಾರಿಗಳ ಸ್ವತಂತ್ರತೆಗೆ ಧಕ್ಕೆ ಆಗಿತ್ತೆ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಕ್ರೀಡೆ

ಐಪಿಎಲ್ ಟಿಕೆಟ್ ದುರ್ಬಳಕೆ: ಶಾಸಕರ ಪಾಸ್ ಸ್ನೇಹಿತರ ಕೈಗೆ!

Published

on

By

ಬೆಂಗಳೂರುದಲ್ಲಿ ಐಪಿಎಲ್ ಕ್ರೇಜ್ ಗರಿಷ್ಠ ಮಟ್ಟಕ್ಕೆ ಏರಿರುವ ನಡುವೆಯೇ, ಶಾಸಕರಿಗೆ ನೀಡಲಾದ ಉಚಿತ ಟಿಕೆಟ್ ಪಾಸ್‌ಗಳ ದುರ್ಬಳಕೆಯ ಆರೋಪ ದೊಡ್ಡ ವಿವಾದಕ್ಕೆ ಕಾರಣವಾಗಿದೆ. Indian Premier League ಪಂದ್ಯಗಳಿಗೆ ಸಂಬಂಧಿಸಿದ ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೆಲವು ಶಾಸಕರು ತಮ್ಮ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ Karnataka State Cricket Association ವಿಶೇಷ ಅಕ್ರೆಡೆಷನ್ ಕಾರ್ಡ್ ಮಾದರಿಯ ಪಾಸ್‌ಗಳನ್ನು ವಿತರಿಸಿತ್ತು.

ಆದರೆ, ಈ ಪಾಸ್‌ಗಳು ಈಗ ಶಾಸಕರ ಕುಟುಂಬದವರಿಗಷ್ಟೇ ಸೀಮಿತವಾಗದೆ, ಅವರ ಮಕ್ಕಳ ಸ್ನೇಹಿತರ ಕೈಗೆ ಸೇರಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ, ಶಾಸಕರ ಕುಟುಂಬದ ಹೆಸರಿನ ಪಾಸ್ ಹಿಡಿದು ಬಂದಿದ್ದ ಕೆಲ ಯುವಕರ ಮೇಲೆ ಅನುಮಾನ ಮೂಡಿದೆ.

ಪರಿಶೀಲನೆ ವೇಳೆ ಯುವಕರು ತಡಬಡಾಯಿಸಿದ್ದು, ಕೊನೆಯಲ್ಲಿ ತಾವು ಶಾಸಕರ ಮಗನ ಸ್ನೇಹಿತರು ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಅವರನ್ನು ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಈ ಘಟನೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಜನಪ್ರತಿನಿಧಿಗಳಿಗಾಗಿ ನೀಡಲಾದ ಸೌಲಭ್ಯವನ್ನು ಅನರ್ಹರು ಬಳಸುವುದು ಸರಿಯೇ? ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಸಾಮಾನ್ಯ ಜನರು ಟಿಕೆಟ್‌ಗಾಗಿ ಪರದಾಡುತ್ತಿರುವಾಗ, ಉಚಿತ ಪಾಸ್‌ಗಳು ದುರ್ಬಳಕೆಯಾಗುತ್ತಿರುವುದು ಜನರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ KSCA ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.

Continue Reading

ದೇಶ

ಎನ್‌ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್

Published

on

By

ಮುಂಬೈನಲ್ಲಿ ನಡೆದ NMACC third anniversary ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ತಮ್ಮ ವೈಭವಶಾಲಿ ಸೀರೆ ಲುಕ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕತೆಗೆ ಪ್ರತೀಕವಾಗಿರುವ ಅವರ ಶೈಲಿ ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಶೇಷ ಕಾರ್ಯಕ್ರಮಕ್ಕೆ ಪತಿ ಮುಕೇಶ್ ಅಂಬಾನಿ ಅವರೊಂದಿಗೆ ಆಗಮಿಸಿದ ನೀತಾ, ಐವರಿ-ಗೋಲ್ಡ್ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದರು. ಹೊನ್ನಿನ ನೂಲುಗಳಿಂದ ನೇಯ್ದ ಈ ಸೀರೆಗೆ ಮರೂನ್ ಕೆಂಪು ಅಂಚು ಹೆಚ್ಚುವರಿ ಶೋಭೆ ನೀಡಿತು.

ಈ ಸೀರೆ ಕೈಮಗ್ಗದಲ್ಲಿ ಪರಿಣಿತ ಕಲಾವಿದ ಆರ್. ವರಧನ್ ಅವರ ಕೈಚಳಕದಿಂದ ಮೂಡಿಬಂದಿದ್ದು, ಇದನ್ನು ತಯಾರಿಸಲು ಸುಮಾರು ನಾಲ್ಕು ತಿಂಗಳು ಸಮಯ ತೆಗೆದುಕೊಂಡಿದೆ. ಜರಿ ಕಸೂತಿ ಮತ್ತು ನಯವಾದ ಮೇಲ್ಮೈ ಈ ಸೀರೆಗೆ ವಿಶೇಷ ಮೌಲ್ಯ ನೀಡಿದೆ.

ಆಭರಣಗಳ ವಿಷಯದಲ್ಲಿ ನೀತಾ ಅಂಬಾನಿ ಬರ್ಮಾ ರೂಬಿ ಅಲಂಕೃತ ಚಿನ್ನದ ಮಾವಿನ ಸರ ಹಾಗೂ ಬಸ್ರಾ ಮುತ್ತಿನ ಕರ್ಣಾಭರಣ ಧರಿಸಿ ಸಾಂಪ್ರದಾಯಿಕತೆಗೆ ಆಧುನಿಕ ಸ್ಪರ್ಶ ನೀಡಿದ್ದಾರೆ.

ಕಾರ್ಯಕ್ರಮದ ವೇಳೆ ಅವರು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಒತ್ತಿ ಹೇಳಿ, “ಸಂಖ್ಯೆ 3”ರ ಸಾಂಸ್ಕೃತಿಕ ಅರ್ಥವನ್ನು ತ್ರಿಮೂರ್ತಿ, ತ್ರಿದೇವಿ ಮತ್ತು ತ್ರಿವೇಣಿ ಸಂಗಮದ ಉದಾಹರಣೆಗಳ ಮೂಲಕ ವಿವರಿಸಿದರು.

ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಭಾರತೀಯ ಹಸ್ತಕುಶಲತೆ ಮತ್ತು ಕಾಂಜೀವರಂ ಸೀರೆಗಳಿಗೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

ದೇಶ

ಟ್ರಂಪ್ ದೇಶದಲ್ಲಿ ಭಾರತೀಯರ ಸದ್ದು: ಮೇಯರ್ ರೇಸ್‌ನಲ್ಲಿ ತಮಿಳುನಾಡಿನ ಕುವರಿ

Published

on

By

ಅಮೆರಿಕ ರಾಜಕೀಯದಲ್ಲಿ ಭಾರತೀಯರ ಪ್ರಭಾವ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆ, ಈಗ ಮತ್ತೊಬ್ಬ ಭಾರತೀಯ ಮೂಲದ ಯುವತಿ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ. ರಿನಿ ಸಂಪತ್ ಅವರು ವಾಷಿಂಗ್ಟನ್ ಡಿಸಿಯ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರಸ್ತುತ ವಾಷಿಂಗ್ಟನ್ ಡಿಸಿನಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ, ರಿನಿ ಸಂಪತ್ ಪ್ರಾಥಮಿಕ ಮತಪತ್ರದಲ್ಲಿ ಕಾಣಿಸಿಕೊಂಡ ಮೊದಲ ದಕ್ಷಿಣ ಏಷ್ಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಡೆಮಾಕ್ರಟಿಕ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿದ್ದಾರೆ.

ತಮಿಳುನಾಡಿನ ಮೂಲದ 31 ವರ್ಷದ ರಿನಿ, ಏಳನೇ ವಯಸ್ಸಿನಲ್ಲಿ ಅಮೆರಿಕಕ್ಕೆ ವಲಸೆ ಹೋಗಿ, ಕಳೆದ ದಶಕಕ್ಕೂ ಹೆಚ್ಚು ಕಾಲ ಡಿಸಿಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಸರ್ಕಾರಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಅವರು, ತಮ್ಮ ಪ್ರಚಾರವನ್ನು ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರೀಕರಿಸಿದ್ದಾರೆ.

“ಮೊದಲಿಗೆ ನಾನು ರಾಜಕಾರಣಿಯಲ್ಲ. ಯಾವುದೇ ಒಂದು ಪಕ್ಷದೊಂದಿಗೆ ನನಗೆ ಸಂಬಂಧವಿಲ್ಲ. ನಮ್ಮ ನಗರದ ಮೂಲಭೂತ ಸೇವೆಗಳನ್ನು ಸುಧಾರಿಸುವುದು ನನ್ನ ಗುರಿ,” ಎಂದು ಅವರು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ಡಿಸಿಯ ಮೇಯರ್ ಆಗಿ ಆಯ್ಕೆಯಾದರೆ, ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಸರಿಪಡಿಸುವುದು, ಪೊಟೊಮ್ಯಾಕ್ ನದಿಗೆ ಕೊಳಚೆನೀರು ಸೇರುವುದನ್ನು ತಡೆಯುವುದು ಹಾಗೂ ಜೀವನ ವೆಚ್ಚವನ್ನು ಕಡಿಮೆ ಮಾಡುವುದನ್ನು ಮೊದಲ ಆದ್ಯತೆಯಾಗಿ ಇಡುವುದಾಗಿ ಹೇಳಿದ್ದಾರೆ.

ರಿನಿ ಸಂಪತ್ ಸ್ಪರ್ಧೆ, ಅಮೆರಿಕ ರಾಜಕೀಯದಲ್ಲಿ ಭಾರತೀಯ ಮೂಲದ ಮಹಿಳೆಯರ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಸೂಚನೆಯಾಗಿದೆ.

Continue Reading

Trending