ಬೆಂಗಳೂರು
ನಾಳೆ ನೇರಳೆ ಮಾರ್ಗದ ಮೆಟ್ರೋ ಪ್ರಯಾಣದಲ್ಲಿ ವ್ಯತ್ಯಯ ಈ ಟೈಮಲ್ಲಿ ಸೇವೆ ಇಲ್ಲ
ಬೆಂಗಳೂರು: ನಗರದ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯನ್ನು ಬಿಎಂಆರ್ಸಿಎಲ್ ನೀಡಿದೆ. ನೇರಳೆ ಮಾರ್ಗದ ಮೆಟ್ರೋ ಬಳಸುವವರಿಗೆ ಗುರುವಾರ ಸಂಚಾರದಲ್ಲಿ ಅಡಚಣೆಯಾಗಲಿದೆ ಎಂದು ಮಾಹಿತಿ ನೀಡಿದೆ.
ಗುರುವಾರ (ಸೆಪ್ಟೆಂಬರ್ 21) ಬೈಯಪ್ಪನಹಳ್ಳಿ-ಕೆಆರ್ ಪುರ ವಿಭಾಗದ (Baiyappanahalli and KR Pura division) 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತಪಾಸಣೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ದಕ್ಷಿಣ ವೃತ್ತ) ಸುರಕ್ಷತಾ ಪರಿಶೀಲನೆ ನಡೆಯಲಿದೆ. ಅಲ್ಲದೆ, ಸುರಕ್ಷತಾ ತಪಾಸಣೆ ಇರುವ ಕಾರಣ ಈ ಮಾರ್ಗದಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಬೈಯಪ್ಪನಹಳ್ಳಿ-ಇಂದಿರಾನಗರದ (Baiyappanahalli and Indiranagar) ನಡುವೆ ಸೆಪ್ಟೆಂಬರ್ 21ರಂದು ಮಧ್ಯಾಹ್ನ 1.30 ರಿಂದ ಸಂಜೆ 4.30ರವರೆಗೆ ಮೆಟ್ರೋ ರೈಲು ಸಂಚಾರ ಇರುವುದಿಲ್ಲ. ಮಧ್ಯಾಹ್ನ 1.30 ರವರೆಗೆ ಮತ್ತು ಸಂಜೆ 4.30ರ ನಂತರ ರೈಲು ಸಂಚಾರ ಎಂದಿನಂತೆ ಇರಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಡುಗೋಡಿ (ವೈಟ್ಫೀಲ್ಡ್) – ಗರುಡಾಚಾರ್ ಪಾಳ್ಯ ಮತ್ತು ಇಂದಿರಾನಗರ – ಕೆಂಗೇರಿ ನಡುವೆ ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ ಎಂದೂ ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ. ರಾಜಧಾನಿ ಬೆಂಗಳೂರಲ್ಲಿ ಬಿಎಂಆರ್ಸಿಎಲ್ ಮತ್ತೊಂದು ಹಂತದ ಮೆಟ್ರೋ ಸಂಚಾರಕ್ಕೆ ಸಜ್ಜಾಗುತ್ತಿದೆ. ಬೈಯಪ್ಪನಹಳ್ಳಿ-ಕೆಆರ್ಪುರಂ (Baiyappanahalli and KR Pura route), ಕೆಂಗೇರಿ-ಚಲ್ಲಘಟ್ಟ ಮಾರ್ಗದ (Kengeri and Challaghatta route) ಮೆಟ್ರೋ ಸಂಚಾರಕ್ಕೆ ಸಿದ್ಧ ಮಾಡಿಕೊಳ್ಳುತ್ತಿದೆ. ಈ ಮಾರ್ಗವು ಸೆ. 29ರಂದು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಸಂಪೂರ್ಣ ಕಾಮಗಾರಿ ಮುಗಿಸಿ ರೈಲಿನ ಟ್ರಯಲ್ ರನ್ ನಡೆಸಲಾಗುತ್ತಿದೆ. ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (Commissioner of Railway Safety – ಸಿಎಂಆರ್ಎಸ್) ಬಿಎಂಆರ್ಸಿಎಲ್ಗೆ ಕೆಲವು ಸ್ಪಷ್ಟೀಕರಣಗಳನ್ನು ಕೇಳಿದೆ. ಅದೆಲ್ಲವೂ ಮುಗಿದು ಸಿಎಂಆರ್ಎಸ್ ಗ್ರೀನ್ ಸಿಗ್ನಲ್ ನೀಡಿದರೆ ಸೆ.29 ರಂದು ಬೈಯಪ್ಪನಹಳ್ಳಿ-ಕೆಆರ್ ಪುರಂ ಮತ್ತು ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೋ ಸಂಚಾರ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ನೇರಳೆ ಮಾರ್ಗವು 39.34 ಕಿ.ಮೀ ಉದ್ದವಿದ್ದು, ಬೈಯಪ್ಪನಹಳ್ಳಿಯಿಂದ ಕೆಂಗೇರಿ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ನಿಂದ ಕೆಆರ್ ಪುರಕ್ಕೆ ಸಂಪರ್ಕಿಸುತ್ತದೆ. ಕೆ.ಆರ್. ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ಚೈನ್ ಲಿಂಕ್ ಪೂರ್ಣಗೊಂಡರೆ ಪ್ರಯಾಣಿಕರಿಗೆ ಸುಲಭವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹದೇವಪುರ, ಐಟಿಪಿಬಿ ಮತ್ತು ಕಾಡುಗೋಡಿ ಮುಂತಾದ ಪ್ರದೇಶಗಳಿಗೆ ಹೋಗುವ ಐಟಿ ಮಂದಿಗೆ ಸಹಾಯವಾಗುತ್ತದೆ.