ಬೆಂಗಳೂರು
ಕಾವೇರಿ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ಮಂಡ್ಯ: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನವೂ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಮತ್ತು ಅದರ ಸೂಚನೆಯಂತೆ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಾವೇರಿ ಕೊಳ್ಳದಲ್ಲಿ ನಡೆಯುತ್ತಿರುವ ಹೋರಾಟದ ಕಣಕ್ಕೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಧುಮುಕಿದ್ದಾರೆ.
ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಳಗ್ಗಿನಿಂದಲೇ ಪ್ರತಿಭಟನೆ ನಡೆಯುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಸೇರಿದ ರೈತರು ಪ್ರಾಧಿಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಳಗ್ಗೆ ಸುಮಾರು 12 ಗಂಟೆಯ ಹೊತ್ತಿಗೆ ಆದಿಚುಂಚನಗಿರಿ ಶ್ರಿಗಳು ಇತರ ಕೆಲವು ಸ್ವಾಮೀಜಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ತಾವೂ ಪ್ರತಿಭಟನೆಯಲ್ಲಿ ಭಾಗಿಯಾದರು. ಅವರೇ ಸ್ವತಃ ಸ್ವಯಂ ಪ್ರೇರಣೆಯಿಂದ ಬಂದು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರ ಜತೆ ತಾನು ಸದಾ ಇರುವುದಾಗಿ ಹೇಳಿದ ಸ್ವಾಮೀಜಿ, ರಾಜ್ಯ ಸರ್ಕಾರ ರೈತರ ಪರವಾದ ತೀರ್ಮಾನ ಕೈಗೊಳ್ಳಬೇಕು, ನೀರಿನ ಸಮಸ್ಯೆಯನ್ನು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಮೂಲಕ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ನಾವು ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕಿದೆ. ಆದರೆ ಸುಪ್ರೀಂಕೋರ್ಟ್ ಕೂಡಾ ನಮ್ಮ ಸಮಸ್ಯೆ ಆಲಿಸಿ ನಂತರ ತೀರ್ಪು ಕೊಡಬೇಕಿತ್ತು ಎಂದು ಶ್ರೀಗಳು ಹೇಳಿದರು.
ತೀರ್ಪು ಪಾಲನೆ ಮಾಡಿದ್ದೇ ಆದ್ರೆ ಸುಮಾರು 7 ಟಿಎಂಸಿ ನೀರು ಹರಿದು ಹೋಗಲಿದೆ. ನೀರು ಬಿಟ್ಟರೆ ಬೆಳೆಗಳಷ್ಟೇ ಅಲ್ಲ ಮನುಷ್ಯರೇ ಒಣಗುವಂತಹ ಸ್ಥಿತಿ ಎದುರಾಗುವ ಆತಂಕ ಇದೆ. ಈಗ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಆದೇಶ ಪಾಲನೆ ಮಾಡಿದ್ರೆ ಜನ ಒಣಗುತ್ತಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವು ಕಾನೂನು ಪಾಲನೆ ಮಾಡಬೇಕಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಜೊತೆಗೆ ನಾನು ಮಾತನಾಡುತ್ತೇನೆ. ಸಂಕಷ್ಟ ಸೂತ್ರ ಬೇಗನ ರಚಿಸಬೇಕಿದೆʼʼ ಎಂದು ಹೇಳಿದರು.
ಹಲವು ವರ್ಷಗಳಿಂದ ಇರುವ ಸಮಸ್ಯೆಯಾಗಿದೆ. ಹಾಗೆ ನೋಡಿದ್ರೆ ಲಭ್ಯತೆಯ ಆಧಾರದ ಮೇಲೆ ನೀರಿನ ಹಂಚಿಕೆಯಾಗಬೇಕಿದೆ. ಪ್ರಾಧಿಕಾರ ರಚನೆಯಾದಾಗಿನಿಂದಲೂ ನಮಗೆ ತಾರತಮ್ಯವಾಗುತ್ತಲೇ ಬಂದಿದೆ.
ಮಳೆ ಕಡಿಮೆಯಾಗಿ ಡ್ಯಾಂಗಳಲ್ಲಿ ನೀರು ಕಡಿಮೆಯಾದ ಸಂದರ್ಭದಲ್ಲಿ ವ್ಯವಸಾಯಕ್ಕಿಂತಲೂ ಮುಖ್ಯವಾಗಿ ಕುಡಿಯುವ ನೀರಿಗೆ ಸಮಸ್ಯೆ ತಲೆ ದೋರಲಿದೆʼʼ ಎಂದು ಸ್ವಾಮೀಜಿ ಹೇಳಿದರು.