ದೇಶ
ಮನೆಯ ಯಾವೆಲ್ಲ ಭಾಗಗಳಲ್ಲಿ ಕರ್ಪೂರವನ್ನಿಡುವುದು ಶುಭದಾಯಕ ಗೊತ್ತೇ?
ಕರ್ಪೂರದ ಬಳಕೆ ಭಾರತೀಯರಲ್ಲಿ ಸಾಮಾನ್ಯ. ಕರ್ಪೂರದ ಪರಿಮಳ ಆಘ್ರಾಣಿಸಿದರೆ ಸಾಕು ನಮ್ಮಲ್ಲಿ ದೈವಿಕ ಭಾವ, ಭಕ್ತಿ ಒಳಗಿನಿಂದ ಜಾಗೃತವಾಗುತ್ತದೆ. ದೇವರಿಗೆ ಆರತಿ ಮಾಡುವಾಗ ಕರ್ಪೂರದಲ್ಲಿ ಮಾಡುತ್ತೇವೆ. ಇಂತಹ ಕರ್ಪೂರ ನಕಾರಾತ್ಮಕ ಶಕ್ತಿಯನ್ನು ದೂರ ಇರಿಸಿ ಸಕಾರಾತ್ಮಕತೆಯನ್ನು ಪಸರಿಸುತ್ತದೆ ಎಂಬ ನಂಬಿಕೆಯೂ ಇದೆ. ಅಷ್ಟೇ ಅಲ್ಲ, ಕರ್ಪೂರವೆಂದರೆ ಶುಭದಾಯಕ ಎಂಬ ಅಗಾಧ ನಂಬಿಕೆಯೂ ಹಿಂದಿನಿಂದಲೇ ಬೆಳೆದು ಬಂದಿದೆ. ಹೀಗಾಗಿಯೇ ಹಲವರು, ದೇವರ ಕೋಣೆಯಲ್ಲಿ ಅಷ್ಟೇ ಅಲ್ಲ, ಮನೆಯ ಹಲವು ಜಾಗಗಳಲ್ಲಿ ಕರ್ಪೂರವನ್ನು ಇಡುವ ರೂಢಿ ಮಾಡಿಕೊಂಡಿರುತ್ತಾರೆ. ಹಾಗಾದರೆ ಬನ್ನಿ, ಮನೆಯ ಯಾವೆಲ್ಲ ಭಾಗಗಳಲ್ಲಿ ಕರ್ಪೂರವನ್ನು ಇಡುವ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಪಡೆಯಬಹುದು ಎಂಬ ನಂಬಿಕೆಯಿದೆ ಎಂಬುದನ್ನು ನೋಡೋಣ.
ಕರ್ಪೂರವನ್ನಿಡಲು ಪ್ರಶಸ್ತವಾದ ಸ್ಥಳ ಎಂದರೆ ಅದು ಪೂಜೆ ಮಾಡುವ ಕೋಣೆ. ನಿಮ್ಮ ಮನೆಯಲ್ಲೊಂದು ಪೂಜೆ, ಧ್ಯಾನದ ಕೋಣೆ ಇದ್ದರೆ, ಅಲ್ಲಿ ಪುಡಿ ಮಾಡಿದ ಕರ್ಪೂರವನ್ನು ಇಟ್ಟುಕೊಳ್ಳುವುದು ಶುಭದಾಯಕ ಎಂದು ನಂಬಲಾಗುತ್ತದೆ. ನೀವು ಪೂಜೆಯ ಸಂದರ್ಭ ಇದನ್ನು ಹೊತ್ತಿಸಿಕೊಳ್ಳಬಹುದು, ಅಥವಾ ಶುಭ ಸಂದರ್ಭಗಳಲ್ಲಿಯೂ ಕರ್ಪೂರದ ದೀಪ ಹಚ್ಚಬಹುದು.
- ಕೆಲವು ಮಂದಿ ಪುಡಿ ಮಾಡಿದ ಕರ್ಪೂರವನ್ನು ತಮ್ಮ ಕಾರಿನಲ್ಲಿ ಅಥವಾ ತಾವು ಓಡಾಡುವ ವಾಹನದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಇದರರ್ಥ ಪ್ರಯಾಣ ಶುಭವಾಗಲಿ ಹಾಗೂ ಎಲ್ಲನಕಾರಾತ್ಮಕ ಶಕ್ತಿಯನ್ನು ಕರ್ಪೂರವು ಹೀರಿಕೊಳ್ಳಲಿ ಎಂದು.
- ಕೆಲವರು ತಮ್ಮ ಸ್ನಾನದ ಮನೆ ಅಥವಾ ಬಾತ್ರೂಂನಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಸದಾ ತಾಜಾ ಗಾಳಿ ಸೂಸುತ್ತಿರಲು ಹಾಗೂ ಎಲ್ಲ ಕೆಟ್ಟ ವಾಸನೆಯನ್ನು ಕರ್ಪೂರವು ಹೀರಿಕೊಂಡು ಆ ಕೋಣೆಯನ್ನು ಉತ್ತಮ ಪರಿಮಳದಾಯಕವನ್ನಾಗಿ ಪರಿವರ್ತಿಸಲು ಕರ್ಪೂರದ ಮೊರೆ ಹೋಗುತ್ತಾರೆ.
- ಅಡುಗೆ ಮನೆ ಎಂದರೆ ಮನೆಯೊಂದರ ಹೃದಯ ಭಾಗವಿದ್ದಂತೆ. ನಮಗೆ ನಿತ್ಯವೂ ಬೇಕಾಗುವ ಆಹಾರ ತಯಾರಾಗುವುದೇ ಅಡುಗೆ ಮನೆಯಲ್ಲಿ. ಹಾಗಾಗಿ ಎಲ್ಲ ಕೋಣೆಗಳಿಗಿಂತ ಹೆಚ್ಚು ಮಹತ್ವ ನಾವು ಅಡುಗೆ ಕೋಣೆಗೆ ನೀಡುತ್ತೇವೆ. ಕೆಲವು ಮಂದಿ ಹೀಗಾಗಿ ಕರ್ಪೂರವನ್ನು ಅಡುಗೆ ಕೋಣೆಯಲ್ಲಿಡಲು ಬಯಸುತ್ತಾರೆ. ಯಾಕೆಂದರೆ, ತಾವು ಮಾಡುವ ಅಡುಗೆಯ ಮೂಲಕ ಸಕಾರಾತ್ಮಕ ಪರಿಣಾಮಗಳು ಆಗಲಿ ಎಂಬ ಉದ್ದೇಶ ಇಲ್ಲಿ ಅಡಗಿದೆ. ಆದರೆ ಸೇಫ್ ಆಗಿ ಬೆಂಕಿ ಇರುವೆಡೆಯಿಂದ ದೂರದಲ್ಲಿಡಲು ಮರೆಯಬೇಡಿ.
- ನಿಮ್ಮ ಮನೆಯಲ್ಲಿ ಓದಿಗಾಗಿ ಅಂತಲೇ ಒಂದು ಕೋಣೆ ಇದ್ದರೆ ಅಲ್ಲಿಯೂ ಇಡಬಹುದು. ಒಳ್ಳೆಯ ವಿದ್ಯೆ ತಲೆಗೆ ಹತ್ತಲು, ಏಕಾಗ್ರತೆಗೆ ಹಾಗೂ ಶ್ರದ್ಧೆಗಾಗಿ ಕರ್ಪೂರವನ್ನು ಓದಿನ ಕೋಣೆಯಲ್ಲೂ ಇಡಬಹುದು.
- ಮಕ್ಕಳ ಕೋಣೆಯಲ್ಲಿಯೂ ಇಡುವುದು ಒಳ್ಳೆಯದನ್ನೇ ತರುತ್ತದೆ. ಮಕ್ಕಳ ಮೇಲಾಗುವ ನಕಾರಾತ್ಮಕ ಪ್ರಭಾವಗಳನ್ನು ಇದು ದೂರ ಇರಿಸಿ ಮಕ್ಕಳನ್ನು ಆರೋಗ್ಯವಾಗಿರಿಸುತ್ತದೆ ಎಂಬ ನಂಬಿಕೆಯಿದೆ.
- ಮನೆಯ ದ್ವಾರದಲ್ಲಿಯೂ ಕರ್ಪೂರ ಇಡುವ ಕ್ರಮವಿದೆ. ಮನೆಗೆ ಕೆಟ್ಟ ಶಕ್ತಿಗಳು ಪ್ರವೇಶಿಸದೆ, ಮನೆಯಲ್ಲಿ ಒಳ್ಳೆಯ ಸಕಾರಾತ್ಮಕ ಬೆಳವಣಿಗೆ ಆಗುತ್ತಿರಲಿ ಎಂಬುದು ಇದರ ಆಶಯ.
- ಬಾಲ್ಕನಿಯಲ್ಲೇ ಪುಟಾಣಿ ಗಾರ್ಡನ್ ಇದ್ದರೆ, ಅಥವಾ ಮನೆಯೊಳಗೆ ಪಾಟ್ಗಳಲ್ಲಿ ಗಿಡಗಳನ್ನಿಟ್ಟಿದ್ದರೆ, ಅವುಗಳ ಬೇರಿನ ಸಮೀಪವೂ ಈ ಕರ್ಪೂರವನ್ನಿಡಬಹುದು. ಇದು ಶುಭವಷ್ಟೇ ಅಲ್ಲ, ಗಿಡಗಳಿಗೆ ನೈಸರ್ಗಿಕ ಫಲವತ್ತತೆಯನ್ನೂ ನೀಡುತ್ತದೆ.