ರಾಜಕೀಯ
ಸಿಎಂ ರಾಜೀನಾಮೆ ಕೊಟ್ರೆ ಮೋದಿ ಬರ್ತಾರಂತೆ! – ಸಂಸದ ಮುನಿಸ್ವಾಮಿ ಹೇಳಿಕೆ!

ಕೋಲಾರ : ಕಾವೇರಿ ಜಲವಿವಾದದಲ್ಲಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೋಲಾರ ಸಂಸದ ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ. ನೀವು ನಿಮ್ಮ ವೈಫಲ್ಯವನ್ನು ಒಪ್ಪಿಕೊಂಡು ರಾಜೀನಾಮೆ ಕೊಡಿ. ಆಗ ಪ್ರಧಾನಿ ಮಧ್ಯಪ್ರವೇಶಿಸಿ ಬಗೆಹರಿಸುತ್ತಾರೆ ಎಂದು ಟೀಕಿಸಿದ್ದಾರೆ. ಶನಿವಾರ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸಂಸದ ಮುನಿಸ್ವಾಮಿ , ಸಿದ್ದರಾಮಯ್ಯ ಸಿಎಂ ಆಗಿದ್ದರೆ ತಮಿಳುನಾಡಿನ ಸಿಎಂ ಸ್ಟಾಲಿನ್ ಜೊತೆ ಚರ್ಚೆ ನಡೆಸಿ ವಾಸ್ತವಾಂಶ ಮನವರಿಕೆ ಮಾಡಲಿ ಎಂದರು.ಸಿದ್ದರಾಮಯ್ಯ ಸಿಎಂ ಆಗಿದ್ದರೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಎಂದು ನುಡಿದ ಮುನಿಸ್ವಾಮಿ, ನ್ಯಾಯಾಲಯದ ಎದುರು ವಾಸ್ತವಾಂಶ ತೆರೆದಿಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಇದಕ್ಕಾಗಿ ನೂರಾರು ಕೋಟಿ ರೂ. ವೆಚ್ಚವನ್ನೂ ಮಾಡಲಾಗಿದೆ ಎಂದು ಆರೋಪಿಸಿದರು.ಕರ್ನಾಟಕದ ನೀರನ್ನು ತಮಿಳುನಾಡಿಗೆ ಹರಿಬಿಟ್ಟು ಈಗ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಬಯಸುತ್ತಿದ್ದಾರೆ ಎಂದು ಮುನಿಸ್ವಾಮಿ ಕಿಡಿಕಾರಿದರು.