ದೇಶ
ಚಳಿಗಾಲ ಪ್ರವಾಸೋದ್ಯಮಕ್ಕೆ ಭಾರತ ದೊಡ್ಡ ತಾಣ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಚಳಿಗಾಲದ ಪ್ರವಾಸೋದ್ಯಮಕ್ಕೆ ಭಾರತವು ಜಗತ್ತಿನ ಪ್ರಮುಖ ತಾಣವಾಗುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರಾಖಂಡ ಸರ್ಕಾರ ಈ ದಿಕ್ಕಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು. ಮೂರು ವರ್ಷಗಳ ಹಿಂದೆ ಆದಿ ಕೈಲಾಸಿಗೆ ವರ್ಷಕ್ಕೆ ಕೇವಲ 2,000 ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದರೆ, ಈಗ ಆ ಸಂಖ್ಯೆ 30,000ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ಹಿಮಾಲಯ ಪ್ರದೇಶದಲ್ಲಿ ಸ್ಕೀಯಿಂಗ್, ಸ್ನೋಬೋರ್ಡಿಂಗ್, ಟ್ರೆಕ್ಕಿಂಗ್, ಐಸ್ ಕ್ಲೈಂಬಿಂಗ್ನಂತಹ ಚಳಿಗಾಲ ಕ್ರೀಡೆಗಳು ಪ್ರವಾಸಿಗರನ್ನು ಉತ್ಸಾಹಗೊಳಿಸುತ್ತಿದ್ದು, ಅನೇಕ ದೇಶಗಳು ಈ ಮೂಲಕ ಯಶಸ್ವಿ ಪ್ರವಾಸೋದ್ಯಮ ಮಾದರಿ ನಿರ್ಮಿಸಿದ್ದಾವು ಎಂದು ಮೋದಿ ತಿಳಿಸಿದರು. ವೈವಿಧ್ಯಮಯ ಭೂದೃಶ್ಯ ಮತ್ತು ಪರ್ವತ ಪ್ರದೇಶಗಳನ್ನು ಹೊಂದಿರುವ ಭಾರತವೂ ಇದೇ ದಿಕ್ಕಿನಲ್ಲಿ ಮುನ್ನಡೆಯಲು ಉತ್ತಮ ಅವಕಾಶ ಹೊಂದಿದೆ ಎಂದು ಒತ್ತಿಹೇಳಿದರು.
ಪ್ರಧಾನಿ ಮೋದಿ, ಈ ಚಳಿಗಾಲದ ರಜಾದಿನಗಳನ್ನು ಯೋಜಿಸುವಾಗ ಹಿಮಾಲಯ ಕಣಿವೆಗಳನ್ನು ಪರಿಗಣಿಸಲು ಪ್ರವಾಸಿಗರಿಗೆ ಮನವಿ ಮಾಡಿದ್ದು, ಔಲಿ, ಮುನ್ಸಾರಿ, ಚೋಪ್ಟಾ, ದೆಯಾರಾ ಮೊದಲಾದ ಸ್ಥಳಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿವೆ ಎಂದು ಹೇಳಿದರು.
ಕೆಲ ವಾರಗಳ ಹಿಂದೆ ಪಿಥೋರಗಢ ಜಿಲ್ಲೆಯ 14,500 ಅಡಿಗಳ ಎತ್ತರದಲ್ಲಿರುವ ಆದಿ ಕೈಲಾಶ್ನಲ್ಲಿ ಉತ್ತರಾಖಂಡದ ಮೊದಲ ಹೈ-ಆಲ್ಟಿಟ್ಯೂಡ್ ಅಲ್ಟ್ರಾ ರನ್ ಮ್ಯಾರಥಾನ್ ಆಯೋಜಿಸಲಾಯಿತು. 60 ಕಿಮೀ ದೂರದ ಈ ಓಟದಲ್ಲಿ ದೇಶದ 18 ರಾಜ್ಯಗಳಿಂದ 750 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಕೊರೆಯುವ ಚಳಿಯ ಹೊರತಾಗಿಯೂ ಜನರ ಉತ್ಸಾಹ ವಿಶಿಷ್ಟವಾಗಿತ್ತು ಎಂದು ಹೇಳಿದರು.
ಮುಂದಿನ ವಾರಗಳಲ್ಲಿ ಉತ್ತರಾಖಂಡ ಚಳಿಗಾಲದ ಕ್ರೀಡಾಕೂಟವನ್ನು ಆಯೋಜಿಸಲು ಸಜ್ಜಾಗಿದೆ. ಸ್ಕೀಯಿಂಗ್, ಸ್ನೋಬೋರ್ಡಿಂಗ್ ಸೇರಿದಂತೆ ಹಿಮ ಆಧಾರಿತ ಕ್ರೀಡೆಗಳಿಗೆ ಸಿದ್ಧತೆಗಳು ನಡೆಯುತ್ತಿದ್ದು, ರಸ್ತೆ, ಮೂಲಸೌಕರ್ಯ ಮತ್ತು ಹೊಸ ಹೋಂಸ್ಟೇ ನೀತಿಯು ಪ್ರವಾಸೋದ್ಯಮ ವೃದ್ಧಿಗೆ ನೆರವಾಗುತ್ತಿದೆ ಎಂದು ಪ್ರಧಾನಿ ಅವರು ಹೇಳಿದರು.
ದೇಶ
ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ: “ಭಾರತಕ್ಕೆ ಮರಳದಿದ್ದರೆ ಅರ್ಜಿ ವಿಚಾರಣೆ ಇಲ್ಲ”
ಮುಂಬೈ: ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ (Vijay Mallya) ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಹಾಜರಾಗದ ಹಿನ್ನೆಲೆ, ಮುಂದಿನ ವಿಚಾರಣೆಯಲ್ಲಿಯೂ ಇದೇ ರೀತಿಯ ವರ್ತನೆ ತೋರಿದರೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕದ್ ಅವರ ಪೀಠ, ಮಲ್ಯ ಭಾರತಕ್ಕೆ ಮರಳುವ ಉದ್ದೇಶ ಹೊಂದಿದ್ದಾರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲು “ಕೊನೆಯ ಅವಕಾಶ” ನೀಡಿದೆ.
“ನೀವು ಭಾರತಕ್ಕೆ ಹಿಂತಿರುಗಲೇಬೇಕು. ಹಿಂತಿರುಗದಿದ್ದರೆ ನಿಮ್ಮ ಅರ್ಜಿಯನ್ನು ನಾವು ವಿಚಾರಣೆ ನಡೆಸಲು ಸಾಧ್ಯವಿಲ್ಲ,” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
FEOA ಕಾಯ್ದೆ ಪ್ರಶ್ನೆ
ವಿಜಯ್ ಮಲ್ಯ ಅವರು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ (FEOA) ಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಹಾಗೂ ಅವರನ್ನು ‘Fugitive Economic Offender’ ಎಂದು ಘೋಷಿಸುವ ಪ್ರಕ್ರಿಯೆಗಳ ವಿರುದ್ಧದ ಅರ್ಜಿಯನ್ನು ನ್ಯಾಯಾಲಯ ವಿಚಾರಿಸುತ್ತಿದೆ.
ಡಿಸೆಂಬರ್ನಲ್ಲಿ ನ್ಯಾಯಪೀಠ, ಮಲ್ಯ ಭಾರತಕ್ಕೆ ಮರಳಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟರೆ ಮಾತ್ರ ಅವರ ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿತ್ತು.
ನ್ಯಾಯಾಧೀಶರು, “ನೀವು ನ್ಯಾಯಾಲಯದ ಪ್ರಕ್ರಿಯೆಯಿಂದ ದೂರ ಓಡುತ್ತಿದ್ದೀರಿ. ಆದ್ದರಿಂದ ಸಮಾನ ಪರಿಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
ಇಡಿ ಪರ ವಾದ
ಜಾರಿ ನಿರ್ದೇಶನಾಲಯ (ED) ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಲ್ಯ ಬ್ಯಾಂಕುಗಳ ಹಕ್ಕುಗಳನ್ನು ಪ್ರಶ್ನಿಸಿ ಅಫಿಡವಿಟ್ ಸಲ್ಲಿಸಿರುವುದನ್ನು ಉಲ್ಲೇಖಿಸಿ, ಅವರು ವಸೂಲಾತಿ ಪ್ರಕ್ರಿಯೆಗಳನ್ನು ಬೇರೆ ದಿಕ್ಕಿಗೆ ತಳ್ಳಲು ಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.
ಮಲ್ಯ ಅವರನ್ನು ಪರಾರಿಯಾಗಿದ್ದಾನೆಂದು ಘೋಷಿಸಿದ ನಂತರ ಹಾಗೂ ಲಂಡನ್ನಲ್ಲಿ ಹಸ್ತಾಂತರ ಪ್ರಕ್ರಿಯೆ ಮುಂದುವರಿದ ಹಂತದಲ್ಲಿದ್ದಾಗ ಮಾತ್ರ FEOAಗೆ ಸವಾಲು ಹಾಕಿದ್ದಾರೆ ಎಂದು ಮೆಹ್ತಾ ಹೇಳಿದರು.
“ಭಾರತೀಯ ನ್ಯಾಯಾಲಯಗಳಿಂದ ಪರಿಹಾರ ಕೇಳುವವರು ಭಾರತೀಯ ಕಾನೂನಿನ ಮೇಲೆ ನಂಬಿಕೆ ಇಡಬೇಕು,” ಎಂದು ಇಡಿ ಪರ ವಾದ ಮಂಡಿಸಲಾಯಿತು.
ಮಲ್ಯ ಪರ ವಾದ
ವಿಜಯ್ ಮಲ್ಯ ಪರ ವಕೀಲ ಅಮಿತ್ ದೇಸಾಯಿ, ಮಲ್ಯ ಭೌತಿಕವಾಗಿ ಭಾರತಕ್ಕೆ ಮರಳದಿದ್ದರೂ ಅವರ ಅರ್ಜಿಯನ್ನು ವಿಚಾರಣೆ ಮಾಡಬಹುದು ಎಂದು ವಾದಿಸಿದರು.
ಆದರೆ, ಮಲ್ಯ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರು ನಡೆದುಕೊಳ್ಳುತ್ತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ನ್ಯಾಯಾಲಯ ಸ್ಪಷ್ಟವಾಗಿ ಹೇಳಿದ್ದು:
- ಮಲ್ಯ ಭಾರತಕ್ಕೆ ಹಿಂದಿರುಗುವುದಿಲ್ಲವೆಂದು ಅಫಿಡವಿಟ್ ಸಲ್ಲಿಸಬಹುದು.
- ಆದರೆ ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
- ದೇಶಕ್ಕೆ ಮರಳಲು ಇದು ಅಂತಿಮ ಅವಕಾಶ.
ಮುಂದಿನ ವಾರ ವಿಚಾರಣೆ ಮುಂದುವರಿಯಲಿದೆ.
ಕ್ರೀಡೆ
IND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
ಟಿ20 ವಿಶ್ವಕಪ್ ಟೂರ್ನಿಯ ಬಹು ನಿರೀಕ್ಷಿತ ಭಾರತ–ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ಶಿವರಾತ್ರಿ ಹಬ್ಬದಂದೇ ನಡೆಯಲಿರುವ ಈ ನಿರ್ಣಾಯಕ ಸಮರಕ್ಕಾಗಿ ಎರಡೂ ತಂಡಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಫೆ.12ರಂದು ನಮೀಬಿಯಾ ವಿರುದ್ಧ ಕಣಕ್ಕಿಳಿದು ಗೆಲುವಿನ ಆತ್ಮವಿಶ್ವಾಸದೊಂದಿಗೆ ಪಾಕಿಸ್ತಾನ ಎದುರಿಸಲು ಸಜ್ಜಾಗಿದೆ.
ಈ ಮಧ್ಯೆ, ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಭಾರತಕ್ಕೆ ಬಲವಾದ ಎಚ್ಚರಿಕೆ ನೀಡಿದ್ದಾರೆ. “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ. ಅದಕ್ಕಾಗಿ ನನ್ನ ಬೌಲಿಂಗ್ ಶೈಲಿಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.
ಮಾತಿನ ಸಮರ ಜೋರಾಗಿದೆ
ಟಿ20 ವಿಶ್ವಕಪ್ ಈಗ ರೋಚಕ ಹಂತ ತಲುಪಿದ್ದು, ಈಗಾಗಲೇ 15ಕ್ಕೂ ಹೆಚ್ಚು ಪಂದ್ಯಗಳು ಪೂರ್ಣಗೊಂಡಿವೆ. ಭಾರತ–ಪಾಕಿಸ್ತಾನ ಪಂದ್ಯ ನಡೆಯುತ್ತದೆಯೇ? ಎಂಬ ಅನುಮಾನಕ್ಕೆ ತೆರೆಬಿದ್ದಿದ್ದು, ಪಾಕಿಸ್ತಾನ ಪಂದ್ಯಕ್ಕೆ ಒಪ್ಪಿಗೆ ನೀಡಿದೆ.
ಪಂದ್ಯ ಖಚಿತವಾದ ಬೆನ್ನಲ್ಲೇ ಎರಡೂ ತಂಡಗಳ ನಡುವೆ ಮಾತಿನ ಸಮರ ಜೋರಾಗಿದೆ. ಪಾಕಿಸ್ತಾನಿ ಆಟಗಾರರು ಭಾರತವನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದರೆ, ಭಾರತೀಯರು ಪಾಕಿಸ್ತಾನವನ್ನು ಮಣಿಸುತ್ತೇವೆ ಎಂದು ತಿರುಗೇಟು ನೀಡುತ್ತಿದ್ದಾರೆ.
ತಾರಿಕ್ ಸಮರ್ಥನೆ
ಭಾರತೀಯರು ನನ್ನ ಬೌಲಿಂಗ್ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಐಸಿಸಿ ನಿಯಮಗಳ ಪ್ರಕಾರ ನನ್ನ ಬೌಲಿಂಗ್ ಶೈಲಿ ಮಾನ್ಯವಾಗಿದೆ ಎಂದು ಉಸ್ಮಾನ್ ತಾರಿಕ್ ಸಮರ್ಥಿಸಿಕೊಂಡಿದ್ದಾರೆ.
“ಭಾರತೀಯ ಆಟಗಾರರಿಗೆ ನನ್ನ ಬೌಲಿಂಗ್ನಿಂದ ಹೆಚ್ಚುವರಿ ಒತ್ತಡ ಇದೆ. ಅದಕ್ಕಾಗಿಯೇ ಆರೋಪ ಮಾಡುತ್ತಿದ್ದಾರೆ. ಫೆಬ್ರವರಿ 15ರಂದು ಭಾರತದ ಅಗ್ರ ಕ್ರಮಾಂಕವನ್ನು ಕೆಡವುತ್ತೇನೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನನ್ನ ಬಗ್ಗೆ ಏನು ಚರ್ಚೆ ನಡೆಯುತ್ತಿದೆ ಎಂಬುದನ್ನು ನಾನು ಪರಿಗಣಿಸುವುದಿಲ್ಲ. ನನ್ನ ಗಮನ ಪಂದ್ಯದಲ್ಲೇ ಇದೆ” ಎಂದು ತಾರಿಕ್ ಹೇಳಿದ್ದಾರೆ.
ದೇಶ
ಜೈರಾಮ್ ರಮೇಶ್ಗೆ ಸುಪ್ರೀಂಕೋರ್ಟ್ ಕಿಡಿ: “ಮಾಧ್ಯಮ ಪ್ರಚಾರಕ್ಕೇ ಅರ್ಜಿ?”
ಹೊಸದಿಲ್ಲಿ: ಪರಿಸರ ಪರವಾನಿಗೆಗೆ ಸಂಬಂಧಿಸಿದ ರಿಟ್ ಅರ್ಜಿಯ ವಿಚಾರಣೆ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. “ಇದೆಲ್ಲವನ್ನೂ ನೀವು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ಮಾಡುತ್ತಿದ್ದೀರಾ?” ಎಂದು ತ್ರಿಸದಸ್ಯ ಪೀಠ ಕಿಡಿಕಾರಿತು.
ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಲ್ಲಿ ನ್ಯಾ. ಸೂರ್ಯಕಾಂತ್, ನ್ಯಾ. ಜಾಯ್ಮಾಲ್ಯ ಬಾಗ್ಚಿ ಹಾಗೂ ನ್ಯಾ. ಉಜ್ಜಲ್ ಭುಯಾನ್ ಇದ್ದರು. ಪರಿಸರ ಪರವಾನಿಗೆಯನ್ನು ಪೂರ್ವ ಅನ್ವಯವಾಗುವಂತೆ (Retrospective Environmental Clearance) ನೀಡುವ ಕ್ರಮವನ್ನು ಪ್ರಶ್ನಿಸಿ ಜೈರಾಮ್ ರಮೇಶ್ ರಿಟ್ ಅರ್ಜಿ ಸಲ್ಲಿಸಿದ್ದರು.
ರಿಟ್ ಅರ್ಜಿ ಸ್ವೀಕರಿಸಲು ನಿರಾಕರಣೆ
ವಿಚಾರಣೆ ವೇಳೆ ಪೀಠ, ಈ ಅರ್ಜಿ ಕೇಂದ್ರ ಸರ್ಕಾರದ ಕುಂದುಕೊರತೆಯನ್ನು ಹೈಲೆಟ್ ಮಾಡುವ ಬದಲು ಸಾರ್ವಜನಿಕ ಗಮನ ಸೆಳೆಯಲು ಸಲ್ಲಿಸಿದಂತಿದೆ ಎಂದು ಅಭಿಪ್ರಾಯಪಟ್ಟಿತು. ನವೆಂಬರ್ 2025ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಫೆ.12) ಸ್ವೀಕರಿಸಲು ನಿರಾಕರಿಸಿತು.
“ದಂಡ ಎದುರಿಸಲು ಸಿದ್ದರಾಗಿ” ಎಚ್ಚರಿಕೆ
“ತೀರ್ಪಿನ ವಿರುದ್ಧ ರಿಟ್ ಅರ್ಜಿ ಯಾಕೆ? ಮರುಪರಿಶೀಲನಾ ಅರ್ಜಿ (Review Petition) ಸಲ್ಲಿಸಬಹುದು ಅಲ್ಲವೇ? ರಿಟ್ ಮೂಲಕ ಮರುಪರಿಶೀಲನೆ ಸಾಧ್ಯವಿಲ್ಲ ಎಂಬುದು ತಿಳಿದಿಲ್ಲವೇ? ದಂಡ ಎದುರಿಸಲು ಸಿದ್ದರಾಗಿ” ಎಂದು ನ್ಯಾ. ಸೂರ್ಯಕಾಂತ್ ಎಚ್ಚರಿಸಿದರು.
ನ್ಯಾಯಾಲಯದ ಎಚ್ಚರಿಕೆಯ ಬಳಿಕ ಜೈರಾಮ್ ರಮೇಶ್ ಪರ ವಕೀಲರು ಅರ್ಜಿಯನ್ನು ಹಿಂಪಡೆಯಲು ವಿನಂತಿಸಿಕೊಂಡರು. ನ್ಯಾಯಪೀಠ ಅದಕ್ಕೆ ಅನುಮತಿ ನೀಡಿ, ಕಾನೂನಿನ ಪ್ರಕಾರ ಲಭ್ಯವಿರುವ ಪರಿಹಾರವನ್ನು ಪಡೆಯುವಂತೆ ಸೂಚಿಸಿತು.
ಪ್ರಕರಣದ ಹಿನ್ನೆಲೆ
ಜೈರಾಮ್ ರಮೇಶ್ ಯಾವುದೇ ಯೋಜನೆ ಆರಂಭವಾದ ನಂತರ ಪರಿಸರ ಪರವಾನಿಗೆ ನೀಡುವ ಕ್ರಮವನ್ನು ಪ್ರಶ್ನಿಸಿದ್ದರು. ಈ ರೀತಿಯ ಅನುಮತಿ ಕಾನೂನುಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ವಾದಿಸಿದ್ದರು.
ಕೇಂದ್ರ ಸರ್ಕಾರದ ನಿಯಮ ಏನು?
- 2006ರಲ್ಲಿ ಯೋಜನೆ ಆರಂಭಿಸುವ ಮೊದಲು ಪರಿಸರ ಪರವಾನಿಗೆ ಕಡ್ಡಾಯಗೊಳಿಸಲಾಗಿತ್ತು.
- 2017 ಮತ್ತು 2021ರ ಅಧಿಸೂಚನೆಗಳ ಮೂಲಕ ಕೆಲವು ಯೋಜನೆಗಳಿಗೆ ಷರತ್ತುಬದ್ದ ಪೂರ್ವಾನ್ವಯ ಅನುಮತಿ ಅವಕಾಶ ನೀಡಲಾಗಿತ್ತು.
- ಮೇ 2025ರಲ್ಲಿ ಈ ಕ್ರಮವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು.
- ಆದರೆ ನವೆಂಬರ್ 2025ರಲ್ಲಿ CREDAI ಅರ್ಜಿಯ ವಿಚಾರಣೆ ವೇಳೆ ಹಿಂದಿನ ತೀರ್ಪಿನಲ್ಲಿ ಸಡಿಲಿಕೆ ನೀಡಲಾಗಿತ್ತು.
ಈ ಮರುಪರಿಶೀಲಿತ ತೀರ್ಪನ್ನೇ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.
-
ಬೆಂಗಳೂರು21 hours agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ಕ್ರೀಡೆ16 hours agoIND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
-
ದೇಶ21 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ದೇಶ18 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ಅಪರಾಧ21 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ16 hours agoHAL ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?
-
ದೇಶ19 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ದೇಶ16 hours agoಜೈರಾಮ್ ರಮೇಶ್ಗೆ ಸುಪ್ರೀಂಕೋರ್ಟ್ ಕಿಡಿ: “ಮಾಧ್ಯಮ ಪ್ರಚಾರಕ್ಕೇ ಅರ್ಜಿ?”
