Connect with us

ಚುನಾವಣೆ

BIG NEWS ಬೆಂಗಳೂರು ನಗರ ರಾಜಕೀಯದಲ್ಲಿ ಮಹತ್ವದ ತಿರುವು: ಪಾಲಿಕೆ ಚುನಾವಣೆ ದಿನಾಂಕ ಘೋಷಣೆ

ಬೆಂಗಳೂರು: ಜೂನ್ ಅಂತ್ಯದೊಳಗೆ ನಗರ ಪಾಲಿಕೆ ಚುನಾವಣೆಗಳನ್ನು ನಡೆಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ 2026ರ ಮೇ 25ರ ನಂತರ, ಜೂನ್ 30ರೊಳಗೆ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜಿ.ಎಸ್. ಸಂಗ್ರೇಶ ಅವರು ಸ್ಪಷ್ಟನೆ ನೀಡಿದ್ದಾರೆ.

ಆಯುಕ್ತರ ಮಾಹಿತಿ ಪ್ರಕಾರ, 2025ರ ಅಕ್ಟೋಬರ್ 1ರ ಮತದಾರರ ಮಾಹಿತಿಯನ್ನು ಆಧಾರವಾಗಿ ತೆಗೆದುಕೊಂಡು ಈಗಾಗಲೇ ಮತದಾರರ ಕರಡು ಪಟ್ಟಿ ತಯಾರಿಸಲಾಗಿದೆ. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಗ್ರ ಪ್ರಕ್ರಿಯೆಯನ್ನು ಆಯೋಗ ರೂಪಿಸಿದೆ.

ಜನವರಿ 20ರಿಂದ ಫೆಬ್ರವರಿ 3ರವರೆಗೆ ಬೂತ್ ಲೆವೆಲ್ ಅಧಿಕಾರಿಗಳು (BLO) ಬೆಂಗಳೂರಿನ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಅವಧಿಯಲ್ಲಿ ಮತದಾರರು ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಅಳವಡಿಕೆಗೆ ಸಂಬಂಧಿಸಿದ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಗೆ ಇದು ಮಹತ್ವದ ಅವಕಾಶವಾಗಿದ್ದು, ತಮ್ಮ ಮತದಾರರ ವಿವರಗಳು ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಯೋಗ ಮನವಿ ಮಾಡಿದೆ.

ಸಲ್ಲಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು ಫೆಬ್ರವರಿ 4ರಿಂದ 18ರವರೆಗೆ ಕೈಗೊಳ್ಳಲಾಗುತ್ತದೆ. ನಂತರ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ, ಮಾರ್ಚ್ 16ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಆಯುಕ್ತ ಜಿ.ಎಸ್. ಸಂಗ್ರೇಶಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಚುನಾವಣಾ ಪ್ರಕ್ರಿಯೆ, ಬೆಂಗಳೂರಿನ ನಗರ ಆಡಳಿತಕ್ಕೆ ಹೊಸ ದಿಕ್ಕು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಚುನಾವಣೆ

ವಿಜಯ್ ರಾಜಕೀಯ ಪ್ರವೇಶಕ್ಕೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ

ನವದೆಹಲಿ: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಹೊಸ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಕಾಲಿಟ್ಟಿರುವ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎನ್‌ಡಿಟಿವಿ ಪ್ರಾಫಿಟ್ ಕಾನ್ಕ್ಲೇವ್‌ನಲ್ಲಿ ಮಾತನಾಡಿದ ಅವರು, ವಿಜಯ್ ರಾಜಕೀಯ ಪ್ರವೇಶ ತಮಿಳುನಾಡು ರಾಜಕಾರಣಕ್ಕೆ ಹೊಸ ತಿರುವು ನೀಡಲಿದೆ ಎಂದು ಅಭಿಪ್ರಾಯಪಟ್ಟರು.

“ದಳಪತಿ ವಿಜಯ್ ಖಂಡಿತವಾಗಿಯೂ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಾರೆ. ಆದರೆ ಅವರು ಯಾವ ಮಟ್ಟಿಗೆ, ಯಾವ ಪಕ್ಷಗಳ ಮತಗಳನ್ನು ಕಸಿದುಕೊಳ್ಳುತ್ತಾರೆ ಎಂಬುದು ಇನ್ನೂ ನೋಡಬೇಕಿದೆ. ವಿಶೇಷವಾಗಿ ಮಹಿಳಾ ಮತಗಳ ಮೇಲೆ ಅವರ ಪ್ರಭಾವ ಎಷ್ಟಿರುತ್ತದೆ ಎಂಬುದೇ ಮುಖ್ಯ ಅಂಶ” ಎಂದು ಸೀತಾರಾಮನ್ ಹೇಳಿದರು. ತಮಿಳುನಾಡು ರಾಜಕೀಯದಲ್ಲಿ ಮಹಿಳೆಯರು ಶಕ್ತಿಶಾಲಿ ಹಾಗೂ ನಿರ್ಧಾರಾತ್ಮಕ ಪಾತ್ರ ವಹಿಸುತ್ತಾರೆ. ಆ ಕಾರಣದಿಂದ ಮುಂದಿನ ಚುನಾವಣೆ ಅತ್ಯಂತ ಆಸಕ್ತಿದಾಯಕವಾಗಲಿದೆ ಎಂದರು.

ಇದೇ ವೇಳೆ, ಆಡಳಿತಾರೂಢ ಡಿಎಂಕೆಗೆ (DMK) ಈ ಬಾರಿ ಎನ್‌ಡಿಎ ಮೈತ್ರಿಕೂಟ (NDA Alliance) ಪ್ರಬಲ ಪೈಪೋಟಿ ನೀಡಲಿದೆ ಎಂದು ಅವರು ಪ್ರತಿಪಾದಿಸಿದರು. “ಬೃಹತ್ ಎನ್‌ಡಿಎ ಒಕ್ಕೂಟವನ್ನು ಎದುರಿಸುತ್ತಿರುವ ಡಿಎಂಕೆ ತನ್ನ ಗೆಲುವಿನ ಬಗ್ಗೆ ಆತ್ಮವಿಶ್ವಾಸದಲ್ಲಿಲ್ಲ. ಕಳೆದ ಒಂದು ವರ್ಷದಲ್ಲಿ ಅವರ ನಡೆ-ನುಡಿಗಳು ಆತಂಕ ಮತ್ತು ಅಸ್ಥಿರತೆಯನ್ನು ತೋರಿಸುತ್ತಿವೆ” ಎಂದು ಟೀಕಿಸಿದರು.

ಡಿಎಂಕೆ ಮಂತ್ರಿಗಳ ವಿವಾದಾತ್ಮಕ ಹೇಳಿಕೆಗಳು, ಉಚಿತ ಕೊಡುಗೆಗಳ ಘೋಷಣೆ, ದೇವಾಲಯ ಬೇಟಿ ಮುಂತಾದ ಕ್ರಮಗಳು ಪಕ್ಷದ ಆತಂಕವನ್ನು ಸ್ಪಷ್ಟಪಡಿಸುತ್ತವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. “ತಮಿಳುನಾಡಿನ ಅಭಿವೃದ್ಧಿ ಬಗ್ಗೆ ಮಾತನಾಡುವುದರಿಂದ ಮಾತ್ರ ಮತಗಳನ್ನು ಗಳಿಸಲು ಸಾಧ್ಯವಿಲ್ಲ. ಇದು ಡಿಎಂಕೆಯ ಪ್ರಮುಖ ಮಿತಿ. ಈ ಸತ್ಯವನ್ನು ಡಿಎಂಕೆಯೂ ಅರಿತಿದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ದಳಪತಿ ವಿಜಯ್ ರಾಜಕೀಯ ಪ್ರವೇಶ, ಮಹಿಳಾ ಮತಗಳ ಪಾತ್ರ ಮತ್ತು ಎನ್‌ಡಿಎ–ಡಿಎಂಕೆ ನಡುವಿನ ಪೈಪೋಟಿ ತಮಿಳುನಾಡು ಚುನಾವಣೆಯನ್ನು ಮತ್ತಷ್ಟು ಕುತೂಹಲಕಾರಿಯಾಗಿಸುತ್ತಿದೆ.

Continue Reading

ಚುನಾವಣೆ

BENGALURU ಜಿಬಿಎ ಚುನಾವಣೆ ಮುನ್ನ ಶಿವನಪಾಳ್ಯ ವಾರ್ಡ್‌ನಲ್ಲಿ ಮತಗಟ್ಟೆ ಗೊಂದಲ

ಬೆಂಗಳೂರು, ಫೆಬ್ರವರಿ 7, 2026: ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ, ಯಶವಂತಪುರ ವಿಧಾನಸಭಾ ಕ್ಷೇತ್ರದ ಶಿವನಪಾಳ್ಯ ವಾರ್ಡ್ (ಸಂಖ್ಯೆ 19) ವ್ಯಾಪ್ತಿಯಲ್ಲಿ ಮತಗಟ್ಟೆಗಳ ವಿಂಗಡಣೆಯಲ್ಲಿ ಭಾರೀ ಅವ್ಯವಸ್ಥೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಜಿಬಿಎ ಚುನಾವಣೆ ಆಕಾಂಕ್ಷಿ ಅಭ್ಯರ್ಥಿಯಾಗಿರುವ ಸಿ.ಎಂ. ಸತ್ಯನಾರಾಯಣ್ (CMC) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತಗಟ್ಟೆಗಳ ಪಟ್ಟಿಯಲ್ಲಿ ಗಂಭೀರ ತಪ್ಪುಗಳಿರುವುದನ್ನು ಉಲ್ಲೇಖಿಸಿ, ಬಿಜೆಪಿಯ ಬಿಎಲ್‍ಎ1 ದೀಪಕ್ ಕುಮಾರ್ ಅವರ ಮೂಲಕ ಕಂದಾಯ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ. ದೂರಿನಲ್ಲಿ, ಸ್ಥಳ ಪರಿಶೀಲನೆ ನಡೆಸದೇ ಮತಗಟ್ಟೆಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಿರುವುದೇ ಗೊಂದಲಕ್ಕೆ ಕಾರಣವಾಗಿದೆ ಎಂದು ತಿಳಿಸಲಾಗಿದೆ.

ದೂರು ಪ್ರಕಾರ, ಲಿಂಗಾಯತರ ಬೀದಿ, ಅಂಗಡಿ ಬೀದಿ, ಹಸಿ ಕರಗ ಮಂಟಪ ಹಾಗೂ ಹರ್ಷ ಲೇಔಟ್ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 21 ರಿಂದ 31 ರವರೆಗಿನ ಪ್ರದೇಶಗಳು ವಾಸ್ತವವಾಗಿ ಕೆಂಗೇರಿ ವಾರ್ಡ್‌ಗೆ ಸೇರಬೇಕಿದ್ದರೂ, ತಪ್ಪಾಗಿ ಶಿವನಪಾಳ್ಯ ವಾರ್ಡ್‌ಗೆ ಸೇರಿಸಲಾಗಿದೆ. ಇದೇ ರೀತಿ, ಬಾಬಾ ಸಾಬ್ ಪಾಳ್ಯ ಗ್ರಾಮಕ್ಕೆ ಸೇರಿದ ಮತಗಟ್ಟೆ ಸಂಖ್ಯೆ 32 ಮತ್ತು 33 ಕೂಡ ಶಿವನಪಾಳ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಇದಲ್ಲದೆ, ಬಂಡೆ ಮಠ ರಸ್ತೆಯ ಮತಗಟ್ಟೆ ಸಂಖ್ಯೆ 34 ಮತ್ತು 35 ಕೆಂಗಲ್ ಹನುಮಂತಯ್ಯ ವಾರ್ಡ್‌ಗೆ (ವಾರ್ಡ್ 18) ಸೇರಬೇಕಿದ್ದರೂ, ಶಿವನಪಾಳ್ಯ ವಾರ್ಡ್‌ಗೆ ಸೇರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಿಬಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ಮತಗಟ್ಟೆ ಸಂಖ್ಯೆ 19ರ ಮಾಹಿತಿ ಲಭ್ಯವಿಲ್ಲದಿರುವುದು ಮತದಾರರಲ್ಲಿ ಗೊಂದಲ ಮತ್ತು ಆತಂಕವನ್ನು ಹೆಚ್ಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಿ.ಎಂ. ಸತ್ಯನಾರಾಯಣ್, “ಕ್ಷೇತ್ರ ಸಮೀಕ್ಷೆ ಇಲ್ಲದೆ ಮತದಾರರ ಪಟ್ಟಿ ಸಿದ್ಧಪಡಿಸಿರುವುದು ಪ್ರಜಾಪ್ರಭುತ್ವದ ಪ್ರಕ್ರಿಯೆಗೆ ಧಕ್ಕೆ ತರುತ್ತದೆ. ಕೂಡಲೇ ತಪ್ಪುಗಳನ್ನು ಸರಿಪಡಿಸಿ, ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಮತಗಟ್ಟೆ ಮರುಹಂಚಿಕೆ ಮಾಡಬೇಕು,” ಎಂದು ಆಗ್ರಹಿಸಿದರು. ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

Continue Reading

ಚುನಾವಣೆ

GBA ELECTION : ಬಿಜೆಪಿ ಕಚೇರಿಯಲ್ಲಿ ಜಿಬಿಎ ಚುನಾವಣೆ ಕುರಿತು ಮಹತ್ವದ ಸಭೆ

ಬೆಂಗಳೂರು: ಜಿಬಿಎ ಚುನಾವಣೆ (GBA Election) ಯಾವಾಗಲೇ ನಡೆದರೂ 5 ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ (BJP) ಗೆಲುವು ಸಾಧಿಸುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y Vijayendra) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಜಿಬಿಎ ಚುನಾವಣೆ ಕುರಿತು ನಡೆದ ಮಹತ್ವದ ಸಭೆಯ ಬಳಿಕ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಚುನಾವಣೆ ಉಸ್ತುವಾರಿ ರಾಮ್ ಮಾಧವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಬಿಎ ಚುನಾವಣೆಗೆ ಸಂಬಂಧಿಸಿದ ಸವಿಸ್ತಾರ ಚರ್ಚೆ ನಡೆಸಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, “ಜಿಬಿಎ ಚುನಾವಣೆ ಯಾವಾಗ ನಡೆದರೂ ನಾವು ಗೆದ್ದೇ ಗೆಲ್ಲುತ್ತೇವೆ. 5 ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಗೆಲ್ಲುವ ಅವಕಾಶವಿದೆ. ಆದಷ್ಟು ಬೇಗ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕು” ಎಂದು ಹೇಳಿದರು.

ಫೆಬ್ರವರಿ 28 ಹಾಗೂ ಮಾರ್ಚ್ 1ರಂದು ಐದು ಮಹಾನಗರ ಪಾಲಿಕೆಗಳಿಗೆ ಸಂಬಂಧಿಸಿದ ಪ್ರತ್ಯೇಕ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆಯನ್ನು ಮುಂದುವರಿಸಿದ ವಿಜಯೇಂದ್ರ, “ಬೆಂಗಳೂರು ಮಹಾನಗರಕ್ಕೆ ಕಾಂಗ್ರೆಸ್ ಸರ್ಕಾರ ಹಾಗೂ ಉಸ್ತುವಾರಿ ಸಚಿವರು ಯಾವುದೇ ಆದ್ಯತೆ ನೀಡಿಲ್ಲ. ಟನಲ್ ರೋಡ್ ಬಗ್ಗೆ ಮಾತನಾಡುವ ಸರ್ಕಾರಕ್ಕೆ ಒಂದು ಗುಂಡಿ ಮುಚ್ಚುವ ಸಾಮರ್ಥ್ಯವೂ ಇಲ್ಲ” ಎಂದು ವಾಗ್ದಾಳಿ ನಡೆಸಿದರು.

ಡಿ.ಕೆ. ಶಿವಕುಮಾರ್ ಅವರ ನಡವಳಿಕೆಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದ ಅವರು, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ನಡೆದ ಅಭಿವೃದ್ಧಿಯನ್ನು ಜನರ ಮುಂದೆ ಇಡುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಅಭಿಯಾನ ನಡೆಸಲಾಗುವುದು ಎಂದರು.

ಇದೇ ವೇಳೆ ಜಿಬಿಎ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಹಾಗೂ ಸೀಟು ಹಂಚಿಕೆ ವಿಚಾರವಾಗಿ ಹಿರಿಯ ನಾಯಕರ ತಂಡ ರಚಿಸಿ ಚರ್ಚೆ ನಡೆಸಲಾಗುವುದು ಎಂದು ವಿಜಯೇಂದ್ರ ಹೇಳಿದರು. ದೇವೇಗೌಡರು ಸೇರಿದಂತೆ ಹಲವು ನಾಯಕರು ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ, ರಾಷ್ಟ್ರೀಯ ನಾಯಕತ್ವದ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸ್ಪಷ್ಟಪಡಿಸಿದರು.

Continue Reading

Trending