Blog

ಆಯುಧ ಪೂಜೆ ಮಹತ್ವ​

ಆಯುಧ ಪೂಜೆ ಮಹತ್ವ​

ಆಯುಧ ಪೂಜೆಯ ಕಥೆ:
ರಾಕ್ಷಸ ಮಹಿಷಾಸುರನನ್ನು ಸಂಹಾರ ಮಾಡಲು ಎಲ್ಲಾ ದೇವತೆಗಳು ತಮ್ಮಲ್ಲಿದ್ದ ಆಯುಧಗಳನ್ನು ದುರ್ಗಾ ದೇವಿಗೆ ನೀಡುತ್ತಾರೆ. ದೇವರುಗಳು ತಮ್ಮಲ್ಲಿದ್ದ ಆಯುಧಗಳನ್ನು ಮಾತ್ರವಲ್ಲ. ತಮ್ಮ ಎಲ್ಲಾ ಶಕ್ತಿಗಳನ್ನು ಕೂಡ ಒಟ್ಟುಗೂಡಿಸಿದಾಗ ದುರ್ಗಾ ದೇವಿಯು 10 ಕೈಗಳಿಂದ ಪ್ರಕಟಗೊಂಡಳು. ಅವಳು ತನ್ನ ಪ್ರತಿಯೊಂದು ಕೈಗಳಲ್ಲಿಯೂ ಆಯುಧವನ್ನು ಹಿಡಿದುಕೊಂಡಿದ್ದಳು. ಮಹಿಷಾಸುರನ ಸಂಹಾರಕ್ಕಾಗಿ ದುರ್ಗಾ ದೇವಿ ಮತ್ತು ಮಹಿಷಾಸುರನ ನಡುವೆ 9 ದಿನಗಳ ಸುದೀರ್ಘ ಯುದ್ಧ ನಡೆಯಿತು. ನಂತರ 10ನೇ ದಿನದಂದು ದುರ್ಗಾ ದೇವಿಯು ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ. ಯುದ್ಧ ಮುಗಿದ ನಂತರ ತಾಯಿಯ ಬಳಿಯಿದ್ದ ಎಲ್ಲಾ ಆಯುಧಗಳನ್ನು ಆಯಾ ದೇವರಿಗೆ ಒಪ್ಪಿಸಬೇಕಾಗಿತ್ತು. ಇದಕ್ಕೂ ಮುನ್ನ ಆ ಎಲ್ಲಾ ಆಯುಧಗಳನ್ನು ಶುದ್ಧಗೊಳಿಸುವುದು ತುಂಬಾನೇ ಅವಶ್ಯಕವಾಗಿತ್ತು. ಈ ಕಾರಣಕ್ಕಾಗಿ ದುರ್ಗಾ ದೇವಿಯು ಬಳಸಿದ್ದ ಎಲ್ಲಾ ಆಯುಧಗಳನ್ನು ಸ್ವಚ್ಛಗೊಳಿಸಿ ನಂತರ ಅವುಗಳನ್ನು ಪೂಜಿಸಿ ಆಯುಧಗಳನ್ನು ಹಿಂಪಡೆದುಕೊಂಡರು. ಇದರ ನೆನಪಿಗಾಗಿ ಆಯುಧ ಪೂಜೆಯನ್ನು ಮಾಡಲಾಗುತ್ತದೆ.
ಆಯುಧ ಪೂಜೆಯು ದುರ್ಗಾ ದೇವಿಗೆ ಸಂಬಂಧಿಸಿದ ಪೂಜೆಯಾಗಿದೆ. ಇದನ್ನು ನವರಾತ್ರಿಯಲ್ಲಿ ಆಚರಿಸಲಾಗುತ್ತದೆ. ದಸರಾದ ಮೊದಲು ಆಯುಧ ಪೂಜೆಯಲ್ಲಿ ಆಯುಧಗಳು, ವಾದ್ಯಗಳು ಮತ್ತು ಉಪಕರಣಗಳನ್ನು ಪೂಜಿಸುವುದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆಯಿದೆ. ಪ್ರಾಚೀನ ಕಾಲದಲ್ಲಿ, ಕ್ಷತ್ರಿಯರು ಯುದ್ಧಕ್ಕೆ ಹೋಗಲು ದಸರಾ ದಿನವನ್ನು ಆರಿಸಿಕೊಳ್ಳುತ್ತಿದ್ದರು, ಇದರಿಂದ ಅವರು ವಿಜಯದ ವರವನ್ನು ಪಡೆಯಬಹುದು ಎನ್ನುವ ನಂಬಿಕೆಯಿತ್ತು. ಇದಲ್ಲದೆ, ಪ್ರಾಚೀನ ಕಾಲದಲ್ಲಿ, ಬ್ರಾಹ್ಮಣರು ಸಹ ದಸರಾ ದಿನದಂದು ಜ್ಞಾನವನ್ನು ಪಡೆಯಲು ತಮ್ಮ ಮನೆಯಿಂದ ಹೊರಗೆ ಬರುತ್ತಿದ್ದರು ಮತ್ತು ವ್ಯಾಪಾರ ವರ್ಗದವರು ಸಹ ದಸರಾ ದಿನದಂದು ತಮ್ಮ ವ್ಯವಹಾರವನ್ನು ಪ್ರಾರಂಭಿಸುವುದು ಒಳ್ಳೆಯದು ಎಂದು ಪರಿಗಣಿಸಿದ್ದರು. ಇದೇ ಕಾರಣಕ್ಕೆ ದಸರಾಕ್ಕೂ ಮುನ್ನ ಆಯುಧ ಪೂಜೆಯನ್ನು ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ.
ಈ ದಿನ ನಾವು ಬಳಸುವ ಪ್ರತಿಯೊಂದು ಆಯುಧಗಳನ್ನು ಅಥವಾ ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಶುದ್ಧಗೊಳಿಸಿ ಪೂಜಿಸಲಾಗುತ್ತದೆ. ಕೆಲವು ಭಕ್ತರು ದೇವಿಯ ಆಶೀರ್ವಾದ ಪಡೆಯಲು ತಮ್ಮ ವಿಜಯದ ಸಾಧನೆಗಳನ್ನು ಅಂದರೆ ತಮ್ಮ ಸಾಧನಗಳನ್ನು ದೇವಿಯ ಮುಂದೆ ಇಡುತ್ತಾರೆ. ಶಾಸ್ತ್ರಪೂಜೆಯ ದಿನದಂದು ಪುಸ್ತಕಗಳನ್ನು, ಪೆನ್ನುಗಳು, ಚಾಕುಗಳು, ಕತ್ತರಿಗಳು, ಸಂಗೀತ ಉಪಕರಣಗಳು, ಕರಕುಶಲ ವಸ್ತುಗಳು ಮುಂತಾದ ಚಿಕ್ಕ ವಸ್ತುಗಳಿಂದ ಹಿಡಿದು ದೊಡ್ಡ ಯಂತ್ರಗಳು, ವಾಹನಗಳು, ಬಸ್ಸುಗಳು ಇತ್ಯಾದಿಗಳನ್ನು ಪೂಜಿಸುತ್ತಾರೆ. ಕೆಲವರು ಬ್ರಾಹ್ಮಾಣರ ಸಹಾಯದಿಂದ ಪೂಜೆಯನ್ನು ಮಾಡಿದರೆ, ಇನ್ನು ಕೆಲವರು ತಾವೇ ಸ್ವತಃ ಪೂಜೆಯನ್ನು ಮಾಡುತ್ತಾರೆ.

Trending

Exit mobile version