ಕ್ರೀಡೆ
ಆಸ್ಟ್ರೇಲಿಯಾ ಗೆಲುವಿನಿಂದ ಪಾಕ್ಗೆ ಒತ್ತಡ, ಎಲ್ಲಾ ತಂಡಗಳ ಸೆಮಿಫೈನಲ್ಸ್ಗೆ ಲೆಕ್ಕಾಚಾರ
ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲಾವಧಿ ಬಹುತೇಕ ಮುಗಿದಿದೆ. ಇದೀಗ ವಿಶ್ವಕಪ್ ಸೆಮಿಫೈನಲ್ಸ್ಗೆ ಅರ್ಹತೆ ಪಡೆಯುವ ಸಲುವಾಗಿ ಟೂರ್ನಿಯ ಎರಡನೇ ಅವಧಿಯ ಪಂದ್ಯಗಳು ಎಲ್ಲಾ ತಂಡಗಳಿಗೆ ನಿರ್ಣಯಕವಾಗಿವೆ. ಬುಧವಾರ ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾ ತಂಡ 309 ರನ್ಗಳ ಭಾರಿ ಅಂತರದಲ್ಲಿ ಗೆಲುವು ಪಡೆದ ಬಳಿಕ ಕೆಲ ತಂಡಗಳ ಸೆಮಿಫೈನಲ್ಸ್ ಹಾದಿ ಅತ್ಯಂತ ಕಠಿಣವಾಗಿದೆ.
ಅದರಂತೆ ಹಲವು ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನ ತಂಡ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದ ಬಳಿಕ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಭಾರತ, ಆಸ್ಟ್ರೇಲಿಯಾ ಹಾಗೂ ಅಫಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಪಾಕ್ ಸೋಲು ಅನುಭವಿಸಿತ್ತು. ಆದರೂ ಇನ್ನುಳಿದ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಸ್ಗೆ ಅರ್ಹತೆ ಪಡೆಯಬೇಕೆಂದು ಪ್ಲಾನ್ ಮಾಡಿಕೊಂಡಿತ್ತು. ಆದರೆ, ಆಸ್ಟ್ರೇಲಿಯಾ ತಂಡ ದಾಖಲೆಯ ಜಯ ಪಡೆದು ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿರುವ ಕಾರಣ, ಪಾಕ್ಗೆ ಭಾರಿ ಹಿನ್ನಡೆಯಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಆಸ್ಟ್ರೇಲಿಯಾ ತಂಡ, ನಂತರ ಸತತ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಅದರಲ್ಲೂ ಬುಧವಾರ ನೆದರ್ಲೆಂಡ್ಸ್ ವಿರುದ್ಧ 309 ರನ್ಗಳ ಭಾರಿ ಅಂತರದ ಜಯದಿಂದ ಆಸ್ಟ್ರೇಲಿಯಾ ತಂಡದ ರನ್ರೇಟ್ನಲ್ಲಿ ಏರಿಕೆಯಾಗಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ದಿಲ್ಲಿಯ ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ 40ನೇ ಓವರ್ನಲ್ಲಿ ಕ್ರೀಸ್ಗೆ ಬಂದ ಮ್ಯಾಕ್ಸ್ವೆಲ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ನೆದರ್ಲೆಂಡ್ಸ್ ಬೌಲರ್ಗಳಿಗೆ ಭಯ ಹುಟ್ಟಿಸಿದರು. ಮಕ್ಕಳ ಬೌಲಿಂಗ್ಗೆ ಆಡುವಂತೆ ಮ್ಯಾಕ್ಸ್ವೆಲ್ ಬ್ಯಾಟ್ ಬೀಸಿದರು. ಅವರು ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್ಗಳ ಮೂಲಕ 240.91 ಸ್ಟ್ರೈಕ್ ರೇಟ್ನಲ್ಲಿ 106 ರನ್ ಬಾರಿಸಿದರು. ಇದರ ಪರಿಣಾಮ ಹಲವು ತಂಡಗಳು ಸೆಮಿಫೈನಲ್ಸ್ ರೇಸ್ನಿಂದ ಬಹುತೇಕ ಹೊರಬಿದ್ದಿವೆ.
ವಿಶ್ವಕಪ್ ಸೆಮಿಫೈನಲ್ಸ್ಗೆ ಅರ್ಹತೆ ಪಡೆಯಲು ಒಂದು ತಂಡಕ್ಕೆ 7 ಗೆಲುವುಗಳು ಅಂದರೆ 14 ಅಂಕಗಳ ಅಗತ್ಯವಿದೆ. ಆದರೆ 12 ಅಂಕಗಳನ್ನು ಪಡೆದರೂ ಅಗ್ರ-4ಕ್ಕೆ ಪ್ರವೇಶ ಪಡೆಯಬಹುದು. ಟೂರ್ನಿಯ ಸೆಮಿಫೈನಲ್ಸ್ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಮುಂದಿನ ಪಂದ್ಯಗಳು ಎಲ್ಲಾ ತಂಡಗಳಿಗೆ ನಿರ್ಣಾಯಕವಾಗಿವೆ. ಪ್ರಸ್ತುತ ಭಾರತ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ಸೆಮಿಫೈನಲ್ಸ್ ಹಾದಿ ಸುಲಭವಾಗಿದೆ. ಭಾರತ 5 ಗೆಲುವಿನ ನಂತರ 10 ಅಂಕಗಳನ್ನು ಹೊಂದಿದ್ದರೆ, ದಕ್ಷಿಣ ಆಫ್ರಿಕಾ 5 ರಲ್ಲಿ 4 ಗೆಲುವಿನ ನಂತರ 8 ಅಂಕಗಳನ್ನು ಪಡೆದುಕೊಂಡಿದೆ ಹಾಗೂ ನ್ಯೂಜಿಲೆಂಡ್ 5 ರಲ್ಲಿ 4 ಗೆಲುವಿನ ಬಳಿಕ 8 ಅಂಕಗಳನ್ನು ಹೊಂದಿದೆ. ಈ ಮೂರೂ ತಂಡಗಳ ನೆಟ್ ರನ್ರೇಟ್ ಪ್ಲಸ್ ಆಗಿದೆ.
ಆಸ್ಟ್ರೇಲಿಯಾ 6 ಅಂಕಗಳೊಂದಿಗೆ +1.142ರ ಅತ್ಯುತ್ತಮ ರನ್ರೇಟ್ ಹೊಂದಿದೆ. ಆ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ 5ನೇ ಸ್ಥಾನದಲ್ಲಿದ್ದು, ಅಪಘಾನಿಸ್ತಾನ ಆರನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ತಲಾ 2 ಗೆಲುವಿನಿಂದ 4 ಅಂಕಗಳನ್ನು ಹೊಂದಿವೆ. ಈ ಎರಡೂ ತಂಡಗಳಿಗೆ ಇನ್ನೂ 4 ಪಂದ್ಯಗಳು ಬಾಕಿ ಇವೆ ಹಾಗೂ 12 ಅಂಕಗಳನ್ನು ಕಲೆ ಹಾಕಲು ಮಾತ್ರ ಅವಕಾಶವಿದೆ. ಆದರೆ, ಆಸ್ಟ್ರೇಲಿಯಾ ಇನ್ನುಳಿದ 4ರಲ್ಲಿಯೂ ಗೆದ್ದರೆ 14 ಅಂಕಗಳನ್ನು ದಾಖಲಿಸಲಿದೆ. ಇದು ಈ ಎರಡೂ ತಂಡಗಳಿಗೆ ಹಿನ್ನಡೆಯನ್ನು ತಂದೊಡ್ಡಬಹುದು. ಇನ್ನು ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ಆಡಿರುವ 4 ಪಂದ್ಯಗಳಿಂದ ಮೂರರಲ್ಲಿ ಸೋತು, ಕೇವಲ ಒಂದರಲ್ಲಿ ಜಯಿಸಿದೆ. ಆದರೂ ಇನ್ನುಳಿದ 5 ಪಂದ್ಯಗಳಲ್ಲಿ ಗೆದ್ದು ಇಂಗ್ಲೆಂಡ್ ಕೂಡ 12 ಅಂಕಗಳನ್ನು ಕಲೆ ಹಾಕಲಿದೆ.
ಮತ್ತೊಂದೆಡೆ ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ತಂಡಗಳು ತಲಾ 5 ಪಂದ್ಯಗಳನ್ನು ಆಡಿದ್ದು, ಒಂದೊಂದು ಪಂದ್ಯದಲ್ಲಿ ಜಯಿಸಿವೆ. ಆ ಮೂಲಕ ಟೂರ್ನಿಯ ಸೆಮಿಫೈನಲ್ಸ್ ರೇಸ್ನಿಂದ ಬಹುತೇಕ ಹೊರಬಿದ್ದಿವೆ. ಆದರೆ, ಈ ತಂಡಗಳು ಇನ್ನುಳಿದ 4 ಪಂದ್ಯಗಳಲ್ಲಿ ಗೆದ್ದರೂ ಒಟ್ಟಾರೆ 9 ಅಂಕಗಳನ್ನು ಕಲೆ ಹಾಕಬಹುದಷ್ಟೆ. ಈ ಎರಡೂ ತಂಡಗಳು ಎದುರಾಳಿ ತಂಡಗಳನ್ನು ಸೋಲಿಸಿದರೆ, ಸೆಮಿಫೈನಲ್ಸ್ ಚಿತ್ರಣ ಸ್ವಲ್ಪ ಬದಲಾಗಬಹುದು. ಅಂದ ಹಾಗೆ ಇನ್ನುಳಿದ ಪಂದ್ಯಗಳನ್ನು ಗೆದ್ದು ಟೂರ್ನಿಯಿಂದ ಗೌರವಯುತವಾಗಿ ನಿರ್ಗಮಿಸಿಲು ಬಾಂಗ್ಲಾ, ನೆದರ್ಲೆಂಡ್ಸ್ ಎದುರು ನೋಡುತ್ತಿವೆ.
ಕ್ರೀಡೆ
ಫಿಫಾ ವಿಶ್ವಕಪ್ 2026 ಆರಂಭ: ಜಗತ್ತೆಲ್ಲಾ ಫುಟ್ಬಾಲ್ ಜ್ವರದಲ್ಲಿ
ಜಗತ್ತಿನಾದ್ಯಂತ ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ FIFA World Cup 2026 ಕೊನೆಗೂ ಆರಂಭವಾಗುತ್ತಿದೆ. ಜೂನ್ 11ರಿಂದ ಅಧಿಕೃತವಾಗಿ ಆರಂಭವಾಗಲಿರುವ ಈ ಮಹಾಕ್ರೀಡಾಕೂಟವು ಇಡೀ ವಿಶ್ವವನ್ನು ಫುಟ್ಬಾಲ್ ಜ್ವರದಲ್ಲಿ ಮುಳುಗಿಸಲಿದೆ.
ಈ ಬಾರಿ ಉತ್ತರ ಅಮೆರಿಕದ ಅಮೆರಿಕಾ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ. ಫಿಫಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳು ಒಟ್ಟಾಗಿ ವಿಶ್ವಕಪ್ ಆಯೋಜಿಸುತ್ತಿದ್ದು, ಇದು 23ನೇ ಆವೃತ್ತಿಯ ಟೂರ್ನಿಯಾಗಲಿದೆ.
ಈ ವಿಶ್ವಕಪ್ನಲ್ಲಿ ಪ್ರಮುಖ ಬದಲಾವಣೆಗಳೂ ನಡೆದಿವೆ. ಮೊದಲ ಬಾರಿ 32 ತಂಡಗಳ ಬದಲು ಒಟ್ಟು 48 ತಂಡಗಳು ಭಾಗವಹಿಸುತ್ತಿದ್ದು, ಪಂದ್ಯಗಳ ಸಂಖ್ಯೆ 64ರಿಂದ 104ಕ್ಕೆ ಏರಿಕೆಯಾಗಿದೆ. ಒಟ್ಟು 39 ದಿನಗಳ ಕಾಲ ನಡೆಯುವ ಈ ಟೂರ್ನಿ ಜುಲೈ 19ರಂದು ನ್ಯೂಯಾರ್ಕ್–ನ್ಯೂಜೆರ್ಸಿಯಲ್ಲಿ ನಡೆಯುವ ಫೈನಲ್ ಪಂದ್ಯದಿಂದ ಅಂತ್ಯಗೊಳ್ಳಲಿದೆ.
ಹೊಸ ಮಾದರಿಯಲ್ಲಿ 48 ತಂಡಗಳನ್ನು 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಟಾಪ್ ಎರಡು ತಂಡಗಳು ಹಾಗೂ ಅತ್ಯುತ್ತಮ ಮೂರನೇ ಸ್ಥಾನ ಪಡೆದ ತಂಡಗಳು ಸೇರಿ ಒಟ್ಟು 32 ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಲಿವೆ. ನಂತರ ರೌಂಡ್ ಆಫ್ 32 ರಿಂದ ನೇರ ಎಲಿಮಿನೇಷನ್ ಹಂತ ಆರಂಭವಾಗಲಿದೆ.
ತಂತ್ರಜ್ಞಾನ ಬಳಕೆಯನ್ನೂ ಹೆಚ್ಚಿಸಲಾಗಿದ್ದು ವಿಡಿಯೋ ಅಸಿಸ್ಟೆಂಟ್ ರೆಫರಿ (VAR)ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಜೊತೆಗೆ ಮೈದಾನದಲ್ಲಿ ಸಂವಹನ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ನಿಯಮಗಳನ್ನೂ ಜಾರಿಗೆ ತರಲಾಗಿದೆ.
ಭಾರತೀಯ ಅಭಿಮಾನಿಗಳಿಗೆ ಪಂದ್ಯಗಳು ತಡರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಪ್ರಸಾರವಾಗಲಿವೆ. ಮೆಕ್ಸಿಕೋ ನಗರದ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಈ ವಿಶ್ವಕಪ್ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೋ ಅವರ ಕೊನೆಯ ವಿಶ್ವಕಪ್ ಆಗಬಹುದು ಎಂಬ ಊಹೆಗಳು ಕೂಡ ಅಭಿಮಾನಿಗಳ ಕುತೂಹಲ ಹೆಚ್ಚಿಸಿವೆ. ಬ್ರೆಜಿಲ್, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಬಲಿಷ್ಠ ತಂಡಗಳ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.
ಕ್ರೀಡೆ
ದೇವಾಂಗ ಯೂನಿಯನ್ ಶತಮಾನೋತ್ಸವ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಯಂಗ್ ಓರಿಯನ್ಸ್ ಚಾಂಪಿಯನ್
ಬೆಂಗಳೂರು: ದೇವಾಂಗ ಯೂನಿಯನ್ ಶತಮಾನೋತ್ಸವ ಹಾಗೂ ಪ್ರೊ. ಎನ್.ಸಿ. ಪರಪ್ಪ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಆಹ್ವಾನಿತ ಪುರುಷರ ಫ್ಲಡ್ಲೈಟ್ ಬ್ಯಾಸ್ಕೆಟ್ಬಾಲ್ ಟೂರ್ನಿ-2026 ರೋಚಕ ಪಂದ್ಯಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಜೂನ್ 7ರಂದು ದೇವಾಂಗ ಯೂನಿಯನ್ ಕೋರ್ಟ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ Young Orion’s SC ತಂಡವು GST & Customs ತಂಡವನ್ನು 84-71 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಸೆಮಿಫೈನಲ್ ಫಲಿತಾಂಶ
ಮೊದಲ ಸೆಮಿಫೈನಲ್ನಲ್ಲಿ Young Orion’s SC ತಂಡವು DYES ಬೆಂಗಳೂರು ವಿರುದ್ಧ 80-72 ಅಂಕಗಳ ಗೆಲುವು ಸಾಧಿಸಿತು. ಯಂಗ್ ಓರಿಯನ್ಸ್ ಪರ ಅರ್ಜುನ್ ಯಾದವ್ 22 ಹಾಗೂ ಶಶಾಂಕ್ 14 ಅಂಕಗಳನ್ನು ಗಳಿಸಿದರೆ, DYES ಪರ ಮನೋಜ್ 24 ಹಾಗೂ ಬತೇಶ್ 16 ಅಂಕಗಳನ್ನು ದಾಖಲಿಸಿದರು. ಅರ್ಧಾವಧಿಯಲ್ಲಿ ಯಂಗ್ ಓರಿಯನ್ಸ್ 41-40 ಅಂಕಗಳಿಂದ ಮುನ್ನಡೆಯಲ್ಲಿತ್ತು.
ಎರಡನೇ ಸೆಮಿಫೈನಲ್ನಲ್ಲಿ GST & Customs ತಂಡವು Bank of Baroda ವಿರುದ್ಧ 71-63 ಅಂಕಗಳಿಂದ ಗೆಲುವು ದಾಖಲಿಸಿತು. GST & Customs ಪರ ಧೀರಜ್ ರೆಡ್ಡಿ 25 ಹಾಗೂ ಪ್ರತ್ಯಾಂಶು ತೋಮರ್ 12 ಅಂಕಗಳನ್ನು ಗಳಿಸಿದರು.
ಫೈನಲ್ನಲ್ಲಿ ಯಂಗ್ ಓರಿಯನ್ಸ್ ಪ್ರಾಬಲ್ಯ
ಅಂತಿಮ ಪಂದ್ಯದಲ್ಲಿ ಯಂಗ್ ಓರಿಯನ್ಸ್ ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿತು. ಸುಮಂತ್ 20 ಹಾಗೂ ಅಭಿಷೇಕ್ ಗೌಡ 16 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. GST & Customs ಪರ ಧೀರಜ್ ರೆಡ್ಡಿ 23 ಹಾಗೂ ಪ್ರತ್ಯಾಂಶು ತೋಮರ್ 22 ಅಂಕಗಳನ್ನು ಗಳಿಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಅರ್ಧಾವಧಿಯಲ್ಲಿ 46-35 ಅಂಕಗಳ ಮುನ್ನಡೆ ಸಾಧಿಸಿದ್ದ ಯಂಗ್ ಓರಿಯನ್ಸ್, ಅಂತಿಮವಾಗಿ 84-71 ಅಂಕಗಳ ಅಂತರದಿಂದ ಜಯ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬಹುಮಾನ ವಿತರಣೆ
ಚಾಂಪಿಯನ್ ಆಗಿ ಹೊರಹೊಮ್ಮಿದ Young Orion’s SC ತಂಡಕ್ಕೆ ₹75,000 ನಗದು ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು. ರನ್ನರ್-ಅಪ್ GST & Customs ತಂಡಕ್ಕೆ ₹50,000 ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಯುವ ಆಟಗಾರರಿಗೆ ಕೆ. ಗೋವಿಂದರಾಜ್ ಪ್ರೋತ್ಸಾಹ
ಪಂದ್ಯಾವಳಿ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ K. Govindaraj ಅವರು ಯುವ ಆಟಗಾರರನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು, ಸಮರ್ಪಣೆ ಮತ್ತು ನಿರಂತರ ಪರಿಶ್ರಮದ ಮಹತ್ವವನ್ನು ವಿವರಿಸಿದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಯುವ ಕ್ರೀಡಾಪಟುಗಳು ಕಠಿಣ ಪರಿಶ್ರಮದೊಂದಿಗೆ ಮುಂದುವರಿಯಬೇಕು ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ದೇವಾಂಗ ಯೂನಿಯನ್ ಅಧ್ಯಕ್ಷ Jayaram, ಕಾರ್ಯದರ್ಶಿ Vardharaju ಹಾಗೂ ದೇವಾಂಗ ಯೂನಿಯನ್ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳ ಭಾಗವಹಿಸುವಿಕೆಯಿಂದ ಈ ಟೂರ್ನಿ ಯಶಸ್ವಿಯಾಗಿ ನೆರವೇರಿದ್ದು, ಯುವ ಬ್ಯಾಸ್ಕೆಟ್ಬಾಲ್ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿತ್ತು.
ಕ್ರೀಡೆ
ಕೆಎಲ್ ರಾಹುಲ್ಗೆ ‘ಆಸ್ಕರ್’ ಟೀಕೆ! ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ನಲ್ಲಿ ವಿವಾದ
ಮುಲ್ಲನ್ಪುರ, ಜೂ.6: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ K. L. Rahul ಅವರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚೆಂಡು ಬ್ಯಾಟ್ಗೆ ತಗುಲಿದ್ದರೂ ಕ್ರೀಸ್ನಲ್ಲೇ ಉಳಿದ ರಾಹುಲ್ ವಿರುದ್ಧ ಕೆಲ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯದ 11ನೇ ಓವರ್ನಲ್ಲಿ ಅಫ್ಘಾನಿಸ್ತಾನದ ಬೌಲರ್ Zia-ur-Rehman Sharifi ಎಸೆದ ಚೆಂಡನ್ನು ರಾಹುಲ್ ಆಡಲು ಯತ್ನಿಸಿದಾಗ ಅದು ಬ್ಯಾಟ್ಗೆ ಸವರಿ ವಿಕೆಟ್ಕೀಪರ್ ಕೈ ಸೇರಿತು. ಅಫ್ಘಾನ್ ಆಟಗಾರರು ಔಟ್ಗಾಗಿ ಬಲವಾಗಿ ಮನವಿ ಮಾಡಿದರೂ ಅಂಪೈರ್ ಔಟ್ ನೀಡಲಿಲ್ಲ.
ಅಫ್ಘಾನಿಸ್ತಾನ ತಂಡಕ್ಕೆ ಡಿಆರ್ಎಸ್ ಅವಕಾಶವಿದ್ದರೂ ನಾಯಕ Hashmatullah Shahidi ರಿವ್ಯೂ ಪಡೆಯಲಿಲ್ಲ. ಬಳಿಕ ಟಿವಿ ಮರುಪ್ರಸಾರದಲ್ಲಿ ಚೆಂಡು ಸ್ಪಷ್ಟವಾಗಿ ಬ್ಯಾಟ್ಗೆ ತಗುಲಿರುವುದು ಕಂಡುಬಂದಿದ್ದು, ರಿವ್ಯೂ ಪಡೆಯದಿರುವುದಕ್ಕೆ ಅಫ್ಘಾನ್ ತಂಡ ಬೇಸರ ವ್ಯಕ್ತಪಡಿಸಿತು.
ಈ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ಇಂಗ್ಲೆಂಡ್ ಮಾಜಿ ಸ್ಪಿನ್ನರ್ Graeme Swann, “ಕೆಎಲ್ ರಾಹುಲ್, ಇಲ್ಲಿಗೆ ಬನ್ನಿ… ನಿಮ್ಮ ಆಸ್ಕರ್ ಇಲ್ಲಿದೆ” ಎಂದು ವ್ಯಂಗ್ಯವಾಡಿದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೀವದಾನವನ್ನು ಸದುಪಯೋಗಪಡಿಸಿಕೊಂಡ ರಾಹುಲ್
ಆರಂಭಿಕ ವಿಕೆಟ್ಗೆ Yashasvi Jaiswal ಜೊತೆಗೆ 41 ರನ್ಗಳ ಜೊತೆಯಾಟವಾಡಿದ ರಾಹುಲ್, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ತಮ್ಮ ಇನ್ನಿಂಗ್ಸ್ನಲ್ಲಿ ಅವರು 9,000 ಪ್ರಥಮ ದರ್ಜೆ ರನ್ಗಳ ಮೈಲಿಗಲ್ಲನ್ನೂ ದಾಟಿದರು. ಬಳಿಕ ಅರ್ಧಶತಕದ ಗಡಿಯನ್ನು ಸಹ ಯಶಸ್ವಿಯಾಗಿ ತಲುಪಿದರು.
ಇನ್ನೊಂದೆಡೆ ಜೈಸ್ವಾಲ್ 24 ರನ್ ಗಳಿಸಿ ನಿರಾಸೆ ಮೂಡಿಸಿದರು. ಭೋಜನ ವಿರಾಮದ ಬಳಿಕ ಭಾರತ ತಂಡ 100 ರನ್ಗಳ ಗಡಿ ದಾಟಿ ಉತ್ತಮ ಸ್ಥಿತಿಯಲ್ಲಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ
ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ Shubman Gill ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದೇ ವೇಳೆ ಯುವ ಸ್ಪಿನ್ನರ್ Manav Suthar ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಅವರಿಗೆ Kuldeep Yadav ಕ್ಯಾಪ್ ಪ್ರದಾನ ಮಾಡಿದರು.
ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನ ಮೆಚ್ಚುಗೆ ಪಡೆದಿದ್ದರೂ, ಕ್ರೀಡಾಸ್ಫೂರ್ತಿಗೆ ಸಂಬಂಧಿಸಿದ ಚರ್ಚೆ ಪಂದ್ಯದ ಮೊದಲ ದಿನದ ಪ್ರಮುಖ ವಿಷಯವಾಗಿ ಪರಿಣಮಿಸಿದೆ.
-
ಅಪರಾಧ6 hours agoಕಾರು ಓಡಿಸುವ ವಿಚಾರಕ್ಕೆ ಮಾರಾಮಾರಿ: ಕೃಷ್ಣ ಮಠದಲ್ಲಿ ಗಲಾಟೆ
-
ದೇಶ6 hours ago4,399 ದಿನಗಳ ನಿರಂತರ ಆಡಳಿತ: ಮೋದಿ ಹೊಸ ದಾಖಲೆ ಸ್ಥಾಪನೆ
-
ಕ್ರೀಡೆ6 hours agoಫಿಫಾ ವಿಶ್ವಕಪ್ 2026 ಆರಂಭ: ಜಗತ್ತೆಲ್ಲಾ ಫುಟ್ಬಾಲ್ ಜ್ವರದಲ್ಲಿ
-
ಅಪರಾಧ10 hours agoಬಿಟ್ಕಾಯಿನ್ ಹಗರಣ: ನಲಪಾಡ್ಗೆ ಎಸ್ಐಟಿ ಚಾರ್ಜ್ಶೀಟ್ ಶಾಕ್
-
ದೇಶ10 hours agoಕನಕಪುರದಲ್ಲಿ ಡಿಕೆಶಿ ವರ್ತನೆಗೆ ಬಿಜೆಪಿ ತೀವ್ರ ಆಕ್ರೋಶ
-
ಅಪರಾಧ10 hours agoಆವಲಹಳ್ಳಿ ದಾಳಿ: ಅಕ್ರಮ ಜಿಲೆಟಿನ್ ದಾಸ್ತಾನು ಪತ್ತೆ, 225 ಕಡ್ಡಿ ವಶ
-
ದೇಶ10 hours agoಅಣ್ವಸ್ತ್ರ ಶಕ್ತಿಯಲ್ಲಿ ಭಾರತ ಹೊಸ ಮೈಲಿಗಲ್ಲು? ಅಂತಾರಾಷ್ಟ್ರೀಯ ವರದಿ ಬಹಿರಂಗ
-
ದೇಶ1 hour agoನೆಹರೂ 64 ವರ್ಷದ ದಾಖಲೆ ಹಿಂದಿಕ್ಕಿದ ಮೋದಿ; ಸಂಪುಟ ಸಭೆಯಲ್ಲಿ ಸಂಭ್ರಮ
