ರಾಜ್ಯ
ಕನ್ನಡ ನಾಡು ಪ್ರವಾಸಿಗರಿಗೆ ಸ್ವರ್ಗ. ಯಾರಾರಿಗೆ ಯಾವ್ಯಾವ ರೀತಿಯ ಆಸಕ್ತಿಯ ತಾಣಗಳು ಬೇಕೊ ಅಂಥವನ್ನು ಆಯ್ದುಕೊಂಡು ಅಡ್ಡಾಡುವಷ್ಟು ಸಮೃದ್ಧವಾಗಿ ಪ್ರವಾಸಿ ಗಮ್ಯಗಳು ಮತ್ತು ಪರಂಪರೆಯ ತಾಣಗಳು ಕರ್ನಾಟಕದಲ್ಲಿವೆ. ಸಮುದ್ರದಲ್ಲಿ ಆಡಿ, ಮರಳಲ್ಲಿ ಹೊರಳುವವರಿಗಾಗಿ ಉದ್ದಾನುದ್ದದ ತೀರ ಪ್ರದೇಶ, ಕಾನು ಸುತ್ತಿ ಚೈತನ್ಯ ತುಂಬಿಕೊಳ್ಳುವವರಿಗೆಂದು ಹಸಿರಾದ ಮಲೆನಾಡು, ಕಲೆಯ ಆಸಕ್ತರಿಗಾಗಿ ಅತಿಸುಂದರವಾದ ಶಿಲಾದೇಗುಲಗಳು, ಇತಿಹಾಸದ ಕುತೂಹಲಿಗಳಿಗಾಗಿ ರಾಜ-ನಿಜಾಮರುಗಳ ಸಂಸ್ಥಾನದ ಉಳಿಕೆಗಳು- ಯಾವುದಿಲ್ಲ ಹೇಳಿ! ವಿಶ್ವ ಪರಂಪರೆಯ ತಾಣಗಳೆಂದು ಯುನೆಸ್ಕೊ ಸಂಸ್ಥೆಯಿಂದ ಗುರುತಿಸಿಕೊಂಡಿದ್ದು ಆರೇ ಸ್ಥಳಗಳಾದರೂ, ಉಳಿದ ತಾಣಗಳು ಕಡಿಮೆಯೆಂದು ಎಣಿಸುವಂತಿಲ್ಲ. ಗಡಿಗೆಯಲ್ಲಿನ ಪಕ್ವಾನ್ನ ಹೇಗಿದೆ ಎನ್ನುವುದನ್ನು ಕೆಲವೇ ಅಗುಳುಗಳಿಂದ ಅಳೆದು ನೋಡುವಂತೆ, ಯುನೆಸ್ಕೊ ಮಾನ್ಯ ಮಾಡಿದ ಕೆಲವೇ ತಾಣಗಳು ಸಾಕು ಇಡೀ ರಾಜ್ಯದ ಹಿರಿಮೆಯನ್ನು ಎತ್ತಿ ಹಿಡಿಯುವುದಕ್ಕೆ. ವಿಶ್ವ ಮಾನ್ಯತೆ ಪಡೆದ ತಾಣಗಳ ಕಿರುಪರಿಚಯವಿದು.
ರಸ್ತೆ ಬದಿಯಲ್ಲಿ ಮುತ್ತು-ರತ್ನಗಳನ್ನು ಕೊಳಗದಲ್ಲಿ ಅಳೆದಳೆದು ಮಾರುತ್ತಿದ್ದ ಸಾಮ್ರಾಜ್ಯವೆಂಬ ಹೆಗ್ಗಳಿಕೆ ಹೊತ್ತ ವಿಜಯನಗರ ಸಾಮ್ರಾಜ್ಯದ ಹೆಗ್ಗುರುತಾಗಿ ನಿಂತಿರುವ ಹಂಪಿಯ ಸ್ಮಾರಕಗಳ ಗುಂಪು, ಕರ್ನಾಟಕದ ಮೇರು ಪ್ರವಾಸಿ ಆಕರ್ಷಣೆಗಳಲ್ಲೊಂದು. ವಿಜಯನಗರ ಸಾಮ್ರಾಜ್ಯದ ಅವಶೇಷಗಳು ದಕ್ಷಿಣ ಭಾರತದ ಹಲವೆಡೆಗಳಲ್ಲಿ ಹರಡಿದ್ದರೂ, ರಾಜಧಾನಿ ಎನಿಸಿದ್ದರಿಂದ ಹಂಪೆಯ ಕಂಪು ದೊಡ್ಡದು. ಸಾಮ್ರಾಜ್ಯದ ಸ್ವರ್ಣಯುಗವನ್ನು ಇವು ಇಂದಿಗೂ ಕಣ್ಮುಂದೆ ತೆರೆದಿಡುತ್ತವೆ. ಸುಮಾರು 4187 ಹೆಕ್ಟೇರ್ ಜಾಗಕ್ಕೆ ಹರಡಿರುವ ಈ ತಾಣ, 200 ವರ್ಷಗಳ ಕಥೆಯನ್ನಿಲ್ಲಿ ಹೇಳುತ್ತದೆ. 1,600ಕ್ಕೂ ಹೆಚ್ಚು ಸಣ್ಣ-ದೊಡ್ಡ ಸ್ಮಾರಕಗಳಿಲ್ಲಿ ನಿಂತಿದ್ದು, 1986ರಲ್ಲೇ ಇದು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿದೆ.
ಅತ್ಯಂತ ಸುಂದರ ಶಿಲಾ ದೇಗುಲಗಳು, ರಾಣಿ ಮಹಲುಗಳು, ಕೋಟೆಗಳು, ನಿರೀಕ್ಷಣಾ ಗೋಪುರಗಳು ಸೇರಿದಂತೆ ನೋಡುವುದಕ್ಕೆ ಬಹಳಷ್ಟನ್ನು ಹಂಪೆ ಪ್ರವಾಸಿಗರ ಮುಂದಿರಿಸುತ್ತದೆ. ಅತಿ ಮನೋಹರವಾದ ಕಲ್ಲಿನ ರಥ, ಉಗ್ರ ನರಸಿಂಹನ ಮೂರ್ತಿ, ವಿರೂಪಾಕ್ಷ ದೇವಾಲಯ, ವಿಠ್ಠಲ ದೇಗುಲ, ಹಜಾರ ರಾಮ ದೇವಾಲಯ, ಅಚ್ಚುತರಾಯ ದೇವಳ, ಹೇಮಕೂಟ ಬೆಟ್ಟದ ದೇಗುಲಗಳು, ರಾಣಿಯ ಸ್ನಾನಗೃಹ, ಆನೆಲಾಯ, ಕಮಲ ಮಹಲ್, ಹಂಪೆಯ ಬಜಾರು… ಹೀಗೆ ಬಹಳಷ್ಟನ್ನು ಇಲ್ಲಿ ನೋಡಬಹುದು. ಅಕ್ಟೋಬರ್ನಿಂದ ಮಾರ್ಚ್ವರೆಗಿನ ಸಮಯ ಇಲ್ಲಿನ ಭೇಟಿಗೆ ಪ್ರಶಸ್ತ. ವಾರದೆಲ್ಲಾ ದಿನಗಳು ಬೆಳಗ್ಗೆ 9ರಿಂದ ಸಂಜೆ 6ವರೆಗೆ ಭೇಟಿಗೆ ಲಭ್ಯವಿದ್ದು. 15 ವರ್ಷದ ಕೆಳಗಿನ ಮಕ್ಕಳಿಗೆ ಮುಕ್ತ ಅವಕಾಶವಿದೆ. ಉಳಿದವರಿಗೆ ಪ್ರವೇಶ ಶುಲ್ಕವಿದ್ದು, ಆಲ್ಲೈನ್ನಲ್ಲೂ ಟಿಕೆಟ್ ಖರೀದಿಸಬಹುದು. ಇಲ್ಲಿಂದ 13 ಕಿ.ಮೀ. ದೂರದ ಹೊಸಪೇಟೆಯಲ್ಲಿ ರೈಲು ನಿಲ್ದಾಣವಿದ್ದು, ಸುಮಾರು 35 ಕಿ.ಮೀ ದೂರದಲ್ಲಿ ವಿಜಯನಗರ ಜಿಲ್ಲೆಯ ವಿಮಾನನಿಲ್ದಾಣವಿದೆ.
ಸುಮಾರು 7 ಮತ್ತು 8ನೇ ಶತಮಾನಕ್ಕೆ ಸೇರಿದ ಹಿಂದೂ ಮತ್ತು ಜಿನ ಮಂದಿರಗಳ ಸುಂದರ ಸಮುಚ್ಚಯ ಈ ಪಟ್ಟದಕಲ್ಲು, ಬಾದಾಮಿ ಮತ್ತು ಐಹೊಳೆಯ ದೇಗುಲಗಳು. 1987ರಲ್ಲೇ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾದ ಈ ತಾಣವು ಸುಮಾರು 5.5 ಹೆಕ್ಟೇರ್ ಜಾಗದಲ್ಲಿ ಹರಡಿಕೊಂಡಿದೆ. ಚಾಲುಕ್ಯರು ಮತ್ತು ರಾಷ್ಟ್ರಕೂಟರ ಶಿಲ್ಪಕಲೆಯ ವೈಭವವನ್ನು ಇಲ್ಲಿ ಕಾಣಬಹುದಾಗಿದ್ದು, ಪಟ್ಟದಕಲ್ಲಿನಲ್ಲಿ ಶಿವನಿಗೆಂದು ನಿರ್ಮಿಸಲಾದ 9 ದೇಗುಲಗಳ ಸರಣಿಯನ್ನು ಕಾಣಬಹುದು. ಆದರೆ ವೈಷ್ಣವ ಮತ್ತು ಶಾಕ್ತ ಪಂಥದ ಕುರುಹುಗಳನ್ನೂ ದೇವಾಲಯಗಳಲ್ಲಿ ಕಾಣಬಹುದು. ದ್ರಾವಿಡ ಮತ್ತು ಇಂಡೊ ಆರ್ಯನ್ ಶೈಲಿಯ ಮಿಶ್ರಣದಂಥ ವಿನ್ಯಾಸಗಳನ್ನು ಹೊಂದಿರುವ ಜೈನ ದೇವಾಲಯಗಳು ಇಲ್ಲಿವೆ. ವಿರೂಪಾಕ್ಷ ದೇವಳ (ಹಂಪೆಯದ್ದಲ್ಲ, ಇಲ್ಲೇ ಬೇರೆಯದು), ಗಳಗನಾಥ ದೇಗುಲ, ಜಂಬುಲಿಂಗೇಶ್ವರ ಮಂದಿರ, ಸಂಗಮೇಶ್ವರ, ಕಾಡಸಿದ್ದೇಶ್ವರ, ಚಂದ್ರಶೇಖರ, ಕಾಶಿ ವಿಶ್ವನಾಥ ಮತ್ತು ಜೈನ ನಾರಾಯಣ ದೇವಾಲಯಗಳು ಇಲ್ಲಿನ ಆಕರ್ಷಣೆ.
ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಸ್ಥಳಕ್ಕೆ ಸಮೀಪದ ವಿಮಾನ ನಿಲ್ದಾಣ 130 ಕಿ.ಮೀ. ದೂರದ ಹುಬ್ಬಳ್ಳಿಯದ್ದು. ಬೆಳಗಾವಿ ವಿಮಾನ ನಿಲ್ದಾಣ 150 ಕಿ.ಮೀ. ದೂರದಲ್ಲಿದೆ. 18 ಕಿ.ಮೀ. ದೂರದ ಬಾದಾಮಿಯಲ್ಲಿ ರೈಲು ನಿಲ್ದಾಣವಿದೆ. ಅಕ್ಟೋಬರ್ನಿಂದ ಮಾರ್ಚ್ವರೆಗಿನ ಸಮಯ ಇಲ್ಲಿನ ಭೇಟಿಗೆ ಪ್ರಶಸ್ತ. ವಾರದೆಲ್ಲಾ ದಿನಗಳು ಬೆಳಗ್ಗೆ 6ರಿಂದ ಸಂಜೆ 5.30ರವರೆಗೆ ಭೇಟಿಗೆ ಲಭ್ಯವಿದ್ದು. 15 ವರ್ಷದ ಕೆಳಗಿನ ಮಕ್ಕಳಿಗೆ ಮುಕ್ತ ಅವಕಾಶವಿದೆ. ಉಳಿದವರಿಗೆ ಪ್ರವೇಶ ಶುಲ್ಕವಿದ್ದು, ಆಲ್ಲೈನ್ನಲ್ಲೂ ಟಿಕೆಟ್ ಖರೀದಿಸಬಹುದು.
ವಿಶ್ವದ 39 ಮಹತ್ವದ ಜೀವವೈವಿಧ್ಯ ತಾಣಗಳಲ್ಲಿ ಪಶ್ಚಿಮ ಘಟ್ಟವೂ ಒಂದು. ಸಹ್ಯಾದ್ರಿ ಶ್ರೇಣಿಗಳು ಹಿಮಾಲಯಕ್ಕಿಂತ ಸಾಕಷ್ಟು ಹಳೆಯದಾಗಿದ್ದು, ಮುಂಗಾರು ಮಾರುತ ವ್ಯವಸ್ಥೆಗೆ ಇಡೀ ಭೂಮಿಯಲ್ಲೇ ಉತ್ತಮ ಉದಾಹರಣೆಯಿದು. 2012ರಲ್ಲಿ ವಿಶ್ವ ಪರಂಪೊರೆಯ ತಾಣವನ್ನು ಸೇರಿರುವ ಈ ಹಸಿರು ಪ್ರದೇಶ, 795.3 ಹೆಕ್ಟೇರ್ನ ಬೃಹತ್ ಪ್ರದೇಶವನ್ನು ಒಳಗೊಂಡಿದೆ. ವಿಶ್ವದಲ್ಲೇ ಅಳಿವಿನಂಚಿಗೆ ಬಂದಿರುವ ಸುಮಾರು 325 ಜಾತಿಯ ಅಮೂಲ್ಯ ಪ್ರಾಣಿ ಮತ್ತು ಪಕ್ಷಗಳ ಆಶ್ರಯ ತಾಣವಿದು ಎಂಬುದನ್ನು ಜಾಗತಿಕ ಜೀವ ವಿಜ್ಞಾನಿಗಳು ದೃಢಪಡಿಸಿದ್ದಾರೆ.
ಏನಿದೆ ವಿಶೇಷ?
ಪಶ್ಚಿಮ ಘಟ್ಟಗಳು ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲೂ ವ್ಯಾಪಿಸಿದೆ. ಹಲವಾರು ರಾಷ್ಟ್ರೀಯ ಉದ್ಯಾನವನಗಳು ಮತ್ತು ಸಂರಕ್ಷಿತ ಪ್ರದೇಶಗಳನ್ನಿದು ಒಳಗೊಂಡಿದೆ. 7 ಸಾವಿರಕ್ಕೂ ಹೆಚ್ಚಿನ ಪ್ರಭೇದಗಳ ಹೂಬಿಡುವ ಸಸ್ಯಗಳು, 139 ಜಾತಿಯ ಸಸ್ತನಿಗಳು, 508 ಜಾತಿಯ ಹಕ್ಕಿಗಳು, 179 ಜಾತಿಯ ಉಭಯವಾಸಿಗಳು, 6 ಸಾವಿರ ಜಾತಿಯ ಕೀಟಗಳು, 300 ಜಾತಿಯ ಮೀನುಗಳಿಗೆ ಈ ಪ್ರದೇಶ ತವರೆನಿಸಿಕೊಂಡಿದೆ.
ಹೊಯ್ಸಳ ದೇವಾಲಯಗಳು
ತ್ರಿಕೂಟಾಚಲ ವಿನ್ಯಾಸದ, ಚೆನ್ನಕೇಶವ ಮತ್ತು ಹೊಯ್ಸಳೇಶ್ವರರನ್ನು ಆರಾಧಿಸುವ ಬೇಲೂರು ಹಾಗೂ ಹಳೇಬೀಡಿನ ಸರ್ವಾಂಗ ಸುಂದರ ದೇವಾಲಯಗಳು ಯುನೆಸ್ಕೊ ಪಟ್ಟಿ ಸೇರಿ, ವಿಶ್ವ ಮಾನ್ಯತೆ ಪಡೆದಿವೆ. ನಕ್ಷತ್ರಾಕಾರದ ವೇದಿಕೆಯ ಮೇಲೆ ಸ್ಥಿತವಾದ ಈ ಸಂಕೀರ್ಣ ಕೆತ್ತನೆಯ ದೇವಳಗಳು 2004ರಿಂದ ವಿಶ್ವ ಪರಂಪರೆಯ ತಾಣವೆನಿಸಿವೆ. 10ರಿಂದ 14ನೇ ಶತಮಾನದ ಅವಧಿಯಲ್ಲಿ ಆಗಿಹೋದ ಹೊಯ್ಸಳರ ಉತ್ತುಂಗದ ಕಥೆಯನ್ನು ಇಲ್ಲಿನ ಕಲ್ಲಿನಲ್ಲಿರುವ ಕಲೆಗಳು ಹೇಳುತ್ತವೆ.
ಇಲ್ಲಿಯ ವಿಶೇಷತೆ ಏನು?
ರಾಜ ವಿಷ್ಣುವರ್ಧನನ ಕಾಲದಲ್ಲಿ ಬೇಲೂರಿನ ಚೆನ್ನಕೇಶವ ದೇಗುಲ ನಿರ್ಮಿಸಲಾಗಿದ್ದು, ಮಂತ್ರಿ ಕೇತುಮಲ್ಲನ ಕಾಲದಲ್ಲಿ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಆದರೆ ಹೊಯ್ಸಳರ ಆಡಳಿತವಿದ್ದು ಜಾಗಗಳಲ್ಲಿ ಇಂಥ ಹಲವು ಸಣ್ಣ ದೇವಾಲಯಗಳಿದ್ದು, ಎಲ್ಲವುಗಳಲ್ಲೂ ಇಂಥದ್ದೇ ಸೂಕ್ಷ್ಮ ಕುಸುರಿಯಂಥ ಕಲ್ಲಿನ ಕೆತ್ತನೆಗಳನ್ನು ಕಾಣಬಹುದು. ಲೋಹಕ್ಕೆ ಇರಬಹುದಾದಂಥ ಹೊಳಪು ಇಲ್ಲಿನ ಕಲ್ಲುಗಳಿಗಿದ್ದು, ನೋಡುಗರ ಹುಬ್ಬೇರಿಸುತ್ತವೆ.
ಹಾಸನ ಜಿಲ್ಲೆಯಲ್ಲಿರುವ ಇದನ್ನು ವರ್ಷದ ಯಾವುದೇ ಸಮಯದಲ್ಲಿ ಸಂದರ್ಶಿಸಬಹುದು. ವಾರದೆಲ್ಲಾ ದಿನಗಳು ಬೆಳಗ್ಗೆ 6ರಿಂದ ಸಂಜೆ 6ವರೆಗೆ ಹಳೇಬೀಡಿನ ದೇಗುಲ ಭೇಟಿಗೆ ಲಭ್ಯವಿದ್ದು, ಬೆಳಗ್ಗೆ 7.30ರಿಂದ ಸಂಜೆ 6.30ರವರೆಗೆ ಬೇಲೂರಿನ ದೇವಳ ತೆರೆದಿರುತ್ತದೆ. ಪ್ರವೇಶ ಶುಲ್ಕವಿಲ್ಲ.
ಶ್ರೀರಂಗಪಟ್ಟಣದ ಸ್ಮಾರಕಗಳು
ಸುತ್ತಲೂ ಹರಿಯುವ ಕಾವೇರಿ ನದಿಯಿಂದ ದ್ವೀಪದಂತೆ ಕಾಣುವ ಶ್ರೀರಂಗಪಟ್ಟಣ ಮೈಸೂರಿಗೆ ಸಮೀಪದಲ್ಲಿದೆ. ವಿಜಯನಗರ ಮತ್ತು ಹೊಯ್ಸಳ ಶೈಲಿಯ ವಾಸ್ತುಶಿಲ್ಪಗಳು ಇಲ್ಲಿನ ಸ್ಮಾರಕಗಳ ಹೆಗ್ಗಳಿಕೆ. ಊರಿಗೆ ತನ್ನ ಹೆಸರನ್ನು ನೀಡಿರುವ ಶ್ರೀರಂಗನಾಥ ಸ್ವಾಮಿಯ ದೇಗುಲ ಇಲ್ಲಿನ ಹೆಗ್ಗುರುತು. ಇದು ಕರ್ನಾಟಕದ ಭವ್ಯ ವೈಷ್ಣವ ಆರಾಧನಾ ತಾಣಗಳಲ್ಲಿ ಒಂದು.
ಏನು ನೋಡಬಹುದು?
ಹಿಂದೊಮ್ಮೆ ಮೈಸೂರು ಸಂಸ್ಥಾನದ ರಾಜಧಾನಿ ಎನಿಸಿಕೊಂಡಿದ್ದ ಇಲ್ಲಿ, ದರಿಯಾ ದೌಲತ್ ಬಾಗ್, ಶ್ರೀರಂಗಪಟ್ಟಣದ ಕೋಟೆ, ಟಿಪ್ಪು ಸುಲ್ತಾನನ ಗುಂಬಜ್, ಜಾಮಾ ಮಸೀದಿ, ರಂಗನತಿಟ್ಟು ಪಕ್ಷಿಧಾಮಗಳು ನೋಡಲೇಬೇಕಾದವು. ವಿಶ್ವ ಪರಂಪರೆಯ ತಾಣದ ತಾತ್ಕಾಲಿಕ ಪಟ್ಟಿಯಲ್ಲಿರುವ ಇದನ್ನು ವರ್ಷದ ಯಾವುದೇ ಸಮಯದಲ್ಲಿ ಸಂದರ್ಶಿಸಬಹುದು.
ಬೀದರ್, ವಿಜಯಪುರ ಮತ್ತು ಕಲಬುರ್ಗಿಯಲ್ಲಿ ಹರಡಿಕೊಂಡಿರುವ ಈ ಸ್ಮಾರಕಗಳು ಯುನೆಸ್ಕೊದ ತಾತ್ಕಲಿಕ ಪಟ್ಟಿಯಲ್ಲಿವೆ. ಪ್ರಧಾನವಾಗಿ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪವೇ ಈ ಸ್ಮಾರಕಗಳಲ್ಲಿ ಸೊಗಸಾದ ಗುಮ್ಮಟಗಳು, ಕಮಾನುಗಳನ್ನು ನೋಡಬಹುದು. ಹೈದರಾಬಾದ್ನಲ್ಲೂ ಈ ಸುಲ್ತಾನರ ಸ್ಮಾರಕಗಳಿವೆ.
ಪ್ರಮುಖವಾದುದೇನು?
ಬಹಮನಿ ಸುಲ್ತಾನರ ಮೊದಲ ರಾಜಧಾನಿ ಕಲಬುರ್ಗಿಯಲ್ಲಿರುವ ಸ್ಮಾರಕಗಳ ಪೈಕಿ ಕಲಬುರ್ಗಿ ಕೋಟೆ, ದೊಡ್ಡ ಮಸೀದಿ, ಏಳು ಗೋರಿಗಳ ಸಂಕೀರ್ಣದ ಗುಂಬಜ್ ಪ್ರಮುಖವಾದವು. ಬೀದರ್ನ ಸ್ಮಾರಕಗಳ ಪೈಕಿ ಬೀದರ್ ಕೋಟೆ, ಅರಮನೆ, ಮದರಸ, ಬಹಮನಿ ಗೋರಿಗಳು ಇತ್ಯಾದಿಗಳನ್ನು ನೋಡಬಹುದು. ವಿಜಯಪುರದಲ್ಲಿ ಸುಮಾರು 80ಕ್ಕೂ ಹೆಚ್ಚಿನ ಸಣ್ಣ, ದೊಡ್ಡ ಸ್ಮಾರಕಗಳಿವೆ. ಇವುಗಳಲ್ಲಿ ಗೋಲ್ ಗುಂಬಜ್ ಜನಪ್ರಿಯವಾಗಿದ್ದು, ಪ್ರವಾಸಿಗರ ಮೆಚ್ಚಾಗಿದೆ. ಇದು ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಗುಂಬಜ್ ಎಂದು ಖ್ಯಾತವಾಗಿದೆ.
ಅಕ್ಟೋಬರ್ನಿಂದ ಮಾರ್ಚ್ವರೆಗಿನ ಸಮಯ ಇಲ್ಲಿನ ಭೇಟಿಗೆ ಸೂಕ್ತ. ಕೆಲವು ಸ್ಮಾರಕಗಳಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ; ಆದಿಲ್ ಶಾಹಿ ಸ್ಮಾರಕಗಳಿಗೆ ಶುಲ್ಕ ನಿಗದಿ ಪಡಿಸಲಾಗಿದೆ.
ದೇಶ
‘ನೀಟ್ ಅಕ್ರಮಕ್ಕೆ ಮೋದಿ-ಧರ್ಮೇಂದ್ರ ಪ್ರಧಾನ್ ಹೊಣೆ’: CM ಸಿದ್ದರಾಮಯ್ಯ
ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ NEET ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಪ್ರಧಾನಿ Narendra Modi ಹಾಗೂ ಕೇಂದ್ರ ಶಿಕ್ಷಣ ಸಚಿವ Dharmendra Pradhan ನೇರ ಹೊಣೆ ಹೊರಬೇಕು ಎಂದು ಮುಖ್ಯಮಂತ್ರಿ Siddaramaiah ಒತ್ತಾಯಿಸಿದರು.
ಬೆಂಗಳೂರಿನ Freedom Park ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ, “ಈ ಹಿಂದೆ ರಾಜ್ಯಗಳು ತಮ್ಮದೇ CET ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿದ್ದರು. ಆದರೆ 2016ರಲ್ಲಿ ಮೋದಿ ಸರ್ಕಾರ ಬಲವಂತವಾಗಿ NEET ಜಾರಿಗೆ ತಂದ ಬಳಿಕ ಅಕ್ರಮಗಳು ಹೆಚ್ಚಾಗಿವೆ” ಎಂದು ಆರೋಪಿಸಿದರು.
“ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯ ವಿಷಯ. ರಾಜ್ಯಗಳಿಗೆ ಸ್ವಾಯತ್ತತೆ ಇರಬೇಕು. ಆದರೆ ಕೇಂದ್ರ ಸರ್ಕಾರ ಎಲ್ಲಾ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡ ಪರಿಣಾಮ ಇಂತಹ ಹಗರಣಗಳು ಮರುಕಳಿಸುತ್ತಿವೆ” ಎಂದು ಅವರು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, “ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ವರ್ಷವಿಡೀ ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಆದರೆ ಪೇಪರ್ ಲೀಕ್ ಮೂಲಕ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಸಿಎಂ, “ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹತಾಶರಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಬಿಜೆಪಿ ಆಡಳಿತದಲ್ಲಿ ಅಕ್ರಮಗಳ ಸರಮಾಲೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ PSI ನೇಮಕಾತಿ ಹಗರಣವನ್ನೂ ಉಲ್ಲೇಖಿಸಿದರು. “ದೇಶದ ಯುವಜನತೆ ಆಕ್ರೋಶದಲ್ಲಿದ್ದರೂ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ” ಎಂದು ಟೀಕಿಸಿದರು.
ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ದೊರೆಯುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ದೇಶ
ಸಿ.ಟಿ. ರವಿ ಎದುರೇ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಭಾರೀ ಘರ್ಷಣೆ
ಚಿಕ್ಕಮಗಳೂರು: ಜಿಲ್ಲೆಯ ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ರಾಜಕೀಯ ಘರ್ಷಣೆ ಸಂಭವಿಸಿದ್ದು, ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ C. T. Ravi ಅವರ ಸಮ್ಮುಖದಲ್ಲೇ ಈ ಗಲಾಟೆ ನಡೆದಿರುವುದು ವಿಶೇಷ ಗಮನ ಸೆಳೆದಿದೆ.
ಸಿ.ಟಿ. ರವಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಸ್ಥಳೀಯ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ಉಭಯ ಪಕ್ಷಗಳ ಬೆಂಬಲಿಗರು ಪರಸ್ಪರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪರಿಸ್ಥಿತಿ ಕೈಮೀರಿದ ಪರಿಣಾಮ ತಳ್ಳಾಟ-ನೂಕಾಟ ನಡೆಯಿತು.
ಮಾತಿನ ವಾಗ್ವಾದ ಹೆಚ್ಚಾಗುತ್ತಿದ್ದಂತೆ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದು, ಸಿ.ಟಿ. ರವಿ ಅವರ ಸಮ್ಮುಖದಲ್ಲೇ ಹಲ್ಲೆ ನಡೆಸಲು ಯತ್ನಿಸಲಾಗಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು.
ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಯಾವುದೇ ಅನಾಹುತ ಸಂಭವಿಸದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಘರ್ಷಣೆಯಿಂದ ಕೆಲಕಾಲ ರಾಂಪುರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ರಾಜಕೀಯ ವೈಷಮ್ಯದ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲಾ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉದ್ವಿಗ್ನತೆ ಉಂಟಾಗದಂತೆ ಪೊಲೀಸರು ನಿಗಾವಹಿಸಿದ್ದಾರೆ.
ಕ್ರೀಡೆ
ಹಾಂಗ್ ಕಾಂಗ್ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್ಶಿಪ್ಗೆ ಕರ್ನಾಟಕದ ಇಬ್ಬರು ಆಯ್ಕೆ
ಬೆಂಗಳೂರು: ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್ಗೆ ಹೆಮ್ಮೆಯ ಕ್ಷಣ ಒದಗಿದ್ದು, ರಾಜ್ಯದ ಇಬ್ಬರು ಜಿಮ್ನಾಸ್ಟ್ಗಳು ಮತ್ತು ಇಬ್ಬರು ಕೋಚ್ಗಳು ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಹಾಂಗ್ ಕಾಂಗ್ನಲ್ಲಿ ಮೇ 23 ಮತ್ತು 24ರಂದು ನಡೆಯಲಿರುವ 2ನೇ ಏಷ್ಯನ್ ಏಜ್ ಗ್ರೂಪ್ ಸ್ಪರ್ಧೆ ಹಾಗೂ 7ನೇ ಸೀನಿಯರ್ ಏಷ್ಯನ್ ಟ್ರಾಂಪೋಲಿನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಅವರು ಭಾರತ ಪರ ಕಣಕ್ಕಿಳಿಯಲಿದ್ದಾರೆ.
Aavni Amit ಮಹಿಳಾ AG1 ವಿಭಾಗದಲ್ಲಿ ಮತ್ತು Satvik Gupta ಪುರುಷರ AG3 ವಿಭಾಗದಲ್ಲಿ ಭಾರತ ತಂಡದ ಪರವಾಗಿ ಸ್ಪರ್ಧಿಸಲಿದ್ದಾರೆ. ಜೊತೆಗೆ ಕರ್ನಾಟಕದ ಕೋಚ್ಗಳಾದ Jitesh Chandran ಹಾಗೂ Basavaraj S. Tambur ಕೂಡ ಭಾರತೀಯ ತಂಡದೊಂದಿಗೆ ಹಾಂಗ್ ಕಾಂಗ್ಗೆ ತೆರಳಲಿದ್ದಾರೆ.
ಭಾರತೀಯ ತಂಡ ಮೇ 21ರಂದು ಹಾಂಗ್ ಕಾಂಗ್ಗೆ ಪ್ರಯಾಣ ಬೆಳೆಸಲಿದ್ದು, ಚಾಂಪಿಯನ್ಶಿಪ್ ಮುಗಿದ ಬಳಿಕ ಭಾರತಕ್ಕೆ ಮರಳಲಿದೆ. ಕರ್ನಾಟಕದ ಆಟಗಾರರು ಮತ್ತು ಕೋಚ್ಗಳ ಆಯ್ಕೆಗೆ ರಾಜ್ಯದ ಕ್ರೀಡಾ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.
ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಜಿಮ್ನಾಸ್ಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾದ Dr. C. Prabhakar ಆಯ್ಕೆಯಾದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. “ಕರ್ನಾಟಕದ ಪ್ರತಿಭೆಗಳು ಏಷ್ಯನ್ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಅವರು ಶುಭ ಹಾರೈಸಿದರು.
ಈ ಆಯ್ಕೆ ಕರ್ನಾಟಕದ ಜಿಮ್ನಾಸ್ಟಿಕ್ಸ್ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿದ್ದು, ರಾಜ್ಯದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.
-
ಕ್ರೀಡೆ8 hours agoಹಾಂಗ್ ಕಾಂಗ್ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್ಶಿಪ್ಗೆ ಕರ್ನಾಟಕದ ಇಬ್ಬರು ಆಯ್ಕೆ
-
ದೇಶ12 hours ago59 ವರ್ಷಗಳ ಬಳಿಕ ತಮಿಳುನಾಡು ಸಚಿವ ಸಂಪುಟಕ್ಕೆ ಕಾಂಗ್ರೆಸ್ ಎಂಟ್ರಿ! ಇಂದು ವಿಜಯ್ ಕ್ಯಾಬಿನೆಟ್ ವಿಸ್ತರಣೆ
-
ದೇಶ11 hours agoಬಿಜೆಪಿಗಿಂತ ವೇಗವಾಗಿ ಬೆಳೆದ ‘Cockroach Janta Party’!
-
ದೇಶ5 hours ago“ನಾವು ಯಾರೂ ಸುರಕ್ಷಿತರಲ್ಲ”: ಮುಂದಿನ ಮಹಾಮಾರಿಯ ಬಗ್ಗೆ ಜಾಗತಿಕ ವರದಿ ಆತಂಕ
-
ದೇಶ6 hours agoCockroach Janata Party ಖಾತೆ ತಡೆ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ
-
ಅಪರಾಧ10 hours agoLatest : ನಿಪ್ಪಾಣಿಯಲ್ಲಿ ಆಶ್ರಯ ಮನೆ ಹಂಚಿಕೆ ವೇಳೆ ಗಲಾಟೆ: ಕಣ್ಣೀರಿಟ್ಟ ಶಾಸಕಿ ಶಶಿಕಲಾ ಜೊಲ್ಲೆ
-
ದೇಶ9 hours agoಮೆಲೊಡಿ ಟ್ರೆಂಡ್ಗೆ ಎಂಟ್ರಿ ಕೊಟ್ಟ ಬಾಲಿವುಡ್ ಜೋಡಿ: ಸೋನಾಕ್ಷಿ ವಿಡಿಯೋ ಸದ್ದು
-
ದೇಶ9 hours ago‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಯಾದರೆ ₹7 ಲಕ್ಷ ಕೋಟಿ ಉಳಿತಾಯ: ಜೆಪಿಸಿ ಸಮಿತಿ
