ರಾಜ್ಯ
ಕನ್ನಡ ನಾಡು ಪ್ರವಾಸಿಗರಿಗೆ ಸ್ವರ್ಗ. ಯಾರಾರಿಗೆ ಯಾವ್ಯಾವ ರೀತಿಯ ಆಸಕ್ತಿಯ ತಾಣಗಳು ಬೇಕೊ ಅಂಥವನ್ನು ಆಯ್ದುಕೊಂಡು ಅಡ್ಡಾಡುವಷ್ಟು ಸಮೃದ್ಧವಾಗಿ ಪ್ರವಾಸಿ ಗಮ್ಯಗಳು ಮತ್ತು ಪರಂಪರೆಯ ತಾಣಗಳು ಕರ್ನಾಟಕದಲ್ಲಿವೆ. ಸಮುದ್ರದಲ್ಲಿ ಆಡಿ, ಮರಳಲ್ಲಿ ಹೊರಳುವವರಿಗಾಗಿ ಉದ್ದಾನುದ್ದದ ತೀರ ಪ್ರದೇಶ, ಕಾನು ಸುತ್ತಿ ಚೈತನ್ಯ ತುಂಬಿಕೊಳ್ಳುವವರಿಗೆಂದು ಹಸಿರಾದ ಮಲೆನಾಡು, ಕಲೆಯ ಆಸಕ್ತರಿಗಾಗಿ ಅತಿಸುಂದರವಾದ ಶಿಲಾದೇಗುಲಗಳು, ಇತಿಹಾಸದ ಕುತೂಹಲಿಗಳಿಗಾಗಿ ರಾಜ-ನಿಜಾಮರುಗಳ ಸಂಸ್ಥಾನದ ಉಳಿಕೆಗಳು- ಯಾವುದಿಲ್ಲ ಹೇಳಿ! ವಿಶ್ವ ಪರಂಪರೆಯ ತಾಣಗಳೆಂದು ಯುನೆಸ್ಕೊ ಸಂಸ್ಥೆಯಿಂದ ಗುರುತಿಸಿಕೊಂಡಿದ್ದು ಆರೇ ಸ್ಥಳಗಳಾದರೂ, ಉಳಿದ ತಾಣಗಳು ಕಡಿಮೆಯೆಂದು ಎಣಿಸುವಂತಿಲ್ಲ. ಗಡಿಗೆಯಲ್ಲಿನ ಪಕ್ವಾನ್ನ ಹೇಗಿದೆ ಎನ್ನುವುದನ್ನು ಕೆಲವೇ ಅಗುಳುಗಳಿಂದ ಅಳೆದು ನೋಡುವಂತೆ, ಯುನೆಸ್ಕೊ ಮಾನ್ಯ ಮಾಡಿದ ಕೆಲವೇ ತಾಣಗಳು ಸಾಕು ಇಡೀ ರಾಜ್ಯದ ಹಿರಿಮೆಯನ್ನು ಎತ್ತಿ ಹಿಡಿಯುವುದಕ್ಕೆ. ವಿಶ್ವ ಮಾನ್ಯತೆ ಪಡೆದ ತಾಣಗಳ ಕಿರುಪರಿಚಯವಿದು.
ರಸ್ತೆ ಬದಿಯಲ್ಲಿ ಮುತ್ತು-ರತ್ನಗಳನ್ನು ಕೊಳಗದಲ್ಲಿ ಅಳೆದಳೆದು ಮಾರುತ್ತಿದ್ದ ಸಾಮ್ರಾಜ್ಯವೆಂಬ ಹೆಗ್ಗಳಿಕೆ ಹೊತ್ತ ವಿಜಯನಗರ ಸಾಮ್ರಾಜ್ಯದ ಹೆಗ್ಗುರುತಾಗಿ ನಿಂತಿರುವ ಹಂಪಿಯ ಸ್ಮಾರಕಗಳ ಗುಂಪು, ಕರ್ನಾಟಕದ ಮೇರು ಪ್ರವಾಸಿ ಆಕರ್ಷಣೆಗಳಲ್ಲೊಂದು. ವಿಜಯನಗರ ಸಾಮ್ರಾಜ್ಯದ ಅವಶೇಷಗಳು ದಕ್ಷಿಣ ಭಾರತದ ಹಲವೆಡೆಗಳಲ್ಲಿ ಹರಡಿದ್ದರೂ, ರಾಜಧಾನಿ ಎನಿಸಿದ್ದರಿಂದ ಹಂಪೆಯ ಕಂಪು ದೊಡ್ಡದು. ಸಾಮ್ರಾಜ್ಯದ ಸ್ವರ್ಣಯುಗವನ್ನು ಇವು ಇಂದಿಗೂ ಕಣ್ಮುಂದೆ ತೆರೆದಿಡುತ್ತವೆ. ಸುಮಾರು 4187 ಹೆಕ್ಟೇರ್ ಜಾಗಕ್ಕೆ ಹರಡಿರುವ ಈ ತಾಣ, 200 ವರ್ಷಗಳ ಕಥೆಯನ್ನಿಲ್ಲಿ ಹೇಳುತ್ತದೆ. 1,600ಕ್ಕೂ ಹೆಚ್ಚು ಸಣ್ಣ-ದೊಡ್ಡ ಸ್ಮಾರಕಗಳಿಲ್ಲಿ ನಿಂತಿದ್ದು, 1986ರಲ್ಲೇ ಇದು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿದೆ.
ಅತ್ಯಂತ ಸುಂದರ ಶಿಲಾ ದೇಗುಲಗಳು, ರಾಣಿ ಮಹಲುಗಳು, ಕೋಟೆಗಳು, ನಿರೀಕ್ಷಣಾ ಗೋಪುರಗಳು ಸೇರಿದಂತೆ ನೋಡುವುದಕ್ಕೆ ಬಹಳಷ್ಟನ್ನು ಹಂಪೆ ಪ್ರವಾಸಿಗರ ಮುಂದಿರಿಸುತ್ತದೆ. ಅತಿ ಮನೋಹರವಾದ ಕಲ್ಲಿನ ರಥ, ಉಗ್ರ ನರಸಿಂಹನ ಮೂರ್ತಿ, ವಿರೂಪಾಕ್ಷ ದೇವಾಲಯ, ವಿಠ್ಠಲ ದೇಗುಲ, ಹಜಾರ ರಾಮ ದೇವಾಲಯ, ಅಚ್ಚುತರಾಯ ದೇವಳ, ಹೇಮಕೂಟ ಬೆಟ್ಟದ ದೇಗುಲಗಳು, ರಾಣಿಯ ಸ್ನಾನಗೃಹ, ಆನೆಲಾಯ, ಕಮಲ ಮಹಲ್, ಹಂಪೆಯ ಬಜಾರು… ಹೀಗೆ ಬಹಳಷ್ಟನ್ನು ಇಲ್ಲಿ ನೋಡಬಹುದು. ಅಕ್ಟೋಬರ್ನಿಂದ ಮಾರ್ಚ್ವರೆಗಿನ ಸಮಯ ಇಲ್ಲಿನ ಭೇಟಿಗೆ ಪ್ರಶಸ್ತ. ವಾರದೆಲ್ಲಾ ದಿನಗಳು ಬೆಳಗ್ಗೆ 9ರಿಂದ ಸಂಜೆ 6ವರೆಗೆ ಭೇಟಿಗೆ ಲಭ್ಯವಿದ್ದು. 15 ವರ್ಷದ ಕೆಳಗಿನ ಮಕ್ಕಳಿಗೆ ಮುಕ್ತ ಅವಕಾಶವಿದೆ. ಉಳಿದವರಿಗೆ ಪ್ರವೇಶ ಶುಲ್ಕವಿದ್ದು, ಆಲ್ಲೈನ್ನಲ್ಲೂ ಟಿಕೆಟ್ ಖರೀದಿಸಬಹುದು. ಇಲ್ಲಿಂದ 13 ಕಿ.ಮೀ. ದೂರದ ಹೊಸಪೇಟೆಯಲ್ಲಿ ರೈಲು ನಿಲ್ದಾಣವಿದ್ದು, ಸುಮಾರು 35 ಕಿ.ಮೀ ದೂರದಲ್ಲಿ ವಿಜಯನಗರ ಜಿಲ್ಲೆಯ ವಿಮಾನನಿಲ್ದಾಣವಿದೆ.
ಸುಮಾರು 7 ಮತ್ತು 8ನೇ ಶತಮಾನಕ್ಕೆ ಸೇರಿದ ಹಿಂದೂ ಮತ್ತು ಜಿನ ಮಂದಿರಗಳ ಸುಂದರ ಸಮುಚ್ಚಯ ಈ ಪಟ್ಟದಕಲ್ಲು, ಬಾದಾಮಿ ಮತ್ತು ಐಹೊಳೆಯ ದೇಗುಲಗಳು. 1987ರಲ್ಲೇ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾದ ಈ ತಾಣವು ಸುಮಾರು 5.5 ಹೆಕ್ಟೇರ್ ಜಾಗದಲ್ಲಿ ಹರಡಿಕೊಂಡಿದೆ. ಚಾಲುಕ್ಯರು ಮತ್ತು ರಾಷ್ಟ್ರಕೂಟರ ಶಿಲ್ಪಕಲೆಯ ವೈಭವವನ್ನು ಇಲ್ಲಿ ಕಾಣಬಹುದಾಗಿದ್ದು, ಪಟ್ಟದಕಲ್ಲಿನಲ್ಲಿ ಶಿವನಿಗೆಂದು ನಿರ್ಮಿಸಲಾದ 9 ದೇಗುಲಗಳ ಸರಣಿಯನ್ನು ಕಾಣಬಹುದು. ಆದರೆ ವೈಷ್ಣವ ಮತ್ತು ಶಾಕ್ತ ಪಂಥದ ಕುರುಹುಗಳನ್ನೂ ದೇವಾಲಯಗಳಲ್ಲಿ ಕಾಣಬಹುದು. ದ್ರಾವಿಡ ಮತ್ತು ಇಂಡೊ ಆರ್ಯನ್ ಶೈಲಿಯ ಮಿಶ್ರಣದಂಥ ವಿನ್ಯಾಸಗಳನ್ನು ಹೊಂದಿರುವ ಜೈನ ದೇವಾಲಯಗಳು ಇಲ್ಲಿವೆ. ವಿರೂಪಾಕ್ಷ ದೇವಳ (ಹಂಪೆಯದ್ದಲ್ಲ, ಇಲ್ಲೇ ಬೇರೆಯದು), ಗಳಗನಾಥ ದೇಗುಲ, ಜಂಬುಲಿಂಗೇಶ್ವರ ಮಂದಿರ, ಸಂಗಮೇಶ್ವರ, ಕಾಡಸಿದ್ದೇಶ್ವರ, ಚಂದ್ರಶೇಖರ, ಕಾಶಿ ವಿಶ್ವನಾಥ ಮತ್ತು ಜೈನ ನಾರಾಯಣ ದೇವಾಲಯಗಳು ಇಲ್ಲಿನ ಆಕರ್ಷಣೆ.
ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಸ್ಥಳಕ್ಕೆ ಸಮೀಪದ ವಿಮಾನ ನಿಲ್ದಾಣ 130 ಕಿ.ಮೀ. ದೂರದ ಹುಬ್ಬಳ್ಳಿಯದ್ದು. ಬೆಳಗಾವಿ ವಿಮಾನ ನಿಲ್ದಾಣ 150 ಕಿ.ಮೀ. ದೂರದಲ್ಲಿದೆ. 18 ಕಿ.ಮೀ. ದೂರದ ಬಾದಾಮಿಯಲ್ಲಿ ರೈಲು ನಿಲ್ದಾಣವಿದೆ. ಅಕ್ಟೋಬರ್ನಿಂದ ಮಾರ್ಚ್ವರೆಗಿನ ಸಮಯ ಇಲ್ಲಿನ ಭೇಟಿಗೆ ಪ್ರಶಸ್ತ. ವಾರದೆಲ್ಲಾ ದಿನಗಳು ಬೆಳಗ್ಗೆ 6ರಿಂದ ಸಂಜೆ 5.30ರವರೆಗೆ ಭೇಟಿಗೆ ಲಭ್ಯವಿದ್ದು. 15 ವರ್ಷದ ಕೆಳಗಿನ ಮಕ್ಕಳಿಗೆ ಮುಕ್ತ ಅವಕಾಶವಿದೆ. ಉಳಿದವರಿಗೆ ಪ್ರವೇಶ ಶುಲ್ಕವಿದ್ದು, ಆಲ್ಲೈನ್ನಲ್ಲೂ ಟಿಕೆಟ್ ಖರೀದಿಸಬಹುದು.
ವಿಶ್ವದ 39 ಮಹತ್ವದ ಜೀವವೈವಿಧ್ಯ ತಾಣಗಳಲ್ಲಿ ಪಶ್ಚಿಮ ಘಟ್ಟವೂ ಒಂದು. ಸಹ್ಯಾದ್ರಿ ಶ್ರೇಣಿಗಳು ಹಿಮಾಲಯಕ್ಕಿಂತ ಸಾಕಷ್ಟು ಹಳೆಯದಾಗಿದ್ದು, ಮುಂಗಾರು ಮಾರುತ ವ್ಯವಸ್ಥೆಗೆ ಇಡೀ ಭೂಮಿಯಲ್ಲೇ ಉತ್ತಮ ಉದಾಹರಣೆಯಿದು. 2012ರಲ್ಲಿ ವಿಶ್ವ ಪರಂಪೊರೆಯ ತಾಣವನ್ನು ಸೇರಿರುವ ಈ ಹಸಿರು ಪ್ರದೇಶ, 795.3 ಹೆಕ್ಟೇರ್ನ ಬೃಹತ್ ಪ್ರದೇಶವನ್ನು ಒಳಗೊಂಡಿದೆ. ವಿಶ್ವದಲ್ಲೇ ಅಳಿವಿನಂಚಿಗೆ ಬಂದಿರುವ ಸುಮಾರು 325 ಜಾತಿಯ ಅಮೂಲ್ಯ ಪ್ರಾಣಿ ಮತ್ತು ಪಕ್ಷಗಳ ಆಶ್ರಯ ತಾಣವಿದು ಎಂಬುದನ್ನು ಜಾಗತಿಕ ಜೀವ ವಿಜ್ಞಾನಿಗಳು ದೃಢಪಡಿಸಿದ್ದಾರೆ.
ಏನಿದೆ ವಿಶೇಷ?
ಪಶ್ಚಿಮ ಘಟ್ಟಗಳು ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲೂ ವ್ಯಾಪಿಸಿದೆ. ಹಲವಾರು ರಾಷ್ಟ್ರೀಯ ಉದ್ಯಾನವನಗಳು ಮತ್ತು ಸಂರಕ್ಷಿತ ಪ್ರದೇಶಗಳನ್ನಿದು ಒಳಗೊಂಡಿದೆ. 7 ಸಾವಿರಕ್ಕೂ ಹೆಚ್ಚಿನ ಪ್ರಭೇದಗಳ ಹೂಬಿಡುವ ಸಸ್ಯಗಳು, 139 ಜಾತಿಯ ಸಸ್ತನಿಗಳು, 508 ಜಾತಿಯ ಹಕ್ಕಿಗಳು, 179 ಜಾತಿಯ ಉಭಯವಾಸಿಗಳು, 6 ಸಾವಿರ ಜಾತಿಯ ಕೀಟಗಳು, 300 ಜಾತಿಯ ಮೀನುಗಳಿಗೆ ಈ ಪ್ರದೇಶ ತವರೆನಿಸಿಕೊಂಡಿದೆ.
ಹೊಯ್ಸಳ ದೇವಾಲಯಗಳು
ತ್ರಿಕೂಟಾಚಲ ವಿನ್ಯಾಸದ, ಚೆನ್ನಕೇಶವ ಮತ್ತು ಹೊಯ್ಸಳೇಶ್ವರರನ್ನು ಆರಾಧಿಸುವ ಬೇಲೂರು ಹಾಗೂ ಹಳೇಬೀಡಿನ ಸರ್ವಾಂಗ ಸುಂದರ ದೇವಾಲಯಗಳು ಯುನೆಸ್ಕೊ ಪಟ್ಟಿ ಸೇರಿ, ವಿಶ್ವ ಮಾನ್ಯತೆ ಪಡೆದಿವೆ. ನಕ್ಷತ್ರಾಕಾರದ ವೇದಿಕೆಯ ಮೇಲೆ ಸ್ಥಿತವಾದ ಈ ಸಂಕೀರ್ಣ ಕೆತ್ತನೆಯ ದೇವಳಗಳು 2004ರಿಂದ ವಿಶ್ವ ಪರಂಪರೆಯ ತಾಣವೆನಿಸಿವೆ. 10ರಿಂದ 14ನೇ ಶತಮಾನದ ಅವಧಿಯಲ್ಲಿ ಆಗಿಹೋದ ಹೊಯ್ಸಳರ ಉತ್ತುಂಗದ ಕಥೆಯನ್ನು ಇಲ್ಲಿನ ಕಲ್ಲಿನಲ್ಲಿರುವ ಕಲೆಗಳು ಹೇಳುತ್ತವೆ.
ಇಲ್ಲಿಯ ವಿಶೇಷತೆ ಏನು?
ರಾಜ ವಿಷ್ಣುವರ್ಧನನ ಕಾಲದಲ್ಲಿ ಬೇಲೂರಿನ ಚೆನ್ನಕೇಶವ ದೇಗುಲ ನಿರ್ಮಿಸಲಾಗಿದ್ದು, ಮಂತ್ರಿ ಕೇತುಮಲ್ಲನ ಕಾಲದಲ್ಲಿ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಆದರೆ ಹೊಯ್ಸಳರ ಆಡಳಿತವಿದ್ದು ಜಾಗಗಳಲ್ಲಿ ಇಂಥ ಹಲವು ಸಣ್ಣ ದೇವಾಲಯಗಳಿದ್ದು, ಎಲ್ಲವುಗಳಲ್ಲೂ ಇಂಥದ್ದೇ ಸೂಕ್ಷ್ಮ ಕುಸುರಿಯಂಥ ಕಲ್ಲಿನ ಕೆತ್ತನೆಗಳನ್ನು ಕಾಣಬಹುದು. ಲೋಹಕ್ಕೆ ಇರಬಹುದಾದಂಥ ಹೊಳಪು ಇಲ್ಲಿನ ಕಲ್ಲುಗಳಿಗಿದ್ದು, ನೋಡುಗರ ಹುಬ್ಬೇರಿಸುತ್ತವೆ.
ಹಾಸನ ಜಿಲ್ಲೆಯಲ್ಲಿರುವ ಇದನ್ನು ವರ್ಷದ ಯಾವುದೇ ಸಮಯದಲ್ಲಿ ಸಂದರ್ಶಿಸಬಹುದು. ವಾರದೆಲ್ಲಾ ದಿನಗಳು ಬೆಳಗ್ಗೆ 6ರಿಂದ ಸಂಜೆ 6ವರೆಗೆ ಹಳೇಬೀಡಿನ ದೇಗುಲ ಭೇಟಿಗೆ ಲಭ್ಯವಿದ್ದು, ಬೆಳಗ್ಗೆ 7.30ರಿಂದ ಸಂಜೆ 6.30ರವರೆಗೆ ಬೇಲೂರಿನ ದೇವಳ ತೆರೆದಿರುತ್ತದೆ. ಪ್ರವೇಶ ಶುಲ್ಕವಿಲ್ಲ.
ಶ್ರೀರಂಗಪಟ್ಟಣದ ಸ್ಮಾರಕಗಳು
ಸುತ್ತಲೂ ಹರಿಯುವ ಕಾವೇರಿ ನದಿಯಿಂದ ದ್ವೀಪದಂತೆ ಕಾಣುವ ಶ್ರೀರಂಗಪಟ್ಟಣ ಮೈಸೂರಿಗೆ ಸಮೀಪದಲ್ಲಿದೆ. ವಿಜಯನಗರ ಮತ್ತು ಹೊಯ್ಸಳ ಶೈಲಿಯ ವಾಸ್ತುಶಿಲ್ಪಗಳು ಇಲ್ಲಿನ ಸ್ಮಾರಕಗಳ ಹೆಗ್ಗಳಿಕೆ. ಊರಿಗೆ ತನ್ನ ಹೆಸರನ್ನು ನೀಡಿರುವ ಶ್ರೀರಂಗನಾಥ ಸ್ವಾಮಿಯ ದೇಗುಲ ಇಲ್ಲಿನ ಹೆಗ್ಗುರುತು. ಇದು ಕರ್ನಾಟಕದ ಭವ್ಯ ವೈಷ್ಣವ ಆರಾಧನಾ ತಾಣಗಳಲ್ಲಿ ಒಂದು.
ಏನು ನೋಡಬಹುದು?
ಹಿಂದೊಮ್ಮೆ ಮೈಸೂರು ಸಂಸ್ಥಾನದ ರಾಜಧಾನಿ ಎನಿಸಿಕೊಂಡಿದ್ದ ಇಲ್ಲಿ, ದರಿಯಾ ದೌಲತ್ ಬಾಗ್, ಶ್ರೀರಂಗಪಟ್ಟಣದ ಕೋಟೆ, ಟಿಪ್ಪು ಸುಲ್ತಾನನ ಗುಂಬಜ್, ಜಾಮಾ ಮಸೀದಿ, ರಂಗನತಿಟ್ಟು ಪಕ್ಷಿಧಾಮಗಳು ನೋಡಲೇಬೇಕಾದವು. ವಿಶ್ವ ಪರಂಪರೆಯ ತಾಣದ ತಾತ್ಕಾಲಿಕ ಪಟ್ಟಿಯಲ್ಲಿರುವ ಇದನ್ನು ವರ್ಷದ ಯಾವುದೇ ಸಮಯದಲ್ಲಿ ಸಂದರ್ಶಿಸಬಹುದು.
ಬೀದರ್, ವಿಜಯಪುರ ಮತ್ತು ಕಲಬುರ್ಗಿಯಲ್ಲಿ ಹರಡಿಕೊಂಡಿರುವ ಈ ಸ್ಮಾರಕಗಳು ಯುನೆಸ್ಕೊದ ತಾತ್ಕಲಿಕ ಪಟ್ಟಿಯಲ್ಲಿವೆ. ಪ್ರಧಾನವಾಗಿ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪವೇ ಈ ಸ್ಮಾರಕಗಳಲ್ಲಿ ಸೊಗಸಾದ ಗುಮ್ಮಟಗಳು, ಕಮಾನುಗಳನ್ನು ನೋಡಬಹುದು. ಹೈದರಾಬಾದ್ನಲ್ಲೂ ಈ ಸುಲ್ತಾನರ ಸ್ಮಾರಕಗಳಿವೆ.
ಪ್ರಮುಖವಾದುದೇನು?
ಬಹಮನಿ ಸುಲ್ತಾನರ ಮೊದಲ ರಾಜಧಾನಿ ಕಲಬುರ್ಗಿಯಲ್ಲಿರುವ ಸ್ಮಾರಕಗಳ ಪೈಕಿ ಕಲಬುರ್ಗಿ ಕೋಟೆ, ದೊಡ್ಡ ಮಸೀದಿ, ಏಳು ಗೋರಿಗಳ ಸಂಕೀರ್ಣದ ಗುಂಬಜ್ ಪ್ರಮುಖವಾದವು. ಬೀದರ್ನ ಸ್ಮಾರಕಗಳ ಪೈಕಿ ಬೀದರ್ ಕೋಟೆ, ಅರಮನೆ, ಮದರಸ, ಬಹಮನಿ ಗೋರಿಗಳು ಇತ್ಯಾದಿಗಳನ್ನು ನೋಡಬಹುದು. ವಿಜಯಪುರದಲ್ಲಿ ಸುಮಾರು 80ಕ್ಕೂ ಹೆಚ್ಚಿನ ಸಣ್ಣ, ದೊಡ್ಡ ಸ್ಮಾರಕಗಳಿವೆ. ಇವುಗಳಲ್ಲಿ ಗೋಲ್ ಗುಂಬಜ್ ಜನಪ್ರಿಯವಾಗಿದ್ದು, ಪ್ರವಾಸಿಗರ ಮೆಚ್ಚಾಗಿದೆ. ಇದು ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಗುಂಬಜ್ ಎಂದು ಖ್ಯಾತವಾಗಿದೆ.
ಅಕ್ಟೋಬರ್ನಿಂದ ಮಾರ್ಚ್ವರೆಗಿನ ಸಮಯ ಇಲ್ಲಿನ ಭೇಟಿಗೆ ಸೂಕ್ತ. ಕೆಲವು ಸ್ಮಾರಕಗಳಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ; ಆದಿಲ್ ಶಾಹಿ ಸ್ಮಾರಕಗಳಿಗೆ ಶುಲ್ಕ ನಿಗದಿ ಪಡಿಸಲಾಗಿದೆ.
ದೇಶ
‘ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ SIR’ – ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ-ಜೆಡಿಎಸ್
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ನಡೆದಿವೆ ಎಂದು ಆರೋಪಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಡಾ. ಅಶ್ವತ್ಥ ನಾರಾಯಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರು ನಿಯೋಗದ ಭಾಗವಾಗಿದ್ದರು.
ನಿಯೋಗವು ಸಲ್ಲಿಸಿರುವ ದೂರಿನಲ್ಲಿ, ರಾಜ್ಯದ ವಿವಿಧ ಭಾಗಗಳಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾಮೂಹಿಕ ಎಸ್ಐಆರ್ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕಾದ ಬಿಎಲ್ಒಗಳು, ಕೆಲವು ಕಡೆ ಮಸೀದಿಗಳು, ಚೌಲ್ಟ್ರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮತದಾರರನ್ನು ಒಟ್ಟುಗೂಡಿಸಿ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ, ಬಿಎಲ್ಒಗಳ ಮೇಲೆ ಸರ್ಕಾರದ ಒತ್ತಡ, ಅನರ್ಹ ಮತದಾರರನ್ನು ಸೇರಿಸಲು ಯತ್ನ, ನಕಲಿ ದಾಖಲೆಗಳ ಬಳಕೆ ಹಾಗೂ ಪ್ರತಿಪಕ್ಷಗಳ ಬೂತ್ ಲೆವೆಲ್ ಏಜೆಂಟ್ಗಳಿಗೆ (BLA) ಮಾಹಿತಿ ನೀಡದೇ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ಆರೋಪಗಳನ್ನೂ ಬಿಜೆಪಿ-ಜೆಡಿಎಸ್ ಮಾಡಿದೆ.
ರಾಮನಗರ, ಯಶವಂತಪುರ, ಜಯನಗರ, ಇಂಡಿ, ಕುಣಿಗಲ್ ಹಾಗೂ ಪಾವಗಡ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಡೆದಿರುವ ಸಾಮೂಹಿಕ ಎಸ್ಐಆರ್ ಅನ್ನು ರದ್ದುಪಡಿಸಿ, ಹೊಸದಾಗಿ ನಿಯಮಾನುಸಾರ ಮರುಪರಿಷ್ಕರಣೆ ನಡೆಸಬೇಕು ಎಂದು ನಿಯೋಗ ಆಗ್ರಹಿಸಿದೆ. ಅಗತ್ಯವಿದ್ದರೆ ಹೊರರಾಜ್ಯದ ಅಧಿಕಾರಿಗಳ ಮೂಲಕ ಎಸ್ಐಆರ್ ಪ್ರಕ್ರಿಯೆ ನಡೆಸುವಂತೆ ಚುನಾವಣಾ ಆಯೋಗವನ್ನು ಮನವಿ ಮಾಡಿದೆ.
ಸೂಚನೆ: ಮೇಲಿನ ಆರೋಪಗಳು ಬಿಜೆಪಿ-ಜೆಡಿಎಸ್ ನಿಯೋಗವು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ದೂರಿನಲ್ಲಿರುವ ಅಂಶಗಳಾಗಿದ್ದು, ಈ ಕುರಿತು ಚುನಾವಣಾ ಆಯೋಗದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಪ್ರಕಟವಾಗಬೇಕಿದೆ.
ದೇಶ
“ಇನ್ನೆಷ್ಟು ಜನ ಸತ್ತರೆ ಕ್ರಮ?” ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ ಎಸ್.ಟಿ. ಸೋಮಶೇಖರ್
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಭವಿಸಿದ ಕಲ್ಲು ಗಣಿಗಾರಿಕೆ ದುರಂತದಲ್ಲಿ ಏಳು ಮಂದಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ರಾಜ್ಯ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಇನ್ನೂ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿರುವ ಅವರು, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ತಮ್ಮ ಪತ್ರದಲ್ಲಿ, ಈ ದುರಂತ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಬೆಂಗಳೂರು ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದು ಹಾಗೂ ಮುಖ್ಯಮಂತ್ರಿಗಳು ಗಾಯಾಳುಗಳ ಆರೋಗ್ಯ ವಿಚಾರಿಸಿರುವುದನ್ನು ಉಲ್ಲೇಖಿಸಿದ್ದಾರೆ. ಆದರೆ, ಘಟನೆ ನಡೆದ ಬಳಿಕ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧವಾಗಲಿ ಅಥವಾ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧವಾಗಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಏಳು ಜನರ ಜೀವ ಹೋದರೂ ಕ್ರಮವಾಗದಿದ್ದರೆ ಇನ್ನೆಷ್ಟು ಜನ ಸಾಯಬೇಕು? ಮೃತಪಟ್ಟ ಕಾರ್ಮಿಕರ ಕುಟುಂಬಗಳ ಭವಿಷ್ಯವನ್ನು ಯಾರು ನೋಡಿಕೊಳ್ಳುತ್ತಾರೆ? ಅವರ ಮಕ್ಕಳ ಶಿಕ್ಷಣ ಹಾಗೂ ಬದುಕಿನ ಹೊಣೆ ಯಾರು ಹೊರುತ್ತಾರೆ?” ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಬಳಕೆಯಿಂದ ಜನರು ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿರುವ ಎಸ್.ಟಿ. ಸೋಮಶೇಖರ್, ಈ ಕುರಿತು ಈ ಹಿಂದೆಯೂ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ತಿಳಿಸಿದ್ದಾರೆ. ಕಲ್ಲು ಸ್ಫೋಟದ ಶಬ್ದ ಮತ್ತು ಅಕ್ರಮ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಿ, ಹೊಣೆಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕ್ಷೇತ್ರದ ಜನರ ಭಾವನೆಗಳಿಗೆ ಸ್ಪಂದಿಸಿ ಈ ಮನವಿ ಮಾಡುತ್ತಿರುವುದಾಗಿ ತಿಳಿಸಿರುವ ಅವರು, ದುರಂತದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ದೇಶ
ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಜುಲೈ 6ರ ಬೆಂಗಳೂರು ಗೋಲ್ಡ್ ರೇಟ್ ಇಲ್ಲಿದೆ
ಬೆಂಗಳೂರು: ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಸಂತಸದ ಸುದ್ದಿ. ಕಳೆದ ವಾರ ಏರಿಕೆ ಕಂಡಿದ್ದ ಚಿನ್ನದ ಬೆಲೆ (Gold Price Today) ಇದೀಗ ಮತ್ತೆ ಇಳಿಕೆಯ ಹಾದಿಯಲ್ಲಿದ್ದು, ಜುಲೈ 6, 2026 (ಸೋಮವಾರ) ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆ ದಾಖಲಾಗಿದೆ.
ಇಂದಿನ ದರದ ಪ್ರಕಾರ 24 ಕ್ಯಾರೆಟ್ ಶುದ್ಧ ಚಿನ್ನದ 1 ಗ್ರಾಂ ಬೆಲೆ ₹14,662 ಆಗಿದ್ದು, ನಿನ್ನೆಗೆ ಹೋಲಿಸಿದರೆ ₹11 ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ₹1,46,620 ಆಗಿದ್ದು, ₹110 ಇಳಿಕೆ ಕಂಡಿದೆ.
22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹13,440 ಆಗಿದ್ದು, ₹10 ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ₹1,34,400 ಆಗಿದ್ದು, ₹100 ಕಡಿಮೆಯಾಗಿದೆ. ಇದೇ ವೇಳೆ 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹10,997 ಹಾಗೂ 10 ಗ್ರಾಂ ಬೆಲೆ ₹1,09,970 ಆಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಶುದ್ಧ ಚಿನ್ನದ ಬೆಲೆ ಇಳಿಕೆಯಾಗಿರುವುದರ ಜೊತೆಗೆ ಬೆಳ್ಳಿ ದರದಲ್ಲೂ ಗಮನಾರ್ಹ ಕುಸಿತ ದಾಖಲಾಗಿದೆ. ಒಂದು ಗ್ರಾಂ ಬೆಳ್ಳಿ ₹245ಕ್ಕೆ ಲಭ್ಯವಿದ್ದು, ಒಂದು ಕಿಲೋಗ್ರಾಂ ಬೆಳ್ಳಿ ಬೆಲೆ ₹2,45,000 ಆಗಿದೆ. ಬೆಳ್ಳಿ ದರದಲ್ಲಿ ಸುಮಾರು ₹5,000 ಇಳಿಕೆ ಕಂಡುಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಬದಲಾವಣೆ, ಡಾಲರ್ ಮೌಲ್ಯ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ಬೆಳವಣಿಗೆಗಳ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಪ್ರತಿದಿನ ಏರಿಳಿತ ಕಂಡುಬರುತ್ತಿದೆ. ಆಭರಣ ಖರೀದಿಸುವವರು ಖರೀದಿಗೂ ಮುನ್ನ ಸ್ಥಳೀಯ ಜ್ಯುವೆಲ್ಲರಿ ಅಂಗಡಿಗಳಲ್ಲಿ ದರವನ್ನು ಮತ್ತೊಮ್ಮೆ ಪರಿಶೀಲಿಸುವುದು ಸೂಕ್ತ.
ಇಂದಿನ ಚಿನ್ನದ ದರ
| ಚಿನ್ನದ ಶುದ್ಧತೆ | 1 ಗ್ರಾಂ | 10 ಗ್ರಾಂ |
|---|---|---|
| 24 ಕ್ಯಾರೆಟ್ | ₹14,662 | ₹1,46,620 |
| 22 ಕ್ಯಾರೆಟ್ | ₹13,440 | ₹1,34,400 |
| 18 ಕ್ಯಾರೆಟ್ | ₹10,997 | ₹1,09,970 |
-
ದೇಶ10 hours agoಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತೆಹ್ರಾನ್ ಬೀದಿಗಳಲ್ಲಿ ಲಕ್ಷಾಂತರ ಜನರ ಅಂತಿಮ ನಮನ
-
ದೇಶ16 hours agoSakkath Santhe 2026: ಗೃಹ ಉತ್ಪನ್ನಗಳಿಗೆ ವೇದಿಕೆ, ಇಂದಿರಾನಗರದಲ್ಲಿ ಜನಸಾಗರ
-
ದೇಶ14 hours agoಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಜುಲೈ 6ರ ಬೆಂಗಳೂರು ಗೋಲ್ಡ್ ರೇಟ್ ಇಲ್ಲಿದೆ
-
ದೇಶ14 hours agoರಾಜಾಜಿನಗರ ಶಾಸಕರ ಕಚೇರಿ ಮುಂದೆ ಹೈಡ್ರಾಮಾ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
-
ದೇಶ13 hours ago“ಇನ್ನೆಷ್ಟು ಜನ ಸತ್ತರೆ ಕ್ರಮ?” ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ ಎಸ್.ಟಿ. ಸೋಮಶೇಖರ್
-
ದೇಶ11 hours ago‘ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ SIR’ – ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ-ಜೆಡಿಎಸ್
-
ದೇಶ14 hours agoPoK ಪ್ರತಿಭಟನೆ ತೀವ್ರ: ‘ಗಡಿ ತೆರೆಯಿರಿ, ಮಾನವೀಯ ನೆರವು ನೀಡಿ’ ಎಂದು ಭಾರತದತ್ತ ಮೊರೆ
-
ದೇಶ11 hours agoಚೀನಾ-ಪಾಕ್ ಜಲಾಂತರ್ಗಾಮಿಗಳಿಗೆ ಭಾರತದ ಹೈಟೆಕ್ ಬ್ರಹ್ಮಾಸ್ತ್ರ! ಸಮುದ್ರದಾಳದಲ್ಲಿ ‘ಸೀಕ್ರೆಟ್ ಸೆನ್ಸಾರ್ ನೆಟ್ವರ್ಕ್’
