ರಾಜಕೀಯ
ಸಿದ್ದರಾಮಯ್ಯ ಸರ್ಕಾರ ಸೇಫಾ? ದುಬೈನಲ್ಲಿ ನಡೆಯುತ್ತಿದೆಯಾ ಪತನದ ಮಾಸ್ಟರ್ ಪ್ಲ್ಯಾನ್!

ಬೆಂಗಳೂರು: ಒಂದು ಕಡೆಯಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಮತ, ಮತ್ತೊಂದು ಕಡೆಯಲ್ಲಿ ರಮೇಶ್ ಜಾರಕಿಹೊಳಿ ಇದರ ಜೊತೆಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ್ ದುಬೈ ಪ್ರವಾಸ. ಹೌದು, ಈ ಎಲ್ಲಾ ಬೆಳವಣಿಗೆಗಳು ರಾಜ್ಯ ರಾಜಕಾರಣದ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು, ಅನುಮಾನಗಳು ಹಾಗೂ ಕುತೂಹಲಗಳಿಗೆ ಕಾರಣವಾಗುತ್ತಿವೆ. ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಸರ್ಕಾರ ಪತನಕ್ಕೆ ಸಂಚು ರೂಪಿಸಲಾಗುತ್ತಿದೆ ಎಂದು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಆರೋಪ ಮಾಡಿದ್ದರು. ಅದನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ರವಿ ಗಣಿಗ ಹಳೆ ಆಪರೇಷನ್ ಕಮಲ ತಂಡ ಸಕ್ರಿಯವಾಗಿದೆ. ನನ್ನನ್ನು ಕೂಡಾ ಸಂಪರ್ಕ ಮಾಡಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಎಲ್ಲ ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ಕೊಟ್ಟಿರುವುದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ದುಬೈ ಪ್ರವಾಸ. ಕುಮಾರಸ್ವಾಮಿ ಮಾತ್ರ ಹೋಗಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚರ್ಚೆ ಆಗುತ್ತಿರಲಿಲ್ಲ. ಕಳೆದ ಬಾರಿಯ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಪಿ ಯೋಗೇಶ್ವರ್ ಕೂಡಾ ಈ ಪ್ರವಾಸದಲ್ಲಿದ್ದಾರೆ. ಇವರಿಬ್ಬರು ಖಾಸಗಿ ಕಾರ್ಯಕ್ರಮಕ್ಕೆ ದುಬೈ ಪ್ರವಾಸ ಮಾಡಿದರೂ ಈ ಪ್ರವಾಸಕ್ಕೆ ಮಾತ್ರ ಪ್ರತ್ಯೇಕ ಅರ್ಥ ಕಲ್ಪಿಸಲಾಗುತ್ತಿದೆ.
ರಾಮನಗರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಈ ಇಬ್ಬರು ನಾಯಕರು ಒಂದಾಗಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ. ತಮ್ಮ ರಾಜಕೀಯ ಅಸ್ತಿತ್ವವನ್ನು ನೋಡುತ್ತಿರುವ ಸಿಪಿ ಯೋಗೇಶ್ವರ್ ಡಿಕೆಶಿ ಅಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕುಮಾರಸ್ವಾಮಿ ಜೊತೆಗೆ ಕೈಜೋಡಿಸಿದ್ದಾರೆ. ದುಬೈ ಖಾಸಗಿ ಕಾರ್ಯಕ್ರಮದ ಸಂದರ್ಭದಲ್ಲಿ ಇವರಿಬ್ಬರು ಭೇಟಿಯಾಗಿ ಈ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎನ್ನುತ್ತಿವೆ ಅವರ ಆಪ್ತ ಮೂಲಗಳು. ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ ಆಪರೇಷನ್ ಆತಂಕವಂತೂ ಅವರಿಗೆ ಕಾಡುತ್ತಿದೆ. ಹೇಗಾದರೂ ಮಾಡಿ ಲೋಕಸಭೆ ಚುನಾವಣೆಯ ಬಳಿಕ ಸರ್ಕಾರ ಪತನ ಮಾಡಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿರುವುದಂತೂ ಸತ್ಯ. ಆದರೆ ಅದೆಷ್ಟರ ಮಟ್ಟಿಗೆ ಸಕ್ಸರ್ ಆಗುತ್ತದೆ ಎಂಬುದುದು ಸದ್ಯದ ಕುತೂಹಲ