ಸಿನಿಮಾ
‘ಪುಷ್ಪ 2’ ಚಿತ್ರಕ್ಕೆ ಅಲ್ಲು ಅರ್ಜುನ್ 300 ಕೋಟಿ ರೂ. ಸಂಭಾವನೆ?
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮೊದಲ ಪಾರ್ಟ್ ಯಶಸ್ಸು ಕಂಡಿರುವುದರಿಂದ ಎರಡನೇ ಪಾರ್ಟ್ ಮೇಲೆ ನಿರ್ದೇಶಕರು ಹೆಚ್ಚು ಗಮನ ನೀಡಿದ್ದಾರೆ. ಅಲ್ಲು ಅರ್ಜುನ್ ಅವರು ಲುಕ್ ಕೂಡ ಬದಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಅಲ್ಲು ಅರ್ಜುನ್ ಅವರು ಈ ಚಿತ್ರಕ್ಕಾಗಿ ರೆಕಾರ್ಡ್ ಬ್ರೇಕಿಂಗ್ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ಪುಷ್ಪ’ ಸಿನಿಮಾ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರ ಸಂಭಾವನೆ ನೂರು ಕೋಟಿ ರೂಪಾಯಿ ಇರಲಿಲ್ಲ. ಯಾವಾಗ ‘ಪುಷ್ಪ’ ಸಿನಿಮಾ ಯಶಸ್ಸು ಕಂಡಿತೋ ಅವರ ಲೆವೆಲ್ ಚೇಂಜ್ ಆಗಿದೆ. ‘ಪುಷ್ಪ’ ಚಿತ್ರ 300 ಕೋಟಿ ಗಳಿಕೆ ಮಾಡಿರುವುದರಿಂದ ‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಮೂಲಗಳ ಪ್ರಕಾರ ಅಲ್ಲು ಅರ್ಜುನ್ ಅವರಿಗೆ ಈ ಚಿತ್ರದಿಂದ 330 ಕೋಟಿ ರೂಪಾಯಿ ಸಂಭಾವನೆ ಸಿಗುತ್ತಿದೆ! ಇದು ಅಚ್ಚರಿ ಎನಿಸಿದರೂ ನಿಜ.
ಅಲ್ಲು ಅರ್ಜುನ್ ಸಂಭಾವನೆ ವಿಚಾರ ಹೊಸ ದಾಖಲೆ ಎಂದು ಕರೆಯಲಾಗುತ್ತಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಕೂಡ ಇಷ್ಟು ದೊಡ್ಡ ಮಟ್ಟದ ಸಂಭಾವನೆ ಪಡೆದಿಲ್ಲ ಅನ್ನೋದು ಅನೇಕರ ಅಭಿಪ್ರಾಯ. ಸದ್ಯ ರಜನಿಕಾಂತ್ ಅವವರು ಹೊಸ ಸಿನಿಮಾಗೆ 210 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಶಾರುಖ್ ಹಾಗೂ ಸಲ್ಲು ಸಂಭಾವನೆ 150-200 ಕೋಟಿ ರೂಪಾಯಿ ಇದೆ.
ಅಲ್ಲು ಅರ್ಜುನ್ ಅವರು ಈವರೆಗೆ ‘ಪುಷ್ಪ 2’ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ. ಬದಲಿಗೆ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್, ಒಟಿಟಿ, ಸ್ಯಾಟಲೈಟ್ ಹಕ್ಕು, ಆಡಿಯೋ ರೈಟ್ಸ್ ಸೇರಿ ಎಲ್ಲಾ ಬಿಸ್ನೆಸ್ನಿಂದ್ ಶೇ. 33 ಲಾಭ ಅಲ್ಲು ಅರ್ಜುನ್ ಪಾಲಾಗಲಿದೆ. ಈ ಚಿತ್ರ ಅನಾಯಸವಾಗಿ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಲಿದೆ. ಆ ಬಗ್ಗೆ ತಂಡದವರಿಗೂ ಕಾನ್ಫಿಡೆನ್ಸ್ ಇದೆ. ಹೀಗಾಗಿ, ಅಲ್ಲು ಅರ್ಜುನ್ ಅವರಿಗೆ ಕನಿಷ್ಠ 330 ಕೋಟಿ ರೂಪಾಯಿ ಸಿಗಲಿದೆ.
ದೇಶ
ACTOR SRI LEELA : ಬಹುಭಾಷಾ ನಟಿ ಶ್ರೀಲೀಲಾ ಎಂಬಿಬಿಎಸ್ ಪದವಿ ಪೂರ್ಣ
ಬೆಂಗಳೂರು/ಮುಂಬೈ: ಬಹುಭಾಷಾ ನಟಿ ಶ್ರೀಲೀಲಾ ತಮ್ಮ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮುಂಬೈನ ಡಿ.ವೈ. ಪಾಟೀಲ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಪದವಿ ಸ್ವೀಕರಿಸಿದ್ದಾರೆ. ಫೆಬ್ರವರಿ 10ರಂದು ನಡೆದ ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆ ಹರಿದುಬಂದಿದೆ.
24 ವರ್ಷದ ನಟಿ ಮೆರೂನ್ ಬಣ್ಣದ ಪದವಿ ಗೌನ್ ಮತ್ತು ಕ್ಯಾಪ್ ಧರಿಸಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದ ದೃಶ್ಯಗಳು ಅಭಿಮಾನಿಗಳ ಮನಸೆಳೆದಿವೆ. ಒಂದು ವಿಡಿಯೋದಲ್ಲಿ ತಮ್ಮ ಹೆಸರನ್ನು ಘೋಷಿಸುವ ಮೊದಲು ಸಹಪಾಠಿಗಳೊಂದಿಗೆ ಸಾಲಿನಲ್ಲಿ ನಿಂತು ಕಾಯುತ್ತಿರುವುದು ಕಾಣಿಸುತ್ತದೆ. ನಂತರ ಪ್ರಮಾಣಪತ್ರವನ್ನು ನಗುಮೊಗದಿಂದ ಸ್ವೀಕರಿಸಿದ ಅವರು, ವೇದಿಕೆಯಿಂದ ಇಳಿಯುವಾಗ ಕುಟುಂಬ ಸದಸ್ಯರನ್ನು ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು.
ಬಿಡುವಿಲ್ಲದ ಚಿತ್ರರಂಗದ ವೃತ್ತಿಜೀವನದ ನಡುವೆಯೂ ವೈದ್ಯಕೀಯ ಶಿಕ್ಷಣವನ್ನು ಸಮತೋಲನಗೊಳಿಸಿರುವ ಶ್ರೀಲೀಲಾ ಅವರ ಸಾಧನೆಗೆ ಅಭಿಮಾನಿಗಳು ಹಾಗೂ ಸಿನಿ ವಲಯದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಹಲವು ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ವಿದ್ಯಾಭ್ಯಾಸವನ್ನು ಕಡೆಗಣಿಸದೇ ಯಶಸ್ವಿಯಾಗಿ ಮುಗಿಸಿರುವುದು ಯುವಜನತೆಗೆ ಸ್ಪೂರ್ತಿಯಾಗಿದೆ.
ನಟನೆ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಇಟ್ಟಿರುವ ಶ್ರೀಲೀಲಾ ಅವರ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದು, “ಡಾಕ್ಟರ್ ಶ್ರೀಲೀಲಾ” ಎಂದು ಅಭಿಮಾನಿಗಳು ಕರೆದಾಡುತ್ತಿದ್ದಾರೆ.
ದೇಶ
ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಮತ್ತೊಂದು ಸಂಕಷ್ಟ: ಕ್ರೈಸ್ತ ಧರ್ಮಕ್ಕೆ ಅಪಮಾನ ಆರೋಪ, ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ದೂರು
ಬೆಂಗಳೂರು: ನಟ ಯಶ್ (Yash) ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ (Toxic Cinema) ಚಿತ್ರಕ್ಕೆ ಒಂದರ ಮೇಲೊಂದು ವಿವಾದಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದೆ ಟೀಸರ್ನಲ್ಲಿನ ಅಶ್ಲೀಲ ದೃಶ್ಯಗಳನ್ನು ಖಂಡಿಸಿ ಮಹಿಳಾ ಒಕ್ಕೂಟಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಚಿತ್ರತಂಡದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಟಾಕ್ಸಿಕ್ ಸಿನಿಮಾದ ಕೆಲವು ದೃಶ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಹಾಗೂ ಕ್ರೈಸ್ತ ಸಮುದಾಯಕ್ಕೆ ಮುಜುಗರ ಉಂಟುಮಾಡಲಾಗಿದೆ ಎಂದು ಆರೋಪಿಸಿ ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (National Christian Federation) ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಹಾಗೂ ಸೆನ್ಸಾರ್ ಬೋರ್ಡ್ಗೆ ದೂರು ಸಲ್ಲಿಸಿದೆ. ಕ್ರೈಸ್ತರ ದೇವದೂತ ಸಂತ ಮಿಕಯೇಲ್ ಅವರಿಗೆ ಸಂಬಂಧಿಸಿದ ದೃಶ್ಯಗಳಲ್ಲಿ ಅವಮಾನಕಾರಿ ಹಾಗೂ ಅಶ್ಲೀಲ ಚಿತ್ರೀಕರಣ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಆ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿಯೂ ಸಂತ ಮಿಕಯೇಲ್ ಮುಂದೆ ಚಿತ್ರೀಕರಿಸಿರುವ ದೃಶ್ಯಗಳನ್ನು ತೆಗೆದುಹಾಕಿ, ಕ್ರೈಸ್ತ ಸಮುದಾಯದ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಟಾಕ್ಸಿಕ್ ಟೀಸರ್ನಲ್ಲಿನ ಕೆಲವು ದೃಶ್ಯಗಳು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಆರೋಪಿಸಿ ಮಹಿಳಾ ಒಕ್ಕೂಟಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದವು. ಟೀಸರ್ನ ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಮಾಡಲಾಗಿತ್ತು.
ಒಟ್ಟಾರೆ, ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ ಸಿನಿಮಾ ಭಾರೀ ವಿವಾದದ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಚಿತ್ರತಂಡದ ನಡೆ ಮಹತ್ವ ಪಡೆದುಕೊಂಡಿದೆ.
ದೇಶ
ಭಾರತೀಯ OTT ಇತಿಹಾಸದಲ್ಲೇ ಅಪರೂಪದ ಘಟನೆ
ಬೆಂಗಳೂರು: ಪ್ರಭಾಸ್ (Prabhas) ಎಂದರೆ ಕೇವಲ ಸ್ಟಾರ್ ಅಲ್ಲ, ಅದು ಒಂದು ಬ್ರ್ಯಾಂಡ್. ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅವರಿಗೆ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಹೇಗೇ ಇರಲಿ, ಬಾಕ್ಸ್ ಆಫೀಸ್ನಲ್ಲಿ ಭಾರೀ ಕಲೆಕ್ಷನ್ ಮಾಡುವುದು ಈಗ ಸಾಮಾನ್ಯವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರಭಾಸ್ ನಟನೆಯ ಹಾರರ್ ಕಾಮಿಡಿ ಸಿನಿಮಾ ‘ದಿ ರಾಜಾ ಸಾಬ್’ ಕೂಡ ಅದಕ್ಕೆ ಹೊರತಲ್ಲ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ನಿರೀಕ್ಷಿಸಿದ ಮಟ್ಟದ ಮೆಚ್ಚುಗೆ ಪಡೆಯಲಿಲ್ಲ. ಕಥೆ, ಚಿತ್ರಕಥೆ ಹಾಗೂ ವಿಎಫ್ಎಕ್ಸ್ ಬಗ್ಗೆ ಟೀಕೆಗಳು ಕೇಳಿಬಂದರೂ, ಸಿನಿಮಾ ಮೊದಲ ವಾರದಲ್ಲೇ ಸುಮಾರು 300 ಕೋಟಿ ರೂಪಾಯಿಗೂ ಅಧಿಕ ಮೊತ್ತ ಗಳಿಸಿತ್ತು. ಇದರಿಂದಲೇ ಪ್ರಭಾಸ್ ಕ್ರೇಜ್ ಯಾವ ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.
ಇದೀಗ ‘ದಿ ರಾಜಾ ಸಾಬ್’ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಇಲ್ಲಿ ಕೂಡ ಬಿಡುಗಡೆಯಿಗೂ ಮುಂಚೆಯೇ ದಾಖಲೆ ಮಟ್ಟದ ಕ್ರೇಜ್ ಸೃಷ್ಟಿಸಿದೆ. ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ಫೆಬ್ರವರಿ 6ರಿಂದ ಪ್ರಸಾರವಾಗಲಿದೆ. ಒಟಿಟಿ ಪ್ಲಾಟ್ಫಾರ್ಮ್ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಮಾಹಿತಿಯಂತೆ, ಲಕ್ಷಾಂತರ ಮಂದಿ ‘Remind Me’ ಬಟನ್ ಕ್ಲಿಕ್ ಮಾಡಿದ್ದಾರೆ. ಈ ಭಾರೀ ಟ್ರಾಫಿಕ್ ನಿಭಾಯಿಸಲು ಜಿಯೋ ಹಾಟ್ಸ್ಟಾರ್ ತನ್ನ ಸರ್ವರ್ಗಳನ್ನು ಅಪ್ಗ್ರೇಡ್ ಮಾಡಿರುವುದು ಭಾರತೀಯ ಒಟಿಟಿ ಇತಿಹಾಸದಲ್ಲೇ ಅಪರೂಪದ ಘಟನೆ ಎನ್ನಲಾಗಿದೆ.
ಒಟಿಟಿ ಆವೃತ್ತಿಯಲ್ಲಿ ಪ್ರೇಕ್ಷಕರಿಗೆ ವಿಶೇಷ ಉಡುಗೊರೆಯೂ ಇದೆ. ಚಿತ್ರಮಂದಿರಗಳಲ್ಲಿ ತಾಂತ್ರಿಕ ಕಾರಣಗಳಿಂದ ಕೈಬಿಡಲಾಗಿದ್ದ 4 ರಿಂದ 8 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಲಾಗಿದೆ. ಇದರಲ್ಲಿ ಪ್ರಭಾಸ್ ಅವರ ‘ಓಲ್ಡ್ ಗೆಟಪ್’ ಹಾಗೂ ಒಂದು ಸಾಹಸ ದೃಶ್ಯ ಪ್ರಮುಖ ಆಕರ್ಷಣೆಯಾಗಲಿದೆ.
ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ದಿ ರಾಜಾ ಸಾಬ್’ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ.
-
ಬೆಂಗಳೂರು18 hours agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ದೇಶ17 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ದೇಶ15 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ಕ್ರೀಡೆ12 hours agoIND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
-
ದೇಶ15 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ಅಪರಾಧ17 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ13 hours agoHAL ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?
-
ದೇಶ16 hours agoBHARATH BANDH : ದೇಶವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರ ಹೋರಾಟ, ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ
