Blog
ಬೈಕ್ಗಳಲ್ಲಿ ಬಂದ ನಾಲ್ವರು ಶೂಟರ್ಗಳನ್ನು ಪೊರಕೆ ಹಿಡಿದು ಓಡಿಸಿದ ಮಹಿಳೆ
ಭಿವಾನಿ: ಎರಡು ಬೈಕ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮನೆಯ ಹೊರಗೆ ನಿಂತಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ. ಗುಂಡಿನ ದಾಳಿಯ ಸಮಯದಲ್ಲಿ, ಹೊರಗೆ ನಿಂತಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮನೆಯ ಹೊರಗಡೆ ಏನೋ ಶಬ್ದವಾಗುತ್ತಿರುವುದನ್ನು ಕಂಡ ಮಹಿಳೆ ಪೊರಕೆಯನ್ನೇ ಆಯುಧವಾಗಿ ಹಿಡಿದುಕೊಂಡು ಬಂದು, ಧೈರ್ಯದಿಂದ ನಾಲ್ವರು ದುಷ್ಕರ್ಮಿಗಳನ್ನು ಅಲ್ಲಿಂದ ಹೆದರಿ ಓಡಿ ಹೋಗುವಂತೆ ಮಾಡಿದ್ದಾಳೆ. ಈ ಫಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.ನವೆಂಬರ್ 27 ಬೆಳಗ್ಗೆ 7:30ರ ಸುಮಾರಿಗೆ ಭಿವಾನಿಯ ಡಾಬರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವಂತೆ, ದಾಳಿಕೋರರು ಹರಿಕಿಶನ್ ಎಂಬಾತನ ಮೇಲೆ ಒಂಬತ್ತು ಭಾರೀ ಗುಂಡು ಹಾರಿಸಿದ್ದು ಕಂಡು ಬಂದಿದೆ. ಸದ್ಯ ಹರಿಕಿಶನ್ಗೆ ಅಲ್ಲಲ್ಲಿ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರವಿ ಈ ಹಿಂದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದು, ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೊಲೀಸರಿಂದ ತಿಳಿದುಬಂದಿದೆ.
ಹರಿಕಿಶನ್ ತನ್ನ ಮನೆಯ ಬಳಿ ನಿಂತಿರುವುದನ್ನು ಕಾಣಬಹುದು. ಆ ಸಮಯದಲ್ಲೇ ಏಕಾಏಕಿ ಎರಡು ಬೈಕ್ಗಳು ಬಂದಿದ್ದು, ಬೈಕಿನಲ್ಲಿ ಬಂದ ನಾಲ್ವರು ಏಕಾಏಕಿ ಹರಿಕಿಶನ್ ಮೇಲೆ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಅಷ್ಟೊತ್ತಿಗಾಗಲೇ ಮಹಿಳೆಯೊಬ್ಬಳು ಪೊರಕೆ ಹಿಡಿದು ನಾಲ್ವರು ದುಷ್ಕರ್ಮಿಗಳನ್ನು ಅಲ್ಲಿಂದ ಹೆದರಿ ಓಡಿ ಹೋಗುವಂತೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.ಮಹಿಳೆಯ ಧೈರ್ಯ ಕಂಡು ಗಾಬರಿಗೊಂಡ ಶೂಟರ್ಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರಲ್ಲಿ ಒಬ್ಬರು ಮಹಿಳೆಯ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
Blog
BIG NEWS : ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು:
ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಲ್ಲ. ಹೈಕಮಾಂಡ್ ಮುಂದೆ ಎಲ್ಲವೂ ಮಾತನಾಡಿದ್ದೇವೆ. ಅದರ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಹೈಕಮಾಂಡ್ ಏನು ಹೇಳುತ್ತದೋ ಅದನ್ನೇ ಪಾಲಿಸುತ್ತೇನೆ. ಏನು ಹೇಳಬೇಕೋ ಅವರನ್ನೇ ಕೇಳಿ” ಎಂದು ಹೇಳಿದರು.
ದೆಹಲಿಗೆ ತೆರಳುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಕರೆಯದೇ ಇದ್ದರೆ ನಾನು ಯಾಕೆ ಹೋಗಲಿ? ಬಜೆಟ್ ಸಭೆಗಳಿವೆ. ಹೈಕಮಾಂಡ್ ಕರೆದರೆ ಹೋಗುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಬಜೆಟ್ ಪೂರ್ವ ಸಿದ್ಧತಾ ಸಭೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಗೈರಾಗಿರುವ ಬಗ್ಗೆ ಕೇಳಿದಾಗ, “ಹೌದು, ಅವರು ಅನುಮತಿ ಪಡೆದು ಲೆಟರ್ ಬರೆದಿದ್ದಾರೆ. ಅಸ್ಸಾಂ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಭೆ ನಡೆಯಲಿದೆ” ಎಂದು ತಿಳಿಸಿದರು.
ಪ್ರತಾಪ್ ಸಿಂಹರಿಗೆ ಬಿಜೆಪಿಯೇ ಟಿಕೆಟ್ ನೀಡಲಿಲ್ಲ – ಸಿಎಂ
ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, “ಬಿಜೆಪಿ ಪಕ್ಷವೇ ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡಲಿಲ್ಲ” ಎಂದು ಹೇಳಿದರು.
ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ
ಸಿಎಂ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಪಶ್ಚಿಮ ಭಾಗದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, “ಕೆಂಗಲ್ ಹನುಮಂತಯ್ಯ ಅವರು ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ಹಾಗೂ ಧೀಮಂತ ರಾಜಕಾರಣಿ. ಭವ್ಯವಾದ ವಿಧಾನಸೌಧ ನಿರ್ಮಾಣದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹಾನ್ ನಾಯಕರು. ಅವರು ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿಯಾಗಿದ್ದರು” ಎಂದು ಸ್ಮರಿಸಿದರು.
ಡಿಕೆಶಿ ಹೇಳಿಕೆ
ಇನ್ನೊಂದೆಡೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತೇನೆ. ಅಲ್ಲಿ ನನ್ನ ಕಷ್ಟ, ದುಃಖ, ಸಂತೋಷ, ಬಯಕೆ ಎಲ್ಲವನ್ನೂ ಹೇಳುತ್ತೇನೆ” ಎಂದು ಸೂಚ್ಯವಾಗಿ ತಿಳಿಸಿದರು.
Blog
S T SOMASHEKHAR : ಜಿಬಿಎ ಚುನಾವಣೆಗೆ ಸ್ಪಷ್ಟ ನಿಯಮ: ಸ್ಥಳೀಯರಿಗೆ ಮಾತ್ರ ಟಿಕೆಟ್
ಬೆಂಗಳೂರು:
ಮುಂಬರುವ ಜಿಬಿಎ (GBA) ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಸ್ಥಳೀಯ ನಾಯಕರಿಗೆ ಮಾತ್ರ ಆದ್ಯತೆ ನೀಡಲಾಗುವುದು. ಹೊರಗಿನಿಂದ ಬರುವ ಯಾರನ್ನೂ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಸ್ಪಷ್ಟವಾಗಿ ಹೇಳಿದ್ದಾರೆ.
ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ 15ರಂದು ನಡೆಯಲಿರುವ ಭವ್ಯ ಶಿವರಾತ್ರಿ ಪೂಜೆ ಹಾಗೂ ಕಾರ್ಯಕ್ರಮದ ಸಿದ್ಧತೆಗಳ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು,
“ನನ್ನ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದ ನಾಯಕರು ಮತ್ತು ಕಾರ್ಯಕರ್ತರು ಇದ್ದಾರೆ. ಅಂತಹವರನ್ನು ಬಿಟ್ಟು ಸಚಿವರ ಮಗ ಅಥವಾ ಶಾಸಕರ ಮಗ ಎಂಬ ಕಾರಣಕ್ಕೆ ಹೊರಗಿನವರಿಗೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದರು.
ಕ್ಷೇತ್ರದಲ್ಲಿ ಜನರಿಗಾಗಿ ಕೆಲಸ ಮಾಡುವವರು, ಜನರಲ್ಲಿ ಉತ್ತಮ ಪ್ರಭಾವ ಹೊಂದಿರುವವರು ಹಾಗೂ ಸೇವಾ ಮನೋಭಾವನೆ ಹೊಂದಿರುವ ನಾಯಕರಿಗೆ ಮಾತ್ರ ಟಿಕೆಟ್ ವಿಚಾರದಲ್ಲಿ ಪರಿಗಣನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
“ಕೆಲವರು ತಮ್ಮ ಪ್ರಭಾವ ಬಳಸಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ನನಗೆ ಮುಖ್ಯವಾದುದು ಜನಸೇವೆ ಮಾಡಿದವರ ಗುಣಮಟ್ಟ” ಎಂದು ಹೇಳಿದರು.
ಟಿಕೆಟ್ ಸಿಗದಿದ್ದರೆ ಬೇರೆ ರಾಜಕೀಯ ಆಯ್ಕೆಗಳನ್ನು ಹುಡುಕಿಕೊಳ್ಳಬಹುದು ಎಂದು ಹೇಳಿದ ಅವರು,
“ನನ್ನ ನಾಯಕರಿಗೆ ಬಿಜೆಪಿ ಅಥವಾ ಬೇರೆ ಪಕ್ಷಗಳಿಂದ ಟಿಕೆಟ್ ಸಿಕ್ಕರೂ ನಾನು ಅದನ್ನು ಸ್ವಾಗತಿಸುತ್ತೇನೆ. ಎಲ್ಲರೂ ರಾಜಕೀಯವಾಗಿ ಬೆಳೆಯಬೇಕು” ಎಂದು ಹೇಳಿದರು.
ಇದೇ ವೇಳೆ ಆರ್ಎಸ್ಎಸ್ ನಡೆಸುತ್ತಿರುವ ಹಿಂದು ಸಮಾಜೋತ್ಸವ ಕುರಿತು ಸ್ಪಷ್ಟನೆ ನೀಡಿದ ಸೋಮಶೇಖರ್,
“ಇದು ರಾಜಕೀಯ ಕಾರ್ಯಕ್ರಮವಲ್ಲ. ಇದು ದೇಶಾದ್ಯಂತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ. ಎಲ್ಲ ಪಕ್ಷಗಳ ನಾಯಕರು ಮತ್ತು ಸಾರ್ವಜನಿಕರು ಇದರಲ್ಲಿ ಭಾಗವಹಿಸಬಹುದು” ಎಂದು ಹೇಳಿದರು. ಕೆಲವರು ಇದನ್ನು ರಾಜಕೀಯ ಕಾರ್ಯಕ್ರಮ ಎಂದು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಅವರು ಹೇಳಿದರು.
ಶಿವರಾತ್ರಿ ದಿನದ ಪೂಜೆ ಹಾಗೂ ಕಾರ್ಯಕ್ರಮವನ್ನು ತಮ್ಮ ನೇತೃತ್ವದಲ್ಲಿ ಭವ್ಯವಾಗಿ ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
Blog
ಅಬಕಾರಿ ಇಲಾಖೆಯಲ್ಲಿ ಭಾರೀ ಅಕ್ರಮ? ಶಾಲೆ ಎದುರು ಮದ್ಯದ ಲೈಸೆನ್ಸ್ ಆರೋಪ
ಬೆಂಗಳೂರು, ಫೆಬ್ರವರಿ 5
ಕರ್ನಾಟಕ ಅಬಕಾರಿ ಇಲಾಖೆಯ ಬಿಯುಡಿ-3 ವಿಭಾಗದ ಡೆಪ್ಯುಟಿ ಕಮಿಷನರ್ ಕೆ.ಎಸ್. ಮುರುಳಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ನಿಯಮಗಳನ್ನು ಉಲ್ಲಂಘಿಸಿ, ಮನಸೋ ಇಚ್ಛೆ ಸಿಎಲ್-7 ಮದ್ಯ ಪರವಾನಗಿಗಳನ್ನು ನೀಡಿದ್ದಾರೆ ಎಂಬ ಆರೋಪದಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.
ಸಿಎಲ್-7 ಪರವಾನಗಿ ಸಾಮಾನ್ಯವಾಗಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ಗಳಿಗೆ ನೀಡಲಾಗುತ್ತದೆ. ಆದರೆ, ನಿಯಮದ ಪ್ರಕಾರ ಶಾಲಾ ಆವರಣ ಅಥವಾ ಶಾಲೆ ಎದುರು ಇಂತಹ ಪರವಾನಗಿ ನೀಡಲು ಅವಕಾಶವಿಲ್ಲ. ಇದನ್ನೆಲ್ಲಾ ಮೀರಿ, ಶಾಲೆ ಎದುರು ಶಾಪ್ ತೆರೆಯಲು ಸಿಎಲ್-7 ಲೈಸೆನ್ಸ್ ನೀಡಲಾಗಿದೆ ಎನ್ನುವ ಆರೋಪ ಮುರುಳಿ ಮೇಲೆ ಕೇಳಿಬಂದಿದೆ.
ಕಳೆದ 24 ತಿಂಗಳಲ್ಲಿ ಬರೋಬ್ಬರಿ 60 ಸಿಎಲ್-7 ಪರವಾನಗಿಗಳನ್ನು ಮುರುಳಿ ನೀಡಿದ್ದಾರೆ ಎನ್ನಲಾಗಿದ್ದು, ಇದು ರಾಜ್ಯದಲ್ಲೇ ಅತಿಹೆಚ್ಚು ಎಂದು ದೂರುದಾರರು ಆರೋಪಿಸಿದ್ದಾರೆ. 30×40 ಅಡಿಯಂತಹ ಸಣ್ಣ ಜಾಗಕ್ಕೂ ಲೈಸೆನ್ಸ್ ನೀಡಲಾಗಿದೆ ಎಂಬುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಅಚ್ಚರಿಯೆಂದರೆ, ಈ 60 ಪರವಾನಗಿಗಳ ಪೈಕಿ ಮೂರು ಲೈಸೆನ್ಸ್ಗಳಿಗೆ ವಿರೋಧ ದೂರುಗಳಿದ್ದರೂ ಅವುಗಳನ್ನು ಪರಿಗಣಿಸದೇ ಅನುಮತಿ ನೀಡಲಾಗಿದೆ. ಈ ಹಿಂದೆ ಇದೇ ಮುರುಳಿ ಇಂತಹ ಅರ್ಜಿಗಳನ್ನು ತಿರಸ್ಕರಿಸಿದ್ದರೆಂದು ತಿಳಿದುಬಂದಿದೆ.
ಇನ್ನೂ, ಲೈಸೆನ್ಸ್ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಮಾಲೀಕರು ಸರಿಯಾಗಿ ಸಲ್ಲಿಸಿಲ್ಲ ಎಂಬ ಆರೋಪವೂ ಇದೆ. ಆದರೂ, ಮುರುಳಿ ಪರವಾನಗಿ ನೀಡಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ.
ಗ್ರೌಂಡ್ ರಿಪೋರ್ಟ್ನಲ್ಲಿ ಅಕ್ರಮ ಬಹಿರಂಗ
ಡೆಪ್ಯುಟಿ ಕಮಿಷನರ್ ವಿರುದ್ಧದ ಆರೋಪವನ್ನು ಟಿವಿ9 ಗ್ರೌಂಡ್ ರಿಪೋರ್ಟ್ ಬಯಲಿಗೆ ತಂದಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ದೊಂಬರಹಳ್ಳಿಯ ಸರ್ಕಾರಿ ಶಾಲೆಯ 40–50 ಮೀಟರ್ ದೂರದಲ್ಲಿ ಸಿಎಲ್-7 ಲೈಸೆನ್ಸ್ ನೀಡಲಾಗಿದೆ ಎಂಬುದು ದೃಢಪಟ್ಟಿದೆ.
ನಿಯಮಾನುಸಾರ ಶಾಲೆ-ಕಾಲೇಜುಗಳ 100 ಮೀಟರ್ ಒಳಗೆ ಮದ್ಯ ಮಾರಾಟ ನಿಷೇಧ ಇದ್ದರೂ, ಇದನ್ನು ಲೆಕ್ಕಿಸದೇ ಲೈಸೆನ್ಸ್ ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ 70ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇನ್ನೊಂದು ಆತಂಕಕಾರಿ ಅಂಶವೆಂದರೆ, ಮುರಳಿ ಶೀಘ್ರದಲ್ಲೇ ಬೆಂಗಳೂರಿನಿಂದ ತುಮಕೂರಿಗೆ ವರ್ಗಾವಣೆಯಾಗುವ ಸಾಧ್ಯತೆ ಇದ್ದು, ಅದಕ್ಕೂ ಮುನ್ನ ಹೆಚ್ಚಿನ ಲೈಸೆನ್ಸ್ ನೀಡಲು ಪ್ಲ್ಯಾನ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಅಬಕಾರಿ ಇಲಾಖೆ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ.
ಒಟ್ಟಿನಲ್ಲಿ, ಹಣಕ್ಕಾಗಿ ನಿಯಮಗಳನ್ನು ಪಕ್ಕಕ್ಕಿಟ್ಟು ಲೈಸೆನ್ಸ್ ಹಂಚಿಕೆ ನಡೆದಿದೆಯೇ? ಎಂಬ ಅನುಮಾನಗಳು ಗಟ್ಟಿಯಾಗಿದ್ದು, ಈ ಪ್ರಕರಣದ ಮೇಲೆ ಲೋಕಾಯುಕ್ತ ತನಿಖೆ ಅನಿವಾರ್ಯ ಎಂಬ ಒತ್ತಾಯ ಹೆಚ್ಚಾಗಿದೆ.
-
ಬೆಂಗಳೂರು9 hours agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ದೇಶ8 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ಅಪರಾಧ8 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ6 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ದೇಶ6 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ದೇಶ7 hours agoBHARATH BANDH : ದೇಶವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರ ಹೋರಾಟ, ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ
-
ದೇಶ8 hours agoಹೊಸಕೋಟೆಗೆ ಬಜೆಟ್ ಬಲ ಸಿಗುತ್ತಾ? ಮೆಟ್ರೋ, ನೀರಾವರಿ, ಒಳಚರಂಡಿ ಯೋಜನೆಗಳ ನಿರೀಕ್ಷೆ
-
ಅಪರಾಧ6 hours agoBAIRATHI BASAVARJU BREAKING NEWS : ಸಿಐಡಿ ಲುಕ್ಔಟ್ ನೋಟಿಸ್ ಜಾರಿ, ತನಿಖೆ ತೀವ್ರ
