ಚುನಾವಣೆ
ಸುಮಲತಾ ಅಂಬರೀಶ್ಗೆ ಬಿಟ್ಟು ಬಿಡದೆ ಕಾಡುತ್ತಿರುವ ಮೈತ್ರಿ ಕಂಟಕ..!

ಮಂಡ್ಯ, ಏಪ್ರಿಲ್ 01: ಅದ್ಯಾಕೋ ಗೊತ್ತಿಲ್ಲ ಸಂಸದೆ ಸುಮಲತಾ ಅವರನ್ನು ಮೈತ್ರಿ ಕಂಟಕ ಬಿಟ್ಟು ಹೋಗುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಕಳೆದ ಬಾರಿಯ ಮೈತ್ರಿ ಕಂಟಕದಿಂದ ಸಂಕಷ್ಟ ಅನುಭವಿಸಿದ್ದರೂ ಬಳಿಕ ಒಳಿತೇ ಆಗಿತ್ತು. ಅದು ಅಲ್ಲಿಗೆ ಮುಗಿಯಿತು ಎಂದು ಕೊಳ್ಳುವಾಗಲೇ ಈ ಬಾರಿಯೂ ಅವರಿಗೆ ಮೈತ್ರಿ ಕಂಟಕ ಕಾಡುತ್ತಿದ್ದು, ಇದು ಒಳಿತು ಮಾಡುತ್ತಾ? ಅಥವಾ ಸಂಕಷ್ಟ ತರುತ್ತಾ? ಎಂಬ ಪ್ರಶ್ನೆಗಳು ಮಂಡ್ಯ ಲೋಕಸಭಾ ಕ್ಷೇತ್ರದ ತುಂಬಾ ಗಿರಿಕಿ ಹೊಡೆಯುತ್ತಿವೆ.
ನಿಜ ಹೇಳಬೇಕೆಂದರೆ ಲೋಕಸಭಾ ಚುನಾವಣೆ ಬಂದಾಗಲೆಲ್ಲ ಮಂಡ್ಯ ಒಂದಲ್ಲ ಒಂದು ಕಾರಣಕ್ಕೆ ಇಡೀ ದೇಶದ ಗಮನ ಸೆಳೆಯುತ್ತದೆ. ಈ ಬಾರಿಯೂ ಅದೇ ಆಗಿದೆ. ಸುಮಲತಾ ಅಂಬರೀಶ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಜನ ಮಾತ್ರವಲ್ಲದೆ, ರಾಜಕೀಯ ನಾಯಕರು ಕೂಡ ಕಾದು ಕುಳಿತಿದ್ದಾರೆ. ಅವರು ಪ್ರಕಟಿಸುವ ನಿರ್ಧಾರದ ಬಳಿಕ ರಾಜಕೀಯ ಚಿತ್ರಣ ಬದಲಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಕಳೆದ ಐದು ವರ್ಷಗಳ ಕಾಲ ಸುಮಲತಾ ಅಂಬರೀಶ್ ಅವರು ಸಂಸದೆಯಾಗುವ ಮೂಲಕ ಮಂಡ್ಯ ಜನರ ನಾಡಿಮಿಡಿತವನ್ನು ಅರಿತುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಐದು ವರ್ಷಗಳ ಅವಧಿಯಲ್ಲಿ ರಾಜಕೀಯದ ಒಳಗೆ, ಹೊರಗೆ ಎರಡನ್ನು ತಿಳಿದುಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಬೆಂಬಲ ನೀಡುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಲೋಚನೆ ಮಾಡಿದ್ದರು.
ವಿಧಾನಸಭಾ ಚುನಾವಣೆ ಕಳೆದು ಫಲಿತಾಂಶದ ಬಳಿಕ ಕಾಂಗ್ರೆಸ್ ಅಧಿಕಾರ ಹಿಡಿದರೆ, ಜೆಡಿಎಸ್ ಮತ್ತು ಬಿಜೆಪಿ ಹೀನಾಯ ಸೋಲು ಕಂಡಿದ್ದವು. ಫಲಿತಾಂಶ ಬಂದ ಕೆಲವು ಸಮಯಗಳಲ್ಲಿ ಮತ್ತೊಂದು ಹೊಸ ಬೆಳವಣಿಗೆಯಾಗಿತ್ತು. ಅದು ಏನೆಂದರೆ ಜೆಡಿಎಸ್ ವರಿಷ್ಟ ದೇವೇಗೌಡರು ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬಿಜೆಪಿ ನೇತೃತ್ವದ ಎನ್ ಡಿಎಯನ್ನು ಸೇರುವ ಸಂಕಲ್ಪ ಮಾಡಿದ್ದರು. ಯಾವಾಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗುತ್ತಿವೆ ಎಂಬುದು ಗೊತ್ತಾಯಿತೋ ಎಲ್ಲರ ಚಿತ್ತ ಸಂಸದೆ ಸುಮಲತಾ ಅಂಬರೀಶ್ ಅವರತ್ತ ನೆಟ್ಟಿತ್ತು.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ ಹೀಗೆ ಬಿಜೆಪಿಯ ಎಲ್ಲ ನಾಯಕರನ್ನು ಭೇಟಿ ಮಾಡಿ ಮಾಡಿ ಬಂದಿದ್ದಾರೆ. ಆದರೆ ಆ ಕಡೆಯಿಂದ ಏನು ಆಶ್ವಾಸನೆ ಸಿಕ್ಕಿದೆ ಎಂಬುದು ಮಾತ್ರ ರಹಸ್ಯವಾಗಿಯೇ ಉಳಿದಿದೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೂಡ ಮಾತುಕತೆ ನಡೆಸಿ ಮೈತ್ರಿ ಅಭ್ಯರ್ಥಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವಂತೆ ಕೋರಿ ಬಂದಿದ್ದಾರೆ. ಹಾಗೆನೋಡಿದರೆ ಸುಮಲತಾ ಅಂಬರೀಶ್ ಅವರಿಗೆ ಮೈತ್ರಿ ಕಂಟಕವಂತೂ ಬಿಟ್ಟರೂ ಬಿಡುತ್ತಿಲ್ಲ. ಕಳೆದ 2019 ಲೋಕಸಭಾ ಚುನಾವಣೆಯನ್ನು ಮೆಲುಕು ಹಾಕುವುದಾದರೆ ಅವತ್ತು. ಅವರ ಪತಿ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೇ ಸ್ವರ್ಗಸ್ಥರಾಗಿದ್ದರು. ಹೀಗಾಗಿ ಜನ ಸುಮಲತಾ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಬಹುದು ಎಂದು ನಂಬಿದ್ದರು. ಈ ವಿಷಯದ ಬಗ್ಗೆ ಸ್ವತಃ ಸುಮಲತಾ ಅವರೇ ಕಾಂಗ್ರೆಸ್ ನಾಯಕರನ್ನು ಕೇಳಿದ್ದರು. ಆದರೆ ಅವತ್ತು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತದಲ್ಲಿತ್ತು. ಹೀಗಾಗಿ ಮೈತ್ರಿ ಕಂಟಕ ಕಾಡಿತ್ತು.