ದೇಶ
ಪಾರಿವಾಳಗಳನ್ನೇ ಬೇಹುಗಾರಿಕೆಗೆ ಬಳಸೋದ್ಯಾಕೆ?

ಈಗ ಶ್ವಾನ ಪಡೆಯಂತೆ ಅದೇ ರೀತಿ ಮಹಾಯುದ್ಧದ ವೇಳೆ ಪಾರಿವಾಳಗಳ ದಳ ಇತ್ತು. ಅಮೆರಿಕ (America) ಸೇನೆಯಲ್ಲಿದ್ದ ಚೆರ್ ಅಮಿ (CherAmi) ಎಂಬ ಪಾರಿವಾಳ 1918 ಅಕ್ಟೋಬರ್ 14ರಂದು ಜರ್ಮನ್ ಸೇನೆ ವಿರುದ್ಧದ ಆಪರೇಷನ್ ಭಾಗಿಯಾಗಿ ಸುಮಾರು 194 ಸೈನಿಕರ ರಕ್ಷಣೆಗೆ ಕಾರಣವಾಗಿತ್ತು. ಬೆಟ್ಟ ಪ್ರದೇಶವೊಂದರಲ್ಲಿ ಅಮೆರಿಕದ ಸೈನಿಕರನ್ನು ಸಂಪೂರ್ಣವಾಗಿ ಜರ್ಮನ್ ಸೈನಿಕರು ಸುತ್ತುವರೆದಿದ್ದಾಗ ಚೆರ್ ಅಮಿ ಪಾರಿವಾಳವನ್ನ ಆ ಭಾಗಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಪಾರಿವಾಳದ ದೇಹಕ್ಕೆ ಅಮೆರಿಕ ಸೈನಿಕರು ಪತ್ರವೊಂದನ್ನು ಕಟ್ಟಿ ಕಳಿಸುತ್ತಾರೆ. ಚೆರ್ ಅಮಿ ಹಾರಿ ಬರುವಾಗ ಜರ್ಮನ್ ಸೈನಿಕರ ಗುಂಡಿನ ದಾಳಿಯಾಗಿ ಕಾಲಿಗೆ ಗುಂಡು ತಗುಲುತ್ತದೆ. ಇಷ್ಟಾದರೂ ಅಮೆರಿಕ ಸೇನಾ ನೆಲೆಗೆ ವಾಪಸ್ ಬಂದು ಸಂದೇಶ ನೀಡುತ್ತದೆ. ಬಳಿಕ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿ ತನ್ನೆಲ್ಲಾ ಸೈನಿಕರನ್ನು ರಕ್ಷಿಸಿತ್ತು. 1919 ಜೂನ್ 13ರಂದು ಚೆರ್ ಅಮಿ ಪಾರಿವಾಳ ಸಾವನ್ನಪ್ಪುತ್ತದೆ.
ಪಾರಿವಾಳಗಳ ಸಾಮರ್ಥ್ಯ ಎಷ್ಟಿದೆ?
ಬೇಹುಗಾರಿಕೆ ಹಾಗೂ ಪತ್ರ ರವಾನೆಗೆ ಪಾರಿವಾಳಗಳನ್ನು ಬಳಸೋಕೆ ಒಂದು ಕಾರಣ ಇದೆ. ಏಕೆಂದರೆ ಪಾರಿವಾಳಗಳು ಎಷ್ಟೇ ದೂರ ಹೋದರು, ಎಲ್ಲಿಂದ ಹಾರಾಟ ಶುರು ಮಾಡುತ್ತವೆಯೋ ಅಲ್ಲಿಗೆ ಮರಳುವ ಸಾಮರ್ಥ್ಯವಿದೆ. ಇದೇ ಕಾರಣಕ್ಕೆ 1917ರಲ್ಲಿ ಅಮೆರಿಕದ ಗುಪ್ತಚುರಕ ಸಿಐಎ ಪಾರಿವಾಳಗಳ ಮೂಲಕ ಗೂಢಾಚಾರಿಕೆ ನಡೆಸಲು ನಿರ್ಧರಿಸಿತ್ತು. ಪಾರಿವಾಳಗಳಿಗೆ ವಿಶೇಷ ತರಬೇತಿ ನೀಡಿ, ಅವುಗಳ ಕಾಲಿಗೆ ಕ್ಯಾಮೆರಾ ಕಟ್ಟಿ ಹಲವು ಆಪರೇಷನ್ಗಳನ್ನು ಅಮೆರಿಕ ಮಾಡಿದೆ. ಮಹಾಯುದ್ಧ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪಾರಿವಾಳಗಳ ಕಾಲಿಗೆ ಕಟ್ಟಿ ತೆಗೆಯಲಾಗಿದ್ದ ಫೋಟೋಗಳನ್ನ 2019ರಲ್ಲಿ ಸಿಐಎ ಬಿಡುಗಡೆ ಕೂಡ ಮಾಡಿತ್ತು. ಕೋಲ್ಡ್ ವಾರ್ ಸಮಯದಲ್ಲಿ ರಷ್ಯಾ ರಾಜಧಾನಿ ಮಾಸ್ಕೋಗೂ ಅಮೆರಿಕ ತನ್ನ ಪಾರಿವಾಳಗಳನ್ನ ಕಳುಹಿಸಿತ್ತು. ರಷ್ಯಾ ಸಬ್ಮರೀನ್ಗಳನ್ನು ನಿರ್ಮಿಸುತ್ತಿರುವುದನ್ನು ಇದೇ ಪರಿವಾಳಗಳು ಪತ್ತೆ ಮಾಡಿದ್ದವು. ಪಾರಿವಾಳಗಳು ನೆಲಕ್ಕೆ ತುಂಬಾ ಹತ್ತಿರದಲ್ಲೇ ಹಾರುವುದರಿಂದ ಅವುಗಳ ಮೂಲಕ ಬೇಹುಗಾರಿಕೆ ಕೂಡ ಸುಲಭವಾಗಿದೆ.
ಪಾರಿವಾಳಗಳಿಗೆ ದಾರಿ ತಪ್ಪಿದರೂ ಸಹ ಕೆಲ ಸಮಯದ ಬಳಿಕ ಮತ್ತೆ ಎಲ್ಲಿಂದ ಬಂದಿದ್ದವೋ ಅಲ್ಲಿಗೇ ಬಂದಿಳಿಯುತ್ತವೆ. ಪಾರಿವಾಳಗಳಿಗೆ ಈ ಸಾಮರ್ಥ್ಯದ ಬಗ್ಗೆ ಈಗಲೂ ಸಂಶೋಧನೆ ನಡೆಯುತ್ತಿದೆ. ಕೆಲವು ಸಂಶೋಧಕರ ಪ್ರಕಾರ, ಸೂರ್ಯನ ಸಂಚಾರವನ್ನ ಗಮನಿಸಿ ಪಾರಿವಾಳಗಳು ಮಾರ್ಗ ಹಾಗೂ ಜಾಗವನ್ನು ಪತ್ತೆ ಹಚ್ಚುತ್ತವೆ ಎನ್ನುತ್ತಾರೆ.
ಎಂಟು ತಿಂಗಳ ಬಳಿಕ ಜೈಲಿಂದ ಬಿಡುಗಡೆಯಾದ ಪಾರಿವಾಳಗಳು!
ಈ ವರ್ಷ ಜ.30 ರಂದು, ಚೀನಾದ ಗೂಢಚಾರ ಎಂದು ಶಂಕಿಸಲಾದ ಪಾರಿವಾಳವನ್ನು ಮುಂಬೈನಲ್ಲಿ ಎಂಟು ತಿಂಗಳ ಬಂಧನದ ನಂತರ ಕಾಡಿಗೆ ಬಿಡಲಾಯಿತು. ಈ ಪಾರಿವಾಳಗಳನ್ನು ಮೇ 2023 ರಲ್ಲಿ ಮುಂಬೈ ಬಂದರಿನ ಬಳಿ ಅದರ ಉಂಗುರಗಳ ಮೇಲಿನ ಚೈನೀಸ್ ಬರಹದ ಆಧಾರದ ಮೇಲೆ ಇದು ಬೇಹುಗಾರಿಕೆಯ ಅನುಮಾನವನ್ನು ಹುಟ್ಟುಹಾಕಿತ್ತು. ಸಂಪೂರ್ಣ ತನಿಖೆ ಬಳಿಕ ಇದು ತೈವಾನ್ನಿಂದ ತಪ್ಪಿಸಿಕೊಂಡು ಆಕಸ್ಮಿಕವಾಗಿ ಭಾರತವನ್ನು ತಲುಪಿದೆ ಎಂದು ತಿಳಿದು ಬಂದಿತ್ತು
2016ರಲ್ಲಿ ಪಾಕಿಸ್ತಾನದ 150 ಬೇಹುಗಾರಿಕಾ ಪಾರಿವಾಳಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪಾರಿವಾಳಗಳ ಮೇಲೆ ಜಮ್ಮುವಿನ ಉಪ ಆಯುಕ್ತರ ಕುರಿತಂತೆ ಕೆಲ ಪದಗಳನ್ನು ಬರೆಯಲಾಗಿತ್ತು. ಅಲ್ಲದೇ ಪಾರಿವಾಳಗಳ ಕಾಲಿಗೆ ಕೆಲ ವಿಶೇಷವಾದ ಆಯಸ್ಕಾಂತೀಯ ರಿಂಗ್ ಗಳನ್ನೂ ಹಾಕಲಾಗಿತ್ತು. ಹೀಗಾಗಿ ಪಾರಿವಾಳಗಳನ್ನು ಬೇಹುಗಾರಿಕೆಗೆ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.
ಈ ಹಿಂದೆ ಭಾರತ ಹಾಗೂ ಪಾಕ್ ಗಡಿಯಲ್ಲಿ ಬಲೂನ್ಗಳನ್ನು ಪಾರಿವಾಳ ಕಾಲಿಗೆ ಕಟ್ಟಿ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಉರ್ದು ಭಾಷೆಯಲ್ಲಿ ಬೆದರಿಕೆ ಹಾಕಿದ್ದನ್ನು ನಾವಿಲ್ಲಿ ಗಮನಿಸಬಹುದು
ಪಾರಿವಾಳಗಳಂತೆ ಡಾಲ್ಫಿನ್, ಯಾಕ್ ಕೂಡ ಬಳಕೆ
ಪಾರಿವಾಳಗಳನ್ನು ಮೀರಿ, 1960 ರ ದಶಕದಿಂದಲೂ ಅಮೆರಿಕ ನೌಕಾಪಡೆಯಿಂದ ತರಬೇತಿ ಪಡೆದ ಡಾಲ್ಫಿನ್ಗಳನ್ನು ಜಲಾಂತರ್ಗಾಮಿ ನೌಕೆಗಳು ಮತ್ತು ನೀರೊಳಗಿನ ಗಣಿಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿದೆ. ಚೀನಾ ಗಡಿಯಲ್ಲಿ ಯಾಕ್ಗಳನ್ನು ಬೇಹುಗಾರಿಕೆಗೆ ಬಳಸಲಾಗುತ್ತಿದೆ ಎಂದು ಇತ್ತೀಚೆಗೆ ವರದಿ ಸಹ ಆಗಿತ್ತು.