ಬೆಂಗಳೂರು

ಹಲ್ಲೆ, ಕೊಲೆ ಆರೋಪ ಪ್ರಕರಣ; ಹತ್ಯೆಗೀಡಾದ ರೇಣುಕಾಸ್ವಾಮಿ ಯಾರು?

ಬೆಂಗಳೂರು: ರೇಣುಕಾಸ್ವಾಮಿ ಎಂಬುವರ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ​​ ನಟ ದರ್ಶನ್ ಅವರನ್ನು ವಶಕ್ಕೆ ಪಡೆದುಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

35ರ ಹರೆಯದ ರೇಣುಕಾಸ್ವಾಮಿ ಚಿತ್ರದುರ್ಗದ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ದರ್ಶನ್ ಅಭಿಮಾನಿಯಾಗಿದ್ದರು. ಇವರ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಒಂದು ವರ್ಷದ ಹಿಂದೆಯಷ್ಟೇ ರೇಣುಕಾಸ್ವಾಮಿ ಮದುವೆಯಾಗಿದ್ದು, ಪತ್ನಿ ಗರ್ಭಿಣಿಯಾಗಿದ್ದರು. ”ಕಳೆದ ಶನಿವಾರ ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಮನೆ ಬಿಟ್ಟಿದ್ದ ರೇಣುಕಾಸ್ವಾಮಿ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಫೋನ್ ಸ್ವಿಚ್ಡ್​​ ಆಫ್ ಬರುತ್ತಿತ್ತು. ಎಲ್ಲೋ ಹೋಗಿರಬೇಕು ಅಂದುಕೊಂಡು ಸುಮ್ಮನಿದ್ದೆ. ನನಗೆ ಒಬ್ಬನೇ ಮಗ, ಆತನೂ ನನ್ನನ್ನು ಬಿಟ್ಟು ಹೋಗಿದ್ದಾನೆ. ಕೊಲೆ ಯಾರು ಮಾಡಿದ್ದಾರೋ ಗೊತ್ತಿಲ್ಲ. ಹಂತಕರಿಗೆ ಶಿಕ್ಷೆಯಾಗಬೇಕು. ಮಗನ ಕೊಲೆಗೆ ನ್ಯಾಯಸಿಗಬೇಕು” ಎಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಬಳಿ ಮಾಧ್ಯಮಗಳೊಂದಿಗೆ ಮೃತನ ತಂದೆ ಶಿವನಗೌಡ ಹೇಳಿದ್ದಾರೆ.

ಪವಿತ್ರಾ ಗೌಡರಿಗೆ ಕೊಲೆಯಾದ ರೇಣುಕಾಸ್ವಾಮಿ ಆಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ವಿನಯ್, ರಾಘವೇಂದ್ರ ಸೇರಿ ಹಲವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅನ್ನಪೂರ್ಣೇಶ್ವರಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಇದೇ ಠಾಣೆಯಲ್ಲಿ ದರ್ಶನ್ ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರ ಮೊಬೈಲ್​​ಗಳನ್ನು ವಶಕ್ಕೆ ಪಡೆಯಲಾಗಿದ್ದು, ಕರೆ ವಿವರ ಸೇರಿದಂತೆ ಇನ್ನಿತರ ಸಾಕ್ಷಿಗಳ ಅನುಸಾರವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವ ನೋಡಿದ ಅಪಾರ್ಟ್​ಮೆಂಟ್​ ಸೆಕ್ಯೂರಿಟಿ; ಇದೇ ಜೂ. 9 ರಂದು ನಗರದ ಸುಮ್ಮನಹಳ್ಳಿಯ ಅಪಾರ್ಟ್​ಮೆಂಟ್​​ವೊಂದರ ಸೆಕ್ಯೂರಿಟಿ ಆಫೀಸರ್​​ ಅವರು ಪೊಲೀಸರಿಗೆ ದೂರು ನೀಡಿದ್ದರು. ಬೆಳಗ್ಗೆ 8 ಗಂಟೆಗೆ ನಾನು ಅಪಾರ್ಟ್​ಮೆಂಟ್​ನಲ್ಲಿ ಕರ್ತವ್ಯಕ್ಕೆ ತೆರಳಿದ್ದೆ. ಅಪಾರ್ಟ್​ಮೆಂಟ್​ ಮುಂಭಾಗದ ಮೋರಿ ಪಕ್ಕದ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಪೇಟೆ ಚೆನ್ನಪ್ಪ ರಸ್ತೆಯ ಕ್ರಾಸ್​ಗೆ ಹೋಗುವ ಜಾಗದಲ್ಲಿ ಸುಮಾರು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ನೋಡಿದೆ. ತಕ್ಷಣಕ್ಕೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಗೆ ಫೋನ್​ ಮಾಡಿ ತಿಳಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

Trending

Exit mobile version