Blog

ದರ್ಶನ್ ಅರೆಸ್ಟ್ ಕೇಸ್‌.. ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿ ಸ್ಟೇಷನ್‌ಗೆ ನಿಷೇಧಾಜ್ಞೆ ಜಾರಿ; ಯಾಕೆ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ದರ್ಶನ್ ಅಂಡ್ ಗ್ಯಾಂಗ್‌ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲೇ ಬಿಗಿ ಬಂದೋಬಸ್ತ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ವಿಚಾರಣೆ ಇರುವ ಪೊಲೀಸ್‌ ಠಾಣೆಗೆ ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ 13 ಆರೋಪಿಗಳ ವಿಚಾರಣೆ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. 200 ಮೀಟರ್ ವ್ಯಾಪ್ತಿಯಲ್ಲಿ 5 ದಿನಗಳ ಕಾಲ 144 ಸೆಕ್ಷನ್ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಅಂದ್ರೆ ಇಂದಿನಿಂದ ಜೂನ್ 17ರ ತನಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸುತ್ತಾ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಇಂದು ಕಮಿಷನರ್ ಬಿ.ದಯಾನಂದ್ ಅವರು ಭೇಟಿ ನೀಡಿದ್ದರು. ನಿಷೇಧಾಜ್ಞೆ ಜಾರಿಯಾಗುವುದರ ಜೊತೆ ಪೊಲೀಸ್ ಠಾಣೆಯ ಸುತ್ತಾ ಶಾಮಿಯಾನ ಅಳವಡಿಕೆ ಮಾಡಲಾಗಿದೆ. ಹೊರಗಡೆಯಿಂದ ಠಾಣೆ ಒಳಗಡೆ ಏನು ನಡೆಯುತ್ತಿದೆ ಅನ್ನೋದು ಕಾಣದಂತೆ ಸಂಪೂರ್ಣವಾಗಿ ತೆರೆ ಎಳೆಯಲಾಗಿದೆ. ಯಾರಿಗೂ ಠಾಣೆಯ ದೃಶ್ಯಾವಳಿಗಳು ಸಿಗದಂತೆ ಶಾಮಿಯಾನದ ಹೊದಿಕೆ ಹಾಕಲಾಗಿದೆ.

ಠಾಣೆ ಮುಂದೆ ಪುಡಾರಿಯ ಗದ್ದಲ!
ದರ್ಶನ್ ಬಂಧನವಾಗಿರೋ ಪೊಲೀಸ್ ಠಾಣೆಯ ಸುತ್ತ 144 ಸೆಕ್ಷನ್ ಜಾರಿಯಾಗಿದ್ದರೂ ಅಭಿಮಾನಿಗಳು ಆಗಮಿಸಿದ್ದಾರೆ. ಠಾಣೆಯ ಸುತ್ತ 200 ಮೀಟರ್ ದೂರದಲ್ಲಿ ಯಾರೂ ಗುಂಪು ಸೇರುವಂತಿಲ್ಲ ಎಂದು ಮೈಕ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಠಾಣೆ ಮುಂದೆ ಪುಡಾರಿಯೊಬ್ಬ ಗದ್ದಲ ಮಾಡಿದ್ದ. ಮಾಧ್ಯಮ ಮತ್ತು ಪೊಲೀಸರ ಮಾತುಕತೆ ಮಧ್ಯೆ ಪುಂಡನೊಬ್ಬ ಗಲಾಟೆ ಮಾಡಿದ್ದು, ಗದ್ದಲ ಮಾಡಿದವನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ನಾಳೆ ಬಾ ಎಂದ ಪೊಲೀಸರು! 
ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಬಂಧನ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸೇವೆಗೆ ಪೊಲೀಸ್ ಠಾಣೆಯಲ್ಲಿ ಅಡಚಣೆಯಾಗಿದೆ. ಕೊಲೆ ಆರೋಪಿಗಳನ್ನ ಠಾಣೆಯಲ್ಲಿಟ್ಟಿರುವ ಕಾರಣ ಯಾವ ಸಾರ್ವಜನಿಕರಿಗೂ ಪೊಲೀಸ್ ಠಾಣೆಗೆ ಪ್ರವೇಶವಿಲ್ಲ. ಸೆಲೆಬ್ರಿಟಿ ಆರೋಪಿಗಳನ್ನು ರಕ್ಷಿಸಲು ಪೊಲೀಸ್ ಠಾಣೆ ಒಳಗೆ ಸಾರ್ವಜನಿಕರಿಗೆ ನಿರ್ಬಂಧ ಹಾಕಲಾಗಿದೆ. ಹೈಪ್ರೊಫೈಲ್ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸಾರ್ವಜನಿಕರ ಸೇವೆಗೆ ಅಲಭ್ಯವಾಗಿದ್ದು, ಆಕ್ರೋಶಕ್ಕೂ ಕಾರಣವಾಗಿದೆ.

Trending

Exit mobile version