ಅಪರಾಧ
ದರ್ಶನ್ ಗ್ಯಾಂಗ್ನ ರವಿ ಮನೆಯಲ್ಲಿ ನರಕಯಾತನೆ.. ಕಣ್ಣು ಕಾಣದ ತಾಯಿಗೆ ಮಾತ್ರೆ ತಂದು ಕೊಡಲು ಈಗ ಯಾರೂ ಇಲ್ಲ..

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿದೆ. ಪ್ರಕರಣದ 8ನೇ ಆರೋಪಿ ರವಿ ಕೂಡ ಜೈಲು ಜೈಲಿನಲ್ಲಿದ್ದಾನೆ. ಇತ್ತ ಆರೋಪಿ ಮನೆಯ ಸ್ಥಿತಿ ಹೇಳ ತೀರದ್ದಾಗಿದೆ. ದರ್ಶನ್ ಮೇಲಿನ ಅಭಿಮಾನದಿಂದ ರವಿ ಕುಟುಂಬ ಭಾರೀ ಕಷ್ಟಗಳನ್ನು ಎದುರಿಸುತ್ತಿದೆ. ಕಣ್ಣು ಕಾಣದ ತಾಯಿಗೆ ಮಾತ್ರೆ ತಂದು ಕೊಡುವವರಿಲ್ಲದ ಸ್ಥಿತಿ ನಿರ್ಮಾಣ ಆಗಿದೆ.
ನಟ ದರ್ಶನ ಮೇಲಿನ ಅಭಿಮಾನ, ಆರೋಪಿ ರವಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ. ಪತ್ನಿ ಕವಿತಾ ಅವರು ಶಾಲಾ ಫೀಸು ಕಟ್ಟಲಾಗದೇ ಮಕ್ಕಳನ್ನು ಶಾಲೆ ಬಿಡಿಸಿದ್ದಾರೆ. ರವಿ ಮನೆಯ ಎಲ್ಲ ವ್ಯವಹಾರ ನೋಡಿಕೊಳ್ಳುತ್ತಿದ್ದ. ಆದರೆ ರವಿ ಜೈಲು ಸೇರಿದ ಮೇಲೆ ಮನೆಯ ಆರ್ಥಿಕ ಸ್ಥಿತಿ ತೀರ ಹದಗೆಟ್ಟಿದೆ. ದರ್ಶನ್ ಮೇಲಿನ ಅಭಿಮಾನಕ್ಕೆ ಕುಟುಂಬವೊಂದು ಇದೀಗ ಬೀದಿಗೆ ಬಂದು ನಿಂತಿದೆ.
ರವಿ ತಾಯಿ ಕೆಂಚಮ್ಮಗೆ ಕಣ್ಣಿಲ್ಲ, ಇವರಿಗೆ ಮಾತ್ರೆ ತಂದು ಕೊಡುವುದಕ್ಕೂ ಮನೆಯಲ್ಲಿ ಯಾರೂ ಇಲ್ಲ. ಮನೆಯಲ್ಲಿ ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದಾರೆ. ಯಾರಾದರು ಹಣ ಕೊಟ್ಟರೆ ಮಾತ್ರ ಕೆಂಚಮ್ಮಗೆ ಔಷಧಿ, ಮಾತ್ರೆಗಳು ಲಭ್ಯವಾಗುತ್ತವೆ. ಹೀಗಾಗಿ ತನ್ನ ಮಗನ ಬರುವಿಕೆಗೆ ತಾಯಿ ಕಾಯುತ್ತಿದ್ದಾಳೆ. ದರ್ಶನ್ ಜೊತೆ ಪ್ರಕರಣದಲ್ಲಿ ತನ್ನ ಗಂಡನ ಹೆಸರು ಕೇಳಿ ಬರುತ್ತಿದ್ದಂತೆ ಪತ್ನಿ ಕವಿತಾ ತನ್ನ ಸಹೋದರಿ ಮನೆ ಸೇರಿಕೊಂಡಿದ್ದಾರೆ. ಆರೋಪಿ ರವಿ ಪತ್ನಿ ಮಕ್ಕಳನ್ನು ಶಾಲೆಗೆ ಕಳಿಸಲಾಗುತ್ತಿಲ್ಲ, ಜೊತೆಗೆ ತನ್ನ ಅತ್ತೆಯನ್ನು ಜೋಪಾನವಾಗಿ ನೋಡಿಕೊಳ್ಳಲು ಆಗದ ಸಂಕಷ್ಟ ಅವರಿಗೆ ಇದೆ.
ಈ ಸಂಬಂಧ ಆರೋಪಿ ರವಿ ಪತ್ನಿ ಕವಿತಾ ನ್ಯೂಸ್ಫಸ್ಟ್ ಜೊತೆ ಮಾತನಾಡಿದ್ದಾರೆ. ಅತ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಕೂ ದುಡ್ಡಿಲ್ಲ. ಅತ್ತೆ ಪರಿಸ್ಥಿತಿ ಹೇಳುವುದಕ್ಕೆ ಆಗಲ್ಲ. ಅದನ್ನ ಅನುಭವಿಸಿದವರಿಗೆ ಗೊತ್ತಾಗುತ್ತದೆ. ಹೊರಗಡೆ ಓಡಾಡೋದೆ ನನಗೆ ಕಷ್ಟ ಆಗಿದೆ. ನಿನ್ನ ಗಂಡ ದುಡ್ಡು ತಂದಿದ್ದಾನಂತೆ. ಅಲ್ಲಿಗೆ ಹೋಗಿದ್ದನಂತೆ ಅಂತ ಜನ ಕೇಳುತ್ತಿದ್ದಾರೆ. ಇದರಿಂದ ಹೊರಗೆ ಬರಲಾಗುತ್ತಿಲ್ಲ. ಹೊರಗೆ ಓಡಾಡೋದೇ ಬಿಟ್ಟಿದ್ದೀವಿ. ಗಂಡ ಇದ್ದಾಗ ಎಲ್ಲವೂ ಚೆನ್ನಾಗಿತ್ತು. ಈಗ ಕಷ್ಟ ಆಗಿದೆ. ಮನೆಯಲ್ಲಿ ದುಡಿಯೋರೇ ಇಲ್ಲದಾಗ ಶಾಲೆಗೆ ದುಡ್ಡು ಹೇಗೆ ಕಟ್ಟುವುದು. ಸಂಘ, ಗಾಡಿ ಇಎಂಐ ಸೇರಿ ಇತರೆ ಸಾಲಗಳಿಗೆ ಹಣವಿಲ್ಲ. ಮೊನ್ನೆ ಬೆಂಗಳೂರಿಗೆ ಹೋಗಿ ಗಂಡನನ್ನ ನೋಡಿಕೊಂಡು ಬರೋಕೆ ಹೋದಾಗ 10 ರಿಂದ 15 ಸಾವಿರ ರೂಪಾಯಿ ಖರ್ಚು ಆಗಿದೆ. ಮಕ್ಕಳನ್ನು ತೋರಿಸೋಕೆ ಬಿಡಲಿಲ್ಲ. ನಾವು ಮಾತ್ರ ನೋಡಿದ್ವಿ. ಅವರೇ ಬಿಡಿಸಿಕೊಡ್ತಾರೆ ಎನ್ನುವ ನಂಬಿಕೆ ಮೇಲೆ ಇದ್ದೇವೆ. ನಮ್ಮ ಹೊಲ, ಮನೆ ಮಾರಿ ಹಣ ಕೊಡ್ತೀವಿ, ಗಂಡನನ್ನ ಬಿಟ್ಟರೆ ಸಾಕು. ಊರಲ್ಲಿ ಇರೋಕೆ ಆಗ್ತಿಲ್ಲ, ಅಷ್ಟು ಬೇಸರ ಆಗಿದೆ ಎಂದು ಕಣ್ಣೀರು ಇಟ್ಟಿದ್ದಾರೆ.