ಅಪರಾಧ
ಎಕ್ಸ್ಪ್ರೆಸ್ ವೇಯಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಚಾಲಕ ಗಂಭೀರ
ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ (Expressway) ವೇಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು (Car) ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಮಂಡ್ಯದ (Mandya) ಕೋಣನಹಳ್ಳಿ (Konanahalli) ಬಳಿ ನಡೆದಿದೆ.
ಘಟನೆಯಲ್ಲಿ ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಕಾರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಕಾರಿನಲ್ಲಿ ಚಾಲಕ ಮಾತ್ರ ತೆರಳುತ್ತಿದ್ದ. ವೇಗವಾಗಿ ಬರುತ್ತಿದ್ದ ಹಿನ್ನೆಲೆ ಎಕ್ಸ್ಪ್ರೆಸ್ ವೇಯ ಎಡ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಕಾರು ಜಖಂಗೊಂಡಿದೆ.
ಕಾರಿನಲ್ಲಿದ್ದ ಚಾಲಕನ ತಲೆ ಹಾಗೂ ಕೈಗೆ ಗಂಭೀರ ಪೆಟ್ಟು ಬಿದ್ದಿದ್ದು, ರಕ್ತದ ಮಡುವಿನಲ್ಲಿ ಚಾಲಕ ನರಳಾಡಿದ್ದಾರೆ. ಬಳಿಕ ಸ್ಥಳೀಯರು ಚಾಲಕನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಸೆಂಟ್ರಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪರಾಧ
ಚಿಕ್ಕಬಳ್ಳಾಪುರದಲ್ಲಿ ಆರ್ಟಿಓ ಇನ್ಸ್ಪೆಕ್ಟರ್ ಎಡವಟ್ಟು: ಅಧಿಕಾರ ವ್ಯಾಪ್ತಿ ಮೀರಿ ಪರಿಶೀಲನಾ ವರದಿ?
ಚಿಕ್ಕಬಳ್ಳಾಪುರ: ತಮ್ಮ ಅಧಿಕಾರ ವ್ಯಾಪ್ತಿಗೆ ಸೇರದ ಪ್ರಕರಣದಲ್ಲಿ ಪರಿಶೀಲನಾ ವರದಿ ನೀಡಿದ ಆರೋಪಕ್ಕೆ ಆರ್ಟಿಓ ಇನ್ಸ್ಪೆಕ್ಟರ್ ಒಬ್ಬರು ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ದೇವನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್ಪೆಕ್ಟರ್, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
KA 40 TB 2054 ನಂಬರ್ನ ಟ್ರ್ಯಾಕ್ಟರ್ ಅಪಘಾತ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಸುಪರ್ಧಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಗೌರಿಬಿದನೂರು ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪರಿಶೀಲನಾ ವರದಿ ನೀಡುವಂತೆ ಪತ್ರ ಬರೆದಿದ್ದರು.
ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವ್ಯಾಪ್ತಿಯ ಆರ್ಟಿಓ ಇನ್ಸ್ಪೆಕ್ಟರ್ ಶ್ವೇತಾ ಅವರು, ಆರ್ಟಿಓ ಏಜೆಂಟ್ನಿಂದ ₹5,000 ಲಂಚ ಪಡೆದು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಪಘಾತ ವಾಹನಕ್ಕೆ ಪರಿಶೀಲನಾ ವರದಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ವರದಿಯನ್ನು ಸ್ವೀಕರಿಸಿದ ಗೌರಿಬಿದನೂರು ಪೊಲೀಸರು ವಾಹನವನ್ನು ಬಿಡುಗಡೆ ಮಾಡಿದ್ದರು. ಬಳಿಕ ಈ ಎಡವಟ್ಟು ಬಹಿರಂಗವಾಗುತ್ತಿದ್ದಂತೆ, ಈಗಾಗಲೇ ನೀಡಿದ ಪರಿಶೀಲನಾ ವರದಿಯನ್ನು ವಾಪಸ್ ಪಡೆಯಲು ಇನ್ಸ್ಪೆಕ್ಟರ್ ಶ್ವೇತಾ ಗೌರಿಬಿದನೂರು ಗ್ರಾಮಾಂತರ ಠಾಣೆ ಸಂಪರ್ಕಿಸಿರುವುದಾಗಿ ತಿಳಿದುಬಂದಿದೆ.
ಇನ್ನೊಂದೆಡೆ, ಬಿಡುಗಡೆಗೊಂಡ ಟ್ರ್ಯಾಕ್ಟರ್ ಅನ್ನು ಪೊಲೀಸರು ಮತ್ತೆ ವಾಪಸ್ ಪಡೆದು ಠಾಣೆ ಆವರಣದಲ್ಲಿ ನಿಲ್ಲಿಸಿದ್ದಾರೆ. ಜೊತೆಗೆ, ಹೊಸ ಪರಿಶೀಲನಾ ವರದಿ ನೀಡುವಂತೆ ಮತ್ತೆ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ.
ಈ ಕುರಿತು ಚಿಕ್ಕಬಳ್ಳಾಪುರ ಆರ್ಟಿಓ ಅಧಿಕಾರಿಗಳು, “ಈ ರೀತಿಯ ಕ್ರಮ ಕೈಗೊಳ್ಳಲು ಅವಕಾಶವಿಲ್ಲ. ವಿಷಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು” ಎಂದು ತಿಳಿಸಿದ್ದಾರೆ.
ಅಪರಾಧ
‘ನಾನ್ ರುದ್ರನ್’ ವಿವಾದ: ಧನುಷ್ಗೆ ₹20 ಕೋಟಿ ಪರಿಹಾರ ಬೇಡಿಕೆ, ತೆನಾಂಡಲ್ ಫಿಲ್ಮ್ಸ್ ಕಾನೂನು ನೋಟಿಸ್
ಚೆನ್ನೈ/ಬೆಂಗಳೂರು: ಬಹಳ ದಿನಗಳಿಂದ ವಿಳಂಬವಾಗಿದ್ದ ‘ನಾನ್ ರುದ್ರನ್’ ಸಿನಿಮಾ ಯೋಜನೆ ಸಂಬಂಧ Thenandal Films ಸಂಸ್ಥೆ ನಟ Dhanush ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ಆರ್ಥಿಕ ಹಿನ್ನಡೆಯನ್ನು ಉಲ್ಲೇಖಿಸಿ ₹20 ಕೋಟಿ ಪರಿಹಾರವನ್ನು ಕೋರಲಾಗಿದೆ ಎಂದು ವರದಿಯಾಗಿದೆ.
2016ರಲ್ಲಿ ಒಪ್ಪಂದಗೊಂಡ ‘Naan Rudran’ ಯೋಜನೆ ವಿಳಂಬಕ್ಕೆ ಧನುಷ್ ಅವರೇ ಕಾರಣ ಎಂದು ನಿರ್ಮಾಣ ಸಂಸ್ಥೆ ಆರೋಪಿಸಿದೆ. ಚಿತ್ರಕಥೆ ಸಲ್ಲಿಸದ ಹಿನ್ನೆಲೆಯಲ್ಲಿ ಸಿನಿಮಾ ದೀರ್ಘಕಾಲದಿಂದ ಸ್ಥಗಿತಗೊಂಡಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಕಾನೂನು ಸಂಕಷ್ಟದಲ್ಲಿ ಧನುಷ್
ನಿರ್ಮಾಣ ಸಂಸ್ಥೆಯ ಹೇಳಿಕೆ ಪ್ರಕಾರ, ಧನುಷ್ ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡುವುದಕ್ಕೂ ಒಪ್ಪಿಕೊಂಡಿದ್ದರು. ಬಳಿಕ ಯೋಜನೆಯಲ್ಲಿ ಕೆಲವು ಬದಲಾವಣೆಗಳಿಗೆ ನಿರ್ಮಾಪಕರು ಸಮ್ಮತಿ ನೀಡಿದರೂ, ಸಂಪೂರ್ಣ ಚಿತ್ರಕಥೆ ಒದಗಿಸಲಾಗಿಲ್ಲ. ಇದರಿಂದ ಸಿನಿಮಾ ಅರ್ಧಕ್ಕೆ ನಿಂತಿದೆ ಎಂದು ಆರೋಪಿಸಲಾಗಿದೆ.
ಮುಂಗಡವಾಗಿ ಸುಮಾರು ₹20 ಕೋಟಿವರೆಗೆ ವೆಚ್ಚ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಧನುಷ್ ಜೊತೆ ನಟಿಸಬೇಕಿದ್ದ Nagarjuna Akkineni ಮತ್ತು S. J. Suryah ಸೇರಿದಂತೆ ಇತರ ಕಲಾವಿದರ ವೆಚ್ಚಗಳನ್ನು ಸಹ ಭರಿಸಿರುವುದಾಗಿ ಸಂಸ್ಥೆ ತಿಳಿಸಿದೆ.
“ಬಾಕಿ ಇರುವ ಯೋಜನೆಯನ್ನು ಪೂರ್ಣಗೊಳಿಸದೆ ಇತರ ಚಿತ್ರಗಳಿಗೆ ಕಾಲ್ಶೀಟ್ ನೀಡಿರುವುದರಿಂದ ಚಿತ್ರ ಸ್ಥಗಿತಗೊಂಡಿದೆ” ಎಂದು ವಕೀಲ ಎ. ಚಿದಂಬರಂ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ. ನಿಗದಿತ ಅವಧಿಯಲ್ಲಿ ಬೇಡಿಕೆ ಈಡೇರಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಧನುಷ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಧನುಷ್ ಅವರ ಇತ್ತೀಚಿನ ಸಿನಿಮಾಗಳು
ಧನುಷ್ 2025ರಲ್ಲಿ ‘Kuberaa’, ‘Idli Kadai’ ಮತ್ತು ‘Tere Ishk Mein’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರಣಯ ನಾಟಕವಾಗಿದ್ದ ‘Tere Ishk Mein’ ಚಿತ್ರದಲ್ಲಿ Kriti Sanon ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆದು ವಿಶ್ವಾದ್ಯಂತ ₹161.96 ಕೋಟಿ ಸಂಗ್ರಹಿಸಿದೆ ಎಂದು ವರದಿಯಾಗಿದೆ.
ಇದೇ ವೇಳೆ, ಧನುಷ್ ಮುಂದಿನ ದಿನಗಳಲ್ಲಿ ನಿರ್ದೇಶಕ ವಿಘ್ನೇಶ್ ರಾಜಾ ಅವರ ‘ಕಾರಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಾ. ಇಶಾರಿ ಕೆ. ಗಣೇಶ್ ನಿರ್ಮಿಸುತ್ತಿರುವ ಈ ಸಿನಿಮಾ ಈ ಬೇಸಿಗೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಜೊತೆಗೆ ‘D55’ ಎಂಬ ಮತ್ತೊಂದು ಯೋಜನೆಯೂ ಪೈಪ್ಲೈನ್ನಲ್ಲಿದ್ದು, ಅದನ್ನು ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ನಿರ್ದೇಶಿಸಲಿದ್ದಾರೆ.
ಅಪರಾಧ
ಹಸಿ–ಒಣ ಕಸ ಬೇರ್ಪಡಿಸಲು ಸೂಚನೆ: ದಾವಣಗೆರೆಯಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ
ದಾವಣಗೆರೆ: ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ನೀಡಲು ತಿಳಿಸಿದ್ದ ಕಾರಣಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮೆಹಬೂಬ್ ನಗರದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಗೊಳಗಾದವರು ಕರಿಬಸಪ್ಪ ಎಂಬ ಪೌರ ಕಾರ್ಮಿಕ ಹಾಗೂ ವಾಹನ ಚಾಲಕ ಎಂದು ತಿಳಿದುಬಂದಿದೆ. ಪ್ರತಿದಿನ ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಮಾಡುವ ವೇಳೆ ಸ್ಥಳೀಯ ನಿವಾಸಿಯೊಬ್ಬರೊಂದಿಗೆ ವಾಗ್ವಾದ ಉಂಟಾಗಿ, ಅದು ಹಲ್ಲೆಗೆ ತಿರುಗಿದೆ.
ಘಟನೆ ಹೇಗೆ ನಡೆದಿದೆ?
ಪೌರ ಕಾರ್ಮಿಕರು ಬೆಳಗ್ಗೆ ಕಸ ಸಂಗ್ರಹಣೆಗೆ ಮೆಹಬೂಬ್ ನಗರಕ್ಕೆ ತೆರಳಿದ್ದರು. ಈ ವೇಳೆ ಒಬ್ಬ ನಿವಾಸಿ ಹಸಿ ಕಸ ಮತ್ತು ಒಣ ಕಸವನ್ನು ಒಂದೇ ಬಕೆಟ್ನಲ್ಲಿ ನೀಡಿದ್ದಾನೆ. ಜೊತೆಗೆ ಮಗುವಿನ ಡೈಪರ್ ಕೂಡ ಸೇರಿಸಿದ್ದಾನೆ.
“ಡೈಪರ್ ಅನ್ನು ಪ್ರತ್ಯೇಕವಾಗಿ ಕೊಡಿ” ಎಂದು ಪೌರ ಕಾರ್ಮಿಕರು ತಿಳಿಸಿದಾಗ ಮಾತಿನ ಚಕಮಕಿ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಸ್ಥಳೀಯರು ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಠಾಣೆ ಎದುರು ಪ್ರತಿಭಟನೆ
ಘಟನೆ ಖಂಡಿಸಿ ಪೌರ ಕಾರ್ಮಿಕರು ಮತ್ತು ಕಸ ಸಂಗ್ರಹಿಸುವ ವಾಹನ ಚಾಲಕರು Azad Nagar Police Station ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.
“ನಮ್ಮ ಮೇಲೆ ಪದೇಪದೇ ಹಲ್ಲೆ ನಡೆಯುತ್ತಿದೆ. ಕೆಲಸ ಮಾಡಲು ಭಯವಾಗುತ್ತಿದೆ. ನಮಗೆ ಭದ್ರತೆ ಒದಗಿಸಬೇಕು” ಎಂದು ಕಾರ್ಮಿಕರು ಆಗ್ರಹಿಸಿದರು.
ಮೆಹಬೂಬ್ ನಗರ, ಅಜಾದ್ ನಗರ, ಶಿವನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಕೆಲಸ ಮಾಡಲು ಆತಂಕವಿದೆ ಎಂದು ತಿಳಿಸಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
-
ಚುನಾವಣೆ22 hours agoGBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
-
ದೇಶ24 hours agoBENGALURU : ಮಹಾಶಿವರಾತ್ರಿ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ
-
ದೇಶ24 hours agoMAHA SHIV RATHRI 2026: ಪಂಚಮುಖಿ ಶಿವನ ಪೂಜೆಯ ಮಹತ್ವ ಮತ್ತು ಆಧ್ಯಾತ್ಮಿಕ ರಹಸ್ಯ
-
ಅಪರಾಧ2 hours agoಚಿಕ್ಕಬಳ್ಳಾಪುರದಲ್ಲಿ ಆರ್ಟಿಓ ಇನ್ಸ್ಪೆಕ್ಟರ್ ಎಡವಟ್ಟು: ಅಧಿಕಾರ ವ್ಯಾಪ್ತಿ ಮೀರಿ ಪರಿಶೀಲನಾ ವರದಿ?
-
ಚುನಾವಣೆ23 hours agoತಮಿಳುನಾಡು ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರಿಗೆ ₹5,000 ಜಮೆ: ಡಿಎಂಕೆ ಸರ್ಕಾರದ ಘೋಷಣೆ
-
ದೇಶ23 hours agoರಾಹುಲ್ ಗಾಂಧಿ ವಿರುದ್ಧ ನಿರ್ಣಯ ತಾತ್ಕಾಲಿಕ ಕೈಬಿಟ್ಟು ಕೇಂದ್ರ ಸರ್ಕಾರ
-
ದೇಶ23 hours agoBMTC ಸಿಹಿ ಸುದ್ದಿ: ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಉಚಿತ ಬಸ್ ಪ್ರಯಾಣ
-
ದೇಶ24 hours agoಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಅನುಮತಿ ನಿರೀಕ್ಷೆ: ಡಿ.ಕೆ. ಶಿವಕುಮಾರ್
