ಬೆಂಗಳೂರು
ಜಿಲ್ಲೆಯ ಹೆಸರು ಬದಲಾವಣೆ ಕೂಗು, ಪ್ರತಿಪಕ್ಷಗಳ ವಿರೋಧ: ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾದ ರಾಮನಗರದ ಇತಿಹಾಸವೇನು? – Ramanagara District Name change
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೈತಪ್ಪಿದ ಹಿನ್ನೆಲೆಯಲ್ಲಿ ರಾಜಕೀಯ ಮೇಲಾಟ ಮುಂದುವರೆದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವೆ ರಾಜಕೀಯ ಜಟಾಪಟಿ ನಡೆಯುತ್ತಲೇ ಇದೆ. ಇದಕ್ಕೆ ರಾಮನಗರ ಜಿಲ್ಲೆಯ ಮರುನಾಮಕರಣ ಪ್ರಸ್ತಾಪ ಹೊಸದಾಗಿ ಸೇರಿಕೊಂಡಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ಪ್ರಸ್ತಾವನೆ ಸಲ್ಲಿಸಿದೆ. ಆರಂಭದಲ್ಲಿ ಬೆಂಗಳೂರು ಜಿಲ್ಲೆಗೆ ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳು ಸೇರಿದ್ದವು. 1986ರಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ಘೋಷಿಸಲಾಯಿತು.
2007ರಲ್ಲಿ ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡ ಬಳ್ಳಾಪುರ ತಾಲ್ಲೂಕುಗಳನ್ನು ಒಳಗೊಂಡಂತೆ ಹೊಸ ಜಿಲ್ಲೆಯನ್ನು ಘೋಷಿಸಿ ಬೆಂಗಳೂರು ಗ್ರಾಮಾಂತರ ಹೆಸರನ್ನೇ ಉಳಿಸಿಕೊಳ್ಳಲಾಯಿತು. ಅದೇ ರೀತಿ ಮಾಗಡಿ, ಕನಕಪುರ, ಚನ್ನಪಟ್ಟಣ, ರಾಮನಗರ ತಾಲ್ಲೂಕುಗಳನ್ನು ಸೇರಿಸಿ ಹೊಸದಾಗಿ ರಾಮನಗರ ಜಿಲ್ಲೆ ಮಾಡಲಾಗಿದೆ.
ಪ್ರಸ್ತುತ ಬೆಂಗಳೂರು ನಗರ, ಅಂತಾರಾಷ್ಟ್ರೀಯ ಖ್ಯಾತಿ ಸಾರ್ವಭೌಮತ್ವ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲ್ಲೂಕುಗಳಿಗೆ ಲಭ್ಯವಾಗಬೇಕು ಎಂಬುದು ಜನರ ಆಶಯ ಮತ್ತು ನಮ್ಮ ಚಿಂತನೆಯಾಗಿದೆ ಎಂದು ಡಿಕೆಶಿ ನಿಯೋಗ ಮನವಿಯಲ್ಲಿ ತಿಳಿಸಿದೆ. ಈ ಐದು ತಾಲ್ಲೂಕುಗಳನ್ನು ಒಳಗೊಂಡು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಚನೆ ಮಾಡುವಂತೆ ಒತ್ತಾಯಿಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ.
ವಿವಾದ ಸೃಷ್ಟಿ: ರಾಮನಗರದ ಹೆಸರು ಬದಲಿಸಿ ‘ನವ ಬೆಂಗಳೂರು’ ಎಂದು ಮರುನಾಮಕರಣ ಮಾಡುವ ಕುರಿತು ವಿವಾದ ಸೃಷ್ಟಿಯಾಗಿದೆ. ರಾಜಕೀಯ ಹಗ್ಗಜಗ್ಗಾಟಕ್ಕೂ ಕಾರಣವಾಗಿದೆ. ಜಿಲ್ಲೆ ಬದಲಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಮನಗರದ ಹೆಸರು ಹೇಳುತ್ತಿದ್ದಂತೆ ರೇಷ್ಮೆ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಚನ್ನಪಟ್ಟಣದ ಗೊಂಬೆಗಳು, ‘ಕ್ಲೋಸ್ ಪೇಟೆ’ಯ ಗ್ರಾನೈಟ್, ನಾಗೇಗೌಡರ ಜಾನಪದ ಲೋಕ, ರಾಮನಗರದ ಬೆಟ್ಟ ಮತ್ತಿತರ ಹೆಸರುಗಳು ನೆನಪಾಗುತ್ತವೆ.
ರಾಮನಗರ ಬೆಂಗಳೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. 2007ರ ಆಗಸ್ಟ್ 23ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ರಾಜ್ಯದ 28ನೇ ಜಿಲ್ಲೆಯಾಗಿ ರಾಮನಗರ ಅಸ್ಥಿತ್ವಕ್ಕೆ ಬಂತು. ರಾಮನಗರ ಜಿಲ್ಲೆಯ ಉತ್ತರಕ್ಕೆ ಬೆಂಗಳೂರು ಗ್ರಾಮಾಂತರ, ದಕ್ಷಿಣಕ್ಕೆ ಚಾಮರಾಜನಗರ, ಮಂಡ್ಯ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳು, ಪೂರ್ವಕ್ಕೆ ಬೆಂಗಳೂರು ನಗರ ಜಿಲ್ಲೆ, ಪಶ್ಚಿಮಕ್ಕೆ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಹೊಂದಿಕೊಂಡಿವೆ.
ರಾಮನಗರಕ್ಕಿದೆ ಶತಮಾನಗಳ ಇತಿಹಾಸ: ಕ್ರಿ.ಶ 4ನೇ ಶತಮಾನದಲ್ಲಿ ಗಂಗ ವಂಶಸ್ಥ ರಾಜರು ರಾಮನಗರ ಭಾಗದಲ್ಲಿ ಆಳ್ವಿಕೆ ನಡೆಸಿದರು. ಚನ್ನಪಟ್ಟಣ ಬಳಿಯ ಮಾಕುಂದ (ಮಂಕುಂದ) ಅವರ ರಾಜಧಾನಿಯಾಗಿತ್ತು. ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ಕೆಂಪೇಗೌಡರ ವಂಶಸ್ಥರು, ಟಿಪ್ಪು ಸುಲ್ತಾನ್, ಮೈಸೂರು ಅರಸರು ಹಾಗೂ ಬ್ರಿಟಿಷರ ಆಡಳಿತಕ್ಕೆ ಈ ಭಾಗ ಒಳಪಟ್ಟಿತ್ತು. ಜಿಲ್ಲೆಯ ಕೆಲವೆಡೆ ಇತಿಹಾಸ ಪೂರ್ವ ಕಾಲದ ಪಳಿಯುಳಿಕೆಗಳು ಲಭ್ಯವಾಗಿವೆ.
ಬ್ರಿಟಿಷ್ ಅಧಿಕಾರಿ ‘ಸರ್ ಬ್ಯಾರಿ ಕ್ಲೋಸ್’ (1756-1813) ಸ್ವಾತಂತ್ರ ಪೂರ್ವ ಕಾಲದಲ್ಲಿ ಆಳ್ವಿಕೆ ನಡೆಸಿದ್ದರು, ಆದ್ದರಿಂದ ರಾಮನಗರವನ್ನು ಹಿಂದೆ ಕ್ಲೋಸ್ ಪೇಟೆ ಎಂದು ಕರೆಯಲಾಯಿತು. ಇದನ್ನು ಮಾಜಿ ಮುಖ್ಯಮಂತ್ರಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ರಾಮನಗರ ಎಂದು ಮರುನಾಮಕರಣ ಮಾಡಿದರು.
ಪ್ರಸಿದ್ಧ ಸ್ಥಳಗಳು: ಖ್ಯಾತಿಗಳಿಸಿದ್ದ ಹಿಂದಿ ಚಿತ್ರ ‘ಶೋಲೆ’ ಈ ಬೆಟ್ಟಗಳ ಸುತ್ತಲೂ ಚಿತ್ರೀಕರಣಗೊಂಡಿದೆ. ಆದ್ದರಿಂದ SHOLAY HILLS ಎಂಬ ಹೆಸರು ಬಂದಿದೆ. ರಾಮನಗರದಲ್ಲಿರುವ ಹಂದಿ-ಗುಂದಿ ಮೀಸಲು ಅರಣ್ಯದ ಭವ್ಯವಾದ ಕಲ್ಲುಗಳು ಭೂದೃಶ್ಯಕ್ಕೆ ಬಹಳ ಹಳೆಯದು ಮತ್ತು ಪ್ರಸಿದ್ಧವಾಗಿವೆ. ರಾಮದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟ, ಕೆಂಗಲ್ ಆಂಜನೇಯ ಸ್ವಾಮಿ, ಶ್ರೀ ಬ್ರಾಹ್ಮಣ ತೀರ್ಥ ಬೃಂದಾವನ, ಮಾಗಡಿಯಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಮಂಚನಬೆಲೆ ಅಣೆಕಟ್ಟು, ಹಾರೋಬೆಲೆ ಅಣೆಕಟ್ಟು ಚುಂಚಿ ಜಲಪಾತ, ಕನಕಪುರದಲ್ಲಿ ಮೆಕೆದಾಟು, ಸಾವನದುರ್ಗ, ತಿಪ್ಪಗೊಂಡನಹಳ್ಳಿ ಜಲಾಶಯ, ಜನಪದ ಲೋಕವು ಪ್ರಸಿದ್ಧಿ ಪಡೆದುಕೊಂಡಿದೆ. ರಾಮನಗರ ಜಿಲ್ಲೆಯು ಸಾಂಪ್ರದಾಯಿಕ ಆಟಿಕೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ಏಷ್ಯಾದಲ್ಲೇ ಇದು ಅತಿ ದೊಡ್ಡ ಮಾರುಕಟ್ಟೆ ಹೊಂದಿದೆ.
ಪಂಚಾಯತ್ ಭವನ, ಕಂದಾಯ ಭವನ, ಮಿನಿ ವಿಧಾನಸೌಧ, ತಾಲ್ಲೂಕು ಆಫೀಸ್, ಉಪ ಕಮಿಷನರ್ ಕಚೇರಿ, ಉಪ ಅಧೀನ ಕಚೇರಿಗಳು, ಆರಕ್ಷಕ ಇಲಾಖೆ ಮತ್ತು ಜಿಲ್ಲಾ ನ್ಯಾಯಾಲಯ, ಪೊಲೀಸ್ ಭವನಗಳಂತ ಆಧುನಿಕ ಕಚೇರಿ ಕಟ್ಟಡಗಳನ್ನು ರಾಮನಗರ ಜಿಲ್ಲೆ ಹೊಂದಿದೆ.
ಸಿಲ್ಕ್ ಸಿಟಿ ರಾಮನಗರ: ರಾಮನಗರವು ತನ್ನ ರೇಷ್ಮೆ ಕೃಷಿಗಾಗಿ ಹೆಸರುವಾಸಿ. ಇದನ್ನು ಸಿಲ್ಕ್ ಟೌನ್ ಮತ್ತು ಸಿಲ್ಕ್ ಸಿಟಿ ಎಂದು ಅಡ್ಡ ಹೆಸರು ಸಹ ಇದೆ. ಈ ಪ್ರದೇಶದಲ್ಲಿ ತಯಾರಿಸಿದ ರೇಷ್ಮೆ ಪ್ರಸಿದ್ಧ ಮೈಸೂರು ಸಿಲ್ಕ್ ಇನ್ಪುಟ್ ಅನ್ನು ರೂಪಿಸುತ್ತದೆ. ಏಷ್ಯಾದ ರೇಷ್ಮೆ ಕೋಕೋನ್ಗಳಿಗೆ ರಾಮನಗರ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶವು ಟೊಯೋಟಾ ಮತ್ತು ಕೋಕಾಕೋಲಾದ ತಯಾರಿಕಾ ಘಟಕಗಳನ್ನು ಹೊಂದಿದೆ. 1,400 ಮೆವ್ಯಾಟ್ ಅನಿಲ ಆಧಾರಿತ ವಿದ್ಯುತ್ ಸ್ಥಾವರವನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಕಣ್ವ, ಶಿಂಷಾ, ವೃಷಭಾವತಿ, ಕಾವೇರಿ, ಅರ್ಕಾವತಿ, ಕುಮುದ್ವತಿ ನದಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುತ್ತವೆ. ಇಷ್ಟೊಂದು ನದಿ, ಕೆರೆ, ಜಲಾಶಯಗಳಿದ್ದರೂ ಜಿಲ್ಲೆಯ ಬಹುಪಾಲು ಭೂಮಿ ಮಳೆಯನ್ನೇ ಅವಲಂಬಿಸಿದೆ.
ಪ್ರಸಿದ್ಧಿ ಪಡೆದ ಗ್ರಾನೈಟ್ಸ್: ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳು ‘ಗ್ರಾನೈಟ್’ ಶಿಲೆಗಳಿಗೆ ಹೆಸರುವಾಸಿ. ದಪ್ಪ ಕಣದ ಸ್ಫಟಿಕ ರಚನೆಯ ಗ್ರಾನೈಟ್ ಇಲ್ಲಿನ ವಿಶೇಷ. ರಾಮನಗರ ಸುತ್ತಮುತ್ತ ಸಿಗುವ ಗ್ರಾನೈಟ್ ‘ಕ್ಲೋಸ್ ಪೇಟೆ’ ಗ್ರಾನೈಟ್ ಎಂದೇ ಹೆಸರುಗಳಿಸಿದೆ.
ರಾಜಕೀಯ ಇತಿಹಾಸ: 1952ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆಂಗಲ್ ಹನುಮಂತಯ್ಯ ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ಜಿಲ್ಲೆಯಿಂದ ಮುಖ್ಯಮಂತ್ರಿಯಾದ ಮೊದಲಿಗರು ಕೆಂಗಲ್ ಹನುಮಂತಯ್ಯ. ಇದಾದ ನಂತರ 1983ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು. 1994 ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. 2004ರಲ್ಲಿ ರಾಮನಗರದಿಂದ ಪ್ರಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.
ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದರು. ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಮೂರು (ರಾಮನಗರ, ಕನಕಪುರ, ಚನ್ನಪಟ್ಟಣ) ತಾಲೂಕುಗಳಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ರಾಮನಗರ ಕ್ಷೇತ್ರಕ್ಕೆ ಮೂರು ಬಾರಿ ಸಿಎಂ ಹುದ್ದೆ ಸಿಕ್ಕಿದೆ. ಆದರೆ, ಜಿಲ್ಲೆಯಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾದ ಯಾವೊಬ್ಬ ನಾಯಕರೂ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ಕುತೂಹಲದ ಸಂಗತಿ.
ಜಿಲ್ಲೆ ಬದಲಾವಣೆಗೆ ವಿರೋಧ: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ರಯತ್ನಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದು, ”ಈಗ ಜಿಲ್ಲೆಯ ಹೆಸರು ಬದಲಾವಣೆ ಮಾಡಬಹುದು. ಮತ್ತೆ ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇನೆ. ಆಗ ಇವರು ಇಟ್ಟಿರುವ ಹೆಸರನ್ನು ತೆಗೆಯುತ್ತೇನೆ” ಎಂದು ಗುಡುಗಿದ್ದಾರೆ.
”ನಾನು ಅಧಿಕಾರದಲ್ಲಿದ್ದಾಗ ರಾಮನಗರ ಜಿಲ್ಲೆ ಮಾಡಿದ್ದೆ ಅದನ್ನು ತೆಗೆಯಬೇಕು ಎನ್ನುವುದು ಸರ್ಕಾರದ ಉದ್ದೇಶ. ದೇವೇಗೌಡರು ಮತ್ತು ನಾನು ಏನು ಅಭಿವೃದ್ಧಿ ಮಾಡಿದ್ದೇವೆ ಎನ್ನುವುದು ಜನರಿಗೆ ಗೊತ್ತಿದೆ. ಅದಕ್ಕೆ ಇವರ ಸರ್ಟಿಫಿಕೇಟ್ ಬೇಕಿಲ್ಲ. ಹೆಸರು ಬದಲಿಸುವುದು ಅನಗತ್ಯ” ಎಂದಿದ್ದಾರೆ.
ಅಶೋಕ್ ವಿರೋಧ: ”ರಾಮನಗರದಲ್ಲಿ ರಾಮನಿದ್ದಾನೆ ಎಂಬ ದ್ವೇಷಕ್ಕೋ ಅಥವಾ ರಿಯಲ್ ಎಸ್ಟೇಟ್ ಕುಬೇರರಾಗುವ ದುರಾಸೆಯೋ, ತಮ್ಮ ಸಹೋದರನನ್ನು ಸೋಲಿಸಿದ ಬಿಜೆಪಿ- ಜೆಡಿಎಸ್ ಮೈತ್ರಿ ವಿರುದ್ಧ ದ್ವೇಷ ಸಾಧಿಸಲು ಹೆಸರು ಬದಲಾವಣೆ ಮಾಡುತ್ತಿದ್ದೀರಾ?” ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
“ನಾವು ಹೊಸ ಜಿಲ್ಲೆಯನ್ನು ಸೃಷ್ಟಿಸುತ್ತಿಲ್ಲ. ಇರುವ ಜಿಲ್ಲೆ ಹಾಗೆ ಇರಲಿದೆ. ಒಂದು ಕಡೆ ಆಂಧ್ರಪ್ರದೇಶ, ಇನ್ನೊಂದು ಕಡೆ ತಮಿಳುನಾಡು ಗಡಿಯನ್ನು ಬೆಂಗಳೂರಿನ ಭಾಗಗಳು ಹಂಚಿಕೊಂಡಿವೆ. ತುಮಕೂರು ಮತ್ತು ಬಳ್ಳಾರಿ ರಸ್ತೆಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲಾ ದಿಕ್ಕುಗಳಲ್ಲೂ ಬೆಂಗಳೂರು ವಿಸ್ತರಣೆಯಾಗಿದೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದರಿಂದ ಭೂಮಿಯ ಬೆಲೆ ಹೆಚ್ಚಾಗುತ್ತದೆ. ಕೈಗಾರಿಕೆಗಳ ಅಭಿವೃದ್ಧಿಯೂ ಆಗುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕ್ರೀಡೆ
ಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!
ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣನಲ್ಲಿ ನಡೆಯುತ್ತಿರುವ Indian Premier League ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಆರ್ಸಿಬಿಗೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭದಲ್ಲಿ ವಿರಾಟ್ ಕೊಹ್ಲಿ (28) ಬೇಗ ಔಟ್ ಆದರೂ, ಫಿಲ್ ಸಾಲ್ಟ್ (46) ತಂಡಕ್ಕೆ ವೇಗ ನೀಡಿದರು.
ಆದರೆ, ನಂತರದ ಹಂತದಲ್ಲಿ ಆರ್ಸಿಬಿ ಬ್ಯಾಟಿಂಗ್ ಭರ್ಜರಿಯಾಗಿ ಸಿಡಿಯಿತು. ದೇವದತ್ತ ಪಡಿಕಲ್ (50) ಅರ್ಧಶತಕ ಸಿಡಿಸಿ ತಂಡಕ್ಕೆ ಬಲ ನೀಡಿದರೆ, ನಾಯಕ ರಜತ್ ಪಾಟೀದಾರ್ (48*) ವೇಗದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಟಿಮ್ ಡೇವಿಡ್ (70*) ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳಿಂದ ಚೆನ್ನೈ ಬೌಲರ್ಗಳನ್ನು ಕಂಗೆಡಿಸಿದರು.
ಪವರ್ಪ್ಲೇಯಲ್ಲೇ ವಿಕೆಟ್ ಪಡೆಯಲು ವಿಫಲವಾದ ಸಿಎಸ್ಕೆ ಬೌಲರ್ಗಳು ಮತ್ತೆ ಅದೇ ತಪ್ಪನ್ನು ಮುಂದುವರೆಸಿದರು. ಪರಿಣಾಮವಾಗಿ, ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರೀ 250 ರನ್ ಗಳಿಸಿತು.
ಈ ಬೃಹತ್ ಗುರಿಯನ್ನು ಬೆನ್ನತ್ತುತ್ತಿರುವ ಸಿಎಸ್ಕೆ, ತನ್ನ ಮೊದಲ ಗೆಲುವು ದಾಖಲಿಸಬಹುದೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಆರ್ಸಿಬಿ ಬ್ಯಾಟಿಂಗ್ ವಿವರ:
- ವಿರಾಟ್ ಕೊಹ್ಲಿ – 28 (18)
- ಫಿಲ್ ಸಾಲ್ಟ್ – 46 (30)
- ದೇವದತ್ತ ಪಡಿಕಲ್ – 50 (29)
- ರಜತ್ ಪಾಟೀದಾರ್ – 48* (19)
- ಟಿಮ್ ಡೇವಿಡ್ – 70* (25)
ಕ್ರೀಡೆ
ಐಪಿಎಲ್ ಟಿಕೆಟ್ ದುರ್ಬಳಕೆ: ಶಾಸಕರ ಪಾಸ್ ಸ್ನೇಹಿತರ ಕೈಗೆ!
ಬೆಂಗಳೂರುದಲ್ಲಿ ಐಪಿಎಲ್ ಕ್ರೇಜ್ ಗರಿಷ್ಠ ಮಟ್ಟಕ್ಕೆ ಏರಿರುವ ನಡುವೆಯೇ, ಶಾಸಕರಿಗೆ ನೀಡಲಾದ ಉಚಿತ ಟಿಕೆಟ್ ಪಾಸ್ಗಳ ದುರ್ಬಳಕೆಯ ಆರೋಪ ದೊಡ್ಡ ವಿವಾದಕ್ಕೆ ಕಾರಣವಾಗಿದೆ. Indian Premier League ಪಂದ್ಯಗಳಿಗೆ ಸಂಬಂಧಿಸಿದ ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೆಲವು ಶಾಸಕರು ತಮ್ಮ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ Karnataka State Cricket Association ವಿಶೇಷ ಅಕ್ರೆಡೆಷನ್ ಕಾರ್ಡ್ ಮಾದರಿಯ ಪಾಸ್ಗಳನ್ನು ವಿತರಿಸಿತ್ತು.
ಆದರೆ, ಈ ಪಾಸ್ಗಳು ಈಗ ಶಾಸಕರ ಕುಟುಂಬದವರಿಗಷ್ಟೇ ಸೀಮಿತವಾಗದೆ, ಅವರ ಮಕ್ಕಳ ಸ್ನೇಹಿತರ ಕೈಗೆ ಸೇರಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ, ಶಾಸಕರ ಕುಟುಂಬದ ಹೆಸರಿನ ಪಾಸ್ ಹಿಡಿದು ಬಂದಿದ್ದ ಕೆಲ ಯುವಕರ ಮೇಲೆ ಅನುಮಾನ ಮೂಡಿದೆ.
ಪರಿಶೀಲನೆ ವೇಳೆ ಯುವಕರು ತಡಬಡಾಯಿಸಿದ್ದು, ಕೊನೆಯಲ್ಲಿ ತಾವು ಶಾಸಕರ ಮಗನ ಸ್ನೇಹಿತರು ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಅವರನ್ನು ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಈ ಘಟನೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಜನಪ್ರತಿನಿಧಿಗಳಿಗಾಗಿ ನೀಡಲಾದ ಸೌಲಭ್ಯವನ್ನು ಅನರ್ಹರು ಬಳಸುವುದು ಸರಿಯೇ? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಸಾಮಾನ್ಯ ಜನರು ಟಿಕೆಟ್ಗಾಗಿ ಪರದಾಡುತ್ತಿರುವಾಗ, ಉಚಿತ ಪಾಸ್ಗಳು ದುರ್ಬಳಕೆಯಾಗುತ್ತಿರುವುದು ಜನರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ KSCA ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.
ದೇಶ
K. Govindraj ಸೇರಿ ಗಣ್ಯರಿಗೆ ಗೌರವ ಡಾಕ್ಟರೇಟ್ – ಬಿಸಿಯು ಘಟಿಕೋತ್ಸವ ಸಂಭ್ರಮ
ಬೆಂಗಳೂರು: Bengaluru City University (ಬಿಸಿಯು) 5ನೇ ಘಟಿಕೋತ್ಸವ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಕುಲಾಧಿಪತಿಗಳಾದ Thawar Chand Gehlot ಚಾಲನೆ ನೀಡಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ Dr. Binay Kumar Das, Defence Research and Development Organisation (ಡಿಆರ್ಡಿಒ) ಮಹಾ ನಿರ್ದೇಶಕರು (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಸಿಸ್ಟಮ್ಸ್) ಭಾಗವಹಿಸಿದ್ದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸಂಗೀತ ನಿರ್ದೇಶಕ Arjun Janya, ಕ್ರಿಕೆಟರ್ Venkatesh Prasad, ಶಿಕ್ಷಣ ತಜ್ಞ T. K. Narayanappa, ಎಂಎಲ್ಸಿ K. Govindaraj, ಶಿಕ್ಷಣ ಕ್ಷೇತ್ರದ Mohan Alva ಹಾಗೂ ಕೈಗಾರಿಕೋದ್ಯಮಿ Bava Mohammed Farooq ಅವರಿಗೆ ರಾಜ್ಯಪಾಲರು ಗೌರವಿಸಿದರು.
ಉಪ ಚುನಾವಣೆ ಪ್ರಚಾರದ ಹಿನ್ನೆಲೆ, ಉನ್ನತ ಶಿಕ್ಷಣ ಸಚಿವ Dr. C. N. Ashwath Narayan ಗೈರಾಗಿದ್ದರು.
ಘಟಿಕೋತ್ಸವದಲ್ಲಿ 73 ಪ್ರಥಮ ರ್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪ್ರಮಾಣಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ಒಟ್ಟು 37,370 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರದಾನವಾಗಿದ್ದು, 23 ವಿದ್ಯಾರ್ಥಿಗಳಿಗೆ ಪಿಎಚ್ಡಿ ಪದವಿ ನೀಡಲಾಯಿತು.
ವಿಶೇಷವಾಗಿ, ಸ್ನೇಹಾ ಟಿ (ಎಂಎಸ್ಸಿ ರಸಾಯನಶಾಸ್ತ್ರ) 4 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದು, ಅಭಿಷೇಕ್ ಶ್ರೀರಾಮ್ (ಬಿಕಾಂ) 3 ಚಿನ್ನದ ಪದಕ, ದಿವ್ಯಶ್ರೀ ಎಸ್ (ಬಿಬಿಎ) 3 ಚಿನ್ನದ ಪದಕ ಪಡೆದು ಗಮನಸೆಳೆದಿದ್ದಾರೆ.
ಗೌರವ ಡಾಕ್ಟರೇಟ್ ಪಡೆದ ಬಳಿಕ Arjun Janya ಅವರು ಮಾತನಾಡಿ, ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು.
-
ದೇಶ11 hours ago“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್ ಟಾಂಗ್, ದಾವಣಗೆರೆ ರಾಜಕೀಯ ಕುತೂಹಲ
-
ದೇಶ11 hours agoಕಾಗದ-ಇಂಕ್ ಬೆಲೆ ಏರಿಕೆ: ಪ್ರಿಂಟಿಂಗ್ ಪ್ರೆಸ್ಗಳಿಗೆ ಶಾಕ್
-
ದೇಶ10 hours agoಪೊಲೀಸ್ ವಾಹನವೇ ಪ್ರವೇಶಿಸದ ಗ್ರಾಮ: ಶಾಂತಿಯುತ ಬದುಕಿನ ಅದ್ಭುತ ಕಥೆ
-
ಕ್ರೀಡೆ8 hours agoಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!
-
ದೇಶ11 hours agoIndian Railways: ರೈಲಲ್ಲೇ ಮದುವೆ ಸಂಭ್ರಮ: Indian Railwaysನಲ್ಲಿ ಹೊಸ ಟ್ರೆಂಡ್!
-
ದೇಶ11 hours ago‘I Love My Daughter’ ಟೀ ಶರ್ಟ್ನಲ್ಲಿ ಸಂಭ್ರಮ: ವಿಚ್ಛೇದನಕ್ಕೆ ಹೊಸ ಅರ್ಥ ನೀಡಿದ ಕುಟುಂಬ
-
ದೇಶ11 hours agoಎನ್ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್
-
ದೇಶ11 hours agoಟ್ರಂಪ್ ದೇಶದಲ್ಲಿ ಭಾರತೀಯರ ಸದ್ದು: ಮೇಯರ್ ರೇಸ್ನಲ್ಲಿ ತಮಿಳುನಾಡಿನ ಕುವರಿ
