ಬೆಂಗಳೂರು

ಹಿರಿಯರು ಅಂತಾ ಬಹಳ ತಾಳ್ಮೆಯಿಂದ ಇದ್ದೇನೆ, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ : ಯತ್ನಾಳ್‌ಗೆ ವಿಜಯೇಂದ್ರ ವಾರ್ನಿಂಗ್‌

ಬೆಂಗಳೂರು : ಹಿರಿಯರಿಗೆ ಗೌರವ ಕೊಡುವುದು ನನ್ನ ಕರ್ತವ್ಯ. ನನ್ನ ತಂದೆ ನನಗೆ ಅದನ್ನು ಹೇಳಿಕೊಟ್ಟಿದ್ದಾರೆ. ಎಲ್ಲವನ್ನೂ ಸಂಯಮದಿಂದ ಕೇಳಿಸಿಕೊಳ್ಳುತ್ತಿದ್ದೇನೆ, ನೋಡುತ್ತಿದ್ದೇನೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಹಿರಿಯರು ಎಂದು ನಾನು ತಾಳ್ಮೆಯಿಂದ ಇದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಮೂಲಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ತಮ್ಮ ನಡುವೆ ಏನು ಸರಿಯಿಲ್ಲ ಎಂಬುದನ್ನು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ವಯಸ್ಸಿನಲ್ಲಿ ಹಿರಿಯರಿಗೆ ಗೌರವ ಕೊಡುವುದು ನನ್ನ ಕರ್ತವ್ಯ. ನನ್ನ ತಂದೆ ಬಿಎಸ್‌ ಯಡಿಯೂರಪ್ಪನವರು ನನಗೆ ಅದನ್ನು ಕಲಿಸಿಕೊಟ್ಟಿದ್ದಾರೆ. ನಾನು ಕೂಡ ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿದ್ದೇನೆ. ನಾನು ಕೂಡ ಬಹಳ ತಾಳ್ಮೆಯಿಂದ ಇದ್ದೇನೆ. ಪಕ್ಷದ ವರಿಷ್ಠರು ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಯತ್ನಾಳ್‌ ವಿಷಯದಲ್ಲಿ ವೀಕ್‌ ಆದ್ರಾ?

ಯತ್ನಾಳ್‌ ವಿಷಯದಲ್ಲಿ ವಿಜಯೇಂದ್ರ ವೀಕ್‌ ಆದ್ರಾ ಎಂಬ ಪ್ರಶ್ನೆಗೆ, ನಮ್ಮ ತಂದೆ ಬಿಎಸ್‌ ಯಡಿಯೂರಪ್ಪನವರು ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ. ತಿಳಿದವರ ಮುಂದೆ ತಲೆ ಬಗ್ಗಿಸಿ ನಡೆಯಬೇಕು. ತುಳಿಯುವವರ ಮುಂದೆ ತಲೆ ಎತ್ಕೊಂಡು ನಡೆಯಬೇಕು. ರಾಜಕಾರಣದಲ್ಲಿ ಎಲ್ಲವೂ ಸಹಜವೇ. ನನಗೆ ಬಹಳಷ್ಟು ತಾಳ್ಮೆ ಇದೆ. ವರಿಷ್ಠರು ಪಕ್ಷದ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡಿದ್ದಾರೆ. ಅದೊಂದು ದೀರ್ಘ ಪ್ರಯಾಣ. ಆದ್ದರಿಂದ ಎಲ್ಲವನ್ನೂ ನಾನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದೇನೆ. ನೋಡುತ್ತಿದ್ದೇನೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಕ್ಕೆ ಟಾಂಗ್‌ ನೀಡಿದರು.

ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ, ಯಾರು ಏನು ಹೇಳ್ತಾರೆ ಎನ್ನುವುದು ಮುಖ್ಯ ಅಲ್ಲ. ನಾನು ಬಿಜೆಪಿ ರಾಜ್ಯಾಧ್ಯಕ್ಷ ಆದ್ಮೇಲೆ ಕಾರ್ಯಕರ್ತರು, ಮುಖಂಡರನ್ನು ಜೊತೆಗೆ ತೆಗೆದುಕೊಂಡು ಪರಿಶ್ರಮದಿಂದ ಪಕ್ಷವನ್ನು ಸಂಘಟಿಸುತ್ತಿದ್ದೇನೆ ಎಂದು ಹೇಳಿದ ಬಿವೈ ವಿಜಯೇಂದ್ರ, ರಾಜಕೀಯ ಪಕ್ಷದಲ್ಲಿ ಸಮಸ್ಯೆಗಳು ಇದ್ದೆ ಇರುತ್ತವೆ. ಆಲ್‌ ಇಸ್‌ ವೆಲ್‌ ಎಂದು ನಾನು ಹೇಳುವುದಕ್ಕೆ ಹೋಗಲ್ಲ. ನಾನು ಹೇಳಿದ್ರು ಕೂಡ ನೀವು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದ ಅವರು ಪಕ್ಷದಲ್ಲಿ ಆಂತರಿಕ ಸಮಸ್ಯೆಗಳಿವೆ ಎಂಬ ನಿಜವನ್ನು ಒಪ್ಪಿಕೊಂಡರು.

ಪಕ್ಷಕ್ಕೆ ಯಾವತ್ತೂ ದ್ರೋಹ ಮಾಡಲ್ಲ!”

ಇನ್ನು, ಡಿಕೆ ಶಿವಕುಮಾರ್‌ ಜೊತೆ ವಿಜಯೇಂದ್ರ ಚೆನ್ನಾಗಿದ್ದಾರೆ, ಸಿದ್ದರಾಮಯ್ಯ ಜೊತೆ ಚೆನ್ನಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ಹೇಳಿಕೆಗೆ ಉತ್ತರಿಸಿದ ವಿಜಯೇಂದ್ರ, ನಾನು ರಾಜ್ಯಾಧ್ಯಕ್ಷ ಆದ್ಮೇಲೆ ನಮ್ಮ ಕಾರ್ಯಕರ್ತರಿಗೆ ಅವಮಾನ ಆಗುವ ಕೆಲಸವನ್ನು ಯಾವತ್ತು ಮಾಡಿಲ್ಲ. ಯಡಿಯೂರಪ್ಪ ಅವರು ಕೂಡ ತಮ್ಮ ರಾಜಕೀಯ ಜೀವನದಲ್ಲಿ ಅಂತಹ ಕೆಲಸವನ್ನು ಮಾಡಿಲ್ಲ. ಯಾರೋ ಪುಣ್ಯಾತ್ಮರು ಏನೇನೋ ಹೇಳ್ತಾರೆ, ಅದಲ್ಲ ಪ್ರಶ್ನೆ. ಬಿಎಸ್‌ ಯಡಿಯೂರಪ್ಪನವರು ಪಕ್ಷಕ್ಕೋಸ್ಕರ 40 – 50 ವರ್ಷ ಬೆವರು ಸುರಿಸಿದ್ದಾರೆ. ತನು ಮನ ಧನ ಎಲ್ಲವನ್ನು ಕೂಡ ಅರ್ಪಿಸಿದ್ದಾರೆ. ಪಕ್ಷವನ್ನು ರಾಜ್ಯದಲ್ಲಿ ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದ್ದಾರೆ. ಅದಲ್ಲದೇ ಇದರಲ್ಲಿ ಅನೇಕ ಹಿರಿಯರ ಶ್ರಮ ಕೂಡ ಇದೆ. ಕಾರ್ಯಕರ್ತರ ಪರಿಶ್ರಮ, ಬೆವರು ಇದೆ. ಅಂತಹ ಪಕ್ಷಕ್ಕೆ ದ್ರೋಹ ಮಾಡುವಂತಹ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಹೇಳಿದರು.

Trending

Exit mobile version