ಅಪರಾಧ

ನೇಹಾ ಕೊಲೆ ಪ್ರಕರಣ: ಸಚಿವರ ಹೇಳಿಕೆಗೆ ಕುಟುಂಬಸ್ಥರ ಆಕ್ರೋಶ – Nehas murder case

ಹುಬ್ಬಳ್ಳಿ : ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ನೇಹಾ ಹಿರೇಮ‌ಠ್ ಕೊಲೆ ಇಡೀ ದೇಶದಲ್ಲಿ ಸುದ್ದಿಯಾಗಿತ್ತು.‌ ಕೊಲೆ ಖಂಡಿಸಿ ಹುಬ್ಬಳ್ಳಿಯಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸಾಕಷ್ಟು ಪ್ರತಿಭಟನೆ ನಡೆದಿದ್ದವು. ಸರ್ಕಾರ ಕೂಡ ಸಾಕಷ್ಟು ಭರವಸೆ ನೀಡಿತ್ತು. ಆದರೆ, ಸಚಿವರ ಹೇಳಿಕೆ ಇದೀಗ ಯುವತಿಯ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಕೊಟ್ಟ ಮಾತು ತಪ್ಪಿದೆ ಎಂದ ನೇಹಾ ತಂದೆ : ನೇಹಾ‌ ಹಿರೇಮಠ್ ಕೊಲೆಯ ನಂತರ ಕೇಂದ್ರ ಗೃಹ ಸಚಿವರಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಭೇಟಿ ಸಂದರ್ಭದಲ್ಲಿ ಸರ್ಕಾರ ನೇಹಾ ಕೊಲೆಗೆ ತ್ವರಿತ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪಾಸ್ಟ್‌ಟ್ರ್ಯಾಕ್ ಕೋರ್ಟ್​ಗೆ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ ಎಂದು ನೇಹಾ ಹಿರೇಮಠ್ ತಂದೆ ನಿರಂಜನ ಹಿರೇಮಠ್ ಆರೋಪಿಸಿದ್ದಾರೆ.

ಇಂದು ಗೃಹ ಸಚಿವ ಡಾ.‌ ಜಿ ಪರಮೇಶ್ವರ್​ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಅವಶ್ಯಕತೆ ಬಿದ್ದರೆ ಮಾತ್ರ ಪಾಸ್ಟ್‌ಟ್ರ್ಯಾಕ್ ಕೋರ್ಟ್‌ ಮಾತ್ರ ಪಾಸ್ಟ್‌ಟ್ರ್ಯಾಕ್ ಕೋರ್ಟ್‌ಗೆ ಕೊಡುತ್ತೇವೆ. ಪಾಸ್ಟ್‌ಟ್ರ್ಯಾಕ್ ಕೋರ್ಟ್‌ಗೆ ಕೊಡುವುದನ್ನ ನಾವು ಡಿಸೈಡ್ ಮಾಡುವುದಿಲ್ಲ. ಪಾಸ್ಟ್‌ಟ್ರ್ಯಾಕ್ ಕೊಡಬೇಕಾ..? ನಾರ್ಮಲ್​​ ಕೋರ್ಟ್‌ಗೆ ಕೊಡಬೇಕಾ ಎಂದು ನಾವು ತೀರ್ಮಾನ ಮಾಡುವುದಿಲ್ಲ. ಪೊಲೀಸ್ ಇಲಾಖೆಯಲ್ಲಿ ಈ ಕೇಸ್ ಹೇಗೆ ಮುಂದುವರೆಸಬೇಕು ಎಂಬುದನ್ನು ತಿಳಿದುಕೊಂಡು ನಿರ್ಧಾರ ಮಾಡುತ್ತೇವೆ ಎಂದು ಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಸಚಿವರ ಹಾಗೂ ಸರ್ಕಾರದ ನಿರ್ಧಾರವನ್ನು ಪಾಲಿಕೆಯ ಕಾಂಗ್ರೆಸ್ ಸದಸ್ಯ ಹಾಗೂ ನೇಹಾಳ ತಂದೆ ನಿರಂಜನ ಹಿರೇಮಠ್ ವಿರೋಧಿಸಿದ್ದು, ಈ ಸರ್ಕಾರದಿಂದ ನಮ್ಮ ಮಗಳ ಸಾವಿಗೆ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹಾಗೂ ಗೃಹ ಸಚಿವರು ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಈ ಹೇಳಿಕೆ ಖಂಡನೀಯವಾಗಿದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ನನ್ನ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ‌ನೀಡಿದ್ದಾರೆ.

Trending

Exit mobile version