ಆರೋಗ್ಯ
ಜನರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಗಮನಹರಿಸುವುದು ನಮ್ಮ ಮೊದಲ ಆದ್ಯತೆ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ನೊವಾ ನಾರ್ಡಿಸ್ಕ್ ಇಂಡಿಯಾ ಸಿದ್ಧಪಡಿಸಿರುವ ‘ಡಯಾಬಿಟಿಸ್@ಬಾರೋಮೀಟರ್ (CDB) ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಲಾಭರಹಿತ ಸಂಸ್ಥೆಯಾಗಿರುವ ನೊವಾ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ (NNEF) ಸಂಸ್ಥೆಯೊಂದಿಗೆ ಕರ್ನಾಟಕ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಕರ್ನಾಟಕದ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಗಮನಹರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ವಿವಿಧ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಹೊಂದಿರುವ ಜನರಿಗೆ ಎಲ್ಲಾ ರೀತಿಯ ಯೋಗಕ್ಷೇಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಮ್ಮ ಆರೋಗ್ಯ ಪರಿಸರ ವ್ಯವಸ್ಥೆ ಮತ್ತು ಆರೋಗ್ಯ ಸೇವೆಗಳನ್ನು ಉನ್ನತೀಕರಿಸಲು ನಾವು ಬದ್ಧರಾಗಿದ್ದೇವೆ. ಮಧುಮೇಹವು ಕರ್ನಾಟಕಕ್ಕೆ ಮಾತ್ರವಲ್ಲದೇ, ಇಡೀ ದೇಶದ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ತನ್ನ ಇತ್ತೀಚಿಗೆ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು ಇನ್ನೂ 136 ಮಿಲಿಯನ್ ಜನರು ಮಧುಮೇಹ ಪೂರ್ವ ಹಂತದಲ್ಲಿದ್ದಾರೆ ಎಂದು ಹೇಳಿದರು.
ನೊವಾ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ನ ವ್ಯವಸ್ಥಾಪಕ ಟ್ರಸ್ಟಿ ವಿಕ್ರಾಂತ್ ಶ್ರೊತ್ರಿಯಾ ಅವರು ಮಾತನಾಡಿ, `ರಾಜ್ಯದಲ್ಲಿ ಮಧುಮೇಹ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮತ್ತೊಂದು ಭರವಸೆಯೊಂದಿಗೆ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ನಮಗೆ ಗೌರವ ತಂದಿದೆ. ಡಯಾಬಿಟಿಸ್@ಬಾರೋಮೀಟರ್ ಅನ್ನು ಬದಲಾಯಿಸುವ ಈ ಕಾರ್ಯಕ್ರಮವು ಎನ್ಎನ್ಇಎಫ್ ನ ವಿಶಿಷ್ಟವಾದ
ACT’ ವಿಧಾನವನ್ನು ಎತ್ತಿ ತೋರಿಸುತ್ತದೆ. ಈ ಮೂಲಕ ಕರ್ನಾಟಕದಾದ್ಯಂತ ಮಧುಮೇಹದ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಈ ಕಾಯಿಲೆಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ, ರಾಜ್ಯದ ಬೆಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇದನ್ನು ಪೈಲಟ್ ಯೋಜನೆಯಡಿ ಆರಂಭಿಸಲಾಗುತ್ತಿದೆ. ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳುವಂತೆ ರೋಗಿಗಳಿಗೆ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.