Connect with us

ಬೆಂಗಳೂರು

ಮಾನವ-ಆನೆ ಸಂಘರ್ಷ ರಾಜ್ಯವೊಂದರ ಸಮಸ್ಯೆಯಲ್ಲ, ಜಾಗತಿಕ ಸಮಸ್ಯೆ: ಸಚಿವ ಈಶ್ವರ್ ಖಂಡ್ರೆ – Minister Ishwar Khandre

ಬೆಂಗಳೂರು: “ಮಾನವ-ಆನೆ ಸಂಘರ್ಷ ಕೇವಲ ಕರ್ನಾಟಕ ಅಥವಾ ಭಾರತದ ಯಾವುದೋ ಒಂದು ರಾಜ್ಯದ ಸಮಸ್ಯೆಯಲ್ಲ. ಬದಲಾಗಿ ಜಾಗತಿಕ ಸಮಸ್ಯೆಯಾಗಿದೆ. ಮಾನವ-ಆನೆ ಸಂಘರ್ಷವು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ಸಮಸ್ಯೆಯಾಗಿದೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಅರಣ್ಯ ಇಲಾಖೆಯು ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿರುವುದು ಸಂತಸದ ವಿಷಯವಾಗಿದೆ. ಈ ಸಮ್ಮೇಳನದ ವಿಷಯವೇ ಒಂದು ಮಹತ್ವದ ಸವಾಲನ್ನು ಪ್ರಚುರಪಡಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಅಮೂಲ್ಯವಾದ ಜೀವ ಹಾನಿ, ಬೆಳೆ ಹಾನಿಗೆ ಕಾರಣವಾಗುತ್ತಿರುವ ಈ ಸಮಸ್ಯೆಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ. ಕರ್ನಾಟಕ ರಾಜ್ಯ ವೈವಿಧ್ಯಮಯ ಜೀವವೈವಿಧ್ಯ, ಸಸ್ಯ ಸಂಪತ್ತು, ಪ್ರಾಣಿ ಸಂಪತ್ತಿನಿಂದ ಕೂಡಿದೆ. ವಿಶಾಲವಾದ ದಟ್ಟ ಅಡವಿಗಳು, ಪ್ರಾಣಿ ಸಂಕುಲ, ಸಸ್ಯ ಸಂಕುಲ, ಕೀಟ ಸಂಕುಲ ಮತ್ತು ಪಕ್ಷಿ ಸಂಕುಲಕ್ಕೆ ನೆಲೆಯಾಗಿದೆ. ಕರ್ನಾಟಕದಲ್ಲಿ ಸುಮಾರು 43,382 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವಿದೆ. ಅಂದರೆ ನಮ್ಮ ಭೌಗೋಳಿಕ ಭೂಭಾಗದ ಶೇ.22ರಷ್ಟು ಹಸಿರು ಹೊದಿಕೆ ಇದೆ” ಎಂದು ಮಾಹಿತಿ ನೀಡಿದರು.

ರಾಜ್ಯದ ಅರಣ್ಯವನ್ನು ಜೀವನ ಮತ್ತು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಅಸಂಖ್ಯಾತ ಸಮುದಾಯಗಳೂ ಇವೆ. ಕಾಡು ಎಂದರೆ ಕೇವಲ ಮರ, ಗಿಡ, ಪ್ರಾಣಿ, ಪಕ್ಷ ಅಷ್ಟೇ ಅಲ್ಲ. ಕಾಡು ಈ ಭೂ ಗ್ರಹದ ಜೀವನಾಡಿ, ಎಲ್ಲ ಜೀವಜಂತುಗಳ ಉಸಿರು. ನಮಗೆ ಶುದ್ಧ ಗಾಳಿ, ಶುದ್ಧ ನೀರು, ಫಲವತ್ತಾದ ಮಣ್ಣು ಲಭಿಸುವುದೇ ಅರಣ್ಯದಿಂದ. ಅರಣ್ಯಗಳು ನಾನಾ ರೂಪದಲ್ಲಿ ನಮಗೆ ಪ್ರತ್ಯಕ್ಷ ಮತ್ತು ಪರೋಕ್ಷ ಅನುಕೂಲತೆ ಕಲ್ಪಿಸಿವೆ. ಕರ್ನಾಟಕದಲ್ಲಿ, ಈ ನೈಸರ್ಗಿಕ ಸಂಪನ್ಮೂಲಗಳ ನಿರ್ಣಾಯಕ ಮಹತ್ವವನ್ನು ನಾವು ಗುರುತಿಸಿದ್ದೇವೆ ಮತ್ತು ಅವುಗಳ ರಕ್ಷಣೆ ಮತ್ತು ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ” ಎಂದರು.

ಆನೆ ಸಂಖ್ಯೆಯಲ್ಲಿ ರಾಜ್ಯ ಪ್ರಥಮ: “ಕರ್ನಾಟಕ ಸರ್ಕಾರ ಅರಣ್ಯದಲ್ಲಿ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2023ರ ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6,395 ಆನೆಗಳಿದ್ದು, ಗಜ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ 563 ಹುಲಿ ಹೊಂದಿರುವ ಕರ್ನಾಟಕ, ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಆಗದ ಹಿನ್ನೆಲೆಯಲ್ಲಿ ಆನೆಗಳು ನಾಡಿಗೆ ಬರುತ್ತಿದ್ದು, ಬೆಳೆ ಹಾನಿ, ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ತಗ್ಗಿಸಲು ಈ ಸಮ್ಮೇಳನ ಬೆಳಕು ಚೆಲ್ಲಲಿದೆ ಎಂಬ ವಿಶ್ವಾಸ ನನಗಿದೆ” ಎಂದು ತಿಳಿಸಿದರು.

ರಾಜ್ಯ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳಿಂದ ಆನೆ ದಾಳಿಯಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಆಗದಂತೆ ನಿಯಂತ್ರಿಸಲಾಗುತ್ತಿದೆ. ಆದಾಗ್ಯೂ ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 25 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಪ್ರತಿಯೊಂದು ಜೀವವೂ ಅಮೂಲ್ಯ. ಈ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿ” ಎಂದು ಆಶಿಸಿದರು.

ಆದಿವಾಸಿಗಳ ಕೊಡುಗೆ ಅಪಾರ: “ಮಾನವ-ವನ್ಯಜೀವಿ ಸಂಘರ್ಷದಲ್ಲಿ, ಮಾನವ-ಆನೆ ಸಂಘರ್ಷವೇ ದೊಡ್ಡ ಸವಾಲು. ಹೆಚ್ಚುತ್ತಿರುವ ಮಾನವ ಜನಸಂಖ್ಯೆ, ಕಾಡಂಚಿನವರೆಗೆ ವಿಸ್ತರಿಸುತ್ತಿರುವ ಕೃಷಿ ಚಟುವಟಿಕೆಗಳು ಮತ್ತು ವಸತಿ ಬಡಾವಣೆ ನಿರ್ಮಾಣ ಮಾನವ-ಆನೆ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ. ನಮ್ಮ ಪೂರ್ವಿಕರು ಕಾಡಿನೊಂದಿಗೆ ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿತಿದ್ದರು. ಇಂದಿಗೂ ಕಾಡಿನಲ್ಲೇ ವಾಸಿಸುವ ಆದಿವಾಸಿಗಳು ವನ್ಯಜೀವಿ ದಾಳಿಯಿಂದ ಮೃತಪಡುವುದು ಅಪರೂಪದಲ್ಲೇ ಅಪರೂಪ. ಆದರೆ ನಗರ ವಾಸಿಗಳಾದ ನಾವು ಈಗ ಆಧುನಿಕ ಯುಗದಲ್ಲಿ ಆ ಸಹಬಾಳ್ವೆಯ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ.” ಎಂದು ಆತಂಕ ವ್ಯಕ್ತಪಡಿಸಿದರು.

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವುದು ನಮ್ಮ ಆದ್ಯತೆ: “ಮಾನವ-ವನ್ಯಜೀವಿ ಸಂಘರ್ಷ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಮೊದಲ ಆದ್ಯತೆ. ಜನರ ಮತ್ತು ವನ್ಯಜೀವಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸಲು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ತಂತ್ರಜ್ಞಾನದ ಅಳವಡಿಕೆ ಮತ್ತು ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಕರ್ನಾಟಕ ರಾಜ್ಯವು ಈ ಸವಾಲನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ” ಎಂದರು.

“ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗೆ ಮುಖ್ಯಮಂತ್ರಿಯವರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. 2023-24 ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದರು. ಇಂದು ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸುತ್ತಿದೆ. ನಾವು ಹಸಿರು ಹೊದಿಕೆ ಹೆಚ್ಚಳ ಮಾಡುವ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ನಮ್ಮ ಸರ್ಕಾರ 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿತು. ನಿಮಗೆಲ್ಲ ಆಶ್ಚರ್ಯ ಆಗಬಹುದು ನಾವು 5 ಕೋಟಿ 48 ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಜೊತೆಗೆ ಈ ರೀತಿ ನೆಡಲಾದ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂದು ತಿಳಿಯಲು ಜಿಯೋ ಟ್ಯಾಗ್ ಮಾಡಿಸಿ ಆಡಿಟ್ ಕೂಡ ಮಾಡುತ್ತಿದ್ದೇವೆ” ಎಂದು ವಿವರಿಸಿದರು.

ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಕೇರಳ, ತಮಿಳುನಾಡು ಮತ್ತು ಒಡಿಶಾದ ಅರಣ್ಯ ಸಚಿವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಬೆಂಗಳೂರು

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಕಿತ್ತೂರು ಕೋಟೆ ಮತ್ತು ರಾಣಿ ಚೆನ್ನಮ್ಮನ ಆಕರ್ಷಕ ಪ್ರತಿಕೃತಿಗಳು

ಬೆಂಗಳೂರು: ಲಾಲ್‌ಬಾಗ್ ಉದ್ಯಾನದಲ್ಲಿ ನಾಳೆ ಆಗಸ್ಟ್ 7ರಿಂದ 18ರವರೆಗೆ ನಡೆಯಲಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ವರ್ಷದ ಪ್ರಮುಖ ಆಕರ್ಷಣೆ ಎಂದರೆ ಗಾಜಿನ ಮನೆಯಲ್ಲಿ ಸ್ಥಾಪಿಸಿರುವ ಕಿತ್ತೂರು ಕೋಟೆ ಮತ್ತು ರಾಣಿ ಚೆನ್ನಮ್ಮನವರ ಐಕ್ಯ ಮಂಟಪದ ಪ್ರತಿಕೃತಿಗಳು.

ತೋಟಗಾರಿಕೆ ಇಲಾಖೆ ವಿವಿಧ ರೀತಿಯ ಆಕರ್ಷಕ ಹೂವುಗಳಿಂದ ಗಾಜಿನ ಮನೆಯನ್ನು ಅಲಂಕಾರಗೊಳಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳು ಬಣ್ಣ ಬಣ್ಣದ ಹೂಸಸಿಗಳೊಂದಿಗೆ ಶೃಂಗಾರಗೊಂಡಿವೆ. ಈ ಪ್ರದರ್ಶನದಲ್ಲಿ ಆಂಥೋರಿಯಂ, ಗುಲಾಬಿ, ಆರ್ಕಿಡ್, ಜರ್ಬೇರಾ ಮತ್ತು ಸುಗಂಧ ರಾಜ ಸೇರಿದಂತೆ ಹಲವಾರು ಶೀತ ವಲಯದ ಹೂಗಳು ನೋಡುಗರ ಕಣ್ಮನ ಸೆಳೆಯಲಿವೆ.

ಬೋನ್ಸಾಯ್ ವನವನ್ನು ನವೀಕರಿಸಿ ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ವಿಶೇಷ ಬೋನ್ಸಾಯ್ ಸಸಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಇಕೆಬಾನಾ, ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಯ ಪ್ರದರ್ಶನವೂ ಈ ಶೋನಲ್ಲಿ ಒಳಗೊಂಡಿವೆ.

ಸುಮಾರು 2.5 ಲಕ್ಷದಿಂದ 3 ಲಕ್ಷ ಹೂವುಗಳಿಂದ ನಿರ್ಮಿತವಾಗಿರುವ ಗಾಜಿನ ಮನೆಯಲ್ಲಿ, 18 ಅಡಿ ಎತ್ತರ ಮತ್ತು 32 ಅಡಿ ಅಗಲದ ಕಿತ್ತೂರಿನ ಕೋಟೆ ಪ್ರತಿಕೃತಿ ಸ್ಥಾಪಿಸಲಾಗಿದೆ. ಇದರ ಮುಂಭಾಗದಲ್ಲಿ ಅಶ್ವಾರೂಢ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು ಹಾಗೂ ಹಿಂಭಾಗದಲ್ಲಿ ಐಕ್ಯ ಮಂಟಪದ ಪ್ರತಿಕೃತಿ ಇದೆ.

ಪ್ರವೇಶ ಶುಲ್ಕ:

  • ಸಾಮಾನ್ಯ ದಿನ: ₹80
  • ರಜಾದಿನಗಳು ಮತ್ತು ವಾರಾಂತ್ಯ: ₹100

ಈ ಪ್ರದರ್ಶನವು ನೈಸರ್ಗಿಕ ಸೌಂದರ್ಯ ಹಾಗೂ ಐತಿಹಾಸಿಕ ಮಹತ್ವವನ್ನು ಒಗ್ಗೂಡಿಸುವ ಅತ್ಯುತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸುವ ನಿರೀಕ್ಷೆಯಿದೆ.

Continue Reading

ಬೆಂಗಳೂರು

ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ ₹50,000 ಸಹಾಯಧನ: ಜಮೀರ್ ಅಹ್ಮದ್ ಘೋಷಣೆ

ಬೆಂಗಳೂರು:
ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಸಾಮೂಹಿಕ ವಿವಾಹಗಳಿಗೆ ಇನ್ಮುಂದೆ ಸರ್ಕಾರದಿಂದ ₹50,000 ಸಹಾಯಧನ ಸಿಗಲಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಘೋಷಿಸಿರುವ ಬಜೆಟ್ ಯೋಜನೆಗೆ ಈಗ ಅನುಮೋದನೆ ಲಭಿಸಿದ್ದು, ಈ ನಿಟ್ಟಿನಲ್ಲಿ ಬಡ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು:
ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್‌ ಸೇರಿದಂತೆ ಪ್ರತಿಭಾವಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಈಗಾಗಲೇ 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್‌ಟಾಪ್ ವಿತರಣೆ ನಡೆಸಲಾಗಿದೆ.

ಮದರಸಾಗಳಲ್ಲಿ ಕನ್ನಡ ಕಲಿಕೆ:
ಮದರಸಾಗಳಲ್ಲಿ ಕನ್ನಡ ಕಲಿಕೆ ಆರಂಭಿಸುವ ಯೋಜನೆಯೊಂದಿಗೆ, ಮೊದಲ ಹಂತದಲ್ಲಿ 200 ಮೌಲ್ವಿಗಳನ್ನು ಆಯ್ಕೆ ಮಾಡಲಾಗಿದೆ. ಮೂವರು ತಿಂಗಳಲ್ಲಿ ಅವರಿಗೆ ಕನ್ನಡ ಭಾಷಾ ತರಬೇತಿ ನೀಡಲಾಗುವುದು.

2,000 ಮದರಸಾಗಳಿಗೆ ಕನ್ನಡ ಪಾಠ್ಯಕ್ರಮ:
ರಾಜ್ಯದಲ್ಲಿ 2 ಸಾವಿರ ಮದರಸಾಗಳಿಗೆ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಅಲ್ಪಸಂಖ್ಯಾತ ಆಯೋಗ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದ್ದಾರೆ. very soon ಈ ಪಾಠ್ಯಕ್ರಮ ಮುದ್ರಣಕ್ಕೂ ಕ್ರಮ ಜರಗಲಿದೆ.

Continue Reading

ಬೆಂಗಳೂರು

ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಸೆನ್ಸೇಷನ್: ಶ್ರಾವಣದ ಹಬ್ಬಕ್ಕೂ ಮುನ್ನ ಧನಲಕ್ಷ್ಮೀ ವರ!

ಬೆಂಗಳೂರು: ಶ್ರಾವಣ ತಿಂಗಳು ಅಂದ್ರೆ ಬಂಗಾರದ ತಿಂಗಳು. ಮನೆಮಾಲೀಕರಿಗೆ ವರಮಹಾಲಕ್ಷ್ಮೀ ಹಬ್ಬ, ಕನ್ನಡ ಚಿತ್ರರಂಗಕ್ಕೆ “ಸು ಫ್ರಮ್ ಸೋ” ಚಿತ್ರದ ಯಶಸ್ಸು! ರಾಜ್ ಬಿ.ಶೆಟ್ಟಿ ಅಭಿನಯದ ಈ ಹಾರರ್-ಕಾಮಿಡಿ ಸಿನಿಮಾ ಇದೀಗ ಮೂರನೇ ವಾರದಲ್ಲೂ ಭರ್ಜರಿಯಾಗಿ ಓಡುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹವಾ ಸೃಷ್ಟಿಸಿದೆ.

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾಗಳಿಗೆ ಅಭಿಮಾನಿಗಳ ಮೆಚ್ಚುಗೆ ಹೆಚ್ಚಾಗುತ್ತಿದೆ. ‘ಎಕ್ಕ’, ‘ಜೂನಿಯರ್’ ನಂತರ ‘ಸು ಫ್ರಮ್ ಸೋ’ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
75 ಲಕ್ಷ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ₹25 ಕೋಟಿ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲೇ ₹50 ಕೋಟಿ ಕ್ಲಬ್ ಸೇರುವ ಲಕ್ಷಣವಿದೆ.

ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಕೇರಳ ಹಾಗೂ ವಿದೇಶಗಳಲ್ಲೂ ರಿಲೀಸ್ ಆದ ಈ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಪಡೆಯುತ್ತಿದೆ. ರಾಜ್ ಬಿ.ಶೆಟ್ಟಿ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ ಅವರ ಶ್ರದ್ಧೆ ಫಲ ನೀಡಿದ್ದು, “ಬಂದರೋ ಬಂದರು.. ಬಾವ ಬಂದರು” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.

ಇನ್ನು ಮಲಯಾಳಂ ಡಬ್ಬಿಂಗ್ ಆಗಿ ಆಗಸ್ಟ್ 1ರಂದು ಬಿಡುಗಡೆಗೊಂಡ ‘ಸು ಫ್ರಮ್ ಸೋ’ ಚಿತ್ರ, ಕೊಚ್ಚಿಯಲ್ಲಿ ಒಂದೇ ದಿನ 8 ಸಾವಿರ ಟಿಕೆಟ್ ಮಾರಾಟ ಮಾಡಿದ ದಾಖಲೆ ಸ್ಥಾಪಿಸಿದೆ. ಆದುದರಿಂದ, ಚಿತ್ರದ ಬಯೋಪಿಕ್ ಮತ್ತಷ್ಟು ಭಾಷೆಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

Continue Reading

Trending