Connect with us

Blog

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ: ದುಬಾರಿ ಬೆಲೆಯ ಪ್ರೀಮಿಯಂ ಬ್ರಾಂಡ್ ಮದ್ಯದ ದರ ಇಳಿಸಿ ಸರ್ಕಾರದ ಆದೇಶ – Liquor Price

ಬೆಂಗಳೂರು: ಪ್ರೀಮಿಯಂ ಮದ್ಯದ ಬೆಲೆ ಇಂದಿನಿಂದ ಅಗ್ಗವಾಗಲಿದೆ. ದುಬಾರಿ ಬ್ರಾಂಡ್​​ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಜೆಟ್​ನಲ್ಲಿ ಘೋಷಿಸಿದಂತೆ ಜುಲೈ 1ರಿಂದ ರಾಜ್ಯದಲ್ಲಿ ಮದ್ಯದ ದರ ಇಳಿಕೆಯಾಗಬೇಕಿತ್ತು. ಜುಲೈನಿಂದ ಮದ್ಯದ ದರದಲ್ಲಿ ಪರಿಷ್ಕರಣೆ ಮಾಡುವ ಮೂಲಕ ಒಂದೆಡೆ ಮದ್ಯ ಪ್ರಿಯರಿಗೆ ಖುಷಿ ಪಡಿಸುವುದಷ್ಟೇ ಅಲ್ಲ ತನ್ನ ಅಬಕಾರಿ ಆದಾಯವನ್ನೂ ಹೆಚ್ಚಿಸುವ ಲೆಕ್ಕಾಚಾರ ರಾಜ್ಯ ಸರ್ಕಾರದ್ದಾಗಿತ್ತು.‌ ಈ ಸಂಬಂಧ ಜುಲೈ 1ಕ್ಕೆ ಪರಿಷ್ಕೃತ ದರಗಳ ಅಧಿಸೂಚನೆ ಹೊರಡಿಸಿತ್ತು. ಆದರೆ, ಸಿಎಂ ಸೂಚನೆ ಮೇರೆಗೆ ದರ ಪರಿಷ್ಕರಣೆ ಆದೇಶ ಜಾರಿಯನ್ನು ತಡೆ ಹಿಡಿಯಲಾಗಿತ್ತು. ಇದೀಗ ಮತ್ತೆ ಕೆಲ ಪರಿಷ್ಕರಣೆ ಮಾಡಿ ದುಬಾರಿ ಬ್ರಾಂಡ್​ಗಳ ಮದ್ಯದ ಮೇಲಿನ ದರವನ್ನು 15-20% ವರೆಗೆ ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಪರಿಷ್ಕೃತ ದರದಂತೆ ಮದ್ಯದ ಸ್ಲ್ಯಾಬ್ ವಾರು ದರವನ್ನು ಪರಿಷ್ಕರಿಸಿರುವ ಸರ್ಕಾರ ಪ್ರಸ್ತುತ ಇದ್ದ 18 ಸ್ಲ್ಯಾಬ್​ಗಳಲ್ಲಿ ವಿಧಿಸಲಾಗುತ್ತಿದ್ದ ಅಬಕಾರಿ ಸುಂಕವನ್ನು 16 ಸ್ಲ್ಯಾಬ್​ಗಳಿಗೆ ಇಳಿಕೆ ಮಾಡಿದೆ. ಅದಕ್ಕನುಗಣವಾಗಿ ಅಬಕಾರಿ ಸುಂಕವನ್ನು ಪರಿಷ್ಕರಿಸಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಪರಿಷ್ಕೃತ ದರ ಹೇಗಿರಲಿದೆ?: ಅಬಕಾರಿ ಇಲಾಖೆ ಪ್ರತಿ ಬಾಕ್ಸ್ (8.64/9/12 ಬಲ್ಕ್ ಲೀಟರ್ ಮದ್ಯದ ಬಾಕ್ಸ್)ನ ಘೋಷಿತ ಉತ್ಪಾದನಾ ಬೆಲೆಯ ಆಧಾರದಲ್ಲಿ ಸ್ಲ್ಯಾಬ್ ವೈಸ್ ಅಬಕಾರಿ ಸುಂಕ ವಿಧಿಸುತ್ತದೆ. ಪ್ರಸ್ತುತ ಅಬಕಾರಿ ಸುಂಕವನ್ನು 18 ಸ್ಲ್ಯಾಬ್​ಗಳಲ್ಲಿ ವಿಧಿಸಲಾಗುತ್ತಿತ್ತು. ಇದೀಗ ಪರಿಷ್ಕೃತ ಅಬಕಾರಿ ಸುಂಕದಲ್ಲಿ ಪ್ರಸ್ತುತ ಇರುವ 18 ಸ್ಲ್ಯಾಬ್​ಗಳನ್ನು 16ಕ್ಕೆ ಕಡಿತಗೊಳಿಸಲಾಗಿದೆ. ಹಳೆಯ ಸ್ಲ್ಯಾಬ್​ಗೆ ಹೋಲಿಸಿದರೆ 5ನೇ ಸ್ಲ್ಯಾಬ್​ನಿಂದ 16 ಸ್ಲ್ಯಾಬ್ ವರೆಗಿನ‌ ಮದ್ಯದ ದರದಲ್ಲಿ ಇಳಿಕೆ ಮಾಡಲಾಗಿದೆ.

ಪರಿಷ್ಕೃತ 16 ಸ್ಲ್ಯಾಬ್ ವೈಸ್ ಘೋಷಿತ ಉತ್ಪಾದನಾ ಬೆಲೆಯ ಪ್ರಕಾರ 0-450 ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 215 ರೂ. ಇರಲಿದೆ. 451-500 ದರ ಸ್ಲ್ಯಾಬ್​ಗೆ ಸುಂಕ 294 ರೂ. ಪರಿಷ್ಕರಣೆ ಆಗಲಿದೆ. ಇನ್ನು 501-550 ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 386 ರೂ., 551-650 ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಸುಂಕ 523 ರೂ., 651-750 ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 620 ರೂ., 751-900 ದರ ಸ್ಲ್ಯಾಬ್​ಗೆ ಸುಂಕ 770 ರೂ., 901-1050 ದರ ಸ್ಲ್ಯಾಬ್​ಗೆ ಸುಂಕ 870 ರೂ., 1051-1300 ದರ ಸ್ಲ್ಯಾಬ್​ಗೆ ಸುಂಕ 970 ರೂ., 1301-1800 ದರ ಸ್ಲ್ಯಾಬ್​ಗೆ ಸುಂಕ 1200 ರೂ., 1801-2500 ದರ ಸ್ಲ್ಯಾಬ್​ಗೆ ಸುಂಕ 1400 ರೂ., 2501-5000 ದರ ಸ್ಲ್ಯಾಬ್​ಗೆ ಸುಂಕ 1600 ರೂ., 5001-8000 ದರ ಸ್ಲ್ಯಾಬ್​ಗೆ ಸುಂಕ 2000 ರೂ., 8001-12,500 ದರ ಸ್ಲ್ಯಾಬ್​ಗೆ ಸುಂಕ 2400 ರೂ., 12501-15000 ದರ ಸ್ಲ್ಯಾಬ್​ಗೆ ಸುಂಕ 2600 ರೂ., 15001-20000 ದರ ಸ್ಲ್ಯಾಬ್​ಗೆ ಸುಂಕ 2800 ರೂ. ಮತ್ತು 20000 ಮೇಲ್ಪಟ್ಟ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 3000 ರೂ. ವಿಧಿಸಲಾಗುತ್ತದೆ.

ಈವರೆಗಿನ ಮದ್ಯದ ದರ ಹೇಗಿತ್ತು?: ಈ ಮುಂಚೆ 18 ಸ್ಲ್ಯಾಬ್ ವೈಸ್ ಘೋಷಿತ ಉತ್ಪಾದನಾ ಬೆಲೆ (ಪ್ರತಿ ಬಾಕ್ಸ್) ಪ್ರಕಾರ 0-449ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 215 ರೂ. ವಿಧಿಸಲಾಗುತ್ತಿತ್ತು. 451- 499 ರೂ. ವರೆಗಿನ ಘೋಷಿತ ಉತ್ದಾದನಾ ದರದ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 294 ರೂ. ಇತ್ತು. ಇನ್ನು 500- 549 ದರ ಸ್ಲ್ಯಾಬ್​ಗೆ ಸುಂಕ 386 ರೂ., 550- 599 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 497 ರೂ., 600-699 ದರ ಸ್ಲ್ಯಾಬ್​ಗೆ ಸುಂಕ 668 ರೂ., 700-799 ದರ ಸ್ಲ್ಯಾಬ್​ಗೆ ಸುಂಕ 816 ರೂ., 800-899 ದರ ಸ್ಲ್ಯಾಬ್​ಗೆ ಸುಂಕ 870 ರೂ., 900-999 ದರ ಸ್ಲ್ಯಾಬ್​ಗೆ ಸುಂಕ 938 ರೂ., 1000-1099 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 982 ರೂ., 1100-1199 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 1102 ರೂ., 1200-1299 ದರ ಸ್ಲ್ಯಾಬ್​ಗೆ ಸುಂಕ 1325 ರೂ., 1300-1399 ದರ ಸ್ಲ್ಯಾಬ್​ಗೆ ಸುಂಕ 1541ರೂ., 1400-1799 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 1667 ರೂ., 1800-2199 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 1860 ರೂ., 2200-4924 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 2124 ರೂ., 4925-7650 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 2483 ರೂ., 7651-15000 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 3571 ರೂ., 15,001 ಮೇಲ್ಪಟ್ಟ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 5358 ರೂ. ವಿಧಿಸಲಾಗುತ್ತಿತ್ತು.

Blog

BIG NEWS : ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು:

ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಲ್ಲ. ಹೈಕಮಾಂಡ್ ಮುಂದೆ ಎಲ್ಲವೂ ಮಾತನಾಡಿದ್ದೇವೆ. ಅದರ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಹೈಕಮಾಂಡ್ ಏನು ಹೇಳುತ್ತದೋ ಅದನ್ನೇ ಪಾಲಿಸುತ್ತೇನೆ. ಏನು ಹೇಳಬೇಕೋ ಅವರನ್ನೇ ಕೇಳಿ” ಎಂದು ಹೇಳಿದರು.

ದೆಹಲಿಗೆ ತೆರಳುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಕರೆಯದೇ ಇದ್ದರೆ ನಾನು ಯಾಕೆ ಹೋಗಲಿ? ಬಜೆಟ್ ಸಭೆಗಳಿವೆ. ಹೈಕಮಾಂಡ್ ಕರೆದರೆ ಹೋಗುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಬಜೆಟ್ ಪೂರ್ವ ಸಿದ್ಧತಾ ಸಭೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಗೈರಾಗಿರುವ ಬಗ್ಗೆ ಕೇಳಿದಾಗ, “ಹೌದು, ಅವರು ಅನುಮತಿ ಪಡೆದು ಲೆಟರ್ ಬರೆದಿದ್ದಾರೆ. ಅಸ್ಸಾಂ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಭೆ ನಡೆಯಲಿದೆ” ಎಂದು ತಿಳಿಸಿದರು.

ಪ್ರತಾಪ್ ಸಿಂಹರಿಗೆ ಬಿಜೆಪಿಯೇ ಟಿಕೆಟ್ ನೀಡಲಿಲ್ಲ – ಸಿಎಂ

ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, “ಬಿಜೆಪಿ ಪಕ್ಷವೇ ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡಲಿಲ್ಲ” ಎಂದು ಹೇಳಿದರು.

ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ

ಸಿಎಂ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಪಶ್ಚಿಮ ಭಾಗದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, “ಕೆಂಗಲ್ ಹನುಮಂತಯ್ಯ ಅವರು ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ಹಾಗೂ ಧೀಮಂತ ರಾಜಕಾರಣಿ. ಭವ್ಯವಾದ ವಿಧಾನಸೌಧ ನಿರ್ಮಾಣದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹಾನ್ ನಾಯಕರು. ಅವರು ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿಯಾಗಿದ್ದರು” ಎಂದು ಸ್ಮರಿಸಿದರು.

ಡಿಕೆಶಿ ಹೇಳಿಕೆ

ಇನ್ನೊಂದೆಡೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತೇನೆ. ಅಲ್ಲಿ ನನ್ನ ಕಷ್ಟ, ದುಃಖ, ಸಂತೋಷ, ಬಯಕೆ ಎಲ್ಲವನ್ನೂ ಹೇಳುತ್ತೇನೆ” ಎಂದು ಸೂಚ್ಯವಾಗಿ ತಿಳಿಸಿದರು.

Continue Reading

Blog

S T SOMASHEKHAR : ಜಿಬಿಎ ಚುನಾವಣೆಗೆ ಸ್ಪಷ್ಟ ನಿಯಮ: ಸ್ಥಳೀಯರಿಗೆ ಮಾತ್ರ ಟಿಕೆಟ್

ಬೆಂಗಳೂರು:

ಮುಂಬರುವ ಜಿಬಿಎ (GBA) ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಸ್ಥಳೀಯ ನಾಯಕರಿಗೆ ಮಾತ್ರ ಆದ್ಯತೆ ನೀಡಲಾಗುವುದು. ಹೊರಗಿನಿಂದ ಬರುವ ಯಾರನ್ನೂ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಸ್ಪಷ್ಟವಾಗಿ ಹೇಳಿದ್ದಾರೆ.

ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ 15ರಂದು ನಡೆಯಲಿರುವ ಭವ್ಯ ಶಿವರಾತ್ರಿ ಪೂಜೆ ಹಾಗೂ ಕಾರ್ಯಕ್ರಮದ ಸಿದ್ಧತೆಗಳ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು,
“ನನ್ನ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದ ನಾಯಕರು ಮತ್ತು ಕಾರ್ಯಕರ್ತರು ಇದ್ದಾರೆ. ಅಂತಹವರನ್ನು ಬಿಟ್ಟು ಸಚಿವರ ಮಗ ಅಥವಾ ಶಾಸಕರ ಮಗ ಎಂಬ ಕಾರಣಕ್ಕೆ ಹೊರಗಿನವರಿಗೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದರು.

ಕ್ಷೇತ್ರದಲ್ಲಿ ಜನರಿಗಾಗಿ ಕೆಲಸ ಮಾಡುವವರು, ಜನರಲ್ಲಿ ಉತ್ತಮ ಪ್ರಭಾವ ಹೊಂದಿರುವವರು ಹಾಗೂ ಸೇವಾ ಮನೋಭಾವನೆ ಹೊಂದಿರುವ ನಾಯಕರಿಗೆ ಮಾತ್ರ ಟಿಕೆಟ್ ವಿಚಾರದಲ್ಲಿ ಪರಿಗಣನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
“ಕೆಲವರು ತಮ್ಮ ಪ್ರಭಾವ ಬಳಸಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ನನಗೆ ಮುಖ್ಯವಾದುದು ಜನಸೇವೆ ಮಾಡಿದವರ ಗುಣಮಟ್ಟ” ಎಂದು ಹೇಳಿದರು.

ಟಿಕೆಟ್ ಸಿಗದಿದ್ದರೆ ಬೇರೆ ರಾಜಕೀಯ ಆಯ್ಕೆಗಳನ್ನು ಹುಡುಕಿಕೊಳ್ಳಬಹುದು ಎಂದು ಹೇಳಿದ ಅವರು,
“ನನ್ನ ನಾಯಕರಿಗೆ ಬಿಜೆಪಿ ಅಥವಾ ಬೇರೆ ಪಕ್ಷಗಳಿಂದ ಟಿಕೆಟ್ ಸಿಕ್ಕರೂ ನಾನು ಅದನ್ನು ಸ್ವಾಗತಿಸುತ್ತೇನೆ. ಎಲ್ಲರೂ ರಾಜಕೀಯವಾಗಿ ಬೆಳೆಯಬೇಕು” ಎಂದು ಹೇಳಿದರು.

ಇದೇ ವೇಳೆ ಆರ್‌ಎಸ್‌ಎಸ್‌ ನಡೆಸುತ್ತಿರುವ ಹಿಂದು ಸಮಾಜೋತ್ಸವ ಕುರಿತು ಸ್ಪಷ್ಟನೆ ನೀಡಿದ ಸೋಮಶೇಖರ್,
“ಇದು ರಾಜಕೀಯ ಕಾರ್ಯಕ್ರಮವಲ್ಲ. ಇದು ದೇಶಾದ್ಯಂತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ. ಎಲ್ಲ ಪಕ್ಷಗಳ ನಾಯಕರು ಮತ್ತು ಸಾರ್ವಜನಿಕರು ಇದರಲ್ಲಿ ಭಾಗವಹಿಸಬಹುದು” ಎಂದು ಹೇಳಿದರು. ಕೆಲವರು ಇದನ್ನು ರಾಜಕೀಯ ಕಾರ್ಯಕ್ರಮ ಎಂದು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಅವರು ಹೇಳಿದರು.

ಶಿವರಾತ್ರಿ ದಿನದ ಪೂಜೆ ಹಾಗೂ ಕಾರ್ಯಕ್ರಮವನ್ನು ತಮ್ಮ ನೇತೃತ್ವದಲ್ಲಿ ಭವ್ಯವಾಗಿ ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

Continue Reading

Blog

ಅಬಕಾರಿ ಇಲಾಖೆಯಲ್ಲಿ ಭಾರೀ ಅಕ್ರಮ? ಶಾಲೆ ಎದುರು ಮದ್ಯದ ಲೈಸೆನ್ಸ್ ಆರೋಪ

ಬೆಂಗಳೂರು, ಫೆಬ್ರವರಿ 5

ಕರ್ನಾಟಕ ಅಬಕಾರಿ ಇಲಾಖೆಯ ಬಿಯುಡಿ-3 ವಿಭಾಗದ ಡೆಪ್ಯುಟಿ ಕಮಿಷನರ್ ಕೆ.ಎಸ್. ಮುರುಳಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ನಿಯಮಗಳನ್ನು ಉಲ್ಲಂಘಿಸಿ, ಮನಸೋ ಇಚ್ಛೆ ಸಿಎಲ್-7 ಮದ್ಯ ಪರವಾನಗಿಗಳನ್ನು ನೀಡಿದ್ದಾರೆ ಎಂಬ ಆರೋಪದಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಸಿಎಲ್-7 ಪರವಾನಗಿ ಸಾಮಾನ್ಯವಾಗಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ಗಳಿಗೆ ನೀಡಲಾಗುತ್ತದೆ. ಆದರೆ, ನಿಯಮದ ಪ್ರಕಾರ ಶಾಲಾ ಆವರಣ ಅಥವಾ ಶಾಲೆ ಎದುರು ಇಂತಹ ಪರವಾನಗಿ ನೀಡಲು ಅವಕಾಶವಿಲ್ಲ. ಇದನ್ನೆಲ್ಲಾ ಮೀರಿ, ಶಾಲೆ ಎದುರು ಶಾಪ್ ತೆರೆಯಲು ಸಿಎಲ್-7 ಲೈಸೆನ್ಸ್ ನೀಡಲಾಗಿದೆ ಎನ್ನುವ ಆರೋಪ ಮುರುಳಿ ಮೇಲೆ ಕೇಳಿಬಂದಿದೆ.

ಕಳೆದ 24 ತಿಂಗಳಲ್ಲಿ ಬರೋಬ್ಬರಿ 60 ಸಿಎಲ್-7 ಪರವಾನಗಿಗಳನ್ನು ಮುರುಳಿ ನೀಡಿದ್ದಾರೆ ಎನ್ನಲಾಗಿದ್ದು, ಇದು ರಾಜ್ಯದಲ್ಲೇ ಅತಿಹೆಚ್ಚು ಎಂದು ದೂರುದಾರರು ಆರೋಪಿಸಿದ್ದಾರೆ. 30×40 ಅಡಿಯಂತಹ ಸಣ್ಣ ಜಾಗಕ್ಕೂ ಲೈಸೆನ್ಸ್ ನೀಡಲಾಗಿದೆ ಎಂಬುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಅಚ್ಚರಿಯೆಂದರೆ, ಈ 60 ಪರವಾನಗಿಗಳ ಪೈಕಿ ಮೂರು ಲೈಸೆನ್ಸ್‌ಗಳಿಗೆ ವಿರೋಧ ದೂರುಗಳಿದ್ದರೂ ಅವುಗಳನ್ನು ಪರಿಗಣಿಸದೇ ಅನುಮತಿ ನೀಡಲಾಗಿದೆ. ಈ ಹಿಂದೆ ಇದೇ ಮುರುಳಿ ಇಂತಹ ಅರ್ಜಿಗಳನ್ನು ತಿರಸ್ಕರಿಸಿದ್ದರೆಂದು ತಿಳಿದುಬಂದಿದೆ.

ಇನ್ನೂ, ಲೈಸೆನ್ಸ್ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಮಾಲೀಕರು ಸರಿಯಾಗಿ ಸಲ್ಲಿಸಿಲ್ಲ ಎಂಬ ಆರೋಪವೂ ಇದೆ. ಆದರೂ, ಮುರುಳಿ ಪರವಾನಗಿ ನೀಡಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ.

ಗ್ರೌಂಡ್ ರಿಪೋರ್ಟ್‌ನಲ್ಲಿ ಅಕ್ರಮ ಬಹಿರಂಗ

ಡೆಪ್ಯುಟಿ ಕಮಿಷನರ್ ವಿರುದ್ಧದ ಆರೋಪವನ್ನು ಟಿವಿ9 ಗ್ರೌಂಡ್ ರಿಪೋರ್ಟ್ ಬಯಲಿಗೆ ತಂದಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ದೊಂಬರಹಳ್ಳಿಯ ಸರ್ಕಾರಿ ಶಾಲೆಯ 40–50 ಮೀಟರ್ ದೂರದಲ್ಲಿ ಸಿಎಲ್-7 ಲೈಸೆನ್ಸ್ ನೀಡಲಾಗಿದೆ ಎಂಬುದು ದೃಢಪಟ್ಟಿದೆ.

ನಿಯಮಾನುಸಾರ ಶಾಲೆ-ಕಾಲೇಜುಗಳ 100 ಮೀಟರ್ ಒಳಗೆ ಮದ್ಯ ಮಾರಾಟ ನಿಷೇಧ ಇದ್ದರೂ, ಇದನ್ನು ಲೆಕ್ಕಿಸದೇ ಲೈಸೆನ್ಸ್ ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ 70ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇನ್ನೊಂದು ಆತಂಕಕಾರಿ ಅಂಶವೆಂದರೆ, ಮುರಳಿ ಶೀಘ್ರದಲ್ಲೇ ಬೆಂಗಳೂರಿನಿಂದ ತುಮಕೂರಿಗೆ ವರ್ಗಾವಣೆಯಾಗುವ ಸಾಧ್ಯತೆ ಇದ್ದು, ಅದಕ್ಕೂ ಮುನ್ನ ಹೆಚ್ಚಿನ ಲೈಸೆನ್ಸ್ ನೀಡಲು ಪ್ಲ್ಯಾನ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಅಬಕಾರಿ ಇಲಾಖೆ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ.

ಒಟ್ಟಿನಲ್ಲಿ, ಹಣಕ್ಕಾಗಿ ನಿಯಮಗಳನ್ನು ಪಕ್ಕಕ್ಕಿಟ್ಟು ಲೈಸೆನ್ಸ್ ಹಂಚಿಕೆ ನಡೆದಿದೆಯೇ? ಎಂಬ ಅನುಮಾನಗಳು ಗಟ್ಟಿಯಾಗಿದ್ದು, ಈ ಪ್ರಕರಣದ ಮೇಲೆ ಲೋಕಾಯುಕ್ತ ತನಿಖೆ ಅನಿವಾರ್ಯ ಎಂಬ ಒತ್ತಾಯ ಹೆಚ್ಚಾಗಿದೆ.

Continue Reading

Trending