Connect with us

ಬೆಂಗಳೂರು

ಜಯನಗರ ಹೊರತು ಪಡಿಸಿ ಬೆಂಗಳೂರು ರಸ್ತೆಗಳ ಅಭಿವೃದ್ಧಿಗೆ 10 ಕೋಟಿ: ವಿವಾದ ಹುಟ್ಟು ಹಾಕಿದ DCM ಆದೇಶ!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಇತ್ತೀಚಿನ ಆದೇಶವು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಗೆ ಚರ್ಚೆ ಮಾಡಲು ಅವಕಾಶ ಒದಗಿಸಿಕೊಟ್ಟಿದೆ. ಬಿಜೆಪಿ ಶಾಸಕ ಪ್ರತಿನಿಧಿಸುವ ಜಯನಗರ ವಿಧಾನಸಭಾ ಕ್ಷೇತ್ರವನ್ನು ಈ ಅನುದಾನ ಹಂಚಿಕೆಯಿಂದ ಹೊರಗಿಟ್ಟಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಸರ್ಕಾರದ ಕ್ರಮಗಳು ಸೇಡಿನ ರಾಜಕಾರಣಕ್ಕೆ ಸಮಾನವಾಗಿದೆ, ಕಾಂಗ್ರೆಸ್‌ಗೆ ಮತ ಹಾಕದ ನಾಗರಿಕರನ್ನು ಸರ್ಕಾರ ಶಿಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. “ಡಿಸಿಎಂ ಬ್ರಾಂಡ್ ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಅವರ ಬ್ರಾಂಡ್ ಬೆಂಗಳೂರು ಕನಸು ಜಯನಗರವನ್ನು ಹೊರತುಪಡಿಸುತ್ತದೆಯೇ? ಎಂದು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಪ್ರಶ್ನಿಸಿದ್ದಾರೆ. ತಮ್ಮ ಕ್ಷೇತ್ರಕ್ಕೆ ಉದ್ಯಾನವನಗಳು, ರಸ್ತೆಗಳು ಮತ್ತು ಚರಂಡಿಗಳನ್ನು ನಿರ್ವಹಿಸಲು ಹಣದ ಅಗತ್ಯವಿದೆ ಎಂದು ಅವರು ಹೇಳಿದರು. ಇದು ಕಾಂಗ್ರೆಸ್ ಸರ್ಕಾರದ ಸೇಡಿನ ರಾಜಕಾರಣವನ್ನು ಎತ್ತಿ ತೋರಿಸುತ್ತದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ರೂ. ಹಾಗೂ ಬೆಂಗಳೂರು ನಗರ ಜಿಲ್ಲೆಯ ಭಾಗವಾಗಿರುವ ಆನೇಕಲ್‌ಗೆ 5 ಕೋಟಿ ರೂ. ಸೇರಿದಂತೆ ಒಟ್ಟು 265 ಕೋಟಿ ರೂ ಅನುದಾನ ಮಂಜೂರು ಮಾಡಲು ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಆದೇಶಕ್ಕೆ ಸ್ಪಷ್ಟನೆ ನೀಡಿದ್ದಾರೆ, ಕೆಲವು ಕಾರಣಗಳಿಂದ ಈ ಗೊಂದಲ ಉಂಟಾಗಿದೆ, ತಾರತಮ್ಯವಿಲ್ಲದೆ ಹಣ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಯಲಹಂಕ ವಿಧಾನಸಭೆಯನ್ನು ಎರಡು ಬಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ, ಇದು ಸಮಸ್ಯೆಗೆ ಕಾರಣ ಎಂದು ನಾನು ನಂಬುತ್ತೇನೆ. ಡಿಸಿಎಂ ಬೆಂಗಳೂರಿನ ಅಭಿವೃದ್ಧಿ ಗುರಿ ಹೊಂದಿದ್ದು, ತಾರತಮ್ಯ ಮಾಡುವುದಿಲ್ಲ. ದೋಷಗಳಿಲ್ಲದ ಪರಿಷ್ಕೃತ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದಿದ್ದಾರೆ. ಬೆಂಗಳೂರಿನ ರಸ್ತೆಗಳ ಕಳಪೆ ಸ್ಥಿತಿಯಿಂದಾಗಿ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ, ಕಳೆದ ವಾರದ ದಾಖಲೆಯ ಮಳೆಯ ನಂತರ ರಸ್ತೆಗಳು ಹದಗೆಟ್ಟಿದೆ, ಇದು ಸಾಮಾನ್ಯ ಜೀವನದ ಮೇಲೆ ತೀವ್ರ ಪರಿಣಾಮ ಬೀರಿತ್ತು. ವಿಶೇಷವಾಗಿ ಉತ್ತರ ಬೆಂಗಳೂರು ಮತ್ತು ಮಹದೇವಪುರ, ಬೊಮ್ಮನಹಳ್ಳಿ ಮತ್ತು ಸರ್ಜಾಪುರ ರಸ್ತೆಯ ಐಟಿ ಬೆಲ್ಟ್‌ಗಳಲ್ಲಿ ಭಾರೀ ಮಳೆಯಿಂದಾಗಿ ಸಾವಿರಾರು ಗುಂಡಿಗಳು ಮತ್ತೆ ತಲೆ ಎತ್ತಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಬೆಂಗಳೂರು

ನಗರದ ಕಸ ಸಮಸ್ಯೆ ದೂರಾಗಿಸಲು BBMP ಕ್ರಮ: ದೂರು ನೀಡಲು ಪ್ರತ್ಯೇಕ ಕೇಂದ್ರ ಸ್ಥಾಪನೆ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಸದಾ ಶ್ರಮವಹಿಸಿತ್ತಾರೆ. ಆದರೂ, ನಗರದಲ್ಲಿನ ಕಸದ ಸಮಸ್ಯೆ ಮಾತ್ರ ದೂರಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರನ್ನು ಹಿಡಿದುಕೊಡಲು ಬಿಬಿಎಂಪಿ ಕ್ರಮ ಕೈಗೊಂಡಿದ್ದು, ವಾಟ್ಸಪ್ ಸಂಖ್ಯೆಯೊಂದನ್ನು ಜನತೆಗೆ ನೀಡಿದೆ.

ಕಸ ಎಸೆಯುವವರ ಫೋಟೋ ತೆಗೆದು 9448197197 ಈ ನಂಬರ್‌ಗೆ ಕಳಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಾಲಿಕೆ ಹೇಳಿದೆ,

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಗಳ ಮೂಲಕ ಪ್ರತಿನಿತ್ಯ ಮನೆ-ಮನೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೂ ಕೂಡಾ ನಾಗರಿಕರು ಆಟೋ ಟಿಪ್ಪರ್ ಗಳಿಗೆ ತ್ಯಾಜ್ಯವನ್ನು ನೀಡದೇ ರಾತ್ರಿ ವೇಳೆ ಅಥವಾ ಕೆಲಸಕ್ಕೆ ಹೋಗುವ ಸಮಯದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಸ್ಥಳ ಹಾಗೂ ರಾಜಕಾಲುವೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿ ಹೋಗುತ್ತಾರೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ.

ತ್ಯಾಜ್ಯ ಬಿಸಾಡುವುದರ ಜೊತೆಗೆ ಕಟ್ಟಡಗಳ ಭಗ್ನಾವಶೇಷಗಳನ್ನು ಕೂಡಾ ರಸ್ತೆ ಬದಿ, ಖಾಲಿ ಜಾಗದಲ್ಲಿ ಸುರಿದು ಹೋಗುತ್ತಾರೆ. ಅದಲ್ಲದೆ ಅನುಪಯುಕ್ತ ವಸ್ತುಗಳನ್ನು ಕೂಡ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಆದ್ದರಿಂದ ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ಶಾಶ್ವತವಾಗಿ ತಪ್ಪಿಸಲು ಕ್ರಮ ಕೈಗೊಂಡಿದೆ.

ನಗರದಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಬಿಬಿಎಂಪಿ, ಇದಕ್ಕಾಗಿ ದೂರು ಕೇಂದ್ರ ಸ್ಥಾಪಿಸಿ ಪ್ರತ್ಯೇಕವಾಗಿ ವಾಟ್ಸಪ್ ಸಂಖ್ಯೆಯನ್ನು ನೀಡಿದೆ. ಜನರು ಸದರಿ ವಾಟ್ಸಪ್ ಸಂಖ್ಯೆಗೆ ಸಂದೇಶದ ಮೂಲಕ ದೂರು ದಾಖಲಿಸಬಹುದಾಗಿದೆ.

ಜನರಪು 9448197197 ಈ ಸಂಖ್ಯೆಗೆ ಛಾಯಾಚಿತ್ರದೊಂದಿಗೆ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ತ್ಯಾಜ್ಯ/ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲಿದ್ದಾರೆ.

Continue Reading

ಬೆಂಗಳೂರು

ಜಾತಿ ಗಣತಿ ಮರು ಸಮೀಕ್ಷೆ: ಇಂದು ವಿಶೇಷ ಸಚಿವ ಸಂಪುಟ ಸಭೆ

ಬೆಂಗಳೂರು: ಕರ್ನಾಟಕದಲ್ಲಿ ಜಾತಿ ಗಣತಿಯನ್ನು ಮತ್ತೊಮ್ಮೆ ಸಮೀಕ್ಷೆಗೆ ಒಳಪಡಿಸುವ ಕುರಿತಾದ ಚರ್ಚೆಗಳು ತೀವ್ರಗೊಂಡಿವೆ. ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಜಾತಿ ಗಣತಿಗೆ ತಡೆಯೊಡ್ಡಿರುವ ಹಿನ್ನೆಲೆಯಲ್ಲಿ, ಗುರುವಾರ ನಡೆಯಲಿರುವ ವಿಶೇಷ ಸಂಪುಟ ಸಭೆಯ ಮೇಲೆ ಎಲ್ಲರ ಕಣ್ಣಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಭೆಯಲ್ಲಿ ವರಿಷ್ಠರ ಸೂಚನೆಯ ಆಧಾರದಲ್ಲಿ ಮರು ಸಮೀಕ್ಷೆಗೆ ಒಪ್ಪಿಗೆ ನೀಡುತ್ತಾರೆಯೇ ಇಲ್ಲವೇ ತಡೆಗೆ ಕಾರಣವಾದ ವಿಷಯಗಳ ಬಗ್ಗೆ ಸಂಪುಟ ಸದಸ್ಯರಿಗೆ ವಿವರಣೆ ನೀಡುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ಜಾತಿ ಗಣತಿಯ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಈ ವಿಶೇಷ ಸಂಪುಟ ಸಭೆಯನ್ನು ಆಯೋಜಿಸಿದ್ದರು. ಆದರೆ, ಕಾಂಗ್ರೆಸ್ ವರಿಷ್ಠರ ತಡೆಯಿಂದಾಗಿ ಈ ಸಭೆಯ ಉದ್ದೇಶವೇ ಬದಲಾಗಿರುವ ಸಾಧ್ಯತೆ ಇದೆ. ಇಂದಿನ ಸಭೆಯಲ್ಲಿ ಕಾಂತರಾಜು ಆಯೋಗದ ವರದಿಯನ್ನು ಒಪ್ಪಿಕೊಂಡು, ಹೊಸ ಸಮೀಕ್ಷೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ಮರು ಸಮೀಕ್ಷೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಲು ಗಡುವು ವಿಧಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಡಿ.ಕೆ. ಶಿವಕುಮಾರ್ ಹೊರತುಪಡಿಸಿ, ಸಂಪುಟದ ಉಳಿದ ಸದಸ್ಯರಿಗೆ ವರಿಷ್ಠರ ನಿರ್ದೇಶನದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರು ಈ ಬಗ್ಗೆ ಸಂಪುಟ ಸಭೆಯಲ್ಲಿ ವಿವರಣೆ ನೀಡುವ ಸಾಧ್ಯತೆ ಇದೆ. “ರಾಜ್ಯದಲ್ಲಿ ಮತ್ತೊಮ್ಮೆ ಜಾತಿ ಗಣತಿ ಮರು ಸಮೀಕ್ಷೆ ನಡೆಸುವುದು ನನ್ನ ವೈಯಕ್ತಿಕ ನಿರ್ಧಾರವಲ್ಲ. ಇದು ವರಿಷ್ಠರ ತೀರ್ಮಾನ. ಕಾಂತರಾಜು ಆಯೋಗದ ವರದಿಯನ್ನು ನಾವು ಒಪ್ಪಿಕೊಂಡಿದ್ದೇವೆ. ಹೀಗಾಗಿ, ಕಡಿಮೆ ಅವಧಿಯಲ್ಲಿ ಮತ್ತೊಮ್ಮೆ ಗಣತಿ ನಡೆಸಲು ವರಿಷ್ಠರು ಸೂಚಿಸಿದ್ದಾರೆ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು, “ವಾಸ್ತವ ನೆಲೆಗಟ್ಟಿನಲ್ಲಿ ವೈಜ್ಞಾನಿಕವಾಗಿ ಜಾತಿ ಗಣತಿಯನ್ನು ಮರು ಸಮೀಕ್ಷೆ ನಡೆಸಬೇಕೆಂದು ಕರ್ನಾಟಕ ಸರಕಾರಕ್ಕೆ ಸೂಚಿಸಲಾಗಿದೆ. ಹಿಂದಿನ ಜಾತಿ ಸಮೀಕ್ಷೆ 10 ವರ್ಷಗಳ ಹಿಂದೆ ನಡೆದಿತ್ತು. ಈಗ ಸಾಕಷ್ಟು ಬದಲಾವಣೆಗಳಾಗಿವೆ. ಹಲವು ಸಮುದಾಯಗಳು ಒಬಿಸಿಯಲ್ಲಿ ಸೇರಿಕೊಂಡಿವೆ. ಈ ಎಲ್ಲವನ್ನೂ ಜಾತಿ ಸಮೀಕ್ಷೆ ಒಳಗೊಳ್ಳಬೇಕು,” ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸರಕಾರದ ಈ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ಕಾಂಗ್ರೆಸ್ ಸರಕಾರ ತಾನೇ ನಡೆಸಿದ ಜಾತಿ ಸಮೀಕ್ಷೆಯ ವರದಿಯನ್ನು ಕಸದ ಬುಟ್ಟಿಗೆ ಎಸೆದಿದೆ. ರಾಜ್ಯದ ಜನತೆಯ ತೆರಿಗೆ ಹಣವಾದ 165 ಕೋಟಿ ರೂಪಾಯಿಗಳನ್ನು ವ್ಯರ್ಥಗೊಳಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರು ಜನತೆಯ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು,” ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. “ಕೇವಲ ದತ್ತಾಂಶದ ಗೊಂದಲವೇ ಇದಕ್ಕೆ ಕಾರಣವಿರಲಾರದು. ದತ್ತಾಂಶದ ಬಗ್ಗೆ ಅನುಮಾನವಿದ್ದರೆ, ಕಾಂಗ್ರೆಸ್ ಇಷ್ಟು ವರ್ಷ ಸುಮ್ಮನಿರುವ ಅಗತ್ಯವಿರಲಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಜನತೆಗೆ ಸ್ಪಷ್ಟನೆ ನೀಡಬೇಕು,” ಎಂದು ಬಿಜೆಪಿ ಒತ್ತಾಯಿಸಿದೆ.

Continue Reading

ಅಪರಾಧ

ಮಹಿಳಾ ಪೇದೆಗೆ ಬೂಟುಗಾಲಿನಿಂದ ಒದ್ದ ಹೆಡ್ ಕಾನ್ಸ್‍ಟೇಬಲ್!

ಬೆಂಗಳೂರು: ಪೊಲೀಸ್ ಠಾಣೆಯೊಂದರಲ್ಲೇ ಸಿಬ್ಬಂದಿಗಳು ಹೊಡೆದಾಡಿಕೊಂಡಿರುವ ಘಟನೆ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ, ಠಾಣೆಯ ಹೆಡ್ ಕಾನ್ಸ್‍ಟೇಬಲ್ ಮಹಿಳಾ ಪೇದೆಗೆ ಬೂಟುಗಾಲಿನಿಂದ ಒದ್ದ ಆರೋಪ ಹೊರಿಸಲಾಗಿದ್ದು ಈ ಬಗ್ಗೆ ದೂರು ದಾಖಲಾಗಿದೆ,
ಠಾಣೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳಾ ಪೇದೆಗೆ ಅಲ್ಲೇ ಹೆಡ್ ಕಾನ್ಸ್‍ಟೇಬಲ್ ಆಗಿರುವ ಬಿಜಿ ಗೋವಿಂದರಾಜು ಎಂಬುವವರು ಬೂಟುಗಾಲಿನಲ್ಲಿ ಒದ್ದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ, ಜೂನ್ 10 ರಂದು ಈ ಘಟನೆ ನಡೆದಿದೆ, ರಾತ್ರಿ ಕಂಪ್ಯೂಟರ್ ವಿಭಾಗದಲ್ಲಿ ಮಹಿಳಾ ಪೇದೆ ರೇಣುಕಾ ಕರ್ತವ್ಯ ನಿರ್ವಹಿಸುತ್ತಿದ್ದರು,
ಈ ವೇಳೆ ರೇಣುಕಾ ಮನೆ ಬಿಟ್ಟು ಹೋಗಿ ಠಾಣೆ ಸೇರಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಊಟ ಮಾಡಿಸುತ್ತಿದ್ದರು, ಆಗ ಹೆಡ್ ಕಾನ್ಸ್‍ಟೇಬಲ್ ಗೋವಿಂದರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಮಾತ್ರವಲ್ಲದೇ ಮೂರ್ನಾಲ್ಕು ಬಾರಿ ಬೂಟುಗಾಲಿನಿಂದ ಒದ್ದಿದ್ದಾರೆ ಎಂದು ಆರೋಪಸಲಾಗಿದೆ,
ಕಾನ್ಸ್‍ಟೇಬಲ್ ರೇಣುಕಾ ದೂರು ಆಧರಿಸಿ ಹೆಡ್ ಕಾನ್ಸಟೇಬಲ್ ಗೋವಿಂದರಾಜು ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

Continue Reading

Trending