ಬೆಂಗಳೂರು
ಮುಂದಿನ ವರ್ಷವೂ ಬಜೆಟ್ ಮಂಡಿಸುವುದು ನಾನೇ: ಕುತೂಹಲ ಮೂಡಿಸಿದ ಸಿಎಂ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು: ಸಿಎಂ ಬದಲಾವಣೆ ಕುರಿತು ರಾಜ್ಯ್ ಕಾಂಗ್ರೆಸ್ ಚರ್ಚೆ ನಡೆಯುತ್ತಿರುವ ನಡುವಲ್ಲೇ ಮುಂದಿನ ವರ್ಷವೂ ಬಜೆಟ್ ಮಂಡಿಸುವುದು ನಾನೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದು, ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲ ಮೂಡಿಸಿದೆ.
ಕೆಳಮನೆಯಲ್ಲಿ ಇತ್ತೀಚೆಗೆ 5 ವರ್ಷಕ್ಕೂ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು, ಇದೀಗ ಪರಿಷತ್ತಿನಲ್ಲೂ ಮುಂದಿನ ವರ್ಷ ಬಜೆಟ್ ಮಂಜಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ರಾಜ್ಯದ ಸಾಲದ ಕುರಿತು ಆರೋಪ-ಪ್ರತ್ಯಾರೋಪ ನಡೆಯಿತು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, 4.09 ಲಕ್ಷ ಕೋಟಿ ಗಾತ್ರದ ಬಜೆಟ್ನಲ್ಲಿ 3.11 ಲಕ್ಷ ಕೋಟಿ ರೂ. ರಾಜಸ್ವ ವೆಚ್ಚವನ್ನು ನಿಗದಿ ಮಾಡಲಾಗಿದೆ. ಇದು ಶೇ.76 ರಷ್ಟಿದ್ದರೆ ಬಂಡವಾಳ ವೆಚ್ಚಕ್ಕೆ ಕೇವಲ ಶೇ.17.4 ರಷ್ಟು ಮೀಸಲಿಡಲಾಗಿದೆ. 71.36 ಸಾವಿರ ಕೋಟಿ ಬಂಡವಾಳ ವೆಚ್ಚದಲ್ಲಿ ಯಾವ ಆಸ್ತಿ ಸೃಜನೆ ಮಾಡಲು ಸಾಧ್ಯ?, ಸಾಲ ಮರುಪಾವತಿಗಾಗಿ 26,470 ಕೋಟಿ ರೂ. ಮೀಸಲಿಡಲಾಗಿದೆ. 19 ಸಾವಿರ ಕೋಟಿ ರಾಜಸ್ವ ಕೊರತೆಯಿದೆ. ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು.
2021-22ನೇ ಸಾಲಿನಲ್ಲಿ ಕೋವಿಡ್ ನಂತರ ಸಂಕಷ್ಟ ಸಂದರ್ಭದಲ್ಲೂ ರಾಜ್ಯ ಸರ್ಕಾರ 80.641 ಕೋಟಿ ರೂ. ಸಾಲ ಮಾಡಿತ್ತು. 2022-23ನೇ ಸಾಲಿನಲ್ಲಿ 44,549 ಕೋಟಿ ರೂ., 2023-24ನೇ ಸಾಲಿನಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ 90,280 ಕೋಟಿ, ಕಳೆದ ಬಜೆಟ್ನಲ್ಲಿ 1.07 ಕೋಟಿ, ಮುಂದಿ ವರ್ಷಕ್ಕೆ 1.16 ಲಕ್ಷ ಕೋಟಿ ಸಾಲ ಮಾಡಲಾಗುತ್ತಿದೆ. ಸಾಲ ಪಡೆದು ಆಸ್ತಿ ಸೃಷ್ಟಿಸಬೇಕೆಂದು 2017ರಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಬಳಿಕ ಸಿದ್ದರಾಮಯ್ಯನವರೂ ಡಲ್ ಆಗಿದ್ದಾರೆ. ಅವರ ಬಜೆಟ್ ಕೂಡ ಡಲ್ ಆಗಿದೆ. ಈಗ ಸಾಲ ಮಾಡಿ ಅವರ ರಾಜಕೀಯ ಪ್ರಣಾಳಿಕೆಯ ಈಡೇರಿಕೆಗೆ ಖರ್ಚು ಮಾಡುತ್ತಿದ್ದಾರೆ. ಎಲ್ಲಾ ಉಚಿತ ಕೊಡಲು ಸಾಲದ ಹಣ ದುರ್ಬಳಕೆಯಾಗುತ್ತಿದ್ದು, ಇದು ಮೋಸ ಮತ್ತು ಅನ್ಯಾಯ ಎಂದು ದೂರಿದರು.
ಅಭಿವೃದ್ಧಿ ಎಂಬುದು ಶೂನ್ಯವಾಗಿದೆ ಎಂದು ಅಶೋಕ್ ಹೇಳುತ್ತಿದ್ದಂತೆಯೇ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಪ್ರತಿ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ದೊರೆಯುತ್ತಿದೆ. ಇದು ಅಭಿವೃದ್ಧಿಯಲ್ಲವೇ ಎಂದು ಪ್ರಶ್ನಿಸಿದರು.
ಸಾಲದ ಮೊತ್ತವನ್ನೂ ಕಳೆದ ವರ್ಷ 1.81 ಲಕ್ಷ ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಷ್ಟು ಸಂಗ್ರಹವಾಗಿಲ್ಲ. ಮುಂದಿನ ವರ್ಷದಲ್ಲಿ 2.8 ಲಕ್ಷ ರೂ.ಕೋಟಿ ರೂ. ಆದಾಯದ ಗುರಿ ನಿಗದಿಪಡಿಸಲಾಗಿದೆ. ಅಭಿವೃದ್ಧಿ ಗುರಿಗಿಂತ ಅಬಕಾರಿ ಗುರಿ ಹೆಚ್ಚಾಗಿದೆ. ಜನರನ್ನು ಮದ್ಯಪಾನ ಪ್ರಿಯರನ್ನಾಗಿ ಮಾಡಲಾಗುತ್ತಿದೆ. 16ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ತುಂಬಾ ದುರ್ಬಲರಾಗಿದ್ದಾರೆ. ಮರ ಮುಪ್ಪಾದರೂ ಹುಳಿ ಮುಪ್ಪೇ? ಎಂಬ ಗಾದೆ ಮಾತು ಸಿದ್ದರಾಮಯ್ಯನವರಿಗೆ ಅನ್ವಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ಎಷ್ಟು ಸಾಲ ಮಾಡಿದೆ ಎಂಬುದನ್ನೂ ಹೇಳಬೇಕು. ಸಾಲದ ಹಣವನ್ನು ಆಸ್ತಿ ಸೃಜನೆಗೆ ಖರ್ಚು ಮಾಡಬೇಕು ಎಂಬ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ನಮ್ಮ ಸರ್ಕಾರ ವಿತ್ತೀಯ ಹೊಣೆಗಾರಿಕೆ ನಿಯಮಾವಳಿ ಅನುಸಾರವೇ ನಡೆದುಕೊಳ್ಳುತ್ತಿದೆ. ರೆವಿನ್ಯೂ ಸರ್ಪ್ಲಸ್ ಒಂದನ್ನು ಹೊರತುಪಡಿಸಿ ಉಳಿದಂತೆ ವಿತ್ತೀಯ ಕೊರತೆ ಮತ್ತು ಸಾಲ ಪ್ರಮಾಣ ಎರಡೂ ನಿಯಮಾವಳಿಗಳ ಅನುಸಾರದಲ್ಲಿಯೇ ಇದೆ ಎಂದು ಹೇಳಿದರು.
ಕಳೆದ ವರ್ಷ 27 ಸಾವಿರ ಕೋಟಿ ವಿತ್ತೀಯ ಕೊರತೆ ಇತ್ತು. ಈ ವರ್ಷ 19,262 ಕೋಟಿ ರೂ.ಗೆ ಇಳಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೂ ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ, ಹಿಂದಿನ ಸರ್ಕಾರದಲ್ಲಿ ಹಳಿ ತಪ್ಪಿರುವ ರಾಜ್ಯದ ಆರ್ಥಿಕ ಶಿಸ್ತನ್ನು ನಮ್ಮ ಸರ್ಕಾರದಲ್ಲಿ ಸರಿಪಡಿಸುತ್ತಿದೆ. ಮುಂದಿನ ವರ್ಷ ರಾಜಸ್ವ ಕೊರತೆ ಆಗುವುದಿಲ್ಲ. ಶೇ.100ರಷ್ಟು ಉಳಿಕೆ ಬಜೆಟ್ ಮಂಡಿಸುತ್ತೇನೆ ಎಂದು ಭರವಸೆ ನೀಡಿದರು.
ಸರ್ಕಾರದ ಕಳೆದೊಂದು ವರ್ಷದ ಪೂರ್ಣ ಸಾಧನೆಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಪ್ರಸ್ತಾಪಿಸಲು ಸಾಧ್ಯವಿಲ್ಲದಿದ್ದರೂ, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ. 2023ರ ಮೇ ಚುನಾವಣೆಯಲ್ಲಿ ರಾಜ್ಯದ ಜನ ನಮ್ಮ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿ ಗೆಲ್ಲಿಸಿದರು. ಅದರ ನಂತರ 2024 ರಲ್ಲಿ ಲೋಕಸಭೆ ಚುನಾವಣೆ ನಡೆದು ಜನರು ಕಳೆದ ಬಾರಿಗಿಂತ ನಮಗೆ ಹೆಚ್ಚಿನ ಸ್ಥಾನಗಳಲ್ಲಿ ಆಶೀರ್ವಾದ ಮಾಡಿದ್ದಾರೆ. ನಂತರ ನಡೆದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ನಡೆದ ಉಪಚುನಾವಣೆಗಳಲ್ಲಿ ದೊಡ್ಡ ಅಂತರದಿಂದ ಗೆಲುವು ಸಾಧಿಸಿದೆವು.
ಕನ್ನಡ ನಾಡಿನ ಜನ ನಮ್ಮ ಸರ್ಕಾರವನ್ನು ಒಪ್ಪಿಕೊಂಡಿದ್ದಾರೆ. ಚುನಾವಣೆ ಪೂರ್ವದಲ್ಲಿ 2022 ರಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಪಕ್ಷದಿಂದ ಘೋಷಿಸಿದ್ದೆವು. 2023ರಲ್ಲಿ ಜೂನ್ 11 ರಲ್ಲಿ ಶಕ್ತಿ ಯೋಜನೆಯನ್ನು, ಜುಲೈ ತಿಂಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿಗಳನ್ನು ಜಾರಿ ಮಾಡಲಾಯಿತು. ಆಗಸ್ಟ್1 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿಯನ್ನು ಜಾರಿ ಮಾಡಲಾಯಿತು. ಡಿಸೆಂಬರ್ ನಲ್ಲಿ ಶಿವಮೊಗ್ಗದಲ್ಲಿ ಯುವನಿಧಿಯನ್ನು ಪ್ರಾರಂಭಿಸಲಾಯಿತು. ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷದ ಒಳಗೆಯೇ ಜಾರಿ ಮಾಡಲಾಯಿತು. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.
ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿಯವರು ಹಾಗೂ ರಾಜ್ಯದ ಬಿಜೆಪಿಯವರು ಸುಳ್ಳು ಸುಳ್ಳೆ ಟೀಕಿಸಿದರು. ಗ್ಯಾರಂಟಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದರು. ಬಿಜೆಪಿಯವರು ತಮ್ಮಚುನಾವಣಾ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿ, ಅದರಲ್ಲಿ ಶೇ10 ರಷ್ಟು ಈಡೇರಿಸಲು ಸಾಧ್ಯವಾಗಲಿಲ್ಲ. ಇದೇ ಸದನದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಭರವಸೆಗಳನ್ನು ಈಡೇರಿಸಲು, ಸಾಲ ಮನ್ನಾ ಮಾಡಲು ನಾವು ನೋಟ್ ಪ್ರಿಂಟ್ ಮೆಷಿನ್ ಇಟ್ಟಿಲ್ಲ ಎಂದಿದ್ದರು.
ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು 30 ರಿಂದ 20% ಗೆ ಇಳಿಸಿದ್ದು ನಿಜವಲ್ಲವೇ? ನಾನು ಮೊದಲ ಬಾರಿ ಮುಖ್ಯಮ೦ತ್ರಿಯಾಗಿದ್ದಾಗ ರೈತರ 50 ಸಾವಿರದವರೆಗಿನ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡಿದ್ದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 72 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಲಿಲ್ಲ.
ಗ್ಯಾರಂಟಿಗಳನ್ನು ವಿರೋಧಿಸಿದ ಬಿಜೆಪಿಯವರು ಮದ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದರು. ನಮ್ಮ ಸರ್ಕಾರ ಜಾರಿಮಾಡಿರುವ ಐದು ಗ್ಯಾರಂಟಿಗಳು ಬಡವರಿಗೆ ಸಾಮಾಜಿಕ, ಆರ್ಥಿಕವಾಗಿ ಶಕ್ತಿತುಂಬಿದ ಯೋಜನೆಗಳು. ಇದನ್ನು ಪ್ರತಿಪಕ್ಷಗಳು ಒಪ್ಪಿಕೊಳ್ಳಲಿ.
ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಜೀವನ ಸುಧಾರಿಸಿರುವ ಉದಾಹರಣೆಗಳಿವೆ. ಗೃಹಲಕ್ಷ್ಮಿಯ ಫಲಾನುಭವಿಯೊಬ್ಬರು ಈ ಯೋಜನೆಯಿ೦ದ 10 ರಿಂದ 20 ಸಾವಿರ ಉಳಿಸಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದರು, ಇನ್ನೊಬ್ಬರು ಸೊಸೆಗೆ ಬಳೆ ಅಂಗಡಿ ಇಟ್ಟುಕೊಟ್ಟಿದ್ದೇನೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು. ಹೀಗೆ ನೂರಾರು ಉದಾಹರಣೆ ಕೊಡಬಲ್ಲೆ.
ನಾವು ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬಂದು ರಾಜ್ಯಕ್ಕೆ ತೆರಿಗೆಯೂ ಹೆಚ್ಚುತ್ತಿದೆ. ಒಂದು ಅಧ್ಯಯನ ವರದಿಯಂತೆ ನಮ್ಮ ದೇಶದ 100 ಕೋಟಿ ದೇಶದ ಜನರಿಗೆ ಕೊಂಡುಕೊಳ್ಳುವ ಆಯ್ಕೆಯಿಲ್ಲ, ಶಕ್ತಿ ಇಲ್ಲ. ಮೊದಲ ವರ್ಗದಲ್ಲಿ 14 ಕೋಟಿ ಜನರಿದ್ದು, ಅವರ ಸರಾಸರಿ ವಾರ್ಷಿಕ ಆದಾಯ 15 ಸಾವಿರ ಡಾಲರ್ (13 ಲಕ್ಷ ರೂ.), 7 ಕೋಟಿ ಕುಟುಂಬಗಳ ತಲಾ ಆದಾಯ 3 ಸಾವಿರ ಡಾಲರ್ (2.62 ಲಕ್ಷ), 20.5 ಕೋಟಿ ಕುಟುಂಬಗಳ 100 ಕೋಟಿ ಜನರ ತಲಾ ಆದಾಯ 1 ಸಾವಿರ ಡಾಲರ್ (87 ಸಾವಿರ, ಅಂದರೆ ತಿಂಗಳಗೆ ಸುಮಾರು 7 ಸಾವಿರ), ಈ ವರ್ಗದವರಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಹಣವಿರುವುದಿಲ್ಲ.
143 ಕೋಟಿ ಜನ ಮುಖ್ಯವಾಹಿನಿಗೆ ತರುವ ವ್ಯವಸ್ಥೆಯೇನು? ಈ ದಿಸೆಯಲ್ಲಿ ಅಂತಹ ಜನರಿಗೆ ಆರ್ಥಿಕ, ಸಾಮಾಜಿಕ ಸಮಾನತೆ ತರಲು ನಮ್ಮ ಸರ್ಕಾರ ಮಾಡಿರುವ ಪ್ರಮಾಣಿಕ ಪ್ರಯತ್ನ ಈ ಗ್ಯಾರಂಟಿಗಳು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಕ್ಯಾಮರೂನ್ ದೇಶದ ಪಿಲೆಮಾನ್ ಯಾಂಗ್ ಅವರು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ್ದಾರೆ. ಇದಕ್ಕಿಂತ ಶ್ಲಾಘನೆ ಬೇರೇನು ಬೇಕು? ಎಂದು ಹೇಳಿದರು.
ರಾಜ್ಯದ ತಲಾ ಆದಾಯ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 2022-23 ರಲ್ಲಿ ತಲಾ ಆದಾಯವು 4,58,789 ರೂ.ಗಳಷ್ಟಿತ್ತು. 2023-24 ರಲ್ಲಿ ಅದು 5,01383 ರೂ.ಗಳಿಗೆ ಏರಿತು. ಅದೇ ರೀತಿ, ಬೆಳಗಾವಿ, ಕಲಬುರಗಿ ಮತ್ತು ಇತರ ಪ್ರದೇಶಗಳಲ್ಲಿಯೂ ಇದು ಹೆಚ್ಚಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಹಾಲು ಉತ್ಪಾದಕರಿಗೆ 700 ಕೋಟಿ ರೂ.ಗಳಷ್ಟು ಪ್ರೋತ್ಸಾಹ ಧನ ನೀಡದಿರುವ ಬಗ್ಗೆ ಪ್ರತಿಪಕ್ಷಗಳು ಮುಖ್ಯಮಂತ್ರಿಗಳನ್ನು ಸಿಲುಕಿಸಲು ಪ್ರಯತ್ನಿಸಿದಾಗ, ಹಿಂದಿನ ಬಿಜೆಪಿ ಸರ್ಕಾರ 600 ಕೋಟಿ ರೂ.ಗಳನ್ನು ಪಾವತಿಸಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮುಂದಿನ ವರ್ಷದೊಳಗೆ ಎಲ್ಲಾ ಬಾಕಿಗಳನ್ನು ಪಾವತಿಸಲಾಗುವುದು ಮತ್ತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಪ್ರೋತ್ಸಾಹ ಧನವನ್ನು 5 ರೂ.ಗಳಿಂದ 7 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದರು.
ನಂತರ, ಸಿಎಂ ಅವರ ಉತ್ತರದಿಂದ ತೃಪ್ತರಾಗಿಲ್ಲ ಎಂದು ಹೇಳಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಕೇಂದ್ರ ಬಿಜೆಪಿ ಸರ್ಕಾರ ಕಾರ್ಪೊರೇಟ್ ಸಾಲಗಳನ್ನು ಮನ್ನಾ ಮಾಡಿದೆ ಎಂದು ಸಿಎಂ ಆರೋಪಿಸಿದಾಗ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ನಡೆಯಿತು.
ಚುನಾವಣೆ
GBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
ಬೆಂಗಳೂರು (ಫೆಬ್ರವರಿ 13, 2026): ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಏಜೆಂಟ್ (BLA-1) ಆರ್.ಎಸ್. ದೀಪಕ್ ಕುಮಾರ್ ಅವರು ಹೊಸದಾಗಿ ರಚಿಸಲಾದ Greater Bengaluru Authority (GBA) ವಾರ್ಡ್ಗಳಲ್ಲಿನ ಬೂತ್ ಹಂಚಿಕೆ ಮತ್ತು ಮತದಾರರ ಪಟ್ಟಿಯಲ್ಲಿರುವ ಗಂಭೀರ ಲೋಪಗಳ ಕುರಿತು Karnataka State Election Commission ಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ GBA ಟಿಕೆಟ್ ಆಕಾಂಕ್ಷಿ ಸಿ.ಎಂ. ಸತ್ಯನಾರಾಯಣ (CMC) ಅವರು hosasuddi.in ಜೊತೆಗೆ ಮಾತನಾಡಿ, “ಈ ತಪ್ಪುಗಳನ್ನು ತಕ್ಷಣ ಸರಿಪಡಿಸದಿದ್ದರೆ ನಮ್ಮ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಬೇಕಾಗುತ್ತದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಈ ವಿಷಯದಲ್ಲಿ ಜವಾಬ್ದಾರಿಯಾಗಿ ಕೆಲಸ ಮಾಡಬೇಕು. ಆದರೆ ಯಾರೂ ಗಮನ ಹರಿಸುತ್ತಿಲ್ಲ ಎಂಬುದು ವಿಷಾದನೀಯ. GBA ಅಧಿಕಾರಿಗಳು ಕೂಡಲೇ ಇದನ್ನು ಪರಿಶೀಲಿಸಿ ತಿದ್ದುಪಡಿ ಮಾಡಬೇಕು” ಎಂದು ಆಗ್ರಹಿಸಿದರು.
ಪ್ರಮುಖ ದೂರುಗಳು
ದೂರುದಲ್ಲಿ ಮೂರು ಪ್ರಮುಖ ತಾಂತ್ರಿಕ ಮತ್ತು ಆಡಳಿತಾತ್ಮಕ ಲೋಪಗಳನ್ನು ಎತ್ತಿ ತೋರಿಸಲಾಗಿದೆ:
- ವೆಬ್ಸೈಟ್ನಲ್ಲಿ ಮಾಹಿತಿ ಕೊರತೆ: ಹಲವಾರು ಬೂತ್ಗಳ ವಿವರಗಳು ಅಧಿಕೃತ GBA ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
- ವಾರ್ಡ್ಗಳ ಅದಲು-ಬದಲು: ಒಂದು ವಾರ್ಡ್ಗೆ ಸೇರಬೇಕಾದ ಬೂತ್ಗಳನ್ನು ಮತ್ತೊಂದು ವಾರ್ಡ್ಗೆ ಸೇರಿಸಲಾಗಿದೆ.
- ಮತದಾರರ ಗೊಂದಲ: ಒಂದೇ ಪ್ರದೇಶದ ಮತದಾರರನ್ನು ಎರಡು ಬೇರೆ ವಾರ್ಡ್ಗಳಿಗೆ ಹಂಚಿರುವುದರಿಂದ ಮತದಾರರ ಪಟ್ಟಿಯಲ್ಲಿ ಅವ್ಯವಸ್ಥೆ.
ವಾರ್ಡ್ವಾರು ಕಂಡುಬಂದಿರುವ ಲೋಪಗಳು
ಶಿವನಪಾಳ್ಯ (19):
ಬೂತ್ ಸಂಖ್ಯೆ 25ರಿಂದ 31ರವರೆಗೆ ಕೆಂಗೇರಿ (21) ಅಥವಾ ಕೆಂಗೇರಿ ಕೋಟೆ (20) ವಾರ್ಡ್ಗೆ ಸೇರಬೇಕಿದೆ. ಬೂತ್ 19 ಮತ್ತು 31 ವೆಬ್ಸೈಟ್ನಲ್ಲಿ ಕಾಣುತ್ತಿಲ್ಲ.
ಉಲ್ಲಾಳ (16):
ಬೂತ್ ಸಂಖ್ಯೆ 1, 2, 3 ಮತ್ತು 6 ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
ನಾಡಪ್ರಭು ಕೆಂಪೇಗೌಡ ನಗರ (13):
ಹಳೆಯ ಬೂತ್ 52ರ ಮತದಾರರು ಈಗ ವಾರ್ಡ್ 12ರಲ್ಲಿ ಸೇರಿದ್ದಾರೆ. ಬೂತ್ 37 ವೆಬ್ಸೈಟ್ನಲ್ಲಿ ನಾಪತ್ತೆಯಾಗಿದೆ. ಬೂತ್ 37-40 ಮತ್ತು 24-25 ಎರಡು ವಾರ್ಡ್ಗಳ ನಡುವೆ ಹಂಚಿಹೋಗಿವೆ.
ಬ್ಯಾಡರಹಳ್ಳಿ (15):
ಬೂತ್ ಸಂಖ್ಯೆ 23 ಮತ್ತು 24 ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
ಕೆಂಗೇರಿ (21) ಮತ್ತು ಕೆಂಗೇರಿ ಕೋಟೆ (20):
ಶ್ರೀನಿವಾಸಪುರ, ಗಣಕಲ್ಲು ಮತ್ತು ಓಂಕಾರ ಆಶ್ರಮ ಬೂತ್ಗಳನ್ನು ಎರಡು ವಾರ್ಡ್ಗಳಿಗೆ ವಿಂಗಡಿಸಲಾಗಿದೆ. ಇವುಗಳನ್ನು ಒಂದೇ ವಾರ್ಡ್ಗೆ ಸೇರಿಸಲು ಮನವಿ.
ಕೆಂಗಲ್ ಹನುಮಂತಯ್ಯ ವೆಸ್ಟ್ (18):
ಬೆಥೆಸ್ಡಾ ಇಂಟರ್ನ್ಯಾಷನಲ್ ಸ್ಕೂಲ್ನ ಬೂತ್ ಸಂಖ್ಯೆ 5ರ ವಿವರ ವೆಬ್ಸೈಟ್ನಲ್ಲಿ ಕಾಣುತ್ತಿಲ್ಲ.
ತಕ್ಷಣದ ಕ್ರಮಕ್ಕೆ ಆಗ್ರಹ
“ಮತದಾರರ ಪಟ್ಟಿಯಲ್ಲಿ ಮತದಾರರು ಸಂಘಟಿತ ರೀತಿಯಲ್ಲಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ದಯವಿಟ್ಟು ಮೇಲಿನ ತಪ್ಪುಗಳನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಿ” ಎಂದು ಆರ್.ಎಸ್. ದೀಪಕ್ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಪ್ರತಿಯನ್ನು ಯಶವಂತಪುರ ಕ್ಷೇತ್ರದ ಚುನಾವಣಾಧಿಕಾರಿಗೂ (R.O.) ರವಾನಿಸಲಾಗಿದೆ.
ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ದೂರು ಮಹತ್ವ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ಪ್ರತಿಕ್ರಿಯೆ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ.
ದೇಶ
BMTC ಸಿಹಿ ಸುದ್ದಿ: ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಉಚಿತ ಬಸ್ ಪ್ರಯಾಣ
ಬೆಂಗಳೂರು: ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ Bangalore Metropolitan Transport Corporation (BMTC) ಮಹತ್ವದ ಘೋಷಣೆ ಮಾಡಿದೆ. 2025-26ನೇ ಸಾಲಿನ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ ಉಚಿತವಾಗಿ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಬಹುದು.
ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ (Hall Ticket) ತೋರಿಸಿದರೆ ಸಾಕು – ಯಾವುದೇ ಪ್ರಯಾಣ ದರ ಪಾವತಿಸಬೇಕಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಫೆಬ್ರವರಿ 28, 2026 ರಿಂದ ಮಾರ್ಚ್ 17, 2026ರವರೆಗೆ ನಡೆಯಲಿರುವ ಪರೀಕ್ಷೆಗಳ ಅವಧಿಯಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ.
ಉಚಿತ ಪ್ರಯಾಣದ ನಿಯಮಗಳು
▪ ಪ್ರವೇಶ ಪತ್ರ ಕಡ್ಡಾಯ: ಬಸ್ನಲ್ಲಿ ಪ್ರಯಾಣಿಸುವಾಗ ನಿರ್ವಾಹಕರಿಗೆ ಹಾಲ್ ಟಿಕೆಟ್ ತೋರಿಸಬೇಕು. ಅದೇ ಬಸ್ ಪಾಸ್ ಆಗಿ ಪರಿಗಣಿಸಲಾಗುತ್ತದೆ.
▪ ಸಾಮಾನ್ಯ ಬಸ್ಗಳಿಗೆ ಮಾತ್ರ ಅನ್ವಯ: ಈ ಸೌಲಭ್ಯವು ಬಿಎಂಟಿಸಿಯ ಸಾಮಾನ್ಯ (Ordinary) ಬಸ್ಗಳಿಗೆ ಮಾತ್ರ. ವಜ್ರ, ಎಸಿ ಅಥವಾ ಇತರೆ ಪ್ರೀಮಿಯಂ ಬಸ್ಗಳಿಗೆ ಅನ್ವಯಿಸುವುದಿಲ್ಲ.
▪ ಮನೆ–ಪರೀಕ್ಷಾ ಕೇಂದ್ರ ವ್ಯಾಪ್ತಿ: ವಿದ್ಯಾರ್ಥಿಯ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಹಾಗೂ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವಾಗ ಮಾತ್ರ ರಿಯಾಯಿತಿ ಸಿಗಲಿದೆ.
ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಕ್ರಮಗಳು
- ಹೆಚ್ಚುವರಿ ಟ್ರಿಪ್ಗಳು: ಪರೀಕ್ಷಾ ಕೇಂದ್ರಗಳಿರುವ ಮಾರ್ಗಗಳಲ್ಲಿ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ನಂತರ ಹೆಚ್ಚುವರಿ ಬಸ್ಗಳನ್ನು ಓಡಿಸಲು ಸೂಚನೆ.
- ಕೋರಿಕೆ ನಿಲುಗಡೆ (Request Stop): ಪರೀಕ್ಷಾ ಕೇಂದ್ರದ ಸಮೀಪ ಅಧಿಕೃತ ನಿಲುಗಡೆ ಇಲ್ಲದಿದ್ದರೂ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಬಸ್ ನಿಲ್ಲಿಸಲು ಚಾಲಕರಿಗೆ ನಿರ್ದೇಶನ.
- ಟ್ರಿಪ್ ರದ್ದು ಇಲ್ಲ: ಪರೀಕ್ಷಾ ದಿನಗಳಲ್ಲಿ ಯಾವುದೇ ಬಸ್ ಟ್ರಿಪ್ಗಳನ್ನು ರದ್ದು ಮಾಡದೆ ಕಡ್ಡಾಯ ಕಾರ್ಯಾಚರಣೆ ನಡೆಸುವಂತೆ ಸೂಚನೆ.
ವಿದ್ಯಾರ್ಥಿಗಳಿಗೆ ದೊಡ್ಡ ನೆರವು
ಬಿಎಂಟಿಸಿಯ ಈ ನಿರ್ಧಾರವು ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆರ್ಥಿಕ ಭಾರ ಕಡಿಮೆ ಮಾಡುವುದರ ಜೊತೆಗೆ, ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ನೆರವಾಗಲಿದೆ.
ದೇಶ
ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಅನುಮತಿ ನಿರೀಕ್ಷೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ ಸರ್ಕಾರ ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ಡಿಸಿಎಂ D. K. Shivakumar ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆ (IISc)ಯ ಜೆಜೆ ಟಾಟಾ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ (ICDS) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಸಹಕಾರ ಸಿಗುವ ಭರವಸೆ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಜಾರಿಗೆ ಸಿದ್ಧತೆ
Mekedatu ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಯೋಜನೆ ಪರವಾಗಿದೆ. ಕೇಂದ್ರ ಅನುಮತಿ ದೊರೆತ ಕೂಡಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು. ಈ ಯೋಜನೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಸುಮಾರು 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ – ರೈತರಿಗೆ ಪರಿಹಾರ
Krishna River ಮೇಲ್ದಂಡೆ ಯೋಜನೆ ವಿಚಾರದಲ್ಲಿ 2013ರ ಕಾಯ್ದೆಯಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. 2025ರ ಡಿಸೆಂಬರ್ ವೇಳೆಗೆ 1.72 ಲಕ್ಷ ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಅಣೆಕಟ್ಟು ಸುರಕ್ಷತೆ ರಾಷ್ಟ್ರದ ಆದ್ಯತೆ
ಅಣೆಕಟ್ಟುಗಳು ದೇಶದ ಶಕ್ತಿ ಹಾಗೂ ಪ್ರಗತಿಯ ಪ್ರತೀಕವಾಗಿದ್ದು, ಭಾರತದಲ್ಲಿ ಸುಮಾರು 6,500 ಅಣೆಕಟ್ಟುಗಳಿವೆ. ವಿಶ್ವದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 232 ಅಣೆಕಟ್ಟುಗಳಿದ್ದು, ಅವುಗಳಲ್ಲಿ ಬಹುಪಾಲು 25 ವರ್ಷಕ್ಕಿಂತ ಹಳೆಯದಾಗಿದೆ.
ಕೇಂದ್ರ ಸರ್ಕಾರವು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಜಾರಿಗೊಳಿಸಿರುವ Dam Rehabilitation and Improvement Project (DRIP) ಯೋಜನೆಯಡಿ ರಾಜ್ಯದಲ್ಲಿ 58 ಅಣೆಕಟ್ಟುಗಳ ದುರಸ್ತಿಗೆ ಸುಮಾರು 1,500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮಕ್ಕೆ ಮನವಿ
ಅಣೆಕಟ್ಟುಗಳ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
“ಜಲವೇ ಸಂಪತ್ತು, ಜಲವೇ ಇಂಧನ, ಜಲವೇ ಜೀವನ” ಎಂದು ಹೇಳಿದ ಅವರು, ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಬದ್ಧತೆ ವ್ಯಕ್ತಪಡಿಸಿದರು.
-
ಚುನಾವಣೆ7 hours agoGBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
-
ದೇಶ12 hours agoಫುಟ್ಪಾತ್ನಲ್ಲಿ ಬೈಕ್ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ
-
ದೇಶ12 hours agoRBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ
-
ದೇಶ13 hours agoSHAKTI SCHEME : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: ಸಚಿವ ಸಂಪುಟದ ಮಹತ್ವದ ನಿರ್ಧಾರ
-
ದೇಶ14 hours agoBangladesh Election 2026: ಬಿಎನ್ಪಿ ಭರ್ಜರಿ ಗೆಲುವು, ತಾರಿಖ್ ರೆಹಮಾನ್ ಮುಂದಿನ ಪ್ರಧಾನಿ
-
ಕ್ರೀಡೆ11 hours agoBENGALURU : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ಗೆ ಒಪ್ಪಿಗೆ: 35 ಸಾವಿರ ಜನ ಮಿತಿ, ಭದ್ರತೆಗೆ ಸಮಿತಿ
-
ದೇಶ9 hours agoBENGALURU : ಮಹಾಶಿವರಾತ್ರಿ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ
-
ದೇಶ13 hours agoದೇವನಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ: 7 ಮಂದಿ ದುರ್ಮರಣ
