ಬೆಂಗಳೂರು
ಬಿಡದಿ ಔಟ್, ಈ ಎರಡು ಸ್ಥಳಗಳ ಬಗ್ಗೆ ಚರ್ಚೆ, ಜಟಾಪಟಿ!
ಬೆಂಗಳೂರು, (ಏಪ್ರಿಲ್ 10): ಕನಕಪುರ (Kanakapura) ಭಾಗನಾ.. ನೆಲಮಂಗಲದ (Nelamangala) ಕಡೆನಾ? ಕುಣಿಗಲ್ ಕಡೆಯಲ್ಲೋ.. ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಜಾಗದ ವಿಚಾರವೇ ಗೊಂದಲ ಸೃಷ್ಟಿಸಿದೆ. ಈಗಾಗಲೇ ಕೇಂದ್ರದ ವಿಮಾನಯಾನ ಇಲಾಖೆಯ ಅಧಿಕಾರಿಗಳು ಬೆಂಗಳೂರಿಗೆ ಬಂದಿದ್ದು, ಏರ್ಪೋರ್ಟ್ ನಿರ್ಮಾಣದ ಸ್ಥಳಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಕಳೆದ ಮೂರು ದಿನಗಳಿಂದ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಕನಕಪುರ ರಸ್ತೆಯ 2 ಸ್ಥಳಗಳನ್ನು ಪರಿಶೀಲನೆ ಮಾಡಿ ಬಳಿಕ ಸಚಿವ ಎಂ ಬಿ ಪಾಟೀಲ್ ಜೊತೆಗೆ ಸುದೀರ್ಘ ಚರ್ಚೆ ಮಾಡಿದ್ದಾರೆ. ಹಾಗೇ ನೆಲಮಂಗಲ ಮತ್ತು ಕುಣಿಗಲ್ ಭಾಗದ ಸ್ಥಳಗಳನ್ನೂ ಏರ್ಪೋರ್ಟ್ ಅಥಾರಿಟಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬಿಡದಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸೂಕ್ತ ಅಲ್ಲ. ಈ ಜಾಗವನ್ನು ಬಿಟ್ಟು ಈ ಎರಡು ಜಾಗಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಮೂರರಲ್ಲಿ ಒಂದು ಔಟ್ ಆದಂತಾಗಿದ್ದು, ಇನ್ನುಳಿದ ಎರಡು ಸ್ಥಳಗಳಲ್ಲಿ ಯಾವುದನ್ನು ಆಯ್ಕೆ ಮಾಡಲಾಗುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಎಂ ಬಿ ಪಾಟೀಲ್ ಅವರು ಕೂಡ ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯ, ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಅಗತ್ಯ ಇತ್ಯಾದಿಗಳನ್ನು ತಂಡದ ಸದಸ್ಯರಿಗೆ ವಿವರಿಸಿದ್ದಾರೆ. ಯಾರ ಒತ್ತಡಕ್ಕೂ ಮಣೆಯದೇ ಅತ್ಯಂತ ಪಾರದರ್ಶಕವಾಗಿ ಸ್ಥಳ ಗುರುತಿಸುವ ಕೆಲಸ ಆಗಲಿ ಎಂದು ತಂಡಕ್ಕೆ ಸಲಹೆ ನೀಡಿದ್ದಾರೆ.
ಬಳಿಕ ಮಾತನಾಡಿದ ಸಚಿವ ಎಂಬಿ ಪಾಟೀಲ್, ಉದ್ದೇಶಿತ ಎರಡನೆಯ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲು ಸರಕಾರ ತೀರ್ಮಾನಿಸಿದೆ. ಸ್ಥಳ ಪರಿಶೀಲನೆಯ ಬಳಿಕ ಪ್ರಾಧಿಕಾರದ ಅಭಿಪ್ರಾಯ ಏನೆಂಬುದನ್ನು ತಿಳಿದುಕೊಂಡು, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಎಂ ಬಿ ಪಾಟೀಲ್ ಅವರು ತಿಳಿಸಿದ್ದಾರೆ. ಇನ್ನೂ, ಬಿಡದಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸೂಕ್ತ ಅಲ್ಲ. ಈ ಜಾಗವನ್ನು ಬಿಟ್ಟು ಇನ್ನುಳಿದ ಎರಡು ಸ್ಥಳಗಳ ಬಗ್ಗೆ ಕೇಂದ್ರ ಅಧ್ಯಯನ ತಂಡ ವರದಿ ನೀಡಲಿದೆ ಎಂದಿದ್ದಾರೆ.
ಕನಕಪುರದಲ್ಲೂ ವಿಮಾನ ನಿಲ್ದಾಣಕ್ಕೆ ಜಾಗ ಪರಿಶೀಲಿಸಲಾಗಿದೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಒತ್ತಡವೇ ಕಾರಣ ಎಂದು ಕೆಲವರಿಂದ ಬೇಸರ ವ್ಯಕ್ತವಾಗಿದೆ. ಏರ್ಪೋರ್ಟ್ ಸ್ಥಾಪನೆ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ ಎಂದು 30ಕ್ಕೂ ಹೆಚ್ಚು ಶಾಸಕರು ಧ್ವನಿ ಎತ್ತಿದ್ದಾರೆ.
ಕನಕಪುರ ರಸ್ತೆಯ ಭಾಗದಲ್ಲಿ 2ನೇ ಏರ್ಪೋರ್ಟ್ ಬೇಡವೇ ಬೇಡ. ತುಮಕೂರು ಅಥವಾ ಶಿರಾ ಭಾಗದಲ್ಲಿ ಎಲ್ಲೇ ನಿರ್ಮಿಸಿದ್ರೂ ಓಕೆ ಎಂದು ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರ ಮಾತು.ಆದ್ರೆ , ಶಿರಾ ಭಾಗದಲ್ಲಿ ಏರ್ ಪೋರ್ಟ್ ಮಾಡಲು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ಕುತೂಹಲ ಮೂಡಿಸಿದ ಸ್ಥಳ
ಕನಕಪುರ ರಸ್ತೆಯಲ್ಲಿ ಗುರುತಿಸಲಾಗಿರುವ ಎರಡು ಪ್ರದೇಶಗಳಲ್ಲಿ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ಒಂದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಮೂಲಕ, ಎರಡನೇ ವಿಮಾನ ನಿಲ್ದಾಣದ ರೇಸ್ನಲ್ಲಿದ್ದ ಬಿಡದಿ ಸ್ಪರ್ಧೆಯಿಂದ ಹೊರಡೆ ಬಿದ್ದಂತಾಗಿದೆ. ಅಲ್ಲದೆ ಸಚಿವ ಜಿ.ಪರಮೇಶ್ವರ್ ಹಾಗೂ ವಿ.ಸೋಮಣ್ಣ ಅವರ ಮನವಿಗೂ ಕ್ಯಾರೆ ಅನ್ನದೇ, ಈಗಾಗಲೇ ತುಮಕೂರನ್ನು ಸಹ ಕೈಬಿಡಲಾಗಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಕನಕಪುರ ರಸ್ತೆ ಅಥವಾ ನೆಲಮಂಗಲ ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಆಗಬಾರದು. ಶಿರಾದಲ್ಲಿ ಆಗಲಿ ಎಂದು 30ಕ್ಕೂ ಹೆಚ್ಚು ಶಾಸಕರು ಪಟ್ಟು ಹಿಡಿದಿದ್ದಾರೆ. ಆದರೆ, ಅಂತಿಮವಾಗಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಯಾವ ಸ್ಥಳ ಗುರುತು ಮಾಡಲಾಗುತ್ತೆ? ಯಾರ ಕೈ ಮೇಲಾಗುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜಕೀಯ ಲೆಕ್ಕಾಚಾರ. ಪರ ವಿರೋಧ ಏನೇ ಇದ್ರೂ, ಅಂತಿಮವಾಗಿ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಮತ್ತು ಕೇಂದ್ರ ಸರ್ಕಾರವೇ ಜಾಗ ಫೈನಲ್ ಮಾಡಲಿದೆ. ಸದ್ಯ ಯಾವ ಸ್ಥಳ ಫೈನಲ್ ತೀರ್ಮಾನಿಸುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.
ದೇಶ
ಶೈಕ್ಷಣಿಕ ಜಾಗ ದುರ್ಬಳಕೆ ಆರೋಪ: ಕೆಂಗೇರಿ ಟ್ರಸ್ಟ್ ವಿರುದ್ಧ PIL ವಿಚಾರಣೆ
ಬೆಂಗಳೂರು: ಮೈಸೂರು ರಸ್ತೆಯ ಕೆಂಗೇರಿ ಎಜುಕೇಷನ್ ಟ್ರಸ್ಟ್ಗೆ ಸೇರಿದ ಜಾಗದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದೆ.
ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಖಾಸಗಿ ಕಂಪನಿಯು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಪಡೆದು ಉಗ್ರಾಣ ಮತ್ತು ಪಾರ್ಕಿಂಗ್ ಕಟ್ಟಡಗಳ ನಿರ್ಮಾಣ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಸ್ಥಳೀಯ ನಿವಾಸಿಗಳಾದ ಎಂ. ಶ್ರೀಕಾಂತ್ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್ ಹಾಗೂ ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಜೊತೆಗೆ ಸರ್ಕಾರ, ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ, ಜಿಬಿಎ ಟ್ರಸ್ಟ್ ಅಧ್ಯಕ್ಷರು ಮತ್ತು ಟ್ರಸ್ಟಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರ ಪ್ರಕಾರ, 1957ರಲ್ಲಿ ಸ್ಥಾಪನೆಯಾದ ಕೆಂಗೇರಿ ಎಜುಕೇಷನ್ ಟ್ರಸ್ಟ್ಗೆ ಸ್ಥಳೀಯ ನಿವಾಸಿಗಳು ಸುಮಾರು 12 ಎಕರೆ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ದಾನವಾಗಿ ನೀಡಿದ್ದರು. ಈ ಜಾಗದಲ್ಲಿ ಸ್ಥಾಪನೆಯಾದ ಕನ್ನಡ ಮಾಧ್ಯಮ ಶಾಲೆಗೆ ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಯ ಮಾನ್ಯತೆಯನ್ನೂ ನೀಡಿತ್ತು.
ಆದರೆ, ಪ್ರಸ್ತುತ ಟ್ರಸ್ಟ್ನ ಆಡಳಿತವು ಶಾಲೆಯ ಜಾಗವನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಟ್ರಸ್ಟ್ ಭೂಮಿಯಲ್ಲಿ ವ್ಯಾಪಾರಿಗಳಿಗಾಗಿ ಉಗ್ರಾಣ ನಿರ್ಮಾಣ ಹಾಗೂ ಆಟದ ಮೈದಾನದಲ್ಲಿ ಸಾರಿಗೆ ಸಂಸ್ಥೆಗಳ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದೂರಲಾಗಿದೆ.
ಇದಲ್ಲದೆ, ಟ್ರಸ್ಟ್ನ ಹಣಕಾಸು ದುರ್ಬಳಕೆ ನಡೆಯುತ್ತಿದೆ ಎಂಬ ಆರೋಪವನ್ನೂ ಅರ್ಜಿದಾರರು ಮುಂದಿಟ್ಟಿದ್ದಾರೆ. ಶಿಕ್ಷಣಕ್ಕಾಗಿ ದಾನವಾಗಿ ದೊರೆತ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಯದಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ ವೇಳೆ ಸಂಬಂಧಪಟ್ಟ ಇಲಾಖೆಗಳಿಂದ ಸಲ್ಲಿಕೆಯಾಗುವ ವರದಿಯ ಆಧಾರದ ಮೇಲೆ ಹೈಕೋರ್ಟ್ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ದೇಶ
ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್! ಬಿಸಿಲಿನ ತಾಪದಿಂದ ರಕ್ಷಿಸಲು ಬಿಎನ್ಸಿಸಿಯ ಹೊಸ ಪ್ರಯೋಗ
ಬೆಂಗಳೂರು, ಜೂನ್ 05: ನಗರದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ಮತ್ತು ಬಿಸಿಲಿನ ತೀವ್ರತೆಯಿಂದ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸ್ ಸಿಬ್ಬಂದಿಯ ಆರೋಗ್ಯ ರಕ್ಷಣೆಗಾಗಿ ಬೆಂಗಳೂರು ಉತ್ತರ ಮಹಾನಗರ ಪಾಲಿಕೆ (BNCC) ಮಹತ್ವದ ಹೆಜ್ಜೆ ಇಟ್ಟಿದೆ. ಪೈಲಟ್ ಯೋಜನೆಯ ಭಾಗವಾಗಿ ಸಂಚಾರಿ ಪೊಲೀಸರಿಗೆ ಅತ್ಯಾಧುನಿಕ ಎಸಿ (AC) ಹೆಲ್ಮೆಟ್ಗಳನ್ನು ವಿತರಿಸಲಾಗಿದೆ.
ಹೊರಾಂಗಣದಲ್ಲಿ ಹಾಗೂ ಟ್ರಾಫಿಕ್ ಸಿಗ್ನಲ್ಗಳಲ್ಲಿ ಗಂಟೆಗಟ್ಟಲೆ ನಿಂತು ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಬಿಸಿಲಿನ ತಾಪದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಮೊದಲ ಹಂತದಲ್ಲಿ 20 ಎಸಿ ಹೆಲ್ಮೆಟ್ಗಳನ್ನು ನೀಡಲಾಗಿದೆ. ಈ ಯೋಜನೆ ‘ಹೀಟ್-ಹೆಲ್ತ್ ಪ್ರೊಟೊಕಾಲ್’ (Heat-Health Protocol) ಅಡಿಯಲ್ಲಿ ಜಾರಿಗೊಂಡಿದ್ದು, ಬೆಂಗಳೂರು ಉತ್ತರ ಮಹಾನಗರ ಪಾಲಿಕೆ, C40 Cities, Sensing Local ಹಾಗೂ ಹಸಿರು ದಳ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಎಸಿ ಹೆಲ್ಮೆಟ್ಗಳು ಹೆಚ್ಚಿನ ಉಷ್ಣಾಂಶದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತಂಪಾದ ವಾತಾವರಣ ಒದಗಿಸುವ ಮೂಲಕ ಹೀಟ್ ಸ್ಟ್ರೆಸ್, ನಿರ್ಜಲೀಕರಣ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ನೀಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಬಿಎನ್ಸಿಸಿ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್, “ಹವಾಮಾನ ಬದಲಾವಣೆ ಮತ್ತು ಉಷ್ಣಾಂಶ ಏರಿಕೆಯಿಂದ ಹೊರಾಂಗಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಆರೋಗ್ಯ ರಕ್ಷಣೆ ಅತ್ಯಗತ್ಯವಾಗಿದೆ. ಈ ಹಿಂದೆ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹಾಗೂ ಒಣ ಕಸ ಸಂಗ್ರಹಣಾ ಕೇಂದ್ರದ ಸಿಬ್ಬಂದಿಗೆ ಕೂಲಿಂಗ್ ಕಿಟ್ಗಳನ್ನು ನೀಡಲಾಗಿತ್ತು. ಇದೀಗ ಅದನ್ನು ಸಂಚಾರಿ ಪೊಲೀಸರಿಗೂ ವಿಸ್ತರಿಸಲಾಗಿದೆ” ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಹಾಗೂ ಇತರೆ ಸರ್ಕಾರಿ ಇಲಾಖೆಗಳಿಗೂ ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಹೀಟ್ ಸ್ಟ್ರೆಸ್ ಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತು ಸಂಚಾರಿ ಪೊಲೀಸರಿಗೆ ವಿಶೇಷ ಜಾಗೃತಿ ಮೂಡಿಸಲಾಯಿತು.
ಬೆಂಗಳೂರು ನಗರದಲ್ಲಿ ತಾಪಮಾನ ಏರಿಕೆಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಈ ಎಸಿ ಹೆಲ್ಮೆಟ್ ಯೋಜನೆ ಮಹತ್ವದ ಮಾದರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ದೇಶ
ಡಿಕೆಶಿ ಸರ್ಕಾರಕ್ಕೆ ಮತ್ತೊಂದು ಶಾಕ್! ರಾಮಲಿಂಗಾ ರೆಡ್ಡಿ ಬಳಿಕ ಕೆ.ಹೆಚ್. ಮುನಿಯಪ್ಪ ಅಸಮಾಧಾನ ಸ್ಫೋಟ
ಬೆಂಗಳೂರು, ಜೂನ್ 5: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಳ್ಳತೊಡಗಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಪಡೆದಿರುವ K. H. Muniyappa ಅವರು ಕೂಡ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾತೆ ಹಂಚಿಕೆ ವೇಳೆ ತಮ್ಮ ಹಿರಿತನಕ್ಕೆ ತಕ್ಕ ಮಹತ್ವ ನೀಡಿಲ್ಲ ಎಂದು ಮುನಿಯಪ್ಪ ಬೇಸರ ಹೊರಹಾಕಿದ್ದಾರೆ. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲೂ ಆಹಾರ ಖಾತೆಯನ್ನೇ ನಿರ್ವಹಿಸಿದ್ದ ಅವರು, ಈ ಬಾರಿ ಬೇರೆ ಖಾತೆಯ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ. ಆದರೆ ಮತ್ತೆ ಅದೇ ಇಲಾಖೆಯ ಜವಾಬ್ದಾರಿ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಏಳು ಬಾರಿ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿರುವ ಮುನಿಯಪ್ಪ, “ಪಕ್ಷದಲ್ಲಿ ನನ್ನ ಹಿರಿತನವನ್ನು ಪರಿಗಣಿಸಿಲ್ಲ. ಆಹಾರ ಖಾತೆ ಬದಲು ಬೇರೆ ಇಲಾಖೆ ನೀಡುವಂತೆ ನಾಯಕತ್ವಕ್ಕೆ ಮನವಿ ಮಾಡಿದ್ದೆ. ಖಾತೆ ಹಂಚಿಕೆಯಲ್ಲಿ ಹಿರಿಯ ನಾಯಕರಿಗೆ ಸೂಕ್ತ ಗೌರವ ಸಿಗಬೇಕಿತ್ತು” ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಬೆಂಗಳೂರು ಅಭಿವೃದ್ಧಿ ಇಲಾಖೆ ನಿರೀಕ್ಷಿಸಿದ್ದ Ramalinga Reddy ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರಕ್ಕೆ ಆರಂಭದಲ್ಲೇ ರಾಜಕೀಯ ಸಂಕಷ್ಟವನ್ನುಂಟು ಮಾಡಿದೆ.
ಸರ್ಕಾರ ರಚನೆಯಾದ ಮೂರೇ ದಿನಗಳಲ್ಲಿ ಇಬ್ಬರು ಹಿರಿಯ ನಾಯಕರ ಅಸಮಾಧಾನ ಬಹಿರಂಗವಾಗಿರುವುದು ಕಾಂಗ್ರೆಸ್ ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದೆ. ಅಸಮಾಧಾನಿತ ನಾಯಕರನ್ನು ಮನವೊಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಹಿರಿಯ ನಾಯಕರು ಮುಂದಾಗಿದ್ದು, ಮುಂದಿನ ಬೆಳವಣಿಗೆಗಳತ್ತ ರಾಜ್ಯ ರಾಜಕೀಯ ವಲಯ ಕುತೂಹಲದಿಂದ ಗಮನ ಹರಿಸಿದೆ.
-
ದೇಶ17 hours agoBig News : ಸಂಪುಟದಲ್ಲಿ ಮೊದಲ ವಿಕೆಟ್ ಪತನ? ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ಘೋಷಣೆ
-
ಬೆಂಗಳೂರು15 hours agoವಾಹನ ಸವಾರರಿಗೆ ಬಂಪರ್ ಆಫರ್! ಟ್ರಾಫಿಕ್ ಫೈನ್ಗೆ 50% ರಿಯಾಯಿತಿ
-
ದೇಶ14 hours agoಡಿಕೆಶಿ ಸರ್ಕಾರಕ್ಕೆ ಮತ್ತೊಂದು ಶಾಕ್! ರಾಮಲಿಂಗಾ ರೆಡ್ಡಿ ಬಳಿಕ ಕೆ.ಹೆಚ್. ಮುನಿಯಪ್ಪ ಅಸಮಾಧಾನ ಸ್ಫೋಟ
-
ಕ್ರೀಡೆ13 hours agoಮುಂಬೈ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಎಬಿ ಡಿ ವಿಲಿಯರ್ಸ್! ಅಭಿಮಾನಿಗಳ ಹೃದಯ ಗೆದ್ದ RCB ದಿಗ್ಗಜ
-
ದೇಶ14 hours agoಹೊಸ ಪಕ್ಷ, ಹೊಸ ಹೋರಾಟ! ತಮಿಳುನಾಡಿನಲ್ಲಿ ಅಣ್ಣಾಮಲೈ ರಾಜಕೀಯ ಕ್ರಾಂತಿ
-
ದೇಶ15 hours agoರಾಮಲಿಂಗಾರೆಡ್ಡಿ ರಾಜೀನಾಮೆ: ಕಾರಿನ ಚಕ್ರದಡಿ ಮಲಗಿ ಅಭಿಮಾನಿಗಳ ಕಣ್ಣೀರು!
-
ದೇಶ16 hours agoತಮಿಳುನಾಡು ಬಿಜೆಪಿಯಲ್ಲಿ ಭೂಕಂಪ: ಕೆ. ಅಣ್ಣಾಮಲೈ ಪಕ್ಷಕ್ಕೆ ಗುಡ್ಬೈ
-
ದೇಶ10 hours agoಶೈಕ್ಷಣಿಕ ಜಾಗ ದುರ್ಬಳಕೆ ಆರೋಪ: ಕೆಂಗೇರಿ ಟ್ರಸ್ಟ್ ವಿರುದ್ಧ PIL ವಿಚಾರಣೆ
