Connect with us

ಬೆಂಗಳೂರು

ನಿಮ್ಮ ಕೆಟ್ಟ ರಸ್ತೆಗಳಿಂದ ಕುತ್ತಿಗೆ, ಬೆನ್ನು ನೋವು – 50 ಲಕ್ಷ ಪರಿಹಾರ ಕೋರಿ ಬಿಬಿಎಂಪಿಗೆ ಲೀಗಲ್‌ ನೋಟಿಸ್‌

ಬೆಂಗಳೂರು: ವಾಹನ ಚಲಾಯಿಸಲು ಯೋಗ್ಯವಲ್ಲದ ರಸ್ತೆಗಳಿಂದ ನಿರಂತರ ದೈಹಿಕ ಯಾತನೆ ಅನುಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ತೆರಿಗೆದಾರರೊಬ್ಬರು 50 ಲಕ್ಷ ರೂ. ಪರಿಹಾರ ಕೋರಿ ಬಿಬಿಎಂಪಿಗೆ (BBMP) ಲೀಗಲ್‌ ನೋಟಿಸ್‌ (Legal Notice) ಕಳುಹಿಸಿದ್ದಾರೆ.

ರಿಚ್ಮಂಡ್ ಟೌನ್ ನಿವಾಸಿಯಾಗಿರುವ ದಿವ್ಯ ಕಿರಣ್ ಅವರು ಕಳುಹಿಸಿದ ನೋಟಿಸ್‌ನಲ್ಲಿ, ನಾನು ತೆರಿಗೆ ಪಾವತಿಸುವ (Tax Payer) ನಾಗರಿಕನಾಗಿದ್ದೇನೆ. ಆದರೆ ಬಿಬಿಎಂಪಿ (BBMP) ಮೂಲಭೂತ ಮೂಲಸೌಕರ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಇದರಿಂದ ನಾನು ದೈಹಿಕ ಯಾತನೆ ಮತ್ತು ಮಾನಸಿಕ ಯಾತನೆಯನ್ನು ನಿರಂತರವಾಗಿ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕೆಟ್ಟ ರಸ್ತೆಯಿಂದ ತೀವ್ರ ಕುತ್ತಿಗೆ ಮತ್ತು ಬೆನ್ನು ನೋವಿನ ಸಮಸ್ಯೆ ಅನುಭವಿಸುತ್ತಿದ್ದೇನೆ. ಮೂಳೆ ನೋವಿನ ಸಂಬಂಧ ಐದು ಬಾರಿ ಭೇಟಿ ನೀಡಿದ್ದೇನೆ ಅಷ್ಟೇ ಅಲ್ಲದೇ ನಾಲ್ಕು ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ ಎಂದು ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ತೀವ್ರ ನೋವನ್ನು ನಿವಾರಿಸಲು ಚುಚ್ಚುಮದ್ದು ಹಾಕಿಸಿದ್ದೇನೆ. ಹಲವಾರು ಔಷಧಿಗಳು ಮತ್ತು ನೋವು ನಿವಾರಕಗಳನ್ನು ತೆಗೆದುಕೊಂಡಿದ್ದೇನೆ. ನೋವನ್ನು ತಡೆಯಲು ಸಾಧ್ಯವಾಗದೇ ಅತ್ತಿದ್ದೇನೆ. ಮಾನಸಿಕ ಯಾತನೆಯಿಂದ ನಿದ್ದೆಯೂ ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಆರೋಗ್ಯ ಮತ್ತು ದೈನಂದಿನ ಕೆಲಸದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಹಿಂದೆ ಅಧಿಕಾರಿಗಳಿಗೆ ಈ ಸಮಸ್ಯೆಗಳನ್ನು ತಿಳಿಸಿದ್ದರೂ ಯಾವುದೇ ಫಲಪ್ರದವಾಗಿಲ್ಲ. ನಾವು ತೆರಿಗೆಯನ್ನು ಪಾವತಿಸುತ್ತಿದ್ದೇನೆ. ನಮಗೆ ಉತ್ತಮ ರಸ್ತೆಗಳನ್ನು ಒದಗಿಸುವುದು ಬಿಬಿಎಂಪಿಯ ಕೆಲಸ. ಉತ್ತಮ ಮೂಲಸೌಕರ್ಯಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬಾ ದುಃಖಕರ. ಈ ಕಾರಣಕ್ಕೆ ನೋಟಿಸ್‌ ಕಳುಹಿಸಿ 15 ದಿನಗಳ ಒಳಗಡೆ ಪರಿಹಾರ ಪಾವತಿಸಬೇಕೆಂದು ಕೋರಿದ್ದೇನೆ. ಒಂದು ವೇಳೆ ಪರಿಹಾರ ನೀಡದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಬೆಂಗಳೂರು

ಜಾತಿ ಗಣತಿ ಮರು ಸಮೀಕ್ಷೆ: ಇಂದು ವಿಶೇಷ ಸಚಿವ ಸಂಪುಟ ಸಭೆ

ಬೆಂಗಳೂರು: ಕರ್ನಾಟಕದಲ್ಲಿ ಜಾತಿ ಗಣತಿಯನ್ನು ಮತ್ತೊಮ್ಮೆ ಸಮೀಕ್ಷೆಗೆ ಒಳಪಡಿಸುವ ಕುರಿತಾದ ಚರ್ಚೆಗಳು ತೀವ್ರಗೊಂಡಿವೆ. ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಜಾತಿ ಗಣತಿಗೆ ತಡೆಯೊಡ್ಡಿರುವ ಹಿನ್ನೆಲೆಯಲ್ಲಿ, ಗುರುವಾರ ನಡೆಯಲಿರುವ ವಿಶೇಷ ಸಂಪುಟ ಸಭೆಯ ಮೇಲೆ ಎಲ್ಲರ ಕಣ್ಣಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಭೆಯಲ್ಲಿ ವರಿಷ್ಠರ ಸೂಚನೆಯ ಆಧಾರದಲ್ಲಿ ಮರು ಸಮೀಕ್ಷೆಗೆ ಒಪ್ಪಿಗೆ ನೀಡುತ್ತಾರೆಯೇ ಇಲ್ಲವೇ ತಡೆಗೆ ಕಾರಣವಾದ ವಿಷಯಗಳ ಬಗ್ಗೆ ಸಂಪುಟ ಸದಸ್ಯರಿಗೆ ವಿವರಣೆ ನೀಡುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ಜಾತಿ ಗಣತಿಯ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಈ ವಿಶೇಷ ಸಂಪುಟ ಸಭೆಯನ್ನು ಆಯೋಜಿಸಿದ್ದರು. ಆದರೆ, ಕಾಂಗ್ರೆಸ್ ವರಿಷ್ಠರ ತಡೆಯಿಂದಾಗಿ ಈ ಸಭೆಯ ಉದ್ದೇಶವೇ ಬದಲಾಗಿರುವ ಸಾಧ್ಯತೆ ಇದೆ. ಇಂದಿನ ಸಭೆಯಲ್ಲಿ ಕಾಂತರಾಜು ಆಯೋಗದ ವರದಿಯನ್ನು ಒಪ್ಪಿಕೊಂಡು, ಹೊಸ ಸಮೀಕ್ಷೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ಮರು ಸಮೀಕ್ಷೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಲು ಗಡುವು ವಿಧಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಡಿ.ಕೆ. ಶಿವಕುಮಾರ್ ಹೊರತುಪಡಿಸಿ, ಸಂಪುಟದ ಉಳಿದ ಸದಸ್ಯರಿಗೆ ವರಿಷ್ಠರ ನಿರ್ದೇಶನದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರು ಈ ಬಗ್ಗೆ ಸಂಪುಟ ಸಭೆಯಲ್ಲಿ ವಿವರಣೆ ನೀಡುವ ಸಾಧ್ಯತೆ ಇದೆ. “ರಾಜ್ಯದಲ್ಲಿ ಮತ್ತೊಮ್ಮೆ ಜಾತಿ ಗಣತಿ ಮರು ಸಮೀಕ್ಷೆ ನಡೆಸುವುದು ನನ್ನ ವೈಯಕ್ತಿಕ ನಿರ್ಧಾರವಲ್ಲ. ಇದು ವರಿಷ್ಠರ ತೀರ್ಮಾನ. ಕಾಂತರಾಜು ಆಯೋಗದ ವರದಿಯನ್ನು ನಾವು ಒಪ್ಪಿಕೊಂಡಿದ್ದೇವೆ. ಹೀಗಾಗಿ, ಕಡಿಮೆ ಅವಧಿಯಲ್ಲಿ ಮತ್ತೊಮ್ಮೆ ಗಣತಿ ನಡೆಸಲು ವರಿಷ್ಠರು ಸೂಚಿಸಿದ್ದಾರೆ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು, “ವಾಸ್ತವ ನೆಲೆಗಟ್ಟಿನಲ್ಲಿ ವೈಜ್ಞಾನಿಕವಾಗಿ ಜಾತಿ ಗಣತಿಯನ್ನು ಮರು ಸಮೀಕ್ಷೆ ನಡೆಸಬೇಕೆಂದು ಕರ್ನಾಟಕ ಸರಕಾರಕ್ಕೆ ಸೂಚಿಸಲಾಗಿದೆ. ಹಿಂದಿನ ಜಾತಿ ಸಮೀಕ್ಷೆ 10 ವರ್ಷಗಳ ಹಿಂದೆ ನಡೆದಿತ್ತು. ಈಗ ಸಾಕಷ್ಟು ಬದಲಾವಣೆಗಳಾಗಿವೆ. ಹಲವು ಸಮುದಾಯಗಳು ಒಬಿಸಿಯಲ್ಲಿ ಸೇರಿಕೊಂಡಿವೆ. ಈ ಎಲ್ಲವನ್ನೂ ಜಾತಿ ಸಮೀಕ್ಷೆ ಒಳಗೊಳ್ಳಬೇಕು,” ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸರಕಾರದ ಈ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ಕಾಂಗ್ರೆಸ್ ಸರಕಾರ ತಾನೇ ನಡೆಸಿದ ಜಾತಿ ಸಮೀಕ್ಷೆಯ ವರದಿಯನ್ನು ಕಸದ ಬುಟ್ಟಿಗೆ ಎಸೆದಿದೆ. ರಾಜ್ಯದ ಜನತೆಯ ತೆರಿಗೆ ಹಣವಾದ 165 ಕೋಟಿ ರೂಪಾಯಿಗಳನ್ನು ವ್ಯರ್ಥಗೊಳಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರು ಜನತೆಯ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು,” ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. “ಕೇವಲ ದತ್ತಾಂಶದ ಗೊಂದಲವೇ ಇದಕ್ಕೆ ಕಾರಣವಿರಲಾರದು. ದತ್ತಾಂಶದ ಬಗ್ಗೆ ಅನುಮಾನವಿದ್ದರೆ, ಕಾಂಗ್ರೆಸ್ ಇಷ್ಟು ವರ್ಷ ಸುಮ್ಮನಿರುವ ಅಗತ್ಯವಿರಲಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಜನತೆಗೆ ಸ್ಪಷ್ಟನೆ ನೀಡಬೇಕು,” ಎಂದು ಬಿಜೆಪಿ ಒತ್ತಾಯಿಸಿದೆ.

Continue Reading

ಅಪರಾಧ

ಮಹಿಳಾ ಪೇದೆಗೆ ಬೂಟುಗಾಲಿನಿಂದ ಒದ್ದ ಹೆಡ್ ಕಾನ್ಸ್‍ಟೇಬಲ್!

ಬೆಂಗಳೂರು: ಪೊಲೀಸ್ ಠಾಣೆಯೊಂದರಲ್ಲೇ ಸಿಬ್ಬಂದಿಗಳು ಹೊಡೆದಾಡಿಕೊಂಡಿರುವ ಘಟನೆ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ, ಠಾಣೆಯ ಹೆಡ್ ಕಾನ್ಸ್‍ಟೇಬಲ್ ಮಹಿಳಾ ಪೇದೆಗೆ ಬೂಟುಗಾಲಿನಿಂದ ಒದ್ದ ಆರೋಪ ಹೊರಿಸಲಾಗಿದ್ದು ಈ ಬಗ್ಗೆ ದೂರು ದಾಖಲಾಗಿದೆ,
ಠಾಣೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳಾ ಪೇದೆಗೆ ಅಲ್ಲೇ ಹೆಡ್ ಕಾನ್ಸ್‍ಟೇಬಲ್ ಆಗಿರುವ ಬಿಜಿ ಗೋವಿಂದರಾಜು ಎಂಬುವವರು ಬೂಟುಗಾಲಿನಲ್ಲಿ ಒದ್ದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ, ಜೂನ್ 10 ರಂದು ಈ ಘಟನೆ ನಡೆದಿದೆ, ರಾತ್ರಿ ಕಂಪ್ಯೂಟರ್ ವಿಭಾಗದಲ್ಲಿ ಮಹಿಳಾ ಪೇದೆ ರೇಣುಕಾ ಕರ್ತವ್ಯ ನಿರ್ವಹಿಸುತ್ತಿದ್ದರು,
ಈ ವೇಳೆ ರೇಣುಕಾ ಮನೆ ಬಿಟ್ಟು ಹೋಗಿ ಠಾಣೆ ಸೇರಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಊಟ ಮಾಡಿಸುತ್ತಿದ್ದರು, ಆಗ ಹೆಡ್ ಕಾನ್ಸ್‍ಟೇಬಲ್ ಗೋವಿಂದರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಮಾತ್ರವಲ್ಲದೇ ಮೂರ್ನಾಲ್ಕು ಬಾರಿ ಬೂಟುಗಾಲಿನಿಂದ ಒದ್ದಿದ್ದಾರೆ ಎಂದು ಆರೋಪಸಲಾಗಿದೆ,
ಕಾನ್ಸ್‍ಟೇಬಲ್ ರೇಣುಕಾ ದೂರು ಆಧರಿಸಿ ಹೆಡ್ ಕಾನ್ಸಟೇಬಲ್ ಗೋವಿಂದರಾಜು ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

Continue Reading

ಕ್ರೀಡೆ

ನಾನು ಹುಚ್ಚ ಅಲ್ಲ, ರಾಯಲ್ ಚಾಲೆಂಜ್ ಕೂಡಾ ಕುಡಿಯುವುದಿಲ್ಲ’: RCB ಖರೀದಿ ಕುರಿತ ವದಂತಿಗೆ ಡಿಕೆಶಿ ಪ್ರತಿಕ್ರಿಯೆ

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಡಳಿತ ಮಂಡಳಿಯ ಭಾಗವಾಗಲು ನನಗೆ ಆಫರ್‌ಗಳು ಬಂದಿವೆ. ಆದರೆ ನನಗೆ ಸಮಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸುವ ಕುರಿತ ಊಹಾಪೋಹಗಳ ಪ್ರಶ್ನೆಗೆ, “ನಾನು ಹುಚ್ಚನಲ್ಲ. ನಾನು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ (ಕೆಎಸ್ ಸಿಎ)ನ ಸದಸ್ಯ ಮಾತ್ರ” ಎಂದರು.

ಇದಕ್ಕೆಲ್ಲ ನನಗೆ ಸಮಯವಿಲ್ಲ. ಅಷ್ಟಕ್ಕೂ ನನಗೆ ಆರ್‌ಸಿಬಿ ಏಕೆ ಬೇಕು?. ನಾನು ರಾಯಲ್ ಚಾಲೆಂಜ್ ಕೂಡಾ ಕುಡಿಯುವುದಿಲ್ಲ. ಆದರೆ, ಆಡಳಿತ ಮಂಡಳಿಯ ಭಾಗವಾಗಲು ನನಗೆ ಆಫರ್‌ಗಳು ಬಂದಿವೆ” ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಭೀಕರ ಕಾಲ್ತುಳಿತ: ಐಪಿಎಲ್ ಚಾಂಪಿಯನ್ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ (ಜೂನ್ 4ರಂದು) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಕ್ರಿಕೆಟ್ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರಂತದ ನಂತರ ಮರುದಿನ (ಜೂನ್ 5ರಂದು) ಕರ್ನಾಟಕ ಸರ್ಕಾರ ನಗರ ಪೊಲೀಸ್ ಆಯುಕ್ತರೂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು. ಘಟನೆಯ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿದೆ.

ರಾಜಕೀಯ ಕೆಸರೆರಚಾಟ: ಈ ಘಟನೆಯನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಮಹಾ ಕುಂಭಮೇಳದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಬಿಜೆಪಿ ಏಕೆ ಒತ್ತಾಯಿಸಲಿಲ್ಲ ಎಂದು ಮರು ಪ್ರಶ್ನಿಸಿದ್ದಾರೆ.

ನಾಳೆ ಮಧ್ಯಾಹ್ನ ಹೈಕೋರ್ಟ್ ಆದೇಶ: ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮ್ಮ ಬಂಧನ ಕಾನೂನುಬಾಹಿರ ಎಂದು ಮಧ್ಯಂತರ ಪರಿಹಾರ ಕೋರಿ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ಹೈಕೋರ್ಟ್ ನಾಳೆ ಮಧ್ಯಾಹ್ನ 2.30ಕ್ಕೆ ಕಾಯ್ದಿರಿಸಿದೆ.

Continue Reading

Trending