Connect with us

ದೇಶ

ಯುದ್ಧದ ನೆರಳಲ್ಲಿ ರಾಜತಾಂತ್ರಿಕ ಆಟ: ಅಮೆರಿಕ ಸಿದ್ಧ, ಇರಾನ್ ನಿರಾಕರಣೆ!

Published

on

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿರುವ ಹಿನ್ನೆಲೆ, ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಯಲಿದೆ ಎಂಬ ಊಹಾಪೋಹಗಳಿಗೆ ಇರಾನ್ ಮಾಧ್ಯಮಗಳು ಸ್ಪಷ್ಟನೆ ನೀಡಿವೆ. ಯಾವುದೇ ಇರಾನ್ ನಿಯೋಗ ಪಾಕಿಸ್ತಾನಕ್ಕೆ ತೆರಳಿಲ್ಲ ಎಂದು ಅವರು ಖಚಿತಪಡಿಸಿದ್ದು, ಗೊಂದಲಕ್ಕೆ ತೆರೆ ಎಳೆದಿವೆ. ಇದೇ ವೇಳೆ, ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮ ಇಂದು ಸಂಜೆ ಅಂತ್ಯಗೊಳ್ಳಲಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಜಾಗತಿಕ ಕುತೂಹಲ ಹೆಚ್ಚಿದೆ.

ಇನ್ನೊಂದೆಡೆ, ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇಸ್ಲಾಮಾಬಾದ್‌ಗೆ ತೆರಳಿ ಎರಡನೇ ಸುತ್ತಿನ ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಈ ಬೆಳವಣಿಗೆ ಯುದ್ಧದ ಅಂತ್ಯಕ್ಕೆ ದಾರಿ ಮಾಡಿಕೊಡಬಹುದೇ ಎಂಬ ನಿರೀಕ್ಷೆ ಮೂಡಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್, ಅಮೆರಿಕದ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿ, “ಹಗೆತನದ ನೆರಳಿನಲ್ಲಿ ನಡೆಯುವ ಮಾತುಕತೆಯನ್ನು ನಾವು ಒಪ್ಪುವುದಿಲ್ಲ” ಎಂದು ಹೇಳಿದ್ದಾರೆ. ಅಲ್ಲದೆ, ಅಮೆರಿಕ ಯುದ್ಧಭೂಮಿಯಲ್ಲಿ ಹೊಸ ತಂತ್ರಗಳನ್ನು ರೂಪಿಸುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.

ಇದರ ನಡುವೆ, ಹಾರ್ಮುಜ್ ಜಲಸಂಧಿಯಲ್ಲಿ ಅನುಮತಿ ಇಲ್ಲದೆ ಸಾಗುವ ಹಡಗುಗಳನ್ನು ಗುರಿಯಾಗಿಸಲಾಗುವುದು ಎಂದು ಇರಾನ್ ಕ್ರಾಂತಿಕಾರಿ ಗಾರ್ಡ್ ಎಚ್ಚರಿಕೆ ನೀಡಿದೆ. ಈ ಹೇಳಿಕೆ ಜಾಗತಿಕ ತೈಲ ಸರಬರಾಜಿನ ಮೇಲೆ ಭೀತಿ ಹುಟ್ಟಿಸಿದೆ.

ಹಿಂದಿನ ಹೇಳಿಕೆಯಲ್ಲಿ ಡೊನಾಲ್ಡ್ ಟ್ರಂಪ್, ಮಾತುಕತೆ ವಿಫಲವಾದರೆ ಇರಾನ್‌ನ ಇಂಧನ ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದರು. ಈ ಎಲ್ಲ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿಸುತ್ತಿದ್ದು, ಜಾಗತಿಕ ರಾಜಕೀಯದಲ್ಲಿ ಹೊಸ ತಿರುವು ತರಲಿವೆ.

ದೇಶ

‘ಆಪರೇಷನ್ ಸಿಂಧೂರ’ ಪ್ರತಿಕಾರ, ಆದರೆ ಕುಟುಂಬದ ನೋವು ಅಳಿಯಲೇ ಇಲ್ಲ

Published

on

ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಂದಿಗೆ ಒಂದು ವರ್ಷ ಪೂರ್ತಿಯಾಗಿದೆ. ಕಳೆದ ವರ್ಷ ಬೈಸರನ್ ಕಣಿವೆಯಲ್ಲಿ ನಡೆದ ಈ ಭೀಕರ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ಸೇರಿ ಒಟ್ಟು 26 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಬೆಂಗಳೂರಿನ ಭರತ್ ಭೂಷಣ್ ಅವರ ಕುಟುಂಬದಲ್ಲಿ ಇಂದಿಗೂ ನೋವು ಕಡಿಮೆಯಾಗಿಲ್ಲ.

ಮತ್ತಿಕೆರೆಯ ನಿವಾಸಿಯಾಗಿದ್ದ ಭರತ್ ಭೂಷಣ್, ಪತ್ನಿ ಡಾ. ಸುಜಾತ ಹಾಗೂ ಮಗುವಿನೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಆಗ ಉಗ್ರರು ನಡೆಸಿದ ದಾಳಿಯಲ್ಲಿ ಭರತ್ ಭೂಷಣ್ ತಲೆಗೆ ಗುಂಡು ಹೊಡೆದು ಹತ್ಯೆ ಮಾಡಲಾಗಿತ್ತು. ಈ ಘಟನೆ ಅವರ ಕುಟುಂಬವನ್ನು ತತ್ತರಗೊಳಿಸಿದ್ದು, ಒಂದು ವರ್ಷ ಕಳೆದರೂ ಆ ನೆನಪು ಇನ್ನೂ ಕಾಡುತ್ತಿದೆ.

ಭರತ್ ಭೂಷಣ್ ಅವರ ಪತ್ನಿ ಡಾ. ಸುಜಾತ, “ಪ್ರತಿಕ್ಷಣವೂ ಆ ಘಟನೆ ನೆನಪಾಗುತ್ತದೆ. ನಾವು ಸುರಕ್ಷಿತವಾಗಿದ್ದೇವೆ ಎಂಬ ನಂಬಿಕೆಯಿಂದಲೇ ಪ್ರವಾಸಕ್ಕೆ ಹೋಗಿದ್ದೆವು. ಆದರೆ ಆ ದಿನ ನಡೆದದ್ದು ಜೀವನವನ್ನೇ ಬದಲಿಸಿತು” ಎಂದು ಕಣ್ಣೀರಿಟ್ಟಿದ್ದಾರೆ. ಮಗ ಹಾಗೂ ಕುಟುಂಬ ಸದಸ್ಯರ ಮನಸ್ಸಿನಲ್ಲಿ ನೋವು ಇನ್ನೂ ತಾಜಾ ಇದೆ ಎಂದು ಹೇಳಿದ್ದಾರೆ.

ಈ ದಾಳಿಗೆ ಭಾರತ ‘ಆಪರೇಷನ್ ಸಿಂಧೂರ’ ಮೂಲಕ ಪ್ರತಿಕಾರ ತೀರಿಸಿಕೊಂಡಿದ್ದರೂ, ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಈ ನೋವು ಮರೆಯಲಾಗದ ಗಾಯವಾಗಿದೆ. ಪ್ರವಾಸಿಗರ ಭದ್ರತೆ ಕುರಿತು ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು ಎಂಬ ಒತ್ತಾಯವೂ ಕುಟುಂಬದಿಂದ ಕೇಳಿಬಂದಿದೆ.

ಒಂದು ವರ್ಷದ ಬಳಿಕವೂ ಈ ಘಟನೆ ದೇಶದ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆ ಎಬ್ಬಿಸುತ್ತಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟದ ಅಗತ್ಯವನ್ನು ಮತ್ತೆ ನೆನಪಿಸುತ್ತದೆ.

Continue Reading

ದೇಶ

ಬೆಂಗಳೂರು ಐಆರ್‌ಆರ್ ಯೋಜನೆಗೆ ಮರುಜೀವ: ನಾಲ್ಕನೇ ರಿಂಗ್ ರಸ್ತೆ ಸಿದ್ಧತೆ

Published

on

ಬೆಂಗಳೂರು, ಏ.22: ಸುಮಾರು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಇಂಟರ್‌ಮೀಡಿಯೇಟ್ ರಿಂಗ್ ರೋಡ್ (ಐಆರ್‌ಆರ್) ಯೋಜನೆಗೆ ರಾಜ್ಯ ಸರ್ಕಾರ ಮರುಚಾಲನೆ ನೀಡಿದೆ. ಈ ಯೋಜನೆ ಜಾರಿಯಾದರೆ, ಬೆಂಗಳೂರಿಗೆ ನಾಲ್ಕನೇ ರಿಂಗ್ ರಸ್ತೆ ಲಭ್ಯವಾಗಲಿದೆ. ನಗರ ಹೊರವಲಯದ 12 ಉಪನಗರಗಳನ್ನು ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಜಾರಿಗೊಳಿಸಲಿದೆ.

210 ಕಿ.ಮೀ ಉದ್ದದ ಈ ಕಾರಿಡಾರ್‌ನ್ನು ಮೊದಲಿಗೆ 2007ರಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ಭೂಸ್ವಾಧೀನ ಹಾಗೂ ಕಾನೂನು ಅಡಚಣೆಗಳಿಂದಾಗಿ ಯೋಜನೆ ವಿಳಂಬವಾಗಿತ್ತು. ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಯೋಜನೆಗೆ ಮರುಜೀವ ದೊರೆತಿದೆ.

ಕನಕಪುರ, ಹಾರೋಹಳ್ಳಿ, ಬಿಡದಿ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಆನೇಕಲ್ ಸೇರಿದಂತೆ ಪ್ರಮುಖ ಹೊರವಲಯ ಪ್ರದೇಶಗಳನ್ನು ಸಂಪರ್ಕಿಸುವ ಮೂಲಕ ಸಂಚಾರ ವ್ಯವಸ್ಥೆ ಸುಧಾರಣೆಗೆ ಇದು ನೆರವಾಗಲಿದೆ. ಹೈಕೋರ್ಟ್ ಸೂಚನೆಗಳ ನಂತರ ಮಾರ್ಗ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದ್ದು, 2023ರ ಪರಿಷ್ಕೃತ ವಿನ್ಯಾಸವನ್ನು ಕೈಬಿಡಲಾಗಿದೆ.

ಹೊಸ ವಿನ್ಯಾಸದಲ್ಲಿ ಅಸ್ತಿತ್ವದಲ್ಲಿರುವ ಬಡಾವಣೆಗಳಿಗೆ ತೊಂದರೆಯಾಗದಂತೆ ಹಾಗೂ ಇತರ ರಸ್ತೆ ಜಾಲಗಳೊಂದಿಗೆ ಹೊಂದಾಣಿಕೆ ಸಾಧಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ಪ್ರದೇಶಗಳಲ್ಲಿ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಜೊತೆಗೆ ಸಂಪರ್ಕ ಕಲ್ಪಿಸಲಾಗುತ್ತದೆ.

ಭೂಸ್ವಾಧೀನ ವೆಚ್ಚವನ್ನು ಕಡಿಮೆ ಮಾಡಲು ಡೆವಲಪರ್‌ಗಳಿಂದ ಉಚಿತವಾಗಿ ಭೂಮಿ ಪಡೆಯುವ ಯೋಜನೆಯೂ ರೂಪಿಸಲಾಗಿದೆ. ಈಗಾಗಲೇ 175 ಎಕರೆ ಭೂಮಿಯನ್ನು ಬಿಎಂಆರ್‌ಡಿಎ ಹೊಂದಿದ್ದು, ಅಗತ್ಯವಿದ್ದರೆ ಹೆಚ್ಚುವರಿ ಭೂಸ್ವಾಧೀನ ಕೈಗೊಳ್ಳಲಿದೆ.

ಈ ಯೋಜನೆ ಜಾರಿಗೆ ಬಂದರೆ, ಬೆಂಗಳೂರು ನಗರದಲ್ಲಿ ಟ್ರಾಫಿಕ್ ದಟ್ಟಣೆ ತಗ್ಗಿಸುವುದರ ಜೊತೆಗೆ ಉಪನಗರಗಳ ಅಭಿವೃದ್ಧಿಗೆ ಹೊಸ ದಾರಿ ತೆರೆದಿಡಲಿದೆ.

Continue Reading

ಅಪರಾಧ

‘ತಂದೆಗೆ ಸಚಿವ ಸ್ಥಾನ ತಪ್ಪಿಸಲು ಹುನ್ನಾರ ” : ಯುವ ಅಧ್ಯಕ್ಷ ಮಹಮ್ಮದ್ ನಾಲಪಡ್

Published

on

ಬೆಂಗಳೂರು: ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯುವ ಅಧ್ಯಕ್ಷ ಮಹಮ್ಮದ್ ನಾಲಪಡ್ ನಿವಾಸದ ಮೇಲೆ ಇಡಿ ನಡೆಸಿದ ದಾಳಿಗೆ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ತಮ್ಮ ಬೆಳವಣಿಗೆಯನ್ನು ಸಹಿಸದ ವಿರೋಧಿಗಳು ಮತ್ತು ತಂದೆ ಎನ್.ಎ. ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ತಪ್ಪಿಸಲು ರೂಪಿಸಿರುವ ಹುನ್ನಾರ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ನಾಲಪಡ್, “ಹಿಂದೆ ನಾನು ಒಳ್ಳೆಯ ಮಗನಾಗಿರಲಿಲ್ಲ, ಆದರೆ ಈಗ ಸಂಘಟನೆಯಲ್ಲಿ ಹಂತ ಹಂತವಾಗಿ ಬೆಳೆದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಹಳೆಯ ಪ್ರಕರಣಗಳನ್ನು ಮುಂದಿಟ್ಟುಕೊಂಡು ನನ್ನನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಹೇಳಿದರು.

ಬಿಟ್‌ಕಾಯಿನ್ ಹಗರಣದ ಆರೋಪಿ ಶ್ರೀಕಿ ಬಗ್ಗೆ ಮಾತನಾಡಿದ ಅವರು, “ಅವನೊಂದಿಗೆ ಪರಿಚಯ ಇರುವುದು ನಿಜ. ಆದರೆ ಯಾವುದೇ ವ್ಯವಹಾರ ಸಂಬಂಧವಿಲ್ಲ. ಅವನು ನನ್ನ ಮನೆಯಲ್ಲಿ ಏನು ಮಾಡುತ್ತಾನೆ ಎಂಬುದು ನಮಗೆ ತಿಳಿದಿಲ್ಲ. ಅವನ ತಪ್ಪನ್ನು ನಮ್ಮ ಮೇಲೆ ಹೊರುವ ಪ್ರಯತ್ನ ನಡೆಯುತ್ತಿದೆ” ಎಂದು ಸ್ಪಷ್ಟಪಡಿಸಿದರು.

ಇಡಿ ಅಧಿಕಾರಿಗಳು ಸುಮಾರು 21 ಗಂಟೆಗಳ ಕಾಲ ಮನೆ ಶೋಧ ನಡೆಸಿದ್ದು, ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಹೇಳುವಂತೆ ಲಕ್ಷಾಂತರ ಹಣ ಸಿಕ್ಕಿಲ್ಲ ಎಂದು ನಾಲಪಡ್ ಹೇಳಿದ್ದಾರೆ. “ನನ್ನ ವಿರುದ್ಧ ಯಾವುದೇ ಪುರಾವೆ ಇದ್ದರೆ ಹಿಂದೆ ಬಿಜೆಪಿ ಸರ್ಕಾರವೇ ಕ್ರಮ ಕೈಗೊಳ್ಳುತ್ತಿತ್ತು” ಎಂದು ಪ್ರಶ್ನಿಸಿದರು.

ಇದೇ ವೇಳೆ, ಇಡಿ ದಾಳಿಯ ಬಳಿಕ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ನಸೀರ್ ಅಹಮದ್ ಅವರು ಶಾಸಕ ಹ್ಯಾರಿಸ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಈ ಘಟನೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

Continue Reading

Trending