Connect with us

ದೇಶ

ಹೊಸ ಪರೀಕ್ಷಾ ದಿನಾಂಕ ಶೀಘ್ರ ಘೋಷಣೆ; NTA ಅಧಿಕೃತ ಮಾಹಿತಿ

Published

on

ನವದೆಹಲಿ: ದೇಶದಾದ್ಯಂತ ವೈದ್ಯಕೀಯ ಶಿಕ್ಷಣಕ್ಕಾಗಿ ನಡೆಸಲಾಗುವ NEET UG ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರದ್ದುಗೊಳಿಸಿದೆ. ಮೇ 3ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

NTA ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪರೀಕ್ಷೆಯ ಪ್ರಶ್ನೆಗಳು ಮುಂಚಿತವಾಗಿಯೇ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಹೊಸ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ರಾಜಸ್ಥಾನದ ಸಿಕಾರ್ ಪ್ರದೇಶದಲ್ಲಿ ಮೇ 1ರಂದೇ ‘ಗೆಸ್ ಪೇಪರ್’ ರೂಪದಲ್ಲಿ ಕೆಲವು ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು ಎಂದು ವರದಿಯಾಗಿದೆ. ಈ ಊಹೆ ಪತ್ರಿಕೆಯಲ್ಲಿ ಇದ್ದ 100ಕ್ಕೂ ಹೆಚ್ಚು ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರಶ್ನೆಗಳು ಮೂಲ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆ ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡ (SOG) ತನಿಖೆ ಆರಂಭಿಸಿದ್ದು, ಸೋರಿಕೆ ಕುರಿತ ಮಾಹಿತಿಯನ್ನು NTA ಈಗಾಗಲೇ ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದೆ.

ಇದೇ ರೀತಿಯ ಆರೋಪಗಳು 2024 ಮತ್ತು 2025ರಲ್ಲೂ ಕೇಳಿಬಂದಿದ್ದವು. 2024ರ ಪ್ರಕರಣದಲ್ಲಿ ಸಿಬಿಐ ಪಾಟ್ನಾ ಮತ್ತು ಹಜಾರಿಬಾಗ್‌ನಲ್ಲಿ ಕೆಲ ಆರೋಪಿಗಳನ್ನು ಬಂಧಿಸಿತ್ತು. ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿರುವುದು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಹುಟ್ಟಿಸಿದೆ.

ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಹೆಚ್ಚಾಗಿದ್ದು, ಹೊಸ ದಿನಾಂಕದ ನಿರೀಕ್ಷೆಯಲ್ಲಿ ಇದ್ದಾರೆ.

ದೇಶ

SIR ಪ್ರಕ್ರಿಯೆ ಗಂಭೀರವಾಗಿ ಪರಿಗಣಿಸಿ; ಕಾಂಗ್ರೆಸ್ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

Published

on

ಮೈಸೂರು: ರಾಜ್ಯದಲ್ಲಿ ಜೂನ್ 30ರಿಂದ ಆರಂಭವಾಗಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ. ಮೈಸೂರಿನಲ್ಲಿ ನಡೆದ ವಿಶೇಷ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಪ್ರಕ್ರಿಯೆಯನ್ನು ಕಾರ್ಯಕರ್ತರು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಕರೆ ನೀಡಿದರು.

ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಲಘುವಾಗಿ ಪರಿಗಣಿಸಿದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಪ್ರಜಾಪ್ರಭುತ್ವದ ಆಶಯಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಎದುರಿಸಲು ಪ್ರತಿಯೊಬ್ಬ ಕಾರ್ಯಕರ್ತರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಬಿಜೆಪಿ ವರ್ಷದಿಂದ ವರ್ಷಕ್ಕೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದು, ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ವೇಳೆ ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ಕಟ್ಟುನಿಟ್ಟಿನ ನಿಗಾ ವಹಿಸುವುದು ಅಗತ್ಯ ಎಂದು ತಿಳಿಸಿದರು.

ಇದೇ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮತದಾರರ ಪಟ್ಟಿಯ ಪರಿಷ್ಕರಣೆಗೆ ಕಾಂಗ್ರೆಸ್ ವಿರೋಧಿಯಲ್ಲ. ಆದರೆ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಯಾವುದೇ ಪ್ರಯತ್ನವನ್ನು ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿ ಮೃತಪಟ್ಟವರು ಅಥವಾ ಎರಡು ಕಡೆ ಹೆಸರು ಹೊಂದಿರುವವರ ಹೆಸರುಗಳನ್ನು ತೆಗೆದುಹಾಕುವುದು ಸರಿಯಾದ ಕ್ರಮ. ಆದರೆ ರಾಜಕೀಯ ದ್ವೇಷದ ಕಾರಣದಿಂದ ಯಾರೊಬ್ಬರ ಮತದಾನದ ಹಕ್ಕಿಗೂ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಕಾರ್ಯಕರ್ತರ ಜವಾಬ್ದಾರಿ ಎಂದು ಅವರು ಹೇಳಿದರು. ಈ ವಿಶೇಷ ತೀವ್ರ ಪರಿಷ್ಕರಣೆಯನ್ನು ಎರಡನೇ ಸ್ವಾತಂತ್ರ್ಯ ಹೋರಾಟದಷ್ಟೇ ಮಹತ್ವದ ಕಾರ್ಯವೆಂದು ಪರಿಗಣಿಸಿ ಜನರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.

ಕರ್ನಾಟಕ ಸೇರಿದಂತೆ ದೇಶದ ಐದು ರಾಜ್ಯಗಳಲ್ಲಿ ಈ ವಿಶೇಷ ಪರಿಷ್ಕರಣೆ ನಡೆಯಲಿದ್ದು, ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸುವುದು ಇದರ ಉದ್ದೇಶವಾಗಿದೆ. ಇದೇ ವೇಳೆ ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ರಾಜ್ಯಾದ್ಯಂತ ಜಾಗೃತಿ ಮೂಡಿಸಲು ಕಾಂಗ್ರೆಸ್ ಮುಂದಾಗಿದೆ.

Continue Reading

ದೇಶ

ಪಾಸ್‌ಪೋರ್ಟ್ ಇದ್ದರೂ ಪೌರತ್ವಕ್ಕೆ ಸಾಕಾಗಲ್ಲ! ಹಾಗಾದರೆ ಅಧಿಕೃತ ದಾಖಲೆ ಯಾವುದು?

Published

on

ನವದೆಹಲಿ: ಭಾರತೀಯ ಪಾಸ್‌ಪೋರ್ಟ್ (Passport) ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಬಳಸುವ ಅಧಿಕೃತ ದಾಖಲೆ ಮಾತ್ರವೇ ಹೊರತು, ಅದು ಭಾರತೀಯ ಪೌರತ್ವದ ಅಂತಿಮ ಪುರಾವೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿರುವುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಇದಾದ ಬಳಿಕ ಭಾರತೀಯ ನಾಗರಿಕತ್ವವನ್ನು ಸಾಬೀತುಪಡಿಸಲು ಯಾವ ದಾಖಲೆ ಅಗತ್ಯ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಭಾರತದ ಸಂವಿಧಾನದ ವಿಧಿ 5ರಿಂದ 10 ಹಾಗೂ ಪೌರತ್ವ ಕಾಯ್ದೆ-1955ರ ಪ್ರಕಾರ, ಪಾಸ್‌ಪೋರ್ಟ್, ಆಧಾರ್, ಪ್ಯಾನ್ ಅಥವಾ ಮತದಾರರ ಗುರುತಿನ ಚೀಟಿ ಸೇರಿದಂತೆ ಯಾವುದೇ ಒಂದೇ ದಾಖಲೆ ಭಾರತೀಯ ಪೌರತ್ವದ ಅಂತಿಮ ಪುರಾವೆಯಾಗುವುದಿಲ್ಲ. ಈ ದಾಖಲೆಗಳು ನಿರ್ದಿಷ್ಟ ಆಡಳಿತಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಕೆಯಾಗುತ್ತವೆ.

ಆಧಾರ್ ಕಾರ್ಡ್ ಕೇವಲ ಗುರುತು ಹಾಗೂ ವಿಳಾಸದ ಪುರಾವೆಯಾಗಿದ್ದು, ಭಾರತದಲ್ಲಿ 182 ದಿನಗಳಿಗಿಂತ ಹೆಚ್ಚು ಕಾಲ ವಾಸಿಸುವ ವಿದೇಶಿ ಪ್ರಜೆಗಳಿಗೂ ನೀಡಲಾಗುತ್ತದೆ. ಪ್ಯಾನ್ ಕಾರ್ಡ್ ಆದಾಯ ತೆರಿಗೆ ಸಂಬಂಧಿತ ವಹಿವಾಟಿಗೆ ಮಾತ್ರ ಸೀಮಿತವಾಗಿದ್ದು, ಅದನ್ನೂ ವಿದೇಶಿ ನಾಗರಿಕರು ಪಡೆಯಬಹುದು. ಮತದಾರರ ಗುರುತಿನ ಚೀಟಿ ಚುನಾವಣೆಗಳಲ್ಲಿ ಮತದಾನಕ್ಕಾಗಿ ಬಳಸುವ ದಾಖಲೆಯಾಗಿದ್ದು, ಅದು ಪೌರತ್ವವನ್ನು ಸಂಪೂರ್ಣವಾಗಿ ದೃಢೀಕರಿಸುವ ದಾಖಲೆ ಅಲ್ಲ.

ವಿದೇಶಾಂಗ ಸಚಿವಾಲಯದ ಪ್ರಕಾರ, ಪಾಸ್‌ಪೋರ್ಟ್ ಕಾಯ್ದೆ-1967ರ ಅಡಿಯಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಭಾರತೀಯ ನಾಗರಿಕರಲ್ಲದ ವ್ಯಕ್ತಿಗಳಿಗೂ ಪಾಸ್‌ಪೋರ್ಟ್ ನೀಡುವ ಅವಕಾಶವಿದೆ. ಇದೇ ಕಾರಣದಿಂದ ಪಾಸ್‌ಪೋರ್ಟ್ ಅನ್ನು ಪೌರತ್ವದ ಅಂತಿಮ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ.

ಭಾರತದಲ್ಲಿ ಸಾರ್ವತ್ರಿಕ ಪೌರತ್ವ ಕಾರ್ಡ್ ವ್ಯವಸ್ಥೆ ಇಲ್ಲ. ಪೌರತ್ವವನ್ನು ಸಾಬೀತುಪಡಿಸಲು ಜನನ ಪ್ರಮಾಣಪತ್ರ, ಪೋಷಕರ ಅಥವಾ ಪೂರ್ವಜರ ದಾಖಲೆಗಳು, ವಂಶಾವಳಿ, ಶಾಲಾ ದಾಖಲೆಗಳು, ಭೂ ದಾಖಲೆಗಳು, ಹಳೆಯ ಮತದಾರರ ಪಟ್ಟಿ ಹಾಗೂ ಸರ್ಕಾರದ ಐತಿಹಾಸಿಕ ದಾಖಲೆಗಳನ್ನು ಪರಿಗಣಿಸಲಾಗುತ್ತದೆ. ವಿದೇಶಿ ಪ್ರಜೆಗಳಿಗೆ ಮಾತ್ರ ಪೌರತ್ವ ಪ್ರಮಾಣಪತ್ರ (Certificate of Citizenship) ನೀಡಲಾಗುತ್ತದೆ.

Continue Reading

ದೇಶ

ಅಮೆರಿಕ-ಇರಾನ್ ಘರ್ಷಣೆಗೆ ತಾತ್ಕಾಲಿಕ ಬ್ರೇಕ್: ಕತಾರ್‌ನಲ್ಲಿ ಮಹತ್ವದ ಶಾಂತಿ ಮಾತುಕತೆ

Published

on

ವಾಷಿಂಗ್ಟನ್‌/ಟೆಹ್ರಾನ್‌: ಕಳೆದ ಕೆಲ ದಿನಗಳಿಂದ ವಿಶ್ವದ ಗಮನ ಸೆಳೆದಿದ್ದ ಅಮೆರಿಕ-ಇರಾನ್ ಸಂಘರ್ಷಕ್ಕೆ ಸದ್ಯ ತಾತ್ಕಾಲಿಕ ವಿರಾಮ ಸಿಕ್ಕಂತಾಗಿದೆ. ಕದನ ವಿರಾಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ನಡೆಸಿದ್ದ ದಾಳಿಯ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ತೀವ್ರಗೊಂಡಿತ್ತು. ಆದರೆ ಇದೀಗ ಎರಡೂ ದೇಶಗಳು ಮಿಲಿಟರಿ ಕ್ರಮವನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದು, ಹಾರ್ಮುಜ್ ಜಲಸಂಧಿ ವಿವಾದದ ಕುರಿತು ಮಂಗಳವಾರ ಕತಾರ್‌ನ ದೋಹಾದಲ್ಲಿ ಮಹತ್ವದ ಮಾತುಕತೆ ನಡೆಸಲಿವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೋಹಾದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿನ ಹಡಗುಗಳ ಸುರಕ್ಷಿತ ಹಾಗೂ ಮುಕ್ತ ಸಂಚಾರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚೆಯಾಗಲಿದೆ. ಜೂನ್ 17ರಂದು ರೂಪುಗೊಂಡಿದ್ದ 14 ಅಂಶಗಳ ತಿಳುವಳಿಕೆ ಒಪ್ಪಂದದ ಚೌಕಟ್ಟಿನ ಅಡಿಯಲ್ಲಿ ತಾಂತ್ರಿಕ ಮಟ್ಟದ ಮಾತುಕತೆ ಮುಂದುವರಿಯಲಿದ್ದು, ಶಾಂತಿ ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಪ್ರಯತ್ನ ನಡೆಯುತ್ತಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ವಾರಾಂತ್ಯದಲ್ಲಿ ಇರಾನ್ ಮೇಲಿನ ದಾಳಿಗೆ ಅಮೆರಿಕ ಸೇನೆ ಮುಂದಾಗಿತ್ತು. ಇದಕ್ಕೆ ಪ್ರತಿಯಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಬಹ್ರೇನ್ ಹಾಗೂ ಕುವೈತ್ ಭಾಗಗಳನ್ನು ಗುರಿಯಾಗಿಸಿ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು. ಇದರಿಂದ ಪಶ್ಚಿಮ ಏಷ್ಯಾದಲ್ಲಿ ಮತ್ತಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಇದೀಗ ಎರಡೂ ರಾಷ್ಟ್ರಗಳು ಪರಸ್ಪರ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಲು ಒಪ್ಪಿಕೊಂಡಿವೆ. ಆದರೆ ಅಮೆರಿಕ ತನ್ನ ದಾಳಿಯನ್ನು ಮುಂದುವರಿಸಿದರೆ ಶಾಂತಿ ಮಾತುಕತೆಯನ್ನು ಸಂಪೂರ್ಣವಾಗಿ ಕೈಬಿಡಲಾಗುವುದು ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಎಚ್ಚರಿಕೆ ನೀಡಿದೆ. ಒಮನ್ ಕರಾವಳಿ ಮೂಲಕ ರೂಪಿಸಲಾಗಿರುವ ಪರ್ಯಾಯ ಸಾಗಾಣಿಕೆ ಮಾರ್ಗವೂ ವಿವಾದದ ಕೇಂದ್ರಬಿಂದುವಾಗಿದ್ದು, ಅದರ ಮೇಲಿನ ಭಿನ್ನಾಭಿಪ್ರಾಯಗಳು ಇನ್ನೂ ಮುಂದುವರಿದಿವೆ.

Continue Reading

Trending