ಕ್ರೀಡೆ
FIFA ವಿರುದ್ಧ ಗಂಭೀರ ಆರೋಪ: ‘ಅರ್ಜೆಂಟೀನಾಗೆ ವಿಶ್ವಕಪ್ ನೀಡಲು ಟೂರ್ನಿ ಫಿಕ್ಸ್’ ಎಂದ ಮೋಸ್ತಫಾ ಜಿಕೊ
ಅಟ್ಲಾಂಟಾ: 2026ರ ಫಿಫಾ ವಿಶ್ವಕಪ್ (FIFA World Cup) ಪ್ರೀ ಕ್ವಾರ್ಟರ್ಫೈನಲ್ನಲ್ಲಿ ಅರ್ಜೆಂಟೀನಾ ವಿರುದ್ಧ 3-2 ಅಂತರದ ಸೋಲು ಕಂಡ ಬಳಿಕ ಈಜಿಪ್ಟ್ ತಂಡದ ಫಾರ್ವರ್ಡ್ ಮೋಸ್ತಫಾ ಜಿಕೊ (Mostafa Ziko) ಫಿಫಾ ಹಾಗೂ ಪಂದ್ಯದ ರೆಫರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೂರ್ನಿಯ ಫಲಿತಾಂಶ ಮೊದಲೇ ನಿಗದಿಯಾಗಿದ್ದು, ವಿಶ್ವಕಪ್ ಅರ್ಜೆಂಟೀನಾಗೆ ನೀಡುವ ಉದ್ದೇಶದಿಂದ ಪಂದ್ಯ ನಿರ್ವಹಿಸಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಜಿಕೊ, “ಇದು ನ್ಯಾಯಯುತ ಫಲಿತಾಂಶವಲ್ಲ. ರೆಫರಿ ಆರಂಭದಿಂದಲೂ ನಮ್ಮ ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡರು. ನಾವು 2-0 ಮುನ್ನಡೆಯಲ್ಲಿದ್ದಾಗ ಪಂದ್ಯವನ್ನು ನಮ್ಮ ಪರ ಮುಗಿಯಲು ಅವಕಾಶ ನೀಡಲಿಲ್ಲ. ವಿಶ್ವಕಪ್ ಟೂರ್ನಿ ಮೊದಲೇ ಫಿಕ್ಸ್ ಆಗಿರುವಂತೆ ಕಾಣುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಂದ್ಯದ 15ನೇ ನಿಮಿಷದಲ್ಲಿ ಯಾಸರ್ ಇಬ್ರಾಹಿಂ ಮತ್ತು 67ನೇ ನಿಮಿಷದಲ್ಲಿ ಮೋಸ್ತಫಾ ಜಿಕೊ ಗೋಲು ಗಳಿಸಿ ಈಜಿಪ್ಟ್ ತಂಡವನ್ನು 2-0 ಮುನ್ನಡೆಗೆ ಕೊಂಡೊಯ್ದಿತ್ತು. ಬಳಿಕ ಜಿಕೊ ಮತ್ತೊಂದು ಗೋಲು ದಾಖಲಿಸಿದ್ದರೂ, VAR ಪರಿಶೀಲನೆಯ ಬಳಿಕ ಫೌಲ್ ಕಾರಣ ನೀಡಿ ರೆಫರಿ ಅದನ್ನು ರದ್ದುಗೊಳಿಸಿದರು. ಇದೇ ಪಂದ್ಯದ ಪ್ರಮುಖ ತಿರುವಾಗಿ ಪರಿಣಮಿಸಿತು.
ಇದಾದ ಬಳಿಕ ಅರ್ಜೆಂಟೀನಾ ಅದ್ಭುತ ಕಮ್ಬ್ಯಾಕ್ ನಡೆಸಿತು. ಕ್ರಿಸ್ಟಿಯನ್ ರೊಮೆರೊ 79ನೇ ನಿಮಿಷದಲ್ಲಿ, ಲಿಯೋನೆಲ್ ಮೆಸ್ಸಿ 83ನೇ ನಿಮಿಷದಲ್ಲಿ ಹಾಗೂ ಎಂಜೊ ಫೆರ್ನಾಂಡಿಸ್ 90ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ 3-2 ಅಂತರದ ರೋಚಕ ಜಯ ತಂದುಕೊಟ್ಟರು. ಇದಕ್ಕೂ ಮುನ್ನ ಅರ್ಜೆಂಟೀನಾಗೆ ದೊರೆತಿದ್ದ ಪೆನಾಲ್ಟಿ ಅವಕಾಶವನ್ನು ಈಜಿಪ್ಟ್ ಗೋಲ್ಕೀಪರ್ ಮೋಸ್ತಫಾ ಶೋಬೀರ್ ಅದ್ಭುತವಾಗಿ ತಡೆದಿದ್ದರು.
ಈ ಗೆಲುವಿನೊಂದಿಗೆ ಅರ್ಜೆಂಟೀನಾ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದ್ದು, ಈಜಿಪ್ಟ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಪಂದ್ಯದ ಬಳಿಕ ಮೋಸ್ತಫಾ ಜಿಕೊ ಮಾಡಿದ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಫಿಫಾ ಅಥವಾ ಪಂದ್ಯಾಧಿಕಾರಿಗಳಿಂದ ಈ ಆರೋಪಗಳ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ.
ಕ್ರೀಡೆ
IND vs ENG: 125 ರನ್ಗಳ ಸೋಲಿನ ಬಳಿಕ ಸಂಜು ಸ್ಯಾಮ್ಸನ್ ಕುರಿತು ಗಂಭೀರ್ ಹೇಳಿದ್ದೇನು?
ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ 125 ರನ್ಗಳ ಭಾರೀ ಅಂತರದಿಂದ ಸೋಲು ಕಂಡ ಬೆನ್ನಲ್ಲೇ ತಂಡದ ಆಯ್ಕೆ ಕುರಿತು ಚರ್ಚೆಗಳು ಜೋರಾಗಿವೆ. ಅದರಲ್ಲೂ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಪ್ಲೇಯಿಂಗ್ XIನಿಂದ ಕೈಬಿಟ್ಟಿರುವ ನಿರ್ಧಾರದ ಬಗ್ಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
202 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ ಜೋಫ್ರಾ ಆರ್ಚರ್ ಹಾಗೂ ಜೋಶ್ ಟಂಗ್ ಅವರ ಮಾರಕ ಬೌಲಿಂಗ್ ಎದುರು ಕೇವಲ 76 ರನ್ಗಳಿಗೆ ಆಲೌಟ್ ಆಯಿತು. ಯಾವುದೇ ಬ್ಯಾಟ್ಸ್ಮನ್ 20 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ ಭಾರತ ಸರಣಿಯಲ್ಲಿ ಹಿನ್ನಡೆ ಅನುಭವಿಸಿದ್ದು, ತಂಡದ ಆಯ್ಕೆ ಕುರಿತ ಪ್ರಶ್ನೆಗಳು ಮತ್ತಷ್ಟು ಹೆಚ್ಚಾಗಿವೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವ ಬಗ್ಗೆ ಈಗಾಗಲೇ ಆಟಗಾರನೊಂದಿಗೆ ವೈಯಕ್ತಿಕವಾಗಿ ಚರ್ಚೆ ನಡೆಸಿರುವುದಾಗಿ ತಿಳಿಸಿದರು. “ಆಟಗಾರ ಮತ್ತು ಕೋಚ್ ನಡುವಿನ ಸಂಭಾಷಣೆಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಮೊದಲು ಸಂಜುಗೆ ಸ್ಪಷ್ಟನೆ ನೀಡಿದ್ದೇನೆ,” ಎಂದು ಹೇಳಿದರು.
ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ನೀಡಿರುವ ಕೊಡುಗೆ ಮಹತ್ವದ್ದಾಗಿದೆ. ಆದರೆ ಪ್ರಸ್ತುತ ತಂಡದ ಆಯ್ಕೆಯಲ್ಲಿ ಫಾರ್ಮ್ ಪ್ರಮುಖ ಮಾನದಂಡವಾಗಿದೆ ಎಂದು ಗಂಭೀರ್ ಸ್ಪಷ್ಟಪಡಿಸಿದರು. “ಸಂಜು ಅವರ ಸಾಧನೆಯನ್ನು ನಾವು ಮರೆತಿಲ್ಲ. ಆದರೆ ಕೆಲವೊಮ್ಮೆ ಆಟಗಾರರ ಪ್ರಸ್ತುತ ಫಾರ್ಮ್ ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅವರು ಮತ್ತೆ ತಂಡಕ್ಕೆ ಮರಳದಂತೆ ಯಾವುದೇ ಬಾಗಿಲು ಮುಚ್ಚಿಲ್ಲ,” ಎಂದು ಹೇಳಿದರು.
ಇನ್ನೊಂದೆಡೆ, ವೈಭವ್ ಸೂರ್ಯವಂಶಿಗೆ ನೀಡಿದ ಅವಕಾಶವನ್ನು ಸಮರ್ಥಿಸಿಕೊಂಡ ಗಂಭೀರ್, ಪ್ರತಿಯೊಬ್ಬ ಆಟಗಾರನಿಗೂ ಅವಕಾಶ ನೀಡುವುದು ತಂಡದ ಅಭಿವೃದ್ಧಿಗೆ ಅಗತ್ಯ ಎಂದರು. ಅತ್ಯುತ್ತಮ ಸಂಯೋಜನೆಯೊಂದಿಗೆ ಫಲಿತಾಂಶ ಸಾಧಿಸುವುದೇ ತಂಡದ ಗುರಿಯಾಗಿದ್ದು, ಮುಂದಿನ ಪಂದ್ಯಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಗಳು ಸಾಧ್ಯವೆಂಬ ಸುಳಿವನ್ನೂ ಅವರು ನೀಡಿದರು.
ಸಂಜು ಸ್ಯಾಮ್ಸನ್ ಅವರ ಭವಿಷ್ಯದ ಬಗ್ಗೆ ಗಂಭೀರ್ ನೀಡಿದ ಈ ಹೇಳಿಕೆ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು, ಮುಂದಿನ ಸರಣಿಗಳಲ್ಲಿ ಅವರು ಮತ್ತೆ ಪ್ಲೇಯಿಂಗ್ XIಗೆ ಮರಳುವ ಸಾಧ್ಯತೆ ಇದೆ ಎಂಬ ಚರ್ಚೆ ಜೋರಾಗಿದೆ.
ಕ್ರೀಡೆ
ಅಪ್ಪು ಕಪ್ ಸೀಸನ್ 4ಕ್ಕೆ ಅದ್ದೂರಿ ಚಾಲನೆ: ಜುಲೈ 24ರಿಂದ ಶಟಲ್ ಬ್ಯಾಡ್ಮಿಂಟನ್ ಲೀಗ್ ಆರಂಭ
ಬೆಂಗಳೂರು: ರಾಜ್ಯದ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಅಪ್ಪು ಕಪ್ ಸೀಸನ್ 4 (Appu Cup Season 4) ಶಟಲ್ ಬ್ಯಾಡ್ಮಿಂಟನ್ ಟೂರ್ನಿಗೆ ಅದ್ದೂರಿ ಚಾಲನೆ ದೊರೆತಿದೆ. STELLER STUDIO & EVENT MANAGEMENT ಸಂಸ್ಥೆ, PRK Audio ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಈ ಪ್ರತಿಷ್ಠಿತ ಟೂರ್ನಿಯ ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಸಂಭ್ರಮದಿಂದ ನಡೆಯಿತು. ಇದೇ ಜುಲೈ 24, 25 ಮತ್ತು 26ರಂದು ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ. ಪ್ರಭಾಕರ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಟೂರ್ನಿಗೆ ಶುಭ ಕೋರಿದರು. ತಂಡಗಳ ಮಾಲೀಕರು, ನಾಯಕರು, ರಾಯಭಾರಿಗಳು ಹಾಗೂ ಮೆನ್ ಮತ್ತು ವುಮನ್ ಐಕಾನ್ಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕ ಚೇತನ್ ಸೂರ್ಯ, “ಅಪ್ಪು ಕಪ್ ಆರಂಭವಾದ ದಿನದಿಂದಲೂ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಬೆಂಬಲ ನಮ್ಮೊಂದಿಗಿದೆ. ಈ ಬಾರಿಯ ಪಂದ್ಯಗಳು ಜುಲೈ 24ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಪಂದ್ಯಗಳ ನೇರ ಪ್ರಸಾರವೂ ಇರಲಿದೆ. ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ತಿಳಿಸಿದರು.
ಟಿ.ಎ. ಶರವಣ ಅವರು, “ಅಪ್ಪು ಕಪ್ ಆರಂಭದಿಂದಲೇ ಚೇತನ್ ಸೂರ್ಯ ಅವರೊಂದಿಗೆ ಇದ್ದೇನೆ. ಮುಂದೆಯೂ ಈ ಕ್ರೀಡಾ ಉತ್ಸವಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ” ಎಂದು ಹೇಳಿದರು. ಕೆ.ವಿ. ಪ್ರಭಾಕರ್ ಹಾಗೂ ಸಾ.ರಾ. ಗೋವಿಂದು ಅವರು ಕೂಡ ಟೂರ್ನಿಯ ಯಶಸ್ಸಿಗೆ ಶುಭ ಹಾರೈಸಿದರು.
ಕ್ರೀಡೆ, ಮನರಂಜನೆ ಹಾಗೂ ಯುವ ಪ್ರತಿಭೆಗಳಿಗೆ ವೇದಿಕೆಯಾಗಿರುವ ಅಪ್ಪು ಕಪ್ ಸೀಸನ್ 4 ಈ ಬಾರಿ ಮತ್ತಷ್ಟು ಭರ್ಜರಿಯಾಗಿ ನಡೆಯಲಿದ್ದು, ಬ್ಯಾಡ್ಮಿಂಟನ್ ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಬೆಂಗಳೂರಿನ ಕ್ರೀಡಾ ಕ್ಯಾಲೆಂಡರ್ನಲ್ಲಿ ಈ ಟೂರ್ನಿ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ಕ್ರೀಡೆ
ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದೇಕೆ? ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಅಶ್ವಿನ್ ಸ್ಫೋಟಕ ಹೇಳಿಕೆ
ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಆಟಗಾರರನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ತಂಡದಿಂದ ಕೈಬಿಡುವುದು ಉಳಿದ ಆಟಗಾರರಲ್ಲಿ ಅಭದ್ರತೆ ಮೂಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅಶ್ವಿನ್, ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ವಿಶ್ವಕಪ್ ಬಳಿಕ ತಂಡದಿಂದ ಹೊರಗಿಡುವ ನಿರ್ಧಾರ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಇಂತಹ ಕ್ರಮಗಳು ಆಟಗಾರರಲ್ಲಿ “ನಾಳೆ ನಮ್ಮ ಸ್ಥಿತಿಯೂ ಇದೇ ಆಗಬಹುದು” ಎಂಬ ಭಯವನ್ನು ಹುಟ್ಟುಹಾಕುತ್ತವೆ ಎಂದು ಹೇಳಿದರು.
ಆಟಗಾರರನ್ನು ಪದೇ ಪದೇ ತಂಡಕ್ಕೆ ಸೇರಿಸುವುದು ಮತ್ತು ಹೊರಗಿಡುವುದು ‘ಮ್ಯೂಸಿಕಲ್ ಚೇರ್ಸ್’ ಆಟದಂತಾಗಿದೆ. ಇದು ಡ್ರೆಸ್ಸಿಂಗ್ ರೂಮ್ ವಾತಾವರಣದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಅಶ್ವಿನ್ ಎಚ್ಚರಿಸಿದರು.
ಪ್ರಸ್ತುತ ತಂಡದಲ್ಲಿ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಮತ್ತು ಇಶಾನ್ ಕಿಶನ್ ರೂಪದಲ್ಲಿ ಎಡಗೈ ಬ್ಯಾಟರ್ಗಳಿರುವುದರಿಂದ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗುತ್ತಿಲ್ಲ. ಹೊಸ ಆಟಗಾರರಿಗೆ ಅವಕಾಶ ನೀಡುವುದು ತಪ್ಪಲ್ಲ, ಆದರೆ ವಿಶ್ವಕಪ್ ಗೆದ್ದ ಹಿರಿಯ ಆಟಗಾರರಿಗೆ ಕನಿಷ್ಠ ಎರಡು ಅಥವಾ ಮೂರು ಸರಣಿಗಳವರೆಗೆ ಸ್ಪಷ್ಟ ಬೆಂಬಲ ಮತ್ತು ಭರವಸೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಟೀಮ್ ಮ್ಯಾನೇಜ್ಮೆಂಟ್ ಆಟಗಾರರ ಮೇಲೆ ವಿಶ್ವಾಸ ತೋರಿಸಿದರೆ ಮಾತ್ರ ತಂಡದ ವಾತಾವರಣ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ನಿರಂತರ ಬದಲಾವಣೆಗಳು ಭವಿಷ್ಯದಲ್ಲಿ ಭಾರತೀಯ ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟರು.
-
ದೇಶ23 hours ago30 ನಿಮಿಷ ಸಿಂಹದ ಹಿಡಿತದಲ್ಲೇ ವ್ಯಕ್ತಿ! ಗ್ರಾಮಸ್ಥರ ಕೂಗಾಟಕ್ಕೂ ಜಗ್ಗದ ಕಾಡಿನ ರಾಜ
-
ದೇಶ23 hours agoGrama Panchayat Election ಬಿಗ್ ಅಪ್ಡೇಟ್! ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಆದೇಶ
-
ದೇಶ22 hours agoಕೇರಳದಲ್ಲಿ ಮತ್ತೆ ಪ್ರಕೃತಿ ವಿಕೋಪ! ವಯನಾಡಿನ ಕಲ್ಲಾಡಿ ಗ್ರಾಮದಲ್ಲಿ ಭಾರೀ ಭೂ ಕುಸಿತ
-
ದೇಶ20 hours agoಅಂಜನಾದ್ರಿ ಹುಂಡಿ ಎಣಿಕೆ ಬಳಿಕ 4 ದಿನ ಮೌನ! ಈಗ ಪ್ರಕಟಣೆ ಹೊರಬಿದ್ದಿದ್ದು ಏಕೆ?
-
ದೇಶ20 hours ago‘ಕಿಂಗ್100’ನಲ್ಲಿ ಟಬು ವಿಲನ್! ನಾಗಾರ್ಜುನ ವಿರುದ್ಧ ಹೊಸ ಅವತಾರ
-
ದೇಶ6 hours agoಬ್ಯಾಂಕ್ ಅಕೌಂಟ್ ಕ್ಲೋಸ್ ಮಾಡಿದರೆ ಕ್ರೆಡಿಟ್ ಕಾರ್ಡ್ ಬಂದ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
-
ದೇಶ23 hours agoರೈತರ ಬೆಳೆ ಸಾಲ ಮನ್ನಾ ಆಗುತ್ತಾ? ಕಲಬುರಗಿಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದೇನು?
-
ಅಪರಾಧ23 hours agoಬೆಂ-ಮೈ ಹೆದ್ದಾರಿ ಸೇಫ್ ಅಲ್ಲವೇ? ಮದ್ದೂರು ಫ್ಲೈಓವರ್ನಲ್ಲಿ ಕುಟುಂಬದ ಮೇಲೆ ರೌಡಿಗಳ ದಾಳಿ
